ಕನ್ನಡ ಚಿತ್ರರಂಗದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಅವರು ಕೆಲಸ ನಿಮಿತ್ತ ಬ್ಯಾಂಕಾಕ್ ಗೆ ತೆರಳಿದ್ದರು. ನಿನ್ನೆ ಸಂಜೆ 5 ಗಂಟೆಗೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತೀವ್ರ ಹೃದಯಾಘಾತದಿಂದಾಗಿ ಇಂದು (ಆ.7) ನಿಧನರಾಗಿದ್ದಾರೆ.
ನಿನ್ನೆ ರಾತ್ರಿಯೇ ವಿಜಯ ರಾಘವೇಂದ್ರ ಅವರು ಬ್ಯಾಂಕಾಕ್ ಗೆ ತೆರಳಿದ್ದರು. ಈಗ ವಿಷಯ ತಿಳಿಯುತ್ತಿದ್ದಂತೆಯೇ ವಿಜರಾಘವೇಂದ್ರ ಅವರ ಕುಟುಂಬ ಕೂಡ ಬ್ಯಾಂಕಾಕ್ ಗೆ ತೆರಳಲಿದೆ.
ಈಗಾಗಲೇ ಬ್ಯಾಂಕಾಕ್ ಗೆ ತೆರಳಲು ಕುಟುಂಬ ರೆಡಿಯಾಗಿದೆ. ಇಂದು ರಾತ್ರಿ ಅಥವಾ ಬೆಳಗ್ಗೆ ಪಾರ್ಥಿವ ಶರೀರವನ್ನು ತರಲಾಗುವುದು. ಮಲ್ಲೇಶ್ವರಂ ನಲ್ಲಿರುವ ಬಿ.ಕೆ.ಶಿವರಾಮ್ ಅವರ ಮನೆಗೆ ಶ್ರೀ ಮುರಳಿ ತೆರಳಿದ್ದಾರೆ.
ಬ್ಯಾಂಕಾಕ್ ನಲ್ಲಿ ಸ್ಪಂದನಾ ಅವರು ತಮ್ಮ ಸ್ನೇಹಿತೆಯರ ಜೊತೆ ಶಾಪಿಂಗ್ ಮಾಡುವಾಗ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಸದ್ಯ ಬ್ಯಾಂಕಾಕ್ ನತ್ತ ವಿಜಯರಾಘವೇಂದ್ರ ಅವರ ಕುಟುಂಬ ತೆರಳಲಿದೆ.
ಈ ಹಿಂದೆ ಗರ್ಭದಗುಡಿ, 141, ಅಕ್ಕ ಭಾವ ಬಾಮೈದ, ನೀನೇನಾ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ಬಾವಾಜಿ ಅವರೀಗ ಹಾಸ್ಯ ಪ್ರದಾನ ಕಥಾಹಂದರ ಹೊಂದಿರುವ ಚಿತ್ರವನ್ನು ನಿರ್ದೇಶಿಸಿದ್ದಾರೆ. ಜೊತೆಗೆ ಅಪ್ಸರ ಮೂವೀಸ್ ಬ್ಯಾನರ್ ಅಡಿಯಲ್ಲಿ ವೇಂಪಲ್ಲಿ ಬಾವಾಜಿ ಅವರೇ ನಿರ್ಮಾಣ ಮಾಡಿರುವ ಆ ಚಿತ್ರದ ಹೆಸರು ‘ಆನ್ ಲೈನ್ ಮದುವೆ, ಆಫ್ ಲೈನ್ ಶೋಭನ.
ಇದೇ ತಿಂಗಳಲ್ಲಿ ಚಿತ್ರದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆಯಾಗಲಿದ್ದು, ಮುಂದಿನ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆಯಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಈ ಚಿತ್ರವನ್ನು ಇತ್ತೀಚೆಗಷ್ಟೇ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ, ಯಾವುದೇ ಕಟ್ಸ್ ಹೇಳದೆ, ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿ ಬಿಡುಗಡೆಗೆ ಅನುಮತಿ ಕೊಟ್ಟಿದೆ.
ವಿಭಿನ್ನ ಹಾಗೂ ಪರಿಶುದ್ದವಾದ ಹಾಸ್ಯ, ಜೊತೆಗೆ ಫ್ಯಾಮಿಲಿ ಎಂಟರ್ ಟೈನರ್ ಕಥಾಹಂದರ ಹೊಂದಿರುವ ಚಿತ್ರ ಇದಾಗಿದೆ, ಕುಟುಂಬ ಸಮೇತ ಕುಳಿತು ವೀಕ್ಷಿಸುವಂಥ ಕಾಮಿಡಿ ಕಥೆ ಹೊಂದಿದೆ.
ಈ ಚಿತ್ರಕ್ಕೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದ ಅತ್ತಿಬೆಲೆ ಸುತ್ತಮುತ್ತ ಅಲ್ಲದೇ ಹಾಡುಗಳನ್ನು ಆನೇಕಲ್ ನ ಸುಗ್ಗಿ ರೆಸಾರ್ಟ್ ಹಾಗೂ ಕೋರಮಂಗಲದ ಪಬ್ ವೊಂದರಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಜಗಪ್ಪ, ಸುಶ್ಮಿತ, ಸೀರುಂಡೆ ರಘು, ಗಜೇಂದ್ರ, ಗಜೇಂದ್ರ, ರಾಘವಿ ಸೇರಿದಂತೆ ಗಿಚ್ಚಿ ಗಿಲಿ ಗಿಲಿ, ಮಜಾಭಾರತ, ಕಾಮಿಡಿ ಕಿಲಾಡಿಗಳು, ಕಾರ್ಯಕ್ರಮದ ಅನೇಕ ಕಲಾವಿದರು ಅಲ್ಲದೆ ಯಶಸ್ವಿನಿ, ಚಂದನ, ಶರಣ್ಯರೆಡ್ಡಿ ಅಲ್ಲದೆ ಆಂಕರ್ ದಯಾನಂದ್ ಕೂಡ ಆನ್ ಲೈನ್ ಮದುವೆ, ಆಫ್ ಲೈನ್ ಶೋಭನ’ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಬಹಳ ವರ್ಷಗಳ ನಂತರ ತೆರೆಗೆ ಬರುತ್ತಿರುವ ಪಕ್ಕಾ ಕಾಮಿಡಿ ಹಾಗೂ ಫ್ಯಾಮಿಲಿ ಎಂಟರ್ ಟೈನರ್ ಚಲನಚಿತ್ರ ಇದಾಗಿದ್ದು,ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆಯನ್ನು ನಿರ್ದೇಶಕ ವೇಂಪಲ್ಲಿ ಬಾವಾಜೀ ಅವರೇ ಬರೆದಿದ್ದಾರೆ.
ಬಾಲು ಅವರ ಕ್ಯಾಮೆರಾ ವರ್ಕ್, ರೋಹಿತ್ ಅವರ ಸಂಕಲನ, ಅಲೆಕ್ಸ್ ಅವರ ಸಂಗೀತ, ಅರುಣ ಪ್ರಸಾದ್ ಅವರ ಸಾಹಿತ್ಯ, ಗಣೇಶ್, ಸದಾಶಿವ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಇದೇ ಸೆಪ್ಟೆಂಬರ್ ತಿಂಗಳಲ್ಲಿ ‘ಆನ್ ಲೈನ್ ಮದುವೆ, ಆಫ್ ಲೈನ್ ಶೋಭನ’ ಪ್ರೇಕ್ಷಕರ ಮುಂದೆ ಬರಲಿದೆ.
ನಟ ಅನಿರುದ್ಧ್ , ಐದು ವರ್ಷಗಳ ನಂತರ “ರಾಘು” ಚಿತ್ರದ ಖ್ಯಾತಿಯ ನಿರ್ದೇಶಕ ಎಂ.ಆನಂದರಾಜ್ ನಿರ್ದೇಶನದ ನೂತನ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂದು ಈ ಮೊದಲೇ ತಿಳಿಸಲಾಗಿತ್ತು.
ಈಗ ಆ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಚಿತ್ರಕ್ಕೆ “chef ಚಿದಂಬರ” ಎಂದು ಹೆಸರಿಡಲಾಗಿದೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆಯನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭ ಕೋರಿದ್ದಾರೆ.
ಅನಿರುದ್ಧ್ ಈ ಚಿತ್ರದಲ್ಲಿ ಶೆಫ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೇ ತಿಂಗಳ ಹತ್ತರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಡಾರ್ಕ್ ಕಾಮಿಡಿ ಜಾನರ್ ನ ಈ ಚಿತ್ರದಲ್ಲಿ ಅನಿರುದ್ದ್ ಶೆಫ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆ ಗಣೇಶ್ ಪರಶುರಾಮ್ ಬರೆದಿದ್ದಾರೆ. ಉದಯಲೀಲ ಛಾಯಾಗ್ರಹಣ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನವಿದೆ.
ವಿಜೇತ್ ಚಂದ್ರ ಸಂಕಲನ, “ವಿಕ್ರಾಂತ್ ರೋಣ” ಖ್ಯಾತಿಯ ಆಶಿಕ್ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಅನಿರುದ್ಧ್ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ “ಲವ್ ಮಾಕ್ಟೇಲ್” ಖ್ಯಾತಿಯ ರೆಚೆಲ್ ಡೇವಿಡ್ ಅಭಿನಯಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್, ಶಿವಮಣಿ ಮುಂತಾದವರು “chef ಚಿದಂಬರ” ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಈ ಹಿಂದೆ ಆ್ಯಪಲ್ ಕೇಕ್ ಎಂಬ ಸಿನಿಮಾ ನಿರ್ದೇಶಿಸಿದ್ದ ರಂಜಿತ್ ಕುಮಾರ್ ಗೌಡ ಎರಡನೇ ಹೆಜ್ಜೆ ಕಾಗದ. ಮದರಂಗಿ, ವಾಸ್ಕೋ ಡಿಗಾಮ ಸೇರಿದಂತೆ ಹಲವರು ಚಿತ್ರಗಳಲ್ಲಿ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ರಂಜಿತ್ ಆ್ಯಪಲ್ ಕೇಕ್ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದರು. ಈಗ ಅವರ ನಿರ್ದೇಶನದ ಎರಡನೇ ಸಿನಿಮಾ ಕಾಗದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಫಸ್ಟ್ ಲುಕ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.
ಕಾಗದ ಸಿನಿಮಾ ಮೂಲಕ ಬಾಲನಟಿ ಅಂಕಿತಾ ನಾಯಕಿಯಾಗಿ, ಆದಿತ್ಯ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ಮಫ್ತಿ ಖ್ಯಾತಿಯ ಬಾಲರಾಜವಾಡಿ, ನೇಹಾ ಪಾಟೀಲ್, ಶಿವಮಂಜು, ಅಶ್ವತ್ಥ್ ನೀನಾಸಂ, ಗೌತಮ್ ತಾರಾಬಳಗದಲ್ಲಿದ್ದಾರೆ. ಕಾಗದ ಪ್ರೇಮಕಥಾಹಂದರದ ಚಿತ್ರ. 2005ರ ಸಮಯದಲ್ಲಿ ನಡೆಯುವ ಕಾಲ್ಪನಿಕ ಕಥೆ. ಮೊಬೈಲ್ ಇಲ್ಲದ ಕಾಲಘಟ್ಟದಲ್ಲಿ ಕಾಗದ ಎಷ್ಟು ಮುಖ್ಯ ಪಾತ್ರ ವಹಿಸಿದೆ ಅನ್ನೋದು ಚಿತ್ರದ ಕಂಟೆಂಟ್.
ರಂಜಿತ್ ಕುಮಾರ್ ಗೌಡ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಕಾಗದ ಸಿನಿಮಾಗೆ ಅರುಣ್ ಕುಮಾರ್ ಎ ಬಂಡವಾಳ ಹೂಡಿದ್ದಾರೆ. ಅಮ್ಮ ಸಿನಿ ಕ್ರಿಯೇಷನ್ ನಡಿ ಸಿನಿಮಾ ಮೂಡಿ ಬರಲಿದ್ದು, ಇದೇ ನಿರ್ಮಾಣ ಸಂಸ್ಥೆಯಡಿ ಈ ಹಿಂದೆ ರಗಡ್ ಎಂಬ ಚಿತ್ರ ನಿರ್ಮಾಣವಾಗಿತ್ತು.
ಕಾಗದ ಸಿನಿಮಾದ ಬಹುತೇಕ ಶೂಟಿಂಗ್ ಮುಕ್ತಾಯಗೊಂಡಿದ್ದು, ಒಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿ ಇದೆ. ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ, ಎಸ್ ಪ್ರದೀಪ್ ವರ್ಮಾ ಸಂಗೀತ, ಪವನ್ ಗೌಡ ಸಂಕಲನ, ಭೂಷಣ್ ಕೊರಿಯೋಗ್ರಫಿ ಸಿನಿಮಾಕ್ಕಿದೆ. ಬೇಲೂರು, ಮೂಡಿಗೆರೆ ಭಾಗದಲ್ಲಿ ಕಾಗದ ಸಿನಿಮಾದ ಚಿತ್ರೀಕರದ ಮಾಡಲಾಗಿದೆ.
ನೀನಾಸಂ ಸತೀಶ್ ಹಾಗೂ ರಚಿತಾರಾಮ್ ಅಭಿನಯಿಸಿದ್ದ ಅಯೋಗ್ಯ ಚಿತ್ರದ “ಏನಮ್ಮಿ ಏನಮ್ಮಿ” ಹಾಡು ಸಖತ್ ಹಿಟ್ ಆಗಿತ್ತು. ಈಗಲೂ ಆ ಹಾಡು ಜನಪ್ರಿಯ. ಈಗ ಅವರಿಬ್ಬರ ಕಾಂಬಿನೇಶನ್ ನಲ್ಲಿ ಮೂಡಿಬಂದಿರುವ “ಮ್ಯಾಟ್ನಿ” ಚಿತ್ರದಿಂದ “ಸಂಜೆ ಮೇಲೆ ಸುಮ್ನೆ ಫೋನು ಮಾಡ್ಲ ನಿಂಗೆ ” ಎಂಬ ಹಾಡು ಇತ್ತೀಚೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಪೂರ್ಣಚಂದ್ರ ತೇಜಸ್ವಿ ಬರೆದು ಸಂಗೀತ ನೀಡಿರುವ ಹಾಗೂ ವಿಜಯ್ ಪ್ರಕಾಶ್ ಹಾಡಿರುವ ಈ ಹಾಡಿಗೂ ಮೆಚ್ಚುಗೆ ಸಿಗುತ್ತಿದೆ.
ಬಹಳ ಅದ್ಭುತವಾದ ಹಾಡು. ಕಲಾ ನಿರ್ದೇಶನ, ನೃತೃ ನಿರ್ದೇಶನ, ಛಾಯಾಗ್ರಹಣ ಎಲ್ಲವೂ ಚೆನ್ನಾಗಿದೆ ಎಂದು ಮಾತು ಪ್ರಾರಂಭಿಸಿದ ನೀನಾಸಂ ಸತೀಶ್, ನಾನೊಬ್ಬ ಪ್ರೇಕ್ಷಕನಾಗಿ ನೋಡಿದಾಗ ಈ ಹಾಡು ಬಹಳ ಚೆನ್ನಾಗಿದೆ ಎಂದೆನಿಸುತ್ತದೆ. ನನ್ನ ಕೆರಿಯರ್ ನಲ್ಲಿ ಇದು ಬೆಸ್ಟ್ ಸಾಂಗ್ ಇದು. ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರಿಗೆ ಬಹಳ ತೊಂದರೆ ಕೊಟ್ಟಿದ್ದೇನೆ. ಅವರು ಅಷ್ಟೇ ಚೆನ್ನಾಗಿ ಹಾಡು ಮಾಡಿದ್ದಾರೆ. ಈ ಹಾಡನ್ನು ಮೊದಲು ಅವರೇ ಹಾಡಿದ್ದರು. ಎಲ್ಲರೂ ಇಷ್ಟಪಟ್ಟಿದ್ದರು. ಆದರೂ ಈ ಹಾಡನ್ನು ವಿಜಯಪ್ರಕಾಶ್ ಹಾಡಿದರೆ ಚೆನ್ನಾಗಿರುತ್ತದೆ ಎಂದೆನಿಸಿತು. ಅದಕ್ಕೆ ಪೂರ್ಣಚಂದ್ರ ಅವರು ಒಪ್ಪಿಕೊಂಡು ವಿಜಯಪ್ರಕಾಶ್ ಅವರಿಂದ ಹಾಡಿಸಿದ್ದಾರೆ.
ನಿರ್ದೇಶಕ ಮನೋಹರ್ ಅವರು ಕಥೆ ಹೇಳಿದಾಗ ತಕ್ಷಣ ಒಪ್ಪಿಕೊಂಡೆ. ಬಹಳ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ. “ಅಯೋಗ್ಯ” ನಂತರ ನಾನು ಮತ್ತು ರಚಿತಾ ಒಟ್ಟಿಗೆ ಅಭಿನಯಿಸಿರುವ ಚಿತ್ರವಿದು. ಈ ಚಿತ್ರದ ಕಥೆ ಕೇಳಿದಾಗ, ಈ ಕಥೆಗೆ ರಚಿತಾ ರಾಮ್ ಅವರೇ ಸೂಕ್ತ ಅನಿಸಿತು. ನಂತರ ಮತ್ತೊಬ್ಬ ನಾಯಕಿಯಾಗಿ ಅದಿತಿ ಚಿತ್ರತಂಡ ಸೇರಿದರು. ಈಗಾಗಲೇ ರಚಿತಾ ರಾಮ್ ಅವರು ಈ ಚಿತ್ರದಲ್ಲಿದ್ದಾರೆ. ಒಬ್ಬರು ಇರುವಾಗ ಅದಿತಿ ಒಪ್ಪುತ್ತಾರಾ ಎಂಬ ಗೊಂದಲವಿತ್ತು. ಅವರು ಒಂದೇ ಮಾತಿಗೆ ಒಪ್ಪಿಕೊಂಡರು. ನಾಗಭೂಷಣ್, ಶಿವರಾಜ್ ಕೆ.ಆರ್. ಪೇಟೆ, ಪೂರ್ಣ ಎಲ್ಲರೂ ಸ್ನೇಹಿತರು. ಎಲ್ಲರೂ ಚೆನ್ನಾಗಿ ಮಾಡಿದ್ದಾರೆ. ಮುಂದೆ ನನ್ನ ಹಾಗೂ ಅದಿತಿ ಅವರ ಇನ್ನೊಂದು ಹಾಡು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಆನಂದ್ ಆಡಿಯೋದವರು ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ನಮ್ಮದು ಹಳೆಯ ನಂಟು. ನನ್ನ ಹಲವು ಚಿತ್ರದ ಹಾಡುಗಳನ್ನು ಅವರು ಬಿಡುಗಡೆ ಮಾಡಿದ್ದಾರೆ. ನನಗೆ ಬಹಳ ಲಕ್ಕಿ. ಸೆಪ್ಟೆಂಬರ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಈ ಹಾಡಿನ ಚಿತ್ರೀಕರಣದಲ್ಲೇ ಇದು ಬಹಳ ಚೆನ್ನಾಗಿ ಮೂಡಿಬರುತ್ತದೆ ಎಂದೆನಿಸಿತ್ತು. ಅದರಂತೆ ಹಾಡು ಬಹಳ ಚೆನ್ನಾಗಿ ಮೂಡಿಬಂದಿದೆ. ಹಾಡು, ಸಾಹಿತ್ಯ ಬಹಳ ಚೆನ್ನಾಗಿದೆ. ಸಂತು ಬಹಳ ಚೆನ್ನಾಗಿ ನೃತ್ಯ ನಿರ್ದೇಶನ ಮಾಡಿದ್ದಾರೆ. ತುಂಬಾ ಎಂಜಾಯ್ ಮಾಡಿಕೊಂಡು ಚಿತ್ರೀಕರಣ ಮಾಡಿದ್ದೇವೆ. ಪ್ರತಾಪ್ ಅವರು ಅದ್ಭುತ ಸೆಟ್ಗಳನ್ನು ಹಾಕಿದ್ದಾರೆ. ಅದರಲ್ಲೂ ಒಂದು ಸೆಟ್ ನಲ್ಲಿ ಚಿತ್ರೀಕರಣ ಮಾಡಿದ್ದು, ಸ್ವಿಟ್ಜರ್ ಲ್ಯಾಂಡ್ ನಲ್ಲಿ ಚಿತ್ರೀಕರಣ ಮಾಡಿದ ಹಾಗನಿಸಿತು. ಇಡೀ ತಂಡದ ಶ್ರಮದಿಂದ ಈ ಹಾಡು ಚೆನ್ನಾಗಿ ಮೂಡಿ ಬಂದಿದೆ. ನಿರ್ದೇಶಕರ ಮನೋಹರ್ ಕಥೆ ಮಾಡಿಕೊಂಡು ಬಂದಾಗ ಖುಷಿಯಾಯಿತು. ಅದ್ಭುತವಾದ ತಾರಾಗಣ ಈ ಚಿತ್ರದಲ್ಲಿದೆ. ಒಳ್ಳೆಯ ಪಾತ್ರವಿದೆ. ಇದರಲ್ಲಿ ಹೊಸ ಶೇಡ್ ಇದೆ. ಟ್ರೇಲರ್ ಬಿಡುಗಡೆಯಾದಾಗ ನನ್ನ ಪಾತ್ರದ ಬಗ್ಗೆ ಗೊತ್ತಾಗುತ್ತದೆ ಎಂದರು ರಚಿತರಾಮ್.
ಚಿತ್ರಕ್ಕೆ ಹಾಡುಗಳು ಇನ್ವಿಟೇಶನ್ ಎನ್ನುತ್ತೇವೆ. ಅದೇ ರೀತಿ ನಮ್ಮ ಚಿತ್ರದ ಅದ್ಭುತ ಹಾಡನ್ನು ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರನ್ನು ನಮ್ಮ ಚಿತ್ರ ವೀಕ್ಷಣೆಗೆ ಆಹ್ವಾನಿಸುತ್ತಿದ್ದೇವೆ. ಸತೀಶ್ ಹಾಗೂ ರಚಿತಾರಾಮ್ ಅಭಿನಯದ ಈ ಹಾಡು ಅದ್ಭುತವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ಅದಿತಿ ಪ್ರಭುದೇವ ತಿಳಿಸಿದರು.
ನಿರ್ಮಾಪಕಿ ಪಾರ್ವತಿ ಎಸ್ ಗೌಡ, ನಿರ್ದೇಶಕ ಮನೋಹರ್ ಕಾಂಪಲ್ಲಿ, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ಪೂರ್ಣಚಂದ್ರ ಮೈಸೂರು ಹಾಗು ನಟರಾದ ನಾಗಭೂಷಣ್, ಶಿವರಾಜ್ ಕೆ.ಆರ್. ಪೇಟೆ ಮುಂತಾದವರು “ಮ್ಯಾಟ್ನಿ” ಕುರಿತು ಮಾತನಾಡಿದರು.
ರಾಘವ್ ಲಾರೆನ್ಸ್ ಹಾಗೂ ಕಂಗನಾ ರಣಾವತ್ ನಟನೆಯ ಬಹುನಿರೀಕ್ಷಿತ ಚಂದ್ರಮುಖಿ-2 ಸಿನಿಮಾ ಬಿಡುಗಡೆಗೆ ಹೊಸ್ತಿಲಲ್ಲಿ ನಿಂತಿದೆ. ಗಣೇಶ್ ಚತುರ್ಥಿಗೆ ಬೆಳ್ಳಿತೆರೆಗೆ ಈ ಚಿತ್ರ ಎಂಟ್ರಿ ಕೊಡ್ತಿದ್ದು, ಇಂದು ಕಂಗನಾ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಸಂಪ್ರಾದಾಯಿಕ ಉಡುಗೆ ತೊಟ್ಟು, ಬಂಗಾರದ ಆಭರಣಗಳಲ್ಲಿ ಕಂಗನಾ ಕಂಗೊಳಿಸಿದ್ದಾಳೆ. ಕಳೆದ ವಾರವಷ್ಟೇ ಸೂಪರ್ ಸ್ಟಾರ್ ರಜನಿಕಾಂತ್ ರಾಘವ್ ಲಾರೆನ್ಸ್ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭಾಶಯ ಕೋರಿದ್ದರು.
ಹಿರಿಯ ನಿರ್ದೇಶಕ ಪಿ ವಾಸು ನಿರ್ದೇಶನದಲ್ಲಿ ಮೂಡಿ ಬಂದಿರುವ ಚಂದ್ರಮುಖಿ-2 ಸಿನಿಮಾದಲ್ಲಿ ರಾಘವ್ ಲಾರೆನ್ಸ್ ವೆಟ್ಟೈಯನ್ ರಾಜನಾಗಿ ಕಾಣಿಸಿಕೊಂಡಿದ್ದಾರೆ. ಚಂದ್ರಮುಖಿಯಾಗಿ ಕಂಗನಾ ನಟಿಸಿದ್ದಾರೆ. 2005ರಲ್ಲಿ ಬಿಡುಗಡೆಯಾಗಿದ್ದ ಕ್ಲಾಸಿಕ್ ಸಿನಿಮಾ ಚಂದ್ರಮುಖಿ ಬಾಕ್ಸಾಫೀಸ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ನಾಯಕನಾಗಿ ನಟಿಸಿದ್ದ ಈ ಚಿತ್ರ ಹಿಟ್ ಲೀಸ್ಟ್ ಸೇರಿತ್ತು. 18 ವರ್ಷದ ಬಳಿಕ ಚಂದ್ರಮುಖಿ ಸೀಕ್ವೆಲ್ ಬರ್ತಿದ್ದು, ನಿರೀಕ್ಷೆಯನ್ನು ಹೆಚ್ಚಿಸಿದೆ.
ಲೈಕಾ ಸಂಸ್ಥೆಯ ಒಡೆಯ ಸುಭಾಷ್ ಕರಣ್ ಬಹಳ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದು, ಆಸ್ಕರ್ ಅವಾರ್ಡ್ ವಿನ್ನರ್ ಎಂ.ಎಂ ಕೀರವಾಣಿ ಸಂಗೀತ ನಿರ್ದೇಶನ, ಆರ್ ಡಿ ರಾಜಶೇಖರ್ ಛಾಯಾಗ್ರಹಣ, ಅಂಥೋನಿ ಸಂಕಲನ ಚಿತ್ರಕ್ಕಿದೆ. ವಡಿವೇಲು, ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ತಾರಾಬಳಗದಲ್ಲಿದ್ದಾರೆ. ಗಣೇಶ್ ಹಬ್ಬಕ್ಕೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಚಂದ್ರಮುಖಿ-2 ಸಿನಿಮಾ ಬಿಡುಗಡೆಯಾಗಲಿದೆ.
ಸಂದೇಶ್ ಪ್ರೊಡಕ್ಷನ್ ನಿರ್ಮಾಣದ 30ನೇ ಚಿತ್ರ ಬಹು ಭಾಷೆಗಳಲ್ಲಿ (ತಮಿಳು,ಕನ್ನಡ,ಹಿಂದಿ, ತೆಲುಗು) ತಯಾರಾಗಿರುವ ಡಾನ್ಸಿಂಗ್ ಸ್ಟಾರ್ ಪ್ರಭುದೇವ, ಅನುಸೂಯ ಭಾರದ್ವಾಜ್,ಲಕ್ಷ್ಮಿ ರೈ,ವಸಿಷ್ಠ ಸಿಂಹ,ಅಂಜು ಕುರಿಯನ್,ಮುಂತಾದ ಖ್ಯಾತ ತಾರಾ ಬಳಗವನ್ನೆ ಹೊಂದಿರುವ ವುಲ್ಫ್ ತಾಂತ್ರಿಕ ಕೆಲಸಗಳನ್ನು ಮುಗಿಸಿದೆ. ಈಗಾಗಲೇ ಟೀಸರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಟೀಸರ್ ಕೂಡ ಮೆಚ್ಚುಗೆ ಪಡೆದಿದೆ.
ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ವಿಭಿನ್ನ ಕಥಾ ಹಂದರದ ಈ ಚಿತ್ರವನ್ನು ಮೊದಲ ಬಾರಿಗೆ ಪ್ರೇಕ್ಷಕರ ಮುಂದೆ ಇಡಲು ಚಿತ್ರ ತಂಡ ಸಜ್ಜಾಗಿದೆ. ಆಗಸ್ಟ್ 16 ನಿರ್ಮಾಪಕರಾದ ಸಂದೇಶ್ ನಾಗರಾಜ್ ಅವರ ಜನುಮದಿನ. ಅಂದು ನಟ ವಿಜಯ ಸೇತುಪತಿ ಹಾಡಿರುವ ಚಿತ್ರದ ಮೊದಲ ಲಿರಿಕಲ್ ವೀಡಿಯೋ ಸಹ ಬಿಡುಗಡೆಯಾಗುತ್ತಿದೆ.
ಈ ಚಿತ್ರವನ್ನು ವಿನು ವೆಂಕಟೇಶ್ ನಿರ್ದೇಶನ ಮಾಡಿದ್ದು, ಅರುಳ್ ವಿನ್ಸೆಂಟ್ ಛಾಯಾಗ್ರಹಣ, ಖ್ಯಾತ ತಾರೆ ಜಯಸುಧಾ ಅವರ ಪುತ್ರ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಅಮರೀಶ್ ಸಂಗೀತ ನಿರ್ದೇಶನ ಮಾಡಿರುವ, ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಆಗಿ ಪ್ರಸಾದ್ ಬಿ ಏನ್ ಮತ್ತು ಕಾಮರಾಜು ಕಾರ್ಯ ನಿರ್ವಹಿಸಿರುವ ಈ ಚಿತ್ರವನ್ನು ಸಂದೇಶ ನಾಗರಾಜ್ ಅವರು ಸಂದೇಶ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಿಸಿದ್ದಾರೆ….
ನಟನಾಗಿ, ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಲಯಕೋಕಿಲ ಚೊಚ್ಚಲ ನಿರ್ದೇಶನದ “ತಾಯ್ತ” ಚಿತ್ರಕ್ಕಾಗಿ ರಾಮ್ ನಾರಾಯಣ್ ಅವರು ಬರೆದಿರುವ “ಶಿವನೇ ಕಾಪಾಡು” ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ಮೂರು ದೇವರ ಕುರಿತಾದ ಈ ಹಾಡನ್ನು ಮೂರು ಧರ್ಮದ ಗುರುಗಳು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಸಾಧುಕೋಕಿಲ , ಉಷಾ ಕೋಕಿಲ, ಸಿರಿ ಮ್ಯೂಸಿಕ್ ಚಿಕ್ಕಣ್ಣ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಿರಿ ಮ್ಯೂಸಿಕ್ ಮೂಲಕ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ.
ನಮ್ಮದು ಸಂಗೀತದ ಕುಟುಂಬ. ಬಹುತೇಕ ಎಲ್ಲರೂ ಸಂಗೀತಕ್ಕೆ ಸಂಬಂಧಿಸಿದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಅಣ್ಣ ಲಯಕೋಕಿಲ ಈಗ ನಿರ್ದೇಶಕನಾಗಿದ್ದಾರೆ. ಅವರ ನಿರ್ದೇಶನದ “ತಾಯ್ತ” ಚಿತ್ರದ ಹಾಡೊಂದು ಇಂದು ಬಿಡುಗಡೆಯಾಗಿದೆ. ಅವರೇ ಸಂಗೀತ ನೀಡಿದ್ದಾರೆ. ನಾನು ಕೂಡ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರ ಯಶಸ್ವಿಯಾಗಲಿ ಎಂದು ಸಾಧುಕೋಕಿಲ ಹಾರೈಸಿದರು.
ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಹಾರರ್ ಜಾನರ್ ನ ಚಿತ್ರವಾಗಿದ್ದರೂ, ಕಾಮಿಡಿ ಹಾಗೂ ಥ್ರಿಲ್ಲರ್ ಕೂಡ ಇದೆ. ನಿರ್ಮಾಪಕ ಶಾಹಿದ್ ಅವರು ಕಥೆ ಬರದಿದ್ದಾರೆ. ಚಿತ್ರಕಥೆ, ಸಂಭಾಷಣೆ ಬರೆದು ಸಂಗೀತ ಸಂಯೋಜನೆ ಹಾಗೂ ನಿರ್ದೇಶನವನ್ನು ನಾನು ಮಾಡಿದ್ದೇನೆ. ರಿಯಾನ್ ಈ ಚಿತ್ರದ ನಾಯಕನಾಗಿ, ಹರ್ಷಿಕಾ ಪೂಣಚ್ಛ ನಾಯಕಿಯಾಗಿ ನಟಿಸಿದ್ದಾರೆ.
ನನ್ನ ಮಗಳು ಭಾನುಪ್ರಿಯ ಕೂಡ ಅಭಿನಯಿಸಿದ್ದಾರೆ. ಕೆಲವರನ್ನು ಬಿಟ್ಟು, ಈ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲರೂ ಹೊಸ ಕಲಾವಿದರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಇಂದು ಬಿಡುಗಡೆಯಾಗಿರುವ ಹಾಡನ್ನು ರಾಮ್ ನಾರಾಯಣ್ ಬರೆದಿದ್ದಾರೆ. ಅನುರಾಧ ಭಟ್ ಹಾಡಿದ್ದಾರೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದರು ಲಯಕೋಕಿಲ.
ನಾಯಕ ರಿಯಾನ್, ನಾಯಕಿ ಹರ್ಷಿಕಾ ಪೂಣಚ್ಛ, ನಟಿ ಭಾನುಪ್ರಿಯ, ಸೇರಿದಂತೆ ಅನೇಕ ಕಲಾವಿದರು ಹಾಗೂ ಹಾಡು ಬರೆದಿರುವ ರಾಮ್ ನಾರಾಯಣ್ ಮುಂತಾದವರು “ತಾಯ್ತ” ಚಿತ್ರದ ಕುರಿತು ಮಾತನಾಡಿದರು.
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಶಶಾಂಕ್ ನಿರ್ದೇಶನದ, ಡಾರ್ಲಿಂಗ್ ಕೃಷ್ಣ – ಮಿಲನ ನಾಗರಾಜ್ ಜೋಡಿಯ ” ಕೌಸಲ್ಯ ಸುಪ್ರಜಾ ರಾಮ” ಚಿತ್ರ ಕಳೆದವಾರ ಬಿಡುಗಡೆಯಾಗಿ, ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಯಶಸ್ಸಿನ ಖುಷಿಯನ್ನು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ.
ನನಗೆ ಶಶಾಂಕ್, “ಕೌರವ” ಚಿತ್ರದ ಕಾಲದಿಂದಲೂ ಪರಿಚಯ. ಈ ಚಿತ್ರದ ಕಥೆ ಅವರು ಹೇಳಿದ ತಕ್ಷಣ ನನಗೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಈಗ ಚಿತ್ರ ಬಿಡುಗಡೆಯಾಗಿ ಎಲ್ಲರ ಮನ ಗೆಲ್ಲುತ್ತಿದೆ. ಮುಂದಿನವಾರ ವಿದೇಶಗಳಲ್ಲೂ ಈ ಚಿತ್ರ ಬಿಡುಗಡೆಯಾಗಲಿದೆ. ಜೀ ವಾಹಿನಿಗೆ ಟಿವಿ ರೈಟ್ಸ್ ಹಾಗೂ ವೂಟ್ ಗೆ ಓಟಿಟಿ ಹಕ್ಕು ಮಾರಾಟವಾಗಿದೆ. ಚಿತ್ರದ ಯಶಸ್ಸಿಗೆ ಕಾರಾಣರಾದ ಪ್ರತಿಯೊಬ್ಬರಿಗೂ ಧನ್ಯವಾದವೆಂದರು ನಿರ್ಮಾಪಕ ಬಿ.ಸಿ.ಪಾಟೀಲ್. ಸೃಷ್ಟಿ ಪಾಟೀಲ್ ಅವರು ಚಿತ್ರತಂಡಕ್ಕೆ ಅಭಿನಂದನೆ ತಿಳಿಸಿದರು.
ಈ ಗೆಲವು ನನಗೆ ಬೇಕಿತ್ತು ಎಂದ ಮಾತು ಆರಂಭಿಸಿದ ನಿರ್ದೇಶಕ ಶಶಾಂಕ್, “ಕೌಸಲ್ಯ ಸುಪ್ರಜಾ ರಾಮ” ಚಿತ್ರದ ಕಥೆಯನ್ನು ಡಾರ್ಲಿಂಗ್ ಕೃಷ್ಣ ಅವರಿಗಾಗಿ ಮಾಡಿದ್ದು, ನಾನು ಸಾಮಾನ್ಯವಾಗಿ ಕಥೆ ಮಾಡಿಕೊಳ್ಳುತ್ತೇನೆ. ಆಮೇಲೆ ನಾಯಕರ ಬಳಿ ಚರ್ಚಿಸುತ್ತೇನೆ. ಆದರೆ ಈ ಕಥೆ ಕೃಷ್ಣ ಅವರಿಗಾಗಿಯೇ ಮಾಡಿದ್ದೇನೆ. ಮಿಲನ ನಾಗರಾಜ್ ಅವರು ಮೊದಲು ಈ ಪಾತ್ರಕ್ಕೆ ಒಪ್ಪಲಿಲ್ಲ. ನಾನು ಹಾಗೂ ಕೃಷ್ಣ ಅವರನ್ನು ನಟಿಸಲು ಒಪ್ಪಿಸಲು ಬಹಳ ಶ್ರಮ ಪಟ್ಟೆವು.
ಈಗ ಅವರ ಪಾತ್ರವನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಇನ್ನೂ ಈ ಚಿತ್ರ ಇಷ್ಟು ಅದ್ದೂರಿಯಾಗಿ ಮೂಡಿಬರಲು ಬಿ.ಸಿ.ಪಾಟೀಲ್ ಅವರು ಕಾರಣ. ನಮ್ಮ ಚಿತ್ರ ಕರ್ನಾಟಕ ಮಾತ್ರವಲ್ಲ. ಪಕ್ಕದ ಆಂದ್ರ ಪ್ರದೇಶ ಹಾಗೂ ತಮಿಳುನಾಡಿನಲ್ಲೂ ಬಿಡುಗಡೆಯಾಗಿತ್ತು. ಅಲ್ಲಿನ ಜನರು ನಮ್ಮ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈ ಯಶಸ್ಸಿಗೆ ಕಾರಣರಾದ ನನ್ನ ಇಡೀ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು.
ಶಶಾಂಕ್ ಸರ್ ನನ್ನ ಬಳಿ ಬಂದು, ಆಕ್ಷನ್ ಜಾನರ್ ಸಿನಿಮಾ ಮಾಡೋಣವಾ? ಎಂದರು. ನಾನು ಬೇಡ ಸರ್ . “ಕೃಷ್ಣ ಲೀಲಾ” ತರಹ ಕೌಟುಂಬಿಕ ಚಿತ್ರ ಮಾಡೋಣ ಎಂದೆ. ಒಂದು ತಿಂಗಳಲ್ಲಿ ಶಶಾಂಕ್ ಅವರು ಕಥೆ ಸಿದ್ದ ಮಾಡಿಕೊಂಡು ಬಂದರು. ಚಿತ್ರ ಆರಂಭವಾಯಿತು. ನನ್ನ ಹತ್ತು ವರ್ಷಗಳ ಸಿನಿ ಜರ್ನಿಯಲ್ಲೇ ನಾನು ಕೇಳಿರುವ ಉತ್ತಮ ಕಥೆಯಿದು. ಚಿತ್ರ ಬಿಡುಗಡೆಯಾದ ಮೇಲೆ ಪ್ರೇಕ್ಷಕರುವ ತೋರಿಸುತ್ತಿರುವ ಪ್ರೀತಿಗೆ ಮನಸ್ಸು ತುಂಬು ಬಂದಿದೆ. ನನ್ನೊಡನೆ ನಟಿಸಿರುವ ಎಲ್ಲಾ ಕಲಾವಿದರ ಅದ್ಭುತ ಅಭಿನಯ, ತಂತ್ರಜ್ಞರ ಕಾರ್ಯವೈಖರಿ ಈ ಚಿತ್ರದ ಯಶಸ್ಸಿಗೆ ಕಾರಣ. ಎಲ್ಲರಿಗೂ ನನ್ನ ಧನ್ಯವಾದ. ಬಿ.ಸಿ.ಪಾಟೀಲ್ ಅವರಿಗೆ ವಿಶೇಷ ಧನ್ಯವಾದ ಎಂದರು ನಾಯಕ ಡಾರ್ಲಿಂಗ್ ಕೃಷ್ಣ.
ನಾನು ಮೊದಲು ಈ ಪಾತ್ರ ಮಾಡಲು ಒಪ್ಪಿರಲಿಲ್ಲ. ಕೃಷ್ಣ ಹಾಗೂ ಶಶಾಂಕ್ ಅವರು ಒಪ್ಪಿಸಿದರು. ಈಗ ನನ್ನ ಪಾತ್ರಕ್ಕೆ ಸಿಗುತ್ತಿರುವ ಪ್ರಶಂಸೆ ಕಂಡು ಸಂತೋಷವಾಗಿದೆ ಎಂದರು ಮಿಲನ ನಾಗರಾಜ್.
ನಟ ನಾಗಭೂಷಣ್ ಹಾಗೂ ಚಿತ್ರದ ಮತ್ತೊಬ್ಬ ನಾಯಕಿ ಬೃಂದಾ ಆಚಾರ್ಯ ಚಿತ್ರದ ಕುರಿತು ಮಾತನಾಡಿದರು. ಬೃಂದಾ ಆಚಾರ್ಯ ಅವರೇ ನಿರೂಪಣೆ ಮಾಡಿದ್ದು ವಿಶೇಷವಾಗಿತ್ತು.
ಈ ವರ್ಷ ತೆರೆ ಕಾಣುತ್ತಿರುವ ಚಿತ್ರಗಳ ಪೈಕಿ ಅತೀ ಹೆಚ್ಚು ಕುತೂಹಲ ಮೂಡಿಸುತ್ತಿರುವ ಆಕ್ಷನ್ ಪ್ಯಾಕೇಜ್ ಚಿತ್ರ ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಕನ್ನಡ ಮರಾಠಿ ಹಿಂದಿ ತೆಲುಗು ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿರುವ ‘ಆಪರೇಷನ್ ಲಂಡನ್ ಕೆಫೆ’ ಬಹುತೇಕ ಚಿತ್ರೀಕರಣ ಮುಗಿಸಿದ್ದು. ಚಿತ್ರದ ಡಬ್ಬಿಂಗ್ ಹಂತದ ಚಟುವಟಿಕೆಗಳು ಭರದಿಂದ ಸಾಗುತ್ತಿದೆ.
ಈಗಾಗಲೇ ಈ ಚಿತ್ರದ ಚಿತ್ರೀಕರಣ ಮುಗಿಸಿರುವ ನಟಿ ಮೇಘಾ ಶೆಟ್ಟಿ ಅದೇ ಖುಷಿಯಲ್ಲಿ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಇಂಡಿಯನ್ ಫಿಲ್ಮ್ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲ್ಮ್ಸ್ ಲಾಂಛನದಡಿಯಲ್ಲಿ ವಿಜಯ್ ಕುಮಾರ್ ಶೆಟ್ಟಿ ಹವರಾಲ್ ರಮೇಶ್ ಕೊಠಾರಿ ಮತ್ತು ದೀಪಕ್ ರಾಣೆ ಅದ್ದೂರಿಯಾಗಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಸಡಗರ ರಾಘವೇಂದ್ರ ನಿರ್ದೇಶಿಸುತ್ತಿದ್ದಾರೆ.
ಡಿ ನಾಗಾರ್ಜುನ್ ಛಾಯಾಗ್ರಹಣ ಪ್ರಾನ್ಷು ಝಾ ಸಂಗೀತ ಕೆ. ಎಂ ಪ್ರಕಾಶ್ ಸಂಕಲನ ವರದರಾಜ್ ಕಾಮತ್ ಕಲೆ ವಿಕ್ರಂ ಮೋರ್ ಮಾಸ್ ಮಾದ ಸಾಹಸ ಕವಿರಾಜ್ ವಿ ನಾಗೇಂದ್ರ ಪ್ರಸಾದ್ ಮತ್ತು ಕ್ಷಿತಿಜ್ ಪಟವರ್ಧನ್ ಸಾಹಿತ್ಯವಿದೆ.
ಈ ಚಿತ್ರದಲ್ಲಿ ಮರಾಠಿಯ ಹೆಸರಾಂತ ಶಿವಾನಿ ಸುರ್ವೆ, ವಿರಾಟ್ ಮಡಕೆ ಸಹಿತ ಅರ್ಜುನ್ ಕಾಪಿಕ್ಕಾಡ್ ಬಿ ಸುರೇಶ್ ಇನ್ನಿತರ ಹೆಸರಾಂತ ಕಲಾವಿದರು ಬಣ್ಣ ಹಚ್ಚಿದ್ದಾರೆ.
ಸದ್ಯದಲ್ಲೇ ಚಿತ್ರಕ್ಕೆ ಸಂಬಂಧಿಸಿದ ಇನ್ನಷ್ಟೂ ಸಿಹಿ ಸುದ್ಧಿಯನ್ನು ಹಂಚಿಕೊಳ್ಳುವುದಾಗಿ ಹೇಳಿಕೊಂಡ ನಿರ್ದೇಶಕ ಸಡಗರ ರಾಘವೇಂದ್ರ ಈ ಮೂಲಕ ಹುಟ್ಟುಹಬ್ಬದ ಖುಷಿಯನ್ನು ಆಚರಿಸಿಕೊಳ್ಳುತ್ತಿರುವ ಮೇಘಾ ಶೆಟ್ಟಿಯವರಿಗೆ ಇಡೀ ಚಿತ್ರತಂಡದ ಪರವಾಗಿ ಶುಭಾಶಯವನ್ನು ಕೋರಿದ್ದಾರೆ.