ಸಿನಿ ಪ್ರೇಮಿ ಹೇಳಿದ ಸತ್ಯ!

ಸಿನಿಮಾ ಮಾಡಬೇಕೆಂಬ ಆಸಕ್ತಿಯಿಂದ ಐಟಿ ಕಂಪನಿಯಲ್ಲಿ ಒಳ್ಳೇ ಉದ್ಯೋಗವಿದ್ದರೂ ಸಹ ಚಿತ್ರರಂಗಕ್ಕೆ ಬಂದಿದ್ದಾರೆ ಆನಂದ್ ಅಹಿಪತಿ. ಸಿನಿಮಾ ಮಾಡುವುದಕ್ಕೂ ಮುನ್ನ ಅದೇ ಕ್ವಾಲಿಟಿಯಲ್ಲಿ ಸತ್ಯ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಥ್ರಿಲ್ಲರ್, ಮರ್ಡರ್ ಮಿಸ್ಟ್ರಿ ಕಥಾಹಂದರ ಒಳಗೊಂಡಿದೆ. ಈ ಕಿರುಚಿತ್ರದ ಟ್ರೇಲರ್ ರಿಲೀಸ್ ಆಗಿದೆ.

ಆನಂದ್ ಅಹಿಪತಿ ಅವರೇ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಾಯಕನ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಯಾವುದೇ ಚಿತ್ರಕ್ಕೂ ಕಮ್ಮಿಯಿಲ್ಲದ ಹಾಗೆ ಈ ಕಿರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಆನಂದ್, 3 ವರ್ಷದ ಹಿಂದೆ ಐಟಿ ಕಂಪನಿಯಲ್ಲಿ ವರ್ಕ್ ಮಾಡ್ತಿದ್ದೆ. ಆದರೆ ನನಗೆ ಇಂಟರೆಸ್ಟ್ ಇದ್ದದ್ದು ಆಕ್ಟಿಂಗ್ ನಲ್ಲಿ. ಅನುಪಂ ಖೇರ್ ಇನ್ ಸ್ಟಿಟ್ಯೂಟ್ ನಲ್ಲಿ ಕೋರ್ಸ್ ಮುಗಿಸಿ, ಈ ಶಾರ್ಟ್ ಫಿಲಂನಲ್ಲಿ ಅಭಿನಯಿಸಿದೆ. ಹಠ ಹಿಡಿದು 38 ನಿಮಿಷಗಳ ಈ ಚಿತ್ರ ನಿರ್ದೇಶನ‌ ಮಾಡಿದ್ದೇನೆ. ಇದು ಪ್ರೀಕ್ವೇಲ್ ಟು ಫ್ಯೂಚರ್ ಫಿಲಂ ಅನ್ನಬಹುದು, ಹಣದ ಬಗ್ಗೆ ಯೋಚಿಸದೆ ಕ್ವಾಲಿಟಿ ಹೆಚ್ಚು ಆದ್ಯತೆ ಕೊಟ್ಟು ಈ ಚಿತ್ರ ಮಾಡಿದ್ದೇನೆ.

ಸತ್ಯ ಅಂದ್ರೆ ನಿಜ, ಈತ ಒಬ್ಬ ಸೈಕೋ ಕಿಲ್ಲರ್, ಆತನ ಮನದಲ್ಲಿ ಏನೇನು ನಡೀತಿದೆ ಅನ್ನೋದೇ ಈ ಚಿತ್ರದ ಕಾನ್ಸೆಪ್ಟ್. ಆತ ಏನೇನು ಮಾಡ್ತಾನೆ, ಯಾಕೆ ಮಾಡ್ತಾನೆ, ಹೇಗೆ ಮಾಡ್ತಾನೆ ಅಂತ ಈ ಚಿತ್ರದಲ್ಲಿ ತೋರಿಸಿದ್ದೇವೆ. ಕೊನೇವರೆಗೆ ನೋಡಿದಾಗ ಅದು ಅರ್ಥವಾಗುತ್ತದೆ ಎಂದರು. ನಾಯಕಿ ಪಾತ್ರ ಮಾಡಿರುವ ಸೌಮ್ಯ ಮಾತನಾಡಿ ಈ ಸಿನಿಮಾ ಆನಂದ್ ರ ಕನಸು, ಇದೊಂದು ವಿಭಿನ್ನ ಜಾನರ್ ಸಿನಿಮಾ, ನಾನೊಬ್ಬ ಕಲಾವಿದೆಯಾಗೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು.

ದುರ್ಗಾ ಸಿನಿಮಾಸ್ ಮೂಲಕ ನಿರ್ದೇಶಕ ಆನಂದ್ ಅಹಿಪತಿ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ 2 ಹಾಡುಗಳಿದ್ದು, ಅಜಯ್ ಶಿವರಾಜ್ ಸಂಗೀತ ನಿರ್ದೆಶನ ಮಾಡಿದ್ದಾರೆ. ಕಾರ್ತೀಕ್ ಸಿದ್ದರಾಜು ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ.

Related Posts

error: Content is protected !!