ಹೊಂದಿಸಿ ಬರೆದ ಅಶ್ವಿನಿ ಪುನೀತ್ ರಾಜ್‍ಕುಮಾರ್: ಸಿನಿಮಾ ಟ್ರೇಲರ್ ರಿಲೀಸ್ ಮಾಡಿ ಶುಭ ಹಾರೈಕೆ-ಫೆ.10ಕ್ಕೆ ಚಿತ್ರ ಬಿಡುಗಡೆ…

ರಾಮೇನಹಳ್ಳಿ ಜಗನ್ನಾಥ್ ಚೊಚ್ಚಲ ನಿರ್ದೇಶನ ಹೊಂದಿಸಿ ಬರೆಯಿರಿ ಸಿನಿಮಾ ಫೆಬ್ರವರಿ 10ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ‘ಹೊಂದಿಸಿ ಬರೆಯಿರಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಬಹು ನಿರೀಕ್ಷಿತ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ. ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹದೇವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ ಇತರರು ಇದ್ದಾರೆ.

ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಮಾತನಾಡಿ, ‘ಹೊಂದಿಸಿ ಬರೆಯಿರಿ’ ಎಂದಾಗ ನೆನಪಾಗೋದು ಬಾಲ್ಯ. ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಹೋಗಬೇಕು, ಬದುಕು ಬಂದಂತೆ ಸ್ವೀಕರಿಸಿ ಅನ್ನೋದು ಈ ಚಿತ್ರದ ಆಶಯ. ಐದು ಜನ ಸ್ನೇಹಿತರ ಹನ್ನೆರಡು ವರ್ಷದ ಜರ್ನಿ ಈ ಚಿತ್ರದಲ್ಲಿದೆ. ಕಾಲೇಜು, ಕಾಲೇಜು ನಂತರದ ದಿನಗಳು, ಮದುವೆ ಈ ಜರ್ನಿಯನ್ನು ಒಳಗೊಂಡಿದೆ. ತುಂಬಾ ಜನಕ್ಕೆ ಈ ಸಿನಿಮಾ ಕನೆಕ್ಟ್ ಆಗುತ್ತೆ. ಈ ಚಿತ್ರದ ಟೈಟಲ್ ನೀಡಿದ್ದು ಮಾಸ್ತಿ ಸರ್. ನನಗೆ ಈ ಚಿತ್ರ ಹೊಸತು. ಇಲ್ಲಿ ನಟಸಿರೋರೆಲ್ಲ ಅನುಭವಿಗಳು ಆದ್ದರಿಂದ ಸಾಕಷ್ಟು ತಯಾರಿ ಮಾಡಿಕೊಂಡು ಈ ಸಿನಿಮಾ ಕೆಲಸ ಆರಂಭಿಸಿದೆವು. ಫೆಬ್ರವರಿ10ರಂದು ಸಿನಿಮಾ ಬಿಡುಗಡೆಯಾಗುತ್ತಿದೆ ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹ ನೀಡಿ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

ನಟ ಪ್ರವೀಣ್ ತೇಜ್ ಮಾತನಾಡಿ, ನಮ್ಮ ಚಿತ್ರದ ನಿಜವಾದ ನಾಯಕ ನಿರ್ದೇಶಕ ಹಾಗೂ ನಿರ್ಮಾಪಕ ರಾಮೇನಹಳ್ಳಿ ಜಗನ್ನಾಥ್. ಒಂದೊಳ್ಳೆ ತಂಡವನ್ನು ಕಟ್ಟಿಕೊಂಡು ಎಲ್ಲರನ್ನೂ ನಿಭಾಯಿಸಿ ತುಂಬಾ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ಒಂದೊಳ್ಳೆ ಅನುಭವವನ್ನು ಈ ಸಿನಿಮಾ ನೀಡಿದೆ ಎಂದರು.

ನಟಿ ಭಾವನ ರಾವ್ ಮಾತನಾಡಿ, ಹೊಂದಿಸಿ ಬರೆಯಿರಿ ಕಥೆ ಕೇಳಿದಾಗ ಸಿಂಪಲ್ ಕಥೆ ಬಟ್ ಇದರಲ್ಲಿ ಬರುವ ಪಾತ್ರಗಳು ತುಂಬಾ ಕಾಂಪ್ಲಿಕೇಟ್ ಅನಿಸ್ತು. ನಮ್ಮ ಜೀವನದ ಹಾಗೆ ಕೆಲವು ಸನ್ನಿವೇಶಗಳಿಂದ ನಾವು ಜೀವನವನ್ನು ಕಾಂಪ್ಲಿಕೇಟ್ ಮಾಡಿಕೊಳ್ಳುತ್ತೇವೆ. ಚಿತ್ರದಲ್ಲಿ ನಾನು ಭೂಮಿಕ ಪಾತ್ರ ನಿರ್ವಹಿಸಿದ್ದೇನೆ. ಈ ಸಿನಿಮಾ ತುಂಬಾ ಜನಕ್ಕೆ ಕನೆಕ್ಟ್ ಆಗುತ್ತೆ. ನಿರ್ದೇಶಕರು ಈ ಸಿನಿಮಾ ಬಗ್ಗೆ ಆರಂಭದಿಂದಲೂ ತುಂಬಾ ಕ್ಲಿಯರ್ ಆಗಿದ್ದರು ಇಂತಹ ಬ್ಯೂಟಿಫುಲ್ ಸಿನಿಮಾ ಕೊಟ್ಟಿದ್ದಕ್ಕೆ ಅವರಿಗೆ ಧನ್ಯವಾದ ಎಂದರು.

ನಟ ಶ್ರೀ ಮಹದೇವ್ ಮಾತನಾಡಿ ಹೊಂದಿಸಿ ಬರೆಯಿರಿ ಎಂದಾಗ ಬಾಲ್ಯ ನೆನಪಾಗುತ್ತೆ. ಆದ್ರೆ ಕೇವಲ ಬಾಲ್ಯ ಅಲ್ಲ ಜೀವನ ಹೇಗೆ ನಡೀತಿದೆ, ನಾವು ಹೇಗಿರಬೇಕು. ಚಿಕ್ಕ ತಪ್ಪು ಎಷ್ಟು ದೊಡ್ಡದಾಗುತ್ತೆ ಎಲ್ಲವೂ ಈ ಸಿನಿಮಾದಲ್ಲಿ ರಿಯಲೈಜ್ ಆಗುತ್ತೆ. ಇಡೀ ಸಿನಿಮಾವನ್ನು ಮಾತಲ್ಲಿ ಹೇಳೋಕಾಗಲ್ಲ ಅಷ್ಟು ಡೆಪ್ತ್ ಆಗಿದೆ ಈ ಚಿತ್ರದ ಕಾನ್ಸೆಪ್ಟ್. ನನಗೆ ಈ ಚಿತ್ರ ತುಂಬಾ ಸ್ಪೆಶಲ್ ಎಂದರು.

ನಟಿ ಐಶಾನಿ ಶೆಟ್ಟಿ ಮಾತನಾಡಿ ಹೊಂದಿಸಿ ಬರೆಯಿರಿ ಸಿನಿಮಾ ಒಪ್ಪಿಕೊಳ್ಳಲು ಮೊದಲ ಕಾರಣ ಈ ಸಿನಿಮಾ ಕಥೆ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್. ಈ ಚಿತ್ರದ ಪಾತ್ರಗಳು ಬದುಕಿಗೆ ತುಂಬಾ ಹತ್ತಿರವಾಗುತ್ತೆ. ಮೊದಲ ಸಿನಿಮಾದಲ್ಲೇ ಇಷ್ಟೊಳ್ಳೆ ಸಬ್ಜೆಕ್ಟ್ ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕರು. ಚಿತ್ರದಲ್ಲಿ ಸನಿಹ ಪಾತ್ರ ಮಾಡಿದ್ದೇನೆ. ಈ ಪಾತ್ರ ಹಾಗೂ ಈ ಸಿನಿಮಾ ಭಾಗವಾಗಿರೋದಕ್ಕೆ ನನಗೆ ತುಂಬಾ ಹೆಮ್ಮೆಯಿದೆ. ಫೆಬ್ರವರಿ 10ರಂದು ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಸಂತಸ ಹಂಚಿಕೊಂಡರು.

ನವೀನ್ ಶಂಕರ್ ಮಾತನಾಡಿ ಈ ಸಿನಿಮಾ ಒಪ್ಪಿಕೊಳ್ಳಲು ಮೂಲ ಕಾರಣ ಈ ಚಿತ್ರದ ಆಶಯ. ಸಂಬಂಧಗಳ ಸುತ್ತ, ಸ್ನೇಹದ ಸುತ್ತ, ಬಾಂದವ್ಯದ ಸುತ್ತ ಈ ಸಿನಿಮಾ ಹೇಳ ಹೊರಟ ವಿಷಯ ಬಹಳ ಇಷ್ಟವಾಯ್ತು ಎಂದರು.

ನಟಿ ಅರ್ಚನಾ ಕೊಟ್ಟಿಗೆ, ನಟಿ ಅರ್ಚನಾ ಜೋಯೀಸ್, ಅನಿರುದ್ದ್ ಆಚಾರ್ಯ ಮಾತಾಡಿದರು. ಸಾಗರ್ ಹೆಚ್.ಜಿ ಕ್ಯಾಮೆರಾ ಹಿಡಿದರೆ, ಜೋ ಕೋಸ್ಟ ಸಂಗೀತವಿದೆ. ಕೆ. ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ ಚಿತ್ರಕ್ಕಿದೆ. ಮಾಸ್ತಿ, ಪ್ರಶಾಂತ್ ರಾಜಪ್ಪ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ‘ಸಂಡೇ ಸಿನಿಮಾಸ್’ ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ಸೇರಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Related Posts

error: Content is protected !!