ಗಣರಾಜ್ಯೋತ್ಸವಕ್ಕೆ ಪ್ರಜಾರಾಜ್ಯ ಟ್ರೇಲರ್ ರಿಲೀಸ್…

‘ಆರ್ಥಿಕ ಸ್ವಾತಂತ್ರ‍್ಯಕ್ಕಾಗಿ ಹೋರಾಟ’ ಎಂಬ ಟ್ಯಾಗ್ ಲೈನ್ ಹೊಂದಿರುವ ‘ಪ್ರಜಾರಾಜ್ಯ’ ಚಿತ್ರ ಸದ್ಯ ಜಾಲತಾಣದಲ್ಲಿ ಸೌಂಡ್ ಮಾಡುತ್ತಿದೆ. ಪ್ರತಿಯೊಬ್ಬ ಭಾರತೀಯ ನೋಡಲೇ ಬೇಕಾದ ಸಿನಿಮಾ ಇದು ಎಂಬುದು ತಂಡದ ಮಾತು. ಯಾಕಂದರೆ ಪ್ರಜೆಗಳು ಮನಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬ ಅಂಶದ ಮೇಲೆ ಈ ಸಿನಿಮಾ ಮಾಡಲಾಗಿದೆ. ಇತ್ತೀಚೆಗೆ ಟ್ರೇಲರ್ ಬಿಡುಗಡೆಯಾಗಿದೆ. ಸದ್ಯ ವಿಧಾನಸಭಾ ಚುನಾವಣೆಗೆ ರಾಜ್ಯ ಸಿದ್ದವಾಗುತ್ತಿದ್ದು, ಈ ಸಂದರ್ಭದಲ್ಲೇ ಸಿನಿಮಾ ಇದೇ ಫೆಬ್ರವರಿ 24ರಂದು ಬಿಡುಗಡೆಯಾಗಲಿದೆ.

ಅಂದಹಾಗೆ, ಈ ಚಿತ್ರಕ್ಕೆ ವೃತ್ತಿಯಲ್ಲಿ ವೈದ್ಯರಾಗಿರುವ ಡಾಕ್ಟರ್ ವರದರಾಜು ಡಿ.ಎನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಟನೆಯ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ಇತ್ತೀಚೆಗೆ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ಮಾಪಕರು , ‘ಉಪೇಂದ್ರ ಸಿನಿಮಾ ನೋಡಿ, ನಿಜ ಸಂಗತಿಯನ್ನು ಹೀಗೂ ತೋರಿಸಬಹುದು ಎಂದು ಗೊತ್ತಾಯ್ತು. ನಮಗೆ ಹೋರಾಟದ ಮೂಲಕ ಸ್ವಾತಂತ್ರ‍್ಯ ಬಂತು. ಸ್ವಾತಂತ್ರ್ಯ ಬಂದು 75 ವರ್ಷವಾದರೂ ನಾವೆಲ್ಲಾ ಆರ್ಥಿಕವಾಗಿ ಸ್ವಾತಂತ್ರ್ಯವಾಗಿದ್ದೇವಾ! ನಾವು ಸ್ವಾತಂತ್ರ್ಯವನ್ನು ಹೇಗೆ ನಡೆಸಿಕೊಂಡು ಹೋಗಬೇಕು ಎಂಬುದನ್ನು ತಿಳಿಸಲು ಈ ಸಿನಿಮಾ ಮಾಡಲಾಗಿದೆ. ಪ್ರಜಾಪ್ರಭುತ್ವ ಎಂದರೆ! ಜನರಿಂದ ಜನರಿಗಾಗಿ ಇರುವ ಸರ್ಕಾರ. ಆದರೇ ಇಂದು ಕೆಲವರಿಂದ ಕೆಲವರಿಗಾಗಿ ಸರ್ಕಾರ ಇದೆ. ಸಂವಿಧಾನದ ನಾಲ್ಕನೇ ಅಂಗ ಮಾಧ್ಯಮ ಎಂದು ಹೇಳುತ್ತೇವೆ.

ಅದು ತನ್ನ ಕೆಲಸ ಮಾಡುತ್ತಿದೆಯಾ, ಸರಿಯಾಗಿ ಕೆಲಸ ಮಾಡಿದ್ರೆ ಎನೆಲ್ಲಾ ಮಾಡಬಹುದು ಎಂಬುದರ ಜೋತೆಗೆ ನಾವಿಂದು ಪ್ರತಿ ಮನುಷ್ಯ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಬೇಕು. ನಾವು ಕಟ್ಟುವ ಟ್ಯಾಕ್ಸ್ ಸರಿಯಾಗಿ ಬಳಕೆಯಾದರೆ, ನಾವೆಲ್ಲಾ ಆರ್ಥಿಕವಾಗಿ ಸ್ವಾತಂತ್ರ‍್ಯರಾಗುತ್ತೇವೆ. ಎಂಬುದನ್ನು ತೋರಿಸಲಾಗಿದ್ದು, ಒಟ್ಟಿನಲ್ಲಿ ಈ ಸಿನಿಮಾ ಪ್ರಜೆಗಳಿಗೆ ತಿಳುವಳಿಕೆ ಮೂಡಿಸಲು ಮಾಡಲಾಗಿದೆ. ಪ್ರತಿ ಪ್ರಜೆ ನೋಡಲೇ ಬೇಕಾದ ಸಿನಿಮಾ ಇದು. ಇದನ್ನು ಪ್ರತಿ ಮತದಾರ ನೋಡಿದ್ರೆ ಬದಲಾವಣೆ ಕಂಡಿತ ಆಗುತ್ತದೆ’ ಎಂದು ಹೇಳಿದರು.

ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಮಾತನಾಡಿ ‘ನಾನು ಇದರಲ್ಲಿ ನಟನೆ ಕೂಡ ಮಾಡಿದ್ದೇನೆ. ಇಂದಿನ ಸಮಾಜದಲ್ಲಿ ಆಗು ಹೋಗುಗಳನ್ನು ಹೇಳುವ ಸಿನಿಮಾ ಇದು. ನಮ್ಮ ಮತದ ಮಹತ್ವ ತೋರಿಸುವ ಜೊತೆಗೆ ಸಮಸ್ಯೆ ಹೇಗೆ ಬಗೆಹರಿಸಿಕೊಳ್ಳಬೇಕು ಎಂಬುದನ್ನು ತೋರಿಸಲಾಗಿದೆ. ಇಂದು ಕೆಲಸ ಮಾಡದವ ಮಾಡುವವ ಎಲ್ಲರು ಟ್ಯಾಕ್ಸ್ ಕಟ್ಟುತ್ತಾನೆ. ಆ ಹಣ ಎನಾಯ್ತು ಎಂದು ಕೇಳುವ ಅಧಿಕಾರ ಕೂಡ ಪ್ರಜೆಗಿದೆ. ನಮ್ಮ ಟ್ಯಾಕ್ಸ್ ಸರಿಯಾಗಿ ಬಳಕೆಯಾದ್ರೆ ದೇಶದ ಎಲ್ಲಾ ಜನರಿಗೆ ಉಚಿತ ಶಿಕ್ಷಣ, ಆರೋಗ್ಯ ನೀಡಬಹುದು. ಇವೆರಡಕ್ಕಾಗಿ ಮನುಷ್ಯ ಇಂದು ವರ್ಷವಿಡಿ ದುಡಿತಾ ಇರುತ್ತಾನೆ. ಇಂತಹ ಸಮಾಜಕ್ಕೆ ಒಳ್ಳೆ ಸಂದೇಶ ನೀಡುವ ಸಿನಿಮಾಗಳು ಗೆಲ್ಲಬೇಕು’ ಎಂದರು.

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ವಿ. ನಾಗೇಂದ್ರ ಪ್ರಸಾದ್, ‘ಆರ್ಥಿಕ ಸ್ವಾತಂತ್ರ‍್ಯದ ಕಲ್ಪನೆ ಎಷ್ಟರ ಮಟ್ಟಿಗೆ ತೆರೆಯ ಮೇಲೆ ಬಂದಿದೆ ಎಂಬುದು ಮುಖ್ಯ. ಸಮಾಜದಲ್ಲಿ ಸಿನಿಮಾ ಮಾದ್ಯಮ ಹಲವಾರು ಬದಲಾವಣೆ ಮಾಡುತ್ತಾ ಬಂದಿದೆ. ಅದಕ್ಕೆ ಉದಾಹರಣೆ ‘ಬಂಗಾರದ ಮನುಷ್ಯ’ ಸಿನಿಮಾ ನೋಡಿ ಹಲವಾರು ಯುವಕರು ನಗರದಿಂದ ಹಳ್ಳಿಗೆ ಹೋಗಿ ಕೃಷಿ ಮಾಡುತ್ತಿರುವುದು. ಇಂತಹ ಅದ್ಭುತ ಬದಲಾವಣೆ ಈ ಚಿತ್ರದ ಮೂಲಕ ಆಗಲಿ. ವಿಜಯ್ ಭಾರ್ಗವ್ ನಿರ್ದೇಶನದ ಜೊತೆ ನಟನೆ ಕೂಡ ಮಾಡಿದ್ದಾರೆ. ಹಾಡು, ಟ್ರೇಲರ್ ನೋಡಿದಾಗ ನಿರ್ದೇಶಕನ ಕೆಲಸದ ಜೋತೆ ಸಂಗೀತ, ಛಾಯಾಗ್ರಹಣ ಹೈಲೈಟ್ ಆಗುತ್ತದೆ ಎನಿಸಿದೆ. ಸದ್ಯ ರಾಜ್ಯದಲ್ಲಿ ಚುನಾವಣಾ ಕಾವು ಇರುತ್ತಿದ್ದು, ಇಂತ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, ಈ ಸಿನಿಮಾ ಮೂಲಕ ಬದಲಾವಣೆ ಆಗಲಿ’ ಎಂದರು.

ಚಿತ್ರದ ಟ್ರೇಲರ್‌ಗೆ ಸಂತೋಷ ಹೆಗಡೆ ವಿಶೇಷ ಶುಭಾಶಯ ತಿಳಿಸಿದ್ದಾರೆ. ಯುವ ಪ್ರತಿಭೆ ವಿಜಯ್ ಭಾರ್ಗವ ನಿರ್ದೇಶದ ಈ ಚಿತ್ರದಲ್ಲಿ ದೇವರಾಜ್, ಸುಧಾರಾಣಿ, ಅಚ್ಚುತ್ ಕುಮಾರ್, ಟಿ.ಎಸ್ ನಾಗಬರನ್, ದಿವ್ಯಾ ಗೌಡ, ತಬಲಾ ನಾಣಿ, ಗಣೇಶ ರಾವ್ ಮುಂತಾದ ದೊಡ್ಡ ತಾರಾಗಣವಿದೆ. ಚಿತ್ರಕ್ಕೆ ವಿಜೇತ್ ಮಂಜಯ್ಯ ಸಂಗೀತ, ರಾಕೇಶ್ ಸಿ ತಿಲಕ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನವಿದೆ. ಅಂದಂಗೆ ಈ ಚಿತ್ರವನ್ನು ವೆಂಕಟ್ ಗೌಡ ರಾಜ್ಯಾದ್ಯಂತ ವಿತರಣೆ ಮಾಡಲಿದ್ದಾರೆ.

Related Posts

error: Content is protected !!