ಕನ್ನಡದಲ್ಲಿ ಚಂದನ್ ಶೆಟ್ಟಿ ಅಂದ್ರೆ ಎಲ್ಲರಿಗೂ ಗೊತ್ತು. ಚಂದನ್ ಶೆಟ್ಟಿ ಅವರ ಹಾಡುಗಳನ್ನ ಕೇಳದ ಜನರಿಲ್ಲಾ, ಪಡ್ಡೆ ಹುಡುಗರ ಮತ್ತು ಹುಡುಗಿಯರ ಮನಗೆದ್ದ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿರುವ ಹಾಗೂ ಮೈ ಮೂವಿ ಬಜಾರ್ ಖ್ಯಾತಿ ನವರಸನ್ ಅವರ ನಿರ್ಮಾಣದ ಚಿತ್ರ “ಸೂತ್ರಧಾರಿ”. ಈಗಾಗಲೇ ಶೇ. 90ರಷ್ಟು ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ.
ಚಿತ್ರದ ಮೊದಲ ಹಾಡಿನ ಚಿತ್ರೀಕರಣ ಇನೋವೇಟೀವ್ ಫಿಲ್ಮ್ ಸಿಟಿಯಲ್ಲಿ ಅದ್ದೂರಿಯಾಗಿ ಸೆಟ್ಟೇರಿದೆ. ಈ ಚಿತ್ರದ ಹೀರೋ ಇಂಟ್ರೊಡಕ್ಷನ್ ಸಾಂಗ್ ಆಗಿದ್ದು ಸಂಗೀತ ನಿರ್ದೇಶಕ ಮತ್ತು ಗಾಯಕನಾಗಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ಈ ಹಾಡಿನಲ್ಲಿ ಮೊದಲಬಾರಿಗೆ ಚಂದನ್ ಶೆಟ್ಟಿ ಜೋಡಿಯಾಗಿ ಸಲಗ ಖ್ಯಾತಿಯ ಸಂಜನಾ ಆನಂದ್ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಹಾಡು ಇದೇ ಡಿಸೆಂಬರ್ 27ರಂದು ಬೆಳಗ್ಗೆ 10.35ಕ್ಕೆ ಬಿಡುಗಡೆಯಾಗಲಿದೆಎಂಬುದು ವಿಶೇಷ. ಈ ಹಾಡು ಹೊಸ ವರ್ಷದ ಸಂಭ್ರಮಾಚರಣೆಗೆ ವಿಶೇಷತೆಗಳಲ್ಲೊಂದು.
ಗಿತಾ ಶಿವರಾಜಕುಮಾರ್ ಹಾಗೂ ಜೀ ಸ್ಟುಡಿಯೋಸ್ ನಿರ್ಮಿಸಿರುವ, ಎ.ಹರ್ಷ ನಿರ್ದೇಶನದಲ್ಲಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ವೇದ” ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. “ವೇದ” ಶಿವರಾಜಕುಮಾರ್ ಅವರು ನಾಯಕರಾಗಿ ನಟಿಸಿರುವ 125 ನೇ ಚಿತ್ರ .
ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರಕ್ಕೆ ಸ್ವಾಮಿ ಜೆ ಗೌಡ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ ಹಾಗೂ ರವಿವರ್ಮ, ವಿಕ್ರಮ್ ಮೋರ್, ಚೇತನ್ ಡಿಸೋಜ , ಅರ್ಜುನ್ ರಾಜ್ ಸಾಹಸ ನಿರ್ದೇಶನವಿದೆ. ರವಿ ಸಂತೆಹಕ್ಲು ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.
ಶಿವರಾಜಕುಮಾರ್ ಜೊತೆ ಗಾನವಿ ಲಕ್ಷ್ಮಣ್, ಉಮಾಶ್ರೀ, ಅದಿತಿ ಸಾಗರ್, ಶ್ವೇತ ಚಂಗಪ್ಪ, ಚೆಲುವರಾಜು, ರಾಘು ಶಿವಮೊಗ್ಗ, ವಿನಯ್ ಬಿದ್ದಪ್ಪ, ಪ್ರಸನ್ನ ಇದ್ದಾರೆ.
ಇವರ ಜೊತೆಯಲ್ಲಿ ಕುರಿ ಪ್ರತಾಪ್, ಲಾಸ್ಯ ನಾಗರಾಜ್, ಭರತ್ ಸಾಗರ್, ಸಂಜೀವ್, ಚಾರ್ವಿ ಗೌಡ, ಜಗಪ್ಪ, ಚೇತನ ಹರಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಧರ್ಮ ಕೀರ್ತಿರಾಜ್ ಅವರು ನಾಯಕನಾಗಿ ನಟಿಸುತ್ತಿರುವ “ಬುಲೆಟ್” ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ತುಮಕೂರು ಹಾಗೂ ಗೋವಾದಲ್ಲಿ ಚಿತ್ರೀಕರಣ ನಡೆದಿದೆ. ಎರಡನೇ ಹಂತದ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ. ಹೆಚ್ ಎಸ್ ಆರ್ ಲೇಔಟ್ ನ ಬಂಗಲೆಯೊಂದರಲ್ಲಿ ಹಿರಿಯ ನಟಿ ಭವ್ಯ, ನಟ ಧರ್ಮ ಕೀರ್ತಿರಾಜ್ ಹಾಗೂ ಬೇಬಿ ಸಿದ್ ಟೈನ್ ಅಭಿನಯಿಸುತ್ತಿರುವ ಹಾಡೊಂದರ ಚಿತ್ರೀಕರಣ ನಡೆಯುತ್ತಿದೆ. ಮೂರು ಸಾಹಸ ಸನ್ನಿವೇಶಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.
ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಸತ್ಯಜಿತ್, “ಬುಲೆಟ್” ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕನ ತಂದೆಯ ಪಾತ್ರದಲ್ಲೂ ಸತ್ಯಜಿತ್ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಅವರಿಗೆ ಮೊದಲ ಚಿತ್ರ. ಇಸಾಕ್ ಕಾಜಿ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಧರ್ಮ ಕೀರ್ತಿರಾಜ್ ಅವರಿಗೆ ನಾಯಕಿಯಾಗಿ ಶ್ರೀಯಾ ಶುಕ್ಲ ಅಭಿನಯಿಸುತ್ತಿದ್ದಾರೆ. ಅಜಿತಾ ಜಾ ದ್ವಿತೀಯ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟಿ ಭವ್ಯ ಸಹ ಮುಖ್ಯಪಾತ್ರದಲ್ಲಿದ್ದಾರೆ. ಬಾಲಿವುಡ್ ನ ಖ್ಯಾತ ನಟರಾದ ಅಮಿತಾಬ್ ಬಚ್ಚನ್, ಶಾರುಕ್ ಖಾನ್, ಅಮೀರ್ ಖಾನ್ ಮುಂತಾದವರ ಚಿತ್ರಗಳಲ್ಲಿ ನಟಿಸಿರುವ ಶಿವ ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ.
ಇಸಾಕ್ ಕಾಜಿ, ಸತ್ಯಜಿತ್, ಬೇಬಿ ಸಿದ್ ಟೈನ್, ಶಿವ, ರಾಜ ದೀಪ್, ಕಿಲ್ಲರ್ ವೆಂಕಟೇಶ್, ಶೋಭ್ ರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣವಿದೆ. ಮೂರು ಹಾಡುಗಳಿದ್ದು ರಾಜ್ ಭಾಸ್ಕರ್ ಸಂಗೀತ ನೀಡಿದ್ದಾರೆ. ಗುರುಪ್ರಸಾದ್ ಸಂಕಲನ ಹಾಗೂ ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
“ಬುಲೆಟ್” ಚಿತ್ರದ ಚಿತ್ರೀಕರಣ ಗೋವಾದ ಬೀಚ್ ವೊಂದರಲ್ಲಿ ನಡೆಯುತ್ತಿದ್ದಾಗ ನಾಯಕಿ ಶ್ರೀಯಾ ಶುಕ್ಲ ಅವರ ಕಾಲಿಗೆ ಪೆಟ್ಡು ಬಿತ್ತು. ನಂತರ ನೆರೆಯ ವೈದ್ಯರ ಸಹಕಾರದಿಂದ ಚಿಕಿತ್ಸೆ ನೀಡಲಾಯಿತು. ಬೇಗ ಗುಣಮುಖರಾದರು ಎಂಬ ವಿಷಯವನ್ನು ಸಹ ನಿರ್ದೇಶಕ ಇಸಾಕ್ ಕಾಜಿ ತಿಳಿಸಿದ್ದಾರೆ.
ಶುಭ ಮಂಗಳ, ನಾಗಿಣಿ, ಕಮಲಿ, ಅಗ್ನಿ ಸಾಕ್ಷಿ, ಮಧುಬಾಲ ಸೇರಿದಂತೆ ಹಲವು ಸೂಪರ್ ಹಿಟ್ ಧಾರಾವಾಹಿಗಳ ನಿರ್ದೇಶಕ ಹಯವದನ ಸಿನಿಮಾ ನಿರ್ದೇಶನಕ್ಕೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ಕಿರುತೆರೆಯಲ್ಲಿ ಸಕ್ರಿಯರಾಗಿರುವ ಹಯವದನ ಅವರ ಮೊದಲ ಸಿನಿಮಾ ಸ್ಕ್ರಿಪ್ಟ್ ಪೂಜೆ ನಡೆದಿದ್ದು ನಾಯಕ ನಟನಾಗಿ ‘ಕಂಬ್ಳಿಹುಳ’ ಹೀರೋ ಅಂಜನ್ ನಾಗೇಂದ್ರ ಆಯ್ಕೆಯಾಗಿದ್ದಾರೆ.
ಕಿರುತೆರೆಯಲ್ಲಿ ಯಶಸ್ವಿ ನಿರ್ದೇಶಕ ಎನಿಸಿಕೊಂಡಿರುವ ಹಯವದನ ಅವರು ಸಿನಿಮಾದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಿರುತೆರೆಯಲ್ಲಿ ಸಾಕಷ್ಟು ವರ್ಷಗಳಿಂದ ಸಕ್ರಿಯನಾಗಿದ್ದೇನೆ. ಹಲವು ಸೂಪರ್ ಹಿಟ್ ಸೀರಿಯಲ್ ಗಳನ್ನು ನಿರ್ದೇಶನ ಮಾಡಿದ್ದೇನೆ. ಸಿನಿಮಾ ನಿರ್ದೇಶನ ಇದೇ ಮೊದಲು. ಇದೊಂದು ಸೋಶಿಯಲ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಜರ್ನಿ ಸಿನಿಮಾ. ಅಪ್ಪ ಮಗನ ಸೆಂಟಿಮೆಂಟ್ ಚಿತ್ರದ ಮೈನ್ ಹೈಲೈಟ್. ಸಾಮಾಜಿಕ ಜಾಲತಾಣಕ್ಕೆ ಅಡಿಕ್ಟ್ ಆಗಿರುವ ಮಕ್ಕಳು ಮತ್ತು ಕಷ್ಟಪಟ್ಟು ದುಡಿದು ಬದುಕು ಕಟ್ಟಿಕೊಂಡಿರುವ ಪೋಷಕರ ನಡುವಿನ ಜನರೇಶನ್ ಗ್ಯಾಪ್ ನ್ನು ಚಿತ್ರದಲ್ಲಿ ಹೇಳಲಿದ್ದೇವೆ.
ಲವ್ ಟ್ರ್ಯಾಕ್ ಚಿತ್ರದಲ್ಲಿದ್ದು, ಯುವಕರಿಗೆ ಸ್ಪಂದಿಸೋ ಸ್ಪೂರ್ತಿಯಾಗೋ ಕಥೆ ಕೂಡ ಇದೆ. ಚಿತ್ರದ ಸ್ಕ್ರಿಪ್ಟ್ ಪೂಜೆ ನಡೆದಿದ್ದು ಜನವರಿ 15ಕ್ಕೆ ಸಿನಿಮಾ ಸೆಟ್ಟೇರಲಿದೆ. ಅಂಜನ್ ನಾಗೇಂದ್ರ ಚಿತ್ರದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಸದ್ಯದಲ್ಲೇ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಲಿದ್ದೇವೆ ಎಂದು ನಿರ್ದೇಶಕ ಹಯವದನ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ ಹಾಗೂ ಕೃಷ್ಣಛಾಯ ಚಿತ್ರ ಬ್ಯಾನರ್ ನಡಿ ಪವನ್ ಸಿಮಿಕೇರಿ ಮತ್ತು ಹಯವದನ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಿವ ಪ್ರಸಾದ್ ಸಂಗೀತ ಸಂಯೋಜನೆ, ನಟರಾಜ್ ಮದ್ದಾಲ ಕ್ಯಾಮೆರಾ ವರ್ಕ್, ರವಿಚಂದ್ರನ್ ಸಂಕಲನ ಚಿತ್ರಕ್ಕಿರಲಿದೆ. ನಾಯಕಿ, ತಾರಾಬಳಗದ ಆಯ್ಕೆ ಕೊನೆಯ ಹಂತದಲ್ಲಿದ್ದು ಸದ್ಯದಲ್ಲೇ ಮಾಹಿತಿ ಹಂಚಿಕೊಳ್ಳೋದಾಗಿ ಹಯವದನ ತಿಳಿಸಿದ್ದಾರೆ.
ಕುಂ.ವೀರಭದ್ರಪ್ಪ ‘ಕುಬುಸ’ ಕಥೆ ಆಧಾರಿಸಿ ರಘು ರಾಮಚರಣ್ ಹೂವಿನ ಹಡಗಲಿ ‘ಕುಬುಸ’ ಸಿನಿಮಾ ನಿರ್ದೇಶಿಸಿದ್ದಾರೆ. ಫಸ್ಟ್ ಲುಕ್ ಮೂಲಕ ಗಮನ ಸೆಳೆದಿರುವ ಈ ಚಿತ್ರ ಜನವರಿ ಕೊನೆಯಲ್ಲಿ ತೆರೆಗೆ ಬರಲು ಸಜ್ಜಾಗಿದೆ. ತಾಯಿ ಮಗನ ಸೆಂಟಿಮೆಂಟ್ ಹೊತ್ತ ಈ ಸಿನಿಮಾಗೆ ‘ಯು’ ಸರ್ಟಿಫಿಕೇಟ್ ಪಡೆದುಕೊಂಡಿದೆ. ಚಿತ್ರದ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಸದ್ಯದಲ್ಲೇ ಟೀಸರ್ ಬಿಡುಗಡೆ ಮಾಡಲಿದೆ.
‘ಕುಬುಸ’ ಆರ್. ಚಂದ್ರು ಶಿಷ್ಯ ರಘು ರಾಮಚರಣ್ ಹೂವಿನ ಹಡಗಲಿ ನಿರ್ದೇಶನದ ಮೊದಲ ಸಿನಿಮಾ. ನಿರ್ದೇಶಕರಾದ ಟಿ.ಎಸ್. ನಾಗಾಭರಣ, ಪ್ರೇಮ್, ಸತ್ಯ ಪ್ರಕಾಶ್ ಸಿನಿಮಾಗಳಲ್ಲೂ ಸಹಾಯಕ ನಿರ್ದೇಶಕನಾಗಿ, ಕಲಾವಿದನಾಗಿ ಗುರುತಿಸಿಕೊಂಡಿರುವ ಇವರು ‘ಕುಬುಸ’ ಸಿನಿಮಾ ಮೂಲಕ ನಿರ್ದೇಶಕರಾಗಿದ್ದಾರೆ.
ಕಲ್ಲು ಕುಟ್ಟಿ ಹಳ್ಳಿಯಲ್ಲಿ ಜೀವನ ಸಾಗಿಸುವ ತಾಯಿ ತನ್ನ ಮಗನನ್ನು ದೂರದ ಊರಿನಲ್ಲಿ ಓದಿಸುತ್ತಿರುತ್ತಾಳೆ. ಯಾವತ್ತೂ ಬೇರೆ ಊರಿಗೆ ಪಯಣ ಬೆಳೆಸದ, ಬಸ್ಸು ಕೂಡ ಹತ್ತಿರದ ಆಕೆಯನ್ನು ಮಗ ಕೆಲಸ ಸಿಕ್ಕ ಮೇಲೆ ನಗರಕ್ಕೆ ಕರೆದುಕೊಂಡು ಬರುತ್ತಾನೆ. ಮೊದಲಿನಿಂದಲೂ ಕುಬುಸ ಧರಿಸಿ ಅಭ್ಯಾಸವಿರದ ಆಕೆ ಈ ಕಾರಣದಿಂದ ನಗರಕ್ಕೆ ಬಂದಾಗ ಹೇಗೆಲ್ಲ ಜನರಿಂದ ಮುಜುಗರಕ್ಕೆ ಒಳಗಾಗುತ್ತಾಳೆ, ಮುಂದೆ ಏನಾಗುತ್ತೆ ಅನ್ನೋದು ಸಿನಿಮಾದ ಕಹಾನಿ.
ತಾಯಿ ಮಗನ ಸೆಂಟಿಮೆಂಟ್ ಇರುವ ಈ ಚಿತ್ರದಲ್ಲಿ ರಾಮ ರಾಮ ರೇ ಸಿನಿಮಾ ಖ್ಯಾತಿಯ ನಟರಾಜ್. ಎಸ್. ಭಟ್, ರಂಗಭೂಮಿ ಕಲಾವಿದೆ ಹನುಮಕ್ಕ ಮರಿಯಮ್ಮನ ಹಳ್ಳಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ನಟರಾಜ್. ಎಸ್. ಭಟ್ ಚಿತ್ರದಲ್ಲಿ ಎರಡು ಶೇಡ್ ನಲ್ಲಿ ನಟಿಸಿದ್ದು, ಆರ್ಯ ಮೈಸೂರು, ಅನಿಕ ರಮ್ಯ, ಮಹಾಲಕ್ಷ್ಮೀ ಕೂಡ ಚಿತ್ರದ ಲೀಡ್ ರೋಲ್ ನಲ್ಲಿ ಬಣ್ಣ ಹಚ್ಚಿದ್ದಾರೆ.
ಪದ್ಮಶ್ರೀ ಪುರಸ್ಕೃತ ಜೋಗತಿ ಮಂಜಮ್ಮ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದು, ದೊಡ್ಡ ಪಾತ್ರವೊಂದನ್ನು ಪೋಷಣೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ಯುವ ಪ್ರಶಸ್ತಿ ಹಾಗೂ ಮಕ್ಕಳ ಕಲ್ಯಾಣ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಗುಂಡಿ ರಮೇಶ್ ಹಾಗೂ ಪತ್ನಿ ಗುಂಡಿ ಭಾರತಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಹೊನ್ನಾವರ ಸ್ವಾಮಿ, ಹುಲಿಗಪ್ಪ ಕಟ್ಟೋಮನಿ, ಕನ್ನಡ ಕಲಾ ಸಂಘ ಹೊಸಪೇಟೆ ಕಲಾವಿದರು ಚಿತ್ರದ ತಾರಾ ಬಳಗದಲ್ಲಿದ್ದಾರೆ.
ಕಲಾತ್ಮಕ ಸಿನಿಮಾಗಳಿಗಿಂತ ಭಿನ್ನವಾದ ಹೊಸತನ ಒಳಗೊಂಡ ಸಿನಿಮಾ ‘ಕುಬುಸ’. ಚಿತ್ರದಲ್ಲಿ ಮೂಲ ಕಥೆಯಲ್ಲಿರುವಂತೆ ಬಳ್ಳಾರಿ ಭಾಷೆಯ ಸೊಗಡನ್ನು ಕಾಣಬಹುದಾಗಿದೆ. ಮ್ಯೂಸಿಕಲ್ ಸಿನಿಮಾ ಕೂಡ ಆಗಿದ್ದು ಸನ್ನಿವೇಶಕ್ಕೆ ತಕ್ಕ ಹಾಗೆ ನಾಲ್ಕು ಹಾಡುಗಳಿದ್ದು ನಾಲ್ಕು ಬಿಟ್ ಗಳಿವೆ. ಜೋಗಿ ಪ್ರೇಮ್, ವಾಸುಕಿ ವೈಭವ್, ಶೃತಿ.ವಿ.ಎಸ್, ಶಿಲ್ಪ ಮುಡ್ಬಿ, ಪ್ರದೀಪ್ ಚಂದ್ರ ಚಿತ್ರದ ಹಾಡುಗಳಿಗೆ ದನಿಯಾಗಿದ್ದಾರೆ.
ಪ್ರದೀಪ್ ಚಂದ್ರ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ಅರ್ಜುನ್ ಕಿಟ್ಟು ಸಂಕಲನ, ಚೇತನ್ ಶರ್ಮಾ. ಎ ಕ್ಯಾಮೆರಾ ವರ್ಕ್, ಶಿವಮೂರ್ತಿ ಡೋಣಿಮಲೈ ಸಹ ನಿರ್ದೇಶನ ಚಿತ್ರಕ್ಕಿದೆ. ವಿ. ಶೋಭಾ ಸಿನಿಮಾಸ್ ಬ್ಯಾನರ್ ನಡಿ ವಿ. ಶೋಭಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜನವರಿ ಕೊನೆಯಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಶೀಘ್ರದಲ್ಲೇ ಟೀಸರ್ ಬಿಡುಗಡೆ ಮಾಡಲಿದೆ ಚಿತ್ರತಂಡ.
ವೃತ್ತಿಯಲ್ಲಿ ವೈದ್ಯರಾಗಿರುವ ವರದರಾಜು ಡಿ.ಎನ್. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಮಾಡಿರುವ “ಪ್ರಜಾರಾಜ್ಯ” ಚಿತ್ರಕ್ಕಾಗಿ ಯೋಗರಾಜ್ ಭಟ್ ಅವರು “ಜೈ ಎಲೆಕ್ಷನ್ ಧನ್ ಧನಾ ಧನ್” ಎಂಬ ಹಾಡನ್ನು ಬರೆದಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಈ ಹಾಡಿದ್ದಾರೆ. ವಿಜೇತ್ ಮಂಜಯ್ಯ ಸಂಗೀತ ನೀಡಿದ್ದಾರೆ. ಆನಂದ್ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ.
ಇತ್ತೀಚೆಗೆ ಈ ಹಾಡನ್ನು ಉಪೇಂದ್ರ ಅವರೆ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಕೋರಿದ್ದಾರೆ. ” ಯೋಗರಾಜ್ ಭಟ್ ಹಾಡನ್ನು ತುಂಬಾ ಚೆನ್ನಾಗಿ ಬರೆದಿದ್ದಾರೆ. ಅಷ್ಟೇ ಚೆನ್ನಾಗಿ ಸಂಗೀತ ನಿರ್ದೇಶಕರು ಟ್ಯೂನ್ ಮಾಡಿದ್ದಾರೆ. ಎಲೆಕ್ಷನ್ ಕುರಿತಾದ ಈ ಹಾಡು ಸೊಗಸಾಗಿದೆ. ನೀವು ನಿಮ್ಮ ಮತವನ್ನು ದೇಶ, ರಾಜ್ಯಕ್ಕಾಗಿ ಎನ್ನುವುದಕ್ಕಿಂತ, ನನ್ನ ಮನೆ, ನನ್ನ ಮಕ್ಕಳು ಹಾಗೂ ನನ್ನ ಜೀವನಕ್ಕೆ ಬಹಳ ಮುಖ್ಯ ಎಂದು ಎಲ್ಲರೂ ಮತದಾನ ಮಾಡಿ ಎಂದು ಉಪೇಂದ್ರ ಹೇಳಿದ್ದಾರೆ.
ನಿರ್ಮಾಪಕ ವರದರಾಜು, ನಿರ್ದೇಶಕ ವಿಜಯ್ ಭಾರ್ಗವ್ ಹಾಗೂ ಸಂಗೀತ ನಿರ್ದೇಶಕ ವಿಜೇತ್ ಮಂಜಯ್ಯ ಹಾಡು ಬಿಡುಗಡೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಡೈನಾಮಿಕ್ ಸ್ಟಾರ್ ದೇವರಾಜ್, ನಾಗಾಭರಣ, ಅಚ್ಯತಕುಮಾರ್, ಸುಧಾರಾಣಿ, ಶೋಭ್ ರಾಜ್, ವಿಜಯ್ ಭಾರ್ಗವ, ದಿವ್ಯ ಗೌಡ, ತಬಲನಾಣಿ, ಸುಧಾ ಬೆಳವಾಡಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಪ್ರಜಾಪ್ರಭುತ್ವದ ಮಹತ್ವ ಸಾರಲಿರುವ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.
ನಟ ಶರಣ್ “ಛೂ ಮಂತರ್” ಚಿತ್ರದಲ್ಲೀಗ ನಾಯಕರಾಗಿ ನಟಿಸಿದ್ದಾರೆ. ಮೇಘನಾ ಗಾಂವ್ಕರ್, ಚಿಕ್ಕಣ್ಣ, ಅದಿತಿ ಪ್ರಭುದೇವ ಹಾಗೂ ಪ್ರಭು ಮುಂಡ್ಕರ್ ಚಿತ್ರದ ಪ್ರಮುಖಪಾತ್ರದಲ್ಲಿದ್ದಾರೆ.
ಶರಣ್ ಹಾಗೂ ಚಿಕ್ಕಣ್ಣ ಕಾಂಬಿನೇಷನ್ ನಲ್ಲಿ ಬರುತ್ತಿರುವ ಚಿತ್ರ ಎಂದಮೇಲೆ ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣ ನೀಡುವುದಂತು ಖಚಿತ.
ಸದಭಿರುಚಿ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುತ್ತಾ ಬಂದಿರುವ, ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದು ಈ ಸಂಸ್ಥೆಯಿಂದ ನಿರ್ಮಾಣವಾಗಿರುವ ಐದನೇ ಚಿತ್ರ.
“ಕರ್ವ” ಚಿತ್ರದ ಮೂಲಕ ಕನ್ನಡಿಗರ ಮನಗೆದ್ದಿರುವ ನವನೀತ್, ಕಥೆ, ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಿದ್ದವಾಗುತ್ತಿದೆ. ಬೆಂಗಳೂರು, ಮೈಸೂರು, ಉತ್ತರಕಾಂಡ ಹಾಗೂ ಲಂಡನ್ ನಲ್ಲಿ ಚಿತ್ರೀಕರಣ ನಡೆದಿದೆ.
ಅನೂಪ್ ಕಟ್ಟುಕರನ್ ಮೊದಲ ಬಾರಿಗೆ ಈ ಚಿತ್ರದ ಮೂಲಕ ಛಾಯಾಗ್ರಾಹಕರಾಗಿದ್ದಾರೆ. ವೆಂಕಿ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಶಿವಕುಮಾರ್(ಕೆ.ಜಿ.ಎಫ್ ಖ್ಯಾತಿ) ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ “ಛೂ ಮಂತರ್” ಚಿತ್ರಕ್ಕಿದೆ.
ಡಾಲಿ ಧನಂಜಯ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿರುವ “once upon a time in ಜಮಾಲಿಗುಡ್ಡ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು.
ಈ ಚಿತ್ರ ಒಂದು ಕಾಲ್ಪನಿಕ ಕಥೆ. ಜೊತೆಗೆ ಭಾವನಾತ್ಮಕ ಪಯಣ ಕೂಡ. ಧನಂಜಯ ಹಾಗೂ ಬೇಬಿ ಪ್ರಾಣ್ಯ ನಡುವಿನ ಸನ್ನಿವೇಶಗಳು ಸುಂದರವಾಗಿ ಮೂಡಿಬಂದಿದೆ. 95 – 96 ರ ಕಾಲಘಟ್ಟದಲ್ಲಿ ನಡೆಯುವ ಕಥೆಯಿದು. ಚಿಕ್ಕಮಗಳೂರಿನ ಬಾಬಾಬುಡನಗಿರಿಯ ಸೊಬಗು ಚಿತ್ರದ ಮತ್ತೊಂದು ಹೈಲೆಟ್. ಅಲ್ಲೇ ಹೆಚ್ವಿನ ಚಿತ್ರೀಕರಣ ನಡೆದಿದೆ. “ಜಮಾಲಿ ಗುಡ್ಡ” ಚಿತ್ರ ಉತ್ತಮವಾಗಿ ಮೂಡಿಬರಲು ನಿರ್ಮಾಪಕರು ಹಾಗೂ ಇಡೀ ಚಿತ್ರತಂಡದ ಸಹಕಾರ ಕಾರಣ ಎಂದರು ನಿರ್ದೇಶಕ ಕುಶಾಲ್ ಗೌಡ.
“ಜಮಾಲಿಗುಡ್ಡ” ಈ ವರ್ಷದ ನನ್ನ ನಟನೆಯ 6 ನೇ ಚಿತ್ರವಾಗಿ ಬಿಡುಗಡೆಯಾಗುತ್ತಿದೆ. ಇದೊಂದು ಫೀಲ್ ಗುಡ್ ಸಿನಿಮಾ. ಕುಟುಂಬ ಸಮೇತರಾಗಿ ಬಂದು ನೋಡಬಹುದಾದ ಚಿತ್ರ. ಕುಶಾಲ್ ಗೌಡ ಅವರು ಈ ಚಿತ್ರಕ್ಕಾಗಿ ಫೇಸ್ ಬುಕ್ ಮೂಲಕ ನಿರ್ಮಾಪಕರನ್ನು ಹುಡುಕಿದರು. ಆಗ ಶ್ರೀಹರಿ ಸಿಕ್ಕರು. ನಾನು ಕೂಡ ಬ್ಯುಸಿ ಇದ್ದೆ. ಆದರೆ, ಹೆಚ್ಚಿನ ಚಿತ್ರೀಕರಣ ಬಾಬಾಬುಡನಗಿರಿಯಲ್ಲೇ ನಡೆಯಬೇಕಿತ್ತು. ಅದರಲ್ಲೂ ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ವಾತಾವರಣದಲ್ಲೇ ಚಿತ್ರೀಕರಣ ನಡೆಯಬೇಕಿಗಿದ್ದರಿಂದ ಬೇಗ ಈ ಚಿತ್ರೀಕರಣದಲ್ಲಿ ಪಾಲ್ಗೊಂಡೆ. ಛಾಯಾಗ್ರಾಹಕ ಕಾರ್ತಿಕ್ ಸೇರಿದಂತೆ ಇಡೀ ತಂತ್ರಜ್ಞರ ಕಾರ್ಯವೈಖರಿ ಹಾಗೂ ಅದಿತಿ ಪ್ರಭುದೇವ ಅವರ ಆದಿಯಾಗಿ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲಿ. ನಿರ್ಮಾಪಕರು ಮತ್ತಷ್ಟು ಚಿತ್ರ ನಿರ್ಮಾಣ ಮಾಡಲಿ ಎಂದರು ನಾಯಕ ಡಾಲಿ ಧನಂಜಯ.
ಈ ಚಿತ್ರ ನನ್ನ ವೃತ್ತಿಬದುಕಿನಲ್ಲಿ ಸದಾ ನೆನಪಿನಲ್ಲಿ ಉಳಿಯುವ ಸಿನಿಮಾವಾಗಲಿದೆ. ಈ ಚಿತ್ರದ ಭಾವನಾತ್ಮಕ ಸನ್ನಿವೇಶಗಳಲ್ಲಿ ನಾನು ಎಷ್ಟೋ ಕಡೆ ಸಹಜವಾಗಿ ಅತ್ತಿದ್ದು ಇದೆ. ಅಂತಹ ಅದ್ಭುತ ಸನ್ನಿವೇಶಗಳು ಈ ಚಿತ್ರದಲ್ಲಿದೆ. ಧನಂಜಯ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹ ನಮ್ಮ ಚಿತ್ರದ ಮೇಲಿರಲಿ ಎಂದರು ನಟಿ ಅದಿತಿ ಪ್ರಭುದೇವ.
ನಾನು ಮೂಲತಃ ಚಿತ್ರೋದ್ಯಮಿ ಅಲ್ಲ. ನಮ್ಮದೇ ಬೇರೆ ಉದ್ಯಮ ಇದೆ. ಆದರೆ ನನಗೆ ಇಪ್ಪತ್ತು ವರ್ಷಗಳ ಹಿಂದೆ ಚಿತ್ರದಲ್ಲಿ ಅಭಿನಯಿಸುವ ಆಸೆಯಿತ್ತು. ಅದು ಆಗಲಿಲ್ಲ. ಈಗ ನಿರ್ಮಾಪಕನಾಗಿದ್ದೇನೆ. ಡಿಸೆಂಬರ್ 30 ನಮ್ಮ ಚಿತ್ರ ತೆರೆಗೆ ಬರುತ್ತಿದೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ಮಾಪಕ ಶ್ರೀಹರಿ.
ಚಿತ್ರದಲ್ಲಿ ನಟಿಸಿರುವ ಯಶ್ ಶೆಟ್ಟಿ, ರುಶಿಕಾ, ದಿವ್ಯ, ಪ್ರಾಣ್ಯ, ಸಂತು, ಸಂಕಲನಕಾರ ಹರೀಶ್ ಕೊಮ್ಮೆ ಮುಂತಾದವರು ಚಿತ್ರದ ಬಗ್ಗೆ ಮಾತನಾಡಿದರು.
ಕಾರ್ತಿಕ್ ಛಾಯಾಗ್ರಹಣ ಹಾಗೂ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ನೀಡಿದ್ದಾರೆ.
ಪತ್ರಕರ್ತ ಡಾ.ಶರಣು ಹುಲ್ಲೂರು ಬರೆದ ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ ‘ನೀನೇ ರಾಜಕುಮಾರ’ ಹನ್ನೊಂದು ತಿಂಗಳಲ್ಲಿ ನಾಲ್ಕನೇ ಮರು ಮುದ್ರಣ ಕಂಡಿದ್ದು, ಈ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಾಲ್ಕನೇ ಆವೃತ್ತಿಯನ್ನು ಶುಕ್ರವಾರ ಬೆಂಗಳೂರಿನ ಪಿ.ಆರ್.ಕೆ ಕಚೇರಿಯಲ್ಲಿ ಬಿಡುಗಡೆ ಮಾಡಿದರು. ಈ ವೇಳೆ ಪುಸ್ತಕದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಲೇಖಕ ಡಾ.ಶರಣು ಹುಲ್ಲೂರು, ಪ್ರಕಾಶಕ ಜಮೀಲ್ ಸಾವಣ್ಣ ಮತ್ತು ಪಿ.ಆರ್.ಕೆಯ ಸತೀಶ್ ಅವರು ಕೂಡ ಹಾಜರಿದ್ದರು.
15 ಮಾರ್ಚ್ 2022ರಂದು ಮೊದಲ ಬಾರಿಗೆ ಈ ಪುಸ್ತಕವನ್ನು ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದರು. ಆನಂತರ ಈ ಪುಸ್ತಕವು ಅಮೆಜಾನ್, ಸಪ್ನಾ ಸೇರಿದಂತೆ ಹಲವು ಕಡೆ ಟಾಪ್ ಪಟ್ಟಿಯಲ್ಲಿ ದಾಖಲಾಗಿತ್ತು. ಅಲ್ಲಿಂದ ಈವರೆಗೂ ಸತತ ನಾಲ್ಕು ಮುದ್ರಣಗಳನ್ನು ಕಂಡು ಇನ್ನೂ ದಾಖಲೆ ರೀತಿಯಲ್ಲೇ ಮಾರಾಟವಾಗುತ್ತಿದೆ. ಅಲ್ಲದೇ, ಈ ಪುಸ್ತಕದೊಂದಿಗೆ ಪುನೀತ್ ಅವರ ಸಹಿ ಇರುವಂತಹ ಫೋಟೋ ಮತ್ತು ಬುಕ್ ಮಾರ್ಕ್ ಕೂಡ ಉಚಿತವಾಗಿ ಕೊಡಲಾಗುತ್ತಿದೆ.
ಈ ವರ್ಷದಲ್ಲಿ ಕನ್ನಡದಲ್ಲಿ ಬಂದ ಬಯೋಗ್ರಫಿಯಲ್ಲಿ ಹೆಚ್ಚು ಮಾರಾಟ ಕಂಡ ಪುಸ್ತಕ ಎನ್ನುವ ಹೆಗ್ಗಳಿಕೆ ‘ನೀನೇ ರಾಜಕುಮಾರ’ ಪುಸ್ತಕದ್ದು. ಪುನೀತ್ ಅವರ ಬಾಲ್ಯದಿಂದ ಅವರ ನಿಧನದವರೆಗೂ ಅವರ ಬದುಕನ್ನು ಲೇಖಕರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಪುನೀತ್ ಅವರ ಸಿನಿಮಾ, ಅವರ ಸಮಾಜಸೇವೆ, ಅವರ ಜೀವನದಲ್ಲಿ ನಡೆದ ಘಟನೆಗಳು ಮತ್ತು ಪುನೀತ್ ಅವರ ಜೀವನದ ಜೊತೆಗೆ ಕನ್ನಡ ಸಿನಿಮಾ ರಂಗದ ಸಂಕ್ಷಿಪ್ತ ಚರಿತ್ರೆ ಕೂಡ ಈ ಪುಸ್ತಕದಲ್ಲಿದೆ. ಅಲ್ಲದೇ, ಅಪರೂಪದ ಫೋಟೋಗಳನ್ನು ನೋಡಬಹುದಾಗಿದೆ. ಪುನೀತ್ ಅವರ ಸಾಕಷ್ಟು ಸಂದರ್ಶನಗಳನ್ನು ಮಾಡಿದ್ದ ಪತ್ರಕರ್ತ ಶರಣು ಹುಲ್ಲೂರು, ಪುನೀತ್ ಅವರ ಕುರಿತಾಗಿ ಅನೇಕ ಅಪರೂಪದ ಸಂಗತಿಗಳನ್ನು ಈ ಪುಸ್ತಕದಲ್ಲಿ ಬರೆಯುತ್ತಾ ಹೋಗಿದ್ದಾರೆ.
ಖ್ಯಾತ ಪತ್ರಕರ್ತರಾದ ಮುರಳಿಧರ ಖಜಾನೆ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರೆ, ಜೋಗಿ ಅವರು ಹಿನ್ನುಡಿ ಬರೆದಿದ್ದಾರೆ.
“ಗುಲ್ಟು” ಚಿತ್ರದ ಮೂಲಕ ಕನ್ನಡಿಗರ ಮನಗೆದ್ದಿರುವ ನವೀನ್ ಶಂಕರ್ ನಾಯಕನಾಗಿ ನಟಿಸಿರುವ ಚಿತ್ರ “ಮೂಲತಃ ನಮ್ಮವರೇ”.
ಕಿರಣ್ ಗೋವಿಂದರಾಜ್ ನಿರ್ಮಿಸಿ, ಚೇತನ್ ಭಾಸ್ಕರಯ್ಯ ನಿರ್ದೇಶಿಸಿರುವ ಈ ಚಿತ್ರದ ಶೀರ್ಷಿಕೆ ಅನಾವರಣ ಇತ್ತೀಚಿಗೆ ನಡೆಯಿತು.
ರಂಗಭೂಮಿ ನಂಟಿರುವ ನನಗೆ ಸಿನಿಮಾ ನಿರ್ದೇಶನದಲ್ಲಿ ಆಸಕ್ತಿ. ಹಿಂದೆ ಕೆಲವು ಕಿರುಚಿತ್ರಗಳ ನಿರ್ದೇಶಿಸಿದ್ದೇನೆ. ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ಕಥೆ ಸಿದ್ದವಾದ ನಂತರ, ನಾಯಕನ ಹುಡುಕಾಟದಲ್ಲಿದ್ದಾಗ ನವೀನ್ ಸಿಕ್ಕರು. ಆಗಷ್ಟೇ ಅವರ ” ಗುಲ್ಟು” ಚಿತ್ರ ಬಿಡುಗಡೆಯಾಗಿತ್ತು. “ಮೂಲತ: ನಮ್ಮವರೇ” ಇದೊಂದು ಕೌಟುಂಬಿಕ ಚಿತ್ರ. ಅಪ್ಪ – ಮಗನ ಬಾಂಧವ್ಯದ ಸನ್ನಿವೇಶಗಳೇ ಚಿತ್ರದ ಹೈಲೆಟ್. ಬೆಂಗಳೂರು ಹಾಗೂ ಕರಾವಳಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ನವೀನ್ ಶಂಕರ್ ಬಿಟ್ಟರೆ ಬಹುತೇಕರಿಗೆ ಇದು ಮೊದಲ ಸಿನಿಮಾ ಎಂದ ನಿರ್ದೇಶಕ ಚೇತನ್ ಭಾಸ್ಕರಯ್ಯ, ತಾವು ಕೂಡ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿರುವುದಾಗಿ ಹೇಳಿದರು.
ಈ ತಂಡದವರು ಎಲ್ಲವನ್ನೂ ಸಿದ್ದಮಾಡಿಕೊಂಡು, ನಾಯಕನ ಹುಡುಕಾಟದಲ್ಲಿದ್ದರು. ಕೆಲವು ನಾಯಕರನ್ನು ಸಂಪರ್ಕ ಕೂಡ ಮಾಡಿದ್ದರು. ಆನಂತರ ಇವರಿಗೆ ನಾನು ಸಿಕ್ಕಿದೆ. ಕಥೆ ತುಂಬಾ ಚೆನ್ನಾಗಿದೆ. ನಾನು ಇಲ್ಲಿಯವರೆಗೂ ಮಾಡಿರದ ಕಥೆ ಎನ್ನಬಹುದು. ಅಪ್ಪ – ಮಗನ ಸೆಂಟಿಮೆಂಟ್ ಸನ್ನಿವೇಶಗಳು ಎಲ್ಲರ ಮನಸ್ಸಿಗೆ ಹತ್ತಿರವಾಗಲಿದೆ. ಶೋಭ್ ರಾಜ್ ನನ್ನ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮುಂಬೈನ ತಾನ್ಯ ಈ ಚಿತ್ರದ ನಾಯಕಿ. ಅವಿನಾಶ್, ಮಾಳವಿಕ ಅವಿನಾಶ್, ತೆಲುಗಿನ ಸತ್ಯಪ್ರಕಾಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ನನ್ನ ಈ ಹಿಂದಿನ ಚಿತ್ರಗಳಲ್ಲಿ ಆಕ್ಷನ್, ಡ್ಯಾನ್ಸ್ ಗಳಿಗೆ ಅಷ್ಟು ಅವಕಾಶವಿರಲಿಲ್ಲ. ಈ ಚಿತ್ರದಲ್ಲಿ ಎಲ್ಲವೂ ಇದೆ ಎಂದು ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ನಟ ನವೀನ್ ಶಂಕರ್ ಹೇಳಿದರು.
ನಾನು ಹಾಗೂ ನಿರ್ದೇಶಕ ಚೇತನ ಸ್ನೇಹಿತರು. ನಟನಾಗಬೇಕೆಂದು ಆಸೆಯಿತ್ತು. ಆದರೆ ನಿರ್ಮಾಪಕನಾದೆ. ನಮ್ಮ ಚಿತ್ರ ನೋಡಿ ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಕಿರಣ್ ಗೋವಿಂದರಾಜ್.
ಚಿತ್ರದಲ್ಲಿ ಅಭಿನಯಿಸಿರುವ ಕಾವ್ಯ ಸಹ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.
ಕೇರಳದ ಚಂತು ಛಾಯಾಗ್ರಹಣ, ಏಕ್ ಕ್ಯಾಬ್ ದಿ ಬ್ಯಾಂಡ್ ಸಂಗೀತ ನಿರ್ದೇಶನ ಹಾಗೂ ಜುವೀನ್ ಸಿಂಗ್ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.