ನನಗೆ ಸನ್ಮಾನ ಹೊಗಳಿಕೆ ಮುಜುಗರ: ಸುಧಾಮೂರ್ತಿ ; ಪದ್ಮಭೂಷಣ ಪ್ರಶಸ್ತಿ ವಿಜೇತೆಗೆ ಆತ್ಮೀಯ ಸನ್ಮಾನ

ಸರಳತೆ, ಸಹಾಯ, ಸಮಾಜಸೇವೆಗೆ ಇನ್ನೊಂದು ಹೆಸರು ಸುಧಾಮೂರ್ತಿ ಎಂದರೆ ತಪ್ಪಾಗಲಿಕ್ಕಿಲ್ಲ. ಇನ್ಫೋಸಿಸ್ ಎಂಬ ಐ.ಟಿ ದಿಗ್ಗಜ ಸಂಸ್ಥೆಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರ ಹೆಮ್ಮೆ ಹೆಚ್ಚಿಸಿದ ಕನ್ನಡತಿ. ಲಕ್ಷಾಂತರ ಮಂದಿಗೆ ಕೆಲಸ ಕೊಟ್ಟ ಉದ್ಯಮಿ, ಸಮಾಜಸೇವಕಿ, ಲೇಖಕಿ ಸುಧಾಮೂರ್ತಿಯವರ ಸಾಮಾಜಿಕ ಸೇವೆಗಾಗಿ ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಿದ್ದರು.


ಈ ನಿಟ್ಟಿನಲ್ಲಿ, ಇತ್ತೀಚಿಗೆ ಖ್ಯಾತ ನಿರ್ಮಾಪಕರಾದ ರಮೇಶ್ ರೆಡ್ಡಿಯವರ ನೇತೃತ್ವದಲ್ಲಿ, `ಸುಧಾಮೂರ್ತಿಯವರ ಆತ್ಮೀಯ ಗೆಳೆಯರ ಬಳಗ’ ಸನ್ಮಾನಿಸಿದೆ.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಧಾಮೂರ್ತಿ, ‘ನನಗೆ ಸನ್ಮಾನ ಹೊಗಳಿಕೆ ಮುಜುಗರ ಮಾಡುತ್ತದೆ. ಆದರೆ, ರಮೇಶ್ ರೆಡ್ಡಿಯವರು ಹಲವು ವರ್ಷಗಳಿಂದ ನಮ್ಮ ಸಂಸ್ಥೆಗಾಗಿ ದುಡಿದಿದ್ದಾರೆ, ಅವರ ಕೆಲಸದ ಬಗ್ಗೆ ಇರುವ ಶ್ರದ್ಧೆಯನ್ನು ನಾನು ಮೆಚ್ಚಿದ್ದೇನೆ. ನಾನು ಸನ್ಮಾನ ಸ್ವೀಕರಿಸುವುದರಿಂದ ಹಲವರಿಗೆ ಸಂತೋಷವಾಗುವುದರಿಂದ ಅವರ ಸಂತೋಷದಲ್ಲಿ ನಾನು ಸಂತೋಷ ಕಾಣುತ್ತೇನೆ. ನನ್ನ ಕೆಲಸ ನಾನು ಮಾಡಿದ್ದೀನಿ, ಯಾವತ್ತೂ ಪ್ರಶಸ್ತಿಗಾಗಿ ಕೆಲಸ ಮಾಡಿದವಳು ನಾನಲ್ಲ. ಈಗ ಪ್ರಶಸ್ತಿ ಬಂದಿದ್ದಕ್ಕೆ ಸಂತೋಷ.

ಇನ್ನು ಹೆಣ್ಣು ಮಕ್ಕಳಿಗೆ ಒಂದು ಕಿವಿಮಾತು ಹೇಳಲು ಇಚ್ಚಿಸುತ್ತೇನೆ. ಆದನೆಂದರೆ, ಹೆಣ್ಣು ಮಕ್ಕಳು ನಾಲ್ಕು ಗೋಡೆಯ ಮಧ್ಯೆ ಬಂಧಿಯಾಗದೆ, ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು. ನಾನು ನನ್ನ ಸಂಪೂರ್ಣ ಶಕ್ತಿಯನ್ನು ಬಳಸಿಕೊಂಡೆ ಅಷ್ಟೇ. ಎಲ್ಲರಿಂದಲೂ ಇದು ಸಾಧ್ಯವಿದೆ.

ಇನ್ನೊಂದು ಬಹಳ ಮುಖ್ಯವಾದ ಬಿನ್ನಹವೆಂದರೆ, ದಯವಿಟ್ಟು ಎಲ್ಲರೂ ದಿನಕ್ಕೆ ಹತ್ತು ರುಪಾಯಿಯಾದರೂ ಮೂಕಪ್ರಾಣಿಗಳ ಕಲ್ಯಾಣಕ್ಕೆ ಕೂಡಿಡಿ, ಆ ದುಡ್ಡನ್ನು ಪ್ರಾಣಿ ದಯಾ ಸಂಘಗಳಿಗೆ ಕೊಡಿ. ಇದರಿಂದ ಸರಿಯಾದ ಆಹಾರವಿಲ್ಲದೆ ಬಳಲುತ್ತಿರುವ ಪ್ರಾಣಿಗಳಿಗೆ ಆಹಾರ, ಆರೋಗ್ಯ ಸಿಗುತ್ತದೆ’ ಎಂದು ತಮ್ಮ ಮನದಾಳದ ಮಾತುಗಳನ್ನು ತರೆದಿಟ್ಟರು.

ಕಾರ್ಯಕ್ರಮದಲ್ಲಿ ಸಾಕಷ್ಟು ಮಂದಿ ಸುಧಾಮೂರ್ತಿಯವರ ಆತ್ಮೀಯರು ಮತ್ತು ಅಭಿಮಾನಿಗಳು ಭಾಗವಹಿಸಿದ್ದು, ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.

Related Posts

error: Content is protected !!