ಕ್ಯಾಮೆರಾಮೆನ್‌ ಸತ್ಯಹೆಗಡೆ ಈಗ ನಿರ್ಮಾಪಕ! ಸತ್ಯಹೆಗಡೆ ಸ್ಟುಡಿಯೋಸ್‌ ಮೂಲಕ ಎರಡು ಕಿರುಚಿತ್ರ ನಿರ್ಮಾಣ…

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವು ಛಾಯಾಗ್ರಾಹಕರು ನಿರ್ಮಾಪಕರಾಗಿರುವ ಉದಾಹರಣೆಗಳಿವೆ. ಆ ಸಾಲಿಗೆ ಈಗ ಸತ್ಯಹೆಗಡೆ ಕೂಡ ಸೇರಿದ್ದಾರೆ. ಹೌದು, ಇಷ್ಟು ವರ್ಷಗಳ ಕಾಲ ಯಶಸ್ವಿ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿರುವ ಸತ್ಯಹೆಗಡೆ ಈಗ ತಮ್ಮದೇ ಆದ ಸತ್ಯಹೆಗಡೆ ಸ್ಟುಡಿಯೋಸ್‌ ಕಟ್ಟಿಕೊಂಡು ಆ ಮೂಲಕ ಎರಡು ಕಿರುಚಿತ್ರ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ….

ಅಭಿಷೇಕ್ ಕಾಸರಗೋಡು ನಿರ್ದೇಶನದ “ಪಪ್ಪೆಟ್ಸ್” ಹಾಗೂ ಮಂಸೋರೆ ನಿರ್ದೇಶನದ “ದಿ ಕ್ರಿಟಿಕ್” ಎಂಬ ಎರಡು ಕಿರುಚಿತ್ರಗಳನ್ನು ಸತ್ಯ ಹೆಗಡೆ ನಿರ್ಮಿಸಿದ್ದಾರೆ. ಇತ್ತೀಚೆಗೆ ಕಿರುಚಿತ್ರಗಳ ಪ್ರದರ್ಶನ ಏರ್ಪಪಡಿಸಿ, ಒಂದಷ್ಟು ಅನಿಸಿಕೆ ಹಂಚಿಕೊಂಡರು ಸತ್ಯಹೆಗಡೆ. ಅಭಿಷೇಕ್ ಕಾಸರಗೋಡು ನಿರ್ದೇಶನದ “ಪಪ್ಪೆಟ್ಸ್” ಕಿರುಚಿತ್ರದಲ್ಲಿ ಗೌತಮಿ ಜಾಧವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಕುರಿತಂತೆ ಅಭಿಷೇಕ್‌ ಕಾಸರಗೋಡು ಹೇಳಿದ್ದಿಷ್ಟು. ” ನನಗೆ ಅವಕಾಶ ನೀಡಿದ ಸತ್ಯ ಹೆಗಡೆ ಅವರಿಗೆ ಧನ್ಯವಾದ. ನಾನು ಈ ಕಿರುಚಿತ್ರವನ್ನು ಪುನೀತ್ ರಾಜಕುಮಾರ್ ಅವರಿಗೆ ತೋರಿಸಿದ್ದೆ. ಚೆನ್ನಾಗಿದೆ ಎಂದು ಪೋಸ್ಟರ್ ಮೇಲೆ ಸಹಿ ಮಾಡಿ ಕೊಟ್ಟಿದ್ದಾರೆ. ಮಿಥುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಗೌತಮಿ ಜಾಧವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಅಭಿಷೇಕ್ ಕಾಸರಗೋಡು. ಈ ಕಿರುಚಿತ್ರದಲ್ಲಿ ನಟಿಸಿರುವ ಗೌತಮಿ ಮಾತನಾಡಿ, “ಈ ಕಥೆ ಬಗ್ಗೆ ಹೇಳೋದಾದರೆ, ನಟಿಯೊಬ್ಬಳು ಸೇಲ್ಸ್ ಗರ್ಲ್ ಒಬ್ಬಳಿಂದ ಪ್ರಭಾವಿತಳಾಗುವ ಪಾತ್ರ ನನ್ನದು. ಅಭಿಷೇಕ್ ಅವರು ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಉತ್ತಮ ವೇದಿಕೆ ಕಲ್ಪಿಸಿಕೊಟ್ಟ ಸತ್ಯ ಹೆಗಡೆ ಸರ್ ಅವರಿಗೆ ಧನ್ಯವಾದ ಎಂದರು ಗೌತಮಿ.

ಇನ್ನು ಮಂಸೋರೆ ನಿರ್ದೇಶನದಲ್ಲಿ ನಿರ್ದೇಶಕ ಮತ್ತು ನಟ ಟಿ.ಎಸ್ ನಾಗಾಭರಣ ಹಾಗೂ ವೈ.ಜಿ.ಉಮಾ ನಟಿಸಿರುವ “ದಿ ಕ್ರಿಟಿಕ್” ಕಿರುಚಿತ್ರದ ಪ್ರದರ್ಶನ ಕೂಡ ನಡೆಯಿತು. ಪ್ರದರ್ಶನ ಬಳಿಕ ನಿರ್ದೇಶಕ ಮಂಸೋರೆ ಮಾತನಾಡಿ, “ಕಳೆದ ಲಾಕ್ ಡೌನ್ ವೇಳೆ ಮಾಡಿದ ಕಿರುಚಿತ್ರವಿದು. ಸಂಚಾರಿ ವಿಜಯ್ ಸಾವಿನಿಂದ ಡಿಪ್ರೆಶನ್ ಗೆ ಹೋಗಿದ್ದ ನನಗೆ, ಸತ್ಯ ಹೆಗಡೆ ಕಿರುಚಿತ್ರ ಮಾಡಲು ಪ್ರೇರೇಪಿಸಿದರು. ಇದು ಬಶೀರ್ ಅವರ ಕಥೆ. ರೊನಾಡ ಬಕ್ಕೇಶ್ ಸಂಗೀತ ನೀಡಿದ್ದಾರೆ. ಗುರುಪ್ರಸಾದ್ ಛಾಯಾಗ್ರಹಣವಿದೆ. ವೀರೇಂದ್ರ ಮಲ್ಲಣ್ಣ ನಿರ್ಮಾಣ ನಿರ್ವಹಣೆ ಮಾಡಿದ್ದಾರೆ. ಶ್ರೀನಿವಾಸ್ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಕಿರುಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಅಂದರು ಮಂಸೋರೆ.

ದಿ ಕ್ರಿಟಿಕ್‌ ಕಿರುಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ ನಾಗಾಭರಣ ಮಾತನಾಡಿ, “ಕೊರೊನಾ ಈ ಕಾಲಘಟ್ಟದಲ್ಲಿ ಒಬ್ಬರನೊಬ್ಬರು ಭೇಟಿಯಾಗುವುದೇ ವಿರಳ. ಸಿನಿಮಾವನ್ನೇ ಉಸಿರೆಂದು ಜೀವಿಸುತ್ತಿರುವ ಎಷ್ಟೋ ಮನಸ್ಸುಗಳನ್ನು ಇಂದು ನೋಡುವ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ಮೊದಲು ಧನ್ಯವಾದ. ಪ್ರದರ್ಶನವಾದ ಎರಡು ಕಿರುಚಿತ್ರಗಳು ಚೆನ್ನಾಗಿವೆ. ಕಡಿಮೆ ಅವಧಿಯಲ್ಲಿ ದೊಡ್ಡ ವಿಷಯ ಹೇಳುವ ಪ್ರಯತ್ನ ಇಬ್ಬರೂ ಯುವ ನಿರ್ದೇಶಕರು ಮಾಡಿದ್ದಾರೆ. ಮಂಸೋರೆ ನನ್ನನ್ನು ಭೇಟಿಯಾಗಲು ಬಂದಾಗ ನಿಮ್ಮ ಆಫೀಸ್ ನಲ್ಲಿ ಚಿತ್ರೀಕರಣ ಎಂದರು‌. ಆ ನಂತರ ಮಂಡ್ಯದ ಬಳಿಯ ಅಂಕೇಗೌಡರ ಜ್ಞಾನ ಪ್ರತಿಷ್ಠಾನದಲ್ಲಿ ಎಂದಾಗ ಸಂತೋಷವಾಯಿತು. ಎರಡು ತಂಡಕ್ಕೂ ಒಳ್ಳೆಯದಾಗಲಿ ಎಂದರು ನಾಗಾಭರಣ.

ಉಮ ಅವರು ಸಹ ತಮ್ಮ ಅಭಿನಯದ ಅನುಭವ ಹಂಚಿಕೊಂಡರು. ಸ್ಮಾಲ್ ಇಸ್ ಬ್ಯೂಟಿ ಫುಲ್ ಎಂಬ ಮಾತಿದೆ. ಆ ದೃಷ್ಟಿಯಲ್ಲಿ ಈ ಎರಡು ಚಿತ್ರಗಳು ಸುಂದರವಾಗಿಯೂ ಇದೆ. ಅರ್ಥಪೂರ್ಣವಾಗಿಯೂ ಇದೆ. ಎರಡು ತಂಡಕ್ಕೂ ಶುಭವಾಗಲಿ ಎಂದು ನಾಗತಿಹಳ್ಳಿ ಚಂದ್ರಶೇಖರ್ ಹಾರೈಸಿದರು. ನಿರ್ದೇಶಕ ನಾಗಶೇಖರ್ ಹಾಗೂ ನಟ ಶ್ರೀನಗರ ಕಿಟ್ಟಿ ಶುಭ ಕೋರಿದರು.

ಪ್ರತಿಭಾವಂತ ಹೊಸ ತಂಡಕ್ಕೆ ನಮ್ಮ ಸತ್ಯ ಸ್ಟುಡಿಯೋಸ್ ಮೂಲಕ ವೇದಿಕೆ ಕಲ್ಪಿಸಿಕೊಡುತ್ತೇವೆ. ಆಸಕ್ತಿಯಿರುವವರು ನಮ್ಮನ್ನು ಸಂಪರ್ಕಿಸಬಹುದು. ಪ್ರತಿ ತಿಂಗಳ ಎರಡನೇ ಭಾನುವಾರ ಒಂದು ಕಿರುಚಿತ್ರ ಪ್ರದರ್ಶನ ‌ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ತಿಳಿಸಿದ ಸತ್ಯ ಹೆಗಡೆ, ಆಗಮಿಸಿದ ಗಣ್ಯರಿಗೆ ಹಾಗೂ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು.

Related Posts

error: Content is protected !!