ನಟ ಧನ್ವೀರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ವಾಮನ” ಚಿತ್ರದ ಆಕ್ಷನ್ ಟೀಸರ್ ಆಗಸ್ಟ್ 17 ರಂದು ಮೈಸೂರಿನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಹಿಟ್ ಆಗಿದೆ. ಸದ್ಯ ಆಕ್ಷನ್ ಟೀಸರ್ ಬಿಡುಗಡೆಯಾಗಲಿದ್ದು, ಅದೇ ದಿನ ಚಿತ್ರತಂಡದಿಂದ ಬಿಗ್ ಅನೌನ್ಸ್ ಮೆಂಟ್ ಸಹ ಇದೆ.
EQUINOX GLOBAL ENTERTAINMENT ಲಾಂಛನದಲ್ಲಿ ಚೇತನ್ ಗೌಡ ಅವರು ನಿರ್ಮಿಸಿರುವ ಮೊದಲ ಚಿತ್ರವಿದು.
ಶಂಕರ್ ರಾಮನ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ನೀಡಿದ್ದಾರೆ. ಮಹೇನ್ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನವಿದೆ.
ಭೂಷಣ್ ನೃತ್ಯ ನಿರ್ದೇಶನ, ಅರ್ಜುನ್ ರಾಜ್, ವಿಕ್ರಂ ಮೋರ್ ಹಾಗೂ ಜಾಲಿ ಬಾಸ್ಟಿನ್ ಸಾಹಸ ನಿರ್ದೇಶನ ಹಾಗೂ ನವೀನ್ ಹಾಡೋನಳ್ಳಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಧನ್ವೀರ್ ಅವರಿಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ತಾರಾ, ಸಂಪತ್ ರಾಜ್, ಆದಿತ್ಯ ಮೆನನ್, ಅವಿನಾಶ್, ಅಚ್ಯುತಕುಮಾರ್, ಕಾಕ್ರೋಜ್ ಸುಧಿ, ಪೆಟ್ರೋಲ್ ಪ್ರಸನ್ನ, ಶಿವರಾಜ್ ಕೆ.ಆರ್ ಪೇಟೆ, ಕೆ.ಜಿ.ಸಚ್ಚು, ಅರುಣ್ ಶ್ರೀರಾಮಯ್ಯ ಮುಂತಾದವರು “ವಾಮನ” ಚಿತ್ರದ ತಾರಾಬಳಗದಲ್ಲಿದ್ದಾರೆ.
ಹಲವು ಪ್ರೇಮಕಥೆಯಾಧಾರಿತ ಚಿತ್ರಗಳು ಮತ್ತು ಹಾಡುಗಳಲ್ಲಿ ಅಭಿನಯಿಸುವ ಮೂಲಕ ‘ಕಿಂಗ್ ಆಫ್ ರೊಮ್ಯಾನ್ಸ್’ ಎಂಬ ಬಿರುದಿಗೆ ಭಾಜನರಾದವರು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್. ಆ ಬಿರುದನ್ನು ನಿಜಗೊಳಿಸುವಂತೆ ಅವರು ಇನ್ನೊಮ್ಮೆ ಒಂದು ಅದ್ಭುತ ಗೀತೆಯೊಂದಿಗೆ ವಾಪಸ್ಸಾಗಿದ್ದಾರೆ. ‘ಜವಾನ್’ ಚಿತ್ರದ ‘ಹಯ್ಯೋಡಾ’ ಎಂಬ ಹಾಡು ಬಿಡುಗಡೆಯಾಗಿದೆ.
ಭಾರತೀಯ ಚಿತ್ರರಂಗದದಲ್ಲೇ ಹಲವು ರೊಮ್ಯಾಂಟಿಕ್ ಮತ್ತು ಮಧುರಗೀತೆಗಳಿಗೆ ಜನಪ್ರಿಯರಾದ ಶಾರುಖ್ ಖಾನ್ ಹೆಜ್ಜೆ ಹಾಕಿದ್ದಾರೆ. ಈ ಹಾಡನ್ನು ಅನಿರುದ್ಧ್ ರವಿಚಂದರ್ ಸಂಯೋಜಿಸಿದ್ದು, ಅನಿರುದ್ಧ್ ಮತ್ತು ಪ್ರಿಯಾ ಮಾಲಿ ಹಾಡಿದ್ದಾರೆ. ಈ ಸುಮಧುರ ಹಾಡಿಗೆ ವಿವೇಕ್ ಸಾಹಿತ್ಯ ರಚಿಸಿದ್ದಾರೆ.
ಇದೇ ಮೊದಲ ಬಾರಿಗೆ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಂಡಿರುವ ಶಾರುಖ್ ಖಾನ್ ಮತ್ತು ನಯನತಾರಾ, ತೆರೆಯ ಮೇಲೆ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ತಮ್ಮ ಅಭಿನಯದಿಂದ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು, ಭಾರತೀಯ ಚಿತ್ರರಂಗದ ಜನಪ್ರಿಯ ಕೊರಿಯೋಗ್ರಾಫರ್ ಆಗಿರುವಂತಹ ಫರಾ ಖಾನ್ ನೃತ್ಯ ನಿರ್ದೇಶನ ಮಾಡಿದ್ದಾರೆ.
‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಸಂಸ್ಥೆಯಡಿ ಗೌರಿ ಖಾನ್ ನಿರ್ಮಿಸಿದರೆ, ಗೌರವ್ ವರ್ಮಾ ಸಹನಿರ್ಮಾಪಕರಾಗಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಅಟ್ಲಿ ನಿರ್ದೇಶಿಸಿರುವ ಈ ಚಿತ್ರವು ಜಗತ್ತಿನಾದ್ಯಂತ ಸೆಪ್ಟೆಂಬರ್ 7ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.
ಪತ್ರಕರ್ತ, ಉತ್ತಮ ಮಾತುಗಾರ, ನಟ ಮತ್ತು ನಿರ್ದೇಶಕ ಬಿಗ್ ಬಾಸ್ ಖ್ಯಾತಿಯ ಡಿ.ಜೆ. ಚಕ್ರವರ್ತಿ ಚಂದ್ರಚೂಡ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಪತ್ರಕರ್ತರಾಗಿ ಗುರುತಿಸಿಕೊಂಡು, ಸಾಹಿತ್ಯ ಲೋಕದಲ್ಲೂ ಮಿಂದೆದ್ದು, ಬಣ್ಣದ ಲೋಕವನ್ನೂ ಸ್ಪರ್ಶಿಸಿ ಸದ್ದು ಮಾಡಿದವರು. ಈಗ ಮತ್ತೊಂದು ಹೊಸ ಇನ್ನಿಂಗ್ಸ್ ಶುರುವಿಗೆ ಸಜ್ಜಾಗುತ್ತಿದ್ದಾರೆ.
ಹೌದು, ಚಕ್ರವರ್ತಿ ಚಂದ್ರಚೂಡ್ ನಿರ್ದೇಶನಕ್ಕಿಳಿಯುತ್ತಿದ್ದಾರೆ. ನಿರ್ದೇಶನ ಅವರಿಗೆ ಹೊಸದಲ್ಲ. ಈ ಬಾರಿ ಹೊಸತನದ ಕಥೆಯೊಂದಿಗೆ ಎಂಟ್ರಿಕೊಡುತ್ತಿದ್ದಾರೆ. ಮಯೂರ ಮೋಷನ್ ಪಿಕ್ಚರ್ಸ್ ನಿರ್ಮಾಣದ ನೂತನ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿರುವ .ಜೆ.ಚಕ್ರವರ್ತಿ ಸಿನಿಮಾಗೆ ಮಂಜುನಾಥ್ ಡಿ ನಿರ್ಮಾಪಕರು. ಅವರು ಅನ್ ಲಾಕ್ ರಾಘವ ನಂತರ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ.
ಇನ್ನು ಮಿಲಿಂದ್ ಗೌತಮ್ ನಾಯಕ. ಡಿ.ಜೆ. ಚಕ್ರವರ್ತಿ ಚಂದ್ರಚೂಡ್ ಏಳು ವರ್ಷಗಳ ನಂತರ ನಿರ್ದೇಶನ ಮಾಡುತ್ತಿದ್ದಾರೆ ಅನ್ನೋದು ವಿಶೇಷ.
“ಅನ್ ಲಾಕ್ ರಾಘವ” ನಂತರ ಮಿಲಿಂದ್ ಗೌತಮ್ ಅವರು ಸತತ ಮೂರು ತಿಂಗಳುಗಳಿಂದ ಈ ಹೊಸ ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಬೇರೆ ಬೇರೆ ನಿರ್ದೇಶಕರಿಗೆ ಹಲವು ಸಿನಿಮಾಗಳನ್ನು ಬರೆಯುತ್ತಿರುವ ಚಕ್ರವರ್ತಿ ಈ ಸಿನಿಮಾವನ್ನು ತಾವೇ ಬರೆದು ನಿರ್ದೇಶಿಸುತ್ತಿದ್ದಾರೆ.
ಮಣಿಕಾಂತ್ ಕದ್ರಿ ಸಂಗೀತ, ಮಧು ತುಂಬನಕೆರೆ ಸಂಕಲನ, ಯೋಗೇಶ್ವರನ್ ಛಾಯಾಗ್ರಹಣ, ಕಾರ್ಯಕಾರಿ ನಿರ್ಮಾಪಕರಾಗಿ ಪ್ರಶಾಂತ್ ಬಾಗೂರು, ಡಿಜಿಟಲ್ ಮಾರ್ಕೆಟಿಂಗ್ ಸುನೀಲ್ ಮಾನೆ, ಸಹ ನಿರ್ದೇಶಕರಾಗಿ ಚಂದ್ರಶೇಖರ ಮುದಬಾವಿ ಮುಂತಾದವರ ತಂಡವಿದೆ.
ಈಗಾಗಲೇ ಕದ್ರಿ ಮಣಿಕಾಂತ್ ಹಾಡುಗಳು ಸಂಯೋಜನೆಯಲ್ಲಿದು, ಚಿತ್ರೀಕರಣಕ್ಕೆ ಪೂರ್ವ ತಯಾರಿ ಭರದಿಂದ ಸಾಗಿದೆ.
ಆಗಸ್ಟ್ 18ರಂದು ಟೀಸರ್ ಚಿತ್ರೀಕರಣ ನಡೆಯಲಿದ್ದು, ಸೆಪ್ಟೆಂಬರ್ 2 , ಅಭಿನಯ ಚಕ್ರವರ್ತಿ ಸುದೀಪ್ ರವರ ಹುಟ್ಟಿದ ದಿನದಂದು ಟೀಸರ್ ಬಿಡುಗಡೆ ಮಾಡಲಿದ್ದಾರೆ.
ನಿರ್ದೇಶಕರ ಹುಟ್ಟುಹಬ್ಬದಂದು(ಆಗಸ್ಟ್ 15) ಟೀಮ್ ಅನೌನ್ಸ್ ಆಗಲಿದೆ. ಈ ಪೋಸ್ಟರ್ ನಲ್ಲಿರುವ ಸ್ಕ್ಯಾನ್ ಮಾಡಿ ಮ್ಯಾಜಿಕ್ ನೋಡಿ! ನಿಮಗೊಂದು ಅಪರೂಪದ ವಿಷಯ ಸಿಗಲಿದೆ.
ಸಾಮಾಜಿಕ ಜಾಲತಾಣದಲ್ಲಿ ನಟ ಉಪೇಂದ್ರ ಅವರು ನೇರ ಪ್ರಸಾರದಲ್ಲಿ ಮಾತನಾಡುತ್ತಿದ್ದ ವೇಳೆ, ದಲಿತ ಸಮುದಾಯ ಕುರಿತ ಪದ ಬಳಕೆ ಮಾಡಿದ್ದರ ವಿರುದ್ಧ ದಾಖಲಾಗಿದ್ದ ಕೇಸ್ ಗೆ ಹೈಕೋರ್ಟ್ ತಡೆ ನೀಡಿದೆ.
ಉಪೇಂದ್ರ ಆಡಿದ ಮಾತಿನಿಂದ ಆ ಸಮುದಾಯದವರ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂದು ಆರೋಪಿಸಿ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಾಗಿತ್ತು.
ಈ ಕುರಿತು ಉಪೇಂದ್ರ ಅವರು ದೂರು ರದ್ದು ಪಡಿಸುವಂತೆ ಮನವಿ ಮಾಡಿ , ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರು, ಉಪೇಂದ್ರ ಅವರು ಯಾವುದೇ ಸಮುದಾಯಕ್ಕೆ ನೋವುಂಟು ಮಾಡಬೇಕೆಂಬ ಉದ್ದೇಶ ಇಟ್ಟುಕೊಂಡಿರಲಿಲ್ಲ. ಆಕಸ್ಮಿಕವಾಗಿ ಗಾದೆ ಮಾತಿನ ಪದ ಬಳಕೆ ಮಾಡಿದ್ದಾರೆ. ಆದರೂ ಅವರು ಕ್ಷಮೆ ಕೋರಿ, ಮಾತಾಡಿದ ವಿಡಿಯೋ ಡಿಲೀಟ್ ಮಾಡಿದ್ದಾರೆ. ಹಾಗಾಗಿ ದಾಖಲಾಗಿರುವ ಪ್ರಕರಣಕ್ಕೆ ತಡೆ ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ನ್ಯಾಯಪೀಠ ತಡೆಯಾಜ್ಞೆ ನೀಡಿದೆ.
ಈ ಬಗ್ಗೆ ತಮ್ಮ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಉಪೇಂದ್ರ, ‘ಅನ್ಯಾಯದ ಅನುಮಾನಕ್ಕೆ ಹೆಡೆ ಬಿಚ್ಚಿ ಬುಸುಗುಟ್ಟಿದ ಪಡೆ, ದ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್ ನಡೆ, ಅನಿರೀಕ್ಷಿತ ಬಿಸಿಲ ತಾಪಕ್ಕೆ ಸಹ್ರದಯಗಳು ಹಿಡಿದ ಪ್ರೀತಿಯ ಕೊಡೆ, ನನ್ನನ್ನು ತಿದ್ದಿ ತೀಡುತ್ತಿರುವ ನಿಮ್ಮೆಲ್ಲರನ್ನೂ ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹ್ರದಯ ನನಗೆ ಕೊಡೆ ತಾಯಿ ನನಗೆ ಕೊಡೆ’ ಎಂದು ಧನ್ಯವಾದ ಹೇಳಿದ್ದಾರೆ.
ಸಾಹಸಸಿಂಹ ಡಾ.ವಿಷ್ಣುವರ್ಧನ್ ಹೆಸರಿನಡಿ ಆಯೋಜಿಸಲಾಗಿದ್ದ ‘ಯಜಮಾನ ಪ್ರೀಮಿಯರ್ ಲೀಗ್ ಸೀಸನ್-2’ ಟ್ರೋಫಿಯನ್ನು ಸುದೀಪ್ ಅಭಿಮಾನಿಗಳ ತಂಡ ಕೋಟಿಗೊಬ್ಬ ಕಿಂಗ್ಸ್ ಎತ್ತಿ ಹಿಡಿದ್ರೆ, ದರ್ಶನ್ ಅಭಿಮಾನಿಗಳ ಸೂರ್ಯವಂಶ ಸ್ಟ್ರೈಕರ್ಸ್ ರನ್ನರ್ ಆಗಿ ಹೊರಹೊಮ್ಮಿದೆ.
ಸ್ಯಾಂಡಲ್ ವುಡ್ ನಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಶುರು ಮಾಡಿದ ಕೀರ್ತಿ ವಿಷ್ಣುದಾದಾ ಅವರಿಗೆ ಸಲ್ಲುತ್ತದೆ. ಸಿನಿಮಾ ತಂಡಗಳನ್ನು ಕಟ್ಟಿಕೊಂಡು ವಿಷ್ಣು ಸದಾ ಕ್ರಿಕೆಟ್ ಆಡುತ್ತಿದ್ದರು. ವೃತ್ತಿಪರ ಕ್ರಿಕೆಟ್ ಆಟಗಾರರ ಜೊತೆಯೂ ಅವರು ಪಂದ್ಯಾವಳಿಗಳನ್ನು ಆಡಿದ್ದೂ ಇದೆ. ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಅವರ ಅಭಿಮಾನಿಗಳು ಕೂಡ ‘ಯಜಮಾನ ಪ್ರೀಮಿಯರ್ ಲೀಗ್’ (YPL) ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದಾರೆ.
ಈ ಹಿಂದೆ ಜೂನ್ ನಲ್ಲಿಯೇ ಯಜಮಾನ ಪ್ರೀಮಿಯರ್ ಲೀಗ್ ಸೀಸನ್ 2 ಆಯೋಜನೆ ಆಗಿತ್ತು. ಮಳೆ ಮತ್ತು ಇತರ ಕಾರಣಗಳಿಂದಾಗಿ ಅದು ಮುಂದೂಡಲ್ಪಟ್ಟಿತ್ತು. ಬೆಂಗಳೂರಿನ ಬಿಐಸಿಸಿ ಇನ್ಫಿನಿಟಿ ಔಟ್ ಡೋರ್ ಗ್ರೌಂಡ್ ನಲ್ಲಿ ಇದೇ 12 ಮತ್ತು 13 ಎರಡು ದಿನಗಳ ಯಜಮಾನ ಪ್ರೀಮಿಯರ್ ಲೀಗ್ ಸೀಸನ್ 2 ಏರ್ಪಡಿಸಲಾಗಿತ್ತು.
ಡಾ.ವಿಷ್ಣು ಸೇನಾ ಸಮಿತಿಯು ಹಮ್ಮಿಕೊಂಡಿದ್ದ ಎರಡನೇ ಸೀಸನ್ ಇದಾಗಿದ್ದು, ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ಪಂದ್ಯಾವಳಿ ನಡೆದಿದೆ. ಒಟ್ಟು 12 ತಂಡಗಳು ಭಾಗಿಯಾಗಿದ್ದು, ಈ ಪೈಕಿ ಕೋಟಿಗೊಬ್ಬ ಕಿಂಗ್ಸ್ ಗೆಲುವು ತನ್ನದಾಗಿಸಿಕೊಂಡಿದೆ.
ಎರಡು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಟರಾದ ವಸಿಷ್ಠ ಸಿಂಹ, ಡಾರ್ಲಿಂಗ್ ಕೃಷ್ಣ, ರವಿಶಂಕರ್ ಗೌಡ, ಬಾಲಾಜಿ, ಶ್ರೇಯಸ್ ಮಂಜು, ನಟಿ ಮಿಲನಾ ನಾಗರಾಜ್ ಸೇರಿದಂತೆ ಹಲವಾರು ಕಲಾವಿದರು ಭಾಗಿಯಾದರೆ,
ನಿರ್ದೇಶಕರಾದ ಶಶಾಂಕ್, ನವೀನ್ ಕೃಷ್ಣ, ರಘು ರಾಮ್ ಮತ್ತು ಇತರ ನಿರ್ದೇಶಕರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್ ಮತ್ತು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಸಾಮಾಜಿಕ ಜಾಲತಾಣದಲ್ಲಿ ನಟ ಉಪೇಂದ್ರ ಅವರು ನೇರ ಪ್ರಸಾರದಲ್ಲಿ ಮಾತನಾಡುತ್ತಿದ್ದ ವೇಳೆ, ದಲಿತ ಸಮುದಾಯ ಕುರಿತ ಪದ ಬಳಕೆಯೊಂದನ್ನು ಮಾಡಿದ್ದು, ಅದು ಆ ಸಮುದಾಯದವರ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂದು ಆರೋಪ ಮಾಡಿ, ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು ದಕ್ಷಿಣ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೆ ಎಸ್ ಮಧುಸೂದನ್ ಅವರು ಈ ಸಂಬಂಧ ದೂರು ನೀಡಿದ್ದು, ಆ ಹಿನ್ನೆಲೆಯಲ್ಲಿ ಉಪೇಂದ್ರ ಅವರ ವಿರುದ್ಧ ದೂರು ದಾಖಲಾಗಿದೆ.
ಉಪೇಂದ್ರ ಅವರು ನೇರ ಪ್ರಸಾರದಲ್ಲಿ ಮಾತನಾಡುವ ಸಂದರ್ಭದಲ್ಲಿ ‘ಊರು ಎಂದರೆ ಹೊಲಗೇರಿ ಇರುತ್ತದೆ’ ಎಂಬ ಪದ ಬಳಿಸಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ಇರುವ ನಟನರಾಗಿ ಅವರು ಮಾದರಿಯಾಗಿರಬೇಕಿತ್ತು. ಅವರನ್ನು ಅನುಕರಣೆ ಮಾಡುವವರು ಕೂಡ ಇದೇ ಹಾದಿ ತುಳಿದರೆ, ಸಮಾಜದಲ್ಲಿ ಎಲ್ಲವೂ ಹಾಳಾಗುತ್ತದೆ ಉಪೇಂದ್ರ ಅವರ ಮಾತಿನಿಂದ ದಲಿತರ ಭಾವನೆಗಳಿಗೆ ನೋವಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ದೂರು ನೀಡಿದ್ದಾರೆ.
ಈ ಬಗ್ಗೆ ತಮ್ಮ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಉಪೇಂದ್ರ, ಹೀಗೆ ಅವಹೇಳನಕಾರಿಯಾಗಿ ಮಾತನಾಡುವುದರಿಂದ ತಮಗೆ ಸಿಗುವ ಲಾಭವಾದರೂ ಏನೂ ಇಲ್ಲ. ನಾನು ಮಾತಿನ ವೇಳೆ ಹೇಳಿದ್ದರೂ, ಅದು ಉದ್ದೇಶ ಪೂರ್ವಕವಲ್ಲ. ಅಷ್ಟಕ್ಕೂ ವಿಡಿಯೋ ಡಿಲೀಟ್ ಮಾಡಿದ್ದೇನೆ. ಕ್ಷಮೆ ಕೂಡ ಕೇಳಿದ್ದೇನೆ. ಕ್ಷಮೆ ಸ್ವೀಕರಿಸುವ ದೊಡ್ಡತನ ಇಲ್ಲವೇ? ಎಂದಿದ್ದಾರೆ.
‘ಇಂದು ನನ್ನ ವಿರುದ್ಧ ಮಾತನಾಡುತ್ತಿರುವ ಹಲವರು ಅಂದು ಹುಟ್ಟೇ ಇರಲಿಲ್ಲ. 50 ವರ್ಷಗಳ ಹಿಂದೆ ನನ್ನ ಬಾಲ್ಯ, ನಾನು ಎಂತಹ ಪರಿಸರದಲ್ಲಿ ಬೆಳೆದೆ, ಆ ಬಾಲ್ಯದಲ್ಲಿ ನಾನು ಕಂಡ ಆ ಕ್ರೂರ ಬಡತನ, ನನ್ನ ಕಣ್ಣ ಮುಂದೆಯೇ ಬೆಂಕಿ ಹಚ್ಚಿಕೊಂಡು ಆದ ಆತ್ಮಹತ್ಯೆಗಳು, ಹಸಿವು, ಅಪಮಾನ, ತುಳಿತ. ಇವೆಲ್ಲವನ್ನು ಅನುಭವಿಸಿ ಬೆಳೆದ ನಾನು ಇಂದು ಒಂದು ವರ್ಗದ ಜನರ ಬಗ್ಗೆ ಅವಮಾನಕಾರಿಯಾಗಿ ಮಾತನಾಡುತ್ತೇನೆಯೇ?
ನನಗೆ ಹುಚ್ಚೇ? ಅದಕ್ಕೆ ಕಾರಣವಾದರೂ ಏನು? ಅದರಿಂದ ನನಗೆ ಸಿಗುವ ಲಾಭವಾದರೂ ಏನು? ಇಷ್ಟಕ್ಕೂ ಕ್ಷಮೆಯನ್ನು ಸ್ವೀಕರಿಸುವ ದೊಡ್ಡತನವೂ ಇಲ್ಲವೇ? ಯಾಕೆ ಇಷ್ಟೊಂದು ಧ್ವೇಷ?’ ಎಂದು ಉಪೇಂದ್ರ ಪ್ರಶ್ನಿಸಿದ್ದಾರೆ.
ಬಹಳ ದಿನಗಳ ನಂತರ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ ಡೆಡ್ಲಿ ಕಿಲ್ಲರ್, ಕೀರ್ತಿ ಸಿಲ್ವರ್ ಸ್ಕ್ರೀನ್ ಹಾಗೂ ವೇದಿಕ್ ಕಾಸ್ಮಾಸ್ ಮೂಲಕ ಪ್ರಶಾಂತ್ ಟಿ.ತಂಬ್ರಳ್ಳಿಮಠ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿಭಿನ್ನವಾದ ಆಕ್ಷನ್, ಥ್ರಿಲ್ಲರ್, ಹಾರರ್ ಕಥಾಹಂದರ ಒಳಗೊಂಡ ಈ ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದ್ದು, ಇತ್ತೀಚೆಗಷ್ಟೇ ಸೆನ್ಸಾರ್ ಪ್ರಕ್ರಿಯೆ ಕೂಡ ಮುಗಿಸಿಕೊಂಡಿದೆ. ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾವುದೇ ಕಟ್ಸ್ ಕೊಡದೆ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ.
ಈ ಚಿತ್ರದಲ್ಲಿ ಯುವನಟ ಅಭಯ್ವೀರ್ ಹಾಗೂ ನಿವೀಕ್ಷಾ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಐವರು ವಿಲನ್ಗಳ ಜೊತೆ ಹುಡುಗಿಯೊಬ್ಬಳನ್ನು ಪೊಲೀಸರು ಆಂದ್ರ ಪ್ರದೇಶದಲ್ಲಿ ಬಂಧಿಸಿ, ಕರ್ನಾಟಕಕ್ಕೆ ಕರೆತರುವಾಗ ಮಾರ್ಗಮದ್ಯೆ ಕಾಡಲ್ಲಿ ಅವರುಗಳು ಪೋಲೀಸರಿಂದ ಎಸ್ಕೇಪ್ ಆಗುತ್ತಾರೆ, ಅಲ್ಲಿಂದ ಅವರು ರಕ್ಷಣೆಗಾಗಿ ಕಾಡಲ್ಲಿರುವ ಮನೆಯೊಂದಕ್ಕೆ ಹೋಗುತ್ತಾರೆ.
ನಂತರ ಅವರೆಲ್ಲ ಅದೇ ಮನೆಯಲ್ಲಿ ಲಾಕ್ ಆಗಿಬಿಡುತ್ತಾರೆ, ಮುಂದೇನಾಯ್ತು ಅನ್ನೋದೇ ಚಿತ್ರದ ಕುತೂಹಲ. ಈ ಚಿತ್ರದಲ್ಲಿ ಒಟ್ಟು ೩ ಹಾಡುಗಳಿದ್ದು, ವಿನು ಮನಸು ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಅಲ್ಲದೆ ಮಲ್ಲಿಕಾರ್ಜುನ್ ಅವರ ಛಾಯಾಗ್ರಹಣ, ದೀಪು ಅವರ ಸಂಕಲನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ೬ ವಿಶಿಷ್ಠವಾದ ಸಾಹಸ ದೃಶ್ಯಗಳಿದ್ದು, ನಿರ್ದೇಶಕ ಥ್ರಿಲ್ಲರ್ ಮಂಜು ಅವರೇ ಎಲ್ಲಾ ಆಕ್ಷನ್ ಗಳನ್ನು ಕಂಪೋಜ್ ಮಾಡಿದ್ದಾರೆ.
ಲೋಕೇಂದ್ರ ಸೂರ್ಯ, ಥ್ರಿಲ್ಲರ್ ಮಂಜು, ಸುನಿಲ್ ಬಾಲ್ಡರ್ ಮುಂತಾದವರು ಈ ಚಿತ್ರದ ಉಳಿದ ಪಾಅತ್ರಗಳಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಡೆಡ್ಲಿ ಕಿಲ್ಲರ್ ಚಿತ್ರವು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಇಂದು ಆಗಸ್ಟ್ 13 ಅಂತಾರಾಷ್ಟ್ರೀಯ ಎಡಗೈ ಬಳಕೆದಾರರ ದಿನ. ಈ ದಿನದ ಅಂಗವಾಗಿ ವೇಗಾ ಹೆಲ್ಮೆಟ್ ಕಂಪನಿ ವಿಶೇಷವಾದ ಹೆಲ್ಮೆಟ್ ವಿನ್ಯಾಸಗೊಳಿಸಿ ಬಿಡುಗಡೆ ಮಾಡಿದೆ. ವೇಗಾ ಕಂಪನಿಗೆ ಇಂತಹದೊಂದು ಐಡಿಯಾ ಬರಲು ಕಾರಣ ಎಡಗೈ ಬಳಸುವವರನ್ನೇ ಕಥಾಹಂದರವಾಗಿ ಹೊಂದಿರುವ ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ. ಈ ಚಿತ್ರದ ಪ್ರೇರಣೆಯಿಂದ ವೇಗಾ 1308 ಸೌತ್ ಪಾವ್ ಎಂಬ ವಿಶೇಷ ಹೆಲ್ಮೆಟ್ ಲಾಂಚ್ ಮಾಡಿದೆ. ಇದು ಎಗಡೈ ಬಹಳಕೆದಾರರಿಗೆ ಬಹಳಷ್ಟು ಸುಲಭವಾಗಿದೆ. ಈ ಹೆಲ್ಮೆಟ್ ISI ಮತ್ತು DOT ಸರ್ಟಿಫೈಡ್ ಹೊಂದಿದೆ. ಖಾಸಗಿ ಹೋಟೆಲ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿ ಸಿನಿಮಾ ಬಗ್ಗೆ ಹಾಗೂ ವೇಗಾ ಹೆಲ್ಮೆಟ್ ತಮ್ಮ ಚಿತ್ರಕ್ಕೆ ಬೆಂಬಲವಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ವೇಗಾ ಹೆಲ್ಮಟ್ ಕಂಪನಿ ಮನ್ಮತ್ ಶೆಟ್ಟಿ, ಒಂದು ದಿನಕ್ಕೆ 20 ಸಾವಿರ ಹೆಲ್ಮೆಟ್ ಕಂಪನಿ ಮಾರಾಟ ಮಾಡುತ್ತೇವೆ. ಎಡಗೈ ಬಳಸುವವರಿಗೆ ಸುಲಭವಾಗುವ ರೀತಿ ಹೊಸ ಹೆಲ್ಮೆಟ್ ತಯಾರಿಸಲಾಗಿದೆ. ನಾವು ದಿನನಿತ್ಯ ಹೊಸತನವನ್ನು ಕಲಿಯುತ್ತಿದ್ದೇನೆ. ಅದರಂತೆ ಈ ಪ್ರಾಜೆಕ್ಟ್ ಲಾಂಚ್ ಬಿಡುಗಡೆ ಮಾಡಲಾಗಿದೆ. ಎಡಗೈ ಬಳಸುವ ಶೇಖಡ ಹತ್ತರಷ್ಟು ಮಂದಿಗೆ ಈ ಹೆಲ್ಮೆಟ್ ಉಪಯೋಗವಾಗಲಿದೆ ಎಂದರು.
ನಿರ್ಮಾಪಕ ಗುರುದತ್ ಗಣಿಗ ಮಾತನಾಡಿ, ಐಡಿಯಾ ಎಲ್ಲಾ ಶುರುವಾಗಿದ್ದು, ಸಮರ್ಥ್ ಅವರಿಂದ. ಇದೊಂದು ವಿಭಿನ್ನ ಕಥೆ. ಈ ರೀತಿ ಸಿನಿಮಾ ಬೇರೆ ಇಂಡಸ್ಟ್ರಿಯಲ್ಲಿ ಬಂದಾಗ ವಾವ್ ಎನ್ನುತ್ತಾರೆ. ಇಂತಹ ಕಥೆಗೆ ನಿರ್ಮಾಪಕರು ಸಿಗಲ್ಲ. ಸ್ನೇಹಿತರು , ಇಡೀ ತಂಡದ ಬೆಂಬಲದಿಂದ ಇಲ್ಲಿವರೆಗೂ ಬಂದಿದ್ದೇವೆ. ನಿರ್ದೇಶಕರು ತುಂಬಾ ಚೆನ್ನಾಗಿ ಕಥೆ ಮಾಡಿದ್ದಾರೆ ಎಂದರು.
ನಿರ್ದೇಶಕ ಸಮರ್ಥ್ ಬಿ ಕಡಕೋಳ್, ಲಾಕ್ ಡೌನ್ ಟೈಮ್ ನಲ್ಲಿ ಬರೆದ ಕಥೆ ಇದು. ಈ ಕಥೆ ಇಟ್ಕೊಂಡು ಸುಮಾರು ನಿರ್ಮಾಪಕ ಬಳಿ ಹೋದೆ. ಕೊನೆಗೆ ಗುರು ಭೇಟಿಯಾದೆ. ನನ್ನ ಸ್ನೇಹಿತರು, ಮಂಜು ಸರ್ ಬೆಂಬಲದಿಂದ ಸಿನಿಮಾ ಆಗಿದೆ ಎಂದು ತಿಳಿಸಿದರು.
ನಟ ದಿಗಂತ್ ಮಾತನಾಡಿ, ನಮ್ಮ ಸಿನಿಮಾಗೆ ಸಾಥ್ ಕೊಟ್ಟ ವೇಗಾದವರಿಗೆ ದೊಡ್ಡ ಧನ್ಯವಾದ. ದಿನಕ್ಕೆ 20 ಸಾವಿರ ಹೆಲ್ಮೆಟ್ ಮಾರಾಟವಾಗುತ್ತದೆ. ಅವರು ಹೆಲ್ಮೆಟ್ ಜೊತೆ ನಮ್ಮ ಸಿನಿಮಾ ಕಾರ್ಡ್ ಹಾಕಿ ಎಲ್ಲರಿಗೂ ಪ್ರಮೋಷನ್ ಮಾಡುತ್ತಿದ್ದಾರೆ. ಎಗಡೈ ಬಳಸುವವರಿಗೆ ವೇಗಾ ವಿಶೇಷ ಹೆಲ್ಮೆಟ್ ಲಾಂಚ್ ಮಾಡಿದೆ. ಎಡಗೈ ಅಪಘಾತಕ್ಕೆ ಕಾರಣ ಸಿನಿಮಾದ ಕಥೆ ಅದ್ಭುತವಾಗಿದೆ. ಒಂದೊಳ್ಳೆ ತಂಡದ ಜೊತೆ ಒಳ್ಳೆ ಪ್ರಯತ್ನ ಮಾಡಿದ್ದೇವೆ ಎಂಬ ಆಶೀರ್ವಾದ ಇರಲಿ ಎಂದರು.
ದೂದ್ ಪೇಡಾ ದಿಗಂತ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಕಾನ್ಸೆಪ್ಸ್ ‘ವೇಗ’ ಹೆಲ್ಮೆಟ್ ಕಂಪನಿಯವರಿಗೆ ಇಷ್ಟವಾಗಿದ್ದು, ಅವರು ಈ ವಿಶೇಷ ಹೆಲ್ಮೆಟ್ ಮೂಲಕ ಚಿತ್ರತಂಡದ ಜತೆ ಕೈಜೋಡಿಸಿದ್ದಾರೆ. ಅಂದಹಾಗೆ ಇಂಥದ್ದೊಂದು ಹೆಲ್ಮೆಟ್ ರೂಪಿಸಿ ಮಾರುಕಟ್ಟೆಗೆ ಬಿಡುಗಡೆ ಆಗುತ್ತಿರುವುದು ಇದೇ ಮೊದಲು.
ಸಮರ್ಥ್ ಬಿ. ಕಡಕೊಳ್ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಕಥಾಹಂದರ ಈ ಚಿತ್ರದಲ್ಲಿದೆ. ಹೆಸರೇ ಹೇಳುವಂತೆ ಇದು ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಹೆಣೆದ ಚಿತ್ರ. ಚಿತ್ರದಲ್ಲಿ ದಿಗಂತ್ ಜೋಡಿಯಾಗಿ ನವನಟಿ ಧನು ಹರ್ಷ ನಟಿಸುತ್ತಿದ್ದು, ರಾಧಿಕಾ ನಾರಾಯಣ್, ನಿಧಿ ಸುಬ್ಬಯ್ಯ ಕೂಡ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಹೈಫನ್ ಪಿಕ್ಚರ್ಸ್ ಬ್ಯಾನರ್ನಡಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಬಿ ಕಡಕೊಳ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಚಿತ್ರದ ತಾರಾಗಣದಲ್ಲಿದ್ದಾರೆ. ಅಭಿಮನ್ಯು ಸದಾನಂದ್ ಕ್ಯಾಮೆರಾ ವರ್ಕ್, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಈ ಸಿನಿಮಾಗಿದೆ.
ಕನ್ನಡ ಚಿತ್ರರಂಗದಲ್ಲಿ ಬಣ್ಣದ ಕನಸು ಹೊತ್ತು ಬಂದ ನಟಿ ಮಣಿಗಳ ಪೈಕಿ ಸ್ವಪ್ನ ಶೆಟ್ಟಿಗಾರ್ ಕೂಡ ಒಬ್ಬರು. ಎಲ್ಲ ಯುವ ನಟಿಯರಂತೆ ಸ್ವಪ್ನ ಶೆಟ್ಟಿಗಾರ್ ಕೂಡ ಬೆಟ್ಟದಷ್ಟು ಕನಸು, ಪುಟ್ಟಿಗಟ್ಟಲೆ ಆಸೆ-ಆಕಾಂಕ್ಷೆ ಹೊತ್ತು ಬಂದವರು. ಸ್ಯಾಂಡಲ್ ವುಡ್ ನಲ್ಲಿ ತಾನು ಗಟ್ಟಿ ನೆಲೆ ಕಾಣಬೇಕು ಅಂತ ಕನಸು ಕಂಡವರು. ತಮ್ಮ ಕನಸು ನನಸು ಮಾಡಿಕೊಳ್ಳಲು ತಯಾರಿ ಕೂಡ ನಡೆಸಿದವರು.
ಇಷ್ಟಕ್ಕೂ ಈ ಯುವ ನಟಿ ಸ್ವಪ್ನ ಶೆಟ್ಟಿಗಾರ್ ಬಗ್ಗೆ ಇಷ್ಟೊಂದು ಪೀಠಿಕೆ ಹಾಕೋಕೆ ಕಾರಣ, ಅವರು ಅಭಿನಯಿಸಿರುವ ಎರಡು ಸಿನಿಮಾಗಳು ಸದ್ಯ ಬಿಡುಗಡೆಯ ಹೊಸ್ತಿಲಲ್ಲಿ ಇರುವುದು. ತಮ್ಮ ನಿರೀಕ್ಷೆಯ ಸಿನಿಮಾಗಳೆರೆಡು ರಿಲೀಸ್ ಆಗುತ್ತಿರುವ ಖುಷಿ ಒಂದು ಕಡೆಯಾದರೆ, ಇದೀಗ ತಮ್ಮ ಹಟ್ಟು ಹಬ್ಬದ ಸಂಭ್ರದಲ್ಲಿ ಹೊಸ ಸಿನಿಮಾವೊಂದಕ್ಕೆ ಸಹಿ ಮಾಡುವ ಸಂತಸ ಮತ್ತೊಂದು ಕಡೆ.. ಸ್ವಪ್ನ ಶೆಟ್ಟಿಗಾರ್ ಇಂದು (ಆಗಸ್ಟ್ 13) ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ದಿನವೇ ಹೆಸರಿಡದ ಸಿನಿಮಾವೊಂದರಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅತ್ತ ಪರಭಾಷೆಯಿಂದಲೂ ಸ್ವಪ್ನ ಶೆಟ್ಟಿಗಾರ್ ಅವರಿಗೆ ಅವಕಾಶ ಬಂದಿದೆ. ತಮಿಳು ಸಿನಿಮಾವೊಂದರ ಮಾತುಕತೆ ನಡೆಯುತ್ತಿದ್ದು, ಅದು ಅಂತಿಮವಾಗುವ ಸಾಧ್ಯತೆ ಇದೆ ಎಂಬುದು ಅವರ ಮಾತು.
ಹಾಗೆ ನೋಡಿದರೆ, ಸ್ವಪ್ನ ಶೆಟ್ಟಿಗಾರ್ ಕನ್ನಡಕ್ಕೆ ಹೊಸ ಮುಖವೇನಲ್ಲ. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ಗಮನ ಸೆಳೆಯುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸಿದರೂ, ಸ್ವಪ್ನ ಶೆಟ್ಟಿಗಾರ್ ಅವರು ಆಯ್ಕೆಯಲ್ಲಿ ಎಚ್ಚರ ತಪ್ಪಿಲ್ಲ. ಇದುವರೆಗೂ ಮಾಡಿದ ಸಿನಿಮಾಗಳ ಪಾತ್ರಗಳ ಮೇಲೆ ಸ್ವಪ್ನ ಅವರಿಗೆ ಖುಷಿ ಇದೆ. ಅವರೀಗ ನಾಯಕಿಯಾಗಿ ನಟಿಸಿರುವ ಆರೇಳು ಸಿನಿಮಾಗಳ ಪೈಕಿ ಎರಡು ಸಿನಿಮಾಗಳು ಬಿಡುಗಡೆಯ ಹೊಸ್ತಿಲಲ್ಲಿವೆ ಎಂಬುದು ಅವರ ಖುಷಿಗೆ ಕಾರಣ.
ಸ್ವಪ್ಪ ಶೆಟ್ಟಿಗಾರ್ ನಾಯಕಿಯಾಗಿ ಅಭಿನಯಿಸಿರುವ ‘ಯಾವ ಮೋಹನ ಮುರಳಿ ಕರೆಯಿತು’ ಸಿನಿಮಾ ಈಗ ಬಿಡುಗಡೆಯಾಗಲು ಸಜ್ಜಾಗಿದೆ. ಈಗ ಆಡಿಯೋ ರಿಲೀಸ್ ಗೆ ಚಿತ್ರತಂಡ ಮುಂದಾಗಿದ್ದು, ಚಿತ್ರದುರ್ಗದ ಚಳ್ಳಕೆರೆಯಲ್ಲಿ ಇವೆಂಟ್ ನಡೆಸಲು ತಯಾರಿ ನಡೆಸಿದೆ. ಈಗಾಗಲೇ . ಚಿತ್ರದ ಟೀಸರ್ ರಿಲೀಸ್ ಆಗಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ಸಿನಿಮಾ ಬಗ್ಗೆ ಸ್ವಪ್ನ ಶೆಟ್ಟಿಗಾರ್ ಅವರಿಗೆ ಅತೀವ ವಿಶ್ವಾಸ. ಕಾರಣ ಸಿನಿಮಾ ಕಥೆ ಹಾಗು ಗಟ್ಟಿ ಪಾತ್ರ. ಈ ಕುರಿತು ಸಪ್ನ ಹೇಳುವುದಿಷ್ಟು.
‘ನಾನು ಮೂಲತಃ ಮಂಗಳೂರಿನ ಹುಡುಗಿ. ತಂದೆ ಮಂಗಳೂರಿನವರು. ತಾಯಿ ಉತ್ತರ ಕರ್ನಾಟಕದವರು. ಹುಬ್ಬಳ್ಳಿ ಸಮೀಪದ ನವಲಗುಂದದಲ್ಲೇ ಹೆಚ್ಚು ಆಡಿ, ಓದಿ ಬೆಳೆದವಳು.
ನನಗೆ ಸಿನಿಮಾಗೆ ಬರಬೇಕು ಎಂಬ ಯಾವ ಯೋಚನೆಯೂ ಇರಲಿಲ್ಲ. ಆದರೆ, ಸಿನಿಮಾ ವಿಚಾರದಲ್ಲೇ ಒಬ್ಬರು ಮನ ನೋಯಿಸಿದ್ದರು. ಆ ಕಾರಣಕ್ಕೆ ನಾನೇಕೆ ಇಲ್ಲಿ ಬಂದು ನಿಲ್ಲಬಾರದು ಅಂತ ಚಾಲೆಂಜ್ ಮಾಡಿ ಒಬ್ಬ ನಟಿಗೆ ಬೇಕಾದ ನಟನಾ ತರಬೇತಿ ಸೇರಿದಂತೆ ಸಿನಿಮಾಗೆ ಇರಬೇಕಾದ ಒಂದಷ್ಟು ಅರ್ಹತೆ ಪಡೆದು ಸಿನಿಮಾ ರಂಗ ಪ್ರವೇಶಿಸಿದೆ. ಆರಂಭದಲ್ಲಿ ನಾನು ಮಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ಮಾಡುವಾಗಲೇ ತುಳು ಸಿನಿಮಾವೊಂದರಲ್ಲಿ ನಟಿಸುವ ಅವಕಾಶ ಸಿಕ್ತು.
ಆದರೆ, ಆ ಸಿನಿಮಾ ನಿಂತು ಹೋಯ್ತು. ಅಲ್ಲೊಂದಷ್ಟು ಅವಮಾನಗಳೂ ಆದವು. ಕೊನೆಗೆ ನಾನು ನಟಿ ಆಗಲೇಬೇಕು ಅಂತ ಡಿಸೈಡ್ ಮಾಡಿದೆ. ಕನ್ನಡ ಚಿತ್ರರಂಗದಲ್ಲಿ ಅವಕಾಶ ಹುಡುಕಿ ಬಂತು. ಮೊದಲು ‘ನಾನು ನನ್ನ ಹುಡುಗಿ’ ಎಂಬ ಸಿನಿಮಾದಲ್ಲಿ ನಟಿಸೋ ಚಾನ್ಸ್ ಸಿಕ್ತು ಆದರೆ, ಆ ಸಿನಿಮಾನೂ ನಿಂತು ಹೋಯ್ತು. ಅದೇ ಸಿನಿಮಾ ನಿರ್ದೇಶಕರು ಮತ್ತೊಂದು ಸಿನಿಮಾ ಮಾಡಿದ್ರು. ಅಲ್ಲಿ ನಟಿಸೋ ಅವಕಾಶ ಸಿಕ್ತು. ಅಲ್ಲಿಂದ ನನ್ನ ಸಿನಿಮಾ ಜರ್ನಿ ಶುರುವಾಯ್ತು ಎಂಬುದು ಸ್ವಪ್ನ ಶೆಟ್ಟಿಗಾರ್ ಮಾತು.
ಈ ಸಿನಿಮಾರಂಗಕ್ಕೆ ಬಂದಿದ್ದು ಖುಷಿ ಇದೆ. ಕಲರ್ ಫುಲ್ ಜಗತ್ತು ಇದು. ಕಲರ್ ಫುಲ್ ಆಗಿಯೇ ಬದುಕು ಕಟ್ಟಿಕೊಳ್ಳಬೇಕು ಎಂಬ ಅದಮ್ಯ ಆಸೆ ಇದೆ. ಆರು ವರ್ಷಗಳ ಈ ಜರ್ನಿಯಲ್ಲಿ ಸಿನಿಮಾ ಸಾಕಷ್ಟು ಕಲಿಸಿಕೊಟ್ಟಿದೆ. ಒಳ್ಳೆಯ ಮತ್ತು ಕೆಟ್ಟ ಅನುಭವವೂ ಆಗಿದೆ. ಇಲ್ಲೀಗ ಗಟ್ಟಿನೆಲೆ ಕಾಣಬೇಕು ಅಂತ ನಿರ್ಧರಿಸಿದ್ದೇನೆ. ಈ ನಿಟ್ಟಿನಲ್ಲಿ ಒಳ್ಳೊಳ್ಳೆಯ ಕಥೆ ಮತ್ತು ಪಾತ್ರಗಳನ್ನು ಎದುರು ನೋಡುತ್ತಿದ್ದೇನೆ.
ಆರಂಭದಲ್ಲಿ ಸಿಕ್ಕ ಪಾತ್ರಗಳನ್ನು ಮಾಡುತ್ತಿದ್ದೆ. ಹೀರೋಯಿನ್ ಆಗುವ ತುಡಿತ ಇತ್ತು. ಆದರೆ, ಕೆಲ ನಿರ್ದೇಶಕರ ದೃಷ್ಟಿಯಲ್ಲಿ ನಾನು ಹೀರೋಯಿನ್ ಮೆಟೀರಿಯಲ್ ಆಗಿರಲಿಲ್ಲ. ಆಮೇಲೆ ಹೀರೋಯಿನ್ ಆಗಲೇಬೇಕು ಅಂತ ವರ್ಕೌಟ್ ಶುರು ಮಾಡಿದೆ. ಸಿನಿಮಾ ನಾಯಕಿ ಆಗುವ ಎಲ್ಲ ಅರ್ಹತೆ ಪಡದುಕೊಂಡೆ. ಅಲ್ಲಿಂದ ಮೂರ್ನಾಲ್ಕು ಸಿನಿಮಾಗಳಿಗೆ ನಾಯಕಿ ಅದೆ. ಒಮ್ಮೊಮ್ಮೆ ನನಗೆ ಈ ಇಂಡಸ್ಟ್ರಿ ಬೇಸರ ತರಿಸಿದ್ದು ನಿಜ. ಅವಕಾಶ ಮಿಸ್ ಆದಾಗೆಲ್ಲ ಬೇಜಾರು ಆಗುತ್ತಿತ್ತು. ಆದರೂ, ತಾಳ್ಮೆಯಿಂದಲೇ ಅವಕಾಶ ಪಡೆದೆ. 19 ಸಿನಿಮಾಗಳಲ್ಲಿ ಗಮನಿಸುವ ಪಾತ್ರಗಳನ್ನು ಮಾಡುತ್ತ ಅನುಭವ ಪಡೆದೆ.
ಈಗ ಆರು ಸಿನಿಮಾಗಳಲ್ಲಿ ನಾಯಕಿಯಾಗಿದ್ದೇನೆ. ‘ಡವ್ ಮಾಸ್ಟರ್’ ಸಿನಿಮಾ ಪಾತ್ರ ಚೆನ್ನಾಗಿದೆ. ಅಲ್ಲಿ ಕಥೆಯೇ ಹೈಲೆಟ್. ಇದು ಕೂಡ ರಿಲೀಸ್ ಗೆ ರೆಡಿಯಾಗುತ್ತಿದೆ. ಇನ್ನು, ‘ಯಾವ ಮೋಹನ ಮುರಳಿ ಕರೆಯಿತು’ ಸಿನಿಮಾ ಬಗ್ಗೆ ಹೇಳಲೇಬೇಕು. ಇದು ನನಗೆ ಮಾತ್ರವಲ್ಲ, ಇಡೀ ತಂಡಕ್ಕೆ ಒಳ್ಳೆಯ ಹೆಸರು ತಂದುಕೊಡುತ್ತೆ ಎಂಬ ಭವ್ಯ ಭರವಸೆ ಇದೆ.
‘ಯಾವ ಮೋಹನ ಮುರಳಿ ಕರೆಯಿತು’ ಚಿತ್ರ ಇಷ್ಟ ಆಗೋಕೆ ಕಾರಣ ಕಥೆ ಮತ್ತು ಪಾತ್ರ. ಅಲ್ಲಿ ಎಮೋಷನ್ಸ್ ಇದೆ, ಭಾವನೆಗಳಿವೆ, ಭಾವುಕತೆ ಇದೆ, ಸಂಬಂಧಗಳ ಮೌಲ್ಯವಿದೆ. ಎಲ್ಲಕ್ಕಿಂತ ಮಿಗಿಲಾಗಿ ಮಾನವೀಯತೆಯ ಗುಣ ಇದೆ. ನಾನಿಲ್ಲಿ ವಿಕಲಚೇತನ ಮಗಳ ತಾಯಿಯಾಗಿ ನಟಿಸಿದ್ದೇನೆ. ಅದೊಂದು ತೂಕದ ಪಾತ್ರ. ಇಡೀ ಸಿನಿಮಾದಲ್ಲಿ ಬದುಕಿನ ಅರ್ಥವಿದೆ. ಭಾವನೆಗಳ ಗುಚ್ಛವಿದೆ. ಅ ಕಾರಣಕ್ಕೆ ಈ ಸಿನಿಮಾಒಪ್ಪಿಕೊಂಡೆ. ಸದ್ಯ ಸಿನಿಮಾದ ಟೀಸರ್ ಮತ್ತು ಲಿರಿಕಲ್ ಸಾಂಗ್ ಗ್ಲಿಂಪ್ಸ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇಷ್ಟರಲ್ಲೇ ಆಡಿಯೋ ರಿಲೀಸ್ ಆಗಲಿದೆ. ಚಿತ್ರದುರ್ಗದಲ್ಲಿ ಆಡಿಯೋ ಕಾರ್ಯಕ್ರಮ ಕೂಡ ನಡೆಯಲಿದೆ.
‘ಯಾವ ಮೋಹನ ಮುರಳಿ ಕರೆಯಿತು’ ಸಿನಿಮಾದ ಸ್ಪೆಷಲ್ ಅಂದರೆ ರಾಕಿ. ಇಡೀ ಚಿತ್ರದ ಕೇಂದ್ರ ಬಿಂದು ರಾಕಿ. ರಾಕಿ ಅಂದರೆ ಶ್ವಾನದ ಹೆಸರು. ನನ್ನ ಮಗಳು ಮತ್ತು ರಾಕಿ ನಡುವಿನ ಸಂಬಂಧ ಮತ್ತು ಅವರಿಬ್ಬರ ಬದುಕಿನ ಉತ್ಸಾಹವೇ ಜೀವಾಳ. ಶೂಟಿಂಗ್ ವೇಳೆ ನಾವುಗಳು ಟೇಕ್ ತೆಗೆದುಕೊಂಡರೆ, ರಾಕಿ ಮಾತ್ರ ಒಂದೇ ಟೇಕ್ ಓಕೆ ಮಾಡುತ್ತಿದ್ದ. ಸೋ ಆ ಕ್ಷಣಗಳೇ ಮರೆಯದ ಅನುಭವ. ಸಿನಿಮಾ ಶೂಟಿಂಗ್ ಅನಿಸಲಿಲ್ಲ ಫ್ಯಾಮಿಲಿ ಟ್ರಿಪ್ ಥರಾ ಇತ್ತು. ಅದಕ್ಕೆ ಕಾರಣ ಟೀಮ್ ಮತ್ತು ಪ್ರೊಡಕ್ಷನ್ ಹೌಸ್. ನಿರ್ಮಾಪಕ ಶರಣಪ್ಪ ಹಾಗು ನಿರ್ದೇಶಕ ವಿಶ್ವಾಸ್ ಕೊಟ್ಟ ಸಹಕಾರ ಪ್ರೋತ್ಸಾಹದಿಂದ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ.
ನನಗೆ ಬಾಲಿವುಡ್ ನಟಿ ರೇಖಾ ಅವರು ರೋಲ್ ಮಾಡೆಲ್. ಇನ್ನು ನನಗೆ ಚಾಲೆಂಜ್ ಎನಿಸುವ ಪಾತ್ರ ಮಾಡುವಾಸೆ. ಅದರಲ್ಲೂ ವಿಲನ್ ಇದ್ದರಂತೂ ಓಕೆ. ಈಗಾಗಲೇ ಕ್ಲಾಂತ ಎಂಬ ಸಿನಿಮಾದಲ್ಲಿ ನಾನು ವಿಲನ್ ಪಾತ್ರ ಮಾಡಿದ್ದೇನೆ. ನಾಯಕಿಯಷ್ಟೇ ಪ್ರಬಲ ಪಾತ್ರವದು. ಕನ್ನಡ ಮಾತ್ರವಲ್ಲ, ಪರಭಾಷೆ ಸಿನಿಮಾದಲ್ಲಿ ಒಳ್ಳೆಯ ಪಾತ್ರ ಕಂಟೆಂಟ್ ಇದ್ದರೆ ಅಲ್ಲೂ ಹೋಗೋಕೆ ರೆಡಿ. ಇನ್ನು, ನಟನೆ ಜೊತೆ ನಾನು ಹಾಡ್ತೀನಿ ಕೂಡ. ಅದರಲ್ಲೂ ಜನಪದ ಮಾತ್ರ. ಜೊತೆಗೆ ನಿರ್ದೇಶನದ ಮೇಲೂ ಒಲವಿದೆ. ಒಂದೆರೆಡು ಕಥೆ ಕೂಡ ಬರೆದಿಟ್ಟುಕೊಂಡಿದ್ದೇನೆ. ಆ ಟೈಮ್ ಗಾಗಿ ಕಾಯುತ್ತಿದ್ದೇನೆ.
ಈಗ ರಿಲೀಸ್ ಗೆ ಏಳು ಸಿನಿಮಾಗಳಿವೆ. ಅದಕ್ಕೂ ಮುನ್ನ ಎರಡು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಒಂದಷ್ಟು ಕಥೆ ಕೇಳುತ್ತಿದ್ದೇನೆ . ತಮಿಳು ಸಿನಿಮಾದ ಕಥೆಯೊಂದು ಇಷ್ಟವಾಗಿದೆ. ಇನ್ನು ‘ಶಂಭೋ ಶಿವಶಂಕರ’ ಸಿನಿಮಾ ನಿರ್ದೇಶಕ ಶಂಕರ್ ಕೋನಮಾನಹಳ್ಳಿ ಅವರ ‘ಬಿಂಗೋ’ ಸಿನಿಮಾದಲ್ಲೂ ನಟಿಸುತ್ತಿದ್ದೇನೆ.
ಅದು ಹಾರರ್ ಕಮ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಕನ್ನಡ ಇಂಡಸ್ಟ್ರಿ ಈಗ ಯಾವುದರಲ್ಲೂ ಕಮ್ಮಿ ಇಲ್ಲ. ಒಳ್ಳೆಯ ಕಥಾಹಂದರ ಇರುವ ಸಿನಿಮಾಗಳು ಬರುತ್ತಿವೆ. ನಾನು ಗಟ್ಟಿ ಪಾತ್ರ, ಕಥೆ ಇರುವ ಸಿನಿಮಾ ಎದುರು ನೋಡುತ್ತಿದ್ದೇನೆ. ಯಾವುದೇ ಸಿನಿಮಾ ಬ್ಯಾಕ್ವಗ್ರೌಂಡ್ ಇರದ ನನಗೆ ನನ್ನ ಮೇಲೆ ವಿಶ್ವಾಸವಿದೆ. ಒಳ್ಳೆಯ ಸಿನಿಮಾ ಕೊಟ್ಟರೆ ಕನ್ನಡಿಗರು ಖಂಡಿತ ಬಿಟ್ಟು ಕೊಡಲ್ಲ ಎಂಬ ನಂಬಿಕೆ ನನಗಿದೆ ಎನ್ನುತ್ತಾರೆ ಸ್ವಪ್ನ.
ಪರಂವಃ ಸ್ಟುಡಿಯೋಸ್ ಲಾಂಛನದಲ್ಲಿ ಜಿ.ಎಸ್ ಗುಪ್ತ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಿಸಿರುವ, ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ ಸುಮಧುರ ಪ್ರೇಮಕಾವ್ಯದಲ್ಲಿ ಖ್ಯಾತ ನಟಿ ಗಿರಿಜಾ ಶೆಟ್ಟರ್ ಅಭಿನಯಿಸಿದ್ದಾರೆ.
ತೆಲುಗಿನ “ಗೀತಾಂಜಲಿ” ಚಿತ್ರ ಸೇರಿದಂತೆ ಅನೇಕ ಸುಪ್ರಸಿದ್ದ ಚಿತ್ರಗಳಲ್ಲಿ ನಟಿಸಿರುವ ಗಿರಿಜಾ ಶೆಟ್ಟರ್, ಈ ಚಿತ್ರದಲ್ಲೂ ನಟಿಸಿದ್ದಾರೆ. ಗಿರಿಜಾ ಶೆಟ್ಟರ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಅವರಿಗೆ ಸ್ವಾಗತ ಕೋರಿದೆ.
ವಿಭಿನ್ನ ಪ್ರೇಮಕಥಾಹಂದರ ಹೊಂದಿರುವ ಈ ಚಿತ್ರದ ನಾಯಕ – ನಾಯಕಿಯಾಗಿ ವಿಹಾನ್ ಹಾಗೂ ಅಂಕಿತಾ ಅಮರ್ ಅಭಿನಯಿಸಿದ್ದಾರೆ.
ಗಗನ್ ಬಡೇರಿಯಾ ಸಂಗೀತ ನಿರ್ದೇಶನ, ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ ಹಾಗೂ ರಕ್ಷಿತ್ ಕಾಪ್ ಅವರ ಸಂಕಲನ “ಇಬ್ಬನಿ ತಬ್ಬಿದ ಇಳೆಯಲಿ” ಚಿತ್ರಕ್ಕಿದೆ.