ಪುಸ್ತಕ ರೂಪದಲ್ಲಿ ಸಂಚಾರಿ ವಿಜಯ್ ಜೀವನ ಕಥನ; ಅನಂತವಾಗಿರು…

ನಟ ಸಂಚಾರಿ ವಿಜಯ್‌ ಈಗಿಲ್ಲ. ಆದರೆ, ಅವರು ಅದ್ಭುತ ಸಿನಿಮಾಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ. ಅವರ ಗೆಳೆಯರು ಒಗ್ಗೂಡಿ ಇದೀಗ ಅವರ ಕುರಿತು ಗೊತ್ತಿರುವ ಒಂದಷ್ಟು ವಿಷಯಗಳನ್ನು ತಮ್ಮ ಬರಹಗಳ ಮೂಲಕ ಪುಸ್ತಕವೊಂದನ್ನು ಹೊರತರುವ ಪ್ರಯತ್ನ ಮಾಡಿದ್ದಾರೆ. ಆ ಪ್ರಯತ್ನಕ್ಕೆ ಪತ್ರಕರ್ತ, ಲೇಖಕ ಡಾ. ಶರಣುಹುಲ್ಲೂರು ಅವರು ಮುಂದಾಳತ್ವ ವಹಿಸಿದ್ದಾರೆ ಈ ಹಿಂದೆ ಅಂಬರೀಶ್, ಸುದೀಪ್ ಅವರ ಬಯೋಗ್ರಫಿ ಬರೆದು, ರಾಜ್ಯ ಪ್ರಶಸ್ತಿ ಪಡೆದ ಡಾ.ಶರಣು ಹುಲ್ಲೂರು ಅವರ ಸಂಪಾದಕತ್ವದಲ್ಲಿ ಈ ಕೃತಿ ಬರುತ್ತಿರುವುದು ವಿಶೇಷತೆಗಳಲ್ಲೊಂದು.

ಹೌದು, ವಿಜಯ್‌ ಅವರ ಜೀವನ ಕಥನ ಪುಸ್ತಕ ರೂಪದಲ್ಲಿ ಹೊರಬರುತ್ತಿದೆ. ಆ ಪುಸ್ತಕಕ್ಕೆ “ಅನಂತವಾಗಿರು” ಎಂದ ಹೆಸರಿಡಲಾಗಿದೆ. ಈ ಕುರಿತಂತೆ ಸ್ವತಃ ಲೇಖಕ ಡಾ.ಶರಣು ಹುಲ್ಲೂರು ಹೇಳೋದು ಹೀಗೆ.
“ನಮ್ಮ ನಿಮ್ಮೆಲ್ಲರ ನೆಚ್ಚಿನ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ ಹುಟ್ಟು ಹಬ್ಬವನ್ನು ಜುಲೈ 17 ಕ್ಕೆ ಅರ್ಥಪೂರ್ಣವಾಗಿ ಆಚರಿಸಲು ಹೊರಟಿದ್ದೇವೆ. ವಿಜಯ್ ಅವರು ಸಿನಿಮಾದಷ್ಟೇ ಪುಸ್ತಕವನ್ನು ಪ್ರೀತಿಸುತ್ತಿದ್ದರು. ಆ ಪುಸ್ತಕಗಳ ಕುರಿತು ಇತರರ ಜತೆ ಹಂಚಿಕೊಳ್ಳುತ್ತಿದ್ದರು. ಹಾಗಾಗಿ ಅವರ ಕುರಿತಾದ ಜೀವನ ಕಥನವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ, ಅದನ್ನು ಈ ಬಾರಿಯ ಹುಟ್ಟು ಹಬ್ಬಕ್ಕೆ ಉಡುಗೊರೆಯಾಗಿ ನೀಡುತ್ತಿದ್ದೇವೆ. ಇದೊಂದು ಬಯೋಗ್ರಫಿ ಮಾದರಿಯಲ್ಲೇ ರೂಪಗೊಂಡ ಪುಸ್ತಕ. ವಿಜಯ್ ಅವರ ಬಾಲ್ಯ ಮತ್ತು ಜೀವನದ ಬಗ್ಗೆ ವಿಜಯ್ ಸಹೋದರರು ಮತ್ತು ಕುಟುಂಬ ಮಾತನಾಡಿದ್ದಾರೆ.

ಅವರ ಬಾಲ್ಯದ ಗೆಳೆಯರು, ಶಾಲಾ ಗೆಳೆಯರು, ಜತೆಗಿದ್ದವರು ನೆನೆಪುಗಳನ್ನು ಹಂಚಿಕೊಂಡಿದ್ದಾರೆ. ರಂಗಭೂಮಿ, ಕಿರುತೆರೆ, ಸಿನಿಮಾ, ಸಂಗೀತ ಹೀಗೆ ವಿಜಯ್ ಅವರು ಸಾಗಿ ಬಂದ ನಾನಾ ಕ್ಷೇತ್ರಗಳ ಬಗ್ಗೆ ಅವರ ಒಡನಾಡಿಗಳು, ಸಿನಿಮಾ ನಿರ್ದೇಶಕರು, ರಂಗಭೂಮಿ ಗೆಳೆಯರು, ಸಂಗೀತದ ಸಹಪಾಠಿಗಳು, ಪತ್ರಕರ್ತರು ನೆನಪಿಸಿಕೊಂಡಿದ್ದಾರೆ. ವಿಜಯ್ ಅವರ ಮೊದಲುಗಳಿಗೆ ಸಾಕ್ಷಿಯಾದವರು ಕೂಡ ಈ ಪುಸ್ತಕದ ಜತೆಗಿರುವುದು ಮತ್ತೊಂದು ವಿಶೇಷ.


ಖ್ಯಾತ ಲೇಖಕರಾದ ವಸುಧೇಂದ್ರ, ಜೋಗಿ, ಸಂಧ್ಯಾರಾಣಿ, ನಿರ್ದೇಶಕರಾದ ಬಿ.ಎಸ್. ಲಿಂಗದೇವರು, ಮಂಸೋರೆ, ಅರವಿಂದ್ ಕುಪ್ಳಿಕರ್, ಎಂ.ಎಸ್ ರಮೇಶ್, ರಂಗ ನಿರ್ದೇಶಕಿ ಮಂಗಳಾ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ರಾಷ್ಟ್ರ ಪ್ರಶಸ್ತಿ ವಿಜೇತ ಲೇಖಕ ಕೆ. ಪುಟ್ಟಸ್ವಾಮಿ ಹೀಗೆ ಸಿನಿಮಾ ರಂಗದ ಹಾಗೂ ವಿಜಯ್ ಅವರನ್ನು ಬಲ್ಲ 32 ಕ್ಕೂ ಹೆಚ್ಚು ಲೇಖಕರು ಬರೆದ ಬರಹಗಳು ಇದರಲ್ಲಿವೆ. ಅಂದಹಾಗೆ, ಜಿ.ಎನ್. ಮೋಹನ್ ಅವರು ಈ ಪುಸ್ತಕಕ್ಕೆ ಹಿನ್ನುಡಿ ಬರೆದಿದ್ದಾರೆ. ಬೆಂಗಳೂರಿನ ಕಾಯಕ ಪ್ರಕಾಶನದಿಂದ ಈ ಕೃತಿ ಹೊರಬರುತ್ತಿದೆ. ಜು.17 ರಂದು ಪುಸ್ತಕ ಬಿಡುಗಡೆ ಆಗಲಿದೆ.

Related Posts

error: Content is protected !!