ವಾಣಿಜ್ಯ ಮಂಡಳಿಯ ಚುನಾವಣೆಯಲ್ಲಿ ಗೆದ್ದು ಆಯ್ಕೆಯಾದ ಎನ್.ಎಂ.ಸುರೇಶ್ ಅವರು, ಇದು ಚರಿತ್ರೆಯಲ್ಲಿ ಬರೆಯೋ ಚುನಾವಣೆ ಎಂದಿದ್ದಾರೆ. ನನ್ನ ಗೆಲುವಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ. ಈ ಗೆಲುವು ಬಳಿಕ ಮಾತನಾಡಿ, ಕಾವೇರಿ ವಿಚಾರದಲ್ಲಿ ಸದಾ ಚಿತ್ರರಂಗ ಹಾಗು ವಾಣಿಜ್ಯ ಮಂಡಳಿ ರೈತರ ಪರ ಇರಲಿದೆ ಎಂದಿದ್ದಾರೆ.
ನಾನು ನಾಲ್ಕು ಅಭ್ಯರ್ಥಿಗಳ ಮಧ್ಯೆ ಹೆಚ್ಚು ಮತ ಪಡೆಯೋಕೆ ಕಾರಣ ನನ್ನ ಗುರುಗಳಾದ ಸಾರಾ ಗೋವಿಂದು ಅವರು. ಅವರ ಮಾರ್ಗದರ್ಶನದಲ್ಲಿ ಗೆದ್ದಿದ್ದೀನಿ ಅವರಿಗೆ ಈ ಗೆಲುವು ಸಂತೋಷ ತಂದಿದೆ. ಈಗಷ್ಟೇ ಗೆದ್ದು ಆಯ್ಕೆ ಆಗಿದ್ದೇನೆ. ನಿಜಕ್ಕೂ ಇದು ಸಂತೋಷದ ವಿಚಾರ. ವಾಣಿಜ್ಯ ಮಂಡಳಿ ಹಾಗೂ ಚಿತ್ರರಂಗ ಎಂದಿಗೂ ರೈತರ ಪರ. ಅವರಿಗೆ ಸಪೋರ್ಟ್ ಮಾಡಿಲ್ಲ ಅಂದರೆ ನಮ್ಮ ಜನ್ಮ ಸಾರ್ಥಕವಾಗಲ್ಲ. ಮೊದಲ ಮೀಟಿಂಗ್ ಕಾವೇರಿ ವಿಚಾರವಾಗಿ ಮಾಜಿ ಅಧ್ಯಕ್ಷರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡ್ತಿನಿ ಎಂದಿದ್ದಾರೆ.
ನನ್ನ ಗೆಲುವಿಗೆ ಕಾರಣವಾದ ಎಲ್ಲಾ ನಿರ್ಮಾಪಕರಿಗೆ ವಿತರಿಕರಿಗೆ ಹಾಗೂ ಪ್ರದರ್ಶಕರಿಗೆ ಧನ್ಯವಾದಗಳು ತಿಳಿಸಿದ್ದಾರೆ.
ಈ ಬಾರಿ ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಎನ್.ಎಂ. ಸುರೇಶ್ ಅವರು ಹೆಚ್ಚು ಮತಗಳನ್ನು ಪಡೆದು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 1599 ಮತಗಳ ಪೈಕಿ 967 ಮತಗಳು ಚಲಾವಣೆಯಾಗಿದ್ದವು.ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಿಲ್ಪಾ ಶ್ರೀನಿವಾಸ್ 217 ವಿ.ಹೆಚ್.ಸುರೇಶ್ ( ಮಾರ್ಸ್ ಸುರೇಶ್) 181, ಎನ್.ಎಮ್ ಸುರೇಶ್ 337 ಹಾಗು ಎ.ಗಣೇಶ್ 204 ಮತಗಳನ್ನು ಪಡೆದಿದ್ದಾರೆ.
ಎನ್. ಎಮ್ ಸುರೇಶ್ 120 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಇನ್ನು ಗೌರವ ಕಾರ್ಯದರ್ಶಿ ನಿರ್ಮಾಪಕರ ವಲಯದಿಂದ ಬಾ ಮ ಗಿರೀಶ್ ಗೆಲುವು ಪಡೆದರೆ ಗೌರವ ಕಾರ್ಯದರ್ಶಿ ವಿತರಕರ ವಲಯದಿಮದ ಸುಬ್ರಮಣಿ ವಿ (ಕರಿಸುಬ್ಬು) ಗೆಲುವು ಸಾಧಿಸಿದ್ದಾರೆ. ಗೌರವ ಕಾರ್ಯದರ್ಶಿ ಪ್ರದರ್ಶಕರ ವಲಯದಿಂದ ಸುಂದರ್ ರಾಜು ಆರ್ ಗೆದ್ದರೆ, ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಮೀಳಾ ಜೋಶಾಯ್ ಗೆಲುವು ಕಂಡಿದ್ದಾರೆ.
ವಿತರಕರ ವಲಯದಿಂದ ಉಪಾಧ್ಯಕ್ಷರಾಗಿ ಜಿ ವೆಂಕಟೇಶ್ ,ಪ್ರದರ್ಶಕರ ವಲಯದಿಂದ ಉಪಾಧ್ಯಕ್ಷರಾಗಿ ನರಸಿಂಹಲು ಗೆಲುವು ಕಂಡಿದ್ದಾರೆ. ಖಜಾಂಚಿಯಾಗಿಜಯಸಿಂಹ ಮುಸರಿ ಗೆದ್ದಿದ್ದಾರೆ.
ಚಿತ್ರ : ಒಲವೇ ಮಂದಾರ 2 ನಿರ್ದೇಶನ : ಎಸ್.ಆರ್.ಪಾಟೀಲ್ ನಿರ್ಮಾಣ : ರಮೇಶ್ ಮರಗೋಳ, ಸತೀಶ್ ತಾರಾಗಣ: ಸನತ್, ಪ್ರಜ್ಞಾ ಭಟ್, ಅನುಪಾ ಸತೀಶ್, ಭವ್ಯಾ, ಮಂಜುಳಾ ರೆಡ್ಡಿ, ಡಿಂಗ್ರಿ ನಾಗರಾಜ್, ಮಡೆನೂರ ಮನು ,ಶಿವಾನಂದ ಸಿಂದಗಿ ಇತರರು.
ರೇಟಿಂಗ್ : 3/5
ವಿಜಯ್ ಭರಮಸಾಗರ
ಸಿನಿಮಾ ಅಂದಮೇಲೆ ಪ್ರೀತಿ ಗೀತಿ ಇತ್ಯಾದಿ ಇರಲೇಬೇಕು. ಪ್ರೀತಿ ಇದ್ದಾಗ ದ್ವೇಷ, ಅಸೂಯೆ ಕೂಡ ಇದ್ದೇ ಇರುತ್ತೆ. ಈಗಾಗಲೇ ಇಂತಹ ಅನೇಕ ಕಥೆ ಇರುವ ಸಿನಿಮಾಗಳು ಬಂದಿವೆ. ಆ ಸಾಲಿಗೆ ಒಲವೇ ಮಂದಾರ 2 ಚಿತ್ರವೂ ಸೇರಿದೆ. ಇದು ಪರಿಶುದ್ಧ ಪ್ರೇಮ ಕಥೆ. ಆದರೆ, ಕಥೆಯಲ್ಲಿ ಹೊಸತನವಿಲ್ಲ. ನಿರೂಪಣೆಯಲ್ಲೂ ವಿಶೇಷವೇನಿಲ್ಲ. ಆದರೆ, ತಾಳ್ಮೆಯಿಂದ ನೋಡಿದರೆ, ಅಂತ್ಯದಲ್ಲೊಂದು ಸಂದೇಶವಿದೆ. ಅದೊಂದೇ ಸಿನಿಮಾದ ಜೀವಾಳ. ಆ ಜೀವಾಳ ಏನೆಂಬುದನ್ನು ಕಂಡುಕೊಳ್ಳುವ ಕುತೂಹಲವಿದ್ದರೆ ಅವರಿಬ್ಬರ ಮಂದಾರ ನೋಡಲ್ಲಡ್ಡಿಯಿಲ್ಲ.
ಆರಂಭದಲ್ಲಿ ಸಿನಿಮಾ ಮಂದಗತಿಯಲ್ಲೇ ಸಾಗುತ್ತೆ. ಕೆಲವೆಡೆ ನೀರಸ ಎನಿಸಿದರೂ, ಬರುವ ಹಾಡು, ಕಿರುನಗೆ ಚೆಲ್ಲುವ ಸಣ್ಣ ಹಾಸ್ಯಮಯ ದೃಶ್ಯಗಳು ಸಿನಿಮಾವನ್ನು ನೋಡಿಸಿಕೊಂಡು ಹೋಗುತ್ತವೆ. ಇಲ್ಲಿ ಒಂದೊಳ್ಳೆಯ ಪ್ರೀತಿಯ ಕಥೆ ಇದೆ. ಅದರೊಳಗೆ ವ್ಯಥೆಯೂ ಇದೆ. ಕಥೆ ಸರಳವಾಗಿದೆ. ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿ ಹಿಡಿತ ಇರಬೇಕಿತ್ತು. ಮೊದಲರ್ಧ ನಿಧಾನ. ದ್ವಿತಿಯಾರ್ಧ ಸಿನಿಮಾ ನಿಧಾನವಾಗಿಯೇ ಕುತೂಹಲ ಕೆರಳಿಸುತ್ತ ಹೋಗುತ್ತೆ.
ಕಥೆ ಇಷ್ಟು…
ನಾಯಕ ಆರ್ಯ ಬಿಕಾಂ ಓದಿದ್ದರೂ ಕೆಲಸಕ್ಕೆ ಹೋಗದೆ ತನ್ನ ಹಳ್ಳಿಯಲ್ಲೇ ಇದ್ದು, ಹಳ್ಳಿ ಜನಪರ ಕೆಲಸ ಮಾಡುವ ಆಶಯ ಇಟ್ಟುಕೊಂಡವ. ಅದೇ ಊರಲ್ಲಿ ರಾಜಕಾರಣಿಯೊಬ್ಬರ ಮಗಳ (ಭೂಮಿ) ಮೇಲೆ ಪ್ರೀತಿ ಹುಟ್ಟಿಸಿಕೊಂಡವ. ಅತ್ತ, ರಾಜಕಾರಣಿಗೆ ಆರ್ಯನೆಂದರೆ ದ್ವೇಷ. ಇತ್ತ ಭೂಮಿ ಅಂದರೆ ಆರ್ಯನಿಗೆ ಪ್ರಾಣ. ಮದುವೆಗೆ ಬಲವಾದ ವಿರೋಧ ವ್ಯಕ್ತವಾದಾಗ, ನಡೆಯುವ ಸನ್ನಿವೇಶಗಳು ಸಿನಿಮಾದ ಹೈಲೆಟ್.
ಇಲ್ಲಿ ಪ್ರೀತಿ, ಒಲವು, ನೋವು, ಸ್ನೇಹ, ಮಮತೆ, ತ್ಯಾಗ… ಇತ್ಯಾದಿ ಅಂಶಗಳು ಗಮನ ಸೆಳೆಯುತ್ತಾವಾದರೂ, ಅಲ್ಲಲ್ಲಿ ಸಿನಿಮಾ ನಿಧಾನ ಎನಿಸುವುದು ನಿಜ. ಹಾಗಂತ ದ್ವಿತಿಯಾರ್ಧ ಅಂದುಕೊಂಡಂತೆ ನಡೆಯಲ್ಲ. ಸಿನಿಮಾ ನೋಡಿ ಹೊರಬಂದವರಿಗೆ ತಕ್ಕಮಟ್ಟಿಗೆ ಕೆಲ ದೃಶ್ಯಗಳು ಕಾಡುತ್ತವೆ.
ಯಾರು ಹೇಗೆ?
ನಾಯಕ ಸನತ್ ಸಿಕ್ಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಎರಡು ಶೇಡ್ ಪಾತ್ರದಲ್ಲಿ ಗಮನಸೆಳೆಯುತ್ತಾರೆ. ನೋಡುಗರನ್ನು ನಗಿಸುವುದರ ಜೊತೆ ಅಳಿಸುವಲ್ಲೂ ಪ್ರಯತ್ನ ಪಟ್ಟಿದ್ದಾರೆ. ಪ್ರಜ್ಞಾ ಭಟ್ ಅವರ ನಟನೆಯಲ್ಲಿ ಲವಲವಿಕೆ ಇದೆ. ಅನುಪಾ ಕೂಡ ಇಷ್ಟವಾಗುತ್ತಾರೆ. ಅಪ್ಪನಾಗಿ ರಮೇಶ್ ಮರಗೋಳ ಸೈ ಎನಿಸಿಕೊಂಡರೆ, ಭವ್ಯಾ ಮಮ್ಮಲ ಮರಗುವ ಅಮ್ಮನಾಗಿ ಗಮನ ಸೆಳೆಯತ್ತಾರೆ. ಉಳಿದಂತೆ ತೆರೆ ಮೇಲೆ ನಟಿಸಿರುವ ಮಂಜುಳಾ ರೆಡ್ಡಿ, ಡಿಂಗ್ರಿ ನಾಗರಾಜ್, ಮಡೆನೂರ ಮನು, ಶಿವಾನಂದ ಇತರರು ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ.
ಡಾ. ಕಿರಣ್ ತೋಟಂಬೈಲ್ ಸಂಗೀತದ ಒಂದು ಹಾಡು ಪರವಾಗಿಲ್ಲ. ಹಿನ್ನೆಲೆ ಸಂಗೀತಕ್ಕಿನ್ನೂ ಧಮ್ ಬೇಕಿತ್ತು. ಕ್ಯಾಮೆರಾ ಕೈಚಳಕದಲ್ಲಿ ಕೊಂಚ ಚುರುಕಿದೆ.
ಕನ್ನಡಪರ ಸಂಘಟನೆಗಳ ಹೋರಾಟಗಾರರು, ನಿವೃತ್ತ ನ್ಯಾಯಾಧೀಶರು,ಮಾನವಹಕ್ಕು ಮಹಿಳಾ ಅಧ್ಯಕ್ಷರು,ಅನೇಕ ಚಳುವಳಿ ಹೋರಾಟಗಾರರಿಂದ “ಫೈಟರ್” ಚಿತ್ರದ ಬಿಡುಗಡೆ ದಿನಾಂಕ ಘೋಷಣೆ .
ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಾಣದ, ನೂತನ್ ಉಮೇಶ್ ನಿರ್ದೇಶನದ ಹಾಗೂ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಫೈಟರ್” ಚಿತ್ರದ ಬಿಡುಗಡೆ ದಿನಾಂಕ ನೂತನವಾಗಿ ಅನಾವರಣವಾಯಿತು. ಕನ್ನಡಪರ ಸಂಘಟನೆಗಳ ಹೋರಾಟಗಾರರು, ನಿವೃತ್ತ ನ್ಯಾಯಾಧೀಶರು,ಮಾನವಹಕ್ಕು ಮಹಿಳಾ ಅಧ್ಯಕ್ಷರು, ಅನೇಕ ಚಳುವಳಿ ಹೋರಾಟಗಾರರಿಂದ “ಫೈಟರ್” ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಯಿತು. ಬಹು ನಿರೀಕ್ಷಿತ ಈ ಚಿತ್ರ ಅಕ್ಟೋಬರ್ 6 ರಂದು ತೆರೆಗೆ ಬರಲಿದೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಶಿವರಾಮೇ ಗೌಡ, ಕನ್ನಡ ಸೇನೆ ರಾಜ್ಯಾಧ್ಯಕ್ಷರಾದ ಕೆ.ಆರ್ ಕುಮಾರ್, ರಮೇಶ್ ಗೌಡ (ಕಸ್ತೂರಿ ಕರ್ನಾಟಕ ಜನಪ್ರಿಯ ವೇದಿಕೆ), ಕೆ.ಸಿ.ಮೂರ್ತಿ(ಕರ್ನಾಟಕ, ಕನ್ನಡ ರಕ್ಷಣಾ ವೇದಿಕೆ), ವೆಂಕಟ್ ಸ್ವಾಮಿ (ಸಮತಾ ಸೈನಿಕ ದಳ), ಶಿವಾನಂದ ಶೆಟ್ಟಿ(ಕ ರಾ ವೇ ಬೆಂಗಳೂರು), ಭಾರತಿ ನಾಯಕ್(ಹ್ಯೂಮನ್ ರೈಟ್ಸ್ ಮಹಿಳಾ ಅಧ್ಯಕ್ಷರು), ಕೆ.ಕೆ.ಮೋಹನ್ (ನಾಡ ಸೇನಾನಿ ಕೆಂಪೇಗೌಡ ಟ್ರಸ್ಟ್), ಮಲ್ಲಿಕಾರ್ಜುನ, ವಿಜಯಕುಮಾರ್, ಸೋಮಶೇಖರ್, ರವಿಕುಮಾರ್ ಮುಂತಾದ ಗಣ್ಯರು ಸಮಾರಂಭಕ್ಜೆ ಆಗಮಿಸಿ, “ಫೈಟರ್” ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.
“ಫೈಟರ್” ಚಿತ್ರದಲ್ಲಿ ನಾನು ರೈತರ ಪರ ಹೋರಾಟಗಾರ ಎಂದು ತಿಳಿಸಿದ ನಾಯಕ ವಿನೋದ್ ಪ್ರಭಾಕರ್ ಸಮಾರಂಭಕ್ಕೆ ಆಗಮಿಸಿದ ಎಲ್ಲಾ ಗಣ್ಯರಿಗೂ ನಮಸ್ಕಾರ ತಿಳಿಸಿದರು.
ನಿಜವಾದ ಫೈಟರ್ ಗಳೆಂದರೆ ನಮ್ಮ ನಾಡು,ನುಡಿ,ಜಲ, ಸಂಸ್ಕೃತಿ, ದೇಶಕ್ಕಾಗಿ ಹೋರಾಡಿದ ಹೋರಾಟಗಾರರು ಹಾಗಾಗಿ ನಾವು ಈ ನಮ್ಮ ಹೋರಾಟಗಾರರಿಂದ ಬಿಡುಗಡೆ ದಿನಾಂಕ ಘೋಷಣೆ ಮಾಡಲು ತೀರ್ಮಾನಿಸಿದೆವು ಎಂದು ನಿರ್ದೇಶಕ ನೂತನ ಉಮೇಶ್ ಹೇಳಿದರು
ನಮ್ಮ ಚಿತ್ರ ಅಕ್ಟೋಬರ್ 6 ರಂದು ಬಿಡುಗಡೆಯಾಗುತ್ತಿದೆ. ಇಷ್ಟು ಜನ ಹೋರಾಟಗಾರರು ಬಂದು ನಮ್ಮ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದು ಸಂತೋಷವಾಗಿದೆ. ಅಕ್ಟೋಬರ್ 6 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ ಎಂದರು ನಿರ್ಮಾಪಕ ಸೋಮಶೇಖರ್ ಕಟ್ಟಿಗೇನಹಳ್ಳಿ. ನಾಯಕಿ ಲೇಖಾಚಂದ್ರ ಇದ್ದರು.
ಪವನ್ ತೇಜ್ ಹಾಗೂ ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿರುವ “ಅಲೆಕ್ಸಾ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಜೀವ ನಿರ್ದೇಶಿಸಿರುವ ಈ ಚಿತ್ರದ ಟೀಸರ್ ರಿದಂ ಮ್ಯೂಸಿಕ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ವಿ.ಚಂದ್ರು ನಿರ್ಮಾಣದ ಈ ಚಿತ್ರ ನವೆಂಬರ್ ನಲ್ಲಿ ತೆರೆಗೆ ಬರುತ್ತಿದೆ.
ಇದೊಂದು ಮರ್ಡರ್ ಮಿಸ್ಟರಿ ಚಿತ್ರ. ಕಥೆ ಕೇಳಿದ ತಕ್ಷಣ ನಿರ್ಮಾಪಕರು ಇಷ್ಟಪಟ್ಟರು. ಇನ್ವೆಸ್ಟಿಗೇಶನ್ ಆಫೀಸರ್ ಆಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಪವನ್ ತೇಜ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫಾರ್ಮಾಸೆಟಿಕಲ್ ಮಾಫಿಯಾ ಬಗ್ಗೆ ಕೂಡ ಕ್ಲೈಮ್ಯಾಕ್ಸ್ ನಲ್ಲಿ ತೋರಿಸಿದ್ದೇವೆ. ಈ ಚಿತ್ರದ ಎರಡನೇ ಭಾಗವನ್ನು ತೆರೆಗೆ ತರುವ ಆಲೋಚನೆ ಇದೆ. ಮೈಸೂರು, ಮಡಿಕೇರಿ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ಮೂರು ಹಾಡುಗಳು ಹಾಗೂ ನಾಲ್ಕು ಸಾಹಸ ಸನ್ನಿವೇಶಗಳು ಚಿತ್ರದಲ್ಲಿದೆ. ಅಕ್ಟೋಬರ್ ಕೊನೆ ಅಥವಾ ನವೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ಬರಲಿದೆ ಎಂದು ನಿರ್ದೇಶಕ ಜೀವ ತಿಳಿಸಿದರು.
ನನಗೆ ನಿಜ ಜೀವನದಲ್ಲಿ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸ್ಸಿತ್ತು. ಅದು ಆಗಲಿಲ್ಲ. ನಿರ್ದೇಶಕರು ನೀವು ಈ ಚಿತ್ರದಲ್ಲಿ ಇನ್ವೆಸ್ಟಿಗೇಶನ್ ಆಫೀಸರ್ ಅಂದ ತಕ್ಷಣ ಒಪ್ಪಿಕೊಂಡೆ. ಸಾಹಸ ದೃಶ್ಯಗಳಲ್ಲೂ ಕಾಣಿಸಿಕೊಳ್ಳುವ ಕನಸ್ಸಿತ್ತು. ಅದು ಈ ಚಿತ್ರದಲ್ಲಿ ನನಸ್ಸಾಗಿದೆ. ಸಾಹಸ ನಿರ್ದೇಶಕ ರವಿವರ್ಮ ಹಾಗೂ ಮಾಸ್ ಮಾದ ಅವರು ಸಾಹಸ ಸಂಯೋಜನೆಯಲ್ಲಿ ನಾನು ಅಭಿನಯಿಸಿರುವ ಸಾಹಸ ಸನ್ನಿವೇಶಗಳು ಚೆನ್ನಾಗಿ ಬಂದಿದೆ ಎಂದರು ನಟಿ ಅದಿತಿ ಪ್ರಭುದೇವ.
ಚಿತ್ರದಲ್ಲಿ ಗಂಡ – ಹೆಂಡತಿ ಕೊಲೆ ಆಗಿರುತ್ತದೆ. ಆ ಕೊಲೆಯ ತನಿಖೆಯ ಸುತ್ತ ಕಥೆ ಸಾಗುತ್ತದೆ ಎಂದು ಮಾತನಾಡಿದ ನಾಯಕ ಪವನ್ ತೇಜ್ ಅದಿತಿ ಪ್ರಭುದೇವ ಅವರ ಜೊತೆ ನಟಿಸುವ ಹಂಬಲವಿತ್ತು. ಈ ಚಿತ್ರದಲ್ಲಿ ನಟಿಸಿದ್ದೇನೆ ಎಂದರು.
ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ನೋಡಿ. ಪ್ರೋತ್ಸಾಹ ನೀಡಿ ಎನ್ನುತ್ತಾರೆ ನಿರ್ಮಾಪಕ ವಿ.ಚಂದ್ರು. ಚಿತ್ರದ ಬಹುತೇಕ ಕಲಾವಿದರು , ತಂತ್ರಜ್ಞರು ಹಾಗೂ ಚಿತ್ರದ ವಿತರಕರಾದ ರಿಲಯನ್ಸ್ ಎಂಟರ್ಟೈನ್ಮೆಂಟ್ ಅವರು “ಅಲೆಕ್ಸಾ” ಬಗ್ಗೆ ಮಾತನಾಡಿದರು.
ಪವನ್ ತೇಜ್, ಅದಿತಿ ಪ್ರಭುದೇವ, ನಾಗಾರ್ಜುನ್, ಮೇಘಶ್ರೀ, ಮಿಮಿಕ್ರಿ ಗೋಪಿ, ಚಂದ್ರಕಲಾ ಮೋಹನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
A p o ಸಂಗೀತ ನಿರ್ದೇಶನದಲ್ಲಿ ಮೂರು ಹಾಡುಗಳು ಸುಂದರವಾಗಿದೆ. ಸತೀಶ್ ಬಿ ಅವರ ಛಾಯಾಗ್ರಹಣ ಹಾಗೂ ಉಮೇಶ್ ಆರ್ ಬಿ ಸಂಕಲನ “ಅಲೆಕ್ಸಾ” ಚಿತ್ರದಲ್ಲಿ ಸುಂದರವಾಗಿ ಮೂಡಿಬಂದಿದೆ.
“ಜಲಂಧರ” ಚಿತ್ರತಂಡ ಇತ್ತೀಚೆಗೆ ಪ್ರಮೋದ್ ಶೆಟ್ಟಿ ಅವರ ಹುಟ್ಟು ಹಬ್ಬದ ಉಡುಗೊರೆಯಾಗಿ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿತ್ತು. ಚಿತ್ರದ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಿದ ಬೆನ್ನಲ್ಲೆ “ಜಲಂಧರ” ಚಿತ್ರತಂಡ, ಮಾತಿನ ಮರು ಜೋಡಣೆ ( ಡಬ್ಬಿಂಗ್ ) ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಖುಷಿಯಲ್ಲಿದ್ದಾರೆ.
ಸ್ಟೆಪ್ ಅಪ್ ಲೋಕೇಶ್ ನಟಿಸಿ, ಕತೆ ಬರೆದು ಸ್ಟೇಪ್ ಅಪ್ ಪಿಚ್ಚರ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿರುವ “ಜಲಂಧರ” ಚಿತ್ರಕ್ಕೆ ಮದನ್ ಎಸ್, ಚಂದ್ರ ಮೋಹನ್ ಸಿ ಎಲ್, ರಮೇಶ್ ರಾಮಚಂದರ್ ಹಾಗೂ ಪದ್ಮನಾಭನ್ ಹಣ ಹಾಕಿ ಕೈ ಜೋಡಿಸಿದ್ದಾರೆ. ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಮೊದಲ ಬಾರಿಗೆ ವಿಷ್ಣು ವಿ ಪ್ರಸನ್ನ ನಿರ್ದೇಶನ ಮಾಡಿದ್ದಾರೆ.
ರಶ್ಮಿತ್ ಕುಮಾರ್ ನಿರ್ಮಾಣ ನಿರ್ವಹಣೆಯ ಕಾರ್ಯವನ್ನು ವಹಿಸಿಕೊಂಡಿದ್ದು ಇನ್ನು ಚಿತ್ರಕ್ಕೆ ನುರಿತ ಸಂಕಲನಕಾರ ವೆಂಕಿ UDV ಕತ್ತರಿ ಹಾಕಿದ್ದಾರೆ. ಕೇರಳ ಮೂಲದ ಛಾಯಾಗ್ರಹಕರಾದ ವಿದ್ಯಾಶಂಕರ್ ಮತ್ತು ಸರಿನ್ ರವೀಂದ್ರನ್ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಯುವ ಸಂಗೀತ ನಿರ್ದೇಶಕ ಜತಿನ್ ದರ್ಶನ್ ಸಂಗೀತ ನೀಡಿರುವ “ಜಲಂಧರ” ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಅಕ್ಷಯ್ ಕುಮಾರ್ ಎಮ್, ಕಲಾ ನಿರ್ದೇಶನ ರಾಜು ವೈವಿಧ್ಯ, ಸಾಹಸ ನಿರ್ದೇಶಕರಾದ ಕೌರವ ವೆಂಕಟೇಶ್, ಪತ್ರಿಕಾ ಸಂಪರ್ಕ ಸುದೀಂದ್ರ ವೆಂಕಟೇಶ್ ರವರು ಕೈ ಜೋಡಿಸಿದ್ದಾರೆ.
ಚಿತ್ರದ ಮುಖ್ಯ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ, ಟಗರು ಖ್ಯಾತಿಯ ರುಷಿಕಾ ರಾಜ್, ರಾಘು ರಾಮನಕೊಪ್ಪ, ಅರೋಹಿತಾ ಗೌಡ, ಬಲ ರಾಜ್ವಡಿ, ಆದಿ ಕೇಶವರೆಡ್ಡಿ, ಭೀಷ್ಮ ರಾಮಯ್ಯ, ಪ್ರತಾಪ ನೆನಪು, ನವೀನ್ ಸಾಗರ್, ವಿಶಾಲ್ ಪಾಟೀಲ್, ಪ್ರಸಾದ್ ಸೂರನಹಳ್ಳಿ, ಅಂಬು, ವಿಜಯ್ ರಾಜ್ ಮತ್ತು ನಂದಿನಿ ರಾಜ್ ಅಭಿನಯಿಸಿದ್ದಾರೆ.
“ಜಲಂಧರ” ಚಿತ್ರ ತಂಡವೂ ತಮ್ಮ ಚಿತ್ರದ ಪ್ರತಿ ಸಣ್ಣ ತುಣುಕುಗಳನ್ನು ವಿಭಿನ್ನವಾಗಿ ಪ್ರಚಾರ ಮಾಡುತ್ತಾ ಸ್ಯಾಂಡಲ್ ವುಡ್ ನಲ್ಲಿ ಹೊಸ ಭರವಸೆ ಹುಟ್ಟಿಸುತ್ತಾ ಚಿತ್ರದ ಅಂತಿಮ ಘಟ್ಟದತ್ತ ಸಾಗಿದೆ.
ಕಾವೇರಿಗಾಗಿ ತ್ಯಾಗಕ್ಕೆ ಸಿದ್ದ: ಚಿತ್ರರಂಗಕ್ಕೆ ಹೊಸತನದೊಂದಿಗೆ ಅಭಿವೃದ್ದಿಗೆ ಬದ್ದ
ವಾಣಿಜ್ಯಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂ.ಎನ್.ಸುರೇಶ್ರಿಂದ ಭರವಸೆಯ ಆಶ್ವಾಸನೆ
ಚುನಾವಣೆಗೂ ಮುನ್ನವೇ ನಿರ್ಮಾಪಕರ ಸಂಘಕ್ಕೆ ಕೋಟಿ ಕೋಟಿ ದೇಣಿಗೆ ತಂದ ಎನ್ ಎಂ ಸುರೇಶ್
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಜಿದ್ದಾಜಿದ್ದಿನ ಕಣದಲ್ಲಿರುವ ಅಭ್ಯರ್ಥಿಗಳು ಮಂಡಳಿಯ ಚುನಾವಣಾ ರಣಕಣದಲ್ಲಿ ಯುದ್ದಕ್ಕೆ ಸಜ್ಜಾಗಿದ್ದಾರೆ. 2023ರ ಚುನಾವಣೆಯಲ್ಲಿ ಮಂಡಳಿಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾರುವ ಹಿರಿಯ ನಿರ್ಮಾಪಕ ಎನ್ ಎಂ ಸುರೇಶ್ ಸುದ್ದಿಗೋಷ್ಠಿ ನಡೆಸಿ ವಾಣಿಜ್ಯ ಮಂಡಳಿಯ ಶ್ರೇಯೋಭಿವೃದ್ದಿಗೆ ತಮ್ಮ ಯೋಜನೆಗಳನ್ನು ವಿವರಿಸಿದರು. ತಮ್ಮ ನೇತೃತ್ವದ ತಂಡಕ್ಕೆ ಬೆಂಬಲ ಕೇಳುವುದರ ಜೊತೆಗೆ ವಾಣಿಜ್ಯ ಮಂಡಳಿಯ ಸಮಗ್ರ ಅಭಿವೃದ್ದಿಗೆ ಜೊತೆಯಾಗಿ ಎಂದು ಮನವಿ ಮಾಡಿಕೊಂಡರು.
ಸುದ್ದಿಗೋಷ್ಠಿಯ ಆರಂಭದಲ್ಲೇ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸದ್ಯ ಉಂಟಾಗಿರುವ ಸಮಸ್ಯೆಗೆ ತಮ್ಮ ತಂಡದ ಸಂಪೂರ್ಣ ಬೆಂಬಲ ಇದೆ ಎಂದು ಹಿರಿಯ ನಿರ್ಮಾಪಕ ಎನ್ ಎಂ ಸುರೇಶ್ ಘೋಷಿಸಿದರು.
‘ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್ ಅವರು ಕಾವೇರಿಗಾಗಿ ಹಿಂದೆ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಈ ಚುನಾವಣಾ ಕಣದಲ್ಲಿರುವ ನಮ್ಮ ತಂಡ, ಸದಾ ಈ ಕನ್ನಡ ನಾಡಿನ ಅಸ್ಮಿತೆಯ ವಿಚಾರಗಳಿಗೆ ಬೆಂಬಲವಷ್ಟೆ ಅಲ್ಲದೆ ಯಾವುದೇ ಹಂತದ ಹೋರಾಟ ಅಥವ ತ್ಯಾಗಕ್ಕೆ ಸಿದ್ದರಿದ್ದೇವೆ’ ಎಂದು ಕಾವೇರಿ ಸಮಸ್ಯೆಗೆ ಬಹಿರಂಗ ಬೆಂಬಲ ಘೋಷಿಸಿದರು.
ಚುನಾವಣೆ ಎಂದರೆ ಕೇವಲ ಅಧಿಕಾರ ಅಥವ ಹುದ್ದೆಯ ನಿರೀಕ್ಷೆಯಷ್ಟೆ ಅಲ್ಲ, 75 ವರ್ಷಗಳ ಇತಿಹಾಸ ಇರುವ ನಮ್ಮ ಕನ್ನಡ ಚಲನಚಿತ್ರೋಧ್ಯಮದ ಸಮಗ್ರ ಅಭಿವೃದ್ದಿ, ಆಧುನಿಕತೆ, ತಂತ್ರಜ್ಞಾನ, ಹಾಗೂ ಹಿರಿಯ ಅನುಭವಿಗಳ ಸೂಕ್ತ ಸಲಹೆಗಳೊಂದಿಗೆ ಮಂಡಳಿಯ ಸಮಗ್ರ ಅಭಿವೃದ್ದಿಯನ್ನ ವಾಸ್ತವಿಕವಾಗಿ ಕಟ್ಟಿಕೊಡೋ ಕೆಲಸವಾಗಿದೆ. 30 ವರ್ಷಗಳಿಂದ ಚಿತ್ರೋಧ್ಯಮದಲ್ಲಿರುವ ನಾನು ಕೇವಲ ಹುದ್ದೆಯ ಆಕಾಂಕ್ಷಿಯಾಗಿ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ಬದಲಿಗೆ ಈ ಚುನಾವಣೆಯ ಸದಾವಕಾಶವನ್ನು ಬಳಸಿಕೊಂಡು ದಶಕಗಳಿಂದ ಇರುವ ವಾಣಿಜ್ಯ ಮಂಡಳಿಯ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸ ಮಾಡುವ ಸದುದ್ದೇಶ ಹೊಂದಿದ್ದೇವೆ’ ಎಂದು ತಿಳಿಸಿದರು.
ಚಿತ್ರರಂಗದ ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದ್ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನ ದೇಶದದಲ್ಲೇ ಒಂದು ಮಾದರಿ ಮಂಡಳಿಯನ್ನಾಗಿಸುವುದೇ ನಮ್ಮ ಗುರಿಯಾಗಿದೆ. ಚಿತ್ರರಂಗದಲ್ಲಿನ ನೌಕರರ ಸಮಸ್ಯೆಗಳಿಗೆ ಪರಿಹಾರ ಹುಡುಕಿ, ನಟ ನಟಿಯರ ಗೌರವ ಹೆಚ್ಚಿಸುವ ವೇದಿಕೆ ಸೃಷ್ಟಿ ಮಾಡಬೇಕಿದೆ. ಅಲ್ಲದೆ ನೆಲ,ಜಲ,ಭಾಷೆ ವಿಚಾರಕ್ಕೆ ಕನ್ನಡ ಚಿತ್ರರಂಗ ಸದಾ ಸೇತುವೆಯಂತೆ ಕೆಲಸ ಮಾಡುವ ಉದ್ದೇಶ ಹೊಂದಿದ್ದೇವೆ’ ಎಂದರು.
‘ಈಗಾಗಲೇ ನನಗೆ ಸಿಕ್ಕಿರುವ ಸೇವೆಯ ಅವಕಾಶ ಬಳಸಿಕೊಂಡು ಹೊಂಬಾಳೆ ಫಿಲ್ಮ್ ಸಂಸ್ಥೆಯಿಂದ ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣಕ್ಕೆ 50 ಲಕ್ಷ ದೇಣಿಗೆ ತಂದಿದ್ದೇವೆ. ಮಲ್ಲೇಶ್ವರಂ ಕೋ ಆಪರೇಟಿವ್ ಬ್ಯಾಂಕ್ ನಿಂದ 3 ಕೋಟಿ ಸಾಲ ಮಂಜೂರು ಮಾಡಿಸಿ ಕಟ್ಟಡ ಕಾಮಗಾರಿಗೆ ತ್ವರಿತ ರೂಪ ನೀಡಿದ್ದೇವೆ. ಇದು ಸೇವೆಗಾಗಿ ಸಿಕ್ಕ ವೇದಿಕೆಯಾಗಿದೆ. ಚಿತ್ರರಂಗದ ಋಣ ನನ್ನ ಮೇಲೆ ಸಾಕಷ್ಟು ಇದೆ, ಆದರೆ ಅದನ್ನ ಸ್ವಲ್ಪ ಮಟ್ಟಿಗಾದರೂ ತೀರಿಸುವ ಕೆಲಸವನ್ನು ಈ ಚುನಾವಣೆಯ ಮೂಲಕ ಮಾಡುವ ಉದ್ದೇಶ ಹೊಂದಿದ್ದೇನೆ’ ಎಂದು ಹಿರಿಯ ನಿರ್ಮಾಪಕ ಎಂ.ಎನ್.ಸುರೇಶ್ ಹೇಳಿದರು.
ಚಿತ್ರೋದ್ಯಮಕ್ಕೆ ಆಧುನಿಕತೆ, ತಂತ್ರಜ್ಞಾನದ ಜೊತೆಗೆ ಹೊಸತನ ಜೊತೆಯಾದಾಗ ಅಷ್ಟೇ ಪ್ರಮಾಣದಲ್ಲಿ ಹೊಸ ಹೊಸ ಸವಾಲುಗಳು ಎದುರಾಗುತ್ತವೆ. ಅದು ನಟ, ನಟಿಯರಿಗೆ, ತಂತ್ರಜ್ಞರಿಗೆ, ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಸಂಬಂಧಿಸಿದ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ, ಹೊಸ ಕನಸುಗಳೊಂದಿಗೆ ಚಿತ್ರರಂಗಕ್ಕೆ ಬರುವ ಹೊಸಬರಿಗಾಗಿ ಹಲವು ಯೋಜನೆಗಳನ್ನು ರೂಪಿಸಿಕೊಂಡಿದ್ದೇವೆ. ಈ ಎಲ್ಲಾ ಕಾರಣದಿಂದ ಈ ಬಾರಿಯ ಚುನಾವಣೆಯಲ್ಲಿ ಮಂಡಳಿಯ ಮಾಜಿ ಅಧ್ಯಕ್ಷರಾದ ಶ್ರೀ ಸಾ.ರಾ.ಗೋವಿಂದ್ ಅವರ ಮಾರ್ಗದರ್ಶನಲ್ಲಿ ಚುನಾವಣೆಗೆ ಸಜ್ಜಾಗಿರುವ ನಮ್ಮ ತಂಡವನ್ನು ಬೆಂಬಲಿಸಿ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಶ್ರೇಯೋಭಿವೃದ್ದಿಗೆ ಸಹಕರಿಸಬೇಕು’ ಎಂದು ವಿನಂತಿಸಿಕೊಂಡರು.
ಎಂ.ಎನ್.ಸುರೇಶ್ ನೇತೃತ್ವದ ಈ ತಂಡಕ್ಕೆ ಮಾರ್ಗದರ್ಶಕರಾಗಿ ಹಿರಿಯ ನಿರ್ಮಾಪಕ,ಹೋರಾಟಗಾರ ಸಾ.ರಾ.ಗೋವಿಂದ್ ನಿಂತಿದ್ದಾರೆ. ತಂಡದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ವಿತರಕ ವಲಯದಿಂದ ಜಿ.ವೆಂಕಟೇಶ್ ಚಿಂಗಾರಿ ಬಿ ಮಹದೇವ್ ಹಾಗೂ ಪ್ರದರ್ಶಕರಿಂದ ಎಂ ನರಸಿಂಹಲು ಸ್ಪರ್ಧೆಗಿಳಿದಿದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ನಿರ್ಮಾಪಕರ ವಲಯದಿಂದ ರಾಜೇಶ್ ಬ್ರಹ್ಮಾವರ್, ವಿತರಕ ವಲಯದಿಂದ ಕೆ ಪಾರ್ಥ ಸಾರಥಿ, ಖಜಾಂಚಿ ಸ್ಥಾನಕ್ಕೆ ದಯಾಳ್ ಪದ್ಮನಾಭನ್ ಸ್ಪರ್ಧೆ ಮಾಡುತ್ತಿದ್ದು, ಕಾರ್ಯದರ್ಶಿ ಸ್ಥಾನಕ್ಕೆ ಸುಂದರ್ ರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಲ್ಲರೂ ಸುದ್ದಿಗೋಷ್ಠಿಯಲ್ಲಿ ಹಾಜರಾಗಿ ಚುನಾವಣೆಗೆ ಬೆಂಬಲ ಕೇಳಿದರು.
ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಿಸಿರುವ, ಶ್ರೀನಿ ನಿರ್ದೇಶನದ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ, ಬಹು ನಿರೀಕ್ಷಿತ “ಘೋಸ್ಟ್” ಚಿತ್ರದ ಥಿಯೇಟ್ರಿಕಲ್, ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. “ಆರ್ ಆರ್ ಆರ್”, “ಜವಾನ್” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುವ ಪೆನ್ ಸ್ಟುಡಿಯೋ ಸಂಸ್ಥೆ ಈಗ “ಘೋಸ್ಟ್” ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿದೆ.
ಕನ್ನಡ, ತಮಿಳು ಹಾಗೂ ಮಲೆಯಾಳಂ ಭಾಷೆಗಳನ್ನು ಹೊರೆತು ಪಡಿಸಿ ಮಿಕ್ಕೆಲ್ಲಾ ಭಾಷೆಗಳಲ್ಲಿ “ಘೋಸ್ಟ್” ಚಿತ್ರವನ್ನು ಪೆನ್ ಸ್ಟುಡಿಯೋ ಸಂಸ್ಥೆ ಬಿಡುಗಡೆ ಮಾಡುತ್ತಿರುವುದಾಗಿ ನಿರ್ಮಾಪಕ ಸಂದೇಶ್ ತಿಳಿಸಿದ್ದಾರೆ. ಇತ್ತೀಚೆಗೆ ಪೆನ್ ಸ್ಟುಡಿಯೋ ಸಂಸ್ಥೆ ಮುಖ್ಯಸ್ಥರಾದ ಜಯಂತಿ ಲಾಲ್ ಗಡ ಹಾಗೂ ನಿರ್ಮಾಪಕ ಸಂದೇಶ್ ಈ ಕುರಿತು ಮಾತನಾಡಿದ್ದಾರೆ.
ಅಕ್ಟೋಬರ್ ಮೊದಲವಾರ “ಘೋಸ್ಟ್” ಚಿತ್ರದ ಪ್ರಚಾರಕ್ಕಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಮುಂಬೈ, ದೆಹಲಿ ಮುಂತಾದ ಕಡೆ ತೆರಳುತ್ತಿದ್ದಾರೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ.
ಅಂದು ಹಾಸ್ಯನಟ ಕಾಶೀನಾಥ್ ಅವರು ಮನ್ಮಥನ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದರು, ಈಗ ಮಿ.ಅಂಡ್ ಮಿಸಸ್ ಮನ್ಮಥ ಹೆಸರಿನಲ್ಲಿ ಚಿತ್ರವೊಂದು ತಯಾರಾಗಿದ್ದು, ಅದರಲ್ಲಿ ಸುಬ್ರಮಣಿ ಅವರು ಮನ್ಮಥನಾಗಿ ಕಾಣಿಸಿಕೊಂಡಿದ್ದಾರೆ. ಸುಬ್ರಮಣಿ ಅವರೇ ನಿರ್ದೇಶನ ಮಾಡಿರುವ “ಮಿಸ್ಟರ್ ಅಂಡ್ ಮಿಸ್ ಮನ್ಮಥ” ಚಿತ್ರದ ಟ್ರೈಲರ್ ಮತ್ತು ಆಡಿಯೋ ಬಿಡುಗಡೆಯಾಗಿದೆ. ಇದೊಂದು ಕಾಮಿಡಿ ಹಾಗೂ ಫ್ಯಾಮಿಲಿ ಎಂಟರ್ಟೈನರ್ ಕಥಾಹಂದರ ಇರುವ ಚಿತ್ರವಾಗಿದ್ದು, ಮೂರು ದಶಕಗಳಿಂದ ಸೀರಿಯಲ್, ಸಿನಿಮಾ, ನಾಟಕ ಅಂತ ಅಭಿನಯದಲ್ಲಿ ತೊಡಗಿಕೊಂಡಿರುವ ಎ.ಸುಬ್ರಮಣಿ ರಾಮಗೊಂಡನಹಳ್ಳಿ ಅವರು ಈ ಚಿತ್ರದ ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತು ನಿಭಾಯಿಸಿದ್ದಾರೆ. ಜೊತೆಗೆ ಚಿತ್ರದ ನಾಯಕನಾಗೂ ಸಹ ಅಭಿನಯಿಸಿದ್ದಾರೆ, ರೈತ ಕುಟುಂಬದಿಂದ ಬಂದ ಸುಬ್ರಮಣಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ ಪಳಗಿ ಈಗ ಚಿತ್ರ ನಿರ್ಮಾಪಕನಾಗಿದ್ದಾರೆ, ಓರ್ವ ಶ್ರೀಮಂತ ಹಾಗೂ ಆಧುನಿಕ ಮನ್ಮಥನ ಕಥೆ ಇದಾಗಿದ್ದು, ಚಿತ್ರದಲ್ಲಿ ಶಕುಂತಲಾ, ಚಂದನಾ ಹಾಗೂ ವೈಶಾಲಿ(ಮಂಗಳಮುಖಿ) ಎಂಬ ಮೂವರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ, ನಾಯಕ ಸುಬ್ರಮಣಿ, ಕಳೆದ 94ರಿಂದಲೂ ಒಬ್ಬ ಹೀರೋ ಆಗಬೇಕೆಂದು ಪ್ರಯತ್ನಿಸಿದೆ, ಐದಾರು ಸೀರಿಯಲ್ ಹಾಗೂ ಅರಬ್ಬೀ ಕಡಲತೀರದಲ್ಲಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆರಂಭದಲ್ಲಿ ಮನ್ಮಥ ಒಬ್ಬ ಮೂಗನಾಗಿದ್ದು, ಶ್ರೀಮಂತನಾದ ಆತನಲ್ಲಿರುವ ಹಣವನ್ನು ಲಪಟಾಯಿಸಲು ಜಾಕ್ ಅಂಡ್ ಜಿಲ್ ಎಂಬ ಇಬ್ಬರು ವ್ಯಕ್ತಿಗಳು ಆತನ ಹಿಂದೆ ಮೂವರು ಹುಡುಗಿಯರನ್ನು ಛೂ ಬಿಡುತ್ತಾರೆ, ಆದರೆ ಆತ ಯಾವುದೇ ಅಮಿಶಕ್ಕೂ ಬಗ್ಗಲ್ಲ, ಹೀಗೆ ಮನರಂಜನಾತ್ಮಕವಾಗಿ ಕಥೆಯನ್ನು ಹೇಳಿಕೊಂಡು ಹೋಗಿದ್ದೇವೆ. ಚಿತ್ರಕ್ಕೆ ಬೆಂಗಳೂರು, ಅರಸೀಕೆರೆ, ಮಂಗಳೂರು ಮತ್ತು ಉಡುಪಿ ಸುತ್ತಮತ್ತ ಚಿತ್ರೀಕರಣ ನಡೆಸಲಾಗಿದೆ. ಅಲ್ಲದೆ ಚಿತ್ರವನ್ನು ಅ.6ಕ್ಕೆ ರಿಲೀಸ್ ಮಾಡುವ ಯೋಜನೆಯಿದೆ ಎಂದರು.
ನಾಯಕಿ ವೈಶಾಲಿ ಮಾತನಾಡಿ, ಸಿನಿಮಾದಲ್ಲಿ ಅಭಿನಯಿಸಬೇಕೆಂದು ತುಂಬಾ ಆಸೆಯಿತ್ತು, ನಮಗಾರೂ ಅವಕಾಶ ನೀಡಿರಲಿಲ್ಲ, ಸುಬ್ರಮಣಿ ಅವರು ಅವಕಾಶ ನೀಡಿದ್ದಾರೆ. ಚಿತ್ರದಲ್ಲಿ ರಮ್ಯ ಎಂಬ ಯುವತಿಯ ಪಾತ್ರ ಮಾಡಿದ್ದೇನೆ ಎಂದರು.
ನಟಿ ಚಂದನಾ ಮಾತನಾಡಿ ನನ್ನದು ಒಬ್ಬ ಲವರ್ ಪಾತ್ರ, ನಾನು ಸಕಲೇಶಪುರದವಳು ಎಂದು ಹೇಳಿದರು, ಸಂಗೀತ ನಿರ್ದೇಶಕ ಕೆವಿನ್, ಇದು ನನ್ನ ಸಂಗೀತ ನಿರ್ದೇಶನದ 8ನೇ ಚಿತ್ರ, ಚಿತ್ರದಲ್ಲಿ 4 ಹಾಡುಗಳಿದ್ದು, ಎಲ್ಲವೂ ವಿಭಿನ್ನವಾಗಿವೆ ಎಂದರು.
ಮಜಾಭಾರತದಲ್ಲಿ ಅಭಿನಯಿಸಿದ ಬಸವರಾಜ ನಾಯಕನ ಸ್ನೇಹಿತನಾಗಿ ಕಾಣಿಸಿಕೊಂಡಿದ್ದಾರೆ, ಮತ್ತೊಬ್ಬ ಸ್ನೇಹಿತನಾಗಿ ರವಿ ಕುಂದಾಪುರ ನಟಿಸಿದ್ದಾರೆ, ಮಾನ್ಯ ಶ್ರೇಯಶ್ರೀ ಕ್ರಿಯೇಶನ್ಸ್ ನಿರ್ಮಾಣದ ಈ ಚಿತ್ರಕ್ಕೆ ವಿಜಯರಾಜ್ ಅವರ ಕಥೆ-ಸಂಕಲನ, ರವಿಶ್ರೀ ಮಾರುತಿ ಅವರ ಸಹನಿರ್ದೇಶನ ಮತ್ತು ಸಂಭಾಷಣೆ, ರವಿ ಅವರ ಛಾಯಾಗ್ರಹಣ, ಜೈಪ್ರಕಾಶ್ ಅವರ ನೃತ್ಯ ನಿರ್ದೇಶನ, ಶಿವು ಅವರ ಸಾಹಸ ನಿರ್ದೇಶನವಿದೆ.
ಜಿ9 ಕಮ್ಯೂನಿಕೇಷನ್ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ, ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ “ದ ಜಡ್ಜ್ ಮೆಂಟ್” ಚಿತ್ರದ ಮಧ್ಯಂತರ ಮತ್ತು ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಇತ್ತೀಚಿಗೆ ಮೈಸೂರು ರಸ್ತೆಯಲ್ಲಿ ಇರುವ ಸಶಸ್ತ್ರ ಮೀಸಲು ಪಡೆ ಕಚೇರಿಯ ಆವರಣದಲ್ಲಿ ನಡೆಯಿತು. ರವಿಚಂದ್ರನ್, ದಿಗಂತ್, ಲಕ್ಷ್ಮೀ ಗೋಪಾಲಸ್ವಾಮಿ, ರಂಗಾಯಣ ರಘು, ಬಾಲಾಜಿ ಮನೋಹರ್, ಸುಜಯ್ ಶಾಸ್ತ್ರಿ, ಜಗದೀಶ್ ಮಲ್ನಾಡ್, ರವಿಶಂಕರ್ ಗೌಡ, ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ ಮತ್ತು ಅರವಿಂದ್ ಕುಪ್ಳೀಕರ್ ಮುಂತಾದ ನುರಿತ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಗುರುರಾಜ ಕುಲಕರ್ಣಿ(ನಾಡಗೌಡ) ನಿರ್ದೇಶನದಲ್ಲಿ, ಅನುಭವಿ ಪಿ ಕೆ ಹೆಚ್ ದಾಸ್ ಮೂರು ಕ್ಯಾಮರಾಗಳನ್ನು ಬಳಸಿಕೊಂಡು ಕ್ಲೈಮ್ಯಾಕ್ಸ್ ಭಾಗವನ್ನು ಚಿತ್ರಿಸಿಕೊಂಡರು. ವಿಶ್ವನಾಥ ಗುಪ್ತಾ, ರಾಮು ರಾಯಚೂರು ಮತ್ತು ರಾಜಶೇಖರ ಪಾಟೀಲ್ ಈ ಚಿತ್ರದ ನಿರ್ಮಾಪಕರು.
“ದ ಜಡ್ಜ್ ಮೆಂಟ್” ಕಥೆ ಲೀಗಲ್ ಥ್ರಿಲ್ಲರ್ ಶೈಲಿಯದಾಗಿದ್ದು, ರಾಜ್ಯಾಂಗ ಮತ್ತು ನ್ಯಾಯಾಂಗದ ಸುತ್ತ ನಡೆಯುವ ಘಟನೆಗಳನ್ನು ಬಳಸಿಕೊಂಡು ಕಾಲ್ಪನಿಕ ಕಥೆ ಹೆಣೆಯಲಾಗಿದೆ. ಈ ಸಿನೆಮಾ ಪ್ರೇಕ್ಷಕರಿಗೆ ಹೊಸ ಅನುಭವ ಕೊಡುವದು ಎಂದು ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ) ತಿಳಿಸಿದ್ದಾರೆ.
ಕ್ರೇಜಿ ಸ್ಟಾರ್ ರವಿಚಂದ್ರನ್, ದಿಗಂತ್ ಮಂಚಾಲೆ, ಮೇಘನಾ ಗಾಂವ್ಕರ್, ಧನ್ಯಾ ರಾಮ್ ಕುಮಾರ್, ಲಕ್ಷ್ಮೀ ಗೋಪಾಲಸ್ವಾಮಿ, ಟಿ ಎಸ್ ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ಸುಜಯ್ ಶಾಸ್ತ್ರಿ, ರಾಜೇಂದ್ರ ಕಾರಂತ್, ರವಿಶಂಕರ್ ಗೌಡ, ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ, ರೂಪಾ ರಾಯಪ್ಪ, ಪ್ರೀತಮ್, ಬಾಲಾಜಿ ಮನೋಹರ್, ಅರವಿಂದ್ ಕುಪ್ಳೀಕರ್ ಮತ್ತು ಜಗದೀಶ್ ಮಲ್ನಾಡ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಗುರುರಾಜ ಕುಲಕರ್ಣಿ (ನಾಡಗೌಡ) ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಪಿ ಕೆ ಎಚ್ ದಾಸ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಕೆಂಪರಾಜು ಬಿ ಎಸ್ ಸಂಕಲನ, ಪ್ರಮೋದ್ ಮರವಂತೆ ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಎಂ ಎಸ್ ರಮೇಶ್ ಸಂಭಾಷಣೆ ಬರೆದಿದ್ದಾರೆ. ಡಾ॥ ರವಿ ವರ್ಮ ಸಾಹಸ ನಿರ್ದೇಶನ ಹಾಗೂ ರೂಪೇಂದ್ರ ಆಚಾರ್ ಅವರ ಕಲಾ ನಿರ್ದೇಶನ “ದ ಜಡ್ಜ್ ಮೆಂಟ್” ಚಿತ್ರಕ್ಕಿದೆ.