ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ಕುತೂಹಲ ಮೂಡಿಸಿರುವ, ಹರಿಪ್ರಸಾದ್ ಜಯಣ್ಣ ನಿರ್ದೇಶನದ “ಪದವಿಪೂರ್ವ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನವರಸ ನಾಯಕ ಜಗ್ಗೇಶ್ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
ನಿರ್ದೇಶಕ ಹರಿಪ್ರಸಾದ್ ನನಗೆ “ವಾಸ್ತು ಪ್ರಕಾರ” ಚಿತ್ರದ ಸಮಯದಿಂದಲೂ ಪರಿಚಯ. ಸೌಮ್ಯ ಸ್ವಭಾವದ ಆತ ಮಹಾನ್ ಬುದ್ದಿವಂತ, ವಿದ್ಯಾವಂತ. ಯೋಗರಾಜ್ ಭಟ್ ಅವರ ಗರಡಿಯಲ್ಲಿ ಬಂದಿರುವ ಈತ ಚಿತ್ರವನ್ನು ಚೆನ್ನಾಗಿ ಮಾಡಿರುತ್ತಾರೆಂಬ ನಂಬಿಕೆ ಇದೆ. ಟೀಸರ್ ಚೆನ್ನಾಗಿದೆ. ಹದಿನಾರರಿಂದ ಹದಿನೆಂಟು ವಯಸ್ಸಿನವರ ಕುರಿತಾದ ಸಿನಿಮಾಗಳು ಬರುವುದು ಬಹಳ ಕಡಿಮೆ. ಈ ಚಿತ್ರ ಆ ವಯಸ್ಸಿನವರಿಗೆ ಸಂಭಂದಿಸಿದ್ದು. ನಾಯಕ ಪೃಥ್ವಿ ಶಾಮನೂರು ಬಹಳ ಲವಲವಿಕೆಯಿಂದ ನಟಿಸಿದ್ದಾನೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಜಗ್ಗೇಶ್ ಹಾರೈಸಿದರು.
![](https://cinilahari.in/wp-content/uploads/2022/12/IMG_20221208_114301-1024x505.jpg)
ಸುಮಾರು ಹತ್ತು ವರ್ಷದ ಹಿಂದೆ ಹರಿಪ್ರಸಾದ್ ನನ್ನ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಶುರು ಮಾಡಿದರು. ನಂತರ “ಪಂಚತಂತ್ರ” ಚಿತ್ರದ ನಿರ್ಮಾಪಕರಾದರು. ಈಗ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಹರಿ ತುಂಬಾ ಬುದ್ದಿವಂತ. ನಿರ್ದೇಶನದ ಬಗ್ಗೆ ವಿದೇಶದಲ್ಲಿ ಕಲಿತು ಬಂದಿರುವಾತ. ಹರಿ ಈ ಚಿತ್ರವನ್ನು ಎಲ್ಲರಿಗೂ ಹಿಡಿಸುವ ಹಾಗೆ ಮಾಡಿರುತ್ತಾರೆಂಬ ಭರವಸೆಯಿದೆ. ಈ ಚಿತ್ರ ಇನ್ನೂ ಬಿಡುಗಡೆಯೇ ಆಗಿಲ್ಲ ಆಗಲೇ ನಾಯಕ ಪೃಥ್ವಿ ಶಾಮನೂರು, ನನ್ನ ನಿರ್ದೇಶನದ “ಗರಡಿ” ಚಿತ್ರದಲ್ಲೂ ಅಭಿನಯಿಸಿದ್ದಾನೆ. ಚಿತ್ರದಲ್ಲಿ ನಟಿಸಿರುವ ಅಂಜಲಿ, ಯಶಾ ಶಿವಕುಮಾರ್ ಎಲ್ಲರ ಅಭಿನಯ ಚೆನ್ನಾಗಿದೆ. ಎಲ್ಲರಿಗೂ ಶುಭವಾಗಲಿ ಎಂದರು ಚಿತ್ರದ ನಿರ್ಮಾಪಕರಲೊಬ್ಬರಾದ ಯೋಗರಾಜ್ ಭಟ್.
![](https://cinilahari.in/wp-content/uploads/2022/12/IMG_20221208_114312-1024x554.jpg)
ಇದು ಮೊಬೈಲ್ ಬರುವುದಕ್ಕೂ ಪೂರ್ವದಲ್ಲಿ ಅಂದರೆ 96-97 ನೇ ಇಸವಿಯಲ್ಲಿ ನಡೆಯುವ ಕಥೆ. ಆಗ ಮೈದಾನಗಳು ಜಾಸ್ತಿ. ಆಟಗಾರರು ಕಡಿಮೆ. ಈಗ ಆಟಗಾರರು ಜಾಸ್ತಿ . ಮೈದಾನಗಳು ಕಡಿಮೆ. ಆ ಕಾಲಘಟ್ಟದಲ್ಲಿ ನಾನು ಕಂಡ ಕೆಲವು ಘಟನೆಗಳನ್ನಾಧರಿಸಿ “ಪದವಿಪೂರ್ವ” ಚಿತ್ರ ಮಾಡಿದ್ದೇನೆ. ಡಿಸೆಂಬರ್ 30ರಂದು ತೆರೆಗೆ ಬರುತ್ತಿದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಜಗ್ಗೇಶ್ ಸರ್ ಗೆ, ನಿರ್ಮಾಪಕರಾದ ಯೋಗರಾಜ್ ಭಟ್, ರವಿ ಶಾಮನೂರು ಅವರಿಗೆ ಹಾಗೂ ನನ್ನ ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ಹರಿಪ್ರಸಾದ್ ಜಯಣ್ಣ.
![](https://cinilahari.in/wp-content/uploads/2022/12/IMG_20221208_114323-1024x496.jpg)
ನಿರ್ಮಾಪಕ ರವಿ ಶಾಮನೂರು, ನಾಯಕ ಪೃಥ್ವಿ ಶಾಮನೂರು, ನಾಯಕಿ ಅಂಜಲಿ ಅನೀಶ್, ಮುಖ್ಯ ಪಾತ್ರಧಾರಿ ಯಶಾ ಶಿವಕುಮಾರ್, ನಟ ನಟರಾಜ್, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಮುಂತಾದವರು “ಪದವಿಪೂರ್ವ” ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.