Categories
ಸಿನಿ ಸುದ್ದಿ

ಹೊಸಬರ ಪ್ರಯೋಗ ‘ಸಿ’ ಎಂಬ ಅದ್ಭುತ ಕಥಾ ವಸ್ತು: ಎ ಅಲ್ಲ ಬಿ ಅಲ್ಲ ಸಿ ಅಂದ್ರು ಕವಿರತ್ನ

ಸಿ..ಸ್ಯಾಂಡಲ್ ವುಡ್ ನಲ್ಲಿ ರಿಲೀಸ್ ಗೆ ರೆಡಿಯಾಗಿರುವ ಸಿನಿಮಾ. ಚಂದನವನದಲ್ಲಿ ಒಂದೇ ಅಕ್ಷರದ ಸಿನಿಮಾಗಳು ತೀರಾ ಅಪರೂಪ. ಇದೀಗ ಹೊಸಬರ ತಂಡವೊಂದು ‘ಸಿ’ ಎನ್ನುವ ಒಂದೇ ಅಕ್ಷರದ ಟೈಟಲ್ ಇಟ್ಟುಕೊಂಡು ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ. ಒಂದೇ ಅಕ್ಷರದ ಟೈಟಲ್ ಮೂಲಕ ಗಮನ ಸೆಳೆಯುತ್ತಿರುವ ಈ ಸಿನಿಮಾ ಈಗಾಗಲೇ ಟೀಸರ್ ಮತ್ತು ಕಂದಾ ಕಂದಾ ಎನ್ನುವ ಹಾಡಿನ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಇದೆ ಜೊತೆಗೆ ಸಿ ಸಿನಿಮಾಗೆ ನಟ ಯೋಗಿ ಮತ್ತು ಖ್ಯಾತ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಅವರ ಬೆಂಬಲ ಕೂಡ ಸಿಕ್ಕಿದೆ‌.

ಅಂದಾಹಗೆ ‘ಸಿ’ ಕಿರಣ್ ಸುಬ್ರಮಣಿ ಚೊಚ್ಚಲ ನಿರ್ದೇಶನದ ಸಿನಿಮಾ. ಕಿರಣ್ ನಿರ್ದೇಶನದ ಜೊತೆಗೆ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಸದ್ಯ ಸಿನಿಮಾದಿಂದ ‘ಇದು ಎ ಅಲ್ಲ ಬಿ ಅಲ್ಲ ಸಿ…’ ಎನ್ನುವ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಎಬಿ ಮುರಳಿಧರನ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಶಶಾಂಕ್ ಶೇಷಗಿರಿ, ಸುರಭಿ ಭಾರದ್ವಜ್ ಹಾಗೂ ಜ್ಞಾನ ಹಾಡಿದ್ದಾರೆ. ಈ ಹಾಡಿಗೆ ಖ್ಯಾತ ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ.

ವಿಶೇಷ ಎಂದರೆ ಈ ಹಾಡನ್ನು ಲೂಸ್ ಮಾದ ಖ್ಯಾತಿಯ ನಟ ಯೋಗಿ ರಿಲೀಸ್ ಮಾಡಿದ್ದಾರೆ. ಹಾಡಿನ್ನು ರಿಲೀಸ್ ಮಾಡಿ ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ. ಯೋಗಿ ಹೊಸ ಸಿನಿಮಾ ತಂಡದ ಬೆನ್ನಿಗೆ ನಿಂತಿರುವುದು ಸಿ ಚಿತ್ರತಂಡಕ್ಕೆ ಖುಷಿ ತಂದಿದೆ. ಇನ್ನು ಖ್ಯಾತ ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಕೂಡ ಸಿ ಸಿನಿಮಾದ ಹಾಡಿನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇಡೀ ಸಿನಿಮಾಗೆ ಒಳ್ಳೆದಾಗಲಿ ಕನ್ನಡ ಚಿತ್ರರಂಗ ಬೆಳೆಯಲಿ ಎಂದು ಹಾರೈಸಿದ್ದಾರೆ.

‘ಸಿ’ ಕಣ್ಣು ಕಾಣದ ಮಗಳು ಹಾಗೂ ಅಪ್ಪನ ನಡುವಿನ ಬಾಂಧವ್ಯದ ಬಗ್ಗೆ ಇದೆ. ಕಣ್ಣು ಕಾಣದ ಮಗಳ ಆಸೆಯನ್ನು ನೆರವೇರಿಸಲು ಅಪ್ಪ ಎಷ್ಟೆಲ್ಲ ಕಷ್ಟ ಪಡುತ್ತಾರೆ, ಮಗಳಿಗಾಗಿ ಅಪ್ಪನ ಹೋರಾಟದ ಕಥೆಯನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕಿರಣ್ ಸುಬ್ರಮಣಿ.

ನಿರ್ದೇಶಕ, ನಾಯಕ ಕಿರಣ್ ಅವರಿಗೆ ಇದು ಮೊದಲ ಸಿನಿಮಾ. ಹಾಗಂತ ಸಿನಿಮಾರಂಗ ಏನು ಹೊಸದೇನಲ್ಲ. ಈಗಾಗಲೇ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಇದೀಗ ಸಿ ಸಿನಿಮಾ ಮೂಲಕ ಮೊದಲ ಬಾರಿಗೆ ಸ್ವಾತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ.

ಸಿ ಸಿನಿಮಾ ತಂದೆ- ಮಗಳ ಬಾಂಧವ್ಯದ ಜೊತೆಗೆ ಮೆಡಿಕಲ್ ಮಾಫಿಯಾದ ಬಗ್ಗೆ ಇದೆ. ಎಜಿಎಸ್ ಪ್ರೊಡಕ್ಷನ್ ನಡಿ ನಿರ್ದೇಶಕ, ನಾಯಕ ಕಿರಣ್ ಅವರ ತಂದೆ ಸುಬ್ರಮಣಿ ಅವರು ನಿರ್ಮಾಣ ಮಾಡಿದ್ದಾರೆ. ಸದ್ಯ ಟೀಸರ್ ಮೂಲಕ ಗಮನ ಸೆಳೆಯುತ್ತಿರುವ ಸಿ ಸಿನಿಮಾ ಆಗಸ್ಟ್‌ 23ಕ್ಕೆ ತೆರೆಗೆ ಬರುತ್ತಿದೆ.

Categories
ಸಿನಿ ಸುದ್ದಿ

ಗೋಲ್ಡ್ ಸಾಂಗ್ ಗೆ ಭರ್ಜರಿ ರೆಸ್ಪಾನ್ಸ್: ಆಗಸ್ಟ್ 15ಕ್ಕೆ ಕೃಷ್ಣಂ ಪ್ರಣಯ ಸಖಿ ರಿಲೀಸ್

ಸದ್ಯ ಗೋಲ್ಡನ್ ಸಾಂಗ್ ಸುದ್ದಿ. ಅರೇ ಇದೇನಪ್ಪ ಗೋಲ್ಡನ್ ಸಾಂಗ್? ಈ ಪ್ರಶ್ನೆ ಎದುರಾಗಬಹುದು. ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾ ಆಗಸ್ಟ್ 15ಕ್ಕೆ ರಿಲೀಸ್ ಆಗುತ್ತಿದೆ. ಈಗಾಗಲೇ ಹಾಡುಗಳು ಸಖತ್ ವೈರಲ್ ಆಗಿವೆ. ಸಿನಿಮಾ ಕೂಡ ನಿರೀಕ್ಷೆ ಹೆಚ್ಚಿಸಿದೆ.

ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ, ಶ್ರೀನಿವಾಸರಾಜು ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿರುವ ಚಿತ್ರ. ಈ ಚಿತ್ರದಲ್ಲಿ ಮ್ಯಾಜಿಕಲ್ ಕಂಪೋಸರ್ ಎಂದೇ ಖ್ಯಾತರಾಗಿರುವ ಅರ್ಜುನ್ ಜನ್ಯ ಸಂಗೀತ ನೀಡಿರುವ ಏಳು ಹಾಡುಗಳಿದೆ. ಈಗಾಗಲೇ ನಾಲ್ಕು ಹಾಡುಗಳು ಬಿಡುಗಡೆಯಾಗಿದೆ‌. ಚಿತ್ರ ಆಗಸ್ಟ್ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಚಿತ್ರ ಬಿಡುಗಡೆಗೂ ಮುನ್ನ ಹಾಡುಗಳ ಮೂಲಕ “ಕೃಷ್ಣಂ ಪ್ರಣಯ ಸಖಿ” ಪ್ರೇಕ್ಷಕರ ಮನ ತಲುಪಿದೆ. ನಿರೀಕ್ಷೆಗೂ ಮೀರಿ ಹಾಡುಗಳು ಹಿಟ್ ಅಗಿದೆ. ಈ ಸಂಭ್ರಮವನ್ನು ಹಂಚಿಕೊಳ್ಳಲು ಚಿತ್ರದ ಆಡಿಯೋ ಹಕ್ಕು ಪಡೆದುಕೊಂಡಿರುವ ಆನಂದ್ ಆಡಿಯೋ ದವರು ಸಮಾರಂಭ ಆಯೋಜಿಸಿದ್ದರು. ಹಾಡುಗಳನ್ನು ಬರೆದಿರುವವರನ್ನು ಹಾಗೂ ಹಾಡಿದರವನ್ನು ಫಲಕ ನೀಡಿ ಸನ್ಮಾನಿಸಿದರು. ಗಾಯಕರಾದ ಚಂದನ್ ಶೆಟ್ಟಿ, ಜಸ್ಕರಣ್ ಸಿಂಗ್, ಗೀತರಚನೆಕಾರ ನಿಶಾನ್ ರೈ ಅವರನ್ನು ಹಾಗೂ ಚಿತ್ರತಂಡದ ಸದಸ್ಯರನ್ನು ಆನಂದ್ ಆಡಿಯೋ ಶ್ಯಾಮ್ ಮತ್ತು ಆನಂದ್ ಆತ್ಮೀಯವಾಗಿ ಸನ್ಮಾನಿಸಿದರು. ನಂತರ ಚಿತ್ರತಂಡದವರು ಮಾತನಾಡಿದರು.

ಇಂದು ನಾಲ್ಕನೇ ಹಾಡು ಬಿಡುಗಡೆಯಾಗಿದೆ ಎಂದು ಮಾತನಾಡಿದ ನಾಯಕ ಗಣೇಶ್, ಈವರೆಗೂ ಬಿಡುಗಡೆಯಾಗಿರುವ ಮೂರು ಹಾಡುಗಳು ನಿರೀಕ್ಷೆಗೂ ಮೀರಿ ಜನಪ್ರಿಯವಾಗಿದೆ‌. ಹಾಗಾಗಿ ಈ ಸಮಾರಂಭವನ್ನು ಆನಂದ್ ಆಡಿಯೋದವರು ಆಯೋಜಿಸಿದ್ದಾರೆ‌. ಅವರಿಗೆ ಧನ್ಯವಾದಗಳು. ಇತ್ತೀಚೆಗೆ ಹಾಡುಗಳು ಹಿಟ್ ಆಗುವುದು ಬಹಳ ಕಡಿಮೆ. ಮೊದಲೆಲ್ಲಾ ಆಡಿಯೋ ಹಿಟ್‍ ಅಂತ ಕಾರ್ಯಕ್ರಮ ಮಾಡುತ್ತಿದ್ದೆವು. ಇತ್ತೀಚೆಗೆ ಆಗಿರಲಿಲ್ಲ. ಮೂರನೇ ಹಾಡು ಯಶಸ್ವಿಯಾದಾಗ ಯಾಕೆ ಇಂಥದ್ದೊಂದು ಕಾರ್ಯಕ್ರಮ ಮಾಡಬಾರದು ಎಂದು ಆನಂದ್ ಆಡಿಯೋದವರು ಹೇಳುತ್ತಿದ್ದರು.

ಆನಂದ್ ಆಡಿಯೋದವರ ಜೊತೆಗೆ ನನ್ನದು ಬಹಳ ದೊಡ್ಡ ಸಂಬಂಧ. ನನ್ನ ಚಿತ್ರಜೀವನದ ಯಶಸ್ಸಿಗೆ ಸಂಗೀತ ಮಹತ್ವದ ಪಾತ್ರ ವಹಿಸುತ್ತದೆ ಮತ್ತು ಆ ಕ್ರೆಡಿಟ್‍ ಆನಂದ್‍ ಆಡಿಯೋದವರಿಗೂ ಸಲ್ಲಬೇಕು. ಈ ಚಿತ್ರದ ಆಡಿಯೋ ಹಕ್ಕುಗಳನ್ನು ಡಬ್ಬಲ್‍ ದುಡ್ಡು ಕೊಟ್ಟು ಆನಂದ್ ಆಡಿಯೋದವರು ಕೊಂಡಿದ್ದಾರೆ. ಮುಂದಿನ ಚಿತ್ರಕ್ಕೆ ಇನ್ನೂ ಡಬ್ಬಲ್‍ ದುಡ್ಡು ಕೊಡಲಿ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಪ್ರತಿಯೊಬ್ಬ ಗೀತರಚನೆಕಾರ, ಗಾಯಕರು ಎಲ್ಲರಿಗೂ ಧನ್ಯವಾದಗಳು. ಜಸ್ಕರಣ್ ಅವರು ವೇದಿಕೆ ಮೇಲೆ ನಿಂತು ಹಾಡಿದಾಗ ದೈವಿಕ ಭಾವನೆ ಮೂಡಿತು. ಇವರು ಯಾರೋ ನಮ್ಮ ತರಹದವರೇ ಅಂತನಿಸಿತು. ತುಂಬಾ ಚೆನ್ನಾಗಿ ಹಾಡಿದ್ದಾರೆ. ಅದರಲ್ಲೂ “ದ್ವಾಪರ” ಹಾಡಂತೂ ಸಮಾಜಿಕ ಜಾಲತಾಣಗಳಲ್ಲಿ ಬಹಳ ಫೇಮಸ್ ಆಗಿದೆ. ರೀಲ್ಸ್ ಮಾಡುತ್ತಿರುವವರ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿದೆ. ಹಾಡುಗಳ ಯಶಸ್ಸಿನ ಹೆಚ್ಚಿನ ಭಾಗದ ಕ್ರೆಡಿಟ್ ನಿರ್ದೇಶಕರಿಗೆ ಹೋಗಬೇಕು. ಏಕೆಂದರೆ ಸಂಗೀತ ನಿರ್ದೇಶಕ ಅರ್ಜುನ್‍ ಜನ್ಯ ಬಹಳ ಬ್ಯುಸಿ. ಅವರನ್ನು ಹಿಡಿಯೋದೇ ಕಷ್ಟ. ಮಧ್ಯಾಹ್ನದ ಊಟ ಆಯ್ತಾ ಎಂದು ಫೋನ್ ಮಾಡಿದರೆ, ರಾತ್ರಿ ವಾಪಸ್ಸು ಮಾಡುತ್ತಾರೆ. ಅಷ್ಟು ಬ್ಯುಸಿ. ಅವರಿಂದ ಇಷ್ಟು ಕೆಲಸ ತೆಗೆದಿದ್ದಾರೆ. ಒಂದೊಂದು ಹಾಡು ಸಹ ದೊಡ್ಡ ಹಿಟ್‍ ಆಗುತ್ತದೆ, ಆ ತರಹ ಮಾಡುತ್ತೀನಿ ಎಂದು ಹೇಳುತ್ತಿದ್ದರು. ಅದನ್ನು ನಿಜ ಮಾಡಿ ತೋರಿಸಿದ್ದಾರೆ ಎಂದರು.

ಅರ್ಜುನ್‍ ಜನ್ಯ ಅವರು ಮ್ಯಾಜಿಕಲ್‍ ಕಂಪೋಸರ್ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಚಿತ್ರ ಒಂದು ಸಂಗೀತಮಯ ಚಿತ್ರವಾಗಬೇಕು ಎಂಬ ಆಸೆ ನನಗಿತ್ತು. ಆದರೆ, ಹೀಗೇ ಆಗುತ್ತದೆ ಎಂದು ಹೇಳುವುದು ಕಷ್ಟ. ಅರ್ಜುನ್‍ ಬಹಳ ಬ್ಯುಸಿಯಾಗಿದ್ದಾರೆ. ಅದರಲ್ಲೂ ನಮಗೆ ಸಮಯ ಕೊಟ್ಟು ಈ ರೀತಿ ಜನಪ್ರಿಯ ಹಾಡುಗಳನ್ನು ಮಾಡಿಕೊಟ್ಟಿರುವುದು ಬಹಳ ಖುಷಿಯ ವಿಷಯ. ಚಿತ್ರದಲ್ಲಿ ಮೊದಲು ಒಂಬತ್ತು ಹಾಡುಗಳಿದ್ದವು. ಕೊನೆಗೆ ಕಡಿಮೆಯಾಗಿ, ಏಳು ಹಾಡುಗಳಿವೆ. ಎಲ್ಲಾ ಹಾಡುಗಳು ಹಿಟ್ ಆಗುತ್ತವೆ ಎಂಬ ನಂಬಿಕೆ ನನಗೆ ಮೊದಲ ದಿನದಿಂದಲೇ ಇತ್ತು. ಅದು ಪ್ರೂವ್‍ ಆಗಿದೆ. ಈ ವಿಷಯದಲ್ಲಿ ಅರ್ಜುನ್‍ ಜನ್ಯ ಅವರಿಗೆ ಧನ್ಯವಾದ ತಿಳಿಸಬೇಕು. ಈ ಹಾಡುಗಳನ್ನು ಪ್ರಮೋಟ್‍ ಮಾಡುತ್ತಿರುವ ಮತ್ತು ನನ್ನ ಮೇಲೆ ನಂಬಿಕೆ ಇಟ್ಟು ಚಿತ್ರಕ್ಕೆ ಹಣ ಹೂಡಿದ ನಿರ್ಮಾಪಕ ಪ್ರಶಾಂತ್‍ ಅವರಿಗೆ ಧನ್ಯವಾದಗಳು. ಈ ಚಿತ್ರ ಪ್ರಮುಖವಾಗಿ ಆಗುವುದಕ್ಕೆ ಗಣೇಶ್‍ ಕಾರಣ. ಅವರು ನನ್ನ ಮೇಲೆ ನಂಬಿಕೆ ಇಟ್ಟರು. ನನ್ನ ಜಾನರ್ ನಿಂದ ಆಚೆ ಬಂದು ಚಿತ್ರ ಮಾಡುವುದಕ್ಕೆ ಪ್ರೋತ್ಸಾಹ ಕೊಟ್ಟರು. ಪ್ರತಿ ಹಂತದಲ್ಲೂ ತೊಡಗಿಸಿಕೊಂಡರು. ‘ದ್ವಾಪರ’ವರೆಗೂ ಬೇರೆಬೇರೆ ರೀತಿಯ ಹಾಡುಗಳಿದ್ದವು. ಇನ್ನು ಮುಂದಿನ ಒಂದು ವಾರದಲ್ಲಿ ಮೆಲೋಡಿ ಹಾಡುಗಳು ಬರಲಿವೆ. ಈ ಚಿತ್ರಕ್ಕೆ ಟ್ರೇಲರ್ ಅವಶ್ಯಕತೆ ಇರಲಿಲ್ಲ ಎಂದು ಒಂದು ವರ್ಷದ ಹಿಂದೆ ಅನಿಸಿತ್ತು. ಇದೊಂದು ಮ್ಯೂಸಿಕಲ್‍ ಚಿತ್ರವಾದ್ದರಿಂದ, ಈ ಚಿತ್ರವನ್ನು ಹಾಡುಗಳಿಂದ ಮಾತ್ರ ಪ್ರಮೋಟ್‍ ಮಾಡುವುದು ನನ್ನ ಆಸೆ. ಹಾಗಾಗಿ, ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತಿಲ್ಲ. ಇದು ಈ ಚಿತ್ರಕ್ಕೆ ಮಾತ್ರ ಎಂದು ನಿರ್ದೇಶಕ ಶ್ರೀನಿವಾಸರಾಜು ತಿಳಿಸಿದರು.

ನಟಿ ಶರಣ್ಯ ಶೆಟ್ಟಿ, ಹಿರಿಯ ನಟ ರಾಮಕೃಷ್ಣ, ಕಾರ್ಯಕಾರಿ ನಿರ್ಮಾಪಕ ಶರತ್, ಗಾಯಕರಾದ ಚಂದನ್ ಶೆಟ್ಟಿ, ಜಸ್ಕರಣ್ ಸಿಂಗ್, ಹಾಡು ಬರೆದಿರುವ ನಿಶಾನ್ ರೈ ಹಾಗೂ ಆನಂದ್ ಆಡಿಯೋ ಸಂಸ್ಥೆಯ ಶ್ಯಾಮ್ ಮತ್ತು ಆನಂದ್ ಹಾಡುಗಳು ಗೆದ್ದಿರುವ ಆನಂದವನ್ನು ಮಾತಿನ ಮೂಲಕ ಹಂಚಿಕೊಂಡರು.

Categories
ಸಿನಿ ಸುದ್ದಿ

ಈ ವಾರ ಅಡವಿಕಟ್ಟೆ ರಿಲೀಸ್: ಇದು ಅಭಿಜಿತ್ ಆಕರ್ಷಣೆಯ ಸಿನಿಮಾ

ಅಡವಿಕಟ್ಟೆ ಈ ವಾರ ರಿಲೀಸ್ ಆಗುತ್ತಿರೋ ಚಿತ್ರ. ಈ ಸಿನಿಮಾದಲ್ಲಿ ಅಭಿಜಿತ್ ವಿಶೇಷ ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಉಮ ಎಸ್ ನಿರ್ಮಿಸಿರುವ, ಸಂಜೀವ್ ಗಾವಂಡಿ ನಿರ್ದೇಶನದ, ಹಿರಿಯನಟ ಆಭಿಜಿತ್ ಹಾಗೂ ನಾಗರಾಜು ಪ್ರಮುಖಪಾತ್ರದಲ್ಲಿ ನಟಿಸಿರುವ “ಅಡವಿಕಟ್ಟೆ” ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ‌ಹಾಗೂ ಹಾಡುಗಳು ಜನಪ್ರಿಯವಾಗಿದೆ.

ಸಸ್ಪೆನ್ಸ್ ಥ್ರಿಲ್ಲರ್ ಜತೆಗೆ ಹಾರಾರ್ ಜಾನಾರ್ ನ ಈ ಚಿತ್ರಕ್ಕೆ ಗೋಕಾಕ್ ನಗರದ ಸುತ್ತಮುತ್ತ ಹೆಚ್ಚಿನ ಚಿತ್ರೀಕರಣ ನಡೆದಿದೆ.

ಎಸ್ ಎನ್ ಈಶ್ವರ್ ಸಂಗೀತ ನಿರ್ದೇಶನ, ವೀರೇಶ್ ಛಾಯಾಗ್ರಹಣ, ಆದಿ ಆದರ್ಶ್ ಸಂಕಲನ, ನಾಗೇಶ್ ನೃತ್ಯ ನಿರ್ದೇಶನ ಹಾಗೂ ಸಂಜೀವ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಫ್ಯಾಮಿಲಿ ಸ್ಟಾರ್ ಅಭಿಜಿತ್, ನಾಗರಾಜು, ಶಾಂತಿ, ಯಶ್ ಶಂಕರ್, ಅನುಪ್ರೇಮ, ರವಿಚಂದ್ರನ್ ಆರ್, ಮಂಜುಳಾ ರೆಡ್ಡಿ “ಅಡವಿಕಟ್ಟೆ” ಚಿತ್ರದಲ್ಲಿ ಅಭಿನಯಿಸಿದ್ದಾರೆ.

Categories
ಸಿನಿ ಸುದ್ದಿ

ಪೌಡರ್ ಹಚ್ಕೊಳಕೆ ರೆಡಿಯಾಗಿ: ಆಗಸ್ಟ್ 23ಕ್ಕೆ ರಿಲೀಸ್

ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆಆರ್ ಜಿ ನಿರ್ಮಾಣದ ಬಹುನಿರೀಕ್ಷಿತ ಸಿನಿಮಾ ಪೌಂಡರ್. ಟೀಸರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರ ಆಗಸ್ಟ್ 15ರಂದು ತೆರೆಗೆ ಬರಲು ಸಿದ್ಧವಾಗಿತ್ತು. ಅದಕ್ಕಾಗಿ ಚಿತ್ರತಂಡ ಭರದ ಪ್ರಚಾರ ಕಾರ್ಯ ಕೂಡ ನಡೆಸಿತ್ತು. ಆದರೆ ಈಗ ಪೌಡರ್ ಸಿನಿಮಾ ಬಿಡುಗಡೆ ಮುಂದೂಡಲಾಗಿದೆ. ಕನ್ನಡ ಸಿನಿಮಾಗಳ ಉಳಿವಿಗಾಗಿ ಕೆಆರ್ ಜಿ ಸಂಸ್ಥೆ ಈ ನಿರ್ಣಯ ಕೈಗೊಂಡಿದೆ.

ಆಗಸ್ಟ್ 15ರಂದು ಸಾಕಷ್ಟು ಸಿನಿಮಾಗಳು ತೆರೆಗೆ ಬರುತ್ತಿವೆ. ಕನ್ನಡ ಸಿನಿಮಾಗಳ ಜೊತೆಗೆ ಪರಭಾಷಾ ಸೇರಿ ಹತ್ತರಿಂದ ಹದಿನೈದು ಸಿನಿಮಾ ಬಿಡುಗಡೆಯಾಗುತ್ತಿವೆ. ಹೀಗಾಗಿ ಕೆಆರ್ ಜಿ ನಿರ್ಮಾಣ ಸಂಸ್ಥೆ ಆಗಸ್ಟ್ 15ರ ಬದಲಿಗೆ ಆಗಸ್ಟ್ 23ಕ್ಕೆ ಸಿನಿಮಾವನ್ನು ತೆರೆಗೆ ತರಲು ಸಜ್ಜಾಗಿದೆ. ಒಂದೇ ದಿನ ಸಾಕಷ್ಟು ಸಿನಿಮಾಗಳು ಬಿಡುಗಡೆಯಾದರೆ ಬಾಕ್ಸಾಫೀಸ್ ನಲ್ಲಿ ಕ್ಲ್ಯಾಷ್ ಆಗಲಿದೆ. ಕಲೆಕ್ಷನ್ ಮೇಲೆಯೂ ಹೊಡೆತ ಬೀಳಲಿದೆ. ಮೊದಲೇ ಕನ್ನಡ ಚಿತ್ರರಂಗದ ಸ್ಥಿತಿ ಶೋಚನೀಯವಾಗಿದೆ. ಇಂತಹ ಸಂದರ್ಭದಲ್ಲಿ ಬಾಕ್ಸಾಫೀಸ್ ವಾರ್ ಬೇಡ ಎಂಬುದನ್ನು ಅರಿತ ಕೆಆರ್ ಜಿ ಸಂಸ್ಥಾಪಕಾರದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಪೌಡರ್ ರಿಲೀಸ್ ದಿನಾಂಕವನ್ನು ಮುಂಡೂಡಿದ್ದಾರೆ.

ಜನಾರ್ದನ್ ಚಿಕ್ಕಣ್ಣ ನಿರ್ದೇಶನದ “ಪೌಡರ್” ಚಿತ್ರದಲ್ಲಿ ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಅನಿರುದ್ಧ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿರುತ್ತಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದು, ಕಾರ್ತಿಕ್ ಗೌಡ, ಯೋಗಿ ಜಿ ರಾಜ್ ಮತ್ತು ವಿಜಯ್ ಸುಬ್ರಹ್ಮಣ್ಯಂ ಕೆ.ಆರ್.ಜಿ.ಸ್ಟೂಡಿಯೋಸ್‌ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್.ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುತ್ತಾರೆ.

Categories
ಸಿನಿ ಸುದ್ದಿ

ಫೈರ್ ಫ್ಲೈ ಆಡಿಯೋ ಹಕ್ಕು ದಾಖಲೆ ಮೊತ್ತ!

ಫೈರ್ ಫ್ಲೈ’ ಮ್ಯೂಸಿಕಲ್ ಪಯಣಕ್ಕೆ ರೆಡಿನಾ..? ದಾಖಲೆ ಮೊತ್ತಕ್ಕೆ ಮಾರಾಟವಾಯ್ತು ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರದ ಆಡಿಯೋ ಹಕ್ಕು

ಕನ್ನಡದ ಬಹುನಿರೀಕ್ಷಿತ ಸಿನಿಮಾ ಫೈರ್ ಫ್ಲೈ ಬಹಳ ವಿಶೇಷವಾಗಿದೆ. ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ ಎಂಬ ಕಾರಣದ ಜೊತೆಗೆ ಹೆಸರಾಂತ ತಾರೆಯರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಚ್ಯುತ್ ಕುಮಾರ್ ಹಾಗೂ ಸುಧಾರಾಣಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ನವ ನಾಯಕ ಮತ್ತು ನಿರ್ದೇಶಕ ವಂಶಿ ಸಾರಥ್ಯದಲ್ಲಿ ಮೂಡಿ ಬರ್ತಿರುವ ಫೈರ್ ಫ್ಲೈ ಸಿನಿಮಾದ ಆಡಿಯೋ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.

ವಂಶಿ ಚೊಚ್ಚಲ ಬಾರಿಗೆ ನಿರ್ದೇಶಿಸಿ ನಟಿಸುತ್ತಿರುವ ಫೈರ್ ಫ್ಲೈ ಸಿನಿಮಾಗೆ ಚರಣ್ ರಾಜ್ ಅದ್ಭುತ ಸಂಗೀತ ಒದಗಿಸಿದ್ದಾರೆ. ಶೀಘ್ರದಲ್ಲಿಯೇ ಚರಣ್ ಟ್ಯೂನ್ ಹಾಕಿರುವ ಹಾಡುಗಳ ಹಬ್ಬ ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಶುರುವಾಗಲಿದೆ. ಆನಂದ್ ಆಡಿಯೋ ಸಂಸ್ಥೆ ಒಂದೊಳ್ಳೆ ಮೊತ್ತಕ್ಕೆ ಫೈರ್ ಫ್ಲೈ ಆಡಿಯೋ ಹಕ್ಕನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

‘ಫೈರ್ ಫ್ಲೈ’ ಸಿನಿಮಾದಲ್ಲಿ ವಂಶಿ ಅವರು ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಅಲ್ಲದೇ, ಅವರೇ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ‘ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್​ ಅವರ ಪುತ್ರಿ ನಿವೇದಿತಾ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮೂಲಕ ವಂಶಿ ಅವರು ಸ್ವತಂತ್ರ ನಿರ್ದೇಶಕರಾಗಿ ಹಾಗೂ ಪೂರ್ಣಪ್ರಮಾಣದ ಹೀರೋ ಆಗಿ ಪ್ರೇಕ್ಷಕರರ ಮುಂದೆ ಬರಲಿದ್ದಾರೆ.

ಈ ಚಿತ್ರಕ್ಕೆ ಜಯ್ ರಾಮ್ ಅವರು ಸಹ-ನಿರ್ದೇಶಕನ ಮಾಡುತ್ತಿದ್ದಾರೆ. ಅಭಿಲಾಷ್ ಕಳತ್ತಿ ಅವರ ಛಾಯಾಗ್ರಹಣ, ಚರಣ್ ರಾಜ್ ಅವರ ಸಂಗೀತ ನಿರ್ದೇಶನ, ರಘು ನಿಡುವಳ್ಳಿ ಅವರ ಸಂಭಾಷಣೆ ಈ ಸಿನಿಮಾಗಿದೆ. ಬೆಳಕಿನ ಹಬ್ಬ ದೀಪಾವಳಿಗೆ ಫೈರ್ ಫ್ಲೈ ಸಿನಿಮಾ ಥಿಯೇಟರ್ ಬೆಳಗಲಿದೆ.

Categories
ಸಿನಿ ಸುದ್ದಿ

ಸೋಶಿಯಲ್ ಮೀಡಿಯಾದಲ್ಲಿ ದ್ವಾಪರ‌ ದಾಟುತ ಹಾಡು ದಾಖಲೆ:

ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ, ಶ್ರೀನಿವಾಸರಾಜು ಅವರ ನಿರ್ದೇಶನದದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕಷ್ಣಂ ಪ್ರಣಯ ಸಖಿ” ಚಿತ್ರದ “ಮೈ ಮ್ಯಾರೇಜ್ ಇಸ್ ಫಿಕ್ಸ್ಡ್”, “ಚಿನ್ನಮ್ಮ” ಹಾಗೂ “ದ್ವಾಪರ ದಾಟುತ” ಮೂರು ಹಾಡುಗಳು ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾದ ಡಾ.ವಿ.ನಾಗೇಂದ್ರ ಪ್ರಸಾದ್ ಬರೆದು, “ಸರಿಗಮಪ” ಖ್ಯಾತಿಯ ಜಸಕರಣ್ ಸಿಂಗ್ ಹಾಡಿರುವ “ದ್ವಾಪರ ದಾಟುತ” ಹಾಡು ಟ್ವಿಟರ್, ಯೂಟ್ಯೂಬ್ ಹಾಗೂ ಇನ್ಸ್ಟಾ ರೀಲ್ಸ್ ಗಳಲ್ಲಿ ಭಾರಿ ಟ್ರೆಂಡ್ ಹುಟ್ಟುಹಾಕಿದೆ.

ಯೂಟ್ಯೂಬ್ ನಲ್ಲಿ ಎಂಟು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿರುವ ಈ ಹಾಡು ಇನ್ಸ್ಟಾ ರೀಲ್ಸ್ ನಲ್ಲಿ 2 ನೇ ಸ್ಥಾನದಲ್ಲಿದೆ. ಟ್ವಿಟರ್ ನಲ್ಲೂ ಹೊಸ ದಾಖಲೆ ಬರೆದಿದೆ. ಟ್ವಿಟರ್ ಹಾಗೂ ಇನ್ಸ್ಟಾ ರೀಲ್ಸ್ ನಲ್ಲಿ ಈ ರೀತಿಯ ಜನಪ್ರಿಯತೆ ಸಿಗುತ್ತಿರುವ ಕನ್ನಡದ ಮೊದಲ ಹಾಡು ಇದಾಗಿದೆ ಎಂದು ನಿರ್ದೇಶಕ ಶ್ರೀನಿವಾಸರಾಜು ತಿಳಿಸಿದ್ದಾರೆ.

ಹಾಡು ಬರೆದಿರುವ ನಾಗೇಂದ್ರ ಪ್ರಸಾದ್ ಸಹ ಈವರೆಗೂ ನಾನು ಬರೆದಿರುವ ಹಾಡುಗಳಲ್ಲಿ ಇದು ನನ್ನ ಮೆಚ್ಚುಗೆಯ ಹಾಡು ಎನ್ನುತ್ತಾರೆ.

“ಮುಂಗಾರು ಮಳೆ” ಯ ನಂತರ “ಕೃಷ್ಣಂ ಪ್ರಣಯ ಸಖಿ” ಚಿತ್ರದ ಹಾಡುಗಳಿಗೆ ಸಿಗುತ್ತಿರುವ ಜನಪ್ರಿಯತೆಗೆ ಮನ ತುಂಬಿ ಬಂದಿದೆ ಎಂದು ನಾಯಕ ಗಣೇಶ್ ತಿಳಿಸಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಮೂರು ಹಾಡುಗಳು‌ ಯಶಸ್ವಿಯಾಗಿರುವುದಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಆಡಿಯೋ ಹಕ್ಕು ಪಡಿದಿರುವ ಆನಂದ್ ಆಡಿಯೋದವರು ಆನಂದ ಪಟ್ಟಿದ್ದಾರೆ‌. ಈ ಸಂಭ್ರಮದ ಸಮಯದಲ್ಲಿ ನಿರ್ಮಾಪಕರು ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಆಗಸ್ಟ್ 15 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರವನ್ನು ವೀಕ್ಷಿಸಲು ಗೋಲ್ಡನ್ ಸ್ಟಾರ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Categories
ಸಿನಿ ಸುದ್ದಿ

ಪೆಪೆ ಸಿನಿಮಾಗೆ ಎ ಸರ್ಟಿಫಿಕೇಟ್: ಇದು ವಿನಯ್ ರಾಜಕುಮಾರ್ ಚಿತ್ರ

ಒಂದು ಸರಳ ಪ್ರೇಮಕಥೆ ಅಭೂತಪೂರ್ವ ಯಶಸ್ಸಿನ ಬಳಿಕ ವಿನಯ್ ರಾಜ್ ಕುಮಾರ್ ನಟಿಸಿರುವ ಬಹುನಿರೀಕ್ಷಿತ ಚಿತ್ರ ಪೆಪೆ. ಟೈಟಲ್ ಹಾಗೂ ಟೀಸರ್ ನಿಂದಲೇ ಕುತೂಹಲ ಹೆಚ್ಚಿಸಿರುವ ಈ ಸಿನಿಮಾ ಈಗ ಸೆನ್ಸಾರ್ ಪಾಸಾಗಿದೆ. ಸೆನ್ಸಾರ್ ಮಂಡಳಿಯಿಂದ ಪೆಪೆಗೆ ಎ ಸರ್ಟಿಫಿಕೇಟ್ ಸಿಕ್ಕಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

ಕ್ಲಾಸ್ ಸಿನಿಮಾಗಳ ಮೂಲಕ ಕನ್ನಡ ಸಿನಿಪ್ರೇಮಿಗಳನ್ನು ರಂಜಿಸಿದ್ದ ವಿನಯ್ ರಾಜ್ ಕುಮಾರ್ ಪೆಪೆಗಾಗಿ ಮಾಸ್ ಅವತಾರ ತಾಳಿದ್ದಾರೆ. ಯುವ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ನಿರ್ದೇಶನದಲ್ಲಿ ವಿನಯ್ ರಗಡ್‌ ಲುಕ್‌ ಅಬ್ಬರಿಸಿದ್ದಾರೆ. ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಚಿತ್ರ ಇದಾಗಿದ್ದು, ಇದುವರೆಗೂ ಈ ರೀತಿಯ ಪಾತ್ರದಲ್ಲಿ ವಿನಯ್ ಕಾಣಿಸಿಕೊಂಡಿಲ್ಲ.

ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸಿದ್ದು, ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್‌, ನವೀನ್‌ ಡಿ. ಪಡೀಲ್‌ರನ್ನು ಒಳಗೊಂಡ ತಾರಾಬಳಗವಿದೆ. ‘ಪೆಪೆ’ ಚಿತ್ರಕ್ಕೆ ಅಭಿಷೇಕ್‌ ಜಿ. ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ನಿರ್ದೇಶನವಿದೆ.

ಡಾ. ರವಿವರ್ಮ, ಚೇತನ್‌ ಡಿಸೋಜಾ, ಡಿಫ್ರೆಂಟ್‌ ಡ್ಯಾನಿ, ನರಸಿಂಹ ಅವರ ತಂಡ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರಗಳಲ್ಲಿ‘ಪೆಪೆ’ ಸಿನಿಮಾವನ್ನು ಸೆರೆಹಿಡಿಯಲಾಗಿದೆ. ಉದಯ್‌ ಸಿನಿ ವೆಂಚರ್‌, ದೀಪ ಫಿಲ್ಮ್ಸ್ ಬ್ಯಾನರ್‌ನಡಿ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Categories
ಸಿನಿ ಸುದ್ದಿ

ಅಂದು ಚಿನ್ನಾರಿ ಮುತ್ತ ಇಂದು ಜೀನಿಯಸ್ ಮುತ್ತ: ಇದು ನಾಗಿಣಿ ಭರಣ ಚಿತ್ರ

ಅದು ಪತಿ ಸಿನಿಮಾ. ಹೆಸರು ಚಿನ್ನಾರಿ ಮುತ್ತ. ಇದು ಪತ್ನಿ ಸಿನಿಮಾ ಹೆಸರು ಜೀನಿಯಸ್ ಮುತ್ತ. ಆ ಚಿನ್ನಾರಿ ಮುತ್ತನಿಗೆ 31 ವರ್ಷ. ಈ ಜೀನಿಯಸ್ ಮುತ್ತನಿಗೆ ಬಿಡುಗಡೆಯ ಹರ್ಷ. ಹೌದು ಇದು ಹೊಸ ಸಿನಿಮಾ. ನಾಗಿಣಿ ಭರಣ ಅವರ ಮೊದಲ ಪ್ರಯತ್ನ ಇದು.

ಅಂತೂ ಟಿ.ಎಸ್. ನಾಗಾಭರಣ ಅವರ ಪತ್ನಿ ನಾಗಿಣಿ ಭರಣ ನಿರ್ದೇಶನದ ಮೊದಲ ಚಿತ್ರ “ಜೀನಿಯಸ್ ಮುತ್ತ” ತೆರೆಗೆ ಬರಲು ಸಿದ್ದವಾಗಿದೆ. ಆಗಸ್ಟ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ಜಿ.ಎಸ್ ಲತಾ ಜೈಪ್ರಕಾಶ್ ನಿರ್ಮಾಣದ ಈ ಚಿತ್ರದಲ್ಲಿ “ಜೀನಿಯಸ್ ಮುತ್ತ” ನಾಗಿ ಮಾಸ್ಟರ್ ಶ್ರೇಯಸ್ಸ್ ಜೈಪ್ರಕಾಶ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ “ಚಿನ್ನಾರಿಮುತ್ತ”ನಾಗಿ ಮೆಚ್ಚುಗೆ ಪಡೆದಿರುವ ವಿಜಯ ರಾಘವೇಂದ್ರ ಅಭಿನಯಿಸಿದ್ದಾರೆ.

ನನಗೆ ಹಲವು ವರ್ಷಗಳಿಂದ ನಿರ್ದೇಶನ ಮಾಡುವಂತೆ ಎಲ್ಲರೂ ಹೇಳುತ್ತಿದ್ದರು. ಆಗಿರಲಿಲ್ಲ. ಆದರೆ ಲತಾ ಅವರು ತಮ್ಮ ಮಗನನ್ನು ಚಿತ್ರರಂಗಕ್ಕೆ ಪ್ರವೇಶಿಸಬೇಕೆಂದುಕೊಂಡಿದ್ದೇನೆ. ಆ ಚಿತ್ರವನ್ನು ನೀವೇ ನಿರ್ದೇಶಿಸಬೇಕೆಂದರು. ಅವರ ಒತ್ತಾಯಕ್ಕೆ ಮಣಿದು ನನ್ನ ಸ್ನೇಹಿತರ ತಂಡದೊಂದಿಗೆ ಸೇರಿ ಈ ಚಿತ್ರದ ಕಥೆ ಸಿದ್ದ ಮಾಡಿದೆ.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಹೆಚ್ಚಾಗಿ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆದಿದೆ. ಮಾಸ್ಟರ್ ಶ್ರೇಯಸ್ಸ್, ವಿಜಯ ರಾಘವೇಂದ್ರ, ಟಿ.ಎಸ್.ನಾಗಾಭರಣ, ಗಿರಿಜಾ ಲೋಕೇಶ್,ಸುಂದರರಾಜ್, ಪನ್ನಗಾಭರಣ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಒಂದು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಾಗೂ ವಿದೇಶಗಳಲ್ಲಿ ನಮ್ಮ ಚಿತ್ರದ ಪ್ರದರ್ಶನವಾಗಿದೆ. ನೋಡಿದವರು ಮೆಚ್ಚುಗೆ ಮಾತುಗಳಾಡಿದ್ದಾರೆ. ಆಗಸ್ಟ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ದೇಶಕಿ ನಾಗಿಣಿ ಭರಣ ತಿಳಿಸಿದರು.

ನಾಗಿಣಿ ಅವರು ಈಗ ಸ್ವತಂತ್ರ ನಿರ್ದೇಶನ ಮಾಡಿದರಷ್ಟೇ. ಆದರೆ ನನ್ನ ಎಲ್ಲಾ ಸಿನಿಮಾ, ಧಾರಾವಾಹಿಗಳ ನಿರ್ದೇಶನಕ್ಕೆ ಹಿಂದಿನಿಂದ ಸಹಕಾರ ನೀಡುತ್ತಿದ್ದರು. ಈಗ ಮೊದಲ ಚಿತ್ರ ನಿರ್ದೇಶನ ಮಾಡಿದ್ದಾರೆ.ನಾನು ಈ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದೇನೆ ಎಂದರು ಟಿ.ಎಸ್ ನಾಗಾಭರಣ.

ನಾನು ಭರಣ ಸರ್ ಅವರ ಬಳಿ ನಟನೆ ಕಲಿತಿದ್ದೇನೆ. ಆನಂತರ ಅಮ್ಮನಿಗೆ ನಾನು ನಟಿಸಬೇಕೆಂದು ಆಸೆಯಾಯಿತು. ಈ ಚಿತ್ರದಲ್ಲಿ “ಜೀನಿಯಸ್ ಮುತ್ತ”ನಾಗಿ ಅಭಿನಯಿಸಿದ್ದೇನೆ. ಅವಕಾಶ ನೀಡಿದ ಅಮ್ಮನಿಗೆ ಹಾಗೂ ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು ಮಾಸ್ಟರ್ ಶ್ರೇಯಸ್.

ನಾನು ಯಾವಾಗಲೂ ನಾಗಾಭರಣ್ ಸರ್ ಅವರಿಗೆ ಆಬಾರಿ. ಏಕೆಂದರೆ ನನ್ನನ್ನು ಎಲ್ಲರು ವಿಜಯ ರಾಘವೇಂದ್ರ ಅನ್ನುವುದಕ್ಕಿಂತ ಚಿನ್ನಾರಿಮುತ್ತ ಎನ್ನುವುದೇ ಹೆಚ್ಚು. ಅಂತಹ ಸೂಪರ್ ಹಿಟ್ ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿದವರು ನಾಗಾಭರಣ್ ಸರ್. ಈಗ ನಾಗಿಣಿ ಭರಣ ಅವರ ಮೊದಲ ನಿರ್ದೇಶನದಲ್ಲೂ ನಾನು ನಟಿಸಿರುವುದು ಖುಷಿಯಾಗಿದೆ ಎಂದು ವಿಜಯ ರಾಘವೇಂದ್ರ ತಿಳಿಸಿದರು.

ನಾಗಿಣಿ ಭರಣ ಅವರು ನನಗೆ ಹತ್ತು ವರ್ಷಗಳ ಪರಿಚಯ. ನನ್ನ ಮಗನಿಗಾಗಿ ಒಂದೊಳ್ಳೆ ಕಥೆ ಮಾಡಿ ನೀವೇ ನಿರ್ದೇಶನ ಮಾಡಬೇಕೆಂದು ನಾಗಿಣಿ ಭರಣ ಅವರ ಬಳಿ ಹೇಳಿದೆ. ಅವರು ಒಳ್ಳೆಯ ಕಥೆ ಸಿದ್ದ ಮಾಡಿಕೊಂಡು ನನಗೆ ಕಥೆ ಹೇಳಿದರು. ನಂತರ “ಜೀನಿಯಸ್ ಮುತ್ತ” ಚಿತ್ರ ಆರಂಭವಾಯಿತು. ಈಗ ಬಿಡುಗಡೆ ಹಂತ ತಲುಲಿದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕಿ ಲತಾ ಜೈಪ್ರಕಾಶ್.

ಚಿತ್ರದಲ್ಲಿ ನಟಿಸಿರುವ ಗಿರಿಜಾ ಲೋಕೇಶ್, ಪನ್ನಗಾಭರಣ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಂಗೀತದ ಬಗ್ಗೆ ಬಾಪು ಪದ್ಮನಾಭ ಮಾಹಿತಿ ನೀಡಿದರು.ಚಿತ್ರತಂಡದ ಅನೇಕ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಗುಂಮ್ಟಿ ಎಂಬ ಕುಡುಬಿ ಜನ ಜೀವನದ ವಿಶೇಷ ಚಿತ್ರ : ಹೊರಬಂತು ಅರ್ಥಪೂರ್ಣ ಗೀತೆ

ಈಗಾಗಲೇ ತನ್ನ ಶೀರ್ಷಿಕೆ ಮತ್ತು ಕಥಾಹಂದರ ಮೂಲಕ ಸಿನಿ ಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ ‘ಗುಂಮ್ಟಿ’ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ‘ಗುಂಮ್ಟಿ’ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಸುಮಧುರ ಗೀತೆಯೊಂದನ್ನು ಬಿಡುಗಡೆ ಮಾಡಿದೆ.

‘ಹಾಡುವ ಹಕ್ಕಿ ಹಾಡುತೈತಿ ಮನುಸಾ… ಕಾಯಕ ಮಾಡಿ ಕಾಣೋ ನೀನು ಕನಸಾ…’ ಎಂಬ ಸಾಲುಗಳಿಂದ ಆರಂಭವಾಗುವ ‘ಗುಂಮ್ಟಿ’ ಚಿತ್ರದ ಈ ಗೀತೆಗೆ ಮೆಹಬೂಬ್ ಸಾಬ್ ಧ್ವನಿಯಾಗಿದ್ದು, ಡೊಂಡಿ ಮೋಹನ್ ಸಾಹಿತ್ಯ ರಚಿಸಿ, ಸಂಗೀತ ಸಂಯೋಜಿಸಿದ್ದಾರೆ.

ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ‘ಕತ್ತಲೆ ಕೋಣೆ’ ಮತ್ತು ‘ಇನಾಮ್ದಾರ್’ ಸಿನಿಮಾಗಳನ್ನು ನಿರ್ದೇಶಿಸಿ ಕಂಟೆಂಟ್ ಸಿನಿಮಾ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಂದೇಶದ ಶೆಟ್ಟಿ ಆಜ್ರಿ, ‘ಗುಂಮ್ಟಿ’ ಸಿನೆಮಾಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದು, ಜೊತೆಗೆ ತೆರೆಮೇಲೆ ನಾಯಕ ನಟನಾಗಿಯೂ ಕಾಣಿಸಿಕೊಂಡಿದ್ದಾರೆ.

‘ಗುಂಮ್ಟಿ’ ಹಾಡಿನ ಬಗ್ಗೆ ಮತ್ತು ‘ಗುಂಮ್ಟಿ’ ಚಿತ್ರದ ಬಗ್ಗೆ ತಂಡ ಹೇಳಿದ್ದಿಷ್ಟು.
ನಿರ್ದೇಶಕ ಕಂ ನಾಯಕ ನಟ ಸಂದೇಶ್ ಶೆಟ್ಟಿ ಆಜ್ರಿ, ‘ಇದೊಂದು ಕಲಾತ್ಮಕ ಸಿನೆಮಾವಾಗಿದ್ದು, ಕರ್ನಾಟಕದ ಕರಾವಳಿ ತೀರದ ಕುಡುಬಿ ಜನಾಂಗದ ಕಥೆಯನ್ನು ತೆರೆಮೇಲೆ ಹೇಳಲು ಹೊರಟಿದ್ದೇವೆೆ.

‘ಗುಂಮ್ಟಿ’ ಎಂಬುದು ಕುಡುಬಿ ಸಮುದಾಯಕ ಕಲಾಪ್ರಾಕಾರದ ಸಾಂಪ್ರದಾಯಿಕ ವಾದ್ಯವಾಗಿದ್ದು, ಅದನ್ನೇ ಸಿನೆಮಾದ ಟೈಟಲ್ ಆಗಿ ಇಟ್ಟುಕೊಂಡಿದ್ದೇವೆ. ಕುಡುಬಿ ಜನಾಂಗದ ಸಂಪ್ರದಾಯ, ಆಚಾರ-ವಿಚಾರ, ಬದುಕು ಮತ್ತು ಆಧುನಿಕತೆಯ ನಡುವಿನ ಸಂಘರ್ಷ ‘ಗುಂಮ್ಟಿ’ ಸಿನಿಮಾದಲ್ಲಿ ಅನಾವರಣವಾಗಲಿದೆ’ ಎಂದು ವಿವರಣೆ ನೀಡಿದರು.

‘ಗುಂಮ್ಟಿ’ ಸಿನೆಮಾದಲ್ಲಿ ವೈಷ್ಣವಿ ನಾಡಿಗ್ ನಾಯಕಿಯಾಗಿ ಮಲ್ಲಿ ಎಂಬ ಹೆಸರಿನ ಕುಡುಬಿ ಸಮುದಾಯದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

‘ತಸ್ಮೈ ಪ್ರೊಡಕ್ಷನ್ಸ್’ ಮತ್ತು ‘ಜ್ಯೋತಿ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಜಂಟಿಯಾಗಿ ನಿರ್ಮಾಣವಾಗುತ್ತಿರುವ ‘ಗುಂಮ್ಟಿ’ ಸಿನಿಮಾವನ್ನು ವಿಕಾಸ್ ಎಸ್. ಶೆಟ್ಟಿ ನಿರ್ಮಿಸುತ್ತಿದ್ದಾರೆ. ‘ಗುಂಮ್ಟಿ’ ಚಿತ್ರಕ್ಕೆ ಅನೀಶ್ ಡಿಸೋಜಾ ಛಾಯಾಗ್ರಹಣ, ಶಿವರಾಜ ಮೇಹು ಸಂಕಲನವಿದೆ.

‘ಗುಂಮ್ಟಿ’ ಹಾಡಿನ ಬಿಡುಗಡೆ ವೇಳೆ ಹಾಜರಿದ್ದ ಚಿತ್ರದ ಕಲಾವಿದರು, ತಂತ್ರಜ್ಞರು ಚಿತ್ರದ ಕುರಿತು ತಮ್ಮ ಅನಿಸಿಕೆ, ಅಭಿಪ್ರಾಯ, ಅನುಭವಗಳನ್ನು ಹಂಚಿಕೊಂಡರು.

ಇನ್ನು ‘ಗುಂಮ್ಟಿ’ ಸಿನೆಮಾವನ್ನು ಉಡುಪಿ, ಕುಂದಾಪುರ, ಕಾರವಾರ, ಶಿರಸಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಹಾರಾಷ್ಟ್ರದ ಸೋಲಾಪುರ ಹೀಗೆ ಕರಾವಳಿ-ಮಲೆನಾಡು ಮತ್ತು ಪಶ್ಚಿಮ ಘಟ್ಟದ ಸುತ್ತಮುತ್ತ ಸುಮಾರು 30ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.

ಸದ್ಯ ಯಶಸ್ವಿಯಾಗಿ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಗುಂಮ್ಟಿ’ ಸೆನ್ಸಾರ್ ಮುಂದಿದೆ. ಇದೀಗ ಹಾಡಿನ ಬಿಡುಗಡೆ ಮೂಲಕ ‘ಗುಂಮ್ಟಿ’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ ಶೀಘ್ರದಲ್ಲಿಯೇ ‘ಗುಂಮ್ಟಿ’ಯನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

Categories
ಸಿನಿ ಸುದ್ದಿ

ಚಿತ್ರಮಂದಿರಕ್ಕೆ ಭೀಮ ಬಲ! ಆಗಸ್ಟ್ 9ಕ್ಕೆ ರಿಲೀಸ್

ಈಗಾಗಲೇ ತನ್ನ ಹಾಡುಗಳ ಮೂಲಕ ಬಾರಿ ಸದ್ದನ್ನ ಮಾಡಿರುವ “ಭೀಮ” ಚಿತ್ರವು ಸೆನ್ಸರ್ ನಿಂದ ಎ ಸರ್ಟಿಫಿಕೇಟ್ ಪಡೆದುಕೊಂಡು , ಆಗಸ್ಟ್ 9 ಕ್ಕೆ ಚಿತ್ರವನ್ನ ಬಿಡುಗಡೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಚಿತ್ರದ ಹಾಡುಗಳನ್ನು ಪ್ರದರ್ಶಿಸಲಾಗಿದೆ. ವಿಶೇಷ ಅಂದರೆ, ಈ ಚಿತ್ರದಲ್ಲಿ ಬುಡಕಟ್ಟು ಜನಾಂಗದವರ ಹಾಡಿರುವ ಒಂದು ಹಾಡನ್ನು ಬಳಸಿಕೊಳ್ಳಲಾಗಿದ್ದು , ಆ ಹಾಡನ್ನು ಸೇರಿದಂತೆ ಮತ್ತಷ್ಟು ಜಾನಪದ ಶೈಲಿಯ ಬೇರೆ ಬೇರೆ ಹಾಡುಗಳನ್ನು ಆ ಜನಾಂಗದ ಪ್ರತಿಭೆಗಳನ್ನ ಕರೆಸಿ ವೇದಿಕೆಯ ಮೇಲೆ ಹಾಡಿಸಿದ್ದು ವಿಶೇಷವಾಗಿತ್ತು. ಪ್ರಸ್ತುತ ಚಿತ್ರೋದ್ಯಮದ ಪರಿಸ್ಥಿತಿ, ಸಕ್ಸಸ್ ಕಾಣದ ಚಿತ್ರಗಳ ನಡುವೆ ಹೊಸ ಚೈತನ್ಯ ನೀಡಲು ಬಲ ಭೀಮನಾಗಿ ಬರಲು ಸಿದ್ಧವಾಗಿರುವ ಚಿತ್ರ ಇದಾಗಿದೆ.

ಈ ಚಿತ್ರದ ನಿರ್ದೇಶಕ , ನಟ , ವಿಜಯ್ ಕುಮಾರ್ (ದುನಿಯಾ ವಿಜಯ್) ಮಾತನಾಡಿ, ಈ ಚಿತ್ರದ ಮೂಲಕ ಒಂದು ಸೂಕ್ಷ್ಮ ವಿಚಾರವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಸಂದೇಶವಿರುವ ಈ ಚಿತ್ರ ಎಲ್ಲರಲ್ಲೂ ಜಾಗೃತಿ ಮೂಡಿಸುವಂತೆ ಆಗಬೇಕು. ನಾನು ಹಾಗೂ ಸಂಭಾಷಣೆಕಾರ ಮಾಸ್ತಿ ಸೇರಿ ಕಥೆ ಹಂತದಿಂದ ಹಿಡಿದು ಚಿತ್ರಕಥೆ , ಸಂಭಾಷಣೆಯಿಂದ ಪ್ರತಿ ಹಂತದಲ್ಲೂ ಬಹಳ ಶ್ರಮ ಪಟ್ಟು ಕೆಲಸ ಮಾಡಿದ್ದೇವೆ. ಈಗ ಚಿತ್ರ ಸೆನ್ಸರ್ನಿಂದ ಹೊರ ಬಂದಿದೆ, ನಾನು ಶಾಲಾ ದಿನಗಳಿಂದಲೂ ಬಿ ಪ್ಲಸ್ , ಸಿ ಪ್ಲಸ್ , ಪಡೆಯುತ್ತಿದೆ. ಈಗ ನನ್ನ ಸಿನಿಮಾ ಮೂಲಕ ಸೆನ್ಸರ್ನಿಂದ ಎ ಪ್ಲಸ್ ಸಿಕ್ಕಂತಾಗಿದೆ ಎನ್ನುತ್ತಾ ಎ ಸರ್ಟಿಫಿಕೇಟ್ ಸಿಕ್ಕಿದ್ದನ್ನು ಸಮರ್ಥಿಸಿಕೊಂಡರು.

ಚಿತ್ರದ ಸಂಭಾಷಣೆ ವಿಚಾರವಾಗಿ ಒಂದಷ್ಟು ಕಟ್ಸ್ , ಮ್ಯೂಟ್ಸ್ ಮಾಡಲು ಹೇಳಿದ್ದಾರೆ, ಅದರಂತೆ ಎಲ್ಲವನ್ನ ಮಾಡುತ್ತೇವೆ. ವಿದ್ಯಾರ್ಥಿಗಳು , ಹರಿಹರಿಯದವರ ಬದುಕಿನ ದು ಸ್ಥಿತಿಯ ವಿಚಾರವು ಸೇರಿದಂತೆ ಒಂದಷ್ಟು ನಾ ಕಂಡು ಕೇಳಿದಂತ ಸತ್ಯಗಳನ್ನು ಹೊರಹಾಕುವ ಪ್ರಯತ್ನ ಭೀಮ ಚಿತ್ರದಲ್ಲಿ ಮಾಡಿದ್ದೇನೆ. ಹಾಗೂ ನನ್ನ ನಿರ್ಮಾಪಕರಾದ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ತುಂಬಾ ಸಾತ್ ನೀಡಿದ್ದಾರೆ. ನನ್ನ ಎಲ್ಲಾ ವಿಚಾರಕ್ಕೂ ಸೈ ಎಂದಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಈಗಾಗಲೇ ಹಾಡುಗಳ ಮೂಲಕ ಸಕ್ಸಸ್ ತಂದು ಕೊಟ್ಟಿದ್ದಾರೆ. ರೀ-ರೆಕಾರ್ಡಿಂಗ್ ಕೂಡ ಅದ್ಭುತವಾಗಿ ಮಾಡಿದ್ದಾರೆ. ಇನ್ನು ಛಾಯಾಗ್ರಹಕ ಶಿವಸೇನಾ, ಸಂಕಲನ ದೀಪು. ಎಸ್. ಕುಮಾರ್ , ಸಂಭಾಷಣೆ ಮಾಸ್ತಿ , ಫೈಟ್ಸ್ಗಳನ್ನ ವಿನೋದ್ , ಚೇತನ್ ಡಿಸೋಜಾ, ಟೈಗರ್ ಶಿವ, ಗೌತಮ್ ಹಾಗೂ ಡ್ಯಾನ್ಸ್ ಕೋರಿಯೋಗ್ರಾಫಿ ಬಿ. ಧನಂಜಯ , ರಾಜು ಸೇರಿದಂತೆ ಇಡೀ ನಮ್ಮ ಚಿತ್ರಕ್ಕೆ ತಾರಾಬಳಗ ಹಾಗೂ ತಾಂತ್ರಿಕ ವರ್ಗ ಬಹಳಷ್ಟು ಶ್ರಮವಿಸಿ ಕೆಲಸ ಮಾಡಿದ್ದೇವೆ. ಬುಡಕಟ್ಟು ಜನಾಂಗದವರು ಸೇರಿದಂತೆ ಒಂದಷ್ಟು ಯುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟಿದ್ದೇನೆ. ನೀವೆಲ್ಲರೂ ಆಗಸ್ಟ್ 9ಕ್ಕೆ ನಮ್ಮ ಚಿತ್ರವನ್ನು ನೋಡಿ ಎಂದು ಕೇಳಿಕೊಂಡರು.

ಇನ್ನು ಈ ಚಿತ್ರದ ನಿರ್ಮಾಪಕರಾದ ಕೃಷ್ಣ ಸಾರ್ಥಕ್ ಮಾತನಾಡಿ, ನಮ್ಮ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ, ಸೆನ್ಸರ್ ಹಂತದಲ್ಲಿ ಹೋದಾಗ ಕೊಂಚ ಭಯ ಇತ್ತು, ಆದರೆ ನಿರ್ದೇಶಕ ವಿಜಯ್ ಸರ್ ಸೆನ್ಸರ್ ಅಧಿಕಾರಿಗಳಿಗೆ ನಮ್ಮ ಸಿನಿಮಾದ ಕಂಟೆಂಟ್ ಬಗ್ಗೆ ಕನ್ವಿನ್ಸ್ ಮಾಡಿದ ರೀತಿ ಅದ್ಭುತ.
ಈಗಾಗಲೇ ಸಿನಿಮಾದ ಹಾಡುಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಎಲ್ಲರೂ ಬಂದು ಚಿತ್ರ ನೋಡಿ ಪ್ರೋತ್ಸಾಹಿಸಿ ಎಂದರು.

ನಿರ್ಮಾಪಕ ಜಗದೀಶ್ ಗೌಡ ಮಾತನಾಡುತ್ತಾ ನಾನು ಒಬ್ಬ ವಿತರಕ , ಈ ಚಿತ್ರವನ್ನು ನಿರ್ಮಿಸಿದಾಗ ಒಂದಷ್ಟು ವಿಚಾರ ನನಗೂ ತಿಳಿಯಿತು. ಬಹಳ ಶ್ರಮವಹಿಸಿ ಒಂದು ಉತ್ತಮ ಸಂದೇಶವಿರುವ ಚಿತ್ರವನ್ನು ಬಿಡುಗಡೆ ಹಂತಕ್ಕೆ ತಂದಿದ್ದೇವೆ. ಸದ್ಯ ಚಿತ್ರಮಂದಿರಗಳ ಪರಿಸ್ಥಿತಿ ನಮಗೂ ತಿಳಿದಿದೆ. ಮುಚ್ಚು ಹೋಗುತ್ತಿರುವ 18 ಚಿತ್ರಮಂದಿರಗಳು ನಮ್ಮ ಭೀಮ ಚಿತ್ರದ ಮೂಲಕ ಮತ್ತೆ ಓಪನ್ ಆಗಲಿದೆ. ಸುಮಾರು 400ಕ್ಕೂ ಹೆಚ್ಚು ಚಿತ್ರಮಂದಿರಲ್ಲಿ ನಮ್ಮ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದೇವೆ. ಅದೇ ರೀತಿ ದೇಶದ ಬೇರೆ ಬೇರೆ ರಾಜ್ಯಗಳಲ್ಲೂ ಕೂಡ ನಮ್ಮ ಚಿತ್ರ ನೇರವಾಗಿ ರಿಲೀಸ್ ಆಗುತ್ತಿದ್ದು, ವಿದೇಶದಲ್ಲಿ ಕೂಡ ಬಿಡುಗಡೆಗೆ ಮಾತುಕತೆ ನಡೆಯುತ್ತಿದೆ. ಈಗಾಗಲೇ ಚಿತ್ರದ ಎಲ್ಲಾ ಏರಿಯ ಸೋಲ್ಡ್ ಔಟ್ ಆಗಿದ್ದು , ಬಿಕೆಟಿಯನ್ನು ನಾನೇ ಉಳಿಸಿಕೊಂಡಿದ್ದೇನೆ. ಸದ್ಯ ಸಂಕಷ್ಟದಲ್ಲಿರುವ ಚಿತ್ರೋದ್ಯಮಕ್ಕೆ ನಮ್ಮ ಚಿತ್ರದ ಮೂಲಕ ಒಂದಷ್ಟು ಚೈತನ್ಯ ಸಿಗುವಂತಾಗಲಿ, ನಮ್ಮ ಚಿತ್ರವನ್ನು ಚಿತ್ರಮಂದಿರದಲ್ಲಿ ಬಂದು ನೋಡಿ ಎಂದು ಕೇಳಿಕೊಂಡರು.

ಇನ್ನು ಈ ಚಿತ್ರದಲ್ಲಿ ಅಭಿನಯಿಸಿದಂತ ಕಲಾವಿದರು ಹಾಗೂ ತಾಂತ್ರಿಕ ವರ್ಗದವರು ತಮ್ಮ ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡರು. ಈ ಭೀಮ ಚಿತ್ರದಲ್ಲಿ ಸಮಾಜಿ ಕಳಕಳಿ ಸಂದೇಶ ಒಳಗೊಂಡಿದೆಯಂತೆ.
ಈ ಚಿತ್ರ ಬಿಡುಗಡೆ ನಂತರ ಒಂದಷ್ಟು ಚರ್ಚೆಗೆ ದಾರಿ ಮಾಡಿಕೊಳ್ಳುತ್ತದೆ ಎಂಬ ಅಭಿಪ್ರಾಯ ಚಿತ್ರ ತಂಡದ್ದು,
ಬಹಳ ನೈಜಕ್ಕೆ ಒತ್ತುಕೊಟ್ಟು ಸೂಕ್ಷ್ಮ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿರುವುದು ವಿಶೇಷ. ಇನ್ನು ನಟ , ನಿರ್ದೇಶಕ ವಿಜಯ್ ಕುಮಾರ್ ಅಲಿಯಾಸ್ (ದುನಿಯಾ ವಿಜಯ್) ತಮ್ಮ ಪಾತ್ರದ ಕುರಿತು ಹೆಚ್ಚು ಮಾತನಾಡದೆ , ನನ್ನ ಈ ನಿರ್ದೇಶನದ ಚಿತ್ರ ಖಂಡಿತ ಇಷ್ಟವಾಗುತ್ತೆ ಎಂಬ ಅಭಿಪ್ರಾಯವಿದೆ. ದಯವಿಟ್ಟು ಎಲ್ಲರೂ ಆಗಸ್ಟ್ 9ಕ್ಕೆ ಬಂದು ಚಿತ್ರವನ್ನು ನೋಡಿ ಎಂದು ವಿನಂತಿಸಿದರು.

error: Content is protected !!