ಆಸ್ಕರ್ ಜ್ಯೂರಿಯಾಗಿ ಕನ್ನಡ ನಿರ್ದೇಶಕ: ಪವನ್ ಒಡೆಯರ್ ಗೆ ಸಿಕ್ಕ ಅನನ್ಯ ಅವಕಾಶ…

ಪ್ರತಿಷ್ಠಿತ ಆಸ್ಕರ್ ಅವಾರ್ಡ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಬಾರಿ ಆಸ್ಕರ್ ಪ್ರಶಸ್ತಿ ಯಾರ ಯಾರ ಪಾಲಾಗುತ್ತೆ ಎಂಬ ಲೆಕ್ಕಾಚಾರಗಳು ಜೋರಾಗಿದೆ. ಭಾರತದಿಂದ ಬೇರೆ ಬೇರೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ಹಲವಾರು ಸಿನಿಮಾಗಳು ನಾಮ ನಿರ್ದೇಶನವಾಗಿ ಗಮನ ಸೆಳೆಯುತ್ತಿವೆ.

ಸದ್ಯ ಲೇಟೆಸ್ಟ್ ಸಮಾಚಾರವೇನಪ್ಪ ಅಂದರೆ, ಆಸ್ಕರ್ ಅವಾರ್ಡ್ ಜ್ಯೂರಿ ಸದಸ್ಯರಾಗಿ ಕನ್ನಡದ ನಿರ್ದೇಶಕರು ಪಾಲ್ಗೊಂಡಿರೋದು. ಹೌದು, ಕನ್ನಡದ ಪ್ರತಿಭಾವಂತ ನಿರ್ದೇಶಕ ಹಾಗೂ ನಿರ್ಮಾಪಕ ಪವನ್ ಒಡೆಯರ್ ಆಸ್ಕರ್ ಅವಾರ್ಡ್ ಸೆಲೆಕ್ಷನ್ ಕಮಿಟಿಯ ಸದಸ್ಯರಾಗಿ ಭಾಗಿಯಾಗಿದ್ದಾರೆ. ಈ ಖುಷಿಯ ಕ್ಷಣವನ್ನು ಪವನ್ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪವನ್ ಒಡೆಯರ್, ಆಸ್ಕರ್ ಕಮಿಟಿಯಿಂದ ನನಗೆ ಕರೆ ಬರುತ್ತದೆಂದು ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ. ಆರಂಭದಲ್ಲಿ ನನಗೆ ನಂಬಲೂ ಸಾಧ್ಯವಾಗಲಿಲ್ಲ. ನನ್ನ ಸಿನಿಮಾ ಕೆಲಸಗಳನ್ನು ಗುರುತಿಸಿ ಜ್ಯೂರಿಯಾಗಿ ಭಾಗವಹಿಸಲು ಆಹ್ವಾನ ನೀಡಿದ್ದು ಬಹಳ ಸಾರ್ಥಕತೆ ನೀಡಿದೆ. ನನ್ನ ನಿರ್ಮಾಣದ ‘ಡೊಳ್ಳು’ ಸಿನಿಮಾ ಇಂತಹದ್ದೊಂದು ಪ್ರತಿಷ್ಠಿತ ವೇದಿಕೆಯನ್ನು ನನಗೆ ಕಲ್ಪಿಸಿಕೊಟ್ಟಿದೆ. ಇದು ಬಹಳ ದೊಡ್ಡ ಗೌರವ ಎಂದೇ ನಾನು ಭಾವಿಸುತ್ತೇನೆ. 17 ಜನರ ತಂಡದಲ್ಲಿ ಕನ್ನಡ ಚಿತ್ರರಂಗದಿಂದ ನಾನೂ ಒಬ್ಬ ಜ್ಯೂರಿಯಾಗಿ ಭಾಗವಹಿಸಿದ್ದು ಬಹಳ ಸಂತಸ ತಂದಿದೆ ಎಂದು ಪವನ್ ಒಡೆಯರ್ ಹರುಷ ವ್ಯಕ್ತಪಡಿಸಿದ್ದಾರೆ.

ಹಿಂದಿ, ಬೆಂಗಾಲಿ, ತೆಲುಗು, ತಮಿಳು, ಗುಜರಾತಿ, ಮಲಯಾಳಂ ಭಾಷೆಗಳಿಂದ ಸಿನಿಮಾಗಳು ಆಸ್ಕರ್ ಗೆ ಆಯ್ಕೆಯಾಗಿದ್ವು. ನಮ್ಮ ಭಾಷೆಯಿಂದ ಯಾವ ಸಿನಿಮಾಗಳು ಆಸ್ಕರ್ ಗೆ ಆಯ್ಕೆ ಆಗಿಲ್ಲದಿರುವುದು ಬೇಸರದ ಸಂಗತಿ. ಮುಂದಿನ ದಿನಗಳಲ್ಲಿ ಖಂಡಿತ ನಮ್ಮ ಸಿನಿಮಾಗಳು ಆಸ್ಕರ್ ಗೆ ನಾಮ ನಿರ್ದೇಶನವಾಗಲಿವೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ ಪವನ್ ಒಡೆಯರ್.

ಪವನ್ ಒಡೆಯರ್ ನಿರ್ಮಾಣದಲ್ಲಿ ಮೂಡಿ ಬಂದಿರುವ ‘ಡೊಳ್ಳು’ ಸಿನಿಮಾ ಜನ ಮೆಚ್ಚುಗೆ ಗಳಿಸಿಕೊಂಡಿದ್ದು, ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ. ಸದ್ಯ ಪವನ್ ಒಡೆಯರ್ ನಿರ್ದೇಶನದ ‘ರೆಮೋ’ ಸಿನಿಮಾ ಬಿಡುಗಡೆಯಾಗಬೇಕಿದೆ.

Related Posts

error: Content is protected !!