Categories
ಸಿನಿ ಸುದ್ದಿ

ದೇಶಭಕ್ತಿ ಸಾರುವ ಕಮಲ್ ‘ಇಂಡಿಯನ್ -2’ ಟ್ರೇಲರ್ ಬಂತು

ಯುವನಿವರ್ಸಲ್ ಸ್ಟಾರ್, ಉಳಗನಾಗನ್ ಕಮಲ್ ಹಾಸನ್ ನಟನೆಯ ಬಹುನಿರೀಕ್ಷಿತ ಇಂಡಿಯನ್ -2 ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ. ಹಲವು ಶೇಡ್ ನಲ್ಲಿ ಕಮಲ್ ಕಮಾಲ್ ಮಾಡಿದ್ದು, ಶಂಕರ್ ಟೇಕಿಂಗ್ ಮತ್ತೊಮ್ಮೆ ಒಳ್ಳೆ ಮಾರ್ಕ್ಸ್ ಸಿಗಲಿದೆ. 1996 ರ ಬ್ಲಾಕ್‌ಬಸ್ಟರ್ “ಇಂಡಿಯನ್” ಸಿನಿಮಾದ ಮುಂದುವರೆದ ಭಾಗವಾಗಿರುವ “ಇಂಡಿಯನ್ 2” ನಲ್ಲಿ ಸೇನಾಪತಿಯಾಗಿ ಕಮಲ್ ಹಾಸನ್ ಮರಳಿದ್ದಾರೆ.

ರಾಷ್ಟ್ರವನ್ನು ಕಾಡುತ್ತಿರುವ ವ್ಯವಸ್ಥಿತ ಭ್ರಷ್ಟಾಚಾರ, ನಿರುದ್ಯೋಗ, ಸಮಾಜವನ್ನು ಪೀಡಿಸುವ ಅಭಿವೃದ್ಧಿಯ ಕೊರತೆಯ ಸಮಸ್ಯೆಗಳ ವಿರುದ್ಧ ಕಮಲ್ ಹಾಸನ್ ಸೇನಾಪತಿಯಾಗಿ ಸಮರ ಸಾರಿದ್ದಾರೆ. ಭರ್ಜರಿ ಆಕ್ಷನ್ ಸೀಕ್ವೆನ್ಸ್ ಜೊತೆಗೆ ದೇಶಭಕ್ತಿಯ ಕಥೆ ಹೇಳುವ ಇಂಡಿಯನ್ ಸೀಕ್ವೆಲ್ ನಲ್ಲಿ ದೊಡ್ಡ ತಾರಾಬಳಗವೇ ಇದೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ.

ಕಮಲ್ ಹಾಸನ್ ಜೊತೆಗೆ ಸಿದ್ದಾರ್ಥ್, ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಜಯರಾಮ್, ಬ್ರಹ್ಮಾನಂದಂ, ಬಾಬಿ ಸಿಂಹ, ಸಮುದ್ರಕನಿ ಮತ್ತು ನೆಡುಮುಡಿ ವೇಣು ಹಲವರು ನಟಿಸಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ನಿರ್ಮಿಸಿರುವ ಇಂಡಿಯನ್ 2 ಜುಲೈ 12 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಟ್ರೇಲರ್‌ ಕೂಡ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

Categories
ಸಿನಿ ಸುದ್ದಿ

ನಸಾಬ್ ಇದು ಅಪ್ಪ ಮಗನ ಸಿನಿಮಾ: ಟ್ರೇಲರ್ ಬಂತು

ಕನ್ನಡದಲ್ಲಿ ಒಳ್ಳೆಯ ಕಂಟೆಂಟ್ ಚಿತ್ರಗಳು ಹೆಚ್ಚು ಬರುತ್ತಿದೆ. ಅಂತಹುದೇ ಉತ್ತಮ‌ ಕಂಟೆಂಟ್ ಹೊಂದಿರುವ “ನಸಾಬ್” ಕನ್ನಡ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚಿಗೆ ಅದ್ದೂರಿಯಾಗಿ ನಡೆಯಿತು. ಟ್ರೇಲರ್ ಹಾಗೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಂಜಾರ ಶಕ್ತಿಪೀಠದ ಶ್ರೀ ಕುಮಾರ ಮಹಾರಾಜರು, ಮಾಜಿ ಉಪ ಸಭಾಪತಿ ರುದ್ರಪ್ಪ ಎಂ ಲಮ್ಮಾಣಿ, ಐ ಎ ಎಸ್ ಅಧಿಕಾರಿ ಜಗದೀಶ್ ಜಿ, ಮಾಜಿ ಶಾಸಕ ಪಿ.ರಾಜೀವ್, ಶೋಭ ಜಿ , ಶೋಭಾ ಟಿ.ಆರ್ , ಹರೀಶ್ ಮುಂತಾದವರು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.

ಇದು ನನ್ನ ಜೀವನದ ‌ಕಥೆ ಎಂದು ಮಾತಮಾಡಿದ ಕಿಶೋರ್ ಕುಮಾರ್ ನಾಯ್ಕ್, ನಮ್ಮ ತಂದೆ ತಾಯಿಗೆ ಹದಿನಾಲ್ಕು ಜನ ಮಕ್ಕಳು. ಬಡತನ ಬೇರೆ. ಅಂತಹ ಬಡ ಕುಟುಂಬದಲ್ಲಿ ಹುಟ್ಟಿದ ಬಂಜಾರ ಸಮುದಾಯದ ಹುಡುಗನೊಬ್ಬ ಚೆನ್ನಾಗಿ ಓದಿ ವಿದ್ಯಾವಂತನಾಗಿ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾನೆ‌.‌ ಇದೇ ಚಿತ್ರದ ಕಥಾಹಂದರ. ನಾನು, ನನ್ನ ಜೀವನದ ಕಥೆಯನ್ನು “ನಸಾಬ್” ಎಂದು ಪುಸ್ತಕ ರೂಪದಲ್ಲಿ ಹೊರ ತಂದೆ. ಇದನ್ನು ಓದಿದ್ದ ಮಿತ್ರ ಹರೀಶ್, ಈ ಕೃತಿಯನ್ನು ಸಿನಿಮಾ‌ ಮಾಡೋಣ ಎಂದರು. ಈ ಸಿನಿಮಾ‌ ಆಗಲು ಹರೀಶ್ ಅವರೆ ಮುಖ್ಯ ಕಾರಣ. ನನ್ನ ಮಗ ಕೀರ್ತಿ ಕುಮಾರ್ ನಾಯ್ಕ್ ಈ ಚಿತ್ರವನ್ನು ನಿರ್ದೇಶಿಸುವುದರೊಂದಿಗೆ ನಾಯಕನಾಗೂ ಅಭಿನಯಿಸಿದ್ದಾರೆ. ಶೆಫಾಲಿ ಸಿಂಗ್ ಸೋನಿ ಈ ಚಿತ್ರದ ನಾಯಕಿ.‌ ಬಿ.ಜಯಶ್ರೀ,‌ ಪದ್ಮಾ ವಾಸಂತಿ, ವಿಜಯ ಕಾಶಿ,‌ ತಬಲ ನಾಣಿ, ನಾಗೇಂದ್ರ ಅರಸ್, ಶೋಭ್ ರಾಜ್, ಪ್ರಕಾಶ್, ಹನುಮಂತೇ ಗೌಡ ಮುಂತಾದವರು ಚಿತ್ರದಲ್ಲಿದ್ದಾರೆ. “ನಸಾಬ್” ಎಂದರೆ ಲಮ್ಮಾಣಿ ಭಾಷೆಯಲ್ಲಿ ನ್ಯಾಯ ಎಂದು ಅರ್ಥ. ಇಂದು ಸಾಕಷ್ಟು ಗಣ್ಯರು ಹಾಗೂ ನಮ್ಮ ಊರಿನವರು ಆಗಮಿಸಿ ನಮ್ಮ ಚಿತ್ರಕ್ಕೆ ಶುಭ ಕೋರಿದ್ದೀರಿ. ನಿಮಗೆ ಅನಂತ ಧನ್ಯವಾದಗಳು. ಸದ್ಯದಲ್ಲೇ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಎಂದರು.

ನನ್ನ‌ ಮೇಲೆ‌ ನಂಬಿಕೆಯಿಟ್ಟು ಜವಾಬ್ದಾರಿ ನೀಡಿದ ನನ್ನ ತಂದೆ ಕಿಶೋರ್ ಕುಮಾರ್ ನಾಯ್ಕ್ ಅವರಿಗೆ ಹಾಗೂ ಸಮಾರಂಭಕ್ಕೆ ಆಗಮಿಸಿರುವ ಗಣ್ಯರಿಗೆ ಧನ್ಯವಾದ. ಇದು ನನ್ಮ ಮೊದಲ ಚಿತ್ರ. ನಟನೆಗೆ ಸಹಕಾರ ನೀಡಿದ ಹಿರಿಯ ಕಲಾವಿದರು ಹಾಗೂ ತಂತ್ರಜ್ಞರನ್ನು ಈ ಸಮಯದಲ್ಲಿ ನೆನೆಯುತ್ತೇನೆ.‌ ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಹಾಗೂ ನಾಯಕ ಕೀರ್ತಿ ಕುಮಾರ್ ನಾಯ್ಕ್.

ನಾಯಕಿ ಶೆಫಾಲಿ ಸಿಂಗ್ ಸೋನಿ, ನಟರಾದ ವಿಜಯ ಕಾಶಿ, ತಬಲನಾಣಿ, ನಾಗೇಂದ್ರ ಅರಸ್,‌ ಪ್ರಕಾಶ್ ಮುಂತಾದವರು “ನಸಾಬ್” ಚಿತ್ರದ ತಮ್ಮ ಪಾತ್ರಗಳ ಕುರಿತು ಮಾಹಿತಿ ನೀಡಿದರು. ಕೀರ್ತಿ ಕ್ರಿಯೇಷನ್ಸ್ ಲಾಂಛನದಲ್ಲಿ ಸುಜಾತ ಕಿಶೋರ್ ನಾಯ್ಕ್ ಈ ಚಿತ್ರವನ್ನು ನಿರ್ಮಾಣ‌ ಮಾಡಿದ್ದಾರೆ. ರಾಗಂ ಸಂಗೀತ ಸಂಯೋಜಿಸಿದ್ದಾರೆ.

Categories
ಸಿನಿ ಸುದ್ದಿ

ಜಿಗರ್ ಟ್ರೇಲರ್ ಗೆ ಮೆಚ್ಚುಗೆ: ಜುಲೈ 5ಕ್ಕೆ ರಿಲೀಸ್

ಪೂಜಾ ವಸಂತಕುಮಾರ್ ನಿರ್ಮಾಣದ, ಸೂರಿ ಕುಂದರ್ ನಿರ್ದೇಶನದ ಹಾಗೂ ಪ್ರವೀಣ್ ತೇಜ್ ನಾಯಕನಾಗಿ ನಟಿಸಿರುವ “ಜಿಗರ್” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರ ಜುಲೈ 5ರಂದು ತೆರೆಗೆ ಬರುತ್ತಿದೆ.

ಪ್ರೇಮಕಥೆಗಳಿಗೆ ಸೀಮಿತನಾಗಿದ್ದ ನನ್ನನ್ನು ನಿರ್ದೇಶಕರು ಈ ಚಿತ್ರದ ಮೂಲಕ ಆಕ್ಷನ್ ಹೀರೋ ಮಾಡಿದ್ದಾರೆ ಎಂದು‌ ಮಾತನಾಡಿದ ನಾಯಕ ಪ್ರವೀಣ್ ತೇಜ್, ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಜೀವ. ಉತ್ಸಾಹಿ ಯುವಕನೊಬ್ಬ ಫಿಶ್ ಟೆಂಡರ್ ಶಿಪ್ ನಲ್ಲಿ ಭಾಗಿಯಾಗುತ್ತಾನೆ. ಆಮೂಲಕ ಭೂಗತಲೋಕಕ್ಕೂ ಕಾಲಿಡುತ್ತಾನೆ. ಅಲ್ಲಿ ಮೂರು ನಾಲ್ಕು ಸಂಘಗಳಿರುತ್ತದೆ. ಸಂಘಗಳ ನಡುವೆ ಸಂಘರ್ಷವೂ ಇರುತ್ತದೆ. ಇದು ಚಿತ್ರದ ಪ್ರಮುಖ ಕಥಾಹಂದರ. ಇದರೊಟ್ಟಿಗೆ ಲವ್, ಆಕ್ಷನ್, ಕಾಮಿಡಿ ಕೂಡ ನಮ್ಮ ಚಿತ್ರದಲ್ಲಿದೆ ಎಂದು ತಿಳಿಸಿದರು.

ಸುಮಾರು ಹದಿನೈದು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ‌. ಸ್ವತಂತ್ರ ನಿರ್ದೇಶಕನಾಗಿ ಮೊದಲ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. “ಜಿಗರ್” ಎಂದರೆ ಎರಡು ಗುಂಡಿಗೆವುಳ್ಳವನು ಹಾಗೂ ಯಾವುದಕ್ಕೂ ಅಂಜದವನು ಎಂದು ಅರ್ಥ. ಮಲ್ಪೆ , ಉಡುಪಿ, ಕುಂದಾಪುರ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ಚಿತ್ರತಂಡದ ಸದಸ್ಯರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಜುಲೈ 5 ರಂದು “ಜಿಗರ್” ಬಿಡುಗಡೆಯಾಗಲಿದೆ. ನೋಡಿ ಪ್ರೋತ್ಸಾಹಿಸಿ ಎಂದರು ನಿರ್ದೇಶಕ ಸೂರಿ ಕುಂದರ್.

ನಾಯಕಿ ವಿಜಯಶ್ರೀ, ನಟ ಯಶ್ ಶೆಟ್ಟಿ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಸಂಗೀತ ನಿರ್ದೇಶಕ ರಿತ್ವಿಕ್ ಮುರಳಿಧರ್, ಗೀತರಚನೆಕಾರ ಗಣೇಶ್, ಛಾಯಾಗ್ರಾಹಕ ಶಿವಸೇನ ಮುಂತಾದವರು “ಜಿಗರ್” ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಇದು 2005ರ ಕಾಗದ ಪ್ರೀತಿ: ಟ್ರೇಲರ್ ಬಂತು

ಅರುಣ್ ಕುಮಾರ್ ಅವರ ನಿರ್ಮಾಣದ ಹಾಗೂ ರಂಜಿತ್ ನಿರ್ದೇಶನದಲ್ಲಿ ಆದಿತ್ಯ ಹಾಗೂ ಅಂಕಿತ ಜಯರಾಂ ನಾಯಕ/ ನಾಯಕಿಯಾಗಿ ನಟಿಸಿರುವ ‘ಕಾಗದ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಬಿಜೆಪಿ ಮುಖಂಡ ರಾಘವೇಂದ್ರ ಶೆಟ್ಟಿ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಹಾರೈಸಿದ್ದಾರೆ.

“ಕಾಗದ”, 2005ರಲ್ಲಿ ನಡೆದ ಪ್ರೇಮಕಥೆ. ಯುವಜನತೆಯ ಕೈಯಲ್ಲಿ ಇನ್ನೂ ಮೊಬೈಲ್‌ ಬಂದಿರದ, “ಕಾಗದ” ದಲ್ಲೇ ಪ್ರೀತಿ ವಿನಿಮಯವಾಗುತ್ತಿದ್ದ ಕಾಲಘಟ್ಟದ ಕಥೆಯೂ ಹೌದು. ಪರಸ್ಪರ ದ್ವೇಷಿಸುವ ಎರಡು ಹಳ್ಳಿಗಳ ನಡುವೆ ಅರಳಿದ ಪ್ರೇಮಕಥೆ ಕೂಡ. ಇಂತಹ ಹಲವು ವಿಶೇಷಗಳ “ಕಾಗದ” ಚಿತ್ರ , ಎಲ್ಲರ ಸಹಕಾರದಿಂದ ಉತ್ತಮವಾಗಿ ಮೂಡಿಬಂದಿದೆ. ಟ್ರೇಲರ್ ಗೆ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರ ಜುಲೈ 5 ರಂದು ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದ ನಿರ್ದೇಶಕ ರಂಜಿತ್, “ಆಪಲ್ ಕೇಕ್” ಚಿತ್ರದ ನಂತರ ಇದು ನನ್ನ ಎರಡನೇ ನಿರ್ದೇಶನದ ಚಿತ್ರ ಎಂದರು.

ನನಗೆ ಮೊದಲಿನಿಂದಲೂ ಹಿಂದು – ಮುಸ್ಲಿಂ ಲವ್ ಸ್ಟೋರಿ ಸಿನಿಮಾ ಮಾಡುವ ಆಸೆಯಿತ್ತು. ಆದರೆ ನನ್ನ ಮನಮುಟ್ಟುವ ಹಾಗೆ ಯಾರು ಕಥೆ ಹೇಳುತ್ತಿರಲಿಲ್ಲ. ನನ್ನನ್ನು ಒಪ್ಪಿಸುವಲ್ಲಿ ರಂಜಿತ್ ಯಶಸ್ವಿಯಾದರು. ನಾವು ಈ ಚಿತ್ರದಲ್ಲಿ ಯಾವುದೇ ಧರ್ಮದ ಭಾವನೆಗಳಿಗ ಧಕ್ಕೆ ತರುವ ಸನ್ನಿವೇಶಗಳನ್ನು ತೋರಿಸಿಲ್ಲ. ಎಲ್ಲಕ್ಕಿಂತ ಮನುಷ್ಯತ್ವ ಮುಖ್ಯ ಎಂಬ ಸಂದೇಶ ತಿಳಿಸಿದ್ದೇವೆ. ನನ್ನ ಮಗ ಆದಿತ್ಯ ಈ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾನೆ. “ರಗಡ್” ಚಿತ್ರದ ನಂತರ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ಅರುಣ್ ಕುಮಾರ್ ತಿಳಿಸಿದರು.

ನಮ್ಮ ಮನೆಯ ಕೆಳಗಡೆ ಆಕ್ಟಿಂಗ್ ಸ್ಕೂಲ್ ಇತ್ತು. ಅಲ್ಲಿ ಕಲಿಯಲು ಬರುತ್ತಿದ್ದವರನ್ನು ನೋಡಿ‌ ನನಗೂ ನಟಿಸುವ ಆಸೆಯಾಯಿತು. ನಟನೆ ಕಲಿತು, ಕಿರುಚಿತ್ರ ಹಾಗೂ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ನನ್ನ ಆಸೆ ಪೂರೈಸಿದ ಅಪ್ಪನಿಗೆ ಧನ್ಯವಾದ ಎಂದರು ನಾಯಕ ಆದಿತ್ಯ.

ಬಾಲನಟಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ನನಗೆ ತಾವೆಲ್ಲರೂ ನೀಡಿರುವ ಪ್ರೋತ್ಸಾಹಕ್ಕೆ ಧನ್ಯವಾದ. ನಾಯಕಿಯಾಗಿ ಇದು ಮೊದಲ ಚಿತ್ರ. “ಕಾಗದ” ಚಿತ್ರದಲ್ಲಿ ಬೋಲ್ಡ್ ಹುಡುಗಿಯ ಪಾತ್ರ ನನ್ನದು ಎನ್ನುತ್ತಾರೆ ನಾಯಕಿ ಅಂಕಿತ ಜಯರಾಂ.

ಚಿತ್ರದಲ್ಲಿ ನಟಿಸಿರುವ ಶಿವಮಂಜು, ಗೌತಮ್ ತಮ್ಮ ಪಾತ್ರದ ಬಗ್ಗೆ ಹೇಳಿದರು. ಸಂಗೀತದ ಬಗ್ಗೆ ಪ್ರದೀಪ್ ವರ್ಮ, ಛಾಯಾಗ್ರಹಣದ ಕುರಿತು ವೀನಸ್ ನಾಗರಾಜ ಮೂರ್ತಿ ಹಾಗೂ ವರ್ಣಾಲಂಕಾರದ ಬಗ್ಗೆ ಮಣಿ ಮಾಹಿತಿ ನೀಡಿದರು‌.

ಈ ಚಿತ್ರದ ವಿಶೇಷ ಪಾತ್ರದಲ್ಲಿ ನೇಹಾ ಪಾಟೀಲ್ ಕಾಣಿಸಿಕೊಂಡಿದ್ದಾರೆ. ಬಲ ರಾಜವಾಡಿ, ನೀನಾಸಂ ಅಶ್ವಥ್, ಮಠ ಕೊಪ್ಪಳ, ಶಿವಮಂಜು ಮುಂತಾದವರು ತಾರಾಬಳಗದಲ್ಲಿದ್ದಾರೆ.

“ಕಾಗದ” ಟ್ರೇಲರ್ ವೀಕ್ಷಿಸಿದ ಚಂದನವನದ ತಾರೆಯರಾದ ಧ್ರುವ ಸರ್ಜಾ, ರಮೇಶ್ ಅರವಿಂದ್, ಅನು ಪ್ರಭಾಕರ್ ಹಾಗೂ ನಿರ್ದೇಶಕ ಎ.ಪಿ.ಅರ್ಜುನ್ ಮೆಚ್ಚುಗೆ ಸೂಚಿಸಿದ್ದಾರೆ. ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಜಂಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಲಭ್ಯವಿದೆ.

Categories
ಸಿನಿ ಸುದ್ದಿ

ಶಿವರಾಜ್ ಕುಮಾರ್ ಹೊಸ ಸಿನಿಮಾದ ಅಪ್ ಡೇಟ್ : ಶೂಟಿಂಗ್ ಗೆ ರೆಡಿ ಚಿತ್ರತಂಡ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಗಳ ಪೈಕಿ ನಿರೀಕ್ಷೆ ಹೆಚ್ಚಿಸಿರುವುದು ಈ ಸಿನಿಮಾ. ಈ ಚಿತ್ರದ ಕುರಿತ ಹೊಸ ಅಪ್ ಡೇಟ್ ಸಿಕ್ಕಿದೆ. ಇಂದು ಶಿವಣ್ಣನ ಮಡದಿ ಗೀತಾ ಶಿವರಾಜ್ ಕುಮಾರ್ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿದೆ.

ಶಿವರಾಜ್ ಕುಮಾರ್ಗೆ ಆ್ಯಕ್ಷನ್ ಕಟ್ ಹೇಳ್ತಿರುವುದು ತೆಲುಗು ನಿರ್ದೇಶಕ ಕಾರ್ತಿಕ್ ಅದ್ವೈತ್. ತಮಿಳಿನಲ್ಲಿ ವಿಕ್ರಂ ಪ್ರಭು ಅಭಿನಯದ ‘ಪಾಯುಮ್ ಒಲಿ ನೀ ಎನಕ್ಕು’ ಚಿತ್ರ ನಿರ್ದೇಶಿಸಿದ್ದಾರೆ. ಇದೀಗ ಸ್ಯಾಂಡಲ್ವುಡ್ ಅಂಗಳಕ್ಕೆ ಎಂಟ್ರಿ ಕೊಡ್ತಿರುವ ಇವರಿಗೆ ನಿರ್ದೇಶಕನಾಗಿ ಎರಡನೇ ಸಿನಿಮಾ.

ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶಿವಣ್ಣ ಡಿಫ್ರೆಂಟ್ ಲುಕ್ನಲ್ಲಿ, ಡಿಫ್ರೆಂಟ್ ರೋಲ್ನಲ್ಲಿ ಕಾಣಸಿಕೊಳ್ಳಲಿದ್ದಾರೆ. ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ಸದ್ಯ ಮ್ಯೂಸಿಕ್ ವರ್ಕ್ ಭರದಿಂದ ಸಾಗುತ್ತಿದೆ. ಆಗಸ್ಟ್ ತಿಂಗಳಲ್ಲಿ ಮುಹೂರ್ತ ನಡೆಯಲಿದೆ.

ಸದ್ಯಕ್ಕೆ ಬೇರೆ ಕಲಾವಿದರ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಚಿತ್ರೀಕರಣಕ್ಕೆ ತೆರಳಲು ಸಜ್ಜಾಗಿದೆ ಚಿತ್ರತಂಡ. ಸ್ಯಾಮ್ ಸಿ.ಎಸ್ ಸಂಗೀತ, ಎಜೆ ಶೆಟ್ಟಿ ಛಾಯಾಗ್ರಹಣ, ದೀಪು S ಕುಮಾರ್ ಸಂಕಲನ, ರವಿ ಸಂತೆಹಕ್ಲು ಕಲಾ ನಿರ್ದೇಶನ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಗ್ರಾಮೀಣ ಸೊಗಡಿನ ಚಿತ್ರಕ್ಕೆ ಉಘೇ ಉಘೇ: ಸಂಭವಾಮಿ ಯುಗೇ ಯುಗೇ ಜೂ. 21 ಕ್ಕೆ ರಿಲೀಸ್

ಕನ್ನಡದಲ್ಲಿ ಮತ್ತೊಂದು ಗ್ರಾಮೀಣ ಸೊಗಡಿನ ಸಿನಿಮಾ ರಿಲೀಸ್ ಆಗಲು ಸಜ್ಜಾಗುತ್ತಿದೆ. ಲಕ್ಷ್ಮೀ ಎಂಟರ್‌ ಟೈನ್ಮೆಂಟ್ ಸಂಸ್ಥೆಯಡಿ ಪ್ರತಿಭಾ ನಿರ್ಮಿಸಿರುವ, ಚೇತನ್‍ ಚಂದ್ರಶೇಖರ್ ಶೆಟ್ಟಿ ಕಥೆ, ಚಿತ್ರಕಥೆ, ಬರೆದು ನಿರ್ದೇಶನ ಮಾಡಿರುವ ‘ಸಂಭವಾಮಿ ಯುಗೇ ಯುಗೇ’ ಚಿತ್ರ ಜೂನ್ 21 ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದಕ್ಕೂ ಮುನ್ನ ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದ ಚೇತನ್‍ ಅವರಿಗೆ ಇದು ಮೊದಲ ಸ್ವತಂತ್ರ ಪ್ರಯತ್ನ.

ಇದೊಂದು ಗ್ರಾಮೀಣ ಸೊಗಡಿನ ಕಮರ್ಷಿಯಲ್‍ ಥ್ರಿಲ್ಲರ್ ಚಿತ್ರವಾಗಿದ್ದು, ಮಂಡ್ಯ, ಚೆನ್ನಪಟ್ಟಣ, ರಾಮನಗರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಈ ಹಿಂದೆ ‘1975’ ಎಂಬ ಚಿತ್ರದಲ್ಲಿ ನಟಿಸಿದ್ದ ಜಯ್‍ ಶೆಟ್ಟಿ, ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಬಿಜಾಪುರ ಮೂಲದ ನಿಶಾ ರಜಪೂತ್‍ ನಾಯಕಿಯಾಗಿ ಅಭಿನಯಿಸಿದ್ದಾರೆ.


ಹಳ್ಳಿ ಹುಡುಗರು ಓದಿ, ಪಟ್ಟಣಕ್ಕೆ ಹೋಗಿ ನೆಲೆಸುತ್ತಾರೆ. ಇದರಿಂದ ಮುಂದಿನ ತಲೆಮಾರಿನ ಕಥೆ ಏನು? ಹಳ್ಳಿ ಉಳಿಯುವುದು ಹೇಗೆ? ಎಂಬ ವಿಷಯಗಳು ‘ಸಂಭವಾಮಿ ಯುಗೇ ಯುಗೇ’ ಚಿತ್ರದ ಕಥಾವಸ್ತು. ‘ಯುವಕರು ಹಳ್ಳಿಯಲ್ಲೇ ನೆಲಸಬೇಕು ಮತ್ತು ಹಾಗೆ ನೆಲೆಸಬೇಕು ಎಂದರೆ ಹಳ್ಳಿಯಲ್ಲಿ ಒಂದಿಷ್ಟು ಕೆಲಸ ಆಗಬೇಕು ಎಂದು ನಾಯಕ ಮುಂದಾಗುತ್ತಾನೆ. ಈ ನಿಟ್ಟಿನಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾನೆ ಎನ್ನುವುದು ಚಿತ್ರದ ಕಥೆ. ಇವತ್ತಿನ ತಲೆಮಾರಿನವರಿಗೆ ಕನೆಕ್ಟ್ ಆಗುವ ಹಲವು ಅಂಶಗಳು ಈ ಚಿತ್ರದಲ್ಲಿವೆ’ ಎನ್ನುತ್ತಾರೆ ನಿರ್ದೇಶಕ ಚೇತನ್‍ ಚಂದ್ರಶೇಖರ್ ಶೆಟ್ಟಿ.

ಚಿತ್ರದ ಕುರಿತು ಮಾತನಾಡುವ ನಾಯಕ ನಟ ಜಯ್‍ ಶೆಟ್ಟಿ, ‘ಇದೊಂದು ಕೃಷಿ ಮತ್ತು ರೈತರ ಸಿನಿಮಾ. ತನಗೆ ಆಶ್ರಯ ಕೊಟ್ಟ ಊರಿಗೆ ಏನಾದರೂ ಮಾಡಬೇಕು ಎಂದು ನಾಯಕ ಮುಂದಾಗುತ್ತಾನೆ. ಆ ಹಳ್ಳಿಯ ಪಂಚಾಯ್ತಿ ಅಧ್ಯಕ್ಷನಾಗುತ್ತಾನೆ. ಮುಂದೇನು ಎಂಬುದು ಚಿತ್ರದ ಕಥೆ. ನಾನು ಹೊಸಬನಾದರೂ ನನ್ನ ಮೇಲೆ ನಂಬಿಕೆ ಇಟ್ಟು, ಚಿತ್ರದಲ್ಲಿ ಅವಕಾಶ ಕೊಟ್ಟ ನಿರ್ಮಾಪಕರಿಗೆ ಧನ್ಯವಾದಗಳು’ ಎನ್ನುತ್ತಾರೆ.

‘ಸಂಭವಾಮಿ ಯುಗೇಯಗೇ’ ಚಿತ್ರದಲ್ಲಿ ಜಯ್ ಶೆಟ್ಟಿ ಮತ್ತು ನಿಶಾ ರಜಪೂತ್ ಜೊತೆಗೆ ಪ್ರಮೋದ್ ಶೆಟ್ಟಿ, ಸುಧಾರಾಣಿ, ಭವ್ಯ, ಅಶೋಕ್ ಕುಮಾರ್, ಮಧುರ ಗೌಡ, ಅಭಯ್ ಪುನೀತ್, ಬಲ ರಾಜವಾಡಿ, ಅಶ್ವಿನ್ ಹಾಸನ್ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಪೂರಣ್‍ ಶೆಟ್ಟಿಗಾರ್ ಸಂಗೀತ ಸಂಯೋಜಿಸಿದ್ದಾರೆ. ಪ್ರಾಂಕ್ರಿನ್ ರಾಖಿ ಅವರ ಹಿನ್ನೆಲೆ ಸಂಗೀತ, ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ನರಸಿಂಹ ಅವರ ಸಾಹಸ ನಿರ್ದೇಶನ, ಗೀತಾ ಮಾಸ್ಟರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ರಾಮರಸ ಹೀರೋ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್: ಹೀರೋ ಇಂಟ್ರಡಕ್ಷನ್ ವಿಡಿಯೋ ರಿಲೀಸ್ ಮಾಡಿದ ಕಿಚ್ಚ

ಗುರುದೇಶಪಾಂಡೆ ಅವರು ನಿರ್ಮಿಸುತ್ತಿರುವ, ‘ಜಟ್ಟ’ ಗಿರಿರಾಜ್‍ ನಿರ್ದೇಶನದ ‘ರಾಮರಸ’ ಚಿತ್ರದಲ್ಲಿ “ಜಿ ಅಕಾಡೆಮಿ”ಯಲ್ಲಿ ನಟನೆ ಕಲಿತಿರುವ ಹದಿನಾರು ಪ್ರತಿಭೆಗಳು ನಟಿಸುತ್ತಿರುವುದು ಗೊತ್ತಿರುವ ವಿಷಯ. ಈ ಹದಿನಾರು ಜನ ಯುವಪ್ರತಿಭೆಗಳೊಂದಿಗೆ ಖ್ಯಾತ ನಟರೊಬ್ಬರು ನಾಯಕನಾಗಿ ನಟಿಸಲಿದ್ದಾರೆ ಎಂದು ತಿಳಿಸಲಾಗಿತ್ತು. ಈಗ “ರಾಮರಸ” ಚಿತ್ರಕ್ಕೆ ನಾಯಕನ‌ ಆಯ್ಕೆಯಾಗಿದೆ. ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ “ರಾಮರಸ” ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಇತ್ತೀಚಿಗೆ ನಡೆದ ಸಮಾರಂಭದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕನಟನನ್ನು ಪರಿಚಯಿಸುವ ವಿಶೇಷ ವಿಡಿಯೋ ಬಿಡುಗಡೆ ಮಾಡುವ ಮೂಲಕ “ರಾಮರಸ” ಚಿತ್ರದ ನಾಯಕ ಕಾರ್ತಿಕ್ ಮಹೇಶ್ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್‍, ‘ನಾನು ‘ಬಿಗ್‍ ಬಾಸ್‍’ ಕಾರ್ಯಕ್ರಮವನ್ನು ಎಷ್ಟು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇನೆ. ಆದರೆ, ಪ್ರತಿ ಸೀಸನ್‍ನಲ್ಲೂ ಒಬ್ಬ ಹೊಸ ಹೀರೋ ಹುಟ್ಟಿಕೊಳ್ಳುತ್ತಿದ್ದಾನೆ. ‘ಬಿಗ್‍ ಬಾಸ್‍’ ಗೆಲ್ಲುವುದು ಅಷ್ಟು ಸುಲಭವಲ್ಲ. ಕಾರ್ತಿಕ್‍ ಅವರಿಗಂತೂ ಬಹಳಷ್ಟು ಸ್ಪರ್ಧಿಗಳಿದ್ದರು. ಅದು ಅವರಿಗೆ ಗೊತ್ತು. “ಬಿಗ್ ಬಾಸ್” ಗೆದ್ದ ಮೇಲೆ ಕಾರ್ತಿಕ್ ಅವರಿಗೆ ಒಳ್ಳೆಯ ಅವಕಾಶಗಳು ಬರುತ್ತಿದೆ‌. ಕಾರ್ತಿಕ್ ಸರಿಯಾದ ಹಾದಿಯಲ್ಲಿದ್ದಾರೆ. ಪ್ಯಾಷನೇಟ್‍ ಜನರು ಅವರ ಜೊತೆಯಾಗಿದ್ದಾರೆ. ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಿ’ ಎಂದು ಹಾರೈಸಿದರು. ನಿರ್ಮಾಪಕ ಗುರು ದೇಶಪಾಂಡೆ ನಿರ್ಮಾಣದ ಶೈಲಿ ಹಾಗೂ ನಿರ್ದೇಶಕ ಗಿರಿರಾಜ್ ಅವರ ಕಾರ್ಯವೈಖರಿಯನ್ನು ಸುದೀಪ್ ಮುಕ್ತಕಂಠದಿಂದ ಶ್ಲಾಘಿಸಿದರು.

ನಾಯಕ ಕಾರ್ತಿಕ್‍ ಮಹೇಶ್‍ ಮಾತನಾಡಿ, ಮೊದಲಿನಿಂದಲೂ ನನಗೆ ಸುದೀಪ್ ಸರ್ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅವರಿಗೆ ಹಾಗೂ ಈ ಚಿತ್ರದಲ್ಲಿ ಅವಕಾಶ ಕೊಟ್ಟ ನಿರ್ಮಾಪಕರಿಗೆ, ನಿರ್ದೇಶಕರಿಗೆ ಧನ್ಯವಾದಗಳು. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡುತ್ತಿರುವ ಖುಷಿಯಿದೆ. ಸುದೀಪ್ ಅವರ ಮೇಲೆ ನನಗೆ ವಿಶೇಷ ಪ್ರೀತಿ ಹಾಗೂ ಗೌರವ. ಹಾಗಾಗಿ “ಬಿಗ್ ಬಾಸ್” ಫಿನಾಲೆಯಲ್ಲಿ ಅವರು ಕೊಟ್ಟಿದ್ದ ಡ್ರೆಸ್ ಅನ್ನು ಇಂದು ಹಾಕಿಕೊಂಡು ಬಂದಿದ್ದೇನೆ ಎಂದರು.

ಪ್ರತಿಯೊಬ್ಬ ನಿರ್ದೇಶಕನಿಗೂ ಗುರು ದೇಶಪಾಂಡೆ ಅವರಂತಹ‌ ನಿರ್ಮಾಪಕರು ಸಿಗಬೇಕು.‌ ಅವರಿಗೆ ಸಿನಿಮಾ ಮೇಲೆ ತುಂಬಾ ಪ್ರೀತಿ. ಅದ್ದೂರಿಯಾಗಿ ಮೂಡಿಬಂದಿರುವ ನಾಯಕನ ಪರಿಚಯದ ವಿಶೇಷ ವಿಡಿಯೋ ಅದಕ್ಕೆ ಸಾಕ್ಷಿ. ಕಾರ್ತಿಕ್ ಮಹೇಶ್ ಅವರು ಈ ಚಿತ್ರದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಸುದೀಪ್ ಅವರು ನಾಯಕನನ್ನು ಪರಿಚಯಿಸಿದ್ದಾರೆ. ಈ ಸಂದರ್ಭದಲ್ಲಿ ಸುದೀಪ್ ಅವರಿಗೆ ವಿಶೇಷ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ದೇಶಕ ಗಿರಿರಾಜ್.

ಜಿ ಅಕಾಡೆಮಿಯ 16 ಜನ ಹೊಸ ಪ್ರತಿಭೆಗಳಿಗೆ ತರಬೇತಿ ನೀಡಿ ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಲಾಗಿದೆ. ಅವರೊಂದಿಗೆ ಜನಪ್ರಿಯ ನಟರೊಬ್ಬರು ನಾಯಕನಾಗಿ ನಟಿಸಲಿದ್ದಾರೆ ಎಂದು ನಾನು ಮೊದಲು ತಿಳಿಸಿದೆ. “ರಾಮರಸ” ಚಿತ್ರಕ್ಕೆ ಕಾರ್ತಿಕ್ ಮಹೇಶ್ ನಾಯಕನಾಗಿದ್ದಾರೆ. ನಮ್ಮ ಚಿತ್ರದ ನಾಯಕನನ್ನು ಪರಿಚಯಿಸುವ ಟೀಸರ್ ಬಿಡುಗಡೆ ಮಾಡಿಕೊಟ್ಟ ಕಿಚ್ಚ ಸುದೀಪ್ ಅವರಿಗೆ ಅನಂತ ಧನ್ಯವಾದಗಳು ಎಂದರು ನಿರ್ಮಾಪಕ ಗುರು ದೇಶಪಾಂಡೆ.

‘ರಾಮರಸ’ ಚಿತ್ರಕ್ಕೆ ಬಿ.ಜೆ. ಭರತ್ ಸಂಗೀತ, ಎ.ವಿ. ಕೃಷ್ಣಕುಮಾರ್, ಅರ್ಜುನ್‍ ಕಿಟ್ಟು ಸಂಕಲನವಿದೆ. ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ ಹಾಗೂ ಪುನೀತ್ ಆರ್ಯ ಅವರ ಗೀತರಚನೆಯಿರುವ ಈ‌ ಚಿತ್ರದ ಕಾರ್ಯಕಾರಿ ನಿರ್ಮಾಪಕರು‌ ಸುನೀಲ್ ಹೆಚ್ ಸಿ ಗೌಡ.

Categories
ಸಿನಿ ಸುದ್ದಿ

ಚಿದಂಬರನ ರುಚಿಸುವ ಶುಚಿಸುವ ಕಥೆ

ರೇಟಿಂಗ್ : 3/5

ನಿರ್ದೇಶನ : ಆನಂದ್ ರಾಜ್ ಎಂ.
ನಿರ್ಮಾಣ : ರೂಪ ಡಿ.ಎನ್
ತಾರಾಗಣ: ಅನಿರುದ್ಧ, ರಚೆಲ್ ಡೇವಿಡ್, ನಿಧಿ ಸುಬ್ಬಯ್ಯ, ಶರತ್ ಲೋಹಿತಾಶ್ವ, ಶಿವಮಣಿ ಇತರರು.

ಅನಿರುದ್ಧ ಅವರು ಸಹಜ ಅಭಿನಯಕ್ಕೆ ಸುದ್ದಿಯಾದವರು. ಯಾವುದೆ ಪಾತ್ರ ಇರಲಿ ಸೈ ಎನಿಸಿಕೊಂಡವರು. ಈಗ ಶೆಫ್ ಆಗಿಯೂ ರುಚಿಸುವ ನಟನೆ ಕೊಡಬಲ್ಲೆ ಅಂತ ಸಾಬೀತು ಪಡಿಸಿದ್ದಾರೆ.

ಈ ವಾರ ತೆರೆಕಂಡ ಶೆಫ್ ಚಿದಂಬರ ಹೊಸ ವ್ಯಾಖ್ಯಾನದೊದಿಗೆ ಪ್ರೇಕ್ಷಕರ‌ ಮುಂದೆ ಬಂದಿದೆ. ಹೊಡಿ ಬಡಿ ಕಡಿ ಕಥೆಗಳ ಜೊತೆಗೆ ಒಂದೊಳ್ಳೆಯ ಮನರಂಜನೆ ಮತ್ತು ಅಲ್ಲಲ್ಲಿ ಕುತೂಹಲ ಮೂಡಿಸುವ ಕಥೆ ಜೊತೆಗೆ ಪ್ರೇಕ್ಷಕರನ್ನು ನೋಡಿಸಿಕೊಂಡು ಹೋಗುತ್ತದೆ.

ನಿರ್ದೇಶಕ ಆನಂದರಾಜ್ ಅವರ ಕಥೆಯಲ್ಲಿ ಹೊಸತನವಿದೆ. ಚಿತ್ರಕಥೆಯಲ್ಲೂ ಬಿಗಿಹಿಡಿತವಿದೆ. ಇನ್ನು ನಿರೂಪಣೆ ಶೈಲಿಯ ವಿಧಾನ ಕೂಡ ಇಷ್ಟ ಆಗುತ್ತೆ. ಒಬ್ಬ ಅಡುಗೆ ಮಾಡುವ ನಿಪುಣನ ತರಹೇವಾರಿ ತೊಳಲಾಟಗಳನ್ನು ಅಷ್ಟೇ ಚಂದವಾಗಿ ಕಟ್ಟಿಕೊಟ್ಟಿದ್ದಾರೆ.

ಮೊದಲರ್ಧ ಸರಾಗವಾಗಿ ಸಾಗುವ ಕಥೆಯಲ್ಲಿ ಸಾಕಷ್ಟು‌ ಮಜಬೂತು ಎನಿಸುವ ಅಂಶಗಳಿವೆ. ಒಬ್ಬ ಶೆಫ್ ಬರೀ ರುಚಿಸುವ ಖಾದ್ಯ ಮಾಡುವಲ್ಲಿ ನಿಪುಣ ಅಲ್ಲ, ಒಂದು ಘಟನೆಯಲ್ಲಿ ಸಿಲುಕಿದ ಬಳಿಕವೂ ಹೇಗೆ ಪಾರಾಗುತ್ತಾನೆ ಎಂಬುದರಲ್ಲೂ ಜಾಣತನ ಮೆರೆಯುತ್ತಾನೆ ಅನ್ನೋದನ್ನು ಸೊಗಸಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ಒಂದಷ್ಟು ಸಣ್ಣಪುಟ್ಟ ಅಂಶಗಳ ಕಡೆ ಗಮನ ಹರಿಸಿದ್ದರೆ, ಚಿದಂಬರನ ಕಥೆ ಮತ್ತಷ್ಟು ರುಚಿಸುತ್ತಿತ್ತು. ಅದೇನೆ ಇದ್ದರೂ ಕೆಲವು ಸನ್ನಿವೇಶಗಳು ರುಚಿಗೆ ತಕ್ಕಷ್ಟು ಉಪ್ಪಿನಂತೆ ರುಚಿಸುತ್ತ ಹೋಗುತ್ತವೆ. ಕಥೆಗೆ ಪೂರಕವಾಗಿರುವ ಹಾಡು ಕೂಡ ಗಮನಸೆಳೆಯುತ್ತೆ.

ಚಿದಂಬರನ ಕಥೆ ಏನು?

ತನ್ನ ಪಾಡಿಗೆ ತಾನು ಶೆಫ್ ಕೆಲಸ ಮಾಡಿಕೊಂಡು ತನ್ನ ಪ್ರೀತಿಯ ಹುಡುಗಿಯ ಜೊತೆ ದಿನ ಸವೆಸುವ ಚಿದಂಬರ ಬದುಕಲ್ಲಿ ಒಂದು ಘಟನೆ ನಡೆಯುತ್ತೆ. ತನಗೇ ಅರಿವಿಲ್ಲದೆ ಒಂದು ಕ್ರಮಿನಲ್ ಲೋಕಕ್ಕೆ ಸಿಕ್ಕಿಕೊಳ್ಳುತ್ತಾನೆ. ಒಂದು ಸಾವು ವಿಷಯವನ್ನು ಯಾರಿಗೂ ಗೊತ್ತಾಗಬಾರದು ಅಂತ ಅದನ್ನು ಮುಚ್ಚಿಡಲು ಹೋಗಿ ಒಂದಷ್ಟು ಪೇಚಿಗೆ ಸಿಲುಕುತ್ತಾನೆ. ಆಮೇಲೆ ಹೇಗೆ ಅದಕ್ಕೆ ಅಂತ್ಯ ಹೇಳುತ್ತಾನೆ ಎಂಬುದು ವಿಶೇಷ.

ಸಿನಿಮಾದುದ್ದಕ್ಕೂ ಮಜ ಎನಿಸುವ ಅಂಶಗಳ ಜೊತೆಗೆ ಒಂದಷ್ಟು ಒದ್ದಾಡುವ ಸೀನ್ ಗಳು ನಗುತರಿಸುತ್ತವೆ. ಇನ್ನು ಒಬ್ಬಾಕೆಯ ಕೊಡುವ ದೊಡ್ಡ ಡೀಲ್ ಯಾವುದು? ಅದರಿಂದ ಏನೆಲ್ಲಾ ಸಮಸ್ಯೆ ಎದುರಾಗುತ್ತೆ ಅನ್ನೋದು ಕಥೆಯ ತಿರುಳು. ಇದರ ಮಧ್ಯೆ ಒಂದಷ್ಟು ಪಾತ್ರಗಳು ಕಾಣಿಸಿಕೊಂಡು ಸಿನಿಮಾ ವೇಗವನ್ನು ಹೆಚ್ಚಿಸುತ್ತಾ ಹೋಗುತ್ತವೆ. ಒಟ್ಟಾರೆ, ಒಂದು ಇಂಟ್ರೆಸ್ಟಿಂಗ್ ಎಲಿಮೆಂಟ್ಸ್ ಇದರಲ್ಲಿದೆ. ಅದರ ರುಚಿ ಸವಿಯುವ ಕುತೂಹಲ ಇದ್ದರೆ ಒಮ್ಮೆ ಶೆಫ್ ಚಿದಂಬರನ ನೋಡಬಹುದು.

ಮುಖ್ಯವಾಗಿ ಇಲ್ಲಿ ಹಣಕ್ಕಿಂತ ರುಚಿಸುವ ಅಡುಗೆ ಮುಖ್ಯ ಎಂಬ ಧೈಯವಾಕ್ಯ ಚಿದಂಬರನದು. ಅದೇನೆಂಬ ಕಾತರ ಇದ್ದರೆ ನೋಡಲ್ಲಡ್ಡಿಯಿಲ್ಲ.

ನಿರ್ದೇಶಕ ಆನಂದರಾಜ್ ಅವರ ಪ್ರಯತ್ನ ಕೂಡ ರುಚಿಸಿದೆ. ಹಾಸ್ಯ ಹಾಸುಹೊಕ್ಕಾಗಿಲ್ಲ. ಆದರೆ, ಪೋಣಿಸಿರುವ ಕಥೆಯಲ್ಲಿ ಫೋರ್ಸ್ ಇದೆ. ಮನುಷ್ಯನಲ್ಲಿರುವ ಆಸೆ ಆಕಾಂಕ್ಷೆ ಹೇಗೆಲ್ಲಾ ಇರುತ್ತೆ ಎಂಬುದನ್ನು ಕಥೆ ಹೇಳುತ್ತದೆ.

ಯಾರು ಹೇಗೆ?

ಹಲವು ಸಿನಿಮಾಗಳಲ್ಲಿ ಸಹಜ ನಟನಾಗಿ ಸೈ ಎನಿಸಿಕೊಂಡ ಅನಿರುದ್ಧ್ ಇಲ್ಲೂ ಅವರು ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಗೆದ್ದಿದ್ದಾರೆ‌. ಶೆಫ್ ಆಗಿ ಪರಿಪೂರ್ಣ ನಟರಾಗಿ ಮತ್ತೆ ಸಾಬೀತುಪಡಿಸಿದ್ದಾರೆ.
ಉಳಿದಂತೆ ಕಾಣಿಸಿಕೊಂಡಿರುವ
ರಚೆಲ್ ಡೇವಿಡ್, ನಿಧಿ ಸುಬ್ಬಯ್ಯ, ಶರತ್ ಲೋಹಿತಾಶ್ವ, ಶಿವಮಣಿ ಇತರರು ಕೂಡ ಪಾತ್ರಕ್ಕೆ ಮೋಸ‌ ಮಾಡಿಲ್ಲ. ಸಿನಿಮಾದ ವೇಗಕ್ಕೆ‌ಎಲ್ಲರೂ ಹೆಗಲಾಗಿದ್ದಾರೆ.

ಟೆಕ್ನೀಷಿಯನ್ಸ್ ಬಗ್ಗೆ ಹೇಳುವುದಾದರೆ ಉದಯಲೀಲಾ ಅವರ ಕ್ಯಾಮೆರಾ ಬಕೈಚಳಕ ಕೂಡ ಚಿದಂಬರನ ಆಟೋಟಾಪಗಳನ್ನು ಅಂದವಾಗಿಸಿದೆ. ಹಾಗೆಯೇ ರಿತ್ವಿಕ್ ಮುರಳಿಧರ್ ಸಂಗೀತ ಮತ್ತು ಹಿನ್ನೆಲೆ ಚಿತ್ರವನ್ನು‌ ಮತ್ತಷ್ಟು ರಂಜಿಸುವಲ್ಲಿ ಸಹಕಾರಿಯಾಗಿದೆ.

Categories
ಸಿನಿ ಸುದ್ದಿ

ಕೋಟಿ ನೋಡಿ ಚಿಲ್ ಮಾಡಿ: ಜೂನ್ 14 ರಿಲೀಸ್

ಇದೇ ಶುಕ್ರವಾರ ಬಿಡುಗಡೆಗೆ ಸಜ್ಜಾಗಿರುವ ಡಾಲಿ ಧನಂಜಯ ಅಭಿನಯದ ‘ಕೋಟಿ’ ಸಿನಿಮಾ ಎಲ್ಲೆಡೆ ಸದ್ದು ಮಾಡುತ್ತಿದೆ. ಈಗಾಗಲೇ ಟ್ರೇಲರ್ ಮತ್ತು ಹಾಡುಗಳು ಟ್ರೆಂಡ್ ಆಗಿದ್ದು ಮಂಗಳವಾರದಿಂದ ಟಿಕೇಟ್ ಬುಕಿಂಗ್ ಓಪನ್ ಆಗ್ತಾ ಇದೆ.

ಈ ಚಿತ್ರದ ಬರಹಗಾರ, ನಿರ್ದೇಶಕ ಪರಮ್ ಕಿರುತೆರೆಯಲ್ಲಿ ಬಹುದೊಡ್ಡ ಹೆಸರು. ದಶಕಗಳ ಕಾಲ ಕಲರ್ಸ್ ಕನ್ನಡವನ್ನು ಮುನ್ನಡೆಸಿ ಯಶಸ್ಸಿನ ಅಲೆಯಲ್ಲಿ ತೇಲೆಸಿದ್ದ ಇವರು ಈಗ ನಿರ್ದೇಶನದ ಟೋಪಿ ತೊಟ್ಟಿದ್ದಾರೆ. ‘ಕೋಟಿ’ ತಂಡ ಬಹುಸಕ್ರಿಯವಾಗಿ ಸಿನಿಮಾ ಪ್ರಚಾರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು ಬಸ್ಸು, ಮೆಟ್ರೋ, ಟೀವಿ, ಯೂಟ್ಯೂಬ್, ಇನ್ಟಾಗ್ರಾಮ್ ಎಲ್ಲೆಡೆಯೂ ಕೋಟಿ ಸುದ್ದಿ ಮಾಡ್ತಾ ಇದೆ.

ಇತ್ತೀಚೆಗೆ ಅದ್ದೂರಿಯಾಗಿ ನಡೆದ ಕೋಟಿ ಸಿನಿಮಾದ ಪ್ರೀರಿಲೀಸ್ ವಿಶೇಷ ಟೀವಿ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಆಗಮಿಸಿ ಸುಮಾರು ಒಂದು ಗಂಟೆಗಳಿಗೂ ಅಧಿಕ ಸಮಯ ವೇದಿಕೆಯ ಮೇಲಿದ್ದು‌ ತಂಡಕ್ಕೆ ಶುಭ ಹಾರೈಸಿದರು. ಇದೇ ವೇದಿಕೆಯಲ್ಲಿ ಚಿತ್ರತಂಡ ಅಭಿನಯ ಚಕ್ರವರ್ತಿ ಸುದೀಪ್ ಅವರಿಗೆ ಕೋಟಿಯ ಮೊದಲ ಟಿಕೇಟ್ ನೀಡಿತು. ಹತ್ತಾರು ವರ್ಷ ಟೀವಿ, ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿರುವ ಪರಮ್ ಅವರಿಗೆ ಎಲ್ಲೆಡೆ ಸ್ನೇಹಿತರಿದ್ದಾರೆ. ಇದೇ ಬುಧವಾರ ‘ಕೋಟಿ’ ತಂಡ ಟೆಲಿವಿಷನ್ ಮತ್ತು ಸಿನಿಮಾತಾರೆಗಳಿಗೆ ಚಿತ್ರದ ಪ್ರೀಮಿಯರ್ ಶೋ ಆಯೋಜಿಸಿದ್ದು. ದೊಡ್ಡ ಸಂಖ್ಯೆಯಲ್ಲಿ ತಾರೆಗಳು ಸೇರುವ ನಿರೀಕ್ಷೆ ಇದೆ. ತಾರೆಗಳಿಗಾಗಿಯೇ ಎರಡೆರಡು ಪ್ರೀಮಿಯರ್ ಶೋಗಳನ್ನು ಆಯೋಜಿಸಿರುವುದೇ ಇದಕ್ಕೆ ಸಾಕ್ಷಿ. ಇದರ ಜತೆಗೆ ಸಿನಿರಸಿಕರಿಗಾಗಿ ಎರಡು ಪೇಯ್ಡ್ ಪ್ರೀಮಿಯರ್ ಶೋಗಳ ಸಹ ಇವೆ!

ಗುರುವಾರ ಮೈಸೂರಿನಲ್ಲಿ ಪೇಯ್ಡ್ ಪ್ರೀಮಿಯರ್ ಶೋಗಳಿದ್ದು ಧನಂಜಯ್‌ ಮತ್ತು ಚಿತ್ರತಂಡ ಮೈಸೂರಿನ ಸಿನಿರಸಿಕರ ಜತೆ ಸಿನಿಮಾ ನೋಡಲಿದ್ದಾರೆ. ಕೋಟಿ ಸಿನಿಮಾ ಶುಕ್ರವಾರದಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನಂತರದ ದಿನಗಳಲ್ಲಿ ಅಮೇರಿಕಾ, ಇಂಗ್ಲೆಂಡ್, ಯುರೋಪ್ ಮತ್ತು ಗಲ್ಫ್ ದೇಶಗಳಲ್ಲೂ ಬಿಡುಗಡೆಯಾಗಲಿದೆ.

ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಗೆಲುವು ಕಾಣದೆ ಕಂಗೆಟ್ಟಿರುವ ಕನ್ನಡ ಇಂಡಸ್ಟ್ರಿಗೆ ಅಪ್ಪಟ ಕನ್ನಡ ಮಣ್ಣಿನ ಕತೆಯಾದ ‘ಕೋಟಿ’ ಗೆಲ್ಲುವ ಭರವಸೆಯಾಗಿ ಕಂಡಿದೆ.

ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ಮ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿಯವರು‌ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್.

ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್‌ 14ರಂದು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಕೊಲೆ ಪ್ರಕರಣ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪೊಲೀಸರ ವಶಕ್ಕೆ

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರೇಣುಕಾ ಸ್ವಾಮಿ ಎಂಬುವರ ಕೊಲೆ ಕೇಸ್‌ನಲ್ಲಿ ದರ್ಶನ್ ಅವರ ಹೆಸರು ಕೇಳಿ ಬಮದಿದ್ದು, ಇದಕ್ಕೆ‌ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾಗಿದೆ.
ಕಾಮಾಕ್ಷಿ ಪಾಳ್ಯದಲ್ಲಿ ಮೃತದೇಹವನ್ನು ಕೊಲೆ ಮಾಡಿ ಎಸೆಯಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆವರು ದರ್ಶನ್ ಹೆಸರು ಪ್ರಸ್ತಾಪಿಸಿದ್ದರು ಎನ್ನಲಾಗಿದೆ.

ಈ ಕಾರಣಕ್ಕೆ ಕಾಮಾಕ್ಷಿ ಪಾಳ್ಯ ಪೊಲೀಸರು ನಟ ದರ್ಶನ್‌ರನ್ನು ವಶಕ್ಕೆ ಪಡೆದಿದ್ದಾರೆ.

ಎರಡು ತಿಂಗಳ ಹಿಂದೆ ಬೆಂಗಳೂರಿನ ಕಾಮಾಕ್ಷಿ ಪಾಳ್ಯದಲ್ಲಿ ನಡೆದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಮೈಸೂರಿನ ತೋಟದ ಮನೆಯಿಂದ ದರ್ಶನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ದರ್ಶನ್ ಅವರನ್ನು ಮೈಸೂರಿನಿಂದ ಬೆಂಗಳೂರಿಗೆ ಕರೆತರಲಾಗುತ್ತಿದೆ.

ರೇಣುಕಾಸ್ವಾಮಿ ಎಂಬುವವರ ಕೊಲೆ ಕೇಸ್​ನಲ್ಲಿ ಚಾಲೆಂಜಿಂಗ್ ಸ್ಟಾರ್ ಹೆಸರು ತಳಕು ಹಾಕಿಕೊಂಡಿದೆ. ದರ್ಶನ್ ಅವರಿಗೆ ಪರಿಚಯಸ್ಥರೊಬ್ಬರಿಗೆ ಕೆಟ್ಟದಾಗಿ ಮೆಸೇಜ್ ಹಾಗೂ ಸಂದೇಶವನ್ನು ರೇಣುಕಾಸ್ವಾಮಿ ಕಳುಹಿಸಿದ್ದ. ಹೀಗಾಗಿ, ರೇಣುಕಾಸ್ವಾಮಿಯ ಕೊಲೆಯಾಗಿತ್ತು. ಕೊಲೆ ಆರೋಪಿ ಜೊತೆ ದರ್ಶನ್ ಸಂಪರ್ಕದಲ್ಲಿದ್ದರು. ಹೀಗಾಗಿ, ದರ್ಶನ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗುತ್ತಿದೆ.

error: Content is protected !!