ಚಿತ್ರರಂಗಕ್ಕೆ ಅರ್ಧ ಭರ್ತಿ ಶಾಕ್‌! ಸರ್ಕಾರ ವಿರುದ್ಧ ಸ್ಯಾಂಡಲ್‌ವುಡ್‌ ಸ್ಟಾರ್ಸ್‌ ಗರಂ

ಚಿತ್ರರಂಗದಿಂದ ಬಿಎಸ್‌ವೈ ಭೇಟಿ ಮಾಡಲು ನಿರ್ಧಾರ:ಈ ಕುರಿತಂತೆ ನಾಳೆ (ಶನಿವಾರ) ಬೆಳಗ್ಗೆ ಸಿನಿಮಾರಂಗದ ಕಲಾವಿದರು ಸೇರಿ ಸಿಎಂ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಶೇ.50ರಷ್ಟು ಚಿತ್ರಮಂದಿರ ಭರ್ತಿಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸ್ಟಾರ್‌ ನಟರು ಸೇರಿ ಸರ್ಕಾರದ ಜೊತೆ ಮಾತುಕತೆ ನಡೆಸಲು ತೀರ್ಮಾನಿಸಿದ್ದಾರೆ. ಕೂಡಲೇ ಪ್ರಸ್ತಾವನೆ ಕೈ ಬಿಡಬೇಕು ಎಂದು ಮನವಿ ಮಾಡುವುದಾಗಿ ಹೇಳಿದ್ದಾರೆ

ಈಗಷ್ಟೇ ಚಿತ್ರರಂಗ ಚೇತರಿಸಿಕೊಳ್ಳುತ್ತಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕೊರೊನಾ ಒಕ್ಕರಿಸಿ ಆತಂಕ ಸೃಷ್ಟಿಸಿತ್ತಲ್ಲದೆ, ಲಾಕ್‌ಡೌನ್‌ಗೂ ಕಾರಣವಾಗಿ ಎಲ್ಲರ ಬದುಕನ್ನೇ ಬರಡಾಗಿಸಿದ್ದು ಸುಳ್ಳಲ್ಲ. ಈಗ ಮತ್ತದೇ ಆತಂಕ ಶುರುವಾಗುತ್ತಿದೆ! ಹೌದು, ಇದು ನಿಜ ಕೂಡ. ಕೊರೊನಾ ಹಾವಳಿ ನಿಯಂತ್ರಣವಾಗುತ್ತಿದ್ದಂತೆ ಎಲ್ಲವೂ ಸಹಜ ಸ್ಥಿತಿಗೆ ಬಂದಿದ್ದೇನೋ ಸತ್ಯ. ಆದರೆ, ಈಗ ದಿನ ಕಳೆದಂತೆ ಮತ್ತೆ ಕೊರೊನಾ ಪಾಸಿಟಿವ್‌ ಕೇಸುಗಳು ಹೆಚ್ಚುತ್ತಿವೆ. ಸರ್ಕಾರ ಕೂಡ ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗುತ್ತಿದೆ. ಬೆಳವಣಿಗೆಯೊಂದರಲ್ಲಿ ಬಿಬಿಎಂಪಿ ಕಣ್ಣು ಈಗ ಸ್ಯಾಂಡಲ್‌ವುಡ್‌ ಮೇಲೆ ಬಿದ್ದಿದೆ.

ಹೌದು, ಬಿಬಿಎಂಪಿ ಶೇ.50ರಷ್ಟು ಥಿಯೇಟರ್‌ ಭರ್ತಿಗೆ ಸಂಬಂಧಿಸಿದಂತೆ ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿದೆ. ಒಂದು ವೇಳೆ ರಾಜ್ಯ ಸರ್ಕಾರ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ, ಶೇ.50ರಷ್ಟು ಚಿತ್ರಮಂದಿರ ಭರ್ತಿಗೆ ಅವಕಾಶ ಕೊಟ್ಟರೆ, ಖಂಡಿತವಾಗಿಯೂ ಚಿತ್ರರಂಗ ಮೇಲೇಳಲು ವರ್ಷಗಳೇ ಬೇಕಾದೀತು. ಕಳೆದ ಒಂದು ವರ್ಷದ ಕೊರೊನಾ ಹೊಡೆತಕ್ಕೆ ಇನ್ನೂ ಚಿತ್ರರಂಗ ಚೇತರಿಸಿಕೊಂಡಿಲ್ಲ. ಮತ್ತೆ ಕೊರೊನಾ ಹಾವಳಿ ಎದುರಾಗಿ ಏನಾದರೊಂದು ಸಮಸ್ಯೆಗೆ ಕಾರಣವಾಗಿಬಿಟ್ಟರೆ, ಚಿತ್ರರಂಗವನ್ನೇ ನಂಬಿದವರ ಪಾಡೇನು ಎಂಬ ಪ್ರಶ್ನೆ ಈಗ ಎದುರಾಗಿದೆ.

ಸದ್ಯಕ್ಕೆ ಬಿಬಿಎಂಪಿ ಆಯುಕ್ತರು ಈ ಪ್ರಸ್ತಾವನೆ ಇಟ್ಟಿದ್ದಾರೆ. ಇದರ ವಿರುದ್ಧ ಚಿತ್ರರಂಗದ ಸ್ಟಾರ್‌ ನಟರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾವಿರಾರು ಜನರಿಗೆ ಪ್ರತಿಭಟನೆ ಮಾಡಲು ರ್ಯಾಲಿ ನಡೆಸಲು ಅವಕಾಶ ಕೊಡಲಾಗುತ್ತಿದೆ. ಆದರೆ, ನಮಗೆ ಯಾಕೆ ಈ ರೀತಿಯ ಹೊಣೆ ಹೊರಿಸಲಾಗುತ್ತಿದೆ ಎಂದು ಗರಂ ಆಗಿದ್ದಾರೆ. ಈ ನಿಟ್ಟಿನಲ್ಲಿ ಪುನೀತ್‌ ರಾಜಕುಮಾರ್‌ ಕೂಡ ಬೇಸರ ವ್ಯಕ್ತಪಡಿಸಿದ್ದು, ಆ ಕುರಿತು ಸಿಎಂ ಭೇಟಿ ಮಾಡಲು ನಿರ್ಧರಿಸಿದ್ದಾರೆ. “ಶೇ. 100 ಇದ್ದರೆ ಒಳ್ಳೆಯದು. ಎಲ್ಲರ ಆರೋಗ್ಯ ಮುಖ್ಯ. ಮಾಸ್ಕ್‌ ಧರಿಸಿ, ಚಿತ್ರಮಂದಿರ ಮೇಂಟೈನ್‌ ಮಾಡುತ್ತಿದ್ದಾರೆ. ಶೇ.100 ಬೇಕು. ಶೇ.50 ಆಗಿಬಿಟ್ಟರೆ, ಸಿಕ್ಕಾಪಟ್ಟೆ ಎಫೆಕ್ಟ್‌ ಆಗುತ್ತೆ. ಈವೆಂಟ್‌ಗೆ ಬ್ರೇಕ್‌ ಇರಲಿ, ಆದರೆ, ಚಿತ್ರಮಂದಿರಗಳಿಗೆ ಈ ರೀತಿಯ ರೂಲ್ಸ್‌ ಬೇಡ. ಸಿನಿಮಾ ನೋಡಲು ಬರುವ ಜನರು ಭಯ ಬೇಡ. ತೊಂದರೆ ಆಗಲ್ಲ. ಎಲ್ಲರೂ ಮಾಸ್ಕ್‌ ಧರಿಸಿ” ಎಂದಿದ್ದಾರೆ.‌

ಧನಂಜಯ್‌, ಹಸಿವು ದೊಡ್ಡ ಡೇಂಜರ್‌, ಸಿನಿಮಾ ಅಲ್ಲ, ಎಲ್ಲಾ ಕ್ಷೇತ್ರ. ನಾರ್ಮಲ್‌ ಆಗಿ ಬದುಕು ಶುರುವಾಗುತ್ತಿದೆ. ವೈರಸ್‌ ಇದ್ದರೂ, ನಾವು ಬದುಕುತ್ತಿದ್ದೇವೆ. ವ್ಯಾಕ್ಸಿನ್‌ ಬಂದಿದೆ. ಆದರೂ ಚಿತ್ರಮಂದಿರಗಳಿಗೆ ಶೇ.೫೦ರಷ್ಟು ಅವಕಾಶ ಕೊಟ್ಟರೆ, ಸಮಸ್ಯೆ ಆಗುತ್ತೆ. ಎಷ್ಟೋ ಚಿತ್ರಗಳು ಈಗ ಶುರವಾಗಿವೆ. ಕುಟುಂಬಗಳು ಅವಲಂಬಿತಗೊಂಡಿವೆ. ನಿರ್ಮಾಪಕರು ಸಮಸ್ಯೆಗೆ ಸಿಲುಕುತ್ತಾರೆ. ಎಲ್ಲರೂ ಸೇರಿ ಮನವಿ ಮಾಡ್ತೀವಿ. ಜನರು ಈಗ ಬಂದು ಸಿನಿಮಾ ನೋಡುತ್ತಿದ್ದಾರೆ. ಮುಂಜಾಗ್ರತೆ ವಹಿಸಿದ್ದಾರೆ. ಸರ್ಕಾರ ಈ ಬಗ್ಗೆ ಗಮನಿಸಬೇಕು” ಎಂದಿದ್ದಾರೆ. ಇವರ ಮಾತಿಗೆ “ದುನಿಯಾ” ವಿಜಯ್‌, ಪ್ರೇಮ್‌, ಡಾಲಿ ಧನಂಜಯ್ ಕೂಡ ಧ್ವನಿಯಾಗಿದ್ದಾರೆ.

ಚಿತ್ರರಂಗದಿಂದ ಬಿಎಸ್‌ವೈ ಭೇಟಿ ಮಾಡಲು ನಿರ್ಧಾರ:ಈ ಕುರಿತಂತೆ ನಾವು ನಾಳೆ ಬೆಳಗ್ಗೆ ಸಿನಿಮಾರಂಗದ ಕಲಾವಿದರು ಸೇರಿ ಸಿಎಂ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಶೇ.50ರಷ್ಟು ಚಿತ್ರಮಂದಿರ ಭರ್ತಿಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸ್ಟಾರ್‌ ನಟರು ಸೇರಿ ಸರ್ಕಾರದ ಜೊತೆ ಮಾತುಕತೆ ನಡೆಸಲು ತೀರ್ಮಾನಿಸಿದ್ದಾರೆ. ಕೂಡಲೇ ಪ್ರಸ್ತಾವನೆ ಕೈ ಬಿಡಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದಿದ್ದಾರೆ ಪುನೀತ್.

‌ಸದ್ಯಕ್ಕೆ ಈ ನಿರ್ಧಾರದಿಂದ ಸ್ಯಾಂಡಲ್‌ವುಡ್‌ ಅಸಮಾಧಾನಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಆಯ್ತಕ್ತರು ಸರ್ಕಾರದ ಮುಂದೆ ಪ್ರಸ್ತಾವನೆ ಇಡಲಾಗಿದೆ. ಸರ್ಕಾರ ಆ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದಿದ್ದಾರೆ. ಅದೇನೆ ಇರಲಿ, ಇಲ್ಲಿ ಕಾರ್ಮಿಕ ವರ್ಗ ದೊಡ್ಡದಿದೆ. ಸಿನಿಮಾರಂಗವನ್ನೇ ನಂಬಿ ಬದುಕು ಕಟ್ಟಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಿದೆ. ಪುನಃ‌ ಶೇ.೫೦ರಷ್ಟು ಚಿತ್ರಮಂದಿರ ಭರ್ತಿಗೆ ಅವಕಾಶ ಕೊಟ್ಟರೆ, ಖಂಡಿತವಾಗಿಯೂ ಇದು ದೊಡ್ಡ ಸಮಸ್ಯೆಗೆ ಕಾರಣವಾಗುವುದಂತೂ ನಿಜ.‌

ಈಗಾಗಲೇ ಹಲವು ಚಿತ್ರತಂಡಗಳು ಬಿಡುಗಡೆಯ ಲೆಕ್ಕಾಚಾರ ಹಾಕಿಕೊಂಡಿವೆ. ಪುನೀತ್‌ ರಾಜಕುಮಾರ್‌ ಅಭಿನಯದ “ಯುವರತ್ನ” ಚಿತ್ರ ಬಿಡುಗಡೆ ಅನೌನ್ಸ್‌ ಮಾಡಿದೆ. “ಕೋಟಿಗೊಬ್ಬ 3”, “ಕೆಜಿಎಫ್‌2”, “ಸಲಗ” ಚಿತ್ರಗಳ ಜೊತೆ ಸಾಕಷ್ಟು ಸಿನಿಮಾಗಳು ರೆಡಿಯಾಗಿವೆ. ಬಿಡುಗಡೆ ದಿನವನ್ನು ಘೋಷಿಸಿಕೊಂಡಿವೆ. ಈಗ ಇದ್ದಕ್ಕಿದ್ದಂತೆ ಶೇ.೫೦ರಷ್ಟು ಚಿತ್ರಮಂದಿರಗಳ ಭರ್ತಿಗೆ ಪ್ರಸ್ತಾವನೆ ಇಟ್ಟರೆ, ಸಿನಿಮಾರಂಗ ಮತ್ತಷ್ಟು ಗಂಭೀರ ಸ್ಥಿತಿ ಎದುರಿಸಬೇಕಾಗುತ್ತದೆ. ಚಿತ್ರರಂಗವನ್ನೇ ನಂಬಿದವರ ಬದುಕು ಅಕ್ಷರಶಃ ಬೀದಿಪಾಲಾಗುತ್ತದೆ. ಅಂದಾಜಿನ ಪ್ರಕಾರ ಮುನ್ನೂರಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಕಳೆದ ವರ್ಷ ಬಿಡುಗಡೆ ಆಗಬೇಕಿದ್ದ ಸಿನಿಮಾಗಳು ಈಗ ಸ್ವಲ್ಪ ಸುಧಾರಿಸಿಕೊಂಡು ಬರುವ ತಯಾರಿಯಲ್ಲಿವೆ. ಈಗ ನೋಡಿದರೆ, ಪುನಃ ಕೊರೊನಾ ಭಯ ಹುಟ್ಟಿಸುತ್ತಿದೆ. ಹೀಗಾದರೆ, ಹೊಸ ನಿರ್ಮಾಪಕರ ಗತಿ ಏನು? ಸಿನಿಮಾವನ್ನೇ ನಂಬಿ ಹಣ ಹಾಕಿದವರ ಸ್ಥಿತಿ ಏನಾಗಬೇಡ?
ಒಂದು ಸಿನಿಮಾ ಮಾಡುವ ಕಷ್ಟ, ನಿರ್ಮಾಪಕರಿಗಷ್ಟೇ ಗೊತ್ತು. ಎಲ್ಲಿಂದಲೋ ಹಣ ತಂದು, ಸಾಲ ಮಾಡಿ, ಬಡ್ಡಿ ಕಟ್ಟಿ, ಸಿನಿಮಾ ಮಾಡುತ್ತಾನೆ. ಆದರೆ, ಆ ಹಣ ಹಿಂದಿರುಗುತ್ತದೆ ಎಂಬ ಯಾವ ಗ್ಯಾರಂಟಿಯೂ ಇರೋದಿಲ್ಲ. ಒಂದು ಸಿನಿಮಾ ಶುರುವಾದರೆ, ನೂರಾರು ಕುಟುಂಬ ಬದುಕು ಕಟ್ಟಿಕೊಳ್ಳುತ್ತೆ. ಆದರೆ, ಸಿನಿಮಾ ನಿರ್ಮಾಪಕನಿಗೇ ದೊಡ್ಡ ಪೆಟ್ಟು ಬಿದ್ದರೆ, ಅಂತಹ ಕುಟುಂಬಗಳೂ ಪೆಟ್ಟು ತಿನ್ನುತ್ತವೆ. ಬಹಳಷ್ಟು ಸರ್ಕಸ್‌ಮಾಡಿಯೇ ನಿರ್ಮಾಪಕ ಸಿನಿಮಾ ಮುಗಿಸಿರುತ್ತಾನೆ. ಇನ್ನೇನು ರಿಲೀಸ್‌ಗೆ ಸಜ್ಜಾಗುತ್ತಿರುವ ಹೊತ್ತಿಗೆ ಮತ್ತೊಂದು ಆತಂಕದ ತೂಗುಕತ್ತಿ ನೇತಾಡುತ್ತಿರುವುದು ನಿಜಕ್ಕೂ ಬೇಸರದ ವಿಷಯ. ಸದ್ಯಕ್ಕೆ ಸರ್ಕಾರದ ಮುಂದೆ ಪ್ರಸ್ತಾವನೆ ಇದೆ. ಸರ್ಕಾರ ಈ ಬಗ್ಗೆ ಗಮನಿಸಿ, ಈಗ ಇರುವ ಆದೇಶ ಮುಂದುವರೆಸಿದರೆ, ಸಿನಿಮಾರಂಗಕ್ಕೆ ಕೊಡುವ ದೊಡ್ಡ ಕೊಡುಗೆ.

Related Posts

error: Content is protected !!