ರೀಲ್ ಅಲ್ಲ, ರಿಯಲ್ ನಲ್ಲೂ ಹೀರೋನೇ! ರಕ್ತಾಕ್ಷ ನಾಯಕನ ಜನಸೇವೆ ಇದು

ರೀಲ್ ಅಲ್ಲ, ರಿಯಲ್ ನಲ್ಲೂ ಇವರು ಹೀರೋನೇ. ಹೌದು, ರಕ್ತಾಕ್ಷ ಸಿನಿಮಾ ನಾಯಕ ರೋಹಿತ್ ಅವರು, ಉತ್ತರ ಕರ್ನಾಟಕ ಭಾಗದ ಅನಾಥಶ್ರಮಗಳಿಗೆ ಹಾಗೂ ಸಮಾಜದ ವಿವಿಧ ವರ್ಗಗಳಿಗೆ ಸಹಾಯ ಹಸ್ತ ಚಾಚಿದ್ದಾರೆ.

ರಕ್ತಾಕ್ಷ ಸಿನಿಮಾ ಮೂಲಕ ನಾಯಕನಾಗಿ ಹಾಗೂ ನಿರ್ಮಾಪಕನಾಗಿ ಮೊದಲ ಹೆಜ್ಜೆ ಇಟ್ಟಿರುವ ರೋಹಿತ್ ಸಾಮಾಜಿಕ ಕೆಲಸಕ್ಕಿಳಿದ್ದಾರೆ. ಆಗಸ್ಟ್ 15ರಂದು ರೋಹಿತ್ ತಮ್ಮ ಹುಟ್ಟುಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಭಾಗದವರೇ ಆದ ರೋಹಿತ್ ಮಸ್ಕಿ, ಲಿಂಗಸಗೂರು, ಸಿಂಧನೂರು ಜನತೆಯೊಂದಿಗೆ ಜನ್ಮದಿನ ಆಚರಿಸಿಕೊಳ್ಳುವುದರ ಜೊತೆಗೆ ಅಲ್ಲಿನ ವಿವಿಧ ವರ್ಗದ ಜನರಿಗೆ ಕೈಲಾದ ಸಹಾಯ ಮಾಡುವುದರ ಜೊತೆಗೆ ಅದೇ ಭಾಗದ ಅನಾಥಶ್ರಮಗಳಿಗೆ ಆಹಾರ ಧಾನ್ಯ ಹಾಗೂ ಪುಸ್ತಕಗಳನ್ನು ವಿತರಣೆ ಮಾಡಿದ್ದಾರೆ.

ಅಂದಹಾಗೆ, ರೋಹಿತ್ ಇದೇ‌ ಮೊದಲ ಬಾರಿಗೆ ಸಾಮಾಜಿಕ ಸೇವೆಗಿಳಿದಿಲ್ಲ. ಹೀರೋ ಆಗಿ ಹೊಸ ಪಯಣ ಆರಂಭಿಸುವುದಕ್ಕೂ ಮುನ್ನ ಅಂದರೆ 2014ರಿಂದಲೂ ಜನೋಪಕಾರಿ ಕೆಲಸ ಮಾಡುತ್ತಿದ್ದು ಅಕ್ಷಯಪಾತ್ರಾ, ಅದಮ್ಯಚೇತನ, ಯೂನಿಸೆಫ್ ಗೆ ಡೋನರ್ ಕೂಡ. ಹೀರೋ ಆದ ಮೇಲೆಯೂ ಜನೋಪಕಾರಿ ಕೆಲಸಗಳನ್ನು ಮುಂದುರೆಸಿಕೊಂಡು ಬರುತ್ತಿದ್ದಾರೆ.

ಉತ್ತರ ಕರ್ನಾಟಕದ ಮಸ್ಕಿ ಊರಿನಲ್ಲಿರುವ ಅನಾಥಶ್ರಮಕ್ಕೆ ಅಪ್ಪು ಅವರ ಹೆಸರಿನಲ್ಲಿ ಕಳೆದ ಒಂದು ವರ್ಷದಿಂದ ಪ್ರತಿ ತಿಂಗಳು ಆಹಾರ ಧಾನ್ಯ ಹಾಗೂ ಪುಸ್ತಕಗಳನ್ನು ವಿತರಣೆ ಮಾಡುತ್ತಿದ್ದಾರೆ. ಇದೀಗ ತಮ್ಮದೇ ಸಾಯಿ ಪ್ರೊಡಕ್ಷನ್ ನಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಮಾಜಿಕ ಕೆಲಸ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ರೋಹಿತ್‌ ಮಾಡೆಲ್‌ ಆಗಿ ಗುರುತಿಸಿಕೊಂಡವರು. ಮೂಲತಃ ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆಯ ಪುಟ್ಟ ಹಳ್ಳಿಯ ರೋಹಿತ್, ಸುಮಾರು 6 ವರ್ಷಗಳ ಕಾಲ ಮಾಡೆಲಿಂಗ್ ಸಾಮ್ರಾಜ್ಯದಲ್ಲಿ ಮಿಂಚಿದವರು. ಎರಡು ವರ್ಷಗಳ ರಂಗಭೂಮಿ ಅನುಭವ ಪಡೆದಿರುವ ಅವರು ರಕ್ತಾಕ್ಷ ಸಿನಿಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಒಂದಷ್ಟು ಪ್ರತಿಷ್ಠಿತ ಬ್ರ್ಯಾಂಡ್ ಪ್ರತಿನಿಧಿಸಿರುವ ರೋಹಿತ್‌ಗೆ, ರಿಲೀಸ್ ಗೆ ರೆಡಿ ಇರುವ ಇನ್ನೊಂದು ದ್ವಿಭಾಷಿಯ ಸಿನಿಮಾದಲ್ಲಿ ಖಳ ನಾಯಕನಾಗಿ ಅಭಿನಯಿಸಿದ ಅನುಭವಿದೆ. ನಾಯಕನಾಗಿ ಬೆಳ್ಳಿ ಪರದೆಯಲ್ಲಿ ರಾರಾಜಿಸಬೇಕೆಂಬ ಹೊಸ ಉತ್ಸಹ ಹಾಗೂ ಹುಮ್ಮಸ್ಸಿನೊಂದಿಗೆ ತಮ್ಮದೇ ಸಾಯಿ ಪ್ರೊಡಕ್ಷನ್ ಹೌಸ್ ಅಡಿ ರಕ್ತಾಕ್ಷ ಚಿತ್ರ ನಿರ್ಮಾಣ ಮಾಡಿ ನಟಿಸುತ್ತಿದ್ದಾರೆ.

ವಾಸುದೇವ್ ಎಸ್ ಎನ್ ರಕ್ತಾಕ್ಷ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ರೋಹಿತ್ ಜೊತೆ ಒಂದಷ್ಟು ಉತ್ಸಾಹಿ ಪ್ರತಿಭೆಗಳು ಸೇರಿ ‘ರಕ್ತಾಕ್ಷ’ ಸಿನಿಮಾಗೆ ದುಡಿದಿದ್ದಾರೆ. ಆದರ್ಶ್ ಶಿರಾಸ್, ಆರ್ ಜೆ ಛಾಯಾಗ್ರಹಣ ಮಾಡಿದ್ದು , ಚಿತ್ರಕ್ಕೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಧೀರೇಂದ್ರ ಡಾಸ್ ಸಂಗೀತ ನೀಡಿದ್ದಾರೆ.

ರೂಪ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್, ಪ್ರಭು, ವಿಶ್ವ, ನಾರಾಯಣ, ಭದ್ರಿ, ಶಿವಮೊಗ್ಗ ರಾಮಣ್ಣ, ವಿಲಾಸ್, ಗುರುದೇವ ನಾಗರಾಜ, ಬಸವರಾಜ ಆದಾಪುರ ನಟಿಸಿದ್ದಾರೆ. ಖಳನಾಯಕ ಪಾತ್ರದಲ್ಲಿ ನಟ ಪ್ರಮೋದಶೆಟ್ಟಿ ಅಭಿನಯಿಸಿದ್ದಾರೆ.

Related Posts

error: Content is protected !!