Categories
ಸಿನಿ ಸುದ್ದಿ

ಕನ್ನಡಕ್ಕೆ ‘ಯುವ’ ರಾಜಕುಮಾರ! ರಾಜ್ ಮೊಮ್ಮಗನ ಹೊಸ ಸಿನಿಮಾಗೆ ಚಾಲನೆ! ಇದು ಹೊಂಬಾಳೆ ಫಿಲಂಸ್ ಕೊಡುಗೆ…


ಕನ್ನಡ ನಾಡಿಗೆ ಹಾಗು ರಾಷ್ಟ್ರಕ್ಕೆ ಸತತ ಸದಬಿರುಚಿಯ ಹಾಗು ದಾಖಲೆ ನಿರ್ಮಿಸಿದಂತಹ ಚಲನಚಿತ್ರಗಳನ್ನು ನಿರ್ಮಿಸುತ್ತಾ ಬಂದಿರುವ ಹೊಂಬಾಳೆ ಫಿಲ್ಮ್ಸ್ ವತಿಯಿಂದ ಮತ್ತೊಂದು ಹೆಮ್ಮೆಯ ಚಿತ್ರ ಸಮರ್ಪಣೆ “ಯುವ”.
ಚಿತ್ರರಂಗಕ್ಕೆ ತಮ್ಮ ಮೌಲ್ಯಾದಾರಿತ ಆಲೋಚನೆಗಳು ಹಾಗು ಮನೋರಂಜನೆ ತುಂಬಿದ ಚಿತ್ರಕತೆಗಳಿಂದ ಒಂದರ ಹಿಂದೆ ಮತ್ತೊಂದು ದಾಖಲೆ ನಿರ್ಮಿಸಿದ ಚಲನಚಿತ್ರಗಳನ್ನು ನೀಡಿದ ಸಂತೋಷ್ ಆನಂದ್‌ರಾಮ್ ರವರ ಐದನೆಯ ಬಹು ನಿರೀಕ್ಷಿತ ಚಿತ್ರ “ಯುವ”. ಹೊಂಬಾಳೆ ಫಿಲ್ಮ್ಸ್ ಹಾಗು ಸಂತೋಷ್ ಆನಂದ್‌ರಾಮ್ ರವರ ಕಾಂಬಿನೇಶನ್ ನ ಗೆಲುವಿನ ಓಟಕ್ಕೆ ಈ ಚಿತ್ರ ನಾಲ್ಕನೇ ಸೇರ್ಪಡೆ.


ಕನ್ನಡದ ಸಾಂಸ್ಕೃತಿಕ ರಾಯಭಾರಿ ಎಂಬ ಅನ್ವರ್ಥನಾಮ ಇರುವ ಮೇರು ನಟ ಪದ್ಮಭೂಷಣ ಡಾ. ರಾಜಕುಮಾರ್ ರವರ ಕುಟುಂಬದಿಂದ ಈ ನಾಡಿಗೆ ಹಾಗು ಕನ್ನಡ ಚಿತ್ರರಂಗಕ್ಕೆ ಹಲವಾರು ಕೊಡುಗೆಗಳು ದಶಕಗಳಿಂದ ನಮ್ಮ ರಾಜ್ಯಕ್ಕೆ ದೊರೆತಿದೆ. ಡಾ. ಪಾರ್ವತಮ್ಮ ರಾಜಕುಮಾರ್ ರ ಆದಿಯಾಗಿ, ಡಾ.ಶಿವರಾಜಕುಮಾರ್ , ರಾಘವೇಂದ್ರ ರಾಜಕುಮಾರ್ ಹಾಗು ಡಾ.ಪುನೀತ್ ರಾಜಕುಮಾರ್ ಕಲಾ ಸೇವೆಯಲ್ಲಿ ಅಂದಿನಿಂದಲೂ ಮೊದಲ ಸಾಲಿನಲ್ಲಿ ಇರುತ್ತಾರೆ . ಇಂತಹ ಜವಾಬ್ದಾರಿಯುತ ಕಲಾ ಕುಟುಂಬದಿಂದ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕೊಡುಗೆ ಯುವರಾಜಕುಮಾರ್.


ಯುವರಾಜಕುಮಾರ್ ಅವರ ಮೊದಲ ಚಿತ್ರದ ಶೀರ್ಷಿಕೆ ಅನಾವರಣ ಹಾಗು ಚಿತ್ರದ ಮುಹೂರ್ತ ಇಂದು ಬೆಂಗಳೂರು ನಗರದ ಹೋಟೆಲ್ ಲಲಿತ್ ಅಶೋಕದಲ್ಲಿ ವಿಜೃಂಭಣೆಯಿಂದ ಜರುಗಿದೆ. ಈ ಭವ್ಯ ಸಮಾರಂಭದಲ್ಲಿ ಚಿತ್ರದ ನಿರ್ಮಾಪಕರಾದ ವಿಜಯ್ ಕಿರಗಂದೂರ್, ನಿರ್ದೇಶಕ ಸಂತೋಷ್ ಆನಂದ್‌ರಾಮ್, ನಟ ಯುವರಾಜಕುಮಾರ್,

ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್, ಛಾಯಾಗ್ರಾಹಕ ಶ್ರೀಶ ಕೂದುವಳ್ಳಿ, ಹಾಗು ಚಿತ್ರದ ಇತರೆ ತಾಂತ್ರಿಕ ವಿಭಾಗದವರು ಹಾಗು ಡಾ. ರಾಜ್ ಕುಟುಂಬದ ಅನೇಕ ಗಣ್ಯರು ಹಿತೈಷಿಗಳು ಪಾಲ್ಗೊಂಡಿದ್ದರು.


ಈ ಸಮಾರಂಭದಲ್ಲಿ ಚಿತ್ರದ ಮೊದಲ ಕ್ಲಾಪ್ ಅನ್ನು ಶ್ರೀಮತಿ ಶೈಲಜಾ ವಿಜಯ್ ಕಿರಗಂದೂರ್ ಮಾಡಿದರೆ, ಕ್ಯಾಮೆರಾ ಚಾಲನೆ ನೀಡಿದ್ದು ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್. ಚಿತ್ರದ ಮೊದಲ ಶಾಟ್ ಗೆ ಆಕ್ಷನ್ ಕಟ್ ಹೇಳಿದವರು ಡಾ. ಶಿವರಾಜಕುಮಾರ್.
ಚಿತ್ರವು 22-ಡಿಸೆಂಬರ್-2023 ರಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ

Categories
ಸಿನಿ ಸುದ್ದಿ

ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜದಲ್ಲಿ ಶಿವಣ್ಣ …

ಆರ್.ಚಂದ್ರು ನಿರ್ದೇಶನದ, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ ಹಲವು ವಿಶೇಷಗಳಿಂದ ಕೂಡಿದೆ. ವಿಶ್ವದಾದ್ಯಂತ ಎಲ್ಲರ‌ ಗಮನ ಸೆಳೆದಿರುವ ಈ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಚಿತ್ರತಂಡದಿಂದ ಮತ್ತೊಂದು ಮಹತ್ತರವಾದ ವಿಷಯ ಹೊರಬಂದಿದೆ.‌ ತಮ್ಮ ಅಮೋಘ ನಟನೆಯ ಮೂಲಕ ಕನ್ನಡಿಗರ ಮನ ಗೆದ್ದಿರುವ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ” ಕಬ್ಜ ” ಚಿತ್ರದಲ್ಲಿ ನಟಿಸಿದ್ದಾರೆ.

ಉಪೇಂದ್ರ, ಸುದೀಪ್ ಹಾಗೂ ಶಿವರಾಜಕುಮಾರ್ ಮೂವರು ನಟರನ್ನು ಒಂದೇ ಚಿತ್ರದಲ್ಲಿ ನೋಡುತ್ತಿರುವುದು ಅಭಿಮಾನಿಗಳ ಪಾಲಿಗಂತೂ ದೊಡ್ಡ ಹಬ್ಬವೇ ಸರಿ.
ಮಾರ್ಚ್ 4 ರಂದು ಬಹು ನಿರೀಕ್ಷಿತ ಈ ಚಿತ್ರದ ಟ್ರೇಲರ್ ಏಕಕಾಲಕ್ಕೆ ಎಲ್ಲಾ‌ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರ ಮಾರ್ಚ್ 17 ರಂದು ವಿಶ್ವದಾದ್ಯಂತ ತೆರೆ‌ ಕಾಣಲಿದೆ.

Categories
ಸಿನಿ ಸುದ್ದಿ

19.20.21 ಇದು ವಿಠಲ್ ಮಲೆಕುಡಿಯ ಕಾನೂನು ಹೋರಾಟದ ರೋಚಕ ಕಥೆ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ಬಹು ನಿರೀಕ್ಷಿತ ಹಾಗೂ ನೈಜ ಘಟನೆ ಆಧಾರಿತ ಸಿನಿಮಾ ‘19.20.21’ ನಾಳೆ ಬಿಡುಗಡೆಯಾಗುತ್ತಿದೆ. ಕರಾವಳಿ ಭಾಗದಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾವೆಂದು ಹೇಳಿಕೊಂಡು ಬಂದಿದ್ದ ಕಥೆ ಕೊನೆಗೂ ರಿವೀಲ್ ಆಗಿದೆ.

2012 ಮಾರ್ಚ್ 3ರಂದು ನಕ್ಸಲ್ ನಿಗ್ರಹ ಪಡೆಯಿಂದ ಬಂಧಿತರಾದ ವಿಠಲ್ ಮಲೆಕುಡಿಯ ಹಾಗೂ ಆತನ ತಂದೆ ಲಿಂಗಣ್ಣ ಮಲೆಕುಡಿಯ ಕಾನೂನು ಹೋರಾಟದ ಕಥೆಯೇ ಈ ಸಿನಿಮಾ. ನಕ್ಸಲರೊಂದಿಗೆ ಸಂಪರ್ಕದಲ್ಲಿದ್ದಾರೆಂದು ತಂದೆ ಮಗನನ್ನು ಬಂಧಿಸಲಾಗಿತ್ತು. ಆ ಸಮಯದಲ್ಲಿ ವಿಠಲ್ ಮಂಗಳೂರಿನ ವಿವಿಯಲ್ಲಿ ಪತ್ರಿಕೋದ್ಯಮ ಓದುತ್ತಿದ್ದರು. ವಿಠಲ್ ಪರೀಕ್ಷೆ ಬರೆಯುವಾಗ ಪೊಲೀಸರು ಕೈಯಲ್ಲಿದ್ದ ಕೋಳ ಕೂಡ ತೆಗೆದಿರಲಿಲ್ಲ. ಈ ಘಟನೆ ರಾಜ್ಯಾದ್ಯಂತ ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ತಮ್ಮ ಮೇಲಿನ ಆರೋಪದ ವಿರುದ್ಧ ಸತತ ಹತ್ತು ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ್ದ ವಿಠಲ್ ಅವರಿಗೆ 2021ರಲ್ಲಿ ಕೋರ್ಟ್ ನಿರ್ದೋಷಿ ಎಂದು ತೀರ್ಪು ನೀಡಿತ್ತು.

ವಿಠಲ್ ಮಲೆಕುಡಿಯ ಈ ಹೋರಾಟದ ಕಥೆಯೇ ‘19.20.21’ ಸಿನಿಮಾ. ಆಡಳಿತ ವ್ಯವಸ್ಥೆಯ ಅವ್ಯವಸ್ಥೆ ಹಾಗೂ ವಿಠಲ್ ಅವರ ಕಾನೂನು ಹೋರಾಟದ ರೋಚಕ ಕಥೆಯನ್ನು ಸೋಶಿಯಲ್ ಥ್ರಿಲ್ಲರ್ ಕಹಾನಿಯೊಂದಿಗೆ ತೆರೆ ಮೇಲೆ ತರ್ತಿದ್ದಾರೆ ಮಂಸೋರೆ. ಚಿತ್ರದಲ್ಲಿ ವಿಠಲ್ ಮಲೆಕುಡಿಯ ಪಾತ್ರದಲ್ಲಿ ರಂಗಭೂಮಿ ಕಲಾವಿದ ಶೃಂಗ ಬಿ.ವಿ ನಟಿಸಿದ್ದಾರೆ.

ಉಳಿದಂತೆ ಬಾಲಾಜಿ ಮನೋಹರ್, ಸಂಪತ್, ಎಂ.ಡಿ ಪಲ್ಲವಿ, ಮಹದೇವ್ ಹಡಪದ್, ಉಗ್ರಂ ಸಂದೀಪ್ ಒಳಗೊಂಡ ಪ್ರತಿಭಾನ್ವಿತರ ತಾರಾಗಣ ಚಿತ್ರದಲ್ಲಿದೆ. ಶಿವು ಬಿ. ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ ಚಿತ್ರಕ್ಕಿದ್ದು, ಬಿಂದು ಮಾಲಿನಿ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಸಾಹಿತ್ಯ ಚಿತ್ರಕ್ಕಿದೆ. ದೇವರಾಜ್. ಆರ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸತ್ಯ ಹೆಗ್ಡೆ ಸಹ ನಿರ್ಮಾಣವಿದೆ.

Categories
ಸಿನಿ ಸುದ್ದಿ

ಅರವಿಂದ್ ಸ್ವಾಮಿಗೆ ಅರ್ಜುನ್ ಸಾಥ್! ಆರಾಮ್ ಆಗಿ ಸಂಗೀತ ನೀಡ್ತಾರೆ ಜನ್ಯ

ನಟ ಅನೀಶ್ ತೇಜೇಶ್ವರ್, ನಿರ್ದೇಶಕ ಅಭಿಷೇಕ್ ಶೆಟ್ಟಿ ಕಾಂಬಿನೇಶನ್ ನಲ್ಲಿ ಮೂಡಿ ಬರ್ತಿರುವ ಸಿನಿಮಾ ‘ಆರಾಮ್ ಅರವಿಂದ್ ಸ್ವಾಮಿ’. ಮಾಸ್ ಹೀರೋ ಆಗಿ ಮಿಂಚಿದ್ದ ಅನೀಶ್ ತೇಜೇಶ್ವರ್ ಇದೇ ಮೊದಲ ಬಾರಿಗೆ ರೋಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಟೈಟಲ್ ಮೂಲಕ ಗಮನ ಸೆಳೆದಿರುವ ಈ ಚಿತ್ರದಿಂದ ಹೊಸದೊಂದು ಅಪ್ಡೇಟ್ ಹೊರಬಿದ್ದಿದೆ.

ರೋಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ‘ಆರಾಮ್ ಅರವಿಂದ್ ಸ್ವಾಮಿ’ ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ನೀಡುತ್ತಿದ್ದಾರೆ. ಚಿತ್ರತಂಡ ಅಧೀಕೃತವಾಗಿ ಮಾಹಿತಿ ಹಂಚಿಕೊಂಡಿದ್ದು, ಅರ್ಜುನ್ ಜನ್ಯ ಎಂಟ್ರಿಯಿಂದ ಸಿನಿಮಾ ಮೇಲಿನ ನಿರೀಕ್ಷೆಯೂ ದುಪ್ಪಟ್ಟಾಗಿದೆ.

‘ನಮ್ ಗಣಿ ಬಿಕಾಂ ಪಾಸ್, ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೂರನೇ ಸಿನಿಮಾವಿದು. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಮಿಲನ ನಾಗರಾಜ್ ಹಾಗೂ ಹೃತಿಕ ಶ್ರೀನಿವಾಸ್ ಅನೀಶ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.

‘ಅಕಿರ’ ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ‘ಗುಳ್ಟು’ ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ ಎರಡು ಶೆಡ್ಯೂಲ್ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಮೂರನೇ ಶೆಡ್ಯೂಲ್ ಕೇರಳದಲ್ಲಿ ಸೆರೆ ಹಿಡಿಯಲು ಪ್ಲ್ಯಾನ್ ಮಾಡಿಕೊಂಡಿದೆ. ಚಿತ್ರಕ್ಕೆ ಸಾಗರ್ ಛಾಯಾಗ್ರಹಣ, ಉಮೇಶ್ ಸಂಕಲನವಿದೆ.

Categories
ಸಿನಿ ಸುದ್ದಿ

2.0 ಇದು ರಾಮಚಾರಿಯ ಹೊಸ ವಿಷನ್! ರಾಘಣ್ಣ ಟ್ರೇಲರ್ ರಿಲೀಸ್

ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ತೇಜ್, ಆನಂತರ ಕನ್ನಡ, ತಮಿಳಿನ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಪ್ರಸ್ತುತ ತೇಜ್ ನಟಿಸಿರುವ “ರಾಮಾಚಾರಿ 2.0” ಚಿತ್ರದ ಟ್ರೇಲರ್ ಅನಾವರಣವಾಗಿದೆ. ಇತ್ತೇಚೆಗೆ ರಾಘವೇಂದ್ರ ರಾಜಕುಮಾರ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು.

ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ನಾನು, ಆನಂತರ ಪ್ರವೀಣ್ ನಾಯಕ್ ನಿರ್ದೇಶನದ “ಮೀಸೆ ಚಿಗುರಿದಾಗ” ಚಿತ್ರದಲ್ಲಿ ಅಭಿನಯಿಸಿದ್ದೆ. ಪಾರ್ವತಮ್ಮ ರಾಜಕುಮಾರ್, ಪುನೀತ್ ರಾಜಕುಮಾರ್ ಆ ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿದ್ದರು. ತಮಿಳಿನ‌ ಕೆಲವು ಚಿತ್ರಗಳಲ್ಲೂ ನಟಿಸಿರುವ ನಾನು, ಮೂರು ವರ್ಷಗಳ ಹಿಂದೆ “ರಿವೈಂಡ್” ಚಿತ್ರ‌ ಮಾಡಿದ್ದೆ. “ನಾಗರಹಾವು” ಕಾಲದಿಂದಲೂ “ರಾಮಾಚಾರಿ” ಎಂಬ ಹೆಸರಿಗೆ ಅದರದೇ ಆದ ವಿಶೇಷ ಸ್ಥಾನ. ಸುಮಾರು ಜನ ಈ ಶೀರ್ಷಿಕೆಗೆ ಅರ್ಜಿ ಹಾಕಿದ್ದರು. ನನಗೆ ಸಿಕ್ಕಿದ್ದು ನನ್ನ ಪುಣ್ಯ.

“ರಾಮಾಚಾರಿ 2.0” ವಿಭಿನ್ನ ಕಥೆಯುಳ್ಳ ಸಿನಿಮಾ. ರಾಘವೇಂದ್ರ ರಾಜಕುಮಾರ್ ನನ್ನ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನನ್ನನ್ನು ಮಗ ಎಂದು ಕರೆಯುವ ರಾಘಣ್ಣ ಅವರು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು ಖುಷಿಯಾಗಿದೆ. ಏಪ್ರಿಲ್ 7ರಂದು ಚಿತ್ರ ಬಿಡುಗಡೆಯಾಗಲಿದೆ. ಸಹಕಾರ ನೀಡಿದ ನನ್ನ ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ, ನಿರ್ಮಾಪಕ ಹಾಗೂ ನಾಯಕ ತೇಜ್.

ತೇಜ್ ಅವರು ನನಗದ ಕಥೆ ಹೇಳಿ, ನೀವು ಪಾತ್ರ ಮಾಡಬೇಕೆಂದರು. ನಾನು ನಿರ್ದೇಶಕರ ನಟ. ನಿರ್ದೇಶಕರು ಹೇಳಿದ ಹಾಗೆ ಕೇಳುತ್ತೇನೆ. ನಾನು ತೇಜ್ ಅವರ ತಂದೆಯಾಗಿ ಈ ಚಿತ್ರದಲ್ಲಿ ನಟಿಸಿದ್ದೇನೆ. ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ರಾಘವೇಂದ್ರ ರಾಜಕುಮಾರ್.

ನನ್ನನ್ನು ತೇಜ್ ತಮಿಳು ಚಿತ್ರದ ಮುಹೂರ್ತಕ್ಕೆ ಆಹ್ವಾನಿಸಿದ್ದರು. ಅಂದು ನೀವು ಒಳ್ಳೆಯ ನಟ ಆಗುತ್ತೀರಾ ಅಂದಿದ್ದೆ. ಎರಡು ಸಾವಿರ ರೂಪಾಯಿ ಅಡ್ವಾನ್ಸ್ ಸಹ ನೀಡಿದ್ದೆ. ಸುರದ್ರೂಪಿ ನಟ ತೇಜ್ ಈಗ “ರಾಮಾಚಾರಿ 2.0” ಚಿತ್ರ ನಿರ್ದೇಶಿಸಿ ನಟಿಸಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ಡಾ.ವಿ.ನಾಗೇಂದ್ರ ಪ್ರಸಾದ್ ಹಾರೈಸಿದರು. ಚಿತ್ರರಂಗದ ಅನೇಕ ಗಣ್ಯರು ಶುಭ ಕೋರಿದರು.

ಚಿತ್ರದಲ್ಲಿ ನಟಿಸಿರುವ ಕೌಸ್ತುಭ, ಚಂದನ, ವಿಜಯ್ ಚೆಂಡೂರ್, ಮುನಿಕೃಷ್ಣ ಮುಂತಾದ ಕಲಾವಿದರು ಹಾಗೂ ತಂತ್ರಜ್ಞರು ಚಿತ್ರದ ಬಗ್ಗೆ ಮಾತನಾಡಿದರು. ಸ್ಪರ್ಶ ರೇಖ, ಸ್ವಾತಿ ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

Categories
ಸಿನಿ ಸುದ್ದಿ

ಕಡಲ ತೀರ ನೋಡುವ ಬನ್ನಿ! ಈ ವಾರ ಕಡಲ ತೀರದ ಭಾರ್ಗವನ ಸಿನಿಮಾ ರಿಲೀಸ್…

ಉತ್ಸಾಹಿ ಯುವಕರ ತಂಡದಿಂದ ಮೂಡಿ ಬಂದಿರುವ ‘ಕಡಲತೀರದ ಭಾರ್ಗವ’ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿವೆ. ಈಗ ಚಿತ್ರ ಮಾರ್ಚ್ 03ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
‘ಕಡಲತೀರದ ಭಾರ್ಗವ’ ಎಂದರೆ ಮೊದಲಿಗೆ ನೆನಪಿಗೆ ಬರುವುದು ಡಾ. ಶಿವರಾಮ ಕಾರಂತರು. ಕನ್ನಡ ನಾಡಿನಲ್ಲಿ ಅವರು ‘ಕಡಲ ತೀರದ ಭಾರ್ಗವ’ ಎಂಬ ಬಿರುದಿನಿಂದಲೇ ಅವರು ಪ್ರಸಿದ್ಧರಾದವರು. ಆದರೆ, ಅವರಿಗೂ, ಈ ಚಿತ್ರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ, ಇದು ಅವರ ಜೀವನದ ಕಥೆಯಲ್ಲ ಎನ್ನುತ್ತಾರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿರುವ ಪನ್ನಗ ಸೋಮಶೇಖರ್.


ಈ ಕುರಿತು ಮಾತನಾಡುವ ಅವರು, ‘ಕಡಲು ಎಂದರೆ ಅಂತ್ಯವಿಲ್ಲದ್ದು ಅಥವಾ ಅನಂತ ಎಂದರ್ಥ. ಆ ಕಡಲನ್ನು ನಮ್ಮ ಚಿತ್ರದಲ್ಲಿ ಒಂದು ವಿಷಯಕ್ಕೆ ಹೋಲಿಸಿದ್ದೇನೆ. ಇನ್ನು, ಭಾರ್ಗವರಾಮ ಅಥವಾ ಪರಶುರಾಮ ಎನ್ನುವುದು ನಮ್ಮ ಪುರಾಣಗಳಲ್ಲಿ ಬರುವ ಒಂದು ಪವರ್ಫುಲ್ ಪಾತ್ರ. ಇಲ್ಲಿ ನಾಯಕ ಭಾರ್ಗವ, ಪರಶುರಾಮನ ಗುಣಲಕ್ಷಣಗಳನ್ನು ಹೊಂದಿರುತ್ತಾನೆ. ಏನೇ ಆದರೂ ಗುರಿ ಸಾಧಿಸುತ್ತೇನೆ ಎಂಬ ಛಲದಿಂದ ಮುನ್ನಡೆಯುತ್ತಿರುತ್ತಾನೆ. ಹಾಗಾಗಿ, ಚಿತ್ರಕ್ಕೆ ‘ಕಡಲತೀರದ ಭಾರ್ಗವ’ ಎಂದು ಹೆಸರಿಟ್ಟಿದ್ದೇವೆ.

ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವಾಗಿದ್ದು, ಡಾ. ಶಿವರಾಮ ಕಾರಂತರಿಗೂ ಯಾವುದೇ ಸಂಬಂಧವಿಲ್ಲ. ಅವರಿಗೆ ಧಕ್ಕೆ ತರುವಂತಹ ಯಾವುದೇ ಕೆಲಸವನ್ನೂ ಮಾಡಿಲ್ಲ. ಈಗಾಗಲೇ ಚಿತ್ರವನ್ನು ಹಲವರಿಗೆ ತೋರಿಸಿದ್ದೇವೆ. ಚಿತ್ರ ನೋಡಿದವರೆಲ್ಲರೂ ಮೆಚ್ಚಿಕೊಂಡಿದ್ದಾರೆ. ಶೀರ್ಷಿಕೆಗೆ ನ್ಯಾಯ ಸಲ್ಲಿಸಿದ್ದೇನೆ ಎಂದು ಅಭಿಪ್ರಾಯ ಪಟ್ಟಿದ್ದಾರೆ’ ಎನ್ನುತ್ತಾರೆ ಪನ್ನಗ ಸೋಮಶೇಖರ್.


‘ಒಬ್ಬ ಮನುಷ್ಯನಲ್ಲಿ ಎಲ್ಲ ತರಹದ ಭಾವನೆಗಳಿರುತ್ತವೆ. ಆ ಎಮೋಷನ್ಗಳನ್ನು ಇಟ್ಟುಕೊಂಡು ಮಾಡಿರುವ ಕಥೆಯೇ ‘ಕಡಲತೀರದ ಭಾರ್ಗವ’’ ಎನ್ನುತ್ತಾರೆ ಚಿತ್ರದ ನಾಯಕರಲ್ಲೊಬ್ಬರಾದ ವರುಣ್ ರಾಜು.

‘ಚಿತ್ರದ ಟ್ರೇಲರ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಟ್ರೇಲರ್ ನೋಡಿದವರೆಲ್ಲ, ಬಹಳ ಗ್ರಿಪ್ಪಿಂಗ್ ಆಗಿದೆ, ಕಥೆ ಗೊತ್ತಾಗುತ್ತಿಲ್ಲ, ಹೊಸಬರೇ ಸೇರಿ ಈ ಚಿತ್ರ ಮಾಡಿದ್ದು ಎಂದನಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ. ನಾಳೆ ಚಿತ್ರ ನೋಡುವ ಪ್ರೇಕ್ಷಕರು ಸಹ ಇದೇ ಅಭಿಪ್ರಾಯಪಟ್ಟರೆ ನಮ್ಮ ಶ್ರಮ ಸಾರ್ಥಕ’ ಎನ್ನುತ್ತಾರೆ ವರುಣ್.
ಈಗಾಗಲೇ ‘ಕಡಲತೀರದ ಭಾರ್ಗವ’ ಚಿತ್ರದ ಮೊದಲ ಟಿಕೆಟ್ ದಾಖಲೆಯ ಎರಡೂವರೆ ಲಕ್ಷ ರೂ.ಗಳಿಗೆ ಹರಾಜಿನಲ್ಲಿ ಮಾತಾಟವಾಗಿದೆ. ನಾಯಕ ವರುಣ್ ರಾಜು ಅವರ ಸಂಬಂಧಿಯೂ ಆದ ಮೋಹನ್ ರಾಜು ದುಡ್ಡು ಕೊಟ್ಟು ಮೊದಲ ಟಿಕೆಟ್ ಪಡೆದಿದ್ದಾರೆ.


‘ಕಡಲತೀರದ ಭಾರ್ಗವ’ ಚಿತ್ರದ ಹಿಂದೆ ಉತ್ಸಾಹಿ ಯುವಕರ ತಂಡವಿದ್ದು, ಈ ಚಿತ್ರವನ್ನು ಎವ ಕಲಾ ಸ್ಟುಡಿಯೋಸ್ನಡಿ ವರುಣ್ ರಾಜು ಮತ್ತು ಭರತ್ ಗೌಡ ಜಂಟಿಯಾಗಿ ನಿರ್ಮಿಸಿದ್ದಾರೆ. ಭರತ್ ಗೌಡ, ಶ್ರುತಿ ಪ್ರಕಾಶ್, ವರುಣ್ ರಾಜು, ರಾಘವ್ ನಾಗ್, ಕೆ.ಎಸ್. ಶ್ರೀಧರ್, ಅಶ್ವಿನ್ ಹಾಸನ್ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಅನಿಲ್ ಸಿ.ಜೆ. ಅವರ ಸಂಗೀತ ಮತ್ತು ಕೀರ್ತನ್ ಪೂಜಾರಿ ಛಾಯಾಗ್ರಹಣವಿದೆ.

Categories
ಸಿನಿ ಸುದ್ದಿ

ಮಾರ್ಚ್ 10ಕ್ಕೆ ಚೌಕಾಬಾರ ಆಟ ಶುರು: ಟ್ರೇಲರ್ ಗೆ ಮೆಚ್ಚುಗೆ…

ನವಿ ನಿರ್ಮಿತಿ ಬ್ಯಾನರ್ ನಲ್ಲಿ ನಮಿತಾರಾವ್ ನಿರ್ಮಿಸಿರುವ, ವಿಕ್ರಮ್ ಸೂರಿ ನಿರ್ದೇಶನದ “ಚೌಕಾಬಾರ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.. ಸಾಹಿತಿಗಳಾದ ಹೆಚ್. ಎಸ್. ವೆಂಕಟೇಶ್ ಮೂರ್ತಿ, ಬಿ.ಆರ್. ಲಕ್ಷ್ಮಣರಾವ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಧ್ಯಕ್ಷ ಭಾ.ಮ.ಹರೀಶ್, ನಟ ಸುಂದರರಾಜ್, ಲಹರಿ ವೇಲು, ರಘು ಭಟ್, ನಿರ್ಮಾಪಕ ಸಂಜಯ್ ಗೌಡ , ಸಚಿವ ಆರ್ ಅಶೋಕ್ ಪುತ್ರ ಶರತ್, ಉದ್ಯಮಿ ಉಮೇಶ್ ಕುಮಾರ್‌, ಸಂಜಯ್ ಸೂರಿ ಸೇರಿದಂತೆ ಅನೇರು ಟ್ರೇಲರ್ ಬಿಡುಗಡೆ ವೇಳೆ ಇದ್ದರು.

ವಿಕ್ರಮ್ ಸೂರಿ ನನಗೆ “ಚಿನ್ನಾರಿ‌ಮುತ್ತ” ಚಿತ್ರದ ಸಮಯದಿಂ ದಲೂ ಪರಿಚಯ. ಸಾಹಿತ್ಯದ ಬಗ್ಗೆ ವಿಶೇಷ ಕಾಳಜಿಯಿರುವ ವಿಕ್ರಮ್ ಸೂರಿ – ನಮಿತಾರಾವ್ ದಂಪತಿ ನನ್ನ ಹತ್ತಿರ ಈ ಚಿತ್ರಕ್ಕೆ ಹಾಡೊಂದು ಬರೆಸಿದ್ದಾರೆ. ಹಾಡುಗಳು ಹಾಗೂ ಟ್ರೇಲರ್ ಚೆನ್ನಾಗಿದೆ. ಚಿತ್ರ ಕೂಡ ಚೆನ್ನಾಗಿರುತ್ತದೆ ಎಂದರು ಹಿರಿಯ ಸಾಹಿತಿ ಹೆಚ್ ಎಸ್ ವೆಂಕಟೇಶ್ ಮೂರ್ತಿ.

ನಾನು ಹಾಗೂ ಹೆಚ್. ಎಸ್. ವಿ. ಇಬ್ಬರು ಈ ಚಿತ್ರಕ್ಕೆ ಹಾಡು ಬರೆದಿರುವುದು ಖುಷಿಯಾಗಿದೆ. ನಮ್ಮ ಹಾಡಿಗೆ ಅಶ್ವಿನ್ ಕುಮಾರ್ ಉತ್ತಮವಾಗಿ ರಾಗ ಸಂಯೋಜನೆ ಮಾಡಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ಸಾಹಿತಿ ಬಿ.ಆರ್ ಲಕ್ಷ್ಮಣರಾವ್ ಹಾರೈಸಿದರು.

ಭಾ.ಮ.ಹರೀಶ್, ಸುಂದರರಾಜ್, ಲಹರಿ ವೇಲು, ರಘು ಭಟ್, ಸಂಜಯ್ ಗೌಡ ಮುಂತಾದ ಗಣ್ಯರು “ಚೌಕಾಬಾರ” ಚಿತ್ರ ಯಶಸ್ವಿಯಾಗಲೆಂದು ಶುಭ ಕೋರಿದರು.

ಮಣಿ ಆರ್ ರಾವ್ ಅವರ ಕಾದಂಬರಿ ಆಧಾರಿತ “ಚೌಕಾಬಾರ” ಚಿತ್ರ, ಇದೇ ಮಾರ್ಚ್ ಹತ್ತರಂದು ಬಿಡುಗಡೆಯಾಗಲಿದೆ. ಚಿತ್ರದ ಆರಂಭದಿಂದಲೂ ನಿಮ್ಮೆಲ್ಲರ ಪ್ರೋತ್ಸಾಹ ಅಪಾರ. ಮುಂದು ಕೂಡ ನಿಮ್ಮ ಪ್ರೋತ್ಸಾಹ ಮುಂದುವರೆಯಲಿ ಎಂದರು ನಿರ್ಮಾಪಕಿ – ನಟಿ ನಮಿತಾರಾವ್ ಹಾಗೂ ನಿರ್ದೇಶಕ ವಿಕ್ರಮ್ ಸೂರಿ.

ಚಿತ್ರದ ನಾಯಕ ವಿಹಾನ್ ಪ್ರಭಂಜನ್, ನಟಿ ಕಾವ್ಯ ರಮೇಶ್ ಮುಂತಾದ ಕಲಾವಿದರು ಸಮಾರಂಭದಲ್ಲಿದ್ದರು. .

Categories
ಸಿನಿ ಸುದ್ದಿ

ಮಂಗಳವಾರಂ ಸಿನಿಮಾ ಪೋಸ್ಟರ್​ ಬಿಡುಗಡೆ: ಇದು ಅಜಯ್​ ಭೂಪತಿ ಚಿತ್ರ


‘ಆರ್​.ಎಕ್ಸ್​.100’ ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದವರು ನಿರ್ದೇಶಕ ಅಜಯ್​ ಭೂಪತಿ. ಆ ಚಿತ್ರದ ನಂತರ ಅವರ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇತ್ತು. ಅದಕ್ಕೆ ಉತ್ತರವಾಗಿ, ‘ಮಂಗಳವಾರಂ’ ಎಂಬ ಹೊಸ ಚಿತ್ರವನ್ನು ಅವರು ಘೋಷಿಸಿದ್ದು, ಆ ಚಿತ್ರದ ಕಾನ್ಸಪ್ಟ್​ ಪೋಸ್ಟರ್​ ಇತ್ತೀಚೆಗೆ ಬಿಡುಗಡೆಯಾಗಿದೆ.


‘ಮಂಗಳವಾರಂ’ ಚಿತ್ರವನ್ನು ಸ್ವಾತಿ ಗುಣಪತಿ ಮತ್ತು ಸುರೇಶ್​ ವರ್ಮಾ ಒಡೆತನದ ಮುದ್ರಾ ಮೀಡಿಯಾ ವರ್ಕ್ಸ್​ ಹಾಗೂ ಅಜಯ್​ ಭೂಪತಿ ಅವರ ಎ ಕ್ರಿಯೇಟಿವ್​ ವರ್ಕ್ಸ್​ ಜಂಟಿಯಾಗಿ ನಿರ್ಮಿಸುತ್ತಿವೆ. ಇದುವರೆಗೂ ನಿರ್ದೇಶಕರಾಗಿದ್ದ ಅಜಯ್​ ಭೂಪತಿ, ಈ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ಅವರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರ ಬರೀ ತೆಲುಗುಗಷ್ಟೇ ಸೀಮಿತವಲ್ಲ, ತೆಲುಗಿನಲ್ಲಿ ನಿರ್ಮಾಣವಾಗಿ ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಿಗೂ ಡಬ್​ ಆಗಿ ಬಿಡುಗಡೆಯಾಗಲಿದೆ. ಈ ಮೂಲಕ ಇದೊಂದು ದಕ್ಷಿಣ ಭಾರತದ ಚಿತ್ರವಾಗಲಿದೆ.


ಇದೊಂದು ವಿಭಿನ್ನ ಚಿತ್ರ ಎಂದು ಬಣ್ಣಿಸುವ ಅಜಯ್​, ‘ಭಾರತೀಯ ಚಿತ್ರರಂಗದಲ್ಲೇ ಇದುವರೆಗೂ ಯಾರೂ ಪ್ರಯತ್ನಿಸದ ಒಂದು ವಿಭಿನ್ನ ಅಂಶವನ್ನಿಟ್ಟುಕೊಂಡು ಚಿತ್ರ ಮಾಡುತ್ತಿದ್ದೇವೆ. ಈ ಚಿತ್ರದಲ್ಲಿ ಒಟ್ಟು 30 ಪಾತ್ರಗಳಿದ್ದು, ಪ್ರತಿ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಪ್ರತಿಯೊಂದು ಪಾತ್ರವೂ ಕಥೆಯನ್ನು ಮುನ್ನಡೆಸುವುದಷ್ಟೇ ಅಲ್ಲ, ಒಟ್ಟಾರೆ ಕಥೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ’ ಎಂದು ಹೇಳಿದ್ದಾರೆ.
ಇದೊಂದು ಪಕ್ಕಾ ದಕ್ಷಿಣ ಭಾರತದ ಚಿತ್ರ ಎನ್ನುವ ನಿರ್ಮಾಪಕರಾದ ಸ್ವಾತಿ ಗುಣಪತಿ ಮತ್ತು ಸುರೇಶ್​ ವರ್ಮ, ”ಆರ್​.ಎಕ್ಸ್​.100′ ಚಿತ್ರದಂತೆಯೇ, ಈ ಚಿತ್ರದ ಮೂಲಕವೂ ಅಜಯ್​ ಪ್ರೇಕ್ಷಕರಿಗೊಂದು ಅನಿರೀಕ್ಷಿತ ಸರ್​ಪ್ರೈಸ್​ ಕೊಡುತ್ತಾರೆ ಎಂಬ ನಂಬಿಕೆ ಇದೆ.

ಕಥೆ ಅದ್ಭುತವಾಗಿ ರೂಪುಗೊಂಡಿದ್ದು, ಎಲ್ಲರಿಗೂ ಇಷ್ಟವಾಗುತ್ತದೆ. ಸದ್ಯ ಪ್ರೀ-ಪ್ರೊಡಕ್ಷನ್​ ಕೆಲಸಗಳು ಪ್ರಾರಂಭವಾಗಿದ್ದು, ಸದ್ಯದಲ್ಲೇ ಕಲಾವಿದರ ಆಯ್ಕೆ ಅಂತಿಮವಾಗಲಿದೆ’ ಎನ್ನುತ್ತಾರೆ
‘ಮಂಗಳವಾರಂ’ ಚಿತ್ರಕ್ಕೆ ಕನ್ನಡದ ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸುತ್ತಿದ್ದು, ದಾಶರಥಿ ಶಿವೇಂದ್ರ ಅವರ ಛಾಯಾಗ್ರಹಣವಿದೆ, ರಘು ಕುಲಕರ್ಣಿ ಅವರ ಕಲಾ ನಿರ್ದೇಶನವಿರಲಿದೆ. ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಸಾಯಿಕುಮಾರ್​ ಯಡವಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಮಾರ್ಚ್ 10ಕ್ಕೆ ಮಂಡಲ: ಸೈನ್ಸ್ ಫಿಕ್ಷನ್ ಸಿನಿಮಾ ದರ್ಶನಕ್ಕೆ ದಿನಗಣನೆ

ಅಜಯ್ ಸರ್ಪೇಷ್ಕರ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಸೈನ್ಸ್ ಫಿಕ್ಷನ್ ಸಿನಿಮಾ ‘ಮಂಡಲ’ ಬಿಡುಗಡೆಗೆ ಸಜ್ಜಾಗಿದೆ. ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಕಿರಣ್ ಶ್ರೀನಿವಾಸ್, ಶರ್ಮಿಳಾ ಮಾಂಡ್ರೆ, ಸಂಯುಕ್ತ ಹೊರನಾಡು ಮುಖ್ಯ ಭೂಮಿಕೆಯ ಈ ಚಿತ್ರ ಮಾರ್ಚ್ 10ರಂದು ತೆರೆ ಮೇಲೆ ಮ್ಯಾಜಿಕ್ ಕ್ರಿಯೇಟ್ ಮಾಡಲು ರೆಡಿಯಾಗಿದೆ. ಅದಕ್ಕೂ ಮುನ್ನ ಸಖತ್ ಕ್ಯೂರಿಯಾಸಿಟಿ ಹುಟ್ಟಿಸುವ ಟ್ರೇಲರ್ ಬಿಡುಗಡೆ ಮಾಡಿ ಗಮನ ಸೆಳೆದಿದೆ.

ನಿರ್ದೇಶಕ ಅಜಯ್ ಸರ್ಪೇಷ್ಕರ್ ಮಾತನಾಡಿ ಸೈನ್ಸ್ ಫಿಕ್ಷನ್ ಸಿನಿಮಾವಿದು. ಕನ್ನಡಲ್ಲಿ ಸೈನ್ಸ್ ಫಿಕ್ಷನ್ ಸಿನಿಮಾಗಳು ತುಂಬಾನೇ ಕಡಿಮೆ. ಆದ್ರಿಂದ ಈ ರೀತಿಯ ಜಾನರ್ ಸಿನಿಮಾ ಮಾಡಲು ನಿರ್ಧರಿಸಿ ಕಥೆ ಬರೆದೆ. ಫೋಟೋಗ್ರಫಿಯಲ್ಲಿ ಆಸಕ್ತಿ ಇತ್ತು, ಕಿರುಚಿತ್ರ ನಿರ್ದೇಶನ ಮಾಡಿದ್ದೇನೆ. ಅದೆಲ್ಲ ಅನುಭವ ಇಟ್ಟುಕೊಂಡು ಮೊದಲ ಬಾರಿ ಸಿನಿಮಾ ನಿರ್ದೇಶನ ಮಾಡಿದ್ದೇನೆ. ವಿಶ್ಯುವಲ್ ಎಫೆಕ್ಟ್ಸ್ ತುಂಬಾನೇ ಇದೆ ಅಷ್ಟೇ ಚೆನ್ನಾಗಿ ಕೂಡ ಮೂಡಿ ಬಂದಿದೆ. ಇಡೀ ಕುಟುಂಬ ಕುಳಿತು ನೋಡಬಹುದಾದ ಸಿನಿಮಾವಿದು. ಮಾರ್ಚ್ 10ರಂದು ಬಿಡುಗಡೆಯಾಗುತ್ತಿದೆ. ಸಿನಿಮಾ ನೋಡಿ ಸಪೋರ್ಟ್ ಮಾಡಿ ಎಂದು ಮಾಹಿತಿ ಹಂಚಿಕೊಂಡರು.

ನಟ ಕಿರಣ್ ಶ್ರೀನಿವಾಸ್ ಮಾತನಾಡಿ ನಾನು ಚಿಕ್ಕ ವಯಸ್ಸಿನಿಂದಲೂ ಸೈನ್ಸ್ ಫಿಕ್ಷನ್ ಸಿನಿಮಾಗಳನ್ನು ನೋಡಿ ಬೆಳೆದಿದ್ದೆ, ಕನ್ನಡದಲ್ಲಿ ಇಂತಹ ಸಿನಿಮಾ ಬರುತ್ತಿದೆ ಎಂದಾಗ ಎರಡು ಕೈಯಿಂದ ಅವಕಾಶ ಬಾಚಿಕೊಂಡೆ. ಚಿತ್ರದ ತಾರಾಬಳಗ ಕೂಡ ಸಿನಿಮಾ ಒಪ್ಪಿಕೊಳ್ಳಲು ಮತ್ತೊಂದು ಕಾರಣ. ಪ್ರಕಾಶ್ ಬೆಳವಾಡಿ, ಸುಧಾ ಮೇಡಂ ಇವರೆಲ್ಲರ ಜೊತೆ ನಟಿಸಲು ಒಂದೊಳ್ಳೆ ಅವಕಾಶ ಸಿಕ್ತು. ಎಲ್ಲಾ ರೀತಿಯ ಸಿನಿಮಾ ಮಾಡಿದ್ದೇವೆ ಇದೀಗ ‘ಮಂಡಲ’ ಮೂಲಕ ಸೈನ್ಸ್ ಫಿಕ್ಷನ್ ಸಿನಿಮಾದಲ್ಲಿ ನಟಿಸಿದ್ದೇನೆ. ಎಲ್ಲರೂ ಈ ರೀತಿಯ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು.

ನಟಿ ಶರ್ಮಿಳಾ ಮಾಂಡ್ರೆ ಮಾತನಾಡಿ ನಾನು ಜಾಸ್ತಿ ಸೈನ್ಸ್ ಫಿಕ್ಷನ್ ಜಾನರ್ ಸಿನಿಮಾ ನೋಡುತ್ತಿದ್ದೆ, ಕನ್ನಡದಲ್ಲೂ ಈ ರೀತಿಯ ಜಾನರ್ ಸಿನಿಮಾ ಯಾಕೆ ಬರಲ್ಲ ಎಂದು ಯೋಚಿಸುತ್ತಿದ್ದೆ. ಆ ಸಮಯದಲ್ಲಿ ಸಿಕ್ಕ ಸಿನಿಮಾವಿದು. ಏರೋಸ್ಪೇಸ್ ಇಂಜಿನಿಯರ್ ಪಾತ್ರ ನನ್ನದು. ಮಾಯಾ ಪಾತ್ರದಲ್ಲಿ ನಟಿಸಿದ್ದೇನೆ. ಕ್ಯಾರೆಕ್ಟರ್ ತುಂಬಾ ಇಷ್ಟವಾಯ್ತು. ತುಂಬಾ ಸೀರಿಯಸ್ ಪಾತ್ರ ನನ್ನದು. ಬೇರೆ ಸಿನಿಮಾಗಳಿಗಿಂತ ತುಂಬಾ ಡಿಫ್ರೆಂಟ್ ಪಾತ್ರವಿದು ಎಂದು ಮಾಹಿತಿ ಹಂಚಿಕೊಂಡರು.

ನಟಿ ಸಂಯುಕ್ತ ಹೊರನಾಡು ಮಾತನಾಡಿ ಈ ಸಿನಿಮಾದ ಕಾನ್ಸೆಪ್ಟ್ ತುಂಬಾ ಇಂಟ್ರಸ್ಟ್ ಎನಿಸ್ತು. ವಿಜ್ಞಾನದ ಬಗ್ಗೆ ಯಾವಾಗಲೂ ಎ್ಲಲರಿಗೂ ಒಂದು ಕುತೂಹಲವಿರುತ್ತೆ. ಈ ಸಿನಿಮಾ ಕೂಡ ಅಷ್ಟೇ ಕುತೂಹಲ ಮೂಡಿಸುತ್ತೆ. ಚಿತ್ರದಲ್ಲಿ ಖಡಕ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದೇನೆ ಎಂದು ತಿಳಿಸಿದ್ರು.

ಸುಧಾ ಬೆಳವಾಡಿ, ನೀನಾಸಂ ಅಶ್ವಥ್, ಮನ್ ದೀಪ್ ರಾಯ್, ಕಿರಣ್ ನಾಯಕ್, ಸಮನ್ವಿತಾ ಶೆಟ್ಟಿ, ನರೇಶ್ ನರಸಿಂಹನ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ. ಜೆಸ್ಸಿ ಕ್ಲಿಂಟನ್ ಸಂಗೀತ ನಿರ್ದೇಶನ, ರಾಮಿಶೆಟ್ಟಿ ಪವನ್ ಸಂಕಲನ, ಮನೋಹರ್ ಜೋಶಿ ಛಾಯಾಗ್ರಹಣ, ನಿತಿನ್ ಲುಕೋಸೆ ಸೌಂಡ್ ಡಿಸೈನ್, ಒಲಿವರ್ ಎಲ್ವಿಸ್ ಹಾಗೂ ಮನೋಜ್ ಬೆಳ್ಳೂರು VFX, ಪ್ರಕಾಶ್ ಬೆಳವಾಡಿ ಹಾಗೂ ಅಜೆಯ್ ಸರ್ಪೇಷ್ಕರ್ ಚಿತ್ರಕಥೆ ‘ಮಂಡಲ’ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಶಿಡ್ಲಘಟ್ಟ ‘ಕಬ್ಜ’ ಹಬ್ಬ! ಚಂದ್ರು ಊರಲ್ಲಿ ಜನಜಾತ್ರೆ: ಮಾಸ್ ಹಾಡಿಗೆ ಜೈ ಹೋ ಅಂದ್ರು ಫ್ಯಾನ್ಸ್…

ಸದ್ಯ ಪ್ಯಾನ್ ಇಂಡಿಯಾ ಹಂತದಲ್ಲಿ ಟ್ರೆಂಡಿಂಗ್‌ನಲ್ಲಿರುವ ಸಿನಿಮಾ ಎಂದರೆ ‘ಕಬ್ಜ’. ಈಗಾಗಲೇ ತನ್ನ ಟೀಸರ್, ಎರಡು ಹಾಡುಗಳಿಂದ ಜನರ ಮನ ಗೆದ್ದಿರುವ ‘ಕಬ್ಜ’ ಚಿತ್ರದಿಂದ ಇದೀಗ ಪಡ್ಡೆ ಹುಡುಗರ ಹೃದಯಕ್ಕೆ ಹತ್ತಿರವಾಗುವ ಹಾಡೊಂದು ಬಿಡುಗಡೆಯಾಗಿದೆ. ಹೌದು ಇತ್ತೀಚೆಗೆ ಆರ್.ಚಂದ್ರು ಅವರ ತವರು ಶಿಡ್ಲಘಟ್ಟದಲ್ಲಿ “ಕಬ್ಜ” ಚಿತ್ರದ ‘ಚುಮ್ ಚುಮ್ ಚಳಿ ಚಳಿ . ತಬ್ಕೊ ಚಳುವಳಿ’ ಎಂಬ ಮಾಸ್ ಹಾಡು ಅಪಾರ ಜನಸಾಗರದ ನಡುವೆ ಬಿಡುಗಡೆಯಾಯಿತು.

ಪ್ರಮೋದ್ ಮರವಂತೆ ಬರೆದಿರುವ ಈ ಹಾಡನ್ನು ಐರಾ ಉಡುಪಿ, ಮನೀಶ್ ದಿನಕರ್ ಹಾಗೂ ಸಂತೋಷ್ ವೆಂಕಿ ಹಾಡಿದ್ದಾರೆ. ರವಿ ಬಸ್ರೂರ್ ಸಂಗೀತ ನೀಡಿರುವ ಈ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.
ಶಿಡ್ಲಘಟ್ಟದ ಜೂನಿಯರ್ ಕಾಲೇಜ್ ನೆಹರು ಮೈದಾನದಲ್ಲಿ ನಡೆದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್, ಆರೋಗ್ಯ ಸಚಿವ ಡಾಕ್ಟರ್ ಕೆ. ಸುಧಾಕರ್, ಶಿಡ್ಲಘಟ್ಟದ ಶಾಸಕರಾದ. ಮುನಿಯಪ್ಪ, ಸಮಾಜ ಸೇವಕ ರಾಮಚಂದ್ರ ಗೌಡರು, ಹೆಚ್.ಎಂ. ರೇವಣ್ಣ, ವಿತರಕ ಆನಂದ್ ಪಂಡಿತ್ ಸೇರಿದಂತೆ ಅನೇಕ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಭಾಗಿಯಾಗಿದ್ದರು.

ದೊಡ್ಡ ಪರದೆಯಲ್ಲಿ ಚಿತ್ರದ ಟೀಸರ್ ಗೀತೆಗಳನ್ನು ನೋಡಿದ ಜನಸಾಗರ ಮತ್ತೊಮ್ಮೆ ಮಗದೊಮ್ಮೆ ಕೇಳಿ, ನೋಡಿ ಸಂಭ್ರಮಿಸಿದರು. ಜೊತೆಗೆ ಗುರುಕಿರಣ್ ಗಾಯನ, ರೋಬೋ ಗಣೇಶ್ ಡ್ಯಾನ್ಸ್ ಮುಂತಾದ ಮನೋರಂಜನಾ ಕಾರ್ಯಕ್ರಮಗಳಿಗೆ ಜನ‌ ಚಪ್ಪಾಳೆ ಸುರಿಸಿದರು.

ಹಾಡು ಬಿಡುಗಡೆ ಮಾಡಿ ಮಾತನಾಡಿದ ಶಿವರಾಜಕುಮಾರ್ ಅವರು, ನಾನು ಉಪೇಂದ್ರ ಅಭಿಮಾನಿ. ಅವರು ‘ಓಂ’ ಸಿನಿಮಾ ಮೂಲಕ ಇಡೀ ಭಾರತಕ್ಕೆ ರೌಡಿಸಂ ಚಿತ್ರ ನೀಡಿದವರು. ಅವರ ಜೊತೆ ಕೆಲಸ ಮಾಡುವುದೆ ಖುಷಿ. ಆರ್.ಚಂದ್ರು ಕೂಡ ಅದ್ಭುತವಾದ ಸಿನಿಮಾಗಳನ್ನು ನೀಡುತ್ತಾ ಬರುತ್ತಿದ್ದಾರೆ’ ಎಂದು ತಂಡಕ್ಕೆ ಶುಭ ಹಾರೈಸಿ ಓಂ ಸಿನಿಮಾ ಡೈಲಾಗ್ ಹೇಳಿ, “ಕಬ್ಜ”ದ “ಚುಮ್ ಚುಮ್” ಗೀತೆಗೆ ಹೆಜ್ಜೆ ಹಾಕಿದರು.

ಇದೇ ಸಂದರ್ಭದಲ್ಲಿ ಆರೋಗ್ಯ ಸಚಿವ ಕೆ. ಸುಧಾಕರ್ ಮಾತನಾಡಿ, ‘ಇದು ‘ಕಬ್ಜ’ ಸಿನಿಮಾದ ಹಬ್ಬ. ಈ ಹಾಡು ಬಿಡುಗಡೆ ಸಮಾರಂಭವನ್ನು ಚಂದ್ರು ಅವರಿಗೆ ನಮ್ಮ ಚಿಕ್ಕಬಳ್ಳಾಪುರದಲ್ಲಿ ಮಾಡೋಣ ಎಂದಿದ್ದೆ. ಆದರೆ, ಅವರು ತಮ್ಮ ತವರಲ್ಲಿ ಮಾಡಿದ್ದಾರೆ. ಈ ಮೊದಲು ನಾನು “ಆರ್ ಆರ್ ಆರ್” ಚಿತ್ರದ ಆಡಿಯೋ ಲಾಂಚ್ ಮಾಡಿದ್ದೆ. ಅದು ಹಿಟ್ ಆಯ್ತು. ಅದಕ್ಕಿಂತ ದೊಡ್ಡ ಮಟ್ಟದಲ್ಲಿ ‘ಕಬ್ಜ’ ಗೆಲ್ಲಬೇಕು. ಇದೊಂದು ಸದಭಿರುಚಿಯ ಯುವಕರ ಸಿನಿಮಾ ಎನ್ನಬಹುದು. ಸಿನಿಮಾ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಲಿ. ಇಂದು ಎಲ್ಲಾ ಕಡೆ ಕನ್ನಡ ಸಿನಿಮಾಗಳನ್ನು ಜನ ನೋಡಿ,‌ ಮೆಚ್ಚಿಕೊಳ್ಳುತ್ತಿದ್ದಾರೆ ಎಂದರು.

‘ಈಗಾಗಲೇ ನಾವು ಎರಡು ಗೀತೆಗಳನ್ನು ಹೈದರಾಬಾದ್, ಚೆನೈನಲ್ಲಿ ಬಿಡುಗಡೆ ಮಾಡಿದ್ದು. ಈ ಹಾಡನ್ನು ನಮ್ಮೂರು ಶಿಡ್ಲಘಟ್ಟದಲ್ಲಿ ಬಿಡುಗಡೆ ಮಾಡಿದ್ದೇವೆ. ಎಲ್ಲಾ ಅಥಿತಿಗಳು ಬಂದಿರುವುದು ತುಂಬಾ ಖುಷಿಯಾಗಿದೆ. ಅದರಲ್ಲೂ ಗೀತಕ್ಕ ಅವರು ನಮ್ಮ ‘ಶ್ರೀ ಸಿದ್ದೇಶ್ವರ ಎಂಟರ್‌ ಪ್ರೈಸಸ್’ ಬ್ಯಾನರ್‌ ಅನ್ನು ಬಿಡುಗಡೆ ಮಾಡಿದ್ದರು. ಅವರು ಇಂದು ಈ ಸಮಾರಂಭಕ್ಕೆ ಬಂದಿರುವುದು ವಿಶೇಷ. ದೊಡ್ಡ ಮಟ್ಟದಲ್ಲಿ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ ಸದ್ದು ಮಾಡುತ್ತಿದೆ. ಬಾಲಿವುಡ್‌ನಲ್ಲಿ ಸುಮಾರು 1800 ಕ್ಕೂ ಹೆಚ್ಚು ಥಿಯೇಟರ್‌ನಲ್ಲಿ ನಮ್ಮ ‘ಕಬ್ಜ’ ಬಿಡುಗಡೆ ಆಗಲಿದೆ’ ಎಂದು ನಿರ್ದೇಶಕ – ನಿರ್ಮಾಪಕ ಆರ್ ಚಂದ್ರು ಹೇಳಿದರು.

ನಂತರ ಚಿತ್ರದ ನಾಯಕ ರಿಯಲ್ ಸ್ಟಾರ್ ಉಪೇಂದ್ರ ಮಾತನಾಡಿ ‘ಆದಷ್ಟು ಬೇಗ ಶಿವಣ್ಣನ ಜೊತೆ ಸಿನಿಮಾ ಮಾಡುತ್ತೇನೆ. ಅಪ್ಪುಗೆ ಆ್ಯಕ್ಷನ್-ಕಟ್ ಹೇಳುವ ಆಸೆ ಇತ್ತು. ಅದು ಈಡೇರಲಿಲ್ಲ. “ಕಬ್ಜ” ಬಗ್ಗೆ ಹೇಳುವುದಾದರೆ, ಇಂದಿನ ಹೀರೋ ಸಂಗೀತ ನಿರ್ದೇಶಕ ರವಿ ಬಸ್ರೂರ್. ಈ ಚಿತ್ರದಲ್ಲಿ ಅವರು ಮಾಸ್, ಕ್ಲಾಸಿಕ್ ಹಾಗೂ ಮೆಲೋಡಿ ಗೀತೆಗಳನ್ನು ಕೊಟ್ಟಿದ್ದಾರೆ. ಚಂದ್ರು ಈ ಸಿನಿಮಾ ಮೂಲಕ ಪ್ರತಿಯೊಬ್ಬರ ಹೃದಯ “ಕಬ್ಜ” ಮಾಡಲಿದ್ದಾರೆ. ಚಿತ್ರದಲ್ಲಿ ತುಂಬಾ ಅದ್ಭುತಗಳಿದ್ದು, ಪ್ರೇಕ್ಷಕರಿಗೆ ನಿಜಕ್ಕೂ ಹಬ್ಬ . ಚಂದ್ರು ಕಥೆಯನ್ನು ಎಲ್ಲೂ ಬಿಟ್ಟು ಕೊಟ್ಟಿಲ್ಲ. ಕಥೆಯೇ ಚಿತ್ರದ ಹೈಲೈಟ್ ಎನ್ನಬಹುದು’ ಎಂದರು.

‘ಇಡೀ ತಂಡ ಶ್ರಮದಿಂದ ಸಿನಿಮಾ ಮಾಡಿದ್ದು, “ಕಬ್ಜ”ದಲ್ಲಿ ನನಗೊಂದು ಒಳ್ಳೆ ಪಾತ್ರವಿದೆ’ ಎಂದು ಎನ್ನುತ್ತಾರೆ ನಾಯಕಿ ಶ್ರೇಯಾ ಶರಣ್.
ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಅನೂಪ್ ರೇವಣ್ಣ ಸಹ “ಕಬ್ಜ” ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

ಅಂದ ಹಾಗೆ ಅಪ್ಪು ಹುಟ್ಟು ಹಬ್ಬದ ಪ್ರಯುಕ್ತ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ಇದೇ ಮಾರ್ಚ್ 17ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮುಖ್ಯವಾದ ಪಾತ್ರವೊಂದರಲ್ಲಿ ಕಿಚ್ಚ ಸುದೀಪ್ ಅಭಿನಯ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಅಲಂಕಾರ್ ಪಾಂಡ್ಯನ್ ಸಾಥ್ ನೀಡಿದ್ದಾರೆ.

error: Content is protected !!