ಕಳೆದ 3 ದಶಕಗಳಿಂದ ಸಹ ನಿರ್ದೇಶಕ, ಸಂಕಲನಕಾರನಾಗಿ ಕೆಲಸ ಮಾಡಿರುವ ಯತೀಶ್ ಕುಮಾರ್ ವಿ. ಈಗ ಸ್ವತಂತ್ರ ನಿರ್ದೇಶಕನಾಗಿದ್ದಾರೆ. ಈಗಾಗಲೇ ಶ್ರೀರಾಮನ ಪರಮಭಕ್ತ ಶ್ರೀ ಆಂಜನೇಯನ ಕುರಿತಂತೆ ಸಾಕಷ್ಟು ನಿರ್ದೇಶಕರು ಸಿನಿಮಾ ಮಾಡಿದ್ದಾರೆ.
ಆದರೆ, ಆ ಆಂಜನೇಯನ ಗದೆಯ ಪ್ರಾಮುಖ್ಯತೆ, ವಿಶೇಷತೆಗಳನ್ನಿಟ್ಟುಕೊಂಡು ಯಾರೂ ಸಹ ಸಿನಿಮಾ ಮಾಡಿಲ್ಲ. ಯತೀಶ್ ಕುಮಾರ್ ಅವರಿಂದ ಅಂಥದ್ದೊಂದು ಪ್ರಯತ್ನ ನಡೆದಿದೆ.
![](https://cinilahari.in/wp-content/uploads/2023/11/IMG_20231102_134101-1024x638.jpg)
ಆಂಜನೇಯನ ಗದೆಯ ಮಹತ್ವದ ಬಗ್ಗೆ ಹಾಗೂ ಅದರ ಸುತ್ತಲೂ ನಡೆಯುವ ಕಥೆಯನ್ನು ಇಟ್ಟುಕೊಂಡು ‘ಜೈ ಗಧಾಕೇಸರಿ’ ಎಂಬ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಬೆಂಗಳೂರು, ಚಿತ್ರದುರ್ಗ, ಹೊಸಪೇಟೆ, ಸಿಂಧನೂರು ಸುತ್ತಮುತ್ತ ೭೦ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರವೀಗ ಸೆನ್ಸಾರ್ ಹಂತದಲ್ಲಿದೆ.
![](https://cinilahari.in/wp-content/uploads/2023/11/IMG_20231102_134045-759x1024.jpg)
ಬಸವರಾಜ್ ಭಜಂತ್ರಿ ಮೂವೀ ಮೇಕರ್ಸ್ ಮೂಲಕ ಬಸವರಾಜ್ ಭಜಂತ್ರಿ ಅವರು ಜೈ ಗಧಾ ಕೇಸರಿ ಚಿತ್ರವನ್ನು ನಿರ್ಮಿಸಿದ್ದು, ಈಶ್ವರ್ ನಾಯಕ್ ಅವರ ಸಹ ನಿರ್ಮಾಣವಿದೆ. ಯತೀಶ್ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.
ಈ ಚಿತ್ರದಲ್ಲಿ ನಾಯಕನಾಗಿ ಈಶ್ವರ್ ನಾಯಕ್, ನಾಯಕಿಯರಾಗಿ ಜೀವಿತಾ ಹಾಗೂ ಕೋಮಲ ನಟಿಸಿದ್ದು, ಅವಿನಾಶ್, ಧರ್ಮ, ಅರವಿಂದರಾವ್, ಹೊನ್ನವಳ್ಳಿ ಕೃಷ್ಣ, ಪ್ರಶಾಂತ್ ಸಿದ್ದಿ, ರಾಜ್ ಚರಣ್ ಬ್ರಹ್ಮವರ್ ಉಳಿದ ಪಾತ್ರಗಳಲ್ಲಿದ್ದಾರೆ.
![](https://cinilahari.in/wp-content/uploads/2023/11/IMG_20231102_134435.jpg)
ಇನ್ನು ಈ ಚಿತ್ರದಲ್ಲಿ 5 ಹಾಡುಗಳಿದ್ದು, ಜಾರ್ಜ್ ಥಾಮಸ್ ಶ್ಯಾಮ್, ಕಾರ್ತೀಕ್ ವೆಂಕಟೇಶ್, ಪ್ರಸನ್ನ ಭೋಜಶೆಟ್ಟರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಲ್ಲದೆ ೮ ಸಾಹಸ ದೃಶ್ಯಗಳಿಗೆ ಸುಪ್ರೀಂ ಸುಬ್ಬು, ಸೂರಿ, ರಾಮ್ ದೇವ್ ಜಾನಿ, ಅಲ್ಟಿಮೇಟ್ ಶಿವು. ವೈಲೆಂಟ್ ವೇಲು ಸಾಹಸ ಸಂಯೋಜನೆ ಮಾಡಿದ್ದಾರೆ. ಶ್ಯಾಮ್ ಸಿಂಧನೂರು ಅವರ ಛಾಯಾಗ್ರಹಣ, ಪೂಜಾ.ಸಿ. ಅವರ ಸಂಕಲನ, ಮಂಜು ಹೊಸಪೇಟೆ ಸಹನಿರ್ದೇಶನ ಈ ಚಿತ್ರಕ್ಕಿದೆ.