Categories
ಸಿನಿ ಸುದ್ದಿ

ಗೌರಿಯ ಮುದ್ದಾದ” ಹಾಡಿಗೆ ಸಖತ್ ರೆಸ್ಪಾನ್ಸ್ : ಇಂದ್ರಜಿತ್ ಲಂಕೇಶ್ ಪುತ್ರನ ಭರ್ಜರಿ ತಯಾರಿ

ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಆಗಸ್ಟ್ 15ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. ಈಗಾಗಲೇ ಚಿತ್ರದ ಶೀರ್ಷಿಕೆ ಅಷ್ಟೇ ಅಲ್ಲ, ಸಿನಿಮಾದ ಹಾಡುಗಳ ಮೂಲಕ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ.

ಇತ್ತೀಚೆಗೆ “ಗೌರಿ” ಚಿತ್ರದ “ಮುದ್ದಾದ” ಹಾಡು ಸೇರಿದಂತೆ ಎರಡು ಹಾಡುಗಳು ಬಿಡುಗಡೆಯಾಗಿದ್ದು ಎಲ್ಲೆಡೆ ಜೋರು ಸದ್ದು ಮಾಡಿದೆ. ಅಂದಹಾಗೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ “ಗೌರಿ” ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದ್ದು ಎಲ್ಲರಿಗೂ ಗೊತ್ತೆ ಇದೆ. ಈ ವೇಳೆ ಮೊನಾಲಿಸ ಚಿತ್ರದ ನಾಯಕ ಧ್ಯಾನ್, ನಾಯಕಿ ಸದಾ ಹಾಗೂ”ಗೌರಿ” ಚಿತ್ರದ ನಾಯಕ ಸಮರ್ಜಿತ್ ಹಾಗೂ ನಾಯಕಿ ಸಾನ್ಯ ಅಯ್ಯರ್ ಇದ್ದರು.

ಆ ಹಾಡಿಗೆ ಸಿಕ್ಕಾ ಪಟ್ಟೆ ಕಾಮೆಂಟ್ಸ್ ಬರುತ್ತಿದೆ. ಅಷ್ಟೇ ಅಲ್ಲ, ಮುದ್ದಾದ ಹಾಡಿನ ರೀಲ್ಸ್ ಕೂಡ ಶುರುವಾಗಿದೆ. ಈಗಾಗಲೇ ಟೈಮ್ ಬರುತ್ತೆ ಎಂಬ ಸಾಂಗ್ ವೈರಲ್ ಆಗಿದ್ದು, ಪಡ್ಡೆ ಹುಡುಗರ ಹಾಟ್ ಫೇವರ್ ಎನಿಸಿಕೊಂಡಿದೆ.

“ಗೌರಿ” ಹಾಡಿಗೆ ಕೆ.ಕಲ್ಯಾಣ್ ಹಾಗೂ “ಮುದ್ದಾದ” ಹಾಡಿಗೆ ಕವಿರಾಜ್ ಸಾಹಿತ್ಯವಿದೆ.

ಇನ್ನು “ಗೌರಿ” ಚಿತ್ರದಲ್ಲಿ ಏಳು ಹಾಡುಗಳಿದ್ದು,. ಸಂಗೀತ ಪ್ರಧಾನ ಸಿನಿಮಾ ಇದು. ಕವಿರಾಜ್ ಅವರ ಮುದ್ದಾದ ಹಾಡಿಗೆ, ನಿಹಾಲ್ ತವ್ರು ಧ್ವನಿ ಇದೆ. ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ.
ಕೆ.ಕಲ್ಯಾಣ್ ಅವರು ಬರೆದ ಹಾಡನ್ನು, ಇಂದ್ರಜಿತ್ ಅವರ ಅಕ್ಕ ಗೌರಿ ಲಂಕೇಶ್ ಅವರಿಗೆ ಅರ್ಪಿಸಲಾಗಿದೆ. ಚಿತ್ರಕ್ಕೆ “ಯು” ಸರ್ಟಿಫಿಕೇಟ್ ಸಿಕ್ಕಿದೆ.

Categories
ಸಿನಿ ಸುದ್ದಿ

ಭಗವತಿ ಇದು ಮಕ್ಕಳ ಸಾಹಸದ ಕಥೆ

ಬಂಗಾರಿ, ಶಿವನಪಾದ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿದ ಮಾಚಂದ್ರು ಅವರು ಕಥೆ ಚಿತ್ರಕಥೆ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿರುವ ಮಕ್ಕಳ ಸಾಹಸದ ಕಥೆ ಇರುವ ಮತ್ತೊಂದು ಚಿತ್ರ ಭಗವತಿ. ಈ ಚಿತ್ರಕ್ಕೆ ಇತ್ತೀಚೆಗೆ ಬೆಂಗಳೂರಿನ ವಿಜಯ ನಗರದ ಮಾರುತಿ ಮಂದಿರದಲ್ಲಿ ಮುಹೂರ್ತ ಸಮಾರಂಭ ನಡೆಯಿತು. ವಿದ್ಯಾಧರೆ ಸಿನಿಮಾಸ್ ಮೂಲಕ ನಿರ್ಮಾಣವಾಗುತ್ತಿರುವ ಚಿತ್ರ ಇದಾಗಿದೆ.

ಈ ಹಿಂದೆ ಲೂಸ್ ಮಾದ ಯೋಗಿ, ರಾಗಿಣಿ ಅಭಿನಯದ ಬಂಗಾರಿ, ಬೆಟ್ಟದ ದಾರಿ, ನಡಗಲ್ಲು, ಶಿವನಪಾದ ಚಿತ್ರಗಳನ್ನು ನಿರ್ದೇಶಿಸಿದ್ದ ಮಾಚಂದ್ರು ಅವರು ಈ ಸಲ ಮಕ್ಕಳ ಸಾಹಸದ ಕಥಾನಕ‌ ಒಳಗೊಂಡ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಮಕ್ಕಳಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಸಿಡಿದುನಿಂತ ಮಕ್ಕಳು ಕಾನೂನಾತ್ಮಕವಾಗಿ ಹೋರಾಟ ನಡೆಸಿ ಗೆಲ್ಲುವಂಥ ಮಕ್ಕಳ ಸಾಹಸಮಯ ಕಾಥಾಹಂದರ ಈ ಚಿತ್ರದಲ್ಲಿದೆ. ಈಗಿನ ಜನರೇಶನ್ ಕುರಿತಾದ ಕಾನ್ಸೆಪ್ಟ್ ಹೊಂದಿರುವ ಈ ಚಿತ್ರದಲ್ಲಿ ಮಕ್ಕಳು ಹೇಗೆ ಹೋರಾಡಿ ಗೆಲ್ಲುತ್ತಾರೆ ಎಂಬುದನ್ನು ನಿರ್ದೇಶಕರು ರೋಚಕ ಕಥೆಯೊಂದಿಗೆ ಹೇಳಹೊರಟಿದ್ದಾರೆ. ಈ ಚಿತ್ರದಲ್ಲಿ ಒಟ್ಟು ಎರಡು ಹಾಡುಗಳಿದ್ದು, ರಾಜೇಶ್ ಗೌಡ ಕ್ಯಾಮೆರಾ ವರ್ಕ್ ನಿಭಾಯಿಸುತ್ತಿದ್ದಾರೆ.

ಆಗಸ್ಟ್ 5ರಿಂದ ಆರಂಭಿಸಿ ಬೆಂಗಳೂರು, ಕನಕಪುರ ಹಾಗೂ ಮಡಿಕೇರಿಯ ಸುತ್ತಮುತ್ತ ಭಗವತಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಇನ್ನು ಈ ಚಿತ್ರದಲ್ಲಿ ಬಾಲ ಕಲಾವಿದರಾದ ರಿಷಿಕಾ ರಾಮ್, ದೀಪಕ್ ಪಿ.ಕೆ, ಅದ್ವೈತ್ ಪ್ರೇರಣ್, ಅದೇಶ್ ಪ್ರೇರಣ್, ಅಭಿನವ್ ಸಮರ್ಥ, ವೇದಾಂತ್, ಮೇಘನಾ, ಮಾನ್ವಿ, ರೋಶಿನಿ, ತೇಜಸ್, ಸುಷ್ಮಾ, ಶ್ವೇತಾ, ವಿಷ್ಣು, ಜಿ.ಡಿ. ಹೇರಂಭ , ಭಾನು, ಮೋಹನ್ ಕುಮಾರ್ ಡಿ.ಕೆ. ಸತೀಶ್, ಶರತ್, ಹರ್ಷ. ಮುಂತಾದವರು ಅಭಿನಯಿಸುತ್ತಿದ್ದಾರೆ. ಉಳಿದ ಕಲಾವಿದರ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತಿದೆ.

Categories
ಸಿನಿ ಸುದ್ದಿ

ಇದು ಜವಾರಿ ಹುಡುಗನ ಕನಸು: ಜುಲೈ 26ಕ್ಕೆ ರಕ್ತಾಕ್ಷ ರಿಲೀಸ್

ಶಾಲೆಯ ದಿನಗಳಲ್ಲೇ ಸಿನಿಮಾ ಕನಸು ಕಂಡಿದ್ದ ರೋಹಿತ್ ಕೊನೆಗೂ ಕಷ್ಟ ಪಟ್ಟ ತಾನೇ ದುಡಿದು ಹಾಕಿ ನಿರ್ಮಾಣ‌ ಮಾಡಿದ ಸಿನಿಮಾ ರಕ್ತಾಕ್ಷ. ಈಗಾಗಲೇ ಟ್ರೇಲರ್ ಮೂಲಕ ಸದ್ದು ಮಾಡಿರುವ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ.

ಕನ್ನಡದಲ್ಲಿ ದಿನ ಕಳೆದಂತೆ ಹೊಸಬರ ಅಗಮನವಾಗುತ್ತಲೇ ಇದೆ. ಆ ಸಾಲಿಗೆ ರಕ್ತಾಕ್ಷ ಸಿನಿಮಾದ ಹೀರೋ ರೋಹಿತ್ ಕೂಡ ಒಬ್ಬರು, ಹೌದು ರೋಹಿತ್ ಉತ್ತರ ಕರ್ನಾಟಕ ಮೂಲದ ಜವಾರಿ ಹುಡುಗ.

ರಕ್ತಾಕ್ಷ ಸಿನಿಮಾ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ನಾಯಕರಾಗಿ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ರೋಹಿತ್ ಅವರ ಕನಸಿನ ರಕ್ತಾಕ್ಷ ಚಿತ್ರ ಜುಲೈ 26 ಕ್ಕೆ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸುತ್ತಿದೆ.

ಅಂದಹಾಗೆ, ಇದೊಂದು ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ವಾಸುದೇವ ಎಸ್.ಎನ್. ಈ ಸಿನಿಮಾದ ನಿರ್ದೇಶಕರು. ಇವರಿಗೂ ಇದು ಚೊಚ್ಚಲ ಚಿತ್ರ.

ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಸಾಕಷ್ಟು ತಿರುವುಗಳಿವೆ. ಹೊಸಬರ ವಿಭಿನ್ನ ಪ್ರಯತ್ನ ಇದಾಗಿದ್ದು, ಚಿತ್ರಕಥೆ ಹಾಗು ನಿರೂಪಣಾ ಶೈಲಿ ಹೊಸತನದಿಂದ ಕೂಡಿದೆ. ಚಿತ್ರದಲ್ಲಿ ಹೀರೋ ರೋಹಿತ್ ಹಾಗೂ ಪ್ರಮೋದ್ ಶೆಟ್ಟಿ ನಡುವಿನ ಆಕ್ಷನ್ ಸನ್ನಿವೇಶ ಚಿತ್ರದ ಹೈಲೆಟ್. ಚಿತ್ರದ ಮತ್ತೊಂದು ವಿಶೇಷ ಅಂದರೆ, ನಟ ವಸಿಷ್ಠ ಸಿಂಹ ಅವರು ಹಾಡಿರುವ ರಕ್ತಾಕ್ಷ ಟೈಟಲ್ ಟ್ರ್ಯಾಕ್ ಗೆ ಈಗಾಗಲೇ ಸಾಕಷ್ಟು ಮೆಚ್ಚುಗೆ ಪಡೆದಿದೆ. ಇತ್ತೀಚೆಗೆ ಬಿಡುಗಡೆಗೊಂಡ ಟ್ರೇಲರ್ ಕೂಡ ಭರ್ಜರಿ ಮೆಚ್ಚುಗೆ ಗಳಿಸಿದೆ.

ಚಿತ್ರದಲ್ಲಿ ರೋಹಿತ್, ಪ್ರಮೋದ್ ಶೆಟ್ಟಿ, ರೂಪ ರಾಯಪ್ಪ, ಅರ್ಚನಾ ಕೊಟ್ಟಿಗೆ,ರಚನಾ ದಶರಥ್, ಗುರುದೇವ್ ನಾಗರಾಜ, ವಿಲಾಸ್ ಕುಲಕರ್ಣಿ, ಶಿವಮೊಗ್ಗ ರಾಮಣ್ಣ ಸೇರಿದಂತೆ ಇತರರು ಇದ್ದಾರೆ.

ಇನ್ನು, ಚಿತ್ರಕ್ಕೆ ದಾಸ್ ಮೋಡ್ ಅವರ ಸಂಗೀತವಿದೆ. ಸುಜಿತ್ ಹಾಗು ವೆಂಕಟರಾಮಯ್ಯ ಅವರ ಸಾಹಿತ್ಯ ಚಿತ್ರಕ್ಕಿದೆ. ವಸಿಷ್ಠ ಸಿಂಹ, ಸುಪ್ರಿಯಾ ರಾಮ್ ಹಾಡಿದ್ದಾರೆ. ಆದರ್ಶ್ ಶಿರಾಸ್ ಅವರ ಛಾಯಾಗ್ರಹಣವಿದೆ. ಸತೀಶ್ ಚಂದ್ರಯ್ಯ ಸಂಕಲನ ಮಾಡಿದರೆ, ಸ್ಟಂಟ್ ಶಿವ ಅವರ ಸಾಹಸವಿದೆ.

ರೋಹಿತ್ ಉತ್ತರ ಕರ್ನಾಟಕದ ಹುಡುಗ. ಹಾಗಾಗಿ ಹುಬ್ಬಳ್ಳಿಯಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಸಹಯೋಗದೊಂದಿಗೆ ಅಪ್ಪು ಹುಟ್ಟುಹಬ್ಬ ಸಂದರ್ಭದಲ್ಲಿ ರಕ್ತಾಕ್ಷ ಚಿತ್ರತಂಡದಿಂದ ‘ಅಪ್ಪು’ ಕುರಿತ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗಿತ್ತು. ಸಾವರ್ಜನಿಕ ಕಾರ್ಯಕ್ರಮದಲ್ಲಿ ರಕ್ತಾಕ್ಷ ತಂಡದ ಕೆಲಸಕ್ಕೆ ಮೆಚ್ಚುಗೆ ಸಿಕ್ಕಿದೆ.

ರೋಹಿತ್ ತೆರೆ ಮೇಲೆ ಹೀರೋ ಮಾತ್ರವಲ್ಲ, ತೆರೆ ಹಿಂದೆಯೂ ಮೆಚ್ಚುಗೆ ಕೆಲಸ ಮಾಡುತ್ತಿದ್ದಾರೆ. ಸದ್ದಿಲ್ಲದೆಯೇ ಒಂದಷ್ಟು ಸಾಮಾಜಿಕ‌ಕಾರ್ಯದಲ್ಲಿ ನಿರತರಾದವರು. ಹುಬ್ಬಳ್ಳಿಯ ಅನಾಥಾಶ್ರಮದ ಸುಮಾರು 200 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ವಿತರಣೆ ಮಾಡಿದ್ದಾರೆ. ಅನಾಥಾಶ್ರಮ ಹಾಗು ವೃದ್ಧಾಶ್ರಮಗಳಿಗೆ ಪ್ರತಿ ತಿಂಗಳು ಅಪ್ಪು ಹೆಸರಲ್ಲಿ ಕೈಲಾದಷ್ಟು ಆಹಾರ ಧಾನ್ಯದ ಕಿಟ್ ವಿತರಿಸುತ್ತ ಬಂದಿದ್ದಾರೆ‌ ಎಂಬುದು ವಿಶೇಷ.

ಸದ್ಯ ರಕ್ತಾಕ್ಷ ಸಿನಿಮಾ ಜುಲೈ 26 ಕ್ಕೆ ಬರುತ್ತಿದೆ. ರಿಲೀಸ್ ಮುನ್ನವೇ ಕ್ರೇಜ್ ಹುಟ್ಟಿಸಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಕಲಾವಿದರಿದ್ದರೂ ಹೀರೋಗಳ ಸಂಖ್ಯೆ ಇಲ್ಲ. ಆ ಸಾಲಿಗೆ ಈಗ ರೋಹಿತ್ ಮೊದಲ ಸಾಲಲಲ್ಲಿ ಕಾಣುತ್ತಿದ್ದಾರೆ. ಆ ಭಾಗದಲ್ಲಿ ಈಗಾಗಲೇ ಸಿನಿಮಾಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಕನಸು ಕಂಗಳ ಹುಡುಗನ ಕನಸಿನ ಸಿನಿಮಾ ಇದು.

Categories
ಸಿನಿ ಸುದ್ದಿ

ಶಿವಣ್ಣನ 131 ನೇ ಸಿನಿಮಾ ಯಾವುದು ಗೊತ್ತಾ? ಫ್ಯಾನ್ಸ್ ಗೆ ಗುಡ್ ನ್ಯೂಸ್

ಕರುನಾಡ ಕಿಂಗ್ ಶಿವರಾಜ್ ಕುಮಾರ್ 131ನೇ ಸಿನಿಮಾದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಇತ್ತೀಚೆಗಷ್ಟೇ ಶಿವಣ್ಣನ ಜನ್ಮದಿನಕ್ಕೆ ಇಂಟ್ರೂಡಕ್ಷನ್ ಟೀಸರ್ ರಿಲೀಸ್ ಮಾಡಿ ಶಿವಸೈನ್ಯವನ್ನು ಒಂಟಿಗಾಲಲ್ಲಿ ನಿಲ್ಲಿಸಿದ್ದ ಚಿತ್ರತಂಡವೀಗ ಶೂಟಿಂಗ್ ಅಖಾಡಕ್ಕೆ ಇಳಿಯಲು ಸಜ್ಜಾಗಿದೆ. ಶೀಘ್ರದಲ್ಲಿಯೇ ಶಿವಣ್ಣನ 131ನೇ ಸಿನಿಮಾದ ಮುಹೂರ್ತ ನೆರವೇರಲಿದೆ.


ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 131ನೇ ಸಿನಿಮಾದ ಶೂಟಿಂಗ್ ಅಖಾಡಕ್ಕೆ ಧುಮುಕಲು ಚಿತ್ರತಂಡ ಸಜ್ಜಾಗಿದೆ. ಆದಷ್ಟು ಬೇಗ ಮುಹೂರ್ತ ಮುಗಿಸಿಕೊಂಡು ಚಿತ್ರೀಕರಣ ನಡೆಸಲು ಇಡೀ ಬಳಗ ಸಜ್ಜಾಗಿದೆ. ಅದಕ್ಕಾಗಿ ಇಂದು ಇಡೀ ತಂಡ ಶಿವಣ್ಣನನ್ನು ಭೇಟಿಯಾಗಿದೆ. ಕರುನಾಡ ಕಿಂಗ್ ನಾಗವಾರ ನಿವಾಸಕ್ಕೆ ನಿರ್ದೇಶಕ ಕಾರ್ತಿಕ್ ಅದ್ವೈತ್, ನಿರ್ಮಾಪಕರಾದ ಎನ್ ಎಸ್ ರೆಡ್ಡಿ ಹಾಗೂ ಸುಧೀರ್, ಛಾಯಾಗ್ರಹಕ ಎಜೆ ಶೆಟ್ಟಿ, ಸಂಕಲನಕಾರ ದೀಪು ಎಸ್ ಕುಮಾರ್ ಭೇಟಿ ಕೊಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಕಾರ್ತಿಕ್ ಅದ್ವೈತ್, ಶಿವಣ್ಣನಿಗೆ ಆಕ್ಷನ್ ಕಟ್ ಹೇಳುವ ಮೂಲಕ ಸ್ಯಾಂಡಲ್ವುಡ್ ಅಂಗಳಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅಂದಹಾಗೇ ಇವರಿಗೆ ಇದು ನಿರ್ದೇಶಕನಾಗಿ ಎರಡನೇ ಸಿನಿಮಾ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶಿವಣ್ಣ ಡಿಫ್ರೆಂಟ್ ಲುಕ್ನಲ್ಲಿ, ವಿಭಿನ್ನ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ. ಘೋಸ್ಟ್ ಖ್ಯಾತಿಯ ವಿಎಂ ಪ್ರಸನ್ನ ಹಾಗೂ ಸೀತಾರಾಮಂ ಖ್ಯಾತಿಯ ಜಯಕೃಷ್ಣ ಬರಹಗಾರರಾಗಿ ಸಾಥ್ ಕೊಡುತ್ತಿದ್ದಾರೆ,.
ವಿಕ್ರಂ ವೇದ, ಆರ್ ಡಿ ಎಕ್ಸ್, ಖೈದಿ ಸಿನಿಮಾ ಖ್ಯಾತಿಯ ಸ್ಯಾಮ್ ಸಿ.ಎಸ್ ಸಂಗೀತ ಒದಗಿಸಲಿದ್ದಾರೆ.

ಎ.ಜೆ ಶೆಟ್ಟಿ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ದೀಪು ಎಸ್ ಕುಮಾರ್ ಅವರ ಸಂಕಲನ ಹಾಗೂ ರವಿ ಸಂತೆಹಕ್ಲು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿರಲಿದೆ. ಭುವನೇಶ್ವರಿ ಪ್ರೊಡಕ್ಷನ್ ನಡಿ ಎಸ್ ಎನ್ ರೆಡ್ಡಿ ಹಾಗೂ ಸುಧೀರ್ ಪಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ರಮಣ ರೆಡ್ಡಿ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.

Categories
ಸಿನಿ ಸುದ್ದಿ

ಫಾರೆಸ್ಟ್ ನಲ್ಲಿ ಚಿಕ್ಕಣ್ಣ ಹಾಡು ಕುಣಿತ

ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು ಪ್ರಮುಖಪಾತ್ರದಲ್ಲಿ ನಟಿಸಿರುವ ಫಾರೆಸ್ಟ್ ಚಿತ್ರೀಕರಣ ಮುಕ್ತಾಯ

ಕನ್ನಡದಲ್ಲೀಗ ಕಂಟೆಂಟ್ ಓರಿಯಂಟೆಡ್ ಚಿತ್ರಗಳದೇ ಕಾರುಬಾರು. ಉತ್ತಮ ಕಂಟೆಂಟ್ ಇರುವ ಚಿತ್ರಗಳು ಇತ್ತೀಚಿಗೆ ಯಶಸ್ವಿಯಾಗಿರುವ ಉದಾಹರಣೆಗಳು ಕನ್ನಡದಲ್ಲಿ ಸಾಕಷ್ಟಿದೆ. ಅಂತಹುದೇ ಉತ್ತಮ ಕಂಟೆಂಟ್ ನೊಂದಿಗೆ ಕನ್ನಡಿಗರ ಮುಂದೆ ಬರಲಿದೆ “ಫಾರೆಸ್ಟ್” ಚಿತ್ರ.

ಎನ್.ಎಂ.ಕೆ ಸಿನಿಮಾಸ್ ಲಾಂಛನದಲ್ಲಿ ಎನ್ ಎಂ ಕಾಂತರಾಜ್ ನಿರ್ಮಾಣದ, ಚಂದ್ರ ಮೋಹನ್ ನಿರ್ದೇಶನದ ಹಾಗೂ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ಫಾರೆಸ್ಟ್” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರಕ್ಕಾಗಿ ಪುನೀತ್ ಆರ್ಯ ಅವರು ಬರೆದು ಧರ್ಮವಿಶ್ ಸಂಗೀತ ನೀಡಿರುವ “ಓಡೋ ಓಡೋ” ಹಾಡು ಎನ್ ಎಂ ಕೆ ಸಿನಿಮಾಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.

ಖ್ಯಾತ ಗಾಯಕ ಕೈಲಾಶ್ ಖೇರ್ ಹಾಡಿರುವ ಈ ಹಾಡನ್ನು ಈಗಾಗಲೇ ಹನ್ನೊಂದು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಮಲ್ಟಿಸ್ಟಾರರ್ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಮಡಿಕೇರಿ, ಎಂ.ಎಂ.ಹಿಲ್ಸ್, ಸಂಪಾಜೆ ಫಾರೆಸ್ಟ್ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.

ನಿರ್ದೇಶಕ ಚಂದ್ರಮೋಹನ್ ಅವರು ಸತ್ಯಶೌರ್ಯ ಸಾಗರ್ ಅವರ ಜೊತೆಗೂಡಿ ಕಥೆ, ಚಿತ್ರಕಥೆ ರಚಿಸಿದ್ದಾರೆ. ಸಂಭಾಷಣೆಯನ್ನು ಸತ್ಯಶೌರ್ಯ ಸಾಗರ್ ಅವರೆ ಬರೆದಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಧರ್ಮವಿಶ್ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಆನಂದ್ ರಾಜವಿಕ್ರಮ್ ಅವರದು. ರವಿಕುಮಾರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಅಮರ್ ಕಲಾ ನಿರ್ದೇಶನ ಹಾಗೂ ಡಾ||ರವಿವರ್ಮ ಅವರ ಸಾಹಸ ನಿರ್ದೇಶನ “ಫಾರೆಸ್ಟ್” ಚಿತ್ರಕ್ಕಿದೆ.

ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ರಂಗಾಯಣ ರಘು, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್ ಕುಮಾರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಹಗ್ಗ ಹಿಡಿದ ಆರ್ ಚಂದ್ರು: ಹಾರರ್ ಟೀಸರ್ ಬಂತು

ವಸಂತ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರಾಜ್ ಭಾರದ್ವಾಜ್ ನಿರ್ಮಿಸಿರುವ, ಅವಿನಾಶ್ ಎನ್ ನಿರ್ದೇಶನದ ಹಾಗೂ ಅನು ಪ್ರಭಾಕರ್, ಹರ್ಷಿಕಾ ಪೂಣಚ್ಛ, ವೇಣು ಪ್ರಮುಖಪಾತ್ರದಲ್ಲಿ ನಟಿಸಿರುವ “ಹಗ್ಗ” ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ನೆರವೇರಿತು. ಖ್ಯಾತ ನಿರ್ದೇಶಕ ಆರ್ ಚಂದ್ರು ಟೀಸರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ಮಾಪಕರಾದ ಕೆ.ಮಂಜು,‌ ದಯಾಳ್ ಅವರು ಸೇರಿದಂತೆ ಅನೇಕ ಗಣ್ಯರು “ಹಗ್ಗ” ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ನಿರ್ದೇಶಕ ಅವಿನಾಶ್, ನಾನು ಮೂಲತಃ ಮ್ಯಕಾನಿಕಲ್ ಎಂಜಿನಿಯರ್. ಸಿನಿಮಾ ನಿರ್ದೇಶನ ನನ್ನ ಕನಸು. ಆ ಕನಸು “ಹಗ್ಗ” ಚಿತ್ರದ ಮೂಲಕ ಈಡೇರಿದೆ. ಈ ಚಿತ್ರದಲ್ಲಿ ಅನು ಪ್ರಭಾಕರ್, ವೇಣು, ಹರ್ಷಿಕಾ ಪೂಣಚ್ಛ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆದರೆ “ಹಗ್ಗ” ನೇ ನಮ್ಮ ಚಿತ್ರದ ನಾಯಕ. ಹಾರಾರ್ ಜಾನರ್ ನ ಚಿತ್ರವಾದರೂ, ಚಿತ್ರದಲ್ಲಿ ಒಂದು ಪ್ರಮುಖ ಸಂದೇಶ ಸಹ ಇದೆ ಎಂದರು.

ಚಿತ್ರಕ್ಕೆ ನಾನೇ ಕಥೆ‌ ಬರೆದು ನಿರ್ಮಾಣ ಮಾಡಿದ್ದೇನೆ.‌ ಅವಿನಾಶ್ ನಿರ್ದೇಶನ ಮಾಡಿದ್ದಾರೆ. ಟೀಸರ್ ಬಿಡುಗಡೆ ಬಂದಿರುವ ಎಲ್ಲಾ ಗಣ್ಯರಿಗು ಧನ್ಯವಾದ. ಈಗಾಗಲೇ ಮೋಷನ್ ಪೋಸ್ಟರ್ ಮೂಲಕ “ಹಗ್ಗ” ಜನರ ಮನಸ್ಸಿಗೆ ಹತ್ತಿರವಾಗಿದೆ. ಈಗ ಟೀಸರ್ ಬಿಡುಗಡೆಯಾಗಿದೆ. ಆಗಸ್ಟ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ಮಾಪಕ ರಾಜ್ ಭಾರದ್ವಾಜ್ ತಿಳಿಸಿದರು.

ಅವಿನಾಶ್ ಅವರು ಚಿತ್ರದ ಕುರಿತು ಹೇಳಿದಾಗ ನನ್ನ ಪಾತ್ರ ಬಹಳ ಇಷ್ಟವಾಯಿತು. ನನ್ನನ್ನು “ಸೂಪರ್ ಹೀರೋ” ಎಂದು ತೋರಿಸಿದ್ದಾರೆ. ಪಾತ್ರದ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ‌‌. ಆದರೆ ಒಳ್ಳೆಯ ಪಾತ್ರಕೊಟ್ಟ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಧನ್ಯವಾದ ಎಂದರು ನಟಿ ಅನು ಪ್ರಭಾಕರ್.

ನನ್ನದು ಈ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರ. ಯಾವುದೋ ಒಂದು ವಿಷಯದ ಅನ್ವೇಷಣೆಗಾಗಿ ಹಳ್ಳಿಗೆ ಹೋಗುತ್ತೇನೆ. ಈ ಚಿತ್ರದಲ್ಲಿ ಜೀಪ್ ಕೂಡ ಡ್ರೈವ್ ಮಾಡಿದ್ದೇನೆ ಎಂದು ಹರ್ಷಿಕಾ ಪೂಣಚ್ಛ ತಿಳಿಸಿದರು.

ಇದು ನನ್ನ ಮೊದಲ ಚಿತ್ರ. ನಟನೆಗೆ ತಬಲನಾಣಿ ಅವರು ಬಹಳ ಸಹಾಯ ಮಾಡಿದರು. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಾಯಕ ವೇಣು. ನಟ ತಬಲ ನಾಣಿ ಸಹ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

ನಿರ್ಮಾಪಕ ರಾಜ್ ಭಾರದ್ವಾಜ್ ಅವರೆ “ಹಗ್ಗ” ಚಿತ್ರಕ್ಕೆ ಕಥೆ ಬರೆದಿದ್ದು, ಚಿತ್ರಕಥೆ ರಾಜ್ ಭಾರದ್ವಾಜ್, ಅವಿನಾಶ್ ಹಾಗೂ ಮನೋಹರ್ ಅವರದು. ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನ, ಸಿನಿಟೆಕ್ ಸೂರಿ ಛಾಯಾಗ್ರಹಣ ಹಾಗೂ ಎನ್ ಎಂ ವಿಶ್ವ ಅವರ ಸಂಕಲನವಿರುವ ಈ ಚಿತ್ರಕ್ಕೆ ಮನೋಹರ್ ಎಸ್ ಪಿ ಸಂಭಾಷಣೆ ಬರೆದಿದ್ದಾರೆ.

ಅನು ಪ್ರಭಾಕರ್, ವೇಣು, ಹರ್ಷಿಕಾ ಪೂಣಚ್ಛ, ತಬಲನಾಣಿ, ಅವಿನಾಶ್, ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಪ್ರಿಯ ಹೆಗ್ಡೆ, ಮೈಕೋ ಮಂಜು, ಸಂಜು ಬಸಯ್ಯ, ಸದಾನಂದ ಕಾಳಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಹಿರಣ್ಯನ ಕಾರುಣ್ಯ ಮನಸು!

ಚಿತ್ರ ವಿಮರ್ಶೆ

ರೇಟಿಂಗ್: 3/5

ವಿಜಯ್ ಭರಮಸಾಗರ

ಚಿತ್ರ : ಹಿರಣ್ಯ
ನಿರ್ದೇಶನ: ಪ್ರವೀಣ್ ಅವ್ಯುಕ್ತ
ನಿರ್ಮಾಣ: ವಿಘ್ನೇಶ್ವರ, ವಿಜಯ್‌ ಕುಮಾರ್‌
ತಾರಾಗಣ: ರಾಜವರ್ಧನ್, ದಿವ್ಯಾ,ಅರವಿಂದ್, ರಿಹಾನ, ದಿಲೀಪ್, ಹುಲಿ ಕಾರ್ತಿಕ್ ಇತರರು.

ಅವನೊಬ್ಬ ಅನಾಥ. ಡಾನ್ ಜೊತೆ ದುಷ್ಟ ಕೆಲಸ. ಸುಪಾರಿ ಕೊಟ್ಟರೆ ಏನ್ ಬೇಕಾದರೂ ಮಾಡೋ ಕ್ರಿಮಿನಲ್. ದಯೆ, ಕರುಣೆ, ಮಾನವೀಯತೆ ಇರದ ಕಲ್ಲು ಹೃದಯದವನು. ಅಂಥ ಕ್ರಿಮಿನಲ್ ಒಂದು ಡೀಲ್ ಒಪ್ಪುತ್ತಾನೆ. ಮಗುವೊಂದನ್ನು ಕಿಡ್ನಾಪ್ ಮಾಡಿ ಡಾನ್ ಕೈಗೆ ಕೊಡಬೇಕು. ಇದೇ ಸಿನಿಮಾದ ಟ್ವಿಸ್ಟು ಮತ್ತು ಟೆಸ್ಟು.

ರಾಜವರ್ಧನ್ ಮೊದಲ ಸಲ ಇಲ್ಲಿ ವಿಭಿನ್ನ ಪಾತ್ರದ ಮೂಲಕ ಎಂಟ್ರಿಯಾಗಿದ್ದಾರೆ. ಒಂದು ಸರಳ ಕಥೆಗೆ ನಿರೂಪಣೆ ಇನ್ನಷ್ಟು ಗಟ್ಟಿಯಾಗಿರಬೇಕಿತ್ತು. ಆರಂಭದಲ್ಲಿ ಅಷ್ಟೇನೂ ಕುತೂಹಲ ಎನಿಸಲ್ಲ.ಮಧ್ಯಂತರ ಬಳಿಕ ಸಿನಿಮಾ ನೋಡಿಸಿಕೊಂಡು ಹೋಗುತ್ತೆ. ಇಡೀ ಸಿನಿಮಾ ಮಗು ಮತ್ತು ಹೀರೋ ಮೇಲೆ ಸಾಗುತ್ತೆ. ಮೊದಲರ್ಧ ಚಿತ್ರಕಥೆಯ ವೇಗ ಕೊಂಚ ಹೆಚ್ಚಬೇಕಿತ್ತು. ದ್ವಿತಿಯಾರ್ಧ ಸಿನಿಮಾ ಬೇರೇನೆ ಆಯಾಮ ಪಡೆದುಕೊಳ್ಳುತ್ತೆ. ಈ ರೀತಿಯ ಕಥೆ ಬಂದಿವೆಯಾದರೂ, ಇಲ್ಲಿ ಮಗು ಮತ್ತೊಂದು ಹೈಲೆಟ್. ಆ ಮಗು ಯಾರದ್ದು, ಯಾಕೆ ಅ ಮಗುನ ಕೊಲೆ ಮಾಡಲು ವಿಲನ್ ಸಂಚು ಹಾಕ್ತಾನೆ, ಆ ಮಗು ಹೀರೋ ಕೈಯಲ್ಲಿ ಸಿಕ್ಕ ಬಳಿಕ ಏನೆಲ್ಲಾ ಆಗುತ್ತೆ, ಅಷ್ಟಕ್ಕೂ ಕಲ್ಲು ಹೃದಯದ ಹೀರೋ ಮನಸ್ಸು ಕರಗುತ್ತಾ? ಇವಿಷ್ಟು ಪ್ರಶ್ನೆಯಲ್ಲೇ ಸಿನಿಮಾ ಅರ್ಧ ಮುಗಿದಿರುತ್ತೆ.

ಇಲ್ಲಿ ಕಥೆಯ ಎಳೆ ಚೆನ್ನಾಗಿದೆ. ಇನ್ನಷ್ಟು ಬಿಗಿ ಹಿಡಿತ ಬೇಕಿತ್ತು. ವೇಗ ಹೆಚ್ಚಿಸಬೇಕಿತ್ತು. ಮುಖ್ಯವಾಗಿ ಇಂತಹ ಸಿನಿಮಾಗಳಿಗೆ ಸಂಕಲನ ಮುಖ್ಯ. ಅದಿಲ್ಲಿ ಮತ್ತಷ್ಟು ಚುರುಕಾಗುವ ಅಗತ್ಯವಿತ್ತು. ಆದರೂ ಸಿನಿಮಾ ಥ್ರಿಲ್ ಕೊಡುವ ಅಂಶಗಳೊಂದಿಗೆ ಸಾಗುತ್ತೆ. ಎಲ್ಲೋ ಒಂದು ಕಡೆ ಟ್ರಾಕ್ ಬದಲಾಗ್ತ ಇದೆಯೇ ಎನ್ನುವಷ್ಟರಲ್ಲಿ ಹಾಡು ಬಂದು ಮತ್ತದೇ ಟ್ರಾಕ್ ಗೆ ಕರೆದೊಯ್ಯುತ್ತೆ. ಒಂದರ್ಥದಲ್ಲಿ ಮಗು ಕಿಡ್ನಾಪ್ ದೃಶ್ಯ ಮತ್ತು ಆ ಮಗುವನ್ನು ಕಾಪಾಡುವ ಸೀನ್ ಸಿನಿಮಾದ ಹೈಲೆಟ್. ಇಡೀ ಸಿನಿಮಾದ ಕೇಂದ್ರಬಿಂದು ಆ ಮಗು. ಆ ಬಗ್ಗೆ ಕುತೂಹಲ ಇದ್ದರೆ ಸಿನಿಮಾ ನೋಡಬಹುದು.

ಕಥೆ ಎಳೆ ಇದು..

ಅವನ ಹೆಸರು ರಾಣ. (ರಾಜವರ್ಧನ) ದುಡ್ಡು ಕೊಟ್ಟರೆ ಕೊಲೆ ಮಾಡೋಕೂ ಹಿಂದೆ ಮುಂದೆ ನೋಡಲ್ಲ. ಒಂದು ಸಮಯದಲ್ಲಿ ಮಗುವೊಂದರ ಕಿಡ್ನಾಪ್‌ಡೀಲ್ ಸಿಗುತ್ತೆ. ಆ ಮಗುವನ್ನು ಕಿಡ್ನಾಪ್‌ಮಾಡ್ತಾನೆ. ಇನ್ನೇನು ಆ ಡಾನ್ ಮಗುನ ಕೊಲೆ ಮಾಡಬೇಕು ಅನ್ನುವಷ್ಟರಲ್ಲಿ ಆ ರಾಣನಿಗೆ ಒಂದು ಘಟನೆ ನೆನಪಾಗುತ್ತೆ. ಆಮೇಲೆ ಏನಾಗುತ್ತೆ ಎಂಬುದು ಟ್ವಿಸ್ಟ್.

ಇಲ್ಲಿ ಮಗು ಕೊಲೆ ನಡೆಯುತ್ತಾ? ಅದರ ಸುತ್ತವೇ ಕಥೆ ಸಾಗುತ್ತೆ. ಬಹುಶಃ ಮಗುವೇ ಕಥೆಯ ಮೂಲ. ಇಲ್ಲಿ ಎರಡು ಟ್ವಿಸ್ಟ್ ಗಳಿವೆ. ಊಹೆ ಮಾಡದ ಕಥೆಯ ಎಳೆ ಅದು. ಅದನ್ನು ನೀವು ಸಿನಿಮಾದಲ್ಲೇ ನೋಡಬೇಕು.

ಯಾರು ಹೇಗೆ?

ರಾಜವರ್ಧನ್ ಇಲ್ಲಿ ಎಂದಿಗಿಂತ ಚೆನ್ನಾಗಿ, ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಬಾಡಿ ಲಾಂಗ್ವೇಜ್, ಡೈಲಾಗ್ ಡಿಲವರಿ ಜೊತೆಗೆ ಸ್ಟಂಟ್ ನಲ್ಲಿ ಚಪ್ಪಾಳೆ ಗಿಟ್ಟಿಸುತ್ತಾರೆ. ಆರಡಿ ಹೈಟಿಗೆ ಜಬರ್ದಸ್ತ್ ಫೈಟು ಹೈಲೆಟ್. ಮಾಸ್ ಹೀರೋ ಗೆ ಇರಬೇಕಾದ ಎಲ್ಲಾ ಲಕ್ಷಣ ಅವರಲ್ಲಿದೆ. ಕಥೆಗೆ ಪೂರಕವಾಗಿ ಅವರ ಹಾವಭಾವವೂ ಇದೆ. ಕೋಪಿಷ್ಟನಾಗಿ ಕಷ್ಟ ಎನಿಸಿದರೂ, ಮಗು ಕಾಪಾಡುವ ಕರುಣಾಮಯಿ ಆಗಿ ಇಷ್ಟವಾಗುತ್ತಾರೆ.

ದಿವ್ಯಾ ಅವರ ಪಾತ್ರ ಇಲ್ಲಿ ಸ್ಪೆಷಲ್ ಎನಿಸುತ್ತೆ. ಅವರಿಲ್ಲಿ ಸಖತ್ ಗ್ಲಾಮರ್ ಆಗಿದ್ದರೂ, ನಮ್ಮ ನಡುವೆ ಕಾಣುವ ಪಾತ್ರದ ಮೂಲಕ ಗಮನಸೆಳೆಯುತ್ತಾರೆ. ಹಾಡೊಂದರಲ್ಲಿ ಪಡ್ಡೆಗಳ ನಿದ್ದೆಗೆಡಿಸುವಂತಹ ಸ್ಟೆಪ್ ಹಾಕಿದ್ದಾರೆ.
ರಿಹಾನಾ ತಾಯಿಯಾಗಿ ಇಷ್ಟವಾಗುತ್ತಾರೆ. ಪೊಲೀಸ್ ಅಧಿಕಾರಿಯಾಗಿ ದಿಲೀಪ್ ಇಷ್ಟವಾಗುತ್ತಾರೆ. ತೆರೆ ಮೇಲೆ ಇರುವಷ್ಟು ಕಾಲ ಹುಲಿ ಕಾರ್ತಿಕ್ ಗಮನ ಸೆಳೆಯುತ್ತಾರೆ. ಅರವಿಂದ ಸಿಕ್ಕ ಪಾತ್ರ ಚೆನ್ನಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಬರುವ ಪಾತ್ರಗಳೂ ಸೈ ಎನಿಸಿಕೊಂಡಿವೆ.

ಇನ್ನು, ಜೂಡಾ ಸ್ಯಾಂಡಿ ಸಂಗೀತದ ಎರಡು ಹಾಡುಗಳು ಪರವಾಗಿಲ್ಲ. ಹಿನ್ನೆಲೆ ಸಂಗೀತಕ್ಕಿನ್ನು ಧಮ್ ಬೇಕಿತ್ತು. ಯೋಗೇಶ್ವರನ್‌ ಕ್ಯಾಮೆರಾ ಕೈ ಚಳಕ ಸೊಗಸಾಗಿದೆ. ಸ್ಟಂಟ್ಸ್ ಸಿನಿಮಾದ ಹೈಲೆಟ್, ಕಾರು ಚೇಸ್ ಇಲ್ಲಿನ ಆಕರ್ಷಣೆ. ಎನ್ನಬಹುದು.

Categories
ಸಿನಿ ಸುದ್ದಿ

ಸೈಮಾ ನಾಮಿನೇಷನ್-ಸೈಮಾ ರೇಸ್ ನಲ್ಲಿ ಕಾಟೇರ, ಸಪ್ತ ಸಾಗರದಾಚೆ ಎಲ್ಲೋ ಸೈಡ್-ಎ

ಪ್ರತಿಷ್ಠಿತ ಸೈಮಾ ಪ್ರಶಸ್ತಿ ಮತ್ತೆ ಬಂದಿದೆ. ಈ ಅವಾರ್ಡ್ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಸೈಮಾ ಎಂದರೆ, ‘ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಅವಾರ್ಡ್’ ಎಂದು. ಈ ಪ್ರಶಸ್ತಿಯನ್ನು ಪ್ರಮುಖವಾಗಿ ಸೌತ್ ಸಿನಿಮಾರಂಗದಲ್ಲಿ ತಯಾರಾಗುವ ಸಿನಿಮಾಗಳಿಗೆ ಮಾತ್ರವೇ ಕೊಡಲಾಗುತ್ತದೆ. ಪ್ರತಿ ಬಾರಿ ಈ ಪ್ರಶಸ್ತಿ ಪಡದುಕೊಳ್ಳುವ ಸಿನಿಮಾ ಯಾವುವು, ಕಲಾವಿದರು ಯಾರು ಎನ್ನುವ ಕುತೂಹಲ ಇದ್ದೇ ಇರುತ್ತದೆ. 2024ರ ಸೈಮಾ ನಾಮೀಷನ್ ಪಟ್ಟಿ ಬಿಡುಗಡೆಯಾಗಿದ್ದು, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನ ಯಾವ ಸಿನಿಮಾಗಳು ರೇಸ್ ನಲ್ಲಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

SIIMA ನ ಅಧ್ಯಕ್ಷರಾದ ಬೃಂದಾ ಪ್ರಸಾದ್ ಅಡುಸುಮಿಲ್ಲಿ ಅವರು 2023ರ SIIMA ನಾಮನಿರ್ದೇಶನ ಸಿನಿಮಾ ಪಟ್ಟಿ ಘೋಷಿಸಿದ್ದಾರೆ. ನಾಮನಿರ್ದೇಶನ ಸಿನಿಮಾ ಬಗ್ಗೆ ಮಾತನಾಡುತ್ತಾ ಬೃಂದಾ ಪ್ರಸಾದ್ “ಕಳೆದ ಎರಡು ವರ್ಷಗಳಲ್ಲಿ ದಕ್ಷಿಣ ಭಾರತದ ಸಿನಿಮಾದ ಪ್ರಾದೇಶಿಕ ಸಿನಿಮಾಗಳು ಭಾಷೆಯನ್ನು ಮೀರಿ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಹೀಗಾಗಿ SIIMA 2024 ಪ್ರಬಲ ಸ್ಪರ್ಧಿಗಳ ಪಟ್ಟಿಯನ್ನು ಹೊಂದಿರುತ್ತದೆ” ಎಂದಿದ್ದಾರೆ.

ಸೈಮಾ ರೇಸ್ ನಲ್ಲಿರುವ ಸಿನಿಮಾಗಳು

ಕನ್ನಡ-ಕಾಟೇರ
ತೆಲುಗು-ದಸರಾ
ತಮಿಳು-ಜೈಲರ್
ಮಲಯಾಳಂ-2018

ಕಾಟೇರ ಹಾಗೂ ಸಪ್ತಸಾಗರದಾಚೆ ಎಲ್ಲೋ ಸೈಡ್-ಎ ಸಿನಿಮಾಗಳು ಸೈಮಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿವೆ. ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಚಿತ್ರ 8 ವಿಭಾಗಗಗಳಲ್ಲಿ ನಾಮಿನೇಟ್ ಆಗಿದೆ. ಅತ್ತ ರಕ್ಷಿತ್ ಶೆಟ್ಟಿ ನಟನೆಯ, ಹೇಮಂತ್ ರಾವ್ ನಿರ್ದೇಶನದ ಸಪ್ತಸಾಗರದಾಚೆ ಎಲ್ಲೋ ಸೈಡ್-ಎ ಚಿತ್ರ 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.
ತೆಲುಗಿನಲ್ಲಿ, ನಾನಿ ಮತ್ತು ಕೀರ್ತಿ ಸುರೇಶ್ ಅಭಿನಯದ ಶ್ರೀಕಾಂತ್ ಒಡೆಲಾ ನಿರ್ದೇಶನದ ‘ದಸರಾ’ ಚಿತ್ರ 11 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದು, ನಾನಿ ಮತ್ತು ಮೃಣಾಲ್ ಠಾಕೂರ್ ಅಭಿನಯದ ‘ಹಾಯ್ ನಾನ್ನ’ 10 ವಿಭಾಗಗಳಲ್ಲಿ ನಾಮಿನೇಷನ್ ಗೊಂಡಿದೆ.

ತಮಿಳಿನಲ್ಲಿ, ರಜನಿಕಾಂತ್ ಅಭಿನಯದ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್’ 11 ವಿಭಾಗದಲ್ಲಿ ನಾಮನಿರ್ದೇಶನಗಳೊಂದಿಗೆ ಮುಂಚೂಣಿಯಲ್ಲಿದ್ದರೆ, ಉದಯನಿಧಿ ಸ್ಟಾಲಿನ್ ಮತ್ತು ಕೀರ್ತಿ ಸುರೇಶ್ ಅಭಿನಯದ ‘ಮಾಮಣ್ಣನ್’ ಸಿನಿಮಾ 9 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.

ಮಲಯಾಳಂನಲ್ಲಿ, ಟೋವಿನೋ ಥಾಮಸ್ ಮತ್ತು ಆಸಿಫ್ ಅಲಿ ಅಭಿನಯದ ಜೂಡ್ ಆಂಥನಿ ಜೋಸೆಫ್ ನಿರ್ದೇಶನದ ‘2018’ ಸಿನಿಮಾ 8 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ, ಮಮ್ಮುಟ್ಟಿ ಮತ್ತು ಜ್ಯೋತಿಕಾ ಅಭಿನಯದ ‘ಕಾತಲ್ – ದಿ ಕೋರ್’ 7 ವಿಭಾಗಗಳಲ್ಲಿ ನಾಮಿನೇಷನ್ ಆಗಿದೆ.

ಆನ್‌ಲೈನ್ ವೋಟಿಂಗ್ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರು ಮತ್ತು ಚಲನಚಿತ್ರಗಳಿಗೆ www.siima.in ಮತ್ತು SIIMA ನ ಫೇಸ್‌ಬುಕ್ ಪುಟದಲ್ಲಿ ವೋಟ್ ಮಾಡಬಹುದು.
ದುಬೈನಲ್ಲಿ ಸೆಪ್ಟಂಬರ್ 14 ಮತ್ತು 15ರಂದು 2024ರ ಸೈಮಾ ನಡೆಯಲಿದೆ.

Categories
ಸಿನಿ ಸುದ್ದಿ

ಖಡಕ್ ಖದರ್ ಮಿತ್ರ: ಕಾಮಿಡಿ ಸ್ಟಾರ್ ಈಗ ಸಖತ್ ವಿಲನ್- ಗಡ್ಡ ತಂದ ಚಾನ್ಸ್; ಕಾಲಿವುಡ್ ಖಳನಾಯಕ ಈ ಮಿತ್ರ

ಮಿತ್ರ ಅಂದ್ರೆ ಕನ್ನಡ ಸಿನಿಮಾರಂಗಕ್ಕೆ ಚಿರಪರಿಚಿತರು ಕಳೆದ ಎರಡು ದಶಕಗಳಿಂದ ಮಿತ್ರ ಕನ್ನಡ ಚಿತ್ರರಂಗದಲ್ಲಿ ಹಿರಿತೆರೆ ಕಿರುತೆರೆ ಸೇರಿದಂತೆ ಎಲ್ಲೆಡೆ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಾ ಬಂದಿದ್ದಾರೆ. ಕಾಮಿಡಿ, ಎಮೋಷನ್ ಹೀಗೆ ಎಲ್ಲಾ ರೀತಿಯ ಪಾತ್ರಕ್ಕೂ ತಮ್ಮನ್ನ ತಾವು ಒಗ್ಗಿಸಿಕೊಂಡು ಅಭಿನಯಿಸುತ್ತಾ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ..
ಆದ್ರೆ ಈಗ ನಟ ಮಿತ್ರ ಅವ್ರ ಖದರ್ ಬದಲಾಗಿದೆ.

ಲುಕ್ ಬೇರೆಯದ್ದೇ ರೀತಿ ಇದೆ…ಯೆಸ್, ಮಿತ್ರ ಪ್ರಜ್ವಲ್ ದೇವರಾಜ್ ಅವ್ರ ಕರಾವಳಿ ಸಿನಿಮಾದಲ್ಲಿ ಮುಖ್ಯಪಾತ್ರವೊಂದರಲ್ಲಿ ಅಭಿನಯ ಮಾಡ್ತಿದ್ದಾರೆ..ಅದಕ್ಕಾಗಿ ಗೆಟಪ್ ಕೂಡ ಚೇಂಜ್ ಮಾಡಿಕೊಂಡ್ರು..ಒಂದು ಸಿನಿಮಾಗಾಗಿ ಮಾಡಿಕೊಂಡ ಲುಕ್ ಈಗ ಮಿತ್ರ ಅವ್ರ ಕೆರಿಯರ್ನಲ್ಲಿ ಟರ್ನಿಂಗ್ ಪಾಯಿಂಟ್ ಕೊಡ್ತಿದೆ.


ಇಷ್ಟು ದಿನಗಳ ಕಾಲ ಕಾಮಿಡಿ ಸ್ಟಾರ್ ಆಗಿ ಮಿಂಚ್ತಿದ್ದ ಮಿತ್ರ ಇನ್ನು ಮುಂದೆ ಸ್ಯಾಂಡಲ್ ವುಡ್ ನ ಖಡಕ್ ವಿಲನ್ ಆಗಲಿದ್ದಾರೆ. ಗಡ್ಡ ಬಿಟ್ಟು ಲುಕ್ ಬದಲಾಯಿಸಿಕೊಂಡ ಮೇಲೆ ಬೇರೆ ರೀತ ಪಾತ್ರಗಳು ಹುಡುಕಿ ಬರ್ತಿವೆಯಂತೆ. ಸದ್ಯ ಅದಕ್ಕಾಗಿ ಒಂದು ಸ್ಟೈಲಿಷ್ ವಿಲನ್ ಲುಕ್ ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ ಮಿತ್ರ.


ಸದ್ಯ ಮಿತ್ರ ಅವ್ರು ಮಾಡಿಸಿರೋ ಫೋಟೋಶೂಟ್ ಫೋಟೋಗಳನ್ನ ನೋಡ್ತಿದ್ರೆ ವಾವ್ಹ್ ಮಿತ್ರ ಅವ್ರು ಹೀಗೂ ಕಾಣ್ತಾರಾ ಅಂತ ಅನ್ನಿಸೋದು ಗ್ಯಾರೆಂಟಿ…ವಿಲನ್ ಲುಕ್ ನಲ್ಲಿ ಸಾಕಷ್ಟು ವಿಭಿನ್ನ ಶೇಡ್ ನಲ್ಲಿ ಮಿತ್ರ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ…ಇನ್ನು ಈ ಫೋಟೋ ಶೂಟ್ ಮಾಡಿರೋದು ಕರಾವಳಿ ಸಿನಿಮಾದ ಸಿನಿಮಾಟೋಗ್ರಾಫರ್ ಅಭಿಮನ್ಯು ಸದಾನಂದ್ಮಿ. ಮಿತ್ರ ಅವ್ರ ಲುಕ್ ಅನ್ನ ಸ್ಟೈಲಿಷ್ ಮಾಡಿರೋದು ಕಾಲಿವುಡ್ ನ ಸ್ಟೈಲಿಷ್ ಕಣ್ಮಣಿ .


ಮಿತ್ರ ಅವ್ರ ಈ ಲುಕ್ ಬರೀ ಲುಕ್ ಆಗಿಯೇ ಉಳಿದಿಲ್ಲ…ಕರಾವಳಿ ಸಿನಿಮಾ ಬಿಟ್ಟು ಕನ್ನಡದ ದೊಡ್ಡ ಎರಡು ಸ್ಟಾರ್ ಸಿನಿಮಾಗಳಲ್ಲಿ ಮಿತ್ರ ಖಡಕ್ ವಿಲನ್ ಆಗಿ ಕಾಣಿಸಿಕೊಳ್ತಿದ್ದಾರೆ…ಅದರ ಜೊತೆಗೆ ತಮಿಳಿನ ಒಂದು ಸಿನಿಮಾಗೆ ವಿಲನ್ ಆಗಿ ಆಯ್ಕೆ ಆಗಿದ್ದಾರೆ.

ಕಲಾವಿದ ಆದವ್ರು ಎಂದಿಗೂ ಒಂದೇ ಪಾತ್ರಕ್ಕೆ ಅಂಟಿಕೊಳ್ಳಬಾರದು ವಯಸ್ಸಿಗೆ ತಕ್ಕಂತೆ ತಮ್ಮನ್ನ ನಾವು ಬದಲಾಯಿಸಿಕೊಳ್ಳಬೇಕು ಅನ್ನೋದನ್ನ ಮಿತ್ರ ಅವ್ರ ಫಾಲೋ ಮಾಡಿದಂತಿದೆ …ಸದ್ಯ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ಹಾಗೂ ಮಿಲನ್ ಖದರ್ ನಲ್ಲಿ ಮಿತ್ರ ಸೂಪರ್ ಆಗಿ ಮಿಂಚ್ತಿದ್ದಾರೆ….

Categories
ಸಿನಿ ಸುದ್ದಿ

ರಕ್ತಾಕ್ಷ ಟ್ರೇಲರ್ ಹೊರಬಂತು: ರೋಹಿತ್ ಮೊದಲ ಸಿನಿಮಾಗೆ ಚಿನ್ನಾರಿ ಮುತ್ತ ಸಾಥ್

ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಕೆಲವು ಪ್ರಯತ್ನಗಳು ಯಶಸ್ವಿಯಾದರೆ, ಕೆಲವು ಬಿಗ್ ಬಜೆಟ್ ಸಿನಿಮಾಗಳ ನಡುವೆ ಕಳೆದು ಹೋಗುತ್ತವೆ. ಹೊಸತನಕ್ಕೆ ಬೆಂಬಲ ಸಿಗಲಿ, ಸಿಗದೇ ಇರಲಿ ಆದರೆ ಪ್ರಯತ್ನಗಳಂತೂ ನಿಂತಿಲ್ಲ ಎಂಬುದು ಕನ್ನಡ ಸಿನಿಮಾ ಪ್ರೇಮಿಗಳಿಗೆ ಖುಷಿಯ ಸಂಗತಿ. ಸಿನಿಮಾ ಬಗ್ಗೆ ಅತೀವ ಪ್ರೀತಿ ಹೊಂದಿರುವ ಯುವ ಪ್ರತಿಭೆ ರೋಹಿತ್ ಮೊದಲ‌ ಕೂಸು ರಕ್ತಾಕ್ಷ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಈ ಚಿತ್ರದ ಟ್ರೇಲರ್ ಅನಾವರಣಗೊಂಡಿದ್ದು, ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ರಕ್ತಾಕ್ಷ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ನಟ ವಿಜಯ್ ರಾಘವೇಂದ್ರ, ನಟಿ ಸುಮನ್ ನಗರ್ಕರ್ ಟ್ರೇಲರ್ ಬಿಡುಗಡೆ ಮಾಡಿ ಹೊಸಬರ ಪ್ರಯತ್ನಕ್ಕೆ ಬೆನ್ನುತಟ್ಟಿದ್ದಾರೆ.

ನಟ ವಿಜಯ್ ರಾಘವೇಂದ್ರ ಮಾತನಾಡಿ,
ಕಥೆ ಬಗ್ಗೆ ಕಡಿಮೆ ಗೊತ್ತಿದ್ದರೆ ಒಳ್ಳೆದು. ಕಥೆ ಹೆಚ್ಚು ಬಿಟ್ಟು ಕೊಟ್ಟರೂ ಕಷ್ಟ. ಕಥೆಯ ಸುಳಿವೇ ಇಲ್ಲದೇ ಊಹಾಪೋಹ ಮಾಡಿಕೊಂಡು ಥಿಯೇಟರ್ ಗೆ ಬರುವ ತರ ಮಾಡಿದರು ಕಷ್ಟ. ಯಾಕೆಂದರೆ ಜನ ಈಗ ಎಷ್ಟರ ಮಟ್ಟಿಗೆ ಮುಂದುವರೆದಿದ್ದಾರೆ ಎಂದರೆ ಸಣ್ಣ ಟ್ರೇಲರ್ , ಟೀಸರ್ ತಮ್ಮದೇ ಕಲ್ಪನೆ‌ ಮೂಲಕ ಥಿಯೇಟರ್ ಗೆ ಬರ್ತಾರೆ. ಕಥೆ ಅವರದ್ದು ಆದರೆ ಒಪ್ಪಿಕೊಳ್ಳುತ್ತಾರೆ. ಕಥೆ ಬೇರೆಯದದ್ದಾರೆ ನಾವು ಅಂದುಕೊಂಡು ಬಂದ ಕಥೆಯಲ್ಲ ಎಂದು ಬೇಜಾರು ಆಗುತ್ತಾರೆ. ಆದರೆ ಸಣ್ಣ ಎಳೆ, ಜನರ ನಂಬಿಕೆ ವಿಶ್ವಾಸ ಗೆಲ್ಲುವುದು ಸಿನಿಮಾದ ಮುಖಾಂತರ ಗೆಲ್ಲುವುದು ಸಾಹಸ. ಅಂತಹ ಸಾಹಸಕ್ಕೆ ರೋಹಿತ್ ಕೈ ಹಾಕಿದ್ದಾರೆ. ಬಹಳ ಚೆನ್ನಾಗಿ ಟ್ರೇಲರ್ ಮೂಡಿಬಂದಿದೆ. ಕುತೂಹಲ ಕೆರಳಿಸುತ್ತದೆ. ಆಕ್ಷನ್ ಇದೆ. ಥ್ರಿಲ್ಲರ್ ಎಲಿಮೆಂಟ್ ಇದೆ. ನನಗೂ ಆಡಿಯನ್ಸ್ ಆಗಿ ಕ್ಯೂರಿಯಾಸಿಟಿ ಹೆಚ್ಚುವಂತೆ ಮಾಡಿದೆ. ಬಹಳ ಕಷ್ಟಪಟ್ಟಿದ್ದಾರೆ ರೋಹಿತ್. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ತಿಳಿಸಿದರು.

ಹಿರಿಯ ನಟಿ ಸುಮನ್ ನಗರ್ಕರ್ ಮಾತನಾಡಿ, ಟ್ರೇಲರ್ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಸರಣಿ ಕೊಲೆ ಇದೆ ಅನ್ನೋ ಕ್ಲ್ಯೂ ಇದೆ. ಮೂರ್ನಾಲ್ಕು ಜನ ಹೀರೋಯಿನ್ ಇರುವುದು ಗೊತ್ತಾಗುತ್ತದೆ. ಹೀಗಾಗಿ ಸರಣಿ ಕೊಲೆಯಾಗುತ್ತದೆ ಎಂಬ ಕ್ಲ್ಯೂ ಕೂಡ ಸಿಕ್ತು. ನನ್ನ ಪತಿ ಪೊಲೀಸ್ ಪಾತ್ರದಲ್ಲಿ ಮಾಡಿದ್ದಾರೆ. ಕಥೆ ಅವರು ಕೂಡ ಹೇಳಿಲ್ಲ. ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಪ್ರೋತ್ಸಾಹ ಸಿಗಬೇಕು ಎಲ್ಲರೂ ಪ್ರೋತ್ಸಾಹ ಕೊಡಬೇಕು. ಜನ ಥಿಯೇಟರ್ ಗೆ ಬರಬೇಕು. ಅವರು ನಾವು ಮಾಡುವ ಕೆಲಸ ನೋಡಬೇಕು. ಈ ರೀತಿಯ ಮಿಸ್ಟ್ರೀ ಸ್ಟೋರಿಯನ್ನು ಥಿಯೇಟರ್ ನಲ್ಲಿ ನೋಡಿ‌ ಎಂದು ಹೇಳಿದರು.

ವಕೀಲರಾದ ಹರ್ಷ ಮುತಾಲಿಕ್ ಮಾತಾನಾಡಿ, ರೋಹಿತ್ ನೋಡಿದರೆ ಹೆಮ್ಮೆ ಎನಿಸುತ್ತದೆ. ಚಿಕ್ಕ ವಯಸ್ಸಿನಲ್ಲೇ ಮಾಡೆಲಿಂಗ್ ಮಾಡಿ ಅಲ್ಲಿ ಒಂದು ರೀತಿ ಸಾಧನೆ ಮಾಡಿ ಅದನ್ನು ಸಿನಿಮಾ ಮೂಲಕ ಬರಬೇಕು ಮಾಡಿದ್ದಾನೆ. ನನ್ನ ಊರಿನ ಹುಡುಗ ಅದು ವಿಶೇಷ. ಇಷ್ಟು ಎತ್ತರಕ್ಕೆ ಬೆಳೆಯುತ್ತಾನೆ. ಹಿರಿಯ ನಟರ ಹೊಗಳಿಕೆ ಪಾತ್ರರಾಗುತ್ತಾನೆ ಎಂದರೆ ನಮಗೆ, ನಮ್ಮ ಜಿಲ್ಲೆಗೂ ಹೆಮ್ಮೆ ಎಂದರು.

ನಟ ರೋಹಿತ್ ಮಾತನಾಡಿ, ಹಾರ್ಡ್ ವರ್ಕ್ ಮಾಡಿ‌ ಇಲ್ಲಿಗೆ ಬಂದಿದ್ದೇನೆ. ಥಿಯೇಟರ್ಸ್ ಮಾಡಿದೆ ಅಲ್ಲಿ‌ ಒಳ್ಳೆ ಪರ್ಫಾಮರ್ ಅಂತಾ ಹೆಸರು ಬಂತು. ಭಿಕ್ಷುಕ ರೋಲ್ ಮಾಡಿದೆ. ಅದೇ ರೋಲ್ ಹಿಟ್ ಆಯ್ತು. ಕನ್ನಡ ಚಿತ್ರರಂಗ ಒಂದು ಹೆಮ್ಮರ. ಈ ಹೆಮ್ಮರದಲ್ಲಿ ನಾನು ಒಂದು ಚಿಕ್ಕ ಹಸಿರು ಎಲೆಯಾಗಿದ್ದರೆ ನನ್ನ ಲೈಫ್ ಸಾರ್ಥಕ. ಉತ್ತರ ಕರ್ನಾಟಕಕ್ಕೆ ನೂರಾರು ವರ್ಷಗಳ ಕಲೆ ಇತಿಹಾಸವಿದೆ. ಬಹಳಷ್ಟು ಕಲಾವಿದರು ಬಂದಿದ್ದಾರೆ . ನಮ್ಮಲ್ಲಿ ಯಾರು ಹೀರೋ ಇಲ್ಲ ಎಂಬ ಕೊರಗು ಇದೆ. ಬಹಳಷ್ಟು ಕಲೆ ಇದೆ. ದಾರಿ ಗೊತ್ತಿಲ್ಲ. ನನ್ನಿಂದ ಹತ್ತಾರು ಜನರಿಗೆ ಆ ದಾರಿ ಕ್ರಿಯೇಟ್ ಆಯಿತು ಎಂದರೆ ನನ್ನ ಜೀವನದ ಆಯಶ ಎಂದುಅಭಿಪ್ರಾಯಪಟ್ಟರು.

ರೋಹಿತ್ ಈಗಾಗಲೇ ಮಾಡೆಲಿಂಗ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ‘ರಕ್ತಾಕ್ಷ’ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಹೀರೋ ಆಗಿರುವ ಜೊತೆಗೆ ತಮ್ಮದೇ ಸಾಯಿ ಪ್ರೊಡಕ್ಷನ್ ಹೌಸ್ ನಿರ್ಮಾಣ ಸಂಸ್ಥೆಯ ಮೂಲಕ ‘ರಕ್ತಾಕ್ಷ’ ಸಿನಿಮಾವನ್ನು ನಿರ್ಮಾಣ ಸಹ ಮಾಡಿದ್ದಾರೆ. ವಾಸುದೇವ ಎಸ್.ಎನ್ ‘ರಕ್ತಾಕ್ಷ’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ರೋಹಿತ್​ ರೀತಿಯಲ್ಲಿಯೇ ವಾಸುದೇವ್ ಅವರಿಗೂ ಇದು ಮೊದಲ ಸಿನಿಮಾ. ರೋಹಿತ್, ವಾಸುದೇವ್ ಜೊತೆಗೆ ಇನ್ನೊಂದಿಷ್ಟು ಹೊಸ ಪ್ರತಿಭೆಗಳು ಸೇರಿ ಈ ಸಿನಿಮಾವನ್ನು ಮಾಡಿವೆ. ಧೀರೇಂದ್ರ ಡಾಸ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ.

ಚಿತ್ರಕ್ಕೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ ಬರೆದಿದ್ದಾರೆ, ಸಂಗೀತವನ್ನು ಧೀರೇಂದ್ರ ಡಾಸ್ ನೀಡಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ನಟಿಸಿರುವ ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್, ನಿವೀಕ್ಷ ನಾಯ್ಡು, ಗುರುದೇವ ನಾಗರಾಜ, ಪ್ರಭು, ವಿಶ್ವ, ಭದ್ರಿ ನಾರಾಯಣ,, ಬಸವರಾಜ ಆದಾಪುರ ನಟಿಸಿದ್ದಾರೆ. ಖಳನಾಯಕ ಪಾತ್ರದಲ್ಲಿ ನಟ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ.

ಜುಲೈ 26ಕ್ಕೆ ಚಿತ್ರ ರಿಲೀಸ್

ರಕ್ತಾಕ್ಷ ಟ್ರೇಲರ್ ಬಹಳ ಇಂಪ್ರೆಸಿಂಗ್ ಆಗಿ‌ ಮೂಡಿದೆ. ಮಾಸ್ ಜೊತೆಗೆ ಥ್ರಿಲ್ಲಿಂಗ್ ಅಂಶಗಳು ಚಿತ್ರದಲ್ಲಿದ್ದು, ಪ್ರೇಕ್ಷಕರನ್ನು ಸೀಟಿನ ತುದಿಗೆ ಕುರಿಸುವುದು ಪಕ್ಕ. ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯ ಶುರು ಮಾಡಿರುವ ಚಿತ್ರತಂಡ ಜುಲೈ 26ಕ್ಕೆ ಸಿನಿಮಾವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗಿದೆ. ಇನ್ನು ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಶ್ರೀಕಾಂತ್ ಕಟಗಿ, ವಕೀಲರಾದ ಹರ್ಷ ಮುತಾಲಿಕ್ ಹಾಗೂ ಮೊಹಮದ್ ಗೌಸ್ ಪೀರ್ ಉಪಸ್ಥಿತರಿದ್ದರು.

error: Content is protected !!