ಮಹನೀಯರ ಜೀವನ ಸಿನಿಮಾವಾಗಬೇಕು: ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಬಯೋಪಿಕ್ ಸ್ಕ್ರಿಪ್ಟ್ ಪೂಜೆಯಲ್ಲಿ ಶಶಿಕುಮಾರ್ ಮಾತು

ಕರ್ನಾಟಕದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಅವರ ಜೀವನಾಧಾರಿತ ಸಿನಿಮಾ ಸೆಟ್ಟೇರುತ್ತಿದೆ. “ಮಹಾಕವಿ” ಎಂಬ ಶೀರ್ಷಿಕೆಯಲ್ಲಿ ಸಿನಿಮಾ ತೆರೆಗೆ ಬರುತ್ತಿದೆ ಎಂಬುದೇ ಈ ಹೊತ್ತಿನ ವಿಶೇಷ. ಗೋವಿಂದ ಪೈ ಅವರ ತವರು ಗಡಿನಾಡು ಮಂಜೇಶ್ವರದವರೇ ಆದ ನಟ, ನಿರ್ಮಾಪಕ ರಘುಭಟ್ ತನ್ನ ಲಕ್ಷ್ಮೀ ಗಣೇಶ್ ಪ್ರೊಡಕ್ಷನ್ ‌ನಲ್ಲಿ ಮಹಾಕವಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಅವರ ಪತ್ನಿ ಸುಗುಣ ರಘುಭಟ್ ಅವರು ಈ ಸಿನಿಮಾ ಮೂಲಕ ನಿರ್ಮಾಪಕಿಯಾಗಿ ಸಿನಿರಂಗದ ಸೇವೆಗೆ ಎಂಟ್ರಿ ಕೊಡುತ್ತಿರುವುದು ಮತ್ತೊಂದು ವಿಶೇಷ.

ಸಿನಿಮಾ ಪತ್ರಕರ್ತರಾಗಿ, ಸಾಹಿತಿಯಾಗಿ ಚಿರಪರಿಚಿತರಾಗಿರುವ ಗಣೇಶ್ ಕಾಸರಗೋಡು ಮಹಾಕವಿಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಮಂಜೇಶ್ವರದವರೇ ಆದ ಜಯರಾಂ ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದಾರೆ. ನಿರ್ದೇಶಕರು ಸದ್ಯದಲ್ಲೇ ತಂಡ ಕೂಡಿಕೊಳ್ಳಲಿದ್ದಾರೆ. ಸ್ಟಾರ್ ನಟರೊಬ್ಬರು ಗೋವಿಂದ ಪೈ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಅಂದಹಾಗೆ ಗೋವಿಂದ ಪೈ ಅವರ ಜನ್ಮದಿನದಂದು ಅವರ ತವರು ಮಂಜೇಶ್ವರದಲ್ಲಿ ಮಂಗಳವಾರ ಮಹಾಕವಿ ಸಿನಿಮಾ ಸ್ಕ್ರಿಪ್ಟ್ ಪೂಜೆ ನೆರವೇರಿತು.‌ ಶನೀಶ್ವರ ದೇವಾಲಯದಲ್ಲಿ ಪೂಜೆ ಬಳಿಕ ಗೋವಿಂದ ಪೈ ಅವರ ನಿವಾಸದಲ್ಲಿ ಸಮಾರಂಭ ಜರುಗಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಂಗಳೂರು ಪೊಲೀಸ್ ಕಮಿಷನರ್ ಮಾತನಾಡಿ, “ರೌಡಿಸಂ‌ ಸಿನಿಮಾಗಳಿಗಿಂತ ಇಂತಹ ಒಳ್ಳೆಯ ಸಂದೇಶ ನೀಡುವ ಸಿನಿಮಾಗಳು ಬರಬೇಕು. ಸಮಾಜಕ್ಕೆ ಕೊಡುಗೆ ನೀಡಿದವರ ಜೀವನಗಾಥೆ ಎಲ್ಲರಿಗೂ ಆದರ್ಶ. ಗೋವಿಂದ ಪೈ ಅವರ ಬಯೋಪಿಕ್ ನಿರ್ಮಿಸುತ್ತಿರುವ ರಘುಭಟ್ ಹಾಗೂ ಇಡೀ‌ ತಂಡಕ್ಕೆ ಶುಭವಾಗಲಿ” ಎಂದು ಹಾರೈಸಿದರು.

ಎಡೆನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಅವರು ‌ಮಾತನಾಡಿ, “ಗೋವಿಂದ ಪೈ ಅವರ ಮೇಲೆ ನನಗೆ ವಿಶೇಷ ಅಭಿಮಾನ. ಕಾರ್ಯಕ್ರಮಕ್ಕೆ ಭೇಟಿ ಮಾಡಿ ಆಹ್ವಾನಿಸುತ್ತೇವೆ ಎಂದು ರಘುಭಟ್ ಹೇಳಿದಾಗ, ಅದಕ್ಕಾಗಿ ಬರುವುದು ಬೇಡ. ಇಂತಹ ಕಾರ್ಯಕ್ರಮಕ್ಕೇ ಬಂದೇ ಬರುತ್ತೇನೆಂದು ಬಹಳ ಖುಷಿಯಿಂದ ಆಗಮಿಸಿದ್ದೇನೆ” ಎನ್ನುತ್ತಲೇ ಚಿತ್ರತಂಡವನ್ನು ಆಶೀರ್ವದಿಸಿ, ಯಶಸ್ಸು ಸಿಗಲಿ ಎಂದು ಹಾರೈಸಿದರು.
ಮಂಜೇಶ್ವರದ ವಿನ್ಸೆಂಟ್ ಚರ್ಚ್‌ನ ವಿನೋದ್ ಸಾಲ್ಡಾನ್ಹಾ ಮಾತನಾಡಿ, “ಗೋವಿಂದ ಪೈ ಅವರು 22 ಭಾಷೆಗಳನ್ನು ಬಲ್ಲವರಾಗಿದ್ದರು. ಸರ್ವಧರ್ಮ ಸಹಿಷ್ಣುವಾಗಿದ್ದರು.‌ಅಂತಹ ಮಹಾನ್ ವ್ಯಕ್ತಿ ನಮ್ಮವರು ಎಂಬುದೇ ಹೆಮ್ಮೆ ಎಂದು ಹೇಳಿದರು. ಮಹಾಕವಿ ಕಥೆ , ಚಿತ್ರಕಥೆ ಮತ್ತು ಸಂಭಾಷಣಾಗಾರ ಹಿರಿಯ ಸಿನಿಮಾ ಪತ್ರಕರ್ತರಾದ ಗಣೇಶ್ ಕಾಸರಗೋಡು ಮಾತನಾಡಿ, “ಸಿನಿಮಾಕ್ಕೆ ಬರೆಯುವ ಅವಕಾಶ ಕೊಟ್ಟ ರಘುಭಟ್ ಅವರಿಗೆ ಧನ್ಯವಾದಗಳು.‌ ಇಡೀ ತಂಡವಾಗಿ ಒಂದೊಳ್ಳೆ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಿನಿಮಾ ಅದ್ಭುತವಾಗಿ ಮೂಡಿಬರಬೇಕೆಂಬುದು ನನ್ನಾಸೆ. ಆ ನಿಟ್ಟಿನಲ್ಲಿ ನಾನೂ ಶ್ರಮಿಸುತ್ತೇನೆ ಎಂಬುದು ಅವರ ಮಾತು.

ನಟ ವಿಕ್ರಂ ಸೂರಿ ಮಾತನಾಡಿ, “ಕಮರ್ಷಿಯಲ್ ಸಿನಿಮಾ ಜಗತ್ತಿನಲ್ಲಿ ರಘುಭಟ್ ಇಂತಹ ವಿಭಿನ್ನ ಪ್ರಯತ್ನ, ಸಾಹಸದ ಮೂಲಕ ಹೊಸದೇನಾದರು ಮಾಡಬೇಕು ಎಂಬ ಉತ್ಸಾಹದಲ್ಲಿದ್ದಾರೆ. ದುಡ್ಡು ಮಾಡುವ ಇರಾದೆ ಇದ್ದಿದ್ದರೆ ಕಮರ್ಷಿಯಲ್ ಸಿನಿಮಾಗಳಿಗೇ ಬಂಡವಾಳ ಸುರಿಯಬಹುದಿತ್ತು. ಆದರೆ ತನ್ನೂರಿ‌ನ ಕವಿಯ ಬಯೋಪಿಕ್ ಮಾಡಲು ಹೊರಟಿದ್ದಾರೆ. ನಾನು ಸ್ನೇಹಿತನಾಗಿ, ಸಿನಿಮಾರಂಗದವನಾಗಿ ಸದಾ ಜೊತೆಗಿರುತ್ತೇನೆ. ಒಂದೇ‌ ಒಂದು ರೂ. ಸಂಭಾವನೆ ಪಡೆಯದೆ ತಂಡದೊಂದಿಗೆ ಮಹಾಕವಿ ಸಿನಿಮಾಕ್ಕಾಗಿ ಶ್ರಮಿಸುತ್ತೇನೆ ಎಂದರು.
ನಟಿ ನಮಿತಾ ರಾವ್ ಮಾತನಾಡಿ, “ರಘುಭಟ್ ಅವರಿಂದ ನಾವೂ ಮಂಜೇಶ್ವರದ ಮಕ್ಕಳೇ ಆಗಿದ್ದೇವೆ. ನಮ್ಮೂರಿ‌ನ ಕೀರ್ತಿ ಕಳಶ ಗೋವಿಂದ ಪೈ ಅವರ ಬಯೋಪಿಕ್ ತರುತ್ತಿರುವ ರಘುಭಟ್ ಅವರಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು.

Related Posts

error: Content is protected !!