ಗಾಡ್ ಪ್ರಾಮೀಸ್ ಅಂದ್ರು ಸೂಚನ್ ಶೆಟ್ಟಿ: ಸಿನಿಮಾ ಮುಹೂರ್ತಕ್ಕೆ ಆನೆಗುಡ್ಡೆ ಗಣಪತಿ ಸಾಕ್ಷಿ

ಯುವ ಪ್ರತಿಭೆ ಸೂಚನ್ ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಪ್ರಯತ್ನ ಗಾಡ್ ಪ್ರಾಮಿಸ್ ಸಿನಿಮಾಗೆ ಮುನ್ನುಡಿ ಸಿಕ್ಕಿದೆ. ಉಡುಪಿ ಜಿಲ್ಲೆಯ ಕುಂದಾಪುರದ ಆನೆಗುಡ್ಡದ ಗಣಪತಿ ದೇಗಲುದಲ್ಲಿಂದು ಮುಹೂರ್ತ ನೆರವೇರಿದಿದ್ದು, ನಟ ಪ್ರಮೋದ್ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ರವಿ ಬಸ್ರೂರು ಸೂಚನ್ ಕನಸಿಗೆ ಸಾಥ್ ಕೊಟ್ಟಿದ್ದಾರೆ. ಗಾಡ್ ಪ್ರಾಮಿಸ್ ಸಿನಿಮಾಗೆ ರವಿ ಬಸ್ರೂರ್ ಕ್ಲ್ಯಾಪ್ ಮಾಡಿದ್ದು, ಪ್ರಮೋದ್ ಶೆಟ್ಟಿ ಕ್ಯಾಮೆರಾಗೆ ಚಾಲನೆ ನೀಡಿದರು. ಕಾಂತಾರ ಸರಣಿ ಸಿನಿಮಾಗಳ ಮುಹೂರ್ತ ಕೂಡ ಇದೇ ದೇಗುಲದಲ್ಲಿ ನಡೆದಿರುವುದು ವಿಶೇಷ.

ನಿರ್ದೇಶಕ ಸೂಚನ್ ಶೆಟ್ಟಿ ಮಾತನಾಡಿ, ಗಾಡ್ ಪ್ರಾಮಿಸ್ ಸಿನಿಮಾದ ಮುಹೂರ್ತ ಇಂದು ನೆರವೇರಿದೆ. ಕಳೆದ ಆರೇಳು ತಿಂಗಳಿನಿಂದ ಈ ಚಿತ್ರಕ್ಕೆ ಪ್ರೀ ಪ್ರೊಡಕ್ಷನ್ ಕೆಲಸ ಶುರು ಮಾಡಿದ್ದೇವೆ. 2015ರಿಂದ ರವಿ ಬಸ್ರೂರು ಜೊತೆ ಕೆಲಸ ಮಾಡುತ್ತಿದ್ದೇನೆ. ಈಗ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದೇನೆ. ಸಿನಿಮಾ ಕುಂದಾಪುರ ಸುತ್ತಮುತ್ತ ನಡೆಯುತ್ತಿದೆ. ಫ್ಯಾಮಿಲಿ ಡ್ರಾಮಾ ಕಥೆಯನ್ನು ಒಳಗೊಂಡಿದೆ. ಆಡಿಷನ್ ನಡೆಸಿದ್ದೇವೆ. ಯಾರು ಆಯ್ಕೆಯಾಗಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ. ರವಿ ಸರ್ ಗೆ ನನಗೆ ಗುರುಗಳು. ಡೈರೆಕ್ಟನ್ ತಂಡದ ಜೊತೆಗೆ ಕಟಕ, ಗಿರ್ಮಿಟ್ ಸಿನಿಮಾಗಳ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿದ್ದೆ. ಹೀಗಾಗಿ ಆ ಅನುಭವದ ಇಟ್ಟುಕೊಂಡು ನಿರ್ದೇಶನಕ್ಕೆ ಇಳಿದಿದ್ದೇನೆ ಎಂದರು.

ಸಂಗೀತ ನಿರ್ದೇಶಕ ರವಿ ಬಸ್ರೂರ್ ಮಾತನಾಡಿ, ಒಂದು ಸಿನಿಮಾ ಮಾಡುವುದರಿಂದ ಎಷ್ಟೋ ಜನ ಕಲಾವಿದರ ಭವಿಷ್ಯ ನಿರ್ಧಾರವಾಗುತ್ತದೆ. ನಮ್ಮ ಕರಾವಳಿಯವರಿಗೆ ಒಳ್ಳೆ ಫ್ಲಾಟ್ ಫಾರಂ ಸಿಗುತ್ತಿಲ್ಲ. ಆ ನಿಟ್ಟಿನಲ್ಲಿ ನಮ್ಮ ಜೊತೆ ಬಂದವರಿಗೆ ಎಲ್ಲಾ ಕೆಲಸ ಕಲಿಯಿರಿ ಎಂದು ಹೇಳುತ್ತೇನೆ. ಇದೇ ರೀತಿ ಎಲ್ಲರೂ ಎಲ್ಲಾ ವಿಭಾಗ ಕಲಿರಿ. ಒಂದು ಸಿನಿಮಾದಿಂದ ಎಷ್ಟೋ ಜನರ ಬದುಕು ಹಸನಾಗಲಿ. ಇವರ ರೀತಿ ನಮ್ಮ ಭಾಗದಲ್ಲಿ ನೂರಾರು ಸಿನಿಮಾಗಳು ಆಗಲಿ. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ತಿಳಿಸಿದರು.

ನಟ ಪ್ರಮೋದ್ ಶೆಟ್ಟಿ ಮಾತನಾಡಿ, ಸೂಚನ್ ಯಾವುದೇ ಕೆಲಸ ಮಾಡಿದ್ರೂ ಅಚ್ಚುಕಟ್ಟಾಗಿ ಮಾಡಿ ಮುಗಿಸ್ತಾನೆ. ನಟನೆ, ನಿರ್ದೇಶನ ಎರಡು ಒಟ್ಟಿಗೆ ಮಾಡುತ್ತಿರುವುದರಿಂದ ಎಲ್ಲರೂ ಒಟ್ಟಿಗೆ ಸೇರಿ ಮುಂದುವರೆಯಲಿ. ಒಂದೊಳ್ಳೆ ತಂಡವಾಗಿ ಹೊರಹೊಮ್ಮಲಿ. ನನ್ನ ಪ್ರಕಾರ ಈ ಸಿನಿಮಾ ತುಂಬಾ ಚೆನ್ನಾಗಿ ಬರಲಿದೆ ಎಂಬ ಭರವಸೆ ಇದೆ. ಒಳ್ಳೆ ಬಜೆಟ್ ಕೂಡ ಇದೆ. ಸೂಚನ್ ನಮ್ಮ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾನೆ. ಇಡೀ ತಂಡದ ಮೇಲೆ ನಿಮ್ಮ ಬೆಂಬಲ ಇರಲಿದೆ ಎಂದು ಹೇಳಿದರು.

ನಿರ್ಮಾಪಕ ಮೈತ್ರಿ ಮಂಜುನಾಥ್ ಮಾತನಾಡಿ, ನಾವು ಈ ಹಿಂದೆ ಹಫ್ತಾ ಸಿನಿಮಾ ಮಾಡಿದ್ದೇವೆ. ಇದು ನನ್ನ ಎರಡನೇ ಸಿನಿಮಾ. ಗಾಡ್ ಪ್ರಾಮಿಸ್ ಸಿನಿಮಾದ ಸ್ಕ್ರೀಪ್ಟ್ ತುಂಬಾ ಚೆನ್ನಾಗಿದೆ. ಒಳ್ಳೆ ಅನುಭವ ತಂಡದೊಂದಿಗೆ ಕೈ ಜೋಡಿಸಿದೆ ಎಂದರು.

ಗಾಡ್ ಪ್ರಾಮಿಸ್ ಸಿನಿಮಾ ಮೂಲಕ ಸೂಚನ್ ಶೆಟ್ಟಿ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದು, ಅವರ ಹೊಸ ಪಯಣಕ್ಕೆ ಮೈತ್ರಿ ಮಂಜುನಾಥ್ ಬಲ ತುಂಬಿದ್ದಾರೆ. ಚಿತ್ರವನ್ನು ಮೈತ್ರಿ ಪ್ರೊಡಕ್ಷನ್ ನಡಿ ಮಂಜುನಾಥ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಕರಾವಳಿಯ ಭೂಗತ ಕಥೆ ಹಫ್ತಾ ಸಿನಿಮಾವನ್ನು ಇದೇ ಸಂಸ್ಥೆ ನಿರ್ಮಾಣ ಮಾಡಿತ್ತು.

ನೈಜ ಘಟನೆಯ ಸ್ಫೂರ್ತಿ ಪಡೆದ ಫ್ಯಾಮಿಲಿ ಹಾಗೂ ಕಾಮಿಡಿ ಕಥಾಹಂದರ ಸಿನಿಮಾಗೆ ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ಭರತ್ ಮಧುಸೂದನನ್ ಸಂಗೀತ ನಿರ್ದೇಶನ, ನವೀನ್ ಶೆಟ್ಟಿ ಸಂಕಲನ ಚಿತ್ರಕ್ಕಿದೆ. ಸದ್ಯ ಮುಹೂರ್ತ ಮುಗಿಸಿಕೊಂಡಿರುವ ಚಿತ್ರತಂಡ ಶೀಘ್ರದಲ್ಲೇ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

Related Posts

error: Content is protected !!