ಅದ್ಯಾಕೋ ಮನಸು ಭಾರವಾಯಿತು ಅಂತ ಅಪ್ಪು ಅಂದಿದ್ದೇಕೆ ? ಅಪ್ಪು ಭಾವುಕರಾಗುವಂತಹ ಘಟನೆ ಆಗಿದ್ದಾರೂ ಏನು?

ನಟ ಪುನೀತ್‌ ರಾಜ್‌ ಕುಮಾರ್‌ ಇವತ್ತು ಮಂತ್ರಾಲಯಕ್ಕೆ ಭೇಟಿ ಕೊಟ್ಟಿದ್ದರು. ಅವರೊಂದಿಗೆ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್‌ ಗೌಡ ಸೇರಿದಂತೆ ಇಡೀ “ಯುವರತ್ನʼ ಚಿತ್ರ ತಂಡವೇ ಇತ್ತು. ಎಲ್ಲದಕ್ಕಿಂತ ವಿಶೇಷ ಅಂದ್ರೆ, ಅಪ್ಪು ಅವರ ಮಂತ್ರಾಲಯ ಭೇಟಿಯಲ್ಲಿ ಪ್ರಮುಖವಾಗಿ ಕಾಣಸಿಕೊಂಡಿದ್ದು ಹಿರಿಯ ನಟ ನವರಸ ನಾಯಕ ಜಗ್ಗೇಶ್.‌ ಮಂತ್ರಾಲಯಕ್ಕೂ ರಾಜ್‌ ಕುಟುಂಬಕ್ಕೂ ಅಗಾದ ನಂಟು. ಅದೊಂಥರ ಅವಿನಾಭಾವ ಬೆಸುಗೆ. ವರನಟ ರಾಜ್‌ ಕುಮಾರ್‌ ಅವರಿಗೆ ಮಂತ್ರಾಲಯದ ರಾಯರು ಅಂದ್ರೆ ಪಂಚ ಪ್ರಾಣ. ಹಾಗೆಯೇ ಅವರ ಇಡೀ ಕುಟುಂಬಕ್ಕೂ ಮಂತ್ರಾಲಯದ ರಾಯರು ಅಂದ್ರೆ ಅತೀವ ಶ್ರದ್ಧಾ ಭಕ್ತಿ. ಜಗ್ಗೇಶ್‌ ಅವರಿಗೂ ಕೂಡ ಮಂತ್ರಾಲಯದ ರಾಯರ ಮೇಲೆ ಅತೀವ ನಂಬಿಕೆ. ಹಾಗೆಯೇ ರಾಯರ ಪರಮ ಶಿಷ್ಯ ಅವರು. ಅಂತೆಯೇ ಇವತ್ತು ಮಂತ್ರಾಲಯದ ರಾಯರ ಸನ್ನಿಧಾನಕ್ಕೆ ಅಪ್ಪು, ಜಗ್ಗೇಶ್‌ ಅವರೊಂದಿಗೆ ಹೋಗಿದ್ದರು.

ಇದೊಂಥರ ಕಾಕತಾಳೀಯ. “ರಾಬರ್ಟ್‌ʼ ಚಿತ್ರದ ಸಕ್ಸಸ್‌ ಆದ ಬೆನ್ನಲೇ ನಟ ದರ್ಶನ್‌ ಕೂಡ ಮಂತ್ರಾಲಯಕ್ಕೆ ಹೋಗಿದ್ದರು. ಅಲ್ಲಿ ರಾಯರ ದರ್ಶನದೊಂದಿಗೆ ಆಶೀರ್ವಾದ ಪಡೆದುಕೊಂಡು ಬಂದಿದ್ದರು. ಹಾಗೆಯೇ ದರ್ಶನ್‌, ಮಂತ್ರಾಲಯದಲ್ಲಿನ ಗೋಶಾಲೆಗೂ ಹೋಗಿ ಅಲ್ಲಿನ ಗೋವುಗಳನ್ನು ಮೈದಡವಿ ಬಂದಿದ್ದು ನಿಮಗೂ ಗೊತ್ತು. ಆ ನಂತರವೀಗ” ಯುವರತ್ನʼ ಚಿತ್ರದ ಸಕ್ಸಸ್‌ ಬೆನ್ನಲೇ ಅಪ್ಪು ಕೂಡ ಮಂತ್ರಾಲಯಕ್ಕೆ ಭೇಟಿ ಕೊಟ್ಟರು.ಈಗಾಗಲೇ ಅಲ್ಲಿ ಚಿತ್ರತಂಡಕ್ಕೆ ರಾಯರ ದರ್ಶನವೂ ಅಗಿದೆ. “ಯುವರತ್ನʼ ತಂಡವನ್ನು ರಾಯರು ಆಶೀರ್ವದಿಸಿ, ಹಾರೈಸಿದ್ದಾರೆ. ಅಲ್ಲಿಗೆ ಯವರತ್ನ ತಂಡ ಪುನೀತಗೊಂಡಿದೆ.

ಅಪ್ಪು ತಮ್ಮ ತಂಡದೊಂದಿಗೆ ಅತ್ತ ರಾಯರ ದರ್ಶನ ಪಡೆಯಲು ಮಂತ್ರಾಲಯಕ್ಕೆ ಹೊರಟ ಸಂದರ್ಭದಲ್ಲೇ ಒಂದು ಭಾವುಕ ಘಟನೆಗೆ ಪ್ರತಿಕ್ರಿಯಿಸಿದ್ದರು. ಅ ಸುದ್ದಿ ಕೇಳಿ ಅದ್ಯಾಕೋ ಮನಸು ಭಾರವಾಯಿತು ಅಂತ ಟ್ವಿಟ್‌ ಮಾಡಿದ್ದರು. ಅಷ್ಟಕ್ಕೂ ಕಾರಣವೇನು ?ಅವರ ಮನಸಿಗೆ ನೋವಾಗುವಂತಹ ಘಟನೆ ಇಲ್ಲಿ ನಡೆದಿದ್ದಾರೂ ಏನು? ಇದೇ ಅದಕ್ಕೆ ಕಾರಣವೂ ಇದೆ. ಅವರಿಗೆ ಮನಸ್ಸು ಭಾರವಾಗುವಂತಹ ಘಟನೆ ಭಾನುವಾರ ಮೈಸೂರಿನಲ್ಲಿ ನಡೆದಿತ್ತು. ಅದಕ್ಕವರು ಇಂದು ಅದ್ಯಕೋ ಮನಸು ಭಾರವಾಯಿತು ಅಂತ ಟ್ವಿಟ್‌ ಮಾಡಿದ್ದು.ಅರಮನೆ ನಗರಿ ಮೈಸೂರಿನಲ್ಲೊಂದು ಭಾನುವಾರ ಭಾವುಕ ಘಟನೆ ನಡೆಯಿತು. ಮೃತಪಟ್ಟ ಮಗನ ಫೊಟೋ ಇಟ್ಟುಕೊಂಡು ಪೋಷಕರು ‘ಯುವರತ್ನ’ ಸಿನಿಮಾ ನೋಡಿದ್ದರು. ಮೈಸೂರಿನ ಡಿ ಆರ್ ಸಿ‌ ಮಲ್ಟಿಫ್ಲೆಕ್ಸ್‌ ಅಂತಹದೊಂದು ಭಾವುಕ ಘಟನೆಗೆ ಸಾಕ್ಷಿ ಆಗಿತ್ತು. ಆ ಸುದ್ದಿ ಕೇಳಿ ಅಪ್ಪು ದಿಗ್ಬ್ರಾಂತರಾಗಿದ್ದರು. ರಾಯರ ದರ್ಶನಕ್ಕೆ ಅಂತ ಮಂತ್ರಾಲಯಕ್ಕೆ ಹೊರಟಿದ್ದ ಅಪ್ಪು, ತಕ್ಷಣಕ್ಕೆ ಆ ಘಟನೆಗೆ ಪ್ರತಿಕ್ರಿಯೆ ನೀಡಲು ಆಗಿರಲಿಲ್ಲ. ರಾಯರ ದರ್ಶನ ಪಡೆದು ವಾಪಾಸ್‌ ಹಿಂದಿರುಗುವಾಗ ಆ ಘಟನೆಗೆ ಪ್ರತಿ ಕ್ರಿಯಿಸಿ ಒಂದು ಟ್ವಿಟ್‌ ಮಾಡಿದರು. ಹಾಗಾದ್ರೆ ಅವರ ಟ್ವಿಟ್‌ ವಿವರ ಏನು? ಇಲ್ಲಿದೆ ನೋಡಿ.

ಮೈಸೂರಿನ ಮುರುಳಿಧರ್‌ ಹಾಗೂ ಕುಟುಂಬದವರು ಅವರ ದಿವಂಗತ ಪುತ್ರ ಹರಿಕೃಷ್ಣನ್‌ ಫೋಟೋ ಜೊತೆಗೆ ಯುವರತ್ನ ಸಿನಿಮಾ ನೋಡಿರುವ ದೃಶ್ಯಗಳನ್ನು ನೋಡಿ, ನನ್ನ ಮನಸು ಭಾರವಾಯಿತು. ಬಾಲಕ ಹರಿಕೃಷ್ಣನ್‌ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಅಪ್ಪು ತಮ್‌ ಟ್ವಿಟ್‌ ನಲ್ಲಿ ಹೇಳಿಕೊಂಡಿದ್ದಾರೆ. ಹಾಗಾದ್ರೆ ಈ ಹರಿಕೃಷ್ಣನ್‌ ಯಾರು ಗೊತ್ತಾ? ಮೈಸೂರಿನ ನಿವಾಸಿ‌ ಮುರಳಿಧರ್ ಎಂಬುವವರ ಪುತ್ರನೇ ಈ ಹರಿಕೃಷ್ಣನ್. ಪುಟ್ಟ ಹುಡುಗ. ಅಪ್ಪು ಅವರ ಅಪ್ಪಟ ಅಭಿಮಾನಿ. ಪುನೀತ್‌ ಅವರ ಸಿನಿಮಾ, ಡಾನ್ಸ್‌ ಅಂದ್ರೆ ವಿಪರೀತ ಕ್ರೇಜ್‌ ಅಂತೆ. ಸಿನಿಮಾವೋ ಅಥವಾ ಮನೆಯಲ್ಲಿ ಟಿವಿ ಮೇಲೋ ಪುನೀತ್‌ ರಾಜ್‌ ಕುಮಾರ್‌ ಕಾಣಿಸಿಕೊಂಡ್ರೆ, ಆತನಿಗೆ ಎಲ್ಲಿಲ್ಲದ ಖುಷಿ ಅಂತೆ. ಅಷ್ಟೇ ಅಲ್ಲ, ಅಪ್ಪು ಅಭಿನಯದ ಯುವರತ್ನ ನೋಡಲೇ ಬೇಕು ಅಂತ ಪಣ ತೊಟ್ಟಿದ್ನಂತೆ. ಇಂತಿಪ್ಪ ಬಾಲಕ ಕಳೆದ ಮೂರು ತಿಂಗಳ ಹಿಂದಷ್ಟೇ ಈಜಲು ಹೋಗಿ ನೀರಲ್ಲಿ ಮುಳುಗಿ ಸಾವನಪ್ಪಿದ್ದ. ಯುವರತ್ನ ಸಿನಿಮಾ ನೋಡುವ ಆತನ ಆಸೆ ಕೊನೆಗೂ ಕೈ ಗೂಡಿರಲಿಲ್ಲ.

ಮಗ ಹೋದ ಅಂತ ಅತೀವ ದುಖದಲ್ಲಿದ್ದ ಮುರುಳಿಧರ್‌ ಕುಟುಂಬ ಈ ಕ್ಷಣಕ್ಕೆ ಕಾಯುತ್ತಿತಂತೆ. ಮಗನ ಆಸೆ ಈಡೇರಿಸಬೇಕಾದರೆ ಯುವರತ್ನ ರಿಲೀಸ್‌ ಆಗಬೇಕು. ಮಗನ ಜತೆಗೆ ಸಿನಿಮಾ ನೋಡಬೇಕು ಅಂತ ಕಾಯಿತ್ತದ್ದರಂತೆ. ಅಂತೆಯೇ ಭಾನುವಾರ ಮುರುಳಿಧರ್‌ ಕುಟುಂಬ ಸಮೇತ ಯುವರತ್ನ ಚಿತ್ರ ನೋಡಲು ಚಿತ್ರಮಂದಿರಕ್ಕೆ ಹೋಗಿದ್ದರು. ತಮ್ಮಿಂದ ದೂರವಾಗಿರೋ ಮಗನಿಗೂ ಒಂದು ಟಿಕೆಟ್ ತೆಗೆದುಕೊಂಡು, ಅಪ್ಪ-ಅಮ್ಮ, ಹಿರಿಯ ಮಗನ ಜೊತೆ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಮಗನ ಆಸೆಯಂತೆ ಪೋಷಕರು ಆತನ ಫೋಟೋದೊಂದಿಗೆ ‘ಯುವರತ್ನ’ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಇದು ನಿನ್ನೆ ದೊಡ್ಡ ಸುದ್ದಿಯೂ ಅಗಿತ್ತು. ಅದಕ್ಕೀಗ ಅಪ್ಪು ಪ್ರತಿಕ್ರಿಯಿಸಿ, ಮನಸು ಭಾರವಾಯಿತು ಅಂದಿದ್ದಾರೆ. ಸಿನಿಮಾ, ಭಾವುಕತೆ, ಅಭಿಮಾನ ಅಂದ್ರೆ ಇದೆ ಅಲ್ವಾ?

Related Posts

error: Content is protected !!