ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ನಿರ್ದೇಶನದ ಹಾಗು ಪೃಥ್ವಿ ರಾಜ್ ಸುಕುಮಾರನ್, ಅಮಲಾಪಾಲ್ ಅಭಿನಯದ ಆಡು ಜೀವಿತಂ ಸಿನಿಮಾ ಬಿಡುಗಡೆ ದಿನಾಂಕವನ್ನು ನವೆಂಬರ್ 30 ರಂದು ಚಿತ್ರತಂಡ ಘೋಷಣೆ ಮಾಡಲಿದೆ.
ಬಹು ನಿರೀಕ್ಷೆ ಹುಟ್ಟಿಸಿರು ಈ ಸಿನಿಮಾದ ಪೋಸ್ಟರ್ಸ್ ಈಗಾಗಲೇ ಎಲ್ಲೆಡೆ ಮೆಚ್ಚುಗೆ ಪಡೆದಿವೆ. ಈ ಸಿನಿಮಾಗೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ಸಂಗೀತ ಸ್ಪರ್ಶವಿದೆ.
ಅಂದಹಾಗೆ ಈ ಆಡು ಜೀವಿತಂ ಚಿತ್ರದ ಕಥೆ ಇಮಿಗ್ರಟ್ಸ್ ಸುತ್ತವೇ ಸಾಗುತ್ತದೆ. ತನ್ನ ಹೊಟ್ಟೆ ಪಾಡಿಗಾಗಿ ಕೆಲಸ ಅರಸಿ ಸೌದಿ ಅರೇಬಿಯಾಗೆ ವಲಸೆ ಹೋಗುವ ನಸೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿ ಅಲ್ಲಿ ಅನುಭವಿಸುವ ಕಷ್ಟ, ಎದುರಿಸುವ ಸಮಸ್ಯೆ ಹೈಲೆಟ್. ಇನ್ನು ಆತನ ಪಾಸ್ಪೋರ್ಟ್ ಕಸಿದು ಆತನಿಗೆ ಕೊಡುವತ ಹಿಂಸೆಗಳು ಆ ಬಿಸಿಲಿನ ಮರುಭೂಮಿಯಲ್ಲಿ ಆತ ಪಡುವ ಯಾತನೆ ಕುರಿತು ಸಾಗುವ ಕಥೆ ಇಲ್ಲಿದೆ.
ನಿರ್ದೇಶಕ ಬ್ಲೆಸ್ಸಿ ಅವರ ಹದಿನೈದು ವರ್ಷದ ಕನಸಿನ ಕಥೆ ಇದು. ಅವರ ಕಲ್ಪನೆಯ ಪಾತ್ರದಲ್ಲಿ ವಲಸಿಗ ವ್ಯಕ್ತಿಯಾಗಿ ಹೊಸ ಲುಕ್ ಮೂಲಕ ಕಾಣಿಸಿಕೊಂಡಿರುವ ಪೃಥ್ವಿರಾಜ್ ಸುಕುಮಾರನ್, ಹಲವಾರು ವರ್ಷಗಳಿಂದ ಈ ಚಿತ್ರಕ್ಕಾಗಿ ದುಡಿದಿದ್ದಾರೆ. ಇಡೀ ಚಿತ್ರತಂಡ ಹಗಲು ರಾತ್ರಿ ಎನ್ನದೆ ಚಿತ್ರದ ಔಟ್ಪುಟ್ ಗಾಗಿ ದುಡಿದಿದೆ. ಈಗ ಚಿತ್ರ ತೆರೆಗೆ ಕಾಣಲು ಸಿದ್ಧವಿದ್ದು ಈ ಚಿತ್ರದ ರಿಲೀಸ್ ಡೇಟ್ ಅನ್ನು ನವೆಂಬರ್ 30ರಂದು ಚಿತ್ರತಂಡ ಪ್ರಕಟಿಸಲಿದೆ.
ಕಥೆ ಇಷ್ಟು… ಬಹುನಿರೀಕ್ಷಿತ ಮಲಯಾಳಂ ಚಿತ್ರ ಆಡು ಜೀವಿತಂ (ಗೋಟ್ಲೈಫ್) ಬಿಡುಗಡೆಗೆ ಸಜ್ಜಾಗುತ್ತಿದೆ. ನವೆಂಬರ್ 30 ರ ಸಂಜೆ 4 ಗಂಟೆಗೆ ಬಿಡುಗಡೆ ದಿನ ಘೋಷಣೆಯಾಗಲಿದೆ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ. ಈ ಕುರಿತು ನಟ ಪೃಥ್ವಿರಾಜ್ ನಿರೀಕ್ಷೆಯ ಚಿತ್ರ ಇದಾಗಿದ್ದು, ಬ್ಲೆಸ್ಸಿ ನಿರ್ದೇಶನದ ಆಡುಜೀವಿತಂ 2008 ರಲ್ಲಿ ಬೆನ್ಯಾಮಿನ್ ಬರೆದ ಅದೇ ಹೆಸರಿನ ಮಲಯಾಳಂ ಕಾದಂಬರಿ ಸಿನಿಮಾ ಇದು. ನಜೀಬ್ ಎಂಬ ವಲಸಿಗ ಕಾರ್ಮಿಕನ ಕಥೆಯನ್ನು ಮತ್ತು ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಅವನು ಅನುಭವಿಸುವ ದುಃಸ್ಥಿತಿ ಮತ್ತು ಅಸಹಾಯಕತೆಯ ಕಥೆ ಚಿತ್ರದ ಸಾರಾಂಶ ಎನ್ನುತ್ತಾರೆ.
ಪೃಥ್ವಿರಾಜ್ ನಜೀಬ್ ಪಾತ್ರ ನಿರ್ವಹಿಸಿದ್ದಾರೆ. ಮರುಭೂಮಿಯಲ್ಲಿ ಆಡುಗಳ ಹಿಂಡಿನ ಮಧ್ಯೆ ಪೃಥ್ವಿರಾಜ್ ಇರುವ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದ್ದು ಎಲ್ಲೆಡೆ ಮೆಚ್ಚುಗೆ ಪಡೆದಿದೆ.
ಅಂದಹಾಗೆ, ಚಿತ್ರದ ನಜೀಬ್ ಪಾತ್ರಕ್ಕಾಗಿ ಪೃಥ್ವಿರಾಜ್ ಸಾಕಷ್ಟು ದೇಹವನ್ನು ದಂಡಿಸಿದ್ದಾರೆ. ಅವರು ಸಿನುಮಾಗಾಗಿ ಸುಮಾರು 30 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಕಳೆದ ಚಿತ್ರ ಐದು ವರ್ಷಗಳಿಂದ ತಯಾರಾಗುತ್ತಿದೆ ಎಂಬುದು ವಿಶೇಷ. ನಿರ್ಮಾಣ ಸಂಸ್ಥೆ ಕೂಡ ಸಾಕಷ್ಟು ಸಮಸ್ಯೆಗಳ ನಡುವೆ ಸಿನಿಮಾ ನಿರ್ಮಿಸಿದೆ. ಈ ವರ್ಷದ ಆರಂಭದಲ್ಲಿ, ಚಿತ್ರದ ಟ್ರೇಲರ್ ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿತ್ತು.
ಟ್ರೇಲರ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಚಿತ್ರದ ತಾಂತ್ರಿಕ ವಿಭಾಗದಲ್ಲಿ ಎ.ಆರ್.ರೆಹಮಾನ್ ಅವರ ಸಂಗೀತ, ಸುನಿಲ್ ಕೆ.ಎಸ್ ಅವರ ಕ್ಯಾಮೆರಾ ಕೈಚಳಕ, ರೆಸುಲ್ ಪೂಕುಟ್ಟಿ ಅವರ ಸೌಂಡ್ ಡಿಸೈನ್ ಮತ್ತು ಶ್ರೀಕರ್ ಪ್ರಸಾದ್ ಅವರ ಸಂಕಲನ ಕೆಲಸವಿದೆ.
ಹೊಂಬಾಳೆ ಫಿಲಂಸ್ ನಿರ್ಮಾಣದ, ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಚಿತ್ರದ ಪೂರ್ವ ಭಾಗವಾದ ‘ಕಾಂತಾರ ಅಧ್ಯಾಯ 1’, ಸೋಮವಾರವಷ್ಟೇ ಅದ್ಧೂರಿಯಾಗಿ ಪ್ರಾರಂಭವಾಗಿತ್ತು. ಇಂದು ಚಿತ್ರವು ಇನ್ನೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಮಂಗಳವಾರ, ಗೋವಾದಲ್ಲಿ ಮುಕ್ತಾಯವಾದ 54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಹೊಂಬಾಳೆ ಫಿಲಂಸ್ ನಿರ್ಮಾಣದ, ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ. ಕನ್ನಡ ಚಿತ್ರವೊಂದು ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಶಸ್ತಿಗೆ ಭಾಜನವಾಗಿದೆ.
ಈ ಬಾರಿ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ 15 ಚಿತ್ರಗಳು ಕಣದಲ್ಲಿದ್ದವು. ಈ ಪೈಕಿ ಭಾರತದಿಂದ ‘ಕಾಂತಾರ’ ಸೇರಿದಂತೆ ಒಟ್ಟು ಮೂರು ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಈ ವಿಭಾಗದಲ್ಲಿ “ಕಾಂತಾರ” ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿ ಪ್ರಮಾಣ ಪತ್ರ, ರಜತ ಮಯೂರ ಮತ್ತು 15 ಲಕ್ಷ ರೂ. ನಗದನ್ನು ಒಳಗೊಂಡಿದೆ.
ಈ ಸಂದರ್ಭದಲ್ಲಿ ಮಾತನಾಡಿರುವ ರಿಷಭ್ ಶೆಟ್ಟಿ, ‘ಕಳೆದ ವರ್ಷ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಿತ್ರದ ಪ್ರಚಾರಕ್ಕಾಗಿ ಬಂದಿದ್ದೆವು. ಈ ಬಾರಿ ನಮ್ಮ ಚಿತ್ರ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಸ್ಪರ್ಧಿಸಿ, ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಗೆದ್ದಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ’ ಎಂದು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.
‘ಕಾಂತಾರ’ ಚಿತ್ರವು ಕಳೆದ ವರ್ಷ ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸು ಪಡೆಯುವುದರ ಜೊತೆಗೆ, ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿ ಹಲವು ಭಾಷೆಗಳಿಗೆ ಡಬ್ ಆಗಿತ್ತು. ರಿಷಭ್ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಮುಂತಾದವರು ಅಭಿನಯಿಸಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.
ಕುಂದಾಪುರದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸರಳ ಪೂಜೆಯೊಂದಿಗೆ ಚಿತ್ರಕ್ಕೆ ಚಾಲನೆ
ಕಳೆದ ವರ್ಷ ಬಿಡುಗಡೆಯಾಗಿ ಜಗತ್ತಿನಾದ್ಯಂತ ಮೆಚ್ಚುಗೆ ಪಡೆಯುವುದರ ಜೊತೆಗೆ ದೊಡ್ಡ ಯಶಸ್ಸು ಕಂಡ ‘ಕಾಂತಾರ’ ಚಿತ್ರವನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್, ಈಗ ಇನ್ನೊಂದು ಅಂಥದ್ದೇ ಪ್ರಯತ್ನದೊಂದಿಗೆ ವಾಪಸಾಗುತ್ತಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಮಹತ್ವಾಕಾಂಕ್ಷೆಯ ಮತ್ತು ಬಹುನಿರೀಕ್ಷಿತ ಚಿತ್ರವಾದ ‘ಕಾಂತಾರ – ಅಧ್ಯಾಯ 1’ರ ಮೊದಲ ನೋಟ ಬಿಡುಗಡೆಯಾಗಿದ್ದು, ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದೆ.
‘ಕಾಂತಾರ’ ಜಗತ್ತನ್ನು ಪರಿಚಯಿಸುವ ಈ ಟೀಸರ್ ನಲ್ಲಿ ರಿಷಭ್ ಶೆಟ್ಟಿ ಅವರ ಪಾತ್ರ ಮತ್ತು ವೇಷ ಗಮನ ಸೆಳೆಯುತ್ತದೆ. ಮೊದಲ ಭಾಗದ ಆ ಆರ್ಭಟ ಇಲ್ಲೂ ಮರುಕಳಿಸಿದ್ದು, ಈ ಮೂಲಕ ಹೊಸದೊಂದು ದಂತಕಥೆಯ ಸೃಷ್ಟಿಗೆ ಮುನ್ನುಡಿ ಬರೆದಿದೆ. ಅಷ್ಟೇ ಅಲ್ಲ, ರಿಷಭ್ ಶೆಟ್ಟಿ ಅವರ ಪಾತ್ರ ವೀಕ್ಷಕರಲ್ಲಿ ಹೊಸದೊಂದು ಕೌತುಕವನ್ನು ಹುಟ್ಟುಹಾಕಿದೆ.
ಮೊದಲ ಭಾಗದ ಯಶಸ್ಸಿಗೆ ಕಾರಣವಾಗಿದ್ದ ಮತ್ತು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಸಂಗೀತವು ಈ ಟೀಸರ್ ಮೂಲಕ ವಾಪಸ್ಸಾಗಿದೆ. ಈ ಟೀಸರ್ ನ ವೈಷಿಷ್ಟ್ಯವೆಂದರೆ, ಚಿತ್ರವು ಏಳು ಭಾಷೆಗಳಲ್ಲಿ ಮೂಡಿಬರುತ್ತಿದ್ದು, ಪ್ರತಿಯೊಂದು ಭಾಷೆಯ ಟೀಸರ್ ಒಂದೊಂದು ರಾಗದ ಮೂಲಕ ಅಂತ್ಯವಾಗಲಿದೆ.
‘ಕಾಂತಾರ’ ಚಿತ್ರವು ಕಳೆದ ವರ್ಷ ಜಗತ್ತಿನಾದ್ಯಂತ ಬಿಡುಗಡೆಯಾಗಿ ಅತ್ಯಂತ ಯಶಸ್ವಿಯಾಗಿತ್ತು. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು, ಜನಪದ ಅಂಶಗಳನ್ನು ಬೆರೆಸಿ ಹೇಳಿದ ರೀತಿ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಪ್ರತಿ ಕಥೆಯನ್ನೂ ವಿಶಿಷ್ಟ ರೀತಿಯಲ್ಲಿ ಕಟ್ಟಿಕೊಡಬೇಕು ಎಂಬ ಹೊಂಬಾಳೆ ಫಿಲಂಸ್ ನ ಬದ್ಧತೆ ‘ಕಾಂತಾರ – ಅಧ್ಯಾಯ ೧’ ರಲ್ಲೂ ಮುಂದುವರೆದಿದ್ದು, ದೈವತ್ವದ ಹೊಸ ವ್ಯಾಖ್ಯಾನ ಈ ಚಿತ್ರದಲ್ಲಾಗಲಿದೆ.
ಕಳೆದ ವರ್ಷ ಹೊಂಬಾಳೆ ಫಿಲಂಸ್ ನಿರ್ಮಾಣದ ‘ಕೆಜಿಎಫ್ ೨’ ಮತ್ತು ‘ಕಾಂತಾರ’ ಚಿತ್ರಗಳು ಜಾಗತಿಕವಾಗಿ ೧೬೦೦ ಕೋಟಿ ರೂ ಸಂಗ್ರಹಿಸಿತ್ತು. ಹೊಂಬಾಳೆಯ ಮುಂದಿನ ಬಿಡುಗಡೆಯಾದ ‘ಸಲಾರ್’ ಈ ವರ್ಷದ ಬ್ಲಾಕ್ಬಸ್ಟರ್ ಆಗುವ ಲಕ್ಷಣಗಳು ಈಗಾಗಲೇ ಗೋಚರಿಸಿವೆ. ಈ ಬಹುನಿರೀಕ್ಷಿತ ಚಿತ್ರದ ಟ್ರೇಲರ್ ಡಿ. 1ರಂದು ಬಿಡುಗಡೆಯಾಗಲಿದೆ.
‘ಕಾಂತಾರ -ಅಧ್ಯಾಯ 1’ ಚಿತ್ರವು ಬಹುನಿರೀಕ್ಷಿತ ಚಿತ್ರವಾಗಿದ್ದು ಮುಂದಿನ ವರ್ಷ 7 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಡಿಸೆಂಬರ್ ಅಂತ್ಯಕ್ಕೆ ಚಿತ್ರೀಕರಣ ಪ್ರಾರಂಭವಾಗಲಿದ್ದು, ತಾರಾಬಳಗದ ಬಗ್ಗೆ ಸದ್ಯದಲ್ಲೇ ಹೆಚ್ಚಿನ ಮಾಹಿತಿ ಹೊರಬೀಳಲಿದೆ.
ಕುಂದಾಪುರ ಸಮೀಪದ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದಲ್ಲಿ ಈ ಚಿತ್ರದ ಸರಳಪೂಜಾ ಸಮಾರಂಭ ನಡೆಯಿತು. ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಅಣ್ಣ ಮಂಜುನಾಥ್ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ರಿಷಭ್ ಶೆಟ್ಟಿ ಪುತ್ರಿ ರಾಧ್ಯ ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರತಂಡದ ಸದಸ್ಯರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಅದಿತಿ ಪ್ರಭುದೇವ ಹಾಗೂ ಪವನ್ ತೇಜ್ ನಾಯಕ – ನಾಯಕಿಯಾಗಿ ನಟಿಸಿರುವ, ವಿ.ಚಂದ್ರು ನಿರ್ಮಾಣದ ಹಾಗೂ ಜೀವ ನಿರ್ದೇಶನದ “ಅಲೆಕ್ಸಾ” ಚಿತ್ರದ ಟ್ರೇಲರ್ ಹಾಗೂ ಆಡಿಯೋ ರಿಲೀಸ್ ಆಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ.ಹರೀಶ್, ಹಿರಿಯ ಕಲಾವಿದರಾದ ಸುಂದರರಾಜ್, ಪ್ರಮೀಳಾ ಜೋಷಾಯಿ, ಐಪ್ಲೆಕ್ಸ್ ಆಡಿಯೋ ಸಂಸ್ಥೆಯ ಮೋಹನ್ ಮುಂತಾದ ಗಣ್ಯರು ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
“ಅಲೆಕ್ಸಾ” ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಚಿತ್ರ. “ಬುಜಂಗ” ಚಿತ್ರದ ನಂತರ ನಾನು ನಿರ್ದೇಶಿಸಿರುವ ಎರಡನೇ ಚಿತ್ರವಿದು. ಚಿತ್ರತಂಡದ ಸಹಕಾರದಿಂದ “ಅಲೆಕ್ಸಾ” ಚೆನ್ನಾಗಿ ಮೂಡಿಬಂದಿದೆ. ಡಿಸೆಂಬರ್ 29 ನಮ್ಮ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ. ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ ಎಂದರು ನಿರ್ದೇಶಕ ಜೀವ.
ನಾನು ಈ ಚಿತ್ರದಲ್ಲಿ ಇನ್ವೆಸ್ಟಿಕೇಶನ್ ಪೊಲೀಸ್ ಆಫೀಸರ್. “ಅಲೆಕ್ಸಾ” ನನ್ನ ಪಾತ್ರದ ಹೆಸರು. ನನಗೆ ನಿಜಜೀವನದಲ್ಲಿ ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆಯಿತ್ತು. ನಿರ್ದೇಶಕರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಎಂದ ತಕ್ಷಣ ಒಪ್ಪಿಕೊಂಡೆ. ಈ ಚಿತ್ರದಲ್ಲಿ ನಾನು ಸಾಹಸ ದೃಶ್ಯಗಳಲ್ಲಿ ಅಭಿನಯಿಸಿದ್ದೇನೆ. ಸಾಹಸ ದೃಶ್ಯ ಹೇಳಿಕೊಟ್ಟ ಸಾಹಸ ನಿರ್ದೇಶಕ ರವಿವರ್ಮ ಅವರಿಗೆ ಧನ್ಯವಾದ ಎಂದರು ನಾಯಕಿ ಅದಿತಿ ಪ್ರಭುದೇವ.
ನಮ್ಮದು ಮರ್ಡರ್ ಮಿಸ್ಟರಿ ಕಥೆ ಎನ್ನಬಹುದು. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಎನ್ನಬಹುದು. ಈ ಹಿಂದೆ ಕನ್ನಡದಲ್ಲಿ ಮರ್ಡರ್ ಮಿಸ್ಟರಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಸಾಕಷ್ಟು ಬಂದಿವೆಯಾದರೂ ನಮ್ಮ ಚಿತ್ರದ ಕಥೆ ಸ್ವಲ್ಪ ವಿಭಿನ್ನವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ವರ್ಷದ ಕೊನೆಗೆ ಬಿಡುಗಡೆಯಾಗುತ್ತಿರುವ ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಾಯಕ ಪವನ್ ತೇಜ್.
ಚಿತ್ರದಲ್ಲಿ ನಟಿಸಿರುವ ನಾಗಾರ್ಜುನ, ಛಾಯಾಗ್ರಾಹಕ ಸತೀಶ್ ಚಂದ್ರ ಹಾಗೂ ಸಂಕಲನಕಾರ ಉಮೇಶ್ ಆರ್ ಬಿ ಅವರು ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು “ಅಲೆಕ್ಸಾ” ಚಿತ್ರದ ಕುರಿತು ಮಾತನಾಡಿದರು.
ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್ ಅಪಾರ ಮೆಚ್ಚುಗೆ ಪಡೆದುಕೊಂಡಿದೆ. ಟ್ರೇಲರ್ ಹಾಗೂ ಹಾಡುಗಳು ಜನರ ಮನ ಗೆಲುತ್ತಿದೆ. ಚಿತ್ರ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಡಿಸೆಂಬರ್ 29 ರಂದು ಬಹು ನಿರೀಕ್ಷಿತ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಮುಂಬೈಯಲ್ಲಿ ಭಜನ್ ಸಾಮ್ರಾಟ್ ಅನೂಪ್ ಜಲೋಟ ಪ್ರಸ್ತುತಿಯ, ಐನಾಕ್ಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಜಕತ್ವದ” ಮೂನ್ ವೈಟ್” ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಡೆದ ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ಸುಧೀರ್ ಅತ್ತಾವರ್ ನಿರ್ದೇಶನದ “ಮ್ರತ್ಯೋರ್ಮ” ಕನ್ನಡ ಚಿತ್ರಕ್ಕೆ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸೇರಿದಂತೆ 4 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
“ಅತ್ಯುತ್ತಮ ಚಿತ್ರ” ನಿರ್ಮಾಪಕ ತ್ರಿವಿಕ್ರಮ ಸಪಲ್ಯ,ಅತ್ಯುತ್ತಮ ನಟಿ” ಸ್ಮಿತ (ನಿವೇದಿತ), ಅತ್ಯುತ್ತಮ ಹಿನ್ನೆಲೆ ಗಾಯಕಿ ಸಾಧನ ಸರ್ಗಂ ಇದೇ ಚಿತ್ರಕ್ಕಾಗಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ರಾಕೇಶ್ ಅಡಿಗ ಅತ್ಯುತ್ತಮ ನಟ ನೋಮಿನೇಟ್ ಆಗಿದ್ದರು.
ಇದೇ ವೇಳೆ ಮಹಾರಾಷ್ಟ್ರ ರಾಜ್ಯಪಾಲರಾದ ರಮೇಶ್ ಬಯಾಸ್ ಅತ್ಯುತ್ತಮ ಚಿತ್ರ ಪ್ರಶಸ್ತಿ ಹಾಗೂ ನೀಡಿ ಬಾಲಿವುಡ್ ನ ಖ್ಯಾತ ಲಿರಿಸಿಸ್ಟ್ ಸಮೀರ್ ಅವರಿಗೆ ಜೀವಮಾನ ಸಾಧನ ಪ್ರಶಸ್ತಿ ನೀಡಿ ಗೌರವಿಸಿದರು. ಈ ಚಿತ್ರ ಒಟ್ಟು 5 ವಿಭಾಗಗಳಲ್ಲಿ ಪ್ರಶಸ್ತಿಗಾಗಿ ನಾಮಿನೇಟ್ ಆಗಿತ್ತು. ಪ್ರಪಂಚದಾದ್ಯಂತ ಸುಮಾರು 110 ಚಿತ್ರಗಳು ಈ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದವು.
ಅಮೇರಿಕಾದ ಔಟ್ ಆಫ್ ದ ಸ್ಟೇಟ್- ಎ ಗೋಥಿಕ್ ರೊಮ್ಯಾನ್ಸ್, ,ವುಮನ್ ಇನ್ ದ ಮೇಸ್, ಚಿಲಿ ದೇಶದ “ಅಲ್ಮಾ”, ಸ್ಪೈನ ನ “ಡಿಗ್ನಿ ಡ್ಯಾಡ್”,ಲಿಥುವಾನಿಯಾದ “ಪುರ್ಗ” , ಹಾಂಕಾಂಗ್ ದೇಶದ “ಗ್ರಾಜ್ಯುಯೇಷನ್ ಭಾರತದ ಟಿಟು ಅಂಬಾನಿ, ಓಗೋ ಬಿದೇಶಿನಿ, ಮೊದಲಾದ ಚಿತ್ರಗಳು ಪ್ರಶಸ್ತಿಗಾಗಿ ಸೆಣಸಿದ್ದವು.
ಭಜನ್ ಸಾಮ್ರಾಟ್ ಅನೂಪ್ ಜಲೋಟ ,ಅಂಜನ್ ಶ್ರೀವಾತ್ಸವ್ ಗುಫಿ ಪೈಂಟಲ್, ಅರುಣ್ ಗೋವಿಲ್, ಖ್ಯಾತ ಗಾಯಕಿ ಡಾ ಜಸ್ಪಿಂದರ್ ನರೂಲ ಜ್ಯೂರಿಗಳಾಗಿದ್ದರು.
“ಮ್ರತ್ಯೋರ್ಮ” ಚಿತ್ರ ಈಗಾಗಲೇ ಮ್ಯಾಂಚೆಸ್ಟರ್ ಮತ್ತು ಕೆನ್ಯಾ ದೇಶದ ಅಂತರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆ ಯಾಗಿದೆ.
ಸ್ಯಾಂಡಲ್ ವುಡ್ ನಲ್ಲಿ ಹೊಸ ರೀತಿಯ ಸಿನಿಮಾಗಳು ಹೊಸ ಕಾನ್ಸೆಪ್ಟ್ ಗಳು ಆಗಾಗ ಬರ್ತಾನೆ ಇರುತ್ತವೆ. ಅದೇ ರೀತಿ ಪತ್ರಕರ್ತ ಮಂಜು ಬನವಾಸೆ ಹಾಗೂ ಹೆತ್ತೂರು ನಾಗರಾಜ್ ಎಂಎನ್ ತಮ್ಮ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸೈಬರ್ ಕ್ರೈಂ ಆಧಾರಿತ ‘ದಿ ಡಾರ್ಕ್ ವೆಬ್’ ಎನ್ನುವ ಸಿನಿಮಾ ಮಾಡಿದ್ದು ರಿಲೀಸ್ಗೆ ತಯಾರಿ ಮಾಡುತ್ತಿದ್ದಾರೆ.
ಸೈಬರ್ ಕ್ರೈಂ ಕಥಾ ಹಂದರ ಆಧಾರಿತ ‘ದಿ ಡಾರ್ಕ್ ವೆಬ್’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಕುತೂಹಲ ಹೆಚ್ಚಿಸಿದೆ. ‘ದಿ ಡಾರ್ಕ್ ವೆಬ್’ ಚಿತ್ರದ ಫಸ್ಟ್ ಲುಕ್ ಅನ್ನು ನಟ ವಸಿಷ್ಠ ಸಿಂಹ ರಿವೀಲ್ ಮಾಡಿದ್ದಾರೆ. ತಮ್ಮದೇ ಊರಿನ ಪತ್ರಕರ್ತರು ಸೇರಿ ಮಾಡಿರೋ ಸಿನಿಮಾ ಬಗ್ಗೆ ನಟ ವಸಿಷ್ಠ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಫಸ್ಟ್ ಲುಕ್ ರಿಲೀಸ್ ಮಾಡಿದ ಮಾತಾಡಿದ ವಸಿಷ್ಠ, ‘ಜನನಿ ಜನ್ಮಭೂಮಿಶ್ಚ್ ಸ್ವರ್ಗಾದಪಿ ಗರಿಯಸಿ’ ಎಂಬ ಮಾತಿನಂತೆ ನಮ್ಮೂರು ಎಂದರೆ ಬರುವ ಭಾವನೆಯೇ ಬೇರೆ. ನನ್ನೂರು ಹಾಸನ ಎನ್ನುವುದು ಹೆಮ್ಮೆ. ಈಗ ಇಲ್ಲಿಯೂ ಸಾಕಷ್ಟು ಜನರು ಚಿತ್ರೋದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಆ ಸಂಖ್ಯೆ ಇನ್ನೂ ಹೆಚ್ಚಬೇಕು’ ಎಂದರು.
‘ದಿ ಡಾರ್ಕ್ ವೆಬ್’ ಸಿನಿಮಾದಲ್ಲಿ ನಾಯಕನಾಗಿ ಯುವ ಪ್ರತಿಭೆ ಚೇತನ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಬಹುತೇಕ ಪತ್ರಕರ್ತರೇ ಅಭಿನಯ ಮಾಡಿರೋದು ಸಿನಿಮಾದ ವಿಶೇಷ. ಮಂಜು ಬನವಾಸೆ ನಿರ್ಮಾಣದ ಜೊತೆಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕಂಡಿದ್ದಾರೆ. ಇನ್ನು ಚಿತ್ರಕ್ಕೆ ಕಿರಣ್ ಸ್ವಾಮಿ ನಿರ್ದೇಶನ ಮಾಡಿದ್ದಾರೆ.
ಚಂದ್ರಮೌಳಿ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದು ವಿಶಾಕ್ ನಾಗಲಾಪುರ ಸಂಗೀತ ನೀಡಿದ್ದಾರೆ. ಸದ್ಯ ಸಿನಿಮಾದ ಫಸ್ಟ್ ಲುಕ್ ರಿವಿಲ್ ಆಗಿದ್ದು ಶೀಘ್ರದಲ್ಲಿಯೇ ಟೀಸರ್ ಬಿಡುಗಡೆ ಮಾಡಲು ಸಿನಿಮಾ ತಂಡ ಪ್ಲಾನ್ ಮಾಡಿಕೊಂಡಿದೆ.
ತಮ್ಮ ಸಹಜ ಅಭಿನಯದಿಂದ ಅಭಿಮಾನಿಗಳ ಮನ ಗೆದ್ದಿರುವ “ಕೋಮಲ್ ಕುಮಾರ್” ಅಭಿನಯದ “ಕೋಣ” ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಅನಾವರಣಗೊಂಡಿದೆ. ಈ ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗಲಿದೆ.
ಡಾರ್ಕ್ ಕಾಮಿಡಿ ಜಾನರ್ ಇರುವ ಈ ಚಿತ್ರವನ್ನು ಈ ಹಿಂದೆ ಜಗ್ಗೇಶ್ ಅವರು ಅಭಿನಯಿಸಿದ್ದ “8 MM” ಚಿತ್ರವನ್ನು ನಿರ್ದೇಶಿಸಿದ್ದ ಎಸ್ ಹರಿಕೃಷ್ಣ ನಿರ್ದೇಶಿಸುತ್ತಿದ್ದಾರೆ.
ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದೆ. ಕೋಮಲ್ ಕುಮಾರ್ ಅವರು ಈವರೆಗೂ ಅಭಿನಯಿಸಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕನ್ನಡದಲ್ಲಿ ಆನೆ, ನಾಯಿ, ಕೋತಿ ಮೊದಲಾದ ಪ್ರಾಣಿಗಳನ್ನು ಬಳಸಿಕೊಂಡು ಸಾಕಷ್ಟು ಬಂದಿದ್ದು ಈ ಚಿತ್ರದಲ್ಲಿ “ಕೋಣ”(ಪ್ರಾಣಿ) ಮುಖ್ಯ ಪಾತ್ರವಾಗಿರುವುದು ವಿಶೇಷವಾಗಿರಲಿದೆ. ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಹರಿಕೃಷ್ಣ ಎಸ್ ತಿಳಿಸಿದ್ದಾರೆ.
ತೇಜ್ವಿನ್ ಪ್ರೊಡಕ್ಷನ್ ಲಾಂಛನದಲ್ಲಿ ವಿನೋದ್ ಕುಮಾರ್ ಹಾಗೂ ಸೆಲ್ವನ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ, ವಿನೋದ್ ಕುಮಾರ್ ಬಿ ಛಾಯಾಗ್ರಹಣ ಹಾಗೂ ಉಮೇಶ್ ಆರ್ ಬಿ ಅವರ ಸಂಕಲನವಿರುವ ಈ ಚಿತ್ರಕ್ಕಿದೆ. ಸಂಜಯ್ ಹಾಗೂ ಉತ್ತಮ್ ಸ್ವರೂಪ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈವರೆಗೂ ಚಲನಚಿತ್ರಗಳಿಗೆ ಸೆನ್ಸಾರ್ ಮಂಡಳಿ ಕೊಡುವ U, U/A, A, ಸರ್ಟಿಫಿಕೇಟ್ ಗಳು ಪ್ರೇಕ್ಷಕರ ವರ್ಗವನ್ನು ನಿಗದಿ ಮಾಡುತ್ತಿದ್ದು ಅದೇ ರೀತಿ “ಅಥಿ ಐ ಲವ್ ಯು” ಚಿತ್ರಕ್ಕೂ ಸಹ ಸೆನ್ಸಾರ್ ಮಂಡಳಿ ಯು ಸರ್ಟಿಫಿಕೇಟ್ ನೀಡುವ ಮೂಲಕ ಮಕ್ಕಳಿಂದ ವಯೋ ವೃದ್ಧರವರೆಗೂ ಸೇರಿದಂತೆ ಎಲ್ಲಾ ವರ್ಗದ ಜನರು ಸಿನಿಮಾವನ್ನು ವೀಕ್ಷಣೆ ಮಾಡಬಹುದು ಎಂದು ಅನುಮತಿ ನೀಡಿದ್ದಾರೆ.
ಆದರೆ ನಿರ್ದೇಶಕ ಲೋಕೇಂದ್ರ ಸೂರ್ಯ ಈ ಚಿತ್ರ ಕೇವಲ ದಂಪತಿಗಳಿಗೆ ಮಾತ್ರ ಎಂದು ಹೇಳಿದ್ದಾರೆ. ಹೌದು ನಿರ್ದೇಶಕರ ಈ ಹೇಳಿಕೆಯಿಂದ ಎಂಥವರಿಗಾದರೂ ಗೊಂದಲ ಎನಿಸುವುದು ಸಹಜ. ಜನಸಾಮಾನ್ಯರು ಇಂದು ಥಿಯೇಟರ್ ಕಡೆ ಮುಖ ಮಾಡಿ ಚಿತ್ರಗಳನ್ನ ವೀಕ್ಷಿಸುವ ಪ್ರಮಾಣ ಕಡಿಮೆಯಾದ ಬೆನ್ನಲ್ಲಿ ಗಾಂಧಿನಗರದ ನಟರು, ನಿರ್ದೇಶಕರು, ನಿರ್ಮಾಪಕರು ಪ್ರೇಕ್ಷಕರನ್ನು ಥಿಯೇಟರ್ ನತ್ತ ಕರೆದು ತರಲು ಸಾಕಷ್ಟು ಸರ್ಕಸ್ ಮಾಡುತ್ತಿರುವ ಸಂದರ್ಭದಲ್ಲಿ, ನಿರ್ದೇಶಕ ಲೋಕೇಂದ್ರ ಸೂರ್ಯ ನನ್ನ “ಅಥಿ ಐ ಲವ್ ಯು” ಚಿತ್ರವನ್ನು ದಂಪತಿಗಳು ಮಾತ್ರ ಜೊತೆಯಲ್ಲಿ ಕುಳಿತು ನೋಡಬೇಕಿದೆ.
ಸೆನ್ಸಾರ್ ಮಂಡಳಿ ಕೊಟ್ಟಿರುವ U ಸರ್ಟಿಫಿಕೇಟ್ ಮತ್ತು ನಿರ್ದೇಶಕ ಲೋಕೇಂದ್ರ ಸೂರ್ಯ ಕೊಟ್ಟಿರುವ ಹೇಳಿಕೆಗೆ ಒಂದಕ್ಕೊಂದು ವಿರುದ್ಧವಾಗಿದೆ. ಈ ಬಗ್ಗೆ ನಿರ್ಮಾಪಕ ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರು ನಿರ್ದೇಶಕರು ಕೊಟ್ಟಿರುವ ಹೇಳಿಕೆ ಸರಿಯಾಗಿದೆ ಅದರಿಂದ ನನಗೇನು ನಷ್ಟವಿಲ್ಲ ನಮ್ಮ ಸಿನಿಮಾ ದಂಪತಿಗಳೇ ನೋಡಬೇಕಾದ ಚಿತ್ರವಾದ ಕಾರಣ ಅವರನ್ನೇ ಉದ್ದೇಶಿಸಿ ನಿರ್ದೇಶಕರು ಮಾತನಾಡಿದ್ದಾರೆ ಈ ಸಾಂಸಾರಿಕ ವಿಚಾರಗಳು ಸಂಸಾರದ ಅನುಭವವನ್ನು ಕಂಡವರಿಗೆ ಮಾತ್ರವೇ ರುಚಿಸುತ್ತದೆ ವಿನಹ ಅದರ ಅನುಭವ ಇಲ್ಲದವರಿಗೆ ಅದು ಕ್ಷುಲ್ಲಕ ಎನಿಸಬಹುದು ಆ ನಿಟ್ಟಿನಲ್ಲಿ ನಿರ್ದೇಶಕರು ಕೊಟ್ಟಿರುವ ಹೇಳಿಕೆಯನ್ನೇ ನಾನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ ಈ ಮೊದಲ ಚಿತ್ರ A ಸರ್ಟಿಫಿಕೇಟ್ ಪಡೆದುಕೊಂಡ ಕಾರಣ ನನಗೆ ಬಹಳ ನಿರಾಶೆಯಾಗಿತ್ತು ಆದರೆ ಈಗ “ಅತಿ ಐ ಲವ್ ಯು U” ಸರ್ಟಿಫಿಕೇಟ್ ಪಡೆದುಕೊಂಡು ಬಿಡುಗಡೆಗೆ ಮತ್ತಷ್ಟು ಧೈರ್ಯ ತುಂಬಿದೆ ಎಂದರು ರೆಡ್ ಅಂಡ್ ವೈಟ್ ನಿರ್ಮಾಪಕ ಸವೆನ್ ರಾಜ್.
ಮೊದಲಿನಿಂದಲೂ ಒಂದಲ್ಲ ಒಂದು ರೀತಿ ವಿಭಿನ್ನ ಪ್ರಯತ್ನಗಳನ್ನ ತಮ್ಮ ಇತಿಮಿತಿಗಳಲ್ಲಿ ಸಾಬೀತು ಪಡಿಸುತ್ತಿರುವ ಲೋಕೇಂದ್ರ ಸೂರ್ಯ ಈ ಬಾರಿಯೂ ಅಂತಹದ್ದೆ ಒಂದು ವಿಭಿನ್ನತೆಗೆ ಜೀವ ನೀಡಿದ್ದಾರೆ ಎಂದು ಕಾಣುತ್ತಿದೆ. ಈ ಎಲ್ಲಾ ಗೊಂದಲಗಳಿಗೆ ಡಿಸೆಂಬರ್ 7ರಂದು ಚಿತ್ರದ ಬಿಡುಗಡೆ ಉತ್ತರ ನೀಡಲಿದೆ. ಒಂದೇ ಮನೆ, ಎರಡೇ ಪಾತ್ರಗಳು, ಒಂದು ಸನ್ನಿವೇಶವನ್ನು ನಿರ್ದೇಶಕರು ಚಿತ್ರವನ್ನಾಗಿ ರೂಪಿಸಿದ್ದಾರೆ. ಇಂತಹ ವಿಭಿನ್ನ ಪ್ರಯತ್ನದ “ಅಥಿ ಐ ಲವ್ ಯು” ಚಿತ್ರ ಜನಮೆಚ್ಚುಗೆ ಪಡೆಯುತ್ತದೆ ಎಂಬ ಭರವಸೆ ಚಿತ್ರತಂಡಕ್ಕಿದೆ.
ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಡಿ.ಸತ್ಯ ಪ್ರಕಾಶ್ ಚಿತ್ರ ಸೆಟ್ಟೇರಿತು ಎಂದರೆ ಏನಾದರೊಂದಷ್ಟು ವಿಶೇಷತೆಗಳನ್ನು ಹೊಂದಿರುತ್ತದೆ ಎಂದು ಪ್ರೇಕ್ಷಕರು ಮತ್ತು ಚಿತ್ರೋದ್ಯಮದ ಮಂದಿ ಎದುರು ನೋಡುತ್ತಾರೆ. ಅದನ್ನು ಅಷ್ಟೇ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ ನಿರ್ದೇಶಕ ಸತ್ಯ.
ಬಹಳ ದಿನಗಳ ನಂತರ ಈಗ ಅಳೆದು ತೂಗಿ ಅತ್ಯಾಪ್ತ ಕಥೆ ಮಾಡಿಕೊಂಡು ಅದಕ್ಕೆ “ಎಕ್ಸ್ ಅಂಡ್ ವೈ” ಎಂದು ಶೀರ್ಷಿಕೆ ಇಟ್ಟುಕೊಂಡು ಅಖಾಡಕ್ಕೆ ಇಳಿದಿದ್ದಾರೆ. ತಮ್ಮ ಹಿಂದಿನ ಮೂರು ಚಿತ್ರಗಳಲ್ಲಿ ಮೂಡಿಸಿದ ವಿಶೇಷತೆಗಳಂತೆ ಇಲ್ಲೂ ಚಿತ್ರದ ಟೈಟಲ್, ಆರಿಸಿಕೊಂಡ ಕಥೆ, ಲೊಕೇಶನ್ಸ್, ಕಲಾವಿದರ ಆಯ್ಕೆಯಲ್ಲದೆ ತಾವೇ ಮುಖ್ಯ ಪಾತ್ರಧಾರಿಯಾಗಿ ನಟನೆಗೆ ಇಳಿದಿದ್ದಾರೆ.
ನವಂಬರ್ 24ರ ಬ್ರಾಹ್ಮಿ ಮುಹೂರ್ತದಲ್ಲಿ ಜಯನಗರದ ತಮ್ಮದೇ ಕಛೇರಿಯಲ್ಲಿ ಸ್ನೇಹಿತರು, ಕಲಾವಿದರು, ಹಾಗೂ ತಮ್ಮ ತಂಡದ ತಂತ್ರಜ್ಞರನ್ನೊಳಗೂಡಿ ಸತ್ಯ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮುಹೂರ್ತ ಮುಗಿಸಿಕೊಂಡಿದ್ದಾರೆ. ನಿರ್ಮಾಣ ಹಾಗೂ ನಿರ್ದೇಶನದ ಜೊತೆಗೆ ಸತ್ಯಪ್ರಕಾಶ್ ಹಾಗೂ ಅಥರ್ವ ಪ್ರಕಾಶ್ ನಾಯಕರಾಗಿ ಅಭಿನಯಿಸುತ್ತಿದ್ದಾರೆ.
ಲವಿತ್ ಛಾಯಾಗ್ರಹಣ, ವಾಸುಕಿ ವೈಭವ್ ಸಂಗೀತ ನರ್ದೇಶನ, ಬಿ.ಎಸ್ ಕೆಂಪರಾಜು ಅವರ ಸಂಕಲನ ಇದೆ. ವರದರಾಜ್ ಕಾಮತ್ ಕಲಾನಿರ್ದೇಶನ ಮಾಡುತ್ತಿದ್ದಾರೆ. ಇಡೀ ಚಿತ್ರ ಬೆಂಗಳೂರು ಮತ್ತು ಮಂಗಳೂರು ಸುತ್ತ ಮುತ್ತಣ ಪರಿಸರದಲ್ಲಿ ಚಿತ್ರೀಕರಿಸಲು ಯೋಜಿಸಲಾಗಿದೆ ಎಂದು ಸತ್ಯಪ್ರಕಾಶ್ ತಿಳಿಸಿದ್ದಾರೆ.