ಜೈಹೋ ಕನ್ನಡಿಗ ; ಅಪ್ಪು ನೆನಪಲ್ಲಿ ಹಾಡೊಂದು ಹೊರಬಂತು…

ಪುನೀತ್‌ ರಾಜಕುಮಾರ್‌ ಅವರಿಲ್ಲ. ಆದರೆ, ಅವರು ತಮ್ಮ ಸದಭಿರುಚಿಯ ಸಿನಿಮಾಗಳ ಮೂಲಕ ಇಂದಿಗೂ ಜೀವಂತ. ಅವರ ನೆನಪಲ್ಲಿ ಈಗಾಗಲೇ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿವೆ. ಆ ಸಾಲಿಗೆ ʼಜೈ ಹೋ ಕನ್ನಡಿಗʼ ಎಂಬ ಹಾಡು ಕೂಡ ಹೊರಬಂದಿದೆ. ಈ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿಯಾದರೆ, ಜೆ.ಆರ್.ಶಿವ ಸಾಹಿತ್ಯ ಬರೆದು ಸಂಗೀತ ನೀಡಿದ್ದಾರೆ…

ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ “ಒರಟ ಐ ಲವ್ ಯು” ಚಿತ್ರಕ್ಕೆ ಜಿ.ಆರ್.ಶಂಕರ್ ಅವರೊಡನೆ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ, ಶಿವ ನಂತರ “ಈ ಸಂಜೆ” ಚಿತ್ರದಲ್ಲೂ ಕೆಲಸ ಮಾಡಿದ್ದರು.
ಕೆಲವು ವರ್ಷಗಳ ಬಳಿಕ ಅವರೀಗ “ಜೈಹೋ ಕನ್ನಡಿಗ” ಎಂಬ ಹಾಡು ಬರೆದು ಸಂಗೀತ ನೀಡಿದ್ದಾರೆ. ಈ ಹಾಡನ್ನು ಪುನೀತ್ ರಾಜ್‍ಕುಮಾರ್ ಅವರಿಗೆ ಅರ್ಪಣೆ ಮಾಡಿದ್ದಾರೆ. ಈ ಹಾಡಲ್ಲಿ ಜೆ.ಆರ್. ಶಿವ, ಹಂಸಲೇಖ, ವಿ.ಮನೋಹರ್, ಸಿ.ಆರ್.ಮನೋಹರ್, ವಿ.ನಾಗೇಂದ್ರ ಪ್ರಸಾದ್, ದೊಡ್ಡರಂಗೇಗೌಡ, ಸಾಲುಮರದ ತಿಮ್ಮಕ್ಕ, ಕೆ.ಮಂಜು, ಅನಿರುದ್ಧ್, ಶ್ರೀಧರ್ ವಿ ಸಂಭ್ರಮ್, ಮಾಸ್ಟರ್ ಆನಂದ್, ಧರ್ಮ ಕೀರ್ತಿರಾಜ್, ಧರ್ಮ, ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವರಿದ್ದಾರೆ.

ಅದ್ದೂರಿಯಾಗಿ ಮೂಡಿಬಂದಿರುವ ಈ ಗೀತೆಯನ್ನು ಪದ್ಮಶ್ರೀ ದೊಡ್ಡರಂಗೇಗೌಡ, ಸಿ.ಆರ್.ಮನೋಹರ್, ಗಂಡಸಿ ಸದಾನಂದ ಸ್ವಾಮಿ, ಪಿ.ಆರ್.ಓ ಸುಧೀಂದ್ರ ವೆಂಕಟೇಶ್, ನಟಿ ಲಲಿತಮ್ಮ, ಮಹಾಲಕ್ಷ್ಮಿ ಸ್ವೀಟ್ಸ್ ನ ಹರಣ್ ರಾಜ್ , ಅರುಣ್ ಸೇರಿದಂತೆ ಮುಂತಾದ ಗಣ್ಯರು ಬಿಡುಗಡೆ ಮಾಡಿದರು.

ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಶಿವ, ಈ ಹಾಡಿನ ಮೂಲಕ ಏಳುಕೋಟಿ ಕನ್ನಡಿಗರ ಹೃದಯಕ್ಕೆ ಹತ್ತಿರವಾಗಿದ್ದಾರೆ. ಎಷ್ಟೋ ಅನುಭವವಿರುವವರು ಸಾಹಿತಿ ಬರೆದ ಹಾಗಿದೆ ಈ ಹಾಡು. ಶಿವ ಅವರಿಗೆ ಒಳಿತಾಗಲಿ ಎಂದು ಹಾರೈಸಿದರು ಹಿರಿಯ ಸಾಹಿತಿ ದೊಡ್ಡರಂಗೇಗೌಡ.

ನಾನು “ಒರಟ ಐ ಲವ್ ಯು “ಚಿತ್ರ ಮಾಡಿದಾಗಿನಿಂದಲೂ ಶಿವ ನನಗೆ ಪರಿಚಯ. ಕನ್ನಡದ ಹಿರಿಮೆ ಸಾರುವ ಈ ಹಾಡು ತುಂಬಾ ಚೆನ್ನಾಗಿದೆ. ಇಂತಹ ಇನ್ನೂ ಸಾಕಷ್ಟು ಹಾಡುಗಳು ಶಿವ ಅವರು ರಚಿಸಲಿ. ಅವರಿಗೆ ಬೇಕಾದ ಸಹಕಾರ ನೀಡಿತ್ತೇ‌ನೆ ಅನ್ನೋದು ನಿರ್ಮಾಪಕ ಸಿ.ಆರ್.ಮನೋಹರ್ ಮಾತು.

ಇದು ನನ್ನೊಬ್ಬನಿಂದ ಆಗಿಲ್ಲ. ನನ್ನ ಹಿಂದೆ ಸಾಕಷ್ಟು ಜನರಿದ್ದಾರೆ. ಹಾಡಿನಲ್ಲಿ ಕಾಣಿಸಿಕೊಂಡಿರುವ ಹಾಗೂ ಹಾಡನ್ನು ಬಿಡುಗಡೆ ಮಾಡಲು ಬಂದಿರುವ ಎಲ್ಲಾ ಗಣ್ಯರಿಗೆ ಧನ್ಯವಾದ. ವಿಜಯ್ ಪ್ರಕಾಶ್ ಹಾಡಿರುವ ಈ ಹಾಡನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಣೆ ಮಾಡುತ್ತಿದ್ದೇನೆ. ನನ್ನ ಜೀವನದಲ್ಲಿ ಮೂರು ಜ‌ನ ಗಾಡ್ ಫಾದರ್ . ಒಬ್ಬರು ನನ್ನ ತಂದೆ. ಇನ್ನೊಬ್ಬರು ಅಪ್ಪು ಹಾಗೂ ಮತ್ತೊಬ್ಬರು ಸಿ.ಆರ್.ಮನೋಹರ್.
ಸಿ.ಆರ್.ಮನೋಹರ್ ಅವರು ಏಕೆಂದರೆ, ಖಾಯಿಲೆಯಿಂದ ಚಿಕ್ಕ ವಯಸ್ಸಿಗೆ ನನ್ನ ಗೆಳೆಯ ಅಸುನೀಗಿದ. ನಂತರ ಆ ಕುಟುಂಬಕ್ಕೆ ಸಿ.ಆರ್.ಮನೋಹರ್ ಮಾಡಿರುವ ಉಪಕಾರ ಮರೆಯುವಂತಿಲ್ಲ. ಹಾಗಾಗಿ ಅವರು ನನಗೆ ಗಾಡ್ ಫಾದರ್ ಎಂದು ಶಿವ ಭಾವುಕರಾದರು.

Related Posts

error: Content is protected !!