ಸಾರಿ ಅಂತಿದಾರೆ ರಾಗಿಣಿ! ಕಹಿ ಘಟನೆಗೆ ಸಾರಿ ಅಲ್ಲರೀ ; ಇದು ಅವರ ಹೊಸ ಚಿತ್ರದ ಹೆಸರು!!

ರಾಗಿಣಿ ಡ್ರಗ್ಸ್‌ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದು ಎಲ್ಲರಿಗೂ ಗೊತ್ತಿದೆ. ಅಲ್ಲಿಂದ ಹೊರಬಂದ ರಾಗಿಣಿ, ಆ ಸಿನಿಮಾ ಮಾಡ್ತಾರೆ, ಈ ಚಿತ್ರದಲ್ಲಿ ನಟಿಸಲಿದ್ದಾರೆ ಅಂತೆಲ್ಲಾ ಸುದ್ದಿ ಆಯ್ತು. ಆದರೆ, ಅಸಲಿಗೆ ಅವರು ಯಾವ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ. ಈಗ ಹೊಸ ಸುದ್ದಿ ಅಂದರೆ, ರಾಗಿಣಿ, ಜೈಲಿನಿಂದ ಬಿಡುಗಡೆಯಾದ ಬಳಿಕ ಒಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಆ ಸಿನಿಮಾಗೆ ಮುಹೂರ್ತವೂ ನಡೆದಿದೆ. ರಾಗಿಣಿ ಹೌದು, ರಾಗಿಣಿ ಈಗ ಸಾರಿ ಕೇಳುತ್ತಿದ್ದಾರೆ. ಅರೇ, ಕಹಿ ಘಟನೆಗಳಿಗಾಗಿಯೇ ಅವರು ಸಾರಿ ಕೇಳುತ್ತಿದ್ದಾರಾ ಹಾಗಾದರೆ ಅವರು ಕೇಳುತ್ತಿರುವ ಸಾರಿ ಯಾರಿಗೆ? ಈ ಪ್ರಶ್ನೆ ಎದುರಾದರೆ ಅಚ್ಚರಿ ಇಲ್ಲ. ಆದರೆ, ರಾಗಿಣಿ ಸಾರಿ ಕೇಳುತ್ತಿಲ್ಲ ಅನ್ನೋದು ನಿಜ. ಸಾರಿ ಅನ್ನೋದು ಅವರ ಹೊಸ ಚಿತ್ರದ ಹೆಸರು.

ಈಗ ರಾಗಿಣಿ ಒಂದು ಆ್ಯಕ್ಷನ್, ಕ್ರೈಂ, ಥ್ರಿಲ್ಲರ್ ಕಥಾಹಂದರ ಇರುವ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದೇ ಸಾರಿ (ಕರ್ಮ ರಿಟರ್ನ್ಸ್) ಎಂಬ ನಾಯಕಿ ಪ್ರಧಾನ ಚಿತ್ರದ ಮೂಲಕ ನಟಿ ರಾಗಿಣಿ ದ್ವಿವೇದಿ ಅವರು ಬಹಳ ದಿನಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಅನ್ನೋದು ವಿಶೇಷ. ಈ ಹಿಂದೆ ಮಾಡಿರದ ವಿಶೇಷ ಪಾತ್ರದಲ್ಲಿ ರಾಗಿಣಿ ಕಾಣಿಸಿಕೊಳ್ಳಲಿದ್ದಾರೆ. ಕಿಸ್ ಇಂಟರ್ನ್ಯಾಷನಲ್ ಪ್ರೊಡಕ್ಷನ್ (ಕೆನಡ) ಅಡಿಯಲ್ಲಿ ನವೀನ್ ಕುಮಾರ್ (ಕೆನಡಾ ) ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬ್ರಹ್ಮ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಮಾಗಡಿ ರಸ್ತೆಯ,ಮಾಚೋಹಳ್ಳಿ ಸಮೀಪದ ಲಕ್ಕೇನಹಳ್ಳಿ ಗ್ರಾಮದೇವತೆ ದೇವಸ್ಥಾನದಲ್ಲಿ ಮಂಗಳವಾರ ನೆರವೇರಿದೆ. ಕಳೆದ ವಾರವೇ ನಡೆಯಬೇಕಿದ್ದ ಈ ಕಾರ್ಯಕ್ರಮವನ್ನು ಪುನೀತ್ ರಾಜ್‍ಕುಮಾರ್ ಅವರ ಅಗಲಿಕೆಯ ದುಃಖದಲ್ಲಿ ಮುಂದೂಡಲಾಗಿತ್ತು.

ಈ ಹಿಂದೆ ಇದೇ ನಿರ್ಮಾಪಕ, ನಿರ್ದೇಶಕರ ನಿರ್ಮಾಣದ ಸಿದ್ದಿಸೀರೆ ಎಂಬ ಚಿತ್ರವು ನ್ಯೂಯಾರ್ಕ್, ಟೋಕಿಯೋ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿತ್ತು. ಸಕಲೇಶಪುರ, ಬೆಂಗಳೂರು ಹಾಗೂ ಕಗ್ಗಲೀಪುರದ ಸುತ್ತಮುತ್ತ ಸಾರಿ ಚಿತ್ರದ ಶೂಟಿಂಗ್ ನಡೆಯಲಿದ್ದು, ಅಫ್ಜಲ್(ಸೂಪರ್‌ಸ್ಟಾರ್) ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಜಾನ್ ಜಾರ್ಜ್ ಹಾಗೂ ಜೈ ಕೃಪಲಾನಿ ಅವರ ಸಹನಿರ್ಮಾಪಕರಾಗಿದ್ದಾರೆ.

ಅದ್ದೂರಿ ವೆಚ್ಚದ ಈ ಚಿತ್ರಕ್ಕೆ ರಾಜು ಎಮ್ಮಿಗನೂರು ಅವರ ಸಂಗೀತ, ರಾಜೀವ್ ಗಣೇಸನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ, ಭೂಪತಿರಾಜ್ ಸಂಕಲನ, ಇಮ್ರಾನ್, ಮನು ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದಲ್ಲಿ ಇತರೆ ಪಾತ್ರಗಳಲ್ಲಿ ರಾಗಿಣಿ ಅವರ ಜೊತೆಗೆ ಅಫ್ಜಲ್ (ಸೂಪರ್‌ಸ್ಟಾರ್ಸ್) ವಿ.ಜೆ.ಮನೋಜ್, ರಣವೀರ್, ಯುಕ್ತ ಪೆರ್ವಿ, ಪೂಜಾ ಪಾಟೀಲ್ ನಟಿಸುತ್ತಿದ್ದಾರೆ.

Related Posts

error: Content is protected !!