Categories
ಸಿನಿ ಸುದ್ದಿ

ರಿಯಲ್‌ಸ್ಟಾರ್‌ಗೆ ರಚ್ಚು ಮತ್ತೆ ಜೊತೆಯಾಗುತ್ತಾರಾ? ಇಬ್ಬರು ಕೂಡಿ`ನಾನು-ನೀನು’ ಕಥೆ ಹೇಳ್ತಾರಾ ?

ಸ್ಟಾರ್ ಸಿನಿಮಾಗಳು ಅನೌನ್ಸ್ ಆದಾಗ ಸಹಜವಾಗಿ ಹೀರೋಯಿನ್ ಯಾರಿರಬಹುದು ಅಂತ ಚರ್ಚೆಯಾಗುತ್ತೆ.ಅವರು ಬರ್ತಾರೆ, ಇವರು ಇರ್ತಾರೆ ಅಂತ ಗಾಸಿಪ್ ಟೋಪಿ ಹಾಕಿಕೊಂಡಿರುವ ಸುದ್ದಿ, ಇಡೀ ಗಾಂಧಿನಗರದ ತುಂಬೆಲ್ಲಾ ಡಂಕಣಕ ಡಂಕಣಕ ಅಂತ ನಾಲ್ಕು ಸ್ಟೆಪ್ ಹಾಕಿಕೊಂಡು ಓಡಾಡಿಕೊಂಡು ಬರುತ್ತೆ. ಆದರೆ, ಉಪ್ಪಿಯ ಹೊಸ ಚಿತ್ರ ಎನ್ನಲಾದ, ನಾಮದ ಸಿಂಬಲ್‌ನಿಂದಲೇ ಕರ್ನಾಟಕ ರೌಂಡ್ ಹೊಡೆಯುತ್ತಿರುವ ಸೂಪರ್‌ಸ್ಟಾರ್ ಚಿತ್ರಕ್ಕೆ, ಗುಳಿಕೆನ್ನೆ ಸುಂದರಿ ರಚಿತರಾಮ್ ಹೀರೋಯಿನ್ ಆಗ್ಬೋದು ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮೂಲಕ ಧೂಳೆಬ್ಬಿಸುತ್ತಿದೆ.

ರಿಯಲ್‌ಸ್ಟಾರ್ ಹೊಸ ಚಿತ್ರಕ್ಕೆ ರಚ್ಚುನೇ ಹೀರೋಯಿನ್ನ್ ಎನ್ನುವುದಕ್ಕೆ ಏಕೈಕ ಕಾರಣ ನಾಮದ ಸಿಂಬಲ್. ಬುದ್ದಿವಂತ ಉಪ್ಪಿಯವರು ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡ್ತಾರೆ ಎನ್ನಲಾದ ಪೋಸ್ಟರ್ ಲೀಕ್ ಆಗಿದೆ. `ಪಂಗನಾಮದ’ ಸಿಂಬಲ್ ಇರುವ, ನೀನು ಮತ್ತು ನಾನು ಕಥೆಯನ್ನ ಹೇಳುತ್ತಿರುವ ಫಸ್ಟ್ ಲುಕ್ ಪೋಸ್ಟರ್‌ಗೂ, ರಚ್ಚು ಮೇಡಂ ಹಣೆಗೆ ನಾಮಹಾಕಿಸಿಕೊಂಡಿರುವ ಪೋಟೋಗೂ ಸಿಂಕ್ ಆಗ್ತಿರೋದ್ರಿಂದ ಟ್ರೋಲ್‌ಹೈಕ್ಳು ಉಪ್ಪಿದಾದನ ಮಹಾಮೂವೀಗೆ ಬುಲ್‌ಬುಲ್‌ಬೆಡಗಿ ಜೊತೆಯಾಗಬಹುದು ಅಂತ ಟ್ರೋಲ್ ಮಾಡ್ತಿದ್ದಾರೆ.

ಇತ್ತೀಚೆಗೆ ಡಿಂಪಲ್ ಬೆಡಗಿ ರಚಿತ ಮನೆದೇವರ ದರ್ಶನ ಪಡೆದಿದ್ದರು. ಮೇಲುಕೋಟೆ ಚೆಲುವ ನಾರಾಯಣಸ್ವಾಮಿ ಸನ್ನಿಧಿಗೆ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದ ರಚಿತಾ, ಹಣೆಗೆ ನಾಮ ಹಾಕಿಸಿಕೊಂಡು ಬಂದಿದ್ದರು. ಫೋಟೋ ಸಮೇತ ಸೋಷಿಯಲ್ ಪೇಜ್‌ಗೆ ಅಪ್‌ಲೋಡ್ ಮಾಡಿದ್ರು. ಅದೇ ಫೋಟೋನಾ ಇಟ್ಕೊಂಡು ಟ್ರೋಲ್ ಎಕ್ಸ್ ಪರ್ಟ್ ಗಳು ಈಗ ರಿಯಲ್‌ಸ್ಟಾರ್ ಅಪ್‌ಕಮ್ಮಿಂಗ್ ಡೈರೆಕ್ಷನ್ ಸಿನಿಮಾಗೆ ರಚ್ಚು ನಾಯಕಿಯಾಗ್ತಾರೆ ಅಂತ ಸುದ್ದಿ ಹಬ್ಬಿಸುತ್ತಿದ್ದಾರೆ. ಇತ್ತ, ಸೂಪರ್‌ರಂಗನ ಫ್ಯಾನ್ಸ್ ಟ್ರೋಲ್ ನಿಜ ಆಗಲಿ ಬಿಡಿ, ಮತ್ತೆ ನಮ್ಮ ಬಾಸ್ ಜೊತೆ ರಚ್ಚು ಕುಣಿಯಲಿ ಎನ್ನುತ್ತಿದ್ದಾರೆ.

ಈಗಾಗಲೇ ಉಪ್ಪಿ ಹಾಗೂ ರಚ್ಚು ಜೋಡಿ ಕಿಕ್ಕೇರಿಸಿದೆ. ಇವರಿಬ್ಬರ ಕೆಮಿಸ್ಟ್ರಿ ಎಕ್ಕಾಮಕ್ಕಾ ವರ್ಕೌಟ್ ಆಗಿದೆ. ಐ ಲವ್ ಯೂ' ಸಿನಿಮಾದ ಮೂಲಕ ಬೆಳ್ಳಿತೆರೆ ಮೇಲೆ ದಿಬ್ಬಣ ಹೊರಟ ಈ ಜೋಡಿಗೆ ಫ್ಯಾನ್ಸ್ ಮುತ್ತಿನಹಾರ ಹಾಕಿದ್ದರು.ಬಂಗಾರದಲ್ಲಿ ಬೊಂಬೆ ಮಾಡಿದ, ಆ ರಂಭೆಗಿಂತ ರಂಗು ನೀಡಿದ, ಭೂಮಿಗೆ ತಂದು ನಿನ್ನ ನಂಗೆ ನೀಡಿದ’. ಸೌಂದರ್ಯವೆಲ್ಲಾ ಒಟ್ಟುಗೂಡಿಸಿ, ಶೃಂಗಾರದಲ್ಲಿ ನಿನ್ನ ರೂಪಿಸಿ, ಆ ಬ್ರಹ್ಮ ಭಾರೀ ರಸಿಕ ನಿನ್ನ ಮಾಡಿದ.. ಹೀಗೆ ಬುಲ್‌ಬುಲ್ ಬ್ಯೂಟಿನಾ ಉಪ್ಪಿ ವರ್ಣಿಸುತ್ತಾ ಪಡ್ಡೆಹೈಕ್ಳಿಗೆ ನಶೆಯೇರಿಸಿದ್ದಲ್ಲದೇ, ಬಾಕ್ಸ್ಆಫೀಸ್ ಹೆಡ್‌ಆಫೀಸ್ನೇ ಶೇಕ್ ಶೇಕ್ ಮಾಡಿದ್ದರು. ಈಗ ಮತ್ತೆ ಇವರಿಬ್ಬರು ಒಂದಾಗಿ `ನಾನು-ನೀನು’ ಕಥೆ ಹೇಳಿದರೆ ಸುನಾಮಿ-ಸುಂಟರಗಾಳಿ ಎಲ್ಲಾ ಒಟ್ಟೊಟ್ಟಿಗೆ ಏಳುತ್ತೆ

ಸೂಪರ್‌ಸ್ಟಾರ್ ಉಪ್ಪಿ ಸಿನಿಮಾಗೆ ರಚಿತಾ ಜೊತೆಯಾಗುವ ಚಾನ್ಸನ್ ಕೊಂಚ ಕಮ್ಮಿನೇ. ಯಾಕಂದ್ರೆ, `ಐ ಲವ್ ಯೂ’ ಚಿತ್ರದಲ್ಲಿ ಉಪೇಂದ್ರರ ಜೊತೆ ರಚಿತಾ ಮೇಡಂ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಹಿಂದೆಂದೂ ಕಾಣದ ಹಸಿಬಿಸಿ ದೃಶ್ಯಗಳಲ್ಲಿ ಮಿಂದೆದ್ದ ಮೇಲೆ ನಾನು ಅಷ್ಟೊಂದು ಹಾಟ್ ಆಗಿ ಕಾಣಿಸಿಕೊಳ್ಳಬಾರದಿತ್ತು ಎಂದು ರಚಿತಾ ಬೇಸರಪಟ್ಟುಕೊಂಡಿದ್ದರು ಮಾತ್ರವಲ್ಲ ಕಣ್ಣೀರಾಕಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ ಪ್ರಿಯಾಂಕ ಮೇಡಂ ಆಕ್ಟ್ ಮಾಡಬೇಕಾದರೆ ಗೊತ್ತಿರಲಿಲ್ಲವಾ? ಉಪ್ಪಿ ಮೇಲೆ ಬ್ಲೇಮ್ ಮಾಡ್ತಾರಲ್ಲ ಇದು ಸರೀನಾ ಅಂತ ಕೊಂಚ ಗರಂ ಆಗಿದ್ದರು. ಹೀಗಾಗಿ, ದುಬೈ ಬಾಬುಗೆ ಜಗ್ಗುದಾದನ ಸುಂದರ ಜೊತೆಯಾಗೋದು ಡೌಟೇಯಾ.

ಹಾಗಾದ್ರೆ, ಉಪ್ಪಿಯ ಮೋಸ್ಟ್ ಎಕ್ಸ್ ಪೆಕ್ಟೆಡ್ ಅಪ್‌ಕಮ್ಮಿಂಗ್ ಚಿತ್ರಕ್ಕೆ ನಾಯಕಿ ಯಾರಾಗಬಹುದಾ? ಪ್ಯಾನ್ ಇಂಡಿಯಾ ಲೆವೆಲ್ ಪ್ರಾಜೆಕ್ಟ್ ಗೆ ಕೈಹಾಕಿರುವ ಸಿನಿಮಾಗೆ ಪರಭಾಷೆಯ ನಾಯಕಿ ಬರಬಹುದಾ ಅಥವಾ ಹೋಮ್‌ಮಿನಿಸ್ಟರ್ ಪ್ರಿಯಾಂಕ ಅವರೇ ಬಣ್ಣ ಹಚ್ಚಬಹುದಾ? ಈ ಕೂತೂಹಲದ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ‘ಪಂಗನಾಮದ'ಪೋಸ್ಟರ್‌ಗೆ ಬುದ್ದಿವಂತ ಇನ್ನೂ ಅಧಿಕೃತ ಮುದ್ರೆ ಹೊತ್ತಿಲ್ಲ.ಇನ್ನೆರಡು ದಿನದಲ್ಲಿ ಉಪ್ಪಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ತಾರೆ.ಬಹುಷಃ ಅದೇ ದಿನ ಅದ್ಧೂರಿಯಾಗಿ ತಮ್ಮ ಮುಂದಿನ ಚಿತ್ರದ ಬಗ್ಗೆ ಕಂಪ್ಲೀಟ್ ಅಪ್‌ಡೇಟ್ ಕೊಡಬಹುದು.ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ನಿರ್ಮಾಣದ ಜೊತೆಗೆ ಅವರೇ ನಾಯಕನಾಗುತ್ತಾರಾ ಅಥವಾ ಅಣ್ಣನ ಮಗ ನಿರಂಜನ್‌ಗೆ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಕೂತೂಹಲವೂ ಮೂಡಿದೆ.ಜಸ್ಟ್ ಒಂದೇ ಒಂದು ಸಿಂಬಲ್ ಇಷ್ಟೆಲ್ಲಾ ಕೌತುಕಕ್ಕೆ ಕಾರಣವಾಗಿದೆ.ದೇವನೊಬ್ಬ ನಾಮಹಲವು ಎನ್ನುವಂತೆ ಎರಡು ವೈಟ್ ಒಂದು ರೆಡ್ಡು ಇರುವ ಸಿಂಬಲ್’ ಹಲವು ಸುದ್ದಿಮಾಡುವಂತೆ ಮಾಡಿದೆ. ಎಲ್ಲದಕ್ಕೂ ೧೮ರಂದು ಬ್ರೇಕ್ ಬೀಳಲಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!