“ನನ್ನವನು”, ” ಕೋಟೆ”, “ದಂಡುಪಾಳ್ಯ” , “ಶಿವ” ಮುಂತಾದ ಚಿತ್ರಗಳ ನಿರ್ದೇಶಕ ಶ್ರೀನಿವಾಸರಾಜು ನಿರ್ದೇಶನದ “ಹುಬ್ಬಳ್ಳಿ ಡಾಬಾ” ಚಿತ್ರ ಇದೇ ನವೆಂಬರ್ 11 ರಂದು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.
ಕೊರೋನ ಎರಡನೇ ಅಲೆ ಸಮಯದಲ್ಲಿ ಆರಂಭವಾದ ಸಿನಿಮಾವಿದು. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ತಯಾರಾಗಿ, ನವೆಂಬರ್ 11 ರಂದು ಬಿಡುಗಡೆಯಾಗುತ್ತಿದೆ. ತೆಲುಗಿನ ನವೀನ್ ಚಂದ್ರ ಈ ಚಿತ್ರದ ನಾಯಕ. ದಿವ್ಯ ಪಿಳ್ಳೈ, ಅನನ್ಯ ಸೇನ್ ಗುಪ್ತ ನಾಯಕಿಯರು. ರವಿಶಂಕರ್, ರಾಜಾ ರವೀಂದ್ರ, ನಾಗಾ ಬಾಬು, ಅಯ್ಯಪ್ಪ ಶರ್ಮ, ಪೂಜಾ ಗಾಂಧಿ, ರವಿಕಾಳೆ, ಮಕರಂದ ದೇಶಪಾಂಡೆ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
![](https://cinilahari.in/wp-content/uploads/2022/11/IMG_20221107_110859-726x1024.jpg)
ಚಿತ್ರದ ವಿಶೇಷ ಸಂದರ್ಭದಲ್ಲಿ “ದಂಡುಪಾಳ್ಯ” ಗ್ಯಾಂಗ್ ನವರ ಸನ್ನಿವೇಶಗಳು ಸಹ ಬರುತ್ತದೆ. ಹಾಗಾಗಿ ಆ ಚಿತ್ರದಲ್ಲಿ ಅಭಿನಯಿಸಿದ್ದ ಕಲಾವಿದರು ಈ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಮೂರು ಹಾಡುಗಳನ್ನು ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಚರಣ್ ಅರ್ಜುನ್ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಈ ಚಿತ್ರದ ಛಾಯಾಗ್ರಹಕರು. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಚಿತ್ರದ ಬಗ್ಗೆ ವಿವರಣೆ ನೀಡಿದ್ದ ನಿರ್ದೇಶಕ ಶ್ರೀನಿವಾಸರಾಜು, ಚಿತ್ರಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು.
![](https://cinilahari.in/wp-content/uploads/2022/11/IMG_20221107_110845-557x1024.jpg)
ನನಗೆ ಶ್ರೀನಿವಾಸರಾಜು “ಕೋಟೆ” ಚಿತ್ರದಲ್ಲಿ ಅವಕಾಶ ನೀಡಿದ್ದರು. “ದಂಡುಪಾಳ್ಯ” ಚಿತ್ರದಲ್ಲೂ ನಟಿಸಿದ್ದೆ. ಈ ಚಿತ್ರದಲ್ಲಿ ನಾನು ಚಲಪತಿ ಹೆಸರಿನ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ಈ ಚಿತ್ರದ ಕುರಿತು ಇನ್ನೊಂದು ಹೆಮ್ಮೆಯ ವಿಷಯವೆಂದರೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಎಂಭತ್ತರ ದಶಕದಲ್ಲಿ ಸಂಗೀತ ನೀಡಿದ್ದ, ಜನಪ್ರಿಯ ತಮಿಳು ಚಿತ್ರದ ಗೀತೆಯೊಂದರ ಟ್ಯೂನ್ ಬಳಸಿಕೊಳ್ಳಲು ಶ್ರೀನಿವಾಸರಾಜು ಅವರಿಗೆ ಅವಕಾಶ ನೀಡಿದ್ದಾರೆ.
![](https://cinilahari.in/wp-content/uploads/2022/11/IMG_20221107_110827.jpg)
ಈ ಹಾಡು ಇಳಯರಾಜ ಅವರ ಅಭಿಮಾನಿಯಾಗಿರುವ ನನ್ನ ಜನಪ್ರಿಯ ಗೀತೆಯೂ ಹೌದು ಎಂದು ನಟ ರವಿಶಂಕರ್ ತಿಳಿಸಿದರು. ಕ್ಲೈಮ್ಯಾಕ್ಸ್ ಸಾಹಸ ಸನ್ನಿವೇಶವನ್ನು ಹನ್ನೆರಡು ದಿನಗಳ ಕಾಲ ಚಿತ್ರಿಸಿರುವುದು ಚಿತ್ರದ ವಿಶೇಷಗಳಲ್ಲೊಂದು ಎಂದರು ರವಿಶಂಕರ್.