ಇದು ಕನ್ನಡಿಗರ ಜಯಭೇರಿ! ಕನ್ನಡಕ್ಕೆ ಜೈ ಎಂದ ಯಶಸ್ ಸೂರ್ಯ-ನಿಶ್ವಿಕಾ ನಾಯ್ಡು- ಕಿರಣ್ ರಾಜ್: ವೈದ್ಯರ ಹಾಡಿಗೆ ಸಿಎಂ ಶುಭಾಶಯ

ವೃತ್ತಿಯಲ್ಲಿ ಅವರಿಬ್ಬರೂ ವೈದ್ಯರು. ಒಬ್ಬರು ಡಾ.ಶೈಲೇಶ್ ಕುಮಾರ್. ಇನ್ನೊಬ್ಬರು ಡಾ.ಶಶಿಕಲಾ ಪುಟ್ಟಸ್ವಾಮಿ. ಡಾ.ಶೈಲೇಶ್ ಅವರಿಗೆ ಕನ್ನಡ ಮೇಲೆ ಅತೀವ ಪ್ರೀತಿ. ಡಾ.ಶಶಿಕಲಾ ಅವರಿಗೆ ಕನ್ನಡ ಬರಹದ ಮೇಲೆ ಅತೀವ ಪ್ರೀತಿ. ಶಶಿಕಲಾ ಅವರು ಬರೆದ ಕನ್ನಡ ಗೀತೆಯೊಂದನ್ನು ವಿಡಿಯೋ ಸಾಂಗ್ ಮಾಡಲು ಮುಂದಾಗಿದ್ದು ಡಾ. ಶೈಲೇಶ್. ಹಾಗಾಗಿ ಅದಕ್ಕೆ ಜಯಭೇರಿ ಕನ್ನಡ ಎಂದು ಹೆಸರಿಟ್ಟು ಸೊಗಸಾದ ಕನ್ನಡ ವಿಡಿಯೋ ಗೀತೆ ಮಾಡಿದ್ದಾರೆ.

ಈಗ ಕನ್ನಡ ರಾಜ್ಯೋತ್ಸವದ ಸಂಭ್ರಮ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವ “ಜಯಭೇರಿ ಕನ್ನಡ” ಎಂಬ ಹಾಡು ನವೆಂಬರ್ 2 ರಂದು ಹಂಪಿಯಲ್ಲಿ ನಡೆದ ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಶ್ರೀಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ.

ಈ ಬಗ್ಗೆ ಡಾ.ಶೈಲೇಶ್ ಮಾತನಾಡಿ, ನಾನು ವೃತ್ತಿಯಲ್ಲಿ ವೈದ್ಯ. ಸಿನಿಮಾ ರಂಗದಲ್ಲಿ ನನಗೆ ಡಾ.ರಾಜಕುಮಾರ್ ಅವರು ಪ್ರೇರಣೆ. ನಮ್ಮ ಶ್ರೀನಾಗಬ್ರಹ್ಮ ಕ್ರಿಯೇಷನ್ಸ್ ಲಾಂಛನದಲ್ಲಿ ಸಂಚಾರಿ ವಿಜಯ್ ಅಭಿನಯಿಸಿದ್ದ “6 ನೇ ಮೈಲಿ” ಚಿತ್ರ ನಿರ್ಮಾಣ ಮಾಡಿದ್ದೆ. ಈಗ “ತಲ್ವಾರ್ ಪೇಟೆ” ಚಿತ್ರವನ್ನು ತೆರೆಗೆ ತರುವ ತಯಾರಿ ನಡೆಯುತ್ತಿದೆ. ನನಗೆ ಈ ಸಮಾಜ ಸಾಕಷ್ಟು ಕೊಟ್ಟಿದೆ. ನಾನು ಸಮಾಜಕ್ಕೆ ಏನಾದರೂ ಮಾಡಬೇಕೆಂದು ಹಾಗೂ ಕನ್ನಡದ ಮೇಲಿನ ಭಾಷಾಭಿಮಾನದಿಂದ “ಜಯಭೇರಿ ಕನ್ನಡ” ಎಂಬ ಕನ್ನಡದ ಹಿರಿಮೆ ಸಾರುವ ಹಾಡೊಂದನ್ನು ನಿರ್ಮಾಣ ಮಾಡಿದ್ದೇನೆ. ಡಾ. ಶಶಿಕಲಾ ಪುಟ್ಟಸ್ವಾಮಿ ಈ ಹಾಡನ್ನು ಬರೆದು ನಿರ್ದೇಶನ ಮಾಡಿದ್ದಾರೆ.

ಸಾಯಿಕಿರಣ್ ಸಂಗೀತ ನೀಡಿದ್ದಾರೆ. ಹೇಮಂತ್ ಕುಮಾರ್, ಅನಿರುದ್ದ್ ಶಾಸ್ತ್ರಿ , ಅನುರಾಧ ಭಟ್ ಹಾಡಿದ್ದಾರೆ. ಯಶಸ್ ಸೂರ್ಯ, ನಿಶ್ವಿಕಾ ನಾಯ್ಡು, ಕಿರಣ್ ರಾಜ್, ವೀಣಾ ಪೊನ್ನಪ್ಪ ಹಾಗೂ ನಾನು ಈ ಹಾಡಿನಲ್ಲಿ ಅಭಿನಯಿಸಿದ್ದೇವೆ. ಈ ಹಾಡನ್ನು ನಿರ್ಮಾಣ ಮಾಡಿ ಮಾನ್ಯ ಸಚಿವರಾದ ಶಿವರಾಜ್ ತಂಗಡಗಿ ಅವರ ಬಳಿ ಹೇಳಿದಾಗ, ಅವರು ಈ ಹಾಡನ್ನು ನವೆಂಬರ್ 2 ರಂದು ಹಂಪಿಯಲ್ಲಿ ನಡೆದ ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಂದ ಬಿಡುಗಡೆ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ನಾನು ಕರ್ನಾಟಕ ಸರ್ಕಾರಕ್ಕೆ ಹಾಗೂ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು ಡಾ.ಶೈಲೇಶ್ ಕುಮಾರ್.

ಡಾ. ಶೈಲೇಶ್ ಕುಮಾರ್ ಅವರು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಹಾಡೊಂದನ್ನು ನಿರ್ಮಾಣ ಮಾಡುತ್ತಿದ್ದೇನೆ. ನೀವೇ ಬರೆದು ನಿರ್ದೇಶನ ಮಾಡಬೇಕೆಂದರು. ತುಂಬಾ ಸಂತೋಷವಾಯಿತು. ಜೊತೆಗೆ ಕನ್ನಡದ ಕುರಿತು ಹಾಡನ್ನು ಬರೆಯುವಾಗ ಸ್ವಲ್ಪ ಭಾವುಕಳಾದೆ. ಇಡೀ ತಂಡದ ಸಹಕಾರದಿಂದ ಈ ಹಾಡು ಅದ್ದೂರಿಯಾಗಿ ಬಂದಿದೆ ಎಂದರು ನಿರ್ದೇಶಕಿ ಶಶಿಕಲಾ ಪುಟ್ಟಸ್ವಾಮಿ.

ನನಗೆ ಶೈಲೇಶ್ ಕುಮಾರ್ ಅವರು ಈ ರೀತಿ ಕನ್ನಡದ ಹಾಡೊಂದರಲ್ಲಿ ಅಭಿನಯಿಸಬೇಕೆಂದು ಕೇಳಿದರು. ಕನ್ನಡದ ಮೇಲಿನ ಅಭಿಮಾನದಿಂದ ಈ ಹಾಡಿನಲ್ಲಿ ಅಭಿನಯಿಸಿದ್ದೇನೆ. ಹಾಡು ಚೆನ್ನಾಗಿದೆ ಎಂದು ನಿಶ್ವಿಕಾ ನಾಯ್ಡು ತಿಳಿಸಿದರು.

ಕನ್ನಡ ನನ್ನ ಉಸಿರು. ಅಂತಹ ಕನ್ನಡದ ಸುಂದರ ಗೀತೆಯೊಂದರಲ್ಲಿ ಕರ್ನಾಟಕ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಅಭಿನಯಿಸಿದ್ದು ತುಂಬಾ ಖುಷಿಯಾಗಿದೆ ಎನ್ನುತ್ತಾರೆ ನಟ ಯಶಸ್ ಸೂರ್ಯ.

ಸಂಗೀತ ನಿರ್ದೇಶಕ ಸಾಯಿಕಿರಣ್ ಸಹ ಹಾಡಿನ ಬಗ್ಗೆ ಮಾಹಿತಿ ನೀಡಿದರು. ಧನು ಮಾಸ್ಟರ್ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.

Related Posts

error: Content is protected !!