ಬಂಡಾಯ ಕವಿ ಸಿದ್ದಲಿಂಗಯ್ಯ ಪ್ರೇಮಕವಿಯೂ ಹೌದು.. ಅಷ್ಟೇ ಅಲ್ಲ, ಬೆಳ್ಳಿತೆರೆ ಜೋಡಿಗಳಿಗೆ ನವಿರಾದ ಗೀತೆ ರಚಿಸಿದ ಮೋಡಿಗಾರ ಕೂಡ

‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ’ ಅಂತ ಸಾಹಿತ್ಯ ರಚನೆ ಮಾಡಿದ ವಿಶಿಷ್ಟ ಸಾಹಿತಿ ಸಿದ್ದಲಿಂಗಯ್ಯ. ಬೆಳ್ಳಿತೆರೆಯ ಮೇಲೆ ಈ ಹಾಡು ಮೂಡಿ ಬಂದಾಗ ಅದಕ್ಕೆ ಮತ್ತಷ್ಟು ಜನಪ್ರಿಯತೆ ಸಿಕ್ಕಿತು ಅನ್ನೋದು ಇನ್ನೊಂದು ವಿಶೇಷ. ಹೌದು, ಡಾ. ಸಿದ್ದಲಿಂಗಯ್ಯ ಅವರ ಸಾಹಿತ್ಯದ ಸೊಗಡು ಕನ್ನಡ ಚಿತ್ರರಂಗಕ್ಕೂ ಪಸರಿಸಿದೆ

ಕವಿ, ಪ್ರಾಧ್ಯಾಪಕ ಡಾ. ಸಿದ್ದಲಿಂಗಯ್ಯ ಕೇವಲ ಬಂಡಾಯ ಸಾಹಿತಿ ಮಾತ್ರವಲ್ಲ, ಪ್ರೇಮ ಕವಿಯೂ ಹೌದು. ಹೋರಾಟದ ಅಂಗಳದಲ್ಲಿದ್ದ ಇಕ್ರಲಾ, ಒದಿರ್ಲಾ ಅಂತ ಬೆಂಕಿ ಸಾಹಿತ್ಯವನ್ನು ರಚಿಸಿದ ಸಂದರ್ಭದಲ್ಲಿ
‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ’ ಅಂತ ಸಾಹಿತ್ಯ ರಚನೆ ಮಾಡಿದ ವಿಶಿಷ್ಟ ಸಾಹಿತಿ ಸಿದ್ದಲಿಂಗಯ್ಯ. ಬೆಳ್ಳಿತೆರೆಯ ಮೇಲೆ ಈ ಹಾಡು ಮೂಡಿ ಬಂದಾಗ ಅದಕ್ಕೆ ಮತ್ತಷ್ಟು ಜನಪ್ರಿಯತೆ ಸಿಕ್ಕಿತು ಅನ್ನೋದು ಇನ್ನೊಂದು ವಿಶೇಷ. ಹೌದು, ಡಾ. ಸಿದ್ದಲಿಂಗಯ್ಯ ಅವರ ಸಾಹಿತ್ಯದ ಸೊಗಡು ಕನ್ನಡ ಚಿತ್ರರಂಗಕ್ಕೂ ಪಸರಿಸಿದೆ. ಸಿನಿಮಾಗಳಲ್ಲಿ ಕಾಡುವ ಪ್ರೇಮ ಗೀತೆಗಳನ್ನ ಬರೆಯುವ ಮೂಲಕ ಪ್ರೇಮ ಕವಿ ಅಂತಾ ಕರೆಯಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಕನ್ನಡದ ಪ್ರಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ʼಧರಣಿ ಮಂಡಲ ಮಧ್ಯದೊಳಗೆʼ ಸಿನಿಮಾ. ಈ ಚಿತ್ರಕ್ಕೆ ಸಿದ್ದಲಿಂಗಯ್ಯ ಮೂರು ಹಾಡುಗಳನ್ನ ಬರೆದಿದ್ದಾರೆ.

ಶ್ರೀನಾಥ್, ಎಡಕಲ್ಲು ಚಂದ್ರಶೇಖರ್, ಜೈ ಜಗದೀಶ್ ಅಭಿನಯದ ಈ ಚಿತ್ರದಲ್ಲಿ, ‘ಗೆಳತಿ ಓ ಗೆಳತಿ’ ಎಂಬ ಹಾಡು ಸೂಪರ್ ಹಿಟ್ ಆಗಿತ್ತು. ಒಂದು ಅಚ್ಚರಿ ಸಂಗತಿ ಅಂದರೆ, ಈ ಹಾಡಿಗೆ 1984ರಲ್ಲಿ ಅತ್ಯುತ್ತಮ ಗೀತೆ ಎಂದು ರಾಜ್ಯ ಪ್ರಶಸ್ತಿಯನ್ನ ಚೊಚ್ಚಲ ಸಿನಿಮಾಕ್ಕೆ ಸಿದ್ದಲಿಂಗಯ್ಯ ಪಡೆಯುತ್ತಾರೆ‌. ವಿಶೇಷ ಅಂದ್ರೆ, ಆಗವರು ಬಂಡಾಯ ಸಾಹಿತ್ಯದ ಮುಂಚೂಣಿಯ ಸಾಹಿತಿ ಎನಿಸಿಕೊಂಡಿದ್ದರು. ಹಾಗಾಗಿ ಈ ಗೀತೆಗಳನ್ನು ಅವರು ಅನಾಮಧೇಯ ಹೆಸರಲ್ಲಿ ಬರೆದಿದ್ದರಂತೆ. ಕೊನೆಗೆ ಅತ್ಯುತ್ತಮ ಗೀತೆ ರಚನೆಯ ಪ್ರಶಸ್ತಿ ಬಂದಾಗ ಈ ಗೀತೆ ಬರೆದಿದ್ದ ತಾವೇ ಅಂತ ಬಹಿರಂಗವಾಗಿ ಒಪ್ಪಿಕೊಂಡು ಪ್ರಶಸ್ತಿ ಸ್ವೀಕರಿಸಿದ್ದರಂತೆ. ಬಳಿಕ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ , ಶಿವರಾಮ್ ಅಭಿನಯದ ಬಾ ನಲ್ಲೇ ಮಧುಚಂದ್ರಕ್ಕೆ ಚಿತ್ರದಲ್ಲಿ, ಸಿದ್ದಲಿಂಗಯ್ಯನವರು ಮತ್ತೊಂದು ಹಿಟ್ ಹಾಡನ್ನ ಬರೆಯುತ್ತಾರೆ. ಅದುವೇ ,’ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ.. ಹಾಡು.ಈ ಎರಡು ಚಿತ್ರಗಳ ಬಳಿಕ ಪ್ರತಿಭಟನೆ ಎಂಬ ಚಿತ್ರಕ್ಕೆ ಸಿದ್ದಲಿಂಗಯ್ಯನವರು ಸಾಹಿತ್ಯ ಬರೆಯುತ್ತಾರೆ.

ಸಿದ್ದಲಿಂಗಯ್ಯನವರು ಮೂರು ಸಿನಿಮಾಗಳಿಗೆ ಮಾತ್ರ ಸಾಹಿತ್ಯ ಬರೆದಿದ್ದರೂ ಕೂಡ, ಬಾ ನಲ್ಲೆ ಮಧುಚಂದ್ರಕೆ ಹಾಗು ಪುಟ್ಟಣ್ಣ ಅವರ ಧರಣಿ ಮಂಡಲ ಮಧ್ಯದೊಳಗೆ ಚಿತ್ರದ ಹಾಡುಗಳು ಬಹಳ ಜನಪ್ರಿಯ ಗೀತೆಗಳಾಗಿವೆ. ಈ ಗೀತೆಗಳಿಂದ ಸಿದ್ದಲಿಂಗಯ್ಯ ಅವರನ್ನು ಪ್ರೇಮ ಗೀತೆಯ ಕವಿ ಅಂತಾ ಕರೆಯುತ್ತಾರೆ. ಹಾಗೆಯೇ ಸಿದ್ದಲಿಂಗಯ್ಯ ಅವರ ಮತ್ತೊಂದು ಗೀತೆ ʼಪ್ರತಿಭಟನೆʼ ಹೆಸರಿನ ಚಿತ್ರದಲ್ಲಿ ಬಳಕೆ ಆಯಿತು. ಆ ಮೂಲಕ ಹೋರಾಟ, ಸಾಹಿತ್ಯ, ರಾಜಕಾರಣದ ಜತೆಗೆಯೇ ಕವಿ ಸಿದ್ದಲಿಂಗಯ್ಯ, ಸಿನಿಮಾ ರಂಗದಲ್ಲೂ ಗುರುತಿಸಿಕೊಂಡಿದ್ದರು. ಅಷ್ಟು ಮಾತ್ರವಲ್ಲದೆ ಅವರು ರಚಿಸಿದ ಅನೇಕ ಗೀತೆಗಳು ಭಾವಗೀತೆಗಳಾಗಿ ಜನಪ್ರಿಯತೆ ಪಡೆದವು. ಹಾಗೆಯೇ ಕ್ರಾಂತಿ ಗೀತೆಗಳಾಗಿ ನಾಡಿನಾದ್ಯಂತ ಹೋರಾಟದ ಕೆಚ್ಚು ಹಚ್ಚಿದವು ಎನ್ನುವುದು ಸಿದ್ದಲಿಂಗಯ್ಯ ಅವರ ಸಾಹಿತ್ಯದ ವಿಶೇಷ, ವಿಶಿಷ್ಟ.

Related Posts

error: Content is protected !!