ಕಿರಣ್ ರಾಜ್ ಈಗ ಶೇರ್! ಕಂಠೀರವ ಸ್ಟುಡಿಯೋದಲ್ಲಿ ಪ್ರಸಿದ್ಧ ಸಿನಿಮಾಗೆ ಚಾಲನೆ

“ಕನ್ನಡತಿ” ಧಾರಾವಾಹಿ ಮೂಲಕ ಜನಪ್ರಿಯರಾಗಿರುವ ಕಿರಣ್ ರಾಜ್, “ಬಡ್ಡೀಸ್” ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆ ಪ್ರವೇಶಿಸಿದರು. ಇವರ ನಟನೆಯ “ಭರ್ಜರಿ ಗಂಡು” ಚಿತ್ರ ಸಹ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಕಿರಣ್ ರಾಜ್ ನಾಯಕರಾಗಿ ನಟಿಸಿ, ಪ್ರಸಿದ್ಧ್ ನಿರ್ದೇಶಿಸುತ್ತಿರುವ “ಶೇರ್” ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ನಿರ್ಮಾಪಕ ಡಾ. ಸುದರ್ಶನ್ ಸುಂದರರಾಜ್ (ಬೀದರ್) ಚಿತ್ರದ ಮೊದಲ ಸನ್ನಿವೇಶಕ್ಕೆ ಕ್ಲಾಪ್ ಮಾಡಿದರು. ಗಣ್ಯರು ಮುಹೂರ್ತ ಸಮರಂಭಕ್ಕೆ ಆಗಮಿಸಿ ಶುಭ ಕೋರಿದರು.

“ಶೇರ್” ಪಕ್ಕಾ ಆಕ್ಷನ್ ಥ್ರಿಲ್ಲರ್ ಚಿತ್ರ. ಅನಾಥಾಶ್ರಮದಲ್ಲಿ ಹೆಚ್ಚಿನ ಕಥೆ ನಡೆಯುತ್ತದೆ. ಅಲ್ಲೊಬ್ಬ ರಾಜಕಾರಣಿ ಇರುತ್ತಾನೆ. ಎರಡು ಗುಂಪುಗಳೂ ಇರುತ್ತದೆ. ಒಂದು ಗುಂಪಿನವರು ಅನಾಥಾಶ್ರಮವನ್ನೇ ಅಡ್ಡ ಮಾಡಿಕೊಂಡಿರುತ್ತಾರೆ. ಅಲ್ಲಿ ಒಳ್ಳೆಯ ಗುಂಪು ಸಹ ಇರುತ್ತದೆ. ನಾಯಕ-ನಾಯಕಿ ಅನಾಥರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲೂ ನಮ್ಮ ಚಿತ್ರದ ಕಥೆ ಸಾಗುತ್ತದೆ.

“ಕಿರಣ್ ರಾಜ್ ಚಾಕೊಲೇಟ್ ಹೀರೋ ಅಂತ ಪ್ರಸಿದ್ದ್. ಅವರಿಗೆ ರಗಡ್ ಲುಕ್ ಸರಿ ಹೊಂದುವುದೆ?” ಅಂತ ಅನೇಕರು ಕೇಳಿದರು. ಆದರೆ ಮಾಸ್ ಪಾತ್ರಕ್ಕೆ ಬೇಕಾದ ಕಿಕ್ ಬಾಕ್ಸಿಂಗ್, ಮಾರ್ಷಲ್ ಆರ್ಟ್ಸ್ ಮುಂತಾದವುಗಳನ್ನು ಕಿರಣ್ ರಾಜ್ ಅಭ್ಯಾಸ ಮಾಡಿದ್ದಾರೆ. ನನ್ನ ಹಾಗೂ ಕಿರಣ್ ರಾಜ್ ಕಾಂಬಿನೇಶನ್ ನಲ್ಲಿ ಮೂಡಿಬಂದಿರುವ “ಭರ್ಜರಿ ಗಂಡು” ಚಿತ್ರ ಸಹ ಸೆಪ್ಟೆಂಬರ್ ನಲ್ಲಿ ತೆರೆ ಕಾಣಲಿದೆ. ಆ ಚಿತ್ರದಲ್ಲಿ ಭಾಗಿಯಾಗಿರುವ ಬಹುತೇಕ ತಂಡವೇ ಈ ಚಿತ್ರದಲ್ಲಿ ಮುಂದುವರೆಯಲಿದೆ. ಬೀದರ್ ಸುದರ್ಶನ್ ಸುಂದರರಾಜ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಆಗಸ್ಟ್ 22 ರಿಂದ‌ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಪ್ರಸಿದ್ಧ್ “ಶೇರ್” ಬಗ್ಗೆ ಮಾಹಿತಿ ನೀಡಿದರು.

ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ‌ ಚಿತ್ರದಲ್ಲಿ ನಟಿಸಲು ಖುಷಿಯಾಗಿದೆ. ಇದಕ್ಕಾಗಿ ಕಿಕ್ ಬಾಕ್ಸಿಂಗ್, ಮಾರ್ಷಲ್ ಆರ್ಟ್ಸ್ ಮುಂತಾದ ಕಲೆಗಳನ್ನು ಅಭ್ಯಾಸ ಮಾಡಿದ್ದೀನಿ. “ಭರ್ಜರಿ ಗಂಡು” ಚಿತ್ರದಲ್ಲೂ ಸಾಹಸ ಸನ್ನಿವೇಶಗಳು ಭರ್ಜರಿಯಾಗಿ ಮೂಡಿಬಂದಿದೆ ಎಂದು ನಾಯಕ ಕಿರಣ್ ರಾಜ್ ತಿಳಿಸಿದರು.

ನಾನು‌ ಮೂಲತಃ ಬೀದರ್ ನವನು. ಅಲ್ಲೇ ವಕೀಲನಾಗಿ ಕಾರ್ಯ ನಿರ್ವಿಸುತ್ತಿದ್ದೇನೆ. ರಾಜಕೀಯದಲ್ಲೂ ಇದ್ದೀನಿ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ ಎಂದರು ನಿರ್ಮಾಪಕ ಸುದರ್ಶನ್ ಸುಂದರರಾಜ್.

ಚಿತ್ರದ ನಾಯಕಿ ಸುರೇಖ ಹಾಗೂ ಪೊಲೀಸ್ ಅಧಿಕಾರಿಯಾಗಿಕಾಣಿಸಿಕೊಳ್ಳುತ್ತಿರುವ ತನೀಶಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಕಿಟ್ಟಿ ಕೌಶಿಕ್ ಛಾಯಾಗ್ರಹಣದ ಬಗ್ಗೆ ಹಾಗೂ ಗುಮ್ಮಿನೇನಿ‌ ವಿಜಯ್ ಸಂಗೀತದ ಬಗ್ಗೆ ಮಾಹಿತಿ ನೀಡಿದರು.

Related Posts

error: Content is protected !!