10 ರುಪಾಯಿಗೆ ಸ್ವರ್ಗ ತೋರಿಸ್ತಾರಂತೆ ರಚಿತಾರಾಮ್!‌ ಇದು ಲಕಲಕ ಲ್ಯಾಂಬರ್ಗಿನಿ ಆಲ್ಬಂ ಸಾಂಗ್ ವಿಷಯ ಗುರು…

ಚಂದನ್‌ ಶೆಟ್ಟಿ ಹೊಸ ವರ್ಷಕ್ಕೆ ಹೊಸ ಸಾಂಗ್‌ ರಿಲೀಸ್‌ ಮಾಡೋದು ಎಲ್ಲರಿಗೂ ಗೊತ್ತೇ ಇದೆ. ಆ ಸಾಲಿಗೆ ಈ ವರ್ಷವೂ ಸಹ ಹೊಸದೊಂದು ವಿಡಿಯೋ ಆಲ್ಬಂ ರಿಲೀಸ್‌ ಮಾಡಿದ್ದಾರೆ. ಹೌದು ಬಿಂದ್ಯಾ ಮೂವೀಸ್ ಮೂಲಕ ಅವರು “ಲಕಲಕ ಲ್ಯಾಂಬರ್ಗಿನಿ” ಎಂಬ ವಿಡಿಯೋ ಆಲ್ಬಂ ರಿಲೀಸ್‌ ಮಾಡಿದ್ದಾರೆ. ವಿಶೇಷವೆಂದರೆ, ಈ ಆಲ್ಬಂ ಸಾಂಗ್‌ನಲ್ಲಿ ಚಂದನ್‌ ಶೆಟ್ಟಿ ಜೊತೆ ನಟಿ ರಚಿತಾರಾಮ್‌ ಕೂಡ ಹೆಜ್ಜೆ ಹಾಕಿದ್ದಾರೆ.

ಕನ್ನಡದಲ್ಲಿ ತಮ್ಮದೇ ಗಾಯನದ ಮೂಲಕ ಜನಪ್ರಿಯರಾಗಿರುವ ಚಂದನ್ ಶೆಟ್ಟಿ ಸಾಹಿತ್ಯ ಬರೆದು, ಸಂಗೀತ ನೀಡಿ, ಹಾಡಿ, ಅಭಿನಯಿಸಿರುವ “ಲಕ ಲಕ ಲ್ಯಾಂಬರ್ಗಿನಿ” ಹಾಡು ಬಿಡುಗಡೆಯಾಗಿದೆ.
ಬಿಂದ್ಯಾ ಮೂವೀಸ್ ಬ್ಯಾನರ್‌ನಲ್ಲಿ ಆರ್. ಕೇಶವ್ ಈ ಹಾಡಿನ ನಿರ್ಮಾಪಕರು. ನಂದಕಿಶೋರ್ ಇದರ ನಿರ್ದೇಶಕರು. ನಟಿ ರಚಿತಾರಾಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗೆ ನಿರ್ಮಾಪಕ ಕೆ.ಮಂಜು ಹಾಡು ಬಿಡುಗಡೆ ಮಾಡಿ ಶುಭ ಕೋರಿದರು.

ಹೊಸವರ್ಷದ ಆರಂಭದಲ್ಲಿ ಹೊಸ ಗೀತೆ ಬಿಡುಗಡೆ ಮಾಡುವುದು ವಾಡಿಕೆ. ಕಳೆದ ನಾಲ್ಕು ವರ್ಷಗಳಿಂದ ಹೊಸವರ್ಷಕ್ಕೆ ಟಕೀಲ, ಬ್ಯಾಡ್ ಬಾಯ್, ತ್ರಿ ಪೇಗ್ಈ ಈಗ “ಲಕಲಕ ಲ್ಯಾಂಬರ್ಗಿನಿ” ಎಂಬ ಆಲ್ಬಂ ಸಾಂಗ್‌ ರಿಲೀಸ್‌ ಮಾಡಲಾಗಿದೆ. ಮೂಲತಃ ರೈತರಾಗಿರುವ ಕೇಶವ್ ಅವರು ತಮ್ಮ ಪುತ್ರಿ ಬಿಂದ್ಯಾ ಹುಟ್ಟುಹಬ್ಬದ ನೆನಪಿಗಾಗಿ ಈ ಹಾಡನ್ನು ನಿರ್ಮಿಸಿದ್ದಾರೆ. ಹಾಗೆ ನೋಡಿದರೆ ಈ ಹಾಡು ಜುಲೈ ತಿಂಗಳಲ್ಲಿ ಆರಂಭವಾಗಬೇಕಿತ್ತು. ದುಬೈನಲ್ಲಿ ಚಿತ್ರೀಕರಣ ಮಾಡುವ ಯೋಚನೆ ತಂಡಕ್ಕಿತ್ತು. ಆದರೆ, ಕೊರೊನಾ ಅಡ್ಡಿಯಾಯಿತು. ಕಾಕತಾಳೀಯ ಎಂಬಂತೆ ಹೊಸವರ್ಷಕ್ಕೆ ಈ ಹಾಡು ಬಿಡುಗಡೆಯಾಗಿದೆ. ಹಾಡಿನಲ್ಲಿ ಅಭಿನಯಿಸಿರುವ ರಚಿತಾರಾಂ ಅವರಿಗೆ, ನಿರ್ದೇಶಕ ನಂದಕಿಶೋರ್ ಸೇರಿದಂತೆ ಇಡೀ ತಂತ್ರಜ್ಞರಿಗೆ, ಹೆಚ್ಚಾಗಿ ನಾನು ಇಲ್ಲಿಯವರೆಗೂ ಮಾಡಿರುವ ಸಾಂಗ್ ನಲ್ಲೇ ಅಪಾರ ವೆಚ್ಚದ ಈ ಹಾಡನ್ನು ನಿರ್ಮಿಸಿದ ನಿರ್ಮಾಪಕರಿಗೆ ನನ್ನ ಧನ್ಯವಾದ. ಹೆಚ್ಚಿನ ಸಂಖ್ಯೆಯಲ್ಲಿ ಈ ಹಾಡನ್ನು ನೋಡುವ ಮೂಲಕ ನಮಗೆ ಪ್ರೋತ್ಸಾಹ ನೀಡಿ ಎಂದರು ಚಂದನ್ ಶೆಟ್ಟಿ.

ನಿರ್ಮಾಪಕ ಕೇಶವ್‌ ಅವರಿಗೆ ಈ ಹಾಡು ಮಾಡಿದ್ದು ಖುಷಿ ಕೊಟ್ಟಿದೆಯಂತೆ. ನನ್ನ ಆಲೋಚನೆಯಲ್ಲಿ ಇದು ಇರಲ್ಲಿಲ್ಲ.
ನನ್ನ ಮಗಳು ಬಿಂದ್ಯಾಳನ್ನು ಹುಟ್ಟು ಹಬ್ಬಕ್ಕೆ ಏನು ಬೇಕು ಎಂದು ಕೇಳಿದಾಗ, ಚಂದನ್ ಶೆಟ್ಟಿ ಜೊತೆ ಡ್ಯಾನ್ಸ್ ಮಾಡಬೇಕು ಎಂದು ಆಸೆಪಟ್ಟಳು. ನಂತರ ಕೆ.ಮಂಜು ಅವರ ಮುಂದೆ ಹೇಳಿದೆ. ಅವರ ಮೂಲಕ ಎಲ್ಲರನ್ನು ಸಂಪರ್ಕಿಸಿ, ಈ ಹಾಡು ನಿರ್ಮಾಣವಾಗಿದೆ. ಇದಕ್ಕೆ ನನ್ನ ಮಗಳು ಬಿಂದ್ಯಾ ಕಾರಣ‌.
ಚಂದನ್ ಶೆಟ್ಟಿ , ರಚಿತಾರಾಂ ಜೊತೆ ನನ್ನ ಮಗಳು ಬಿಂದ್ಯಾ ಕೂಡ ಈ ಹಾಡಿನಲ್ಲಿ ಅಭಿನಯಿಸಿದ್ದಾಳೆ ಎಂದು ಸಂತಸ ಪಟ್ಟರು ನಿರ್ಮಾಪಕ ಕೇಶವ್.

ಇನ್ನು ಈ ಹಾಡಿಗೆ ನಂದಕಿಶೋರ್‌ ನಿರ್ದೇಶಕರು. “ನಾನು ಎಷ್ಟೋ ಚಿತ್ರಗಳಿಗೆ ಸಹ ನಿರ್ದೇಶಕನಾಗಿ, ನಿರ್ದೇಶಕನಾಗಿ ಕೆಲಸ ಮಾಡಿದ್ದೀನಿ. ಆಲ್ಬಂ ಸಾಂಗ್ ಇದೇ ಮೊದಲು ನಿರ್ದೇಶನ ಮಾಡಿದ್ದೀನಿ.
ನಿಜಕ್ಕೂ ಮಕ್ಕಳು ಹುಟ್ಟುಹಬ್ಬಕ್ಕೆ ಚಾಕೊಲೇಟ್, ಬಿಸ್ಕೇಟ್ ‌ ಕೇಳುತ್ತಾರೆ. ಆದರೆ ಈ ಹುಡುಗಿ ಅವರ ಅಪ್ಪನ ಬಳಿ ಆಲ್ಬಂ ಸಾಂಗ್ ಮಾಡಲು ಕೇಳಿ, ನೂರಾರು ಜನಕ್ಕೆ ಅನ್ನ ನೀಡಿದ್ದಾಳೆ. ಚಿಕ್ಕ ವಯಸ್ಸಿನಲ್ಲಿ ಇಂತಹ ಗುಣ ಇರುವುದು ನಿಜಕ್ಕೂ ಶ್ಲಾಘನೀಯ ಎಂದರು ನಿರ್ದೇಶಕ ನಂದ ಕಿಶೋರ್.

ಶೇಖರ್ ಚಂದ್ರ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ , ಮುರಳಿ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಹಾಡಿಗಿದೆ. ಈ ವೇಳೆ ನಿವೇದಿತಾ, ನಿರ್ಮಾಪಕ ಕೇಶವ್ ಅವರ ಪತ್ನಿ ಇಂದಿರಾ ಇದ್ದರು.

Related Posts

error: Content is protected !!