ಚಾಂಪಿಯನ್ ಫುಲ್ ಖುಷ್: ಗೆಲುವಿನ ಸಂಭ್ರಮದಲ್ಲಿ ತಂಡ- ಬಾರದ ನಾಯಕಿ ಮೇಲೆ ಟೀಮ್ ಬೇಸರ…

ಉತ್ತರ ಕರ್ನಾಟಕದ ಯುವ ಪ್ರತಿಭೆ ಸಚಿನ್ ಧನಪಾಲ್ ನಾಯಕನಾಗಿ ಅಭಿನಯಸಿದ ಚಾಂಪಿಯನ್ ಚಿತ್ರಕ್ಕೆ ರಾಜ್ಯದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಪಾರ ಮೆಚ್ಚುಗೆ ಗಳಿಸಿದೆ. ಚಿತ್ರ ವೀಕ್ಷಿಸಿದ ಬಹುತೇಕರು ಆ್ಯಕ್ಷನ್ ಬ್ಲಾಕ್ ಹಾಗೂ ಹಾಡುಗಳ ಬಗ್ಗೆಯೇ ಹೆಚ್ಚು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಗೆಲುವಿನ ಸಂತಸವನ್ನು ನಿರ್ಮಾಪಕ ಶಿವಾನಂದ್ ಎಸ್.ನೀಲಣ್ಣನವರ್ ಹಾಗೂ ನಾಯಕ ಸಚಿನ್ ಧನಪಾಲ್ ಮಾದ್ಯಮ ಜೊತೆ ಹಂಚಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿನ್, ಪ್ರತಿಯೊಬ್ಬರೂ ಚಿತ್ರದ ಮೇಕಿಂಗ್ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ, ನಮ್ಮ ನಿರೀಕ್ಷೆಯಂತೆಯೇ ಚಿತ್ರ ಜನರನ್ನು ತಲುಪಿದೆ. ಆಕ್ಷನ್ ಸೀಕ್ವೇನ್ಸ್ ಬಗ್ಗೆ ಸಾಕಷ್ಟು ಜನ ಮಾತಾಡುತ್ತಿದ್ದಾರೆ. ಗುಡ್ ಮೇಕಿಂಗ್ ಚಿತ್ರ, ಹೊಸಬರ ಸಿನಿಮಾ ಅಂತ ಎಲ್ಲೂ ಅನಿಸಲ್ಲ ಎನ್ನುವ ಪ್ರತಿಕ್ರಿಯೆ ಬರುತ್ತಿದೆ. ಉತ್ತರ ಕರ್ನಾಟಕದಾದ್ಯಂತ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಬೆಳಗಾವಿ,
ಹುಬ್ಬಳ್ಳಿ, ಬೀದರ್, ಗುಲ್ಬರ್ಗ, ರಾಯಚೂರಿನಲ್ಲಿ ಎಲ್ಲಾ ಶೋ ಭರ್ತಿಯಾಗಿದೆ. ಜನರ ಈ ಪ್ರತಿಕ್ರಿಯೆ ಕಂಡು ನಾವು ಈವರೆಗೆ ಪಟ್ಟಂಥ ಶ್ರಮ ಸಾರ್ಥಕ ಎನಿಸಿದೆ, ಇದಕ್ಕೆಲ್ಲ ನಿರ್ಮಾಪಕರ ಸಹಕಾರ, ಬೆಂಬಲವೇ ಕಾರಣ ಎಂದರು.

ಸೀನ್ ಹಾಗೂ ಹಾಡುಗಳಲ್ಲಿ ತಮ್ಮ ಲುಕ್‌ನ ವ್ಯತ್ಯಾಸದ ಕುರಿತು ವಿವರಿಸಿದ ಸಚಿನ್, 2019ರಲ್ಲೇ ಚಿತ್ರದ ಟಾಕೀ ಪೋರ್ಷನ್ ಮುಗಿಯಿತು. 2 ವರ್ಷದ ನಂತರ ಹಾಡುಗಳನ್ನು ಚಿತ್ರೀಕರಿಸಿದೆವು. ಹಾಗಾಗಿ ಸ್ವಲ್ಪ ಚೇಂಜ್ ಆಗಿದೆ. ಮೊದಲು 96 ಕೆಜಿ ಇದ್ದ ನಾನು ಸ್ಪೋರ್ಟ್ ಯುವಕನ ಪಾತ್ರಕ್ಕಾಗಿ 72 ಕೆಜಿವರೆಗೆ ತೂಕ ಇಳಿಸಿಕೊಂಡಿದ್ದೆ. ಸಾಂಗ್‌ನಲ್ಲಿ ಗ್ಲಾಮರ್ ಇರಬೇಕು ಅಂತ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಆರ್ಮಿ ಸಬ್ಜೆಕ್ಟ್ ಮಾಡಬೇಕೆನ್ನುವುದು ನನ್ನಾಸೆ. ಸಂದೀಪ್ ಉನ್ನಿಕೃಷ್ಣನ್ ಅವರ ಬಯಾಗ್ರಫಿ ಮಾಡುವ ಆಸೆಯೂ ಇದೆ ಎನ್ನುವ ಸಚಿನ್ ಇದಕ್ಕೆಲ್ಲ ಕನ್ನಡ ಜನತೆಯ ಆಶೀರ್ವಾದ ಬೇಕು ಎಂದು ಕೇಳಿಕೊಂಡಿದ್ದಾರೆ. ಚಿತ್ರದ ಪ್ರೊಮೋಷನ್‌ಗೆ ನಾಯಕಿ ಅದಿತಿ ಅವರು ಗೈರಾದ ಬಗ್ಗೆ ಮಾತನಾಡುತ್ತ ಅವರಿಗೆ ನಾವು ಎಲ್ಲಾ ಪ್ರೆಸ್‌ಮೀಟ್ ಬಗ್ಗೆ ಹೇಳುತ್ತಲೇ ಬಂದಿದ್ದೇವೆ, ಆದರೂ ಅವರು ಯಾವುದಕ್ಕೂ ಬರುತ್ತಿಲ್ಲ ಎಂದರು.

ನಿರ್ಮಾಪಕ ಶಿವಾನಂದ್ ಅವರು ಕೂಡ ಉತ್ತರ ಕರ್ನಾಟಕದವರು ಅಂತ ನಮ್ಮ ಚಿತ್ರಕ್ಕೆ ನಾಯಕಿಯಾಗಿ ಸೆಲೆಕ್ಟ್ ಮಾಡಿಕೊಂಡೆವು.
ಅವರು ಪ್ರಚಾರಕ್ಕೆ ಏಕೆ ಬರುತ್ತಿಲ್ಲವೋ ಗೊತ್ತಿಲ್ಲ, ಸಾಂಗ್, ಟೀಸರ್ ಬಿಡುಗಡೆ ಮಾಡುವಾಗಲೂ ನಾವು ಕರೆದಿದ್ದೆವು. ಆದರೆ ಅವರು ಬರಲಿಲ್ಲ, ಥ್ಯಾಂಕ್ಸ್ ಗಿವಿಂಗ್ ಸಮಯದಲ್ಲಾದರೂ ಅವರು ಇಲ್ಲಿರಬೇಕಿತ್ತು. ಅವರಿಗೆ ಕೊಡಬೇಕಾದ ಸಂಭಾವನೆ ಪೂರ್ತಿ ಕೊಟ್ಟಿದ್ದೇವೆ, ಯಾವುದೆ ಬಾಕಿ ಉಳಿಸಿಕೊಂಡಿಲ್ಲ ಎಂದು ಬೇಸರದಿಂದಲೇ ಹೇಳಿಕೊಂಡರು.

ನಂತರ ಚಿತ್ರದ ಯಶಸ್ಸಿನ ಕುರಿತು ಮಾತನಾಡುತ್ತ ಕಾಂತಾರ ಹಿಸ್ಟರಿ ಕ್ರಿಯೇಟ್ ಮಾಡುತ್ತಿದೆ. ಅಂಥಾ ಸಮಯದಲ್ಲಿ ನಾವು ಬಂದಿದ್ದರೂ ಜನ ನಮ್ಮ ಚಿತ್ರವನ್ನೂ ಇಷ್ಟಪಟ್ಟು ನೋಡುತ್ತಿದ್ದಾರೆ. ಗಂಗಾವತಿ, ಬೆಳಗಾವಿ, ಗೋಕಾಕ್, ನಿಪ್ಪಾಣಿಯಂಥ ಗಡಿ ಪ್ರದೇಶಗಳಲ್ಲಿ ಎರಡು ದಿನವೂ ಹೌಸ್ಫುಲ್ ಪ್ರದರ್ಶನ ಆಗಿದೆ. ಮೌತ್ ಪಬ್ಲಿಸಿಟಿಯಿಂದ ಹೆಚ್ಚು ಹೆಚ್ಚು ಜನ ಥಿಯೇಟರಿಗೆ ಬರುತ್ತಿದ್ದಾರೆ. ತುಂಬಾ ಕಷ್ಟಬಿದ್ದು ಈ ಚಿತ್ರವನ್ನು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನಾನು
ಕರ್ನಾಟಕದ ಮನೆಮನೆಗೂ ಹೋಗಿ ನಮ್ಮ ಚಿತ್ರವನ್ನು ನೋಡಿ ಎಂದು ಕೇಳಿಕೊಳ್ಳುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಛಾಯಾಗ್ರಾಹಕ ಸರವಣನ್ ನಟರಾಜನ್, ಜಯರಾಮ್. ಮತ್ತಿತರರು ಹಾಜರಿದ್ದರು,

Related Posts

error: Content is protected !!