ವಿಜಯ್ ಕಿರಗಂದೂರು ಅರ್ಪಿಸುತ್ತಿರುವ, ಕೆ.ಆರ್.ಜಿ ಸಂಸ್ಥೆ ನಿರ್ಮಿಸುತ್ತಿರುವ ಹಾಗೂ ರೋಹಿತ್ ಪದಕಿ ರಚಿಸಿ, ನಿರ್ದೇಶಿಸುತ್ತಿರುವ ‘ಉತ್ತರಕಾಂಡ’ ಚಿತ್ರದ ಮುಹೂರ್ತ ನವೆಂಬರ್ 6ರಂದು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿದೆ. ‘ರತ್ನನ್ ಪ್ರಪಂಚ’ ಯಶಸ್ಸಿನ ನಂತರ ಮತ್ತೊಮ್ಮೆ ರೋಹಿತ್ ಪದಕಿ ಹಾಗೂ ಕಾರ್ತಿಕ್ ಮತ್ತು ಯೋಗಿ.ಜಿ.ರಾಜ್ ಒಂದಾಗಿದ್ದಾರೆ. ಈ ಸಿನಿಮಾಗೆ ಡಾಲಿ ಧನಂಜಯ ಹಾಗು ರಮ್ಯಾ ನಾಯಕ, ನಾಯಕಿ.
![](https://cinilahari.in/wp-content/uploads/2022/11/IMG_20221106_192508-1024x941.jpg)
ಸ್ಯಾಂಡಲ್ವುಡ್ ಕ್ವೀನ್ ರಮ್ಯ ‘ಉತ್ತರಕಾಂಡ’ ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿಪರದೆಗೆ ಹಿಂತಿರುಗುತ್ತಿದ್ದಾರೆ. ಎಂಟು ವರ್ಷಗಳ ಬಳಿಕ ತಮಗೆ ಅತ್ಯಂತ ಆಪ್ತವಾದ ಕಥೆ ಹಾಗು ಪಾತ್ರ ‘ಉತ್ತರಕಾಂಡ’ ಕೊಟ್ಟಿರುವ ಕಾರಣ ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡು ಭಾಷೆ, ಉಡುಗೆ-ತೊಡುಗೆ ಎಲ್ಲದರ ಮೇಲೆ ಗಂಭೀರವಾಗಿ ಕಸರತ್ತು ನಡೆಸುತ್ತಿದ್ದಾರೆ ನಟಿ ರಮ್ಯ.
ಉತ್ತರಕಾಂಡದ ಬಗ್ಗೆ ಪ್ರಶ್ನಿಸಿದಾಗ ರಮ್ಯ ಹೇಳಿದ್ದು ಹೀಗೆ – “ ‘ರತ್ನನ್ ಪ್ರಪಂಚ’ ಚಿತ್ರಕ್ಕೆ ನಾಯಕಿಯ ಪಾತ್ರವನ್ನು ನನಗೆ ಕೇಳಿದಾಗ ಕಾರಣಾಂತರಗಳಿಂದ ಅದನ್ನು ಒಪ್ಪಿಕೊಳ್ಳಲಾಗಿರಲಿಲ್ಲ. ನನಗೆ ಅತ್ಯಂತ ಆಪ್ತವಾದ ಸಿನೆಮಾ ರತ್ನನ್ ಪ್ರಪಂಚ. ಅಂತಹ ಒಳ್ಳೆಯ ಸಿನೆಮಾ ತಂಡದ ಜೊತೆ ಕೈ ಜೋಡಿಸಿ ಬೆಳ್ಳಿಪರದೆಗೆ ಹಿಂತಿರುಗುತ್ತಿರುವುದು ಸಂತೋಷ ತಂದಿದೆ. ಇತ್ತೀಚಿನ ದಿನಗಳಲ್ಲಿ ಈ ತಂಡದ ಜೊತೆಗಿನ ಒಡನಾಟ ಮತ್ತು ತಂಡದವರೆಲ್ಲರು ನನ್ನ ಮೇಲೆ ತೋರುತ್ತಿರುವ ಅಭಿಮಾನ ಹಾಗು ಬಾಂಧವ್ಯ ಒಂದು ಒಳ್ಳೇ ಜಾಗದಲ್ಲಿದ್ದೀನಿ ಅನ್ನೋ ಭಾವನೆ ಕೊಟ್ಟಿದೆ. ಇಂತಹ ದೈತ್ಯ ಪ್ರತಿಭೆಗಳ ಜೊತೆ ಶೂಟಿಂಗ್ ಶುರು ಮಾಡೋದಕ್ಕೆ ಕಾಯ್ತ ಇದ್ದೀನಿ”
![](https://cinilahari.in/wp-content/uploads/2022/11/IMG_20221106_192408-1024x648.jpg)
ಈ ಹಿಂದೆಯೇ ಚಿತ್ರತಂಡ ಹಂಚಿಕೊಂಡಂತೆ ‘ಉತ್ತರಕಾಂಡ’ದಲ್ಲಿ ಧನಂಜಯ ಮುಖ್ಯಭೂಮಿಕೆಯಲ್ಲಿದ್ದಾರೆ. ವೈವಿಧ್ಯಮಯ ಪಾತ್ರಗಳಲ್ಲಿ ನಾಯಕನಟನಾಗಿ ಮಿಂಚುತ್ತಿರುವ ಧನಂಜಯ ಅವರ ವೃತ್ತಿಯಲ್ಲೇ ಅತಿ ದೊಡ್ಡ ಸಿನೆಮಾ ‘ಉತ್ತರಕಾಂಡ’, ಅತ್ಯಂತ ಗಟ್ಟಿಯಾದ, ಕಷ್ಟವಾದ ಪಾತ್ರ ವಹಿಸಿಕೊಂಡಿರುವುದರ ಬಗ್ಗೆ ಅವರೇ ಹಂಚಿಕೊಂಡಿದ್ದಾರೆ. ಪೋಸ್ಟರ್ನಲ್ಲಿ ಈಗಾಗಲೇ ಧನಂಜಯ ಅವರ ಸುಕ್ಕಾ ಲುಕ್ ವೈರಲ್ ಆಗಿದೆ.
“ಒಂದೇ ದಿಕ್ಕಿನಲ್ಲಿ ಆಲೋಚಿಸುವವರು ಒಟ್ಟಿಗೆ ಸೇರಿ, ನಿಸ್ವಾರ್ಥವಾಗಿ ಸಿನಿಮಾಕ್ಕಾಗಿ, ಒಬ್ಬರು ಇನ್ನೊಬ್ಬರಿಗಾಗಿ contribute ಮಾಡಿದಾಗ ಅದ್ಭುತಗಳು ಸಂಭವಿಸುತ್ತವೆ ಎಂದು ನಾನು ನಂಬಿದ್ದೇನೆ. ಅದೆ ರೀತಿ ಆಗಿದ್ದು, ಮೈಲಿಗಲ್ಲಾಗಿದ್ದು “ರತ್ನನ್ ಪ್ರಪಂಚ” . ರೋಹಿತ್ ಪದಕಿಯಂತ ನಿರ್ದೇಶಕ ಘಟನ ಜೊತೆ ಎರಡನೆ ಪ್ರಯತ್ನ, ಕಾರ್ತಿಕ್ ಹಾಗು ಯೋಗಿ ಯಂತ ನಿರ್ಮಾಪಕ ಘಟರ ಜೊತೆ ಸತತವಾಗಿ ಮೂರನೆ ಪ್ರಯತ್ನ, ಇನ್ನೊಂದು ಮೈಲಿಗಲ್ಲಿನ ಕಡೆ ಮತ್ತೊಂದು ದಿಟ್ಟ ಹೆಜ್ಜೆ “ಉತ್ತರಕಾಂಡ”.
![](https://cinilahari.in/wp-content/uploads/2022/11/IMG_20221106_192441-568x1024.jpg)
ಹಾಗೆ ರಮ್ಯ ಅವರ ಜೊತೆ ನಟಿಸುವ ಕನಸು ಈ ಸಿನಿಮಾದ ಮೂಲಕ ಕೈಗೂಡುತ್ತಿದೆ. ಇದು ಮತ್ತೊಂದು ಖುಷಿಯ ವಿಚಾರ. ನನ್ನ ಪರವಾಗಿ ನಿಂತು ಯುದ್ಧ ಮಾಡುವ ಮಾಧ್ಯಮ ಮಿತ್ರರು, ನನ್ನ ಮೇಲೆ ನಂಬಿಕೆಯಿಟ್ಟು ನನ್ನ ಶಕ್ತಿಯಾಗಿ ನಿಂತಿರುವ ಕನ್ನಡ ಕುಲಕೋಟಿಗೆ ನನ್ನ ಹೃದಯಪೂರ್ವಕ ನಮನಗಳು. ಹೀಗೆ ಜೊತೆಗಿರಿ, ತಪ್ಪಾದಾಗ ತಿದ್ದಿ, ಗೆಲುವಾಗುವಂತೆ ಹರಸಿ, ಮೆರೆಸಿ.” ಎಂದು ಧನಂಜಯ ಹೇಳಿದ್ದಾರೆ.
‘ಈ ಸಿನೆಮಾ ಮನುಷ್ಯನ ವಿಲಕ್ಷಣ ಮನಸ್ಸಿನ ಹೋರಾಟವನ್ನ ಬಿಂಬಿಸುತ್ತದೆ. ಸರಿ ತಪ್ಪುಗಳ ಸಿದ್ದಾಂತ, ಅಹಂಕಾರಗಳ ಗುದ್ದಾಟ. ಈ ಸಿನೆಮಾ ಒಂದು ಸೆಲೆಬ್ರೇಶನ್. ಉತ್ತರಕರ್ನಾಟಕದ ಅಧ್ಬುತ ಬದುಕಿನ ನಡುವೆ ನಡೆಯುವ ಕಥೆ ಹೇಳುತ್ತಿರುವುದು ನನಗೆ ದೊಡ್ಡ ಸವಾಲು ಮತ್ತು ಜವಾಬ್ದಾರಿ’ ಎಂದು ನಿರ್ದೇಶಕ ರೋಹಿತ್ ಪದಕಿ ಹೇಳಿದ್ದಾರೆ. ಚಿತ್ರ ಸಂಪೂರ್ಣ ಉತ್ತರಕರ್ನಾಟಕದ ಸೊಗಡಲ್ಲಿ, ಭಾಷೆಯಲ್ಲಿ ಇರುತ್ತದೆ. ಹಾಗೂ ಅಲ್ಲಿಯೇ ಚಿತ್ರೀಕರಣವಾಗಲಿದೆ ಎಂದು ಕೂಡ ಹಂಚಿಕೊಂಡಿದ್ದಾರೆ.
‘ಇನ್ ಮ್ಯಾಲಿಂದ ಫುಲ್ ಗುದ್ದಾಂಗುದ್ದಿ’ ಎಂದು ಅಡಿ-ಶೀರ್ಷಿಕೆ ಹೊಂದಿರುವ ‘ಉತ್ತರಕಾಂಡ’ ದೊಡ್ಡ ಮಟ್ಟದ ಮಾಸ್ ಮನರಂಜನೆ ನೀಡುವ ಸಿನೆಮಾ ಆಗಲಿದೆ ಎಂದು ನಿರ್ಮಾಪಕರು ನುಡಿದಿದ್ದಾರೆ. ಮುಂದಿನ ವರ್ಷದಲ್ಲಿ ಸೆಟ್ಟೇರುತ್ತಿರುವ ಚಿತ್ರಗಳಲ್ಲಿ ಅತಿ ದೊಡ್ಡ ತಾರಾಗಣ, ಹಾಗೂ ಬಜೆಟ್ ಹೊಂದಿರುವ ಚಿತ್ರ ಇದು ಎಂದು ಹೇಳಲಾಗುತ್ತಿದೆ.
![](https://cinilahari.in/wp-content/uploads/2022/11/IMG_20221106_192420-1024x521.jpg)
“ಕೆ.ಆರ್.ಜಿ ಸಂಸ್ಥೆ ಧನಂಜಯ ಅವರ ಜೊತೆ ಕೈಜೋಡಿಸಿರುವ ಮೂರನೇ ಚಿತ್ರ ಇದು. ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆಯಲ್ಲಿ ಇರುವ ನಟ ಧನಂಜಯ. ಸ್ಯಾಂಡಲ್ವುಡ್ ಕ್ವೀನ್ ರಮ್ಯ ಅವರ ಕಮ್ಬ್ಯಾಕ್ ಚಿತ್ರ ಇದು. ಇನ್ನು ರೋಹಿತ್ ಪದಕಿ ಮತ್ತು ಕೆಆರ್ಜಿ ಸ್ಟುಡಿಯೋಸ್ ಸಂಬಂಧ ಉನ್ನತ ಮಟ್ಟದಲ್ಲಿದೆ. ‘ರತ್ನನ್ ಪ್ರಪಂಚ’ ಒಂದು ಮೈಲಿಗಲ್ಲಾದರೆ, ‘ಉತ್ತರಕಾಂಡ’ ಎಂದೂ ಹೇಳಿರದ, ವಿಷಯ ಹೇಳಲಿದೆ ಎಂದು ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ತಮ್ಮ ಸಂತೋಷವನ್ನು ವ್ಯಕ್ತ ಪಡಿಸಿದರು.
ಜನವರಿಯಿಂದ ಚಿತ್ರೀಕರಣ ಶುರುವಾಗಲಿದೆ ಅರವಿಂದ ಕಶ್ಯಪ್ ಕ್ಯಾಮರಾ, ಚರಣ್ ರಾಜ್ ಸಂಗೀತ ಸಂಯೋಜನೆ ಇರುತ್ತದೆ. ದೀಪು ಎಸ್ ಕುಮಾರ್ ಸಂಕಲನ, ವಿಶ್ವಾಸ್ ಕಶ್ಯಪ್ ಕಲೆ ನಿರ್ವಹಿಸುತ್ತಿದ್ದಾರೆ.