Categories
ಸಿನಿ ಸುದ್ದಿ

ಎನ್ ಎಫ್ ಟಿ ಯಿಂದ ಕಿಚ್ಚನ ಫ್ಯಾನ್ಸ್ ಗೆ ಸ್ವೀಟ್ ನ್ಯೂಸ್: ಕಿಚ್ಚ ವರ್ಸ್ ಲಾಂಚ್

ಕಿಚ್ಚ ಸುದೀಪ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಬಿಡುಗಡೆಗೆ ಇನ್ನೇನು ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದೆ. ರಾ ರಾ ರಕ್ಕಮ್ಮ, ಟ್ರೇಲರ್ ವಿಕ್ರಾಂತ್ ರೋಣ ಪ್ರಪಂಚದ ಅಧ್ಬುತ ಲೋಕವನ್ನು ಸಿನಿಪ್ರಿಯರಿಗೆ ಪರಿಚಯಿಸಿದೆ. ಜುಲೈ 28ಕ್ಕೆ ಸಿನಿಮಾ ನೋಡಿ ಕಣ್ತುಂಬಿಕೊಳ್ಳೊದೊಂದು ಬಾಕಿ ಎನ್ನುತ್ತಿದ್ದ ಅಭಿಮಾನಿ ಬಳಗಕ್ಕೆ ಕಿಚ್ಚನ ಅಂಗಳದಿಂದ ಮತ್ತೊಂದು ಸೂಪರ್ ಡೂಪರ್ ಸರ್ಪ್ರೈಸ್ ಸಿಕ್ಕಿದೆ. ವಿಕ್ರಾಂತ್ ರೋಣ ಸಿನಿಮಾ ಕೂಡ ಮೆಟಾ ವರ್ಸ್ ಲೋಕಕ್ಕೆ ಕಾಲಿಟ್ಟಿದ್ದು. ಎನ್ ಎಫ್ ಟಿ ಸಂಸ್ಥೆ ‘ಕಿಚ್ಚ ವರ್ಸ್’ ಮೂಲಕ ವಿಕ್ರಾಂತ್ ರೋಣವನ್ನು ಪ್ರಸ್ತುತ ಪಡಿಸಲಿದೆ.

ಈ ಕುರಿತು ಎನ್ ಎಫ್ ಟಿ ಸಂಸ್ಥೆ ಕಿಚ್ಚ ಸುದೀಪ ಒಳಗೊಂಡಂತೆ ವಿಕ್ರಾಂತ್ ರೋಣ ತಂಡದೊಂದಿಗೆ ಬಂದು ‘ಕಿಚ್ಚ ವರ್ಸ್’ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ‘ಕಿಚ್ಚ ವರ್ಸ್’ ಅನ್ನು ಎನ್ ಎಫ್ ಟಿ ಸಂಸ್ಥೆ ವಿಕ್ರಾಂತ್ ರೋಣ ಚಿತ್ರತಂಡದೊಂದಿಗೆ ಲಾಂಚ್ ಮಾಡಿದೆ. ಎನ್ ಎಫ್ ಟಿ ಸಂಸ್ಥೆ ಸೃಷ್ಟಿಸಿರುವ ಕಿಚ್ಚ ವರ್ಸ್ ಜಗತ್ತು ಕಿಚ್ಚನಿಗೂ ಸಖತ್ ಸರ್ಪ್ರೈಸ್ ಆಗಿದ್ದು ಮೊದಲ ಬಾರಿ ಇದರ ಬಗ್ಗೆ ಕೇಳಿದಾಗ ಹೇಗಿರುತ್ತೋ ಎಂಬ ಕಾಲ್ಪನಿಕ ಲೋಕದಲ್ಲಿದ್ದೆ. ನನಗೂ ಇದು ಅರ್ಥವಾಗಿರಲಿಲ್ಲ. ಆದ್ರೆ ಅದನ್ನು ಸ್ವತಃ ನಾನೇ ನೋಡಿದಾಗ. ಅನುಭವಿಸಿದಾಗ ತುಂಬಾನೇ ಖುಷಿ ಪಟ್ಟೆ. ತುಂಬಾನೇ ಅಧ್ಬುತ ಕೆಲಸವನ್ನು ಈ ತಂಡ ಮಾಡಿದೆ ಖಂಡಿತ ಎಲ್ಲರಿಗೂ ಇಂತಹದ್ದೇ ಒಂದು ಒಳ್ಳೆಯ ಅನುಭವವನ್ನು ಇದು ನೀಡಲಿದೆ ಎಂಬ ಭರವಸೆ ಇದೆ ಎಂದು ನಟ ಕಿಚ್ಚ ಸುದೀಪ ಕಿಚ್ಚ ವರ್ಸ್ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಕಿಚ್ಚ ವರ್ಸ್ ಕಿಚ್ಚನ ಜಗತ್ತಾಗಿದ್ದು ಈ ಲೋಕದಲ್ಲಿ ನೀವು ಕಿಚ್ಚನ ಜೊತೆ ಮಾತನಾಡಬಹುದು, ಅವರ ಜೊತೆ ಸಮಯ ಕಳೆಯಬಹುದು ಹೀಗೆ ನಿಮ್ಮ ನೆಚ್ಚಿನ ನಟನೊಂದಿಗೆ ಕಾಲ ಕಳೆಯಲು ಕಿಚ್ಚ ವರ್ಸ್ ಅವಕಾಶ ಮಾಡಲಿದ್ದು, ಕಿಚ್ಚನ ಅಭಿಮಾನಿಗಳಿಗೆ ಇದು ತುಂಬಾನೇ ಖುಷಿ ಕೊಡಲಿದೆ. ಕಿಚ್ಚ ವರ್ಸ್ ಲೋಕವನ್ನು ಪ್ರವೇಶಿಸಲು ಎನ್ ಎಫ್ ಟಿ ಮೆಂಬರ್ ಶಿಪ್ ಕಾರ್ಡ್ ಪ್ರತಿಯೊಬ್ಬರು ಹೊಂದಿರಬೇಕು ಎಂದು ಕಾಫಿ ಅಂಡ್ ಬನ್ ಇನೋವೇಷನ್ಸ್ ಸಂಸ್ಥೆ ಸ್ಥಾಪಕಿ ಪ್ರಿಯಾ ಸುದೀಪ್ ಕಿಚ್ಚ ವರ್ಸ್ ಬಗ್ಗೆ ತಿಳಿಸಿದ್ದಾರೆ.

ಜುಲೈ 17 ಅಂದ್ರೆ ನಿನ್ನೆಯಿಂದ ಎನ್ ಎಫ್ ಟಿ ಸ್ಕೆಚ್ ಕಾಂಪಿಟೇಶನ್ ಆರಂಭವಾಗಿದ್ದು ವಿಕ್ರಾಂತ್ ರೋಣ ಚಿತ್ರದ ಅಧ್ಬುತ ಸ್ಕೆಚ್ ಮಾಡಿದವರಿಗೆ ಎನ್ ಎಫ್ ಟಿ ಮೆಂಬರ್ ಶಿಪ್ ನೀಡಲಾಗುವುದು. ಇದಕ್ಕಾಗಿ ನೀವು ಮಾಡಬೇಕಾಗಿರೋದು ಇಷ್ಟೇ ವಿಕ್ರಾಂತ್ ರೋಣ ಚಿತ್ರದ ಸ್ಕೆಚ್ ಬಿಡಿಸಿ kichchaverse.ioನಲ್ಲಿ ಅಪ್ ಲೋಡ್ ಮಾಡಬೇಕು. ಎನ್ ಎಫ್ ಟಿ ಡ್ರಾಪ್ ಕೂಡ ಜುಲೈ 24ರಿಂದ ನಡೆಯಲಿದೆ. ಹೀಗೆ ಎನ್ ಎಫ್ ಟಿ ಯ ಕಿಚ್ಚ ವರ್ಸ್ ಹಲವಾರು ಇವೆಂಟ್ ಗಳನ್ನು ಹೊಂದಿದ್ದು ಈ ಮೂಲಕ ತಮ್ಮ ನೆಚ್ಚಿನ ನಟನೊಂದಿಗೆ ಆತ್ಮೀಯವಾಗಿ ಕಾಲ ಕಳೆಯಲು ಅವಕಾಶ ಮಾಡಿಕೊಡಲಿದೆ.

ಮತ್ತೊಂದು ಹೆಮ್ಮೆಯ ಸಂಗತಿಯಂದ್ರೆ ಜಗತ್ತಿನಲ್ಲೇ ಮೊದಲ ಬಾರಿ ವಿಕ್ರಾಂತ್ ರೋಣ ಸಿನಿಮಾವನ್ನು ಎನ್ ಎಫ್ ಟಿ ಪ್ರೀಮಿಯರ್ ಶೋ ನಡೆಸುತ್ತಿದೆ. ಹೊರದೇಶಗಳಲ್ಲಿ ಕನ್ನಡ ಸಿನಿಮಾವನ್ನು ಪ್ರೀಮಿಯರ್ ಶೋ ನಡೆಸುತ್ತಿರೋದು ಇದೇ ಮೊದಲು. ಇದು ವಿಕ್ರಾಂತ್ ರೋಣ ಸಿನಿಮಾದ ಹೆಗ್ಗಳಿಕೆ. ಜುಲೈ 27ಕ್ಕೆ ದುಬೈನಲ್ಲಿ ಈ ಪ್ರೀಮಿಯರ್ ಶೋ ನಡೆಯಲಿದೆ. ಇದೆಲ್ಲದಕ್ಕೂ ಎನ್ ಎಫ್ ಟಿ ಮೆಂಬರ್ ಶಿಪ್ ಅಗತ್ಯವಿದೆ ಎಂದು ಕಾಫಿ ಅಂಡ್ ಬನ್ ಇನೋವೇಷನ್ಸ್ ಸಂಸ್ಥೆ ಸಿಇಓ ಜಾಕೀರ್ ಹುಸೇನ್ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ನಿರ್ಮಾಪಕ ಹಾಗೂ ವಿತರಕ ಜಾಕ್ ಮಂಜು, ಸುದೀಪ್ ಪತ್ನಿ ಪ್ರಿಯಾ ಸುದೀಪ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

Categories
ಸಿನಿ ಸುದ್ದಿ

ಓಮಿನಿ ಇದು ಲ್ಯಾಟಿನ್ ಭಾಷೆ! ಈ ಚಿತ್ರದ ಹೈಲೆಟ್ ಓಮಿನಿ ಕಾರು: ಈ ಚಿತ್ರ ದಲ್ಲಿ ‘ಎಲ್ಲಾ’ ಅಂದ ಚಂದ…

“ಓಮಿನಿ” ಕಾರು ಹೌದು. ಆದರೆ ಲ್ಯಾಟಿನ್ ಭಾಷೆಯಲ್ಲಿ “ಓಮಿನಿ” ಗೆ ಎಲ್ಲಾ ಎಂಬ ಅರ್ಥವಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ‌ಸಮಾರಂಭ ಅದ್ದೂರಿಯಾಗಿ ನಡೆಯಿತು. ಸಚಿವ ಅರಗ ಜ್ಞಾನೇಂದ್ರ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು.

ತೀರ್ಥಹಳ್ಳಿ ಸುಂದರ ಊರು. ಅಲ್ಲಿನ ಗಾಳಿ, ನೀರಿಗೆ ಏನೋ ಅದ್ಭುತ ಶಕ್ತಿ ಇದೆ ಅನಿಸುತ್ತದೆ. ರಾಷ್ಟ್ರಕವಿ ಕುವೆಂಪು, ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಅವರು ಸೇರಿದಂತೆ ಅನೇಕ ಗಣ್ಯರು ನಮ್ಮ ತಾಲ್ಲೂಕಿನವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಈ “ಓಮಿನಿ” ಚಿತ್ರದ ನಿರ್ದೇಶಕ ಮಂಜು ಕೂಡ ನಮ್ಮೂರಿನವರು. ಇವರೆಲ್ಲಾ ಬಂದು ನನ್ನನ್ನು ಸಮಾರಂಭಕ್ಕೆ ಆಹ್ವಾನಿಸಿದಾಗ ಬರಲ್ಲ ಎಂದು ಹೇಳಲು ಆಗಲಿಲ್ಲ. ಅವರೆಲ್ಲರ ಪ್ರೀತಿ ನನ್ನ ಇಲ್ಲಿಯವರೆಗೂ ಕರೆತಂದಿದೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹಾರೈಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ರವಿಸಿಂಗ್ ಮುಂತಾದ ಗಣ್ಯರು ಇದ್ದರು.

“ಓಮಿನಿ” ಎಂದರೆ ಲ್ಯಾಟಿನ್ ಭಾಷೆಯಲ್ಲಿ ಎಲ್ಲಾ ಎಂದು ಅರ್ಥ. ಆದರೆ “ಓಮಿನಿ” ಕಾರ್ ಸಹ ನಮ್ಮ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದೆ. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಆಗಸ್ಟ್ 19 ರಂದು ಚಿತ್ರ ತೆರೆಗೆ ಬರಲಿದೆ‌. ಇದು ನನ್ನ ಪಾಲಿಗೆ ಅತೀ ದೊಡ್ಡ ಸಮಾರಂಭ. ನಮ್ಮೂರಿನವರೇ ಆದ ಸ ಗೃಹ ಸಚಿವರು ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ನಾನು ನಿರ್ದೇಶನದೊಂದಿಗೆ ಹಲವು ಜವಾಬ್ದಾರಿ ಹೊತ್ತುಕೊಂಡಿದ್ದೀನಿ. ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದೀನಿ ಎಂದರು ನಿರ್ದೇಶಕ ಮಂಜು ಹೆದ್ದೂರ್.

ಇದೊಂದು ವಿಭಿನ್ನ ಕಥೆಯ ಚಿತ್ರ. ಚಿತ್ರವೊಂದರಲ್ಲಿ ಚಿತ್ರವನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ. ಲವ್, ಸಸ್ಪೆನ್ಸ್, ಹಾರರ್ ಎಲ್ಲಾ‌ ಅಂಶಗಳು ನಮ್ಮ ಚಿತ್ರದಲ್ಲಿದೆ.‌ ನಮ್ಮ ಚಿತ್ರದಲ್ಲಿ “ಓಮಿನಿ” ಪ್ರಮುಖಪಾತ್ರ ವಹಿಸುತ್ತದೆ. ತೀರ್ಥಹಳ್ಳಿಯ ಸುಂದರ ಪರಿಸರದಲ್ಲೇ ಹೆಚ್ಚು ಚಿತ್ರೀಕರಣ ನಡೆದಿದೆ‌. ಅತೀ ದೊಡ್ಡದಾದ ದಾವಣಗೆರೆಯ ಗ್ಲಾಸ್ ಹೌಸ್ ನಲ್ಲಿ ಚಿತ್ರೀಕರಣವಾಗಿರುವುದು ವಿಶೇಷ. ಆಗಸ್ಟ್ 19 ರಂದು ರಾಜ್ಯಾದ್ಯಂತ “ಓಮಿನಿ” ಸಂಚಾರ ಆರಂಭವಾಗಲಿದೆ. ಇದು ನಾನು ನಾಯಕನಾಗಿ ನಟಿಸಿರುವ ಮೊದಲ ಚಿತ್ರ. ನೋಡಿ. ಹಾರೈಸಿ ಎಂದರು ನಾಯಕ ಸಿದ್ದು ಮೂಲಿಮನಿ.

ಹಲವು ವರ್ಷಗಳ ನಂತರ ಕನ್ನಡ ಚಿತ್ರವೊಂದರಲ್ಲಿ ನಟಿಸಿದ್ದೇನೆ. ಒಳ್ಳೆಯ ಪಾತ್ರ‌ ನೀಡಿದ್ದಾರೆ.‌ ನಾನು ಮಲೆನಾಡ ಹುಡುಗಿ. ಅದೇ ಊರಿನ ಹುಡುಗಿ ಪಾತ್ರ ಸಿಕ್ಕಿರುವುದು ಖುಷಿಯಾಗಿದೆ ಎಂದರು ನಾಯಕಿ ಅಶ್ವಿನಿ ಚಂದ್ರಶೇಖರ್.

ಗೀತರಚನೆಕಾರ ಪ್ರಮೋದ್ ಮರವಂತೆ ಸೇರಿದಂತೆ ಅನೇಕ ಚಿತ್ರತಂಡದ ಸದಸ್ಯರು ಹಾಗೂ ಗಣ್ಯರು “ಓಮಿನಿ” ಬಗ್ಗೆ ಮಾತನಾಡಿದರು.

ಶ್ರೀ ಬೆಳ್ಳುಡಿ ಫಿಲಂಸ್ ಹಾಗೂ ಎಸ್ ಆರ್ ಗ್ರೂಪ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಮಂಜು ಹೆದ್ದೂರ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅರ್ಜುನ್ ರಾಮು ಸಂಗೀತ ನಿರ್ದೇಶನ ಹಾಗೂ ಎಂ.ಬಿ.ಅಳ್ಳಿಕಟ್ಟಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಸಿದ್ದು ಮೂಲಿಮನಿ, ಪೂಜಾ ಜನಾರ್ದನ, ಅಶ್ವಿನಿ ಚಂದ್ರಶೇಖರ್, ಭರತ್‌ ಬೋಪ್ಪಣ್ಣ, ಮಂಜು ಹೆದ್ದೂರ್, ಆಕಾಂಕ್ಷ ಪಟಮಕ್ಕಿ, ಮೋಹನ್ ಜುನೇಜ, ಪ್ರಕಾಶ್ ತುಮ್ಮಿನಾಡು, ಮನಸ್ವಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ವಿಹಾನ್‌ ಚಿತ್ರಕ್ಕೆ ಪರಂವಃ ಸ್ಟುಡಿಯೋಸ್‌ ನಿರ್ಮಾಣ: ನಮ್ಮನೆ ಯುವರಾಣಿ ಖ್ಯಾತಿಯ ಅಂಕಿತಾ ನಾಯಕಿ…

“ಕಾಲ್‌ ಕೆಜಿ ಪ್ರೀತಿ”, “ಪಂಚತಂತ್ರ” ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿರುವ ನಟ ವಿಹಾನ್‌ ಮತ್ತೆ ಬೆಳ್ಳಿತೆರೆಮೇಲೆ ಮಿಂಚಲು ಬರುತ್ತಿದ್ದಾರೆ. ವಿಶೇಷ ಏನೆಂದರೆ, ಈ ಸಲ ವಿಹಾನ್‌ಗೆ ರಕ್ಷಿತ್‌ ಶೆಟ್ಟಿ ಸಾಥ್‌ ನೀಡುತ್ತಿದ್ದಾರೆ. ಅಂದರೆ, ರಕ್ಷಿತ್‌ ಶೆಟ್ಟಿ ಹೋಮ್‌ ಬ್ಯಾನರ್‌ “ಪರಂವಃ‌ ಸ್ಟುಡಿಯೋಸ್‌” ಬ್ಯಾನರ್‌ನಲ್ಲಿ ಮೂಡಿಬರುವ ಚಿತ್ರದಲ್ಲಿ ವಿಹಾನ್‌ ಹೀರೋ!

ಕಳೆದ ಮೂರು ವರ್ಷಗಳ ಹಿಂದೆ ಯೋಗರಾಜ್‌ ಭಟ್‌ ನಿರ್ದೇಶನದಲ್ಲಿನ “ಪಂಚತಂತ್ರ” ಸಿನಿಮಾದಲ್ಲಿ ನಟಿಸಿದ ಬಳಿಕ ಬೇರೆ ಸಿನಿಮಾಗಳತ್ತ ಮುಖ ಮಾಡಿರಲಿಲ್ಲ. ಇದೀಗ ವಿಶೇಷ ಕಥೆಯೊಂದಿಗೆ ಅವರ ಆಗಮನವಾಗುತ್ತಿದೆ. ರೊಮ್ಯಾನ್ಸ್‌ ಡ್ರಾಮಾ ಶೈಲಿಯ ಈ ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸಗಳೂ ಈಗಾಗಲೇ ಶುರುವಾಗಿವೆ.

ಚಿತ್ರದಲ್ಲಿ ನಾಯಕನಿಗೆ ಮೂರು ಹಂತಗಳು. ಕಾಲೇಜ್‌ ವಿದ್ಯಾರ್ಥಿ, ಕ್ರಿಕೆಟ್‌ ಆಟಗಾರ ಹಾಗೂ ಬಿಜಿನೆಸ್‌ ಮ್ಯಾನ್‌ ಆಗಿಯೂ ವಿಹಾನ್‌ ಕಾಣಿಸಿಕೊಳ್ಳಲಿದ್ದಾರೆ. ಇದೆಲ್ಲದಕ್ಕೂ ಸೂಟ್‌ ಆಗಲಿದ್ದಾರೆ ಎಂಬ ಕಾರಣಕ್ಕೆ ಚಿತ್ರತಂಡ ವಿಹಾನ್‌ರನ್ನು ಆಯ್ಕೆ ಮಾಡಿದ್ದಾರೆ.

ಹಾಗಾದರೆ ಈ ಚಿತ್ರದ ನಿರ್ದೇಶಕರು ಯಾರು? ಅದಕ್ಕೂ ಇಲ್ಲಿ ಉತ್ತರವಿದೆ. ರಕ್ಷಿತ್‌ ಅವರ ಸೆವೆನ್‌ ಆಡ್ಸ್‌ ಟೀಮ್‌ನಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿರುವ ಚಂದ್ರಜೀತ್‌ ಬೆಳ್ಳಿಯಪ್ಪ, ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಈ ಮೊದಲು ರಿಷಬ್‌ ಶೆಟ್ಟಿ ಅವರ ಕಥಾಸಂಗಮ ಸಿನಿಮಾದಲ್ಲಿನ “ರೇನ್‌ಬೋ ಲ್ಯಾಂಡ್‌” ಏಪಿಸೋಡ್‌ ಅನ್ನು ಚಂದ್ರಜಿತ್‌ ನಿರ್ದೇಶನ ಮಾಡಿದ್ದರು. ಅದಕ್ಕೂ ಮೊದಲು “ಅವನೇ ಶ್ರೀಮನ್ನಾರಾಯಣ” ಚಿತ್ರದ ಬರವಣಿಗೆಯ ಭಾಗವಾಗಿದ್ದರು.

ಈ ಚಿತ್ರಕ್ಕೆ ನಾಯಕಿಯಾಗಿ ನಮ್ಮನ್ನೆ ಯುವರಾಣಿ ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದ ಅಂಕಿತಾ ಮರ್‌ ನಟಿಸಲಿದ್ದಾರೆ. ಇತ್ತೀಚೆಗಷ್ಟೇ ಪರಮ್‌ವಾ ಸ್ಟುಡಿಯೋಸ್‌ ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ನಲ್ಲಿ ಅವರ ಜನ್ಮದಿನಕ್ಕೆ ಪೋಸ್ಟ್‌ ಹಾಕಿ ಸುಳಿವು ನೀಡಿತ್ತು. ಇದೀಗ ಅವರೇ ನಮ್ಮ ನಾಯಕಿ ಎಂದು ತಂಡ ಅಧಿಕೃತವಾಗಿ ಘೋಷಿಸಿದೆ.

ಹಾಗಾದರೆ ಏನಿದು ಸಿನಿಮಾ? ಸದ್ಯ ಚಿತ್ರೀಕರಣ ಪೂರ್ವ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ತಂಡ, ಆಗಸ್ಟ್‌ ವೇಳೆಗೆ ಚಿತ್ರದ ಶೀರ್ಷಿಕೆ ಘೋಷಣೆ ಮಾಡಿಕೊಳ್ಳುವ ಮೂಲಕ ಸಿನಿಮಾ ಕೆಲಸಗಳಿಗೆ ಚಾಲನೆ ನೀಡಲಿದೆ. ಅದಾದ ಬಳಿಕ ಸೆಪ್ಟೆಂಬರ್‌ನಲ್ಲಿ ಚಿತ್ರದ ಶೂಟಿಂಗ್‌ ಶುರುಮಾಡುವುದು ತಂಡದ ಪ್ಲಾನ್.

ರೊಮ್ಯಾನ್ಸ್‌ ಡ್ರಾಮಾ ಮತ್ತು ಮ್ಯೂಸಿಕಲ್‌ ಲವ್‌ಸ್ಟೋರಿ ಹಿನ್ನಲೆಯ ಈ ಸಿನಿಮಾದಲ್ಲಿ ಕಾಲೇಜು ಜೀವನವೂ ಕಾಣಿಸಲಿದೆ. ತಾಂತ್ರಿಕ ವರ್ಗದ ವಿಚಾರಕ್ಕೆ ಬಂದರೆ, ಅಮೆರಿಕಾದ ನ್ಯೂಯಾರ್ಕ್‌ ಫಿಲಂ ಅಕಾಡೆಮಿಯಲ್ಲಿ ಪದವಿ ಪಡೆದು, ಅಲ್ಲಿಯೇ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿರುವ ಶ್ರೀವಾತ್ಸವನ್‌ ಸೆಲ್ವರಾಜನ್‌ ಈ ಸಿನಿಮಾಕ್ಕೆ ಕ್ಯಾಮರಾ ಹಿಡಿಯಲಿದ್ದಾರೆ. ಇದು ಅವರ ಚೊಚ್ಚಲ ಚಿತ್ರವಾಗಿರಲಿದೆ. ಗಗನ್‌ ಬದೇರಿಯಾ ಸಂಗೀತ ಸಂಯೋಜಿಸಲಿದ್ದಾರೆ.

Categories
ಸಿನಿ ಸುದ್ದಿ

ಮತೀನ್ ಹುಸೇನ್ ಈಗ ‌ರೋಡ್ ಕಿಂಗ್! ಇದು ಹಾಲಿವುಡ್ ನಿರ್ದೇಶಕನ ಕನ್ನಡ ಸಿನಿಮಾ…

ಕನ್ನಡ ಚಿತ್ರರಂಗದಲ್ಲಿ ಹಲವು ಪ್ರಯೋಗಗಳು ನಡೆಯುತ್ತಿರುತ್ತವೆ. ಆದರೆ ಈ ಬಾರಿ ವಿಭಿನ್ನ ಹಾಗೂ ಈ ಹಿಂದೆ ನಡೆದಿರದ ಪ್ರಯೋಗವೊಂದು ಕನ್ನಡ ಚಿತ್ರರಂಗದಲ್ಲಿ ನಡೆದಿದೆ. ಸ್ಕೈಪ್(ಅಂತರಜಾಲ)ದ ಮೂಲಕವೇ ಇಡೀ ಚಿತ್ರದ ಚಿತ್ರೀಕರಣ ನಡೆದಿದೆ. ಅದೇ ಈ ಹೊತ್ತಿನ ಸುದ್ದಿ.

ಈ ಚಿತ್ರದ ನಾಯಕ ಮತೀನ್ ಹುಸೇನ್ ಮೂಲತಃ ಯು ಎಸ್ ಎ ನಿವಾಸಿ. ಕೆಲವು ವರ್ಷಗಳ ನಂತರ ಮುಂಬೈಗೆ ಆಗಮಿಸಿದ್ದ ಮತೀನ್, ಆನಂತರ ಅನುಪಮ್ ಖೇರ್ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ಅಭಿನಯ ತರಬೇತಿ ಪಡೆಯುತ್ತಾರೆ. ಆ ಬಳಿಕ ಕನ್ನಡದಲ್ಲಿ ಸಿನಿಮಾ ಮಾಡಲು ಮುಂದಾಗುತ್ತಾರೆ. ನಿರ್ದೇಶನಕ್ಕಾಗಿ ಹಾಲಿವುಡ್ ನ ಖ್ಯಾತ ನಿರ್ದೇಶಕ ರಾಂಡಿ ಕೆಂಟ್ ಅವರನ್ನು ಸಂಪರ್ಕಿಸುತ್ತಾರೆ. ರಾಂಡಿ ಕೆಂಟ್ ಒಪ್ಪುತ್ತಾರೆ. ಆದರೆ ವೀಸಾ ತೊಂದರೆಯಿಂದ ರಾಂಡಿ ಕೆಂಟ್ ಇಲ್ಲಿಗೆ ಬರಲಾಗುವುದಿಲ್ಲ.‌ ಆಗ, ಈಗಿನ ತಂತ್ರಜ್ಞಾನ ಬಳಸಿಕೊಂಡು ಅಲ್ಲಿಂದಲೇ ಸ್ಕೈಪ್ ಮೂಲಕ ನಿರ್ದೇಶನ‌ ಮಾಡಲು ಆರಂಭಿಸುತ್ತಾರೆ. ಕಲಾವಿದರು ಬೆಂಗಳೂರಿನಲ್ಲಿ. ನಿರ್ದೇಶಕ ಲಾಸ್ ಎಂಜಲೀಸ್ ನಲ್ಲಿ. ಹೀಗೆ “ರೋಡ್ ಕಿಂಗ್” ಚಿತ್ರ ಸಿದ್ದವಾಗುತ್ತದೆ.

ಮತೀನ್ ಹುಸೇನ್ ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ರುಕ್ಷರ್ ದಿಲ್ಹಾನ್ (ರನ್ ಆಂತೋನಿ ಖ್ಯಾತಿ) ನಾಯಕಿಯಾಗಿ ನಟಿಸಿದ್ದಾರೆ.

ಲವ್ ಬ್ರೇಕಪ್ ನಿಂದ ಎಕ್ಸ್
ಸಿಂಡ್ರೋಮ್ ಗೆ ತುತ್ತಾದ ಯುವ ಅಪ್ರೇಮಿಗಳ ಸುತ್ತ ಹೆಣೆದಿರುವ ಕಥೆಯಿದು. ರೊಮ್ಯಾಂಟಿಕ್, ಥ್ರಿಲ್ಲರ್ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಈಗಾಗಲೇ ಹಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ಈ ಚಿತ್ರ ಸೆಪ್ಟೆಂಬರ್ ನಲ್ಲಿ ಕರ್ನಾಟಕದಾದ್ಯಂತ ತೆರೆ ಕಾಣುತ್ತಿದೆ.

ಜನಪ್ರಿಯ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿ, ಹಾಡಿರುವ “ಕೊಡು ನನಗೆ” ಎಂಬ ಹಾಡು ಕೂಡ ಇತ್ತೀಚೆಗೆ ಬಿಡುಗಡೆಯಾಗಿ ಜನಪ್ರಿಯವಾಗುತ್ತಿದೆ. ಅರೀಫ್ ಲಲಾನಿ ಈ ಚಿತ್ರದ ಛಾಯಾಗ್ರಹಕರು.

ಹಾಲಿವುಡ್ ನ ಖ್ಯಾತ ಚಿತ್ರಗಳಿಗೆ ಸೌಂಡ್ ಡಿಸೈನರ್ ಆಗಿ ಕಾರ್ಯನಿರ್ವಹಿಸಿರುವ ಸ್ಕಾಟ್ ವಾಲ್ಫ್ ಈ ಚಿತ್ರಕ್ಕೂ ಸೌಂಡ್‌ ಡಿಸೈನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಸ್ಕಾಟ್ ವಾಲ್ಫ್ ಅವರ ಸೌಂಡ್ ಡಿಸೈನ್ “ರೋಡ್ ಕಿಂಗ್” ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

Categories
ಸಿನಿ ಸುದ್ದಿ

ಎವರಿಥಿಂಗ್ ಈಸ್ ಪಾಸಿಬಲ್ ಗುರು! ಕನ್ನಡದ ಈ ಕಿರುಚಿತ್ರ ಅಮೇಜಾನ್ ಓಟಿಟಿಯಲ್ಲಿ ಲಭ್ಯ…

ರಂಗಭೂಮಿ ಕಲಾವಿದರಾಗಿ, ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವದ ಜೊತೆಗೆ ದೇವರನಾಡಲ್ಲಿ ಎಂಬ ಸಿನಿಮಾದಲ್ಲಿಯೂ ನಟಿಸಿರುವ ಜೀವನದಿ ಸೀರಿಯಲ್ ನಲ್ಲಿ ನಾಯಕನಾಗಿ ಬಣ್ಣ ಹಚ್ಚಿದ್ದ ಇಕ್ಷ್ವಾಕು ರಾಮ್ ಸಾರಥ್ಯದಲ್ಲಿ ಮತ್ತೊಂದು ಕಿರುಚಿತ್ರ ಬಿಡುಗಡೆಯಾಗಿದೆ

ಈ ಹಿಂದೆ ರಹಸ್ತ ಎಂಬ ಕಿರುಚಿತ್ರ ಮಾಡಿದ್ದ ಇಕ್ಷ್ವಾಕು ರಾಮ್ ಈಗ ‘Everything Is Possible’ ಎಂಬ ಕ್ಯಾಚಿ ಟೈಟಲ್ ನಡಿ ಸೈನ್ಸ್ ಫಿಕ್ಷನ್ ಕಿರುಚಿತ್ರ ಮಾಡಿದ್ದಾರೆ. ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ ಹಾಗೂ ಎಂಕೆ ಮಠ ನಟನೆಯ Everything Is Possible ಚಿತ್ರದ ಬಗ್ಗೆ ಟೀಮ್ ಹೇಳಿದ್ದಿಷ್ಟು.

ನಾಯಕಿ ಖುಷಿ ರವಿ ಹೇಳೋದು ಹೀಗೆ: ಸೈನ್ಸ್ ಫಿಕ್ಷನ್ ಜಾನರ್ ಸಿನಿಮಾವಿದು. ಸೆಕೆಂಡ್ ಲಾಕ್ ಡೌನ್ ಟೈಮ್ ನಲ್ಲಿ ಬಂದು ನಿರ್ದೇಶಕರು ಕಥೆ ಹೇಳಿದರು. ಇದೊಂದು ಶಾರ್ಟ್ ಮೂವೀ. ತುಂಬಾ ಅದ್ಭುತ ಕಾನ್ಸೆಪ್ಟ್ ಇದು. ಇವತ್ತಿನಿಂದ ನಮ್ಮ ಫ್ಲಿಕ್ಸ್ ಹಾಗೂ ಪ್ರೈಮ್ ವಿಡಿಯೋದಲ್ಲಿ ಶಾರ್ಟ್ ಮೂವೀ ಸ್ಟ್ರೀಮ್ ಆಗುತ್ತಿದೆ. ಪ್ರತಿಯೊಬ್ಬರು ನೋಡಿ ಬೆಂಬಲ ಕೊಡಿ ಎಂದರು.

ಪಿಎಂಕೆ ಪ್ರೊಡಕ್ಷನ್ ನಡಿ ನಿರ್ಮಾಣವಾಗಿರುವ ‘Everything Is Possible’ ಕಿರುಚಿತ್ರಕ್ಕೆ ಪೂರ್ಣಿಮಾ ಮನೋಜ್, ಯಶ್ವಿಕ್ ನಿರ್ಮಾಣ ಮಾಡಿದ್ದು, ಎರಿಕ್ ವಿಜೆ ಛಾಯಾಗ್ರಾಹಣ ಜೊತೆಗೆ ಸಂಕಲನವಿದೆ. ಸ್ವಾಮಿನಾಥನ್ ಆರ್ ಕೆ ಸಂಗೀತ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಸಿನಿಮಾಗಿದೆ. ನಮ್ಮ ಫ್ಲಿಕ್ಸ್, ಅಮೇಜಾನ್, airtel xstream ಓಟಿಟಿಯಲ್ಲಿ ರಿಲೀಸ್ ಆಗಿದೆ.

Categories
ಸಿನಿ ಸುದ್ದಿ

ಅಯ್ಯೋ ದೇವ್ಲೆ..! ನೀನೆ ಬಂದು ಹೇಳುಬಿಡು- ಇದು ಗಾಳಿಪಟ ಸಿನಿಮಾದ ಭಟ್ಟರ ಹೊಸ ಶೈಲಿಯ ‘ಲ’ ಕಾರ ಪ್ರಯೋಗದ ಹಾಡು…

ಬಿಡುಗಡೆ ಮುನ್ನವೇ ಸಾಕಷ್ಟು ಕುತೂಹಲ ಹುಟ್ಟಿಸಿರುವ “ಗಾಳಿಪಟ 2” ಚಿತ್ರದ “ದೇವ್ಲೆ ದೇವ್ಲೆ” ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಬರೆದಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಇದೊಂದು ವಿಶೇಷ ಶೈಲಿಯ ಹಾಡು ಕೇಳೋಕೂ ನೋಡೋಕು ಮಜಾ ಇದೆ

ಈ ಹಾಡು ಕುರಿತು ಭಟ್ಟರು ಹೇಳಿದ್ದು ಹೀಗೆ. ಈ ಹಾಡು ಬರೆದು ಅರ್ಜುನ್ ಜನ್ಯ ಅವರಿಗೆ ಕಳುಹಿಸಿದೆ. ಮೊದಲು ಈ ಹಾಡನ್ನು “ದೇವ್ರೆ ದೇವ್ರೆ” ಎಂದು ಬರೆದಿದ್ದು. ಆನಂತರ ಇದು ಮಾಮೂಲಿ ತರಹ ಇದೆ. ಸ್ವಲ್ಪ ಏನಾದರೂ ಬದಲಾವಣೆ ಮಾಡಿ ಎಂದರು ಅರ್ಜುನ್ ಜನ್ಯ. ಆಗ ರ ಕಾರ ತೆಗೆದು ಲ‌ ಕಾರ ಹಾಕಿ ಅಂದೆ. ಆಗ ಎಲ್ಲರಿಗೂ ಹಿಡಿಸಿತು. ವಿಜಯ್ ಪ್ರಕಾಶ್ ಸುಶ್ರಾವ್ಯವಾಗಿ ಹಾಡಿದ್ದಾರೆ. ನನ್ನ , ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯರ ಕಾಂಬಿನೇಶನ್ ನಲ್ಲಿ ಸಾಕಷ್ಟು ಎಣ್ಣೆ ಹಾಡುಗಳು ಗೆದ್ದಿವೆ. ಇದು ಕೂಡ ಗೆಲುತ್ತದೆ ಎಂಬ ಭರವಸೆಯಿದೆ. ಕೊರೋನ ತನ್ನ ಅಟ್ಟಹಾಸ ಮೆರೆಯುತ್ತಿದ್ದ ಸಮಯದಲ್ಲಿ ಚಿತ್ರೀಕರಣವಾದ ಹಾಡು ಇದು.

ಎಲ್ಲಾ ಕಡೆ ಲಾಕ್ ಡೌನ್. ಅಂತಹ ಸಮಯದಲ್ಲಿ ದೂರದ ಕಜಕಿಸ್ತಾನದಲ್ಲಿ ಚಿತ್ರೀಕರಣ ಮಾಡುವುದು ಅಂದರೆ ಕಷ್ಟ ಸಾಧ್ಯ. ಆದರೆ ಅದನ್ನು ಸಾಧ್ಯ ಮಾಡಿದವರು ನಮ್ಮ ನಿರ್ಮಾಪಕ ರಮೇಶ್ ರೆಡ್ಡಿ ಅವರು. ಈ ಹಾಡಿಗೆ ಸ್ನೋ ಬೇಕಾಗಿದ್ದರಿಂದ ಅಲ್ಲಿಗೆ ಹೋದೆವು. ಆದರೆ ಕೊನೆಗೆ ಏಕಾದರೂ ಬಂದೆವೊ? ಅನಿಸುವಷ್ಟು ಚಳಿ ಅಲ್ಲಿ. ಇಷ್ಟೆಲ್ಲಾ ಕಷ್ಟಗಳ ನಡುವೆ ಎಲ್ಲರಿಗೂ ಇಷ್ಟವಾಗುವ ಹಾಡನ್ನು ಚಿತ್ರಿಸಿಕೊಂಡು ಬಂದಿದ್ದೀವಿ. ಸಹಕಾರ ನೀಡಿದ್ದ ಇಡೀ ತಂಡಕ್ಕೆ ವಂದನೆಗಳು ಎಂದರು ನಿರ್ದೇಶಕ ಯೋಗರಾಜ್ ಭಟ್.

ಕೋವಿಡ್ ಸಮಯದಲ್ಲಿ ಯಾರಿಗೂ ಏನೂ ಆಗದ ಹಾಗೆ ಕಜಕಿಸ್ತಾನಕ್ಕೆ ಹುಷಾರಾಗಿ ಕರೆದು ಕೊಂಡು ಹೋಗಿ ಬಂದ ನಿರ್ಮಾಪಕರಿಗೆ ಧನ್ಯವಾದ. ಇನ್ನು ಈ ಹಾಡಿನ ಬಗ್ಗೆ ಹೇಳಬೇಕೆಂದರೆ ಯೋಗರಾಜ್ ಸರ್ ಈ ಹಾಡನ್ನು ನನಗೆ ಕಳುಹಿಸಿದಾಗ, ಇದೇನ್ ಸರ್ ಹೀಗಿದೆ? ಈ ಹಾಡು ಕೇಳಿದವರು ನಿಮ್ಮ ಬಗ್ಗೆ ಏನಾದರೂ ಅಂದುಕೊಳ್ಳುತ್ತಾರೆ ಅಂದೆ. ಆನಂತರ ಇಲ್ಲ ಗಣಪ ಇನ್ನೊಂದು ಸಲ ಕೇಳು ಅಂದರು. ಕೇಳುತ್ತಾ, ಕೇಳುತ್ತಾ ನಾನೇ ಸದಾ ಗುನುಗುವಂತಾಯಿತು. ಅಂದು ಇದ್ದ ಆತಂಕ ಈಗ ಇಲ್ಲ. ಜನ “ದೇವ್ಲೆ ದೇವ್ಲೆ” ಹಾಡನ್ನು ಒಪ್ಪಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವಿಜಯ್ ಪ್ರಕಾಶ್ ಗಾಯನ, ಪಾತಾಜೆ ಅವರ ಛಾಯಾಗ್ರಹಣ, ಧನು ಮಾಸ್ಟರ್ ನೃತ್ಯ ನಿರ್ದೇಶನ ಹಾಗೂ ಎಲ್ಲರ ಅಭಿನಯ ಈ ಹಾಡನ್ನು ಶ್ರೀಮಂತಗೊಳಿಸಿದೆ ಎಂದರು ಗೋಲ್ಡನ್ ಸ್ಟಾರ್ ಗಣೇಶ್.

ಯೋಗರಾಜ್ ಭಟ್ ಹಾಗೂ ಗಣೇಶ್ ಅವರ ಮೂಲಕ ನನ್ನ ಗಾಯನದ ಜರ್ನಿ “ಗಾಳಿಪಟ” ಮೊದಲ ಭಾಗದಲ್ಲಿ ಆರಂಭವಾಯಿತು “ಕವಿತೆ ಕವಿತೆ” ಹಾಡಿನ ಮೂಲಕ. ಈಗ “ಗಾಳಿಪಟ 2” ಚಿತ್ರದಲ್ಲೂ ಹಾಡಿದ್ದೇನೆ. ಲ ಕಾರದಲ್ಲಿ ಈ ಹಾಡನ್ನು ಹಾಡುವುದು ಕಷ್ಟ ಅಂದುಕೊಂಡೆ. ಅಭ್ಯಾಸ ಮಾಡಿದ್ದೆ. ಅರ್ಧ ಗಂಟೆಯಲ್ಲಿ “ದೇವ್ಲೆ ದೇವ್ಲೆ” ಹಾಡು ಹಾಡಿದೆ. ಈ ಹಿಂದೆ ಕೂಡ ನನ್ನ ಹಾಗೂ ಭಟ್ಟರ ಕಾಂಬಿನೇಶನಲ್ಲಿ ಸಾಕಷ್ಟು ಗೀತೆಗಳು ಜನಪ್ರಿಯವಾಗಿದೆ ಎಂದರು ಗಾಯಕ ವಿಜಯ್ ಪ್ರಕಾಶ್.

ಈ ಹಾಡು ಮಾಡಿದಾಗ ಲ ಕಾರ ಇರಲಿಲ್ಲ. ಮೊದಲು ರ ಕಾರ ಇತ್ತು. ರ ಕಾರದ ಹಾಡು ಅಷ್ಟು ಮಜಾ ಇಲ್ಲ ಅಂದೆ. ಆಗ ಯೋಗರಾಜ್ ಸರ್, ರ ಕಾರಗಳನ್ನು ತೆಗೆದು ಲ ಕಾರ ಮಾಡು ಅಂದರು. ಹಾಗೆ ಮಾಡಿದಾಗ ಈ ಹಾಡು ತುಂಬಾ ಹಿಡಿಸಿತು. ವಿಜಯ್ ಪ್ರಕಾಶ್ ಅವರು ಇಂಪಾಗಿ ಹಾಡಿದ್ದಾರೆ. ನಾನು ಪದೇಪದೇ ಕೇಳುವ ಹಾಡಗಳೆಂದರೆ ಅದು “ಗಾಳಿಪಟ 2” ಚಿತ್ರದ ಹಾಡುಗಳು ಎಂದರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ.

ಈ ಹಾಡಿನ‌ ಚಿತ್ರೀಕರಣ ನೋಡಲು ಕಜಕಿಸ್ತಾನಕ್ಕೆ ಹೋಗಿದ್ದೆ. ಅದೇ ಮೊದಲ ಬಾರಿಗೆ ನಾನು ಅಂತರರಾಷ್ಟ್ರೀಯ ವಿಮಾನ ಹತ್ತಿದ್ದು, ಅಂತಹ ಚಳಿಯಲ್ಲಿ ಕೆಲಸ ಮಾಡಿದ್ದ ಚಿತ್ರ ತಂಡಕ್ಕೆ ಧನ್ಯವಾದ ಎಂದರು ನಿರ್ಮಾಪಕ ರಮೇಶ್ ರೆಡ್ಡಿ.

ನಾಯಕರಾದ ದಿಗಂತ್, ಪವನ್ ಕುಮಾರ್, ನಾಯಕಿ ಶರ್ಮಿಳಾ ಮಾಂಡ್ರೆ, ನಟಿ ಸುಧಾ ಬೆಳವಾಡಿ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ನೃತ್ಯ ನಿರ್ದೇಶಕ ಧನು ಮಾಸ್ಟರ್ ಹಾಗೂ ಆನಂದ್ ಆಡಿಯೋ ಶ್ಯಾಮ್ “ದೇವ್ಲೆ ದೇವ್ಲೆ” ಹಾಡಿನ ಬಗ್ಗೆ ಹಾಗೂ ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

Categories
ಸಿನಿ ಸುದ್ದಿ

ಜೇಮ್ಸ್ ಸುವರ್ಣ ವರ್ಲ್ಡ್ ಪ್ರೀಮಿಯರ್! ರಾಜ್ಯದ ನೂರು ಶಾಲೆಯಿಂದ 40ಸಾವಿರ ಮಕ್ಕಳು ಅಭಿಯಾನದಲ್ಲಿ ಭಾಗಿ….

ರಾಜ್ಯದಾದ್ಯಂತ 40ಸಾವಿರ ಮಕ್ಕಳಿಂದ ಅಪ್ಪು ಭಾವಚಿತ್ರಕ್ಕೆ ಬಣ್ಣ ತುಂಬಿದ ಸಾವಿರಾರೂ ಪುಟ್ಟ ಕೈಗಳು. ಹೌದು ಇದು ಜೇಮ್ಸ್ ಚಿತ್ರದ ಸುವರ್ಣ ವರ್ಲ್ಡ್ ಪ್ರಿಮಿಯರ್ ಗೆ ಸ್ಟಾರ್ ಸುವರ್ಣ ವಾಹಿನಿ ಮಕ್ಕಳಿಗಾಗಿಯೇ ವಿಶೇಷ ಅಭಿಯಾನವನ್ನ ಆಯೋಜಿಸಿತ್ತು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಮಕ್ಕಳೆಂದರೆ ತುಂಬಾ ಇಷ್ಟ. ಮಕ್ಕಳಿಗೂ ಅಪ್ಪು ಅಂದರೆ ಅಷ್ಟೇ ಪ್ರೀತಿ. ಹಾಗಾಗಿ ವಾಹಿನಿ ಜೇಮ್ಸ್ ಪ್ರಪ್ರಥಮ ಬಾರಿಗೆ ಪ್ರಸಾರವಾಗುತ್ತಿರೋ ಈ ವೇಳೆಯಲ್ಲಿ ಇಂತಹ ವಿಶಿಷ್ಠ ಅಭಿಯಾನವನ್ನ ಹಮ್ಮಿಕೊಂಡಿದೆ.

ಅದರಂತೆ, ರಾಜ್ಯಾದ್ಯಂತ ಸುಮಾರು 40 ಸಾವಿರ ಶಾಲಾ ಮಕ್ಕಳಿಂದ ಪುನೀತ್ ರಾಜ್ ಕುಮಾರ್ ರವರ ರೇಖಾಚಿತ್ರಕ್ಕೆ ಬಣ್ಣ ತುಂಬುವ ಸ್ಪರ್ಧೆಯನ್ನ ನಡೆಸಿದೆ.
ಈಗಾಗಲೇ ರಾಜ್ಯದ ವಿವಿಧ ಶಾಲೆಗಳಲ್ಲಿ ಮಕ್ಕಳು ಪುನೀತ್ ಅವರ ಭಾವ ಚಿತ್ರಕ್ಕೆ ಬಣ್ಣ ತುಂಬಿ ಸಂಭ್ರಮಿಸಿದ್ದಾರೆ.

ಅತ್ಯುತ್ತಮವಾಗಿ ಬಣ್ಣ ತುಂಬಿಸಿದ ಮಕ್ಕಳಿಗೆ ಸುವರ್ಣ ವಾಹಿನಿ ವತಿಯಿಂದ ಪ್ರಶಂಸೆ ಪತ್ರ ನೀಡಲಾಗುತ್ತಿದೆ. ಈ ವಿಶೇಷ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ.

ರಾಜ್ಯಾದಾದ್ಯಂತ ಎಲ್ಲಾ ಮಾದರಿಯ ಶಾಲಾ ಮಕ್ಕಳಿಂದ ರಾಜಕುಮಾರ ಪುನೀತ್ ರಾಜ್ ಕುಮಾರ್ ರವರ ರೇಖಾ ಚಿತ್ರಕ್ಕೆ ಬಣ್ಣ ತುಂಬಿ ನಮನ ಸಲ್ಲಿಸುತ್ತಿರುವುದು ವಿಶೇಷ.

Categories
ಸಿನಿ ಸುದ್ದಿ

ಗಿರ್ಕಿಗೆ ಜೈ ಎಂದ ಪ್ರೇಕ್ಷಕ: ಇನ್ನೊಂದು‌ ಸಿನಿಮಾ ಮಾಡೋ ಉತ್ಸಾಹದಲ್ಲಿ ನಿರ್ಮಾಪಕರು…

ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಜನರನ್ನು ತಮ್ಮ ಪಾತ್ರದ ಮೂಲಕ ನಕ್ಕುನಗಿಸುವ ತರಂಗ ವಿಶ್ವ ನಿರ್ಮಿಸಿರುವ, ವೀರೇಶ್ ಪಿ.ಎಂ ನಿರ್ದೇಶಿಸಿರುವ “ಗಿರ್ಕಿ” ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಿರ್ಮಾಣದಲ್ಲಿ ವಿಶ್ವ ಅವರಿಗೆ ವಾಸುಕಿ ಭುವನ್ ಸಾಥ್ ನೀಡಿದ್ದಾರೆ.

ನಟನಾಗಿದ್ದ ನಾನು, ಈ ಚಿತ್ರದಿಂದ ನಿರ್ಮಾಪಕನಾದೆ. ನಟನೆ ಕೂಡ ಮಾಡಿದ್ದೇನೆ. ಕಳೆದವಾರ ಚಿತ್ರ ತೆರೆ ಕಂಡಿದೆ. ನಮ್ಮ ಚಿತ್ರಕ್ಕೆ ರಾಜ್ಯಾದ್ಯಂತ ಸಿಗುತ್ತಿರುವ ಮೆಚ್ಚುಗೆಗೆ ಮನ ತುಂಬಿ ಬಂದಿದೆ. ಕನಕಪುರ ಸೇರಿ ಹಲವು ಕಡೆ ಭೇಟಿ ನೀಡಿದ್ದೇನೆ. ಜನ ಸಿನಿಮಾ ಬಗ್ಗೆ ಉತ್ತಮ ಮಾತುಗಳಾಡುತ್ತಿದ್ದಾರೆ. ಚಿತ್ರದ ಹಿಂದಿ ರೈಟ್ಸ್ ಕೂಡ ಮಾರಾಟವಾಗುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೇ ನಾನು ಮತ್ತೊಂದು ಚಿತ್ರ ಸಹ ಆರಂಭಿಸಲಿದ್ದೇನೆ. ಚಿತ್ರದ ಗೆಲುವಿಗೆ ಕಾರಣರಾದ ನನ್ನ ಚಿತ್ರತಂಡಕ್ಕೆ ಹಾಗೂ ಕನ್ನಡ ಕಲಾರಸಿಕರಿಗೆ ನನ್ನ ಧನ್ಯವಾದ ಎಂದರು ನಿರ್ಮಾಪಕ ಹಾಗೂ ನಟ ತರಂಗ ವಿಶ್ವ.

ನಾನು ಅಸೋಸಿಯೇಟ್ ಆಗಿದ್ದಾಗ ಚಿತ್ರಮಂದಿರಕ್ಕೆ ಭೇಟಿ ನೀಡುತ್ತಿದೆ. ಆಗ ಅಲ್ಲಿ ಜನರು ಆ ನಿರ್ದೇಶಕನ ಬಗ್ಗೆ ಆಡುತ್ತಿದ್ದ ಪ್ರಶಂಸೆಯ ಮಾತುಗಳನ್ನು ಕೇಳಿ ನನಗೂ‌ ನಿರ್ದೇಶಕನಾಗುವ ಅಸೆ ಹೆಚ್ಚುತ್ತಿತ್ತು. ಈಗ ನಾನು ಆ ಸಂತೋಷವನ್ನು ‌ಅನುಭವಿಸುತ್ತಿದ್ದೇನೆ. ನಮ್ಮ ಚಿತ್ರಕ್ಕೆ ಹೋದ ಕಡೆ ಎಲ್ಲಾ ಉತ್ತಮ ಪ್ರಶಂಸೆ ಸಿಗುತ್ತಿದೆ. ಅವಕಾಶ ನೀಡಿದ ನಿರ್ಮಾಪಕರಿಗೆ‌ ಹಾಗೂ ನನ್ನ ತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ವೀರೇಶ್ ಪಿ.ಎಂ.

ತಮ್ಮ ಚಿತ್ರಕ್ಕೆ ಸಿಗುತ್ತಿರುವ ಯಶಸ್ಸಿನ ಬಗ್ಗೆ ನಟ ವಿಲೋಕ್ ರಾಜ್, ಆನಂದಭರಿತ ಮಾತುಗಳನ್ನಾಡುವ ಮೂಲಕ ಸಂಭ್ರಮಿಸಿದರು.

ಯಶಸ್ಸನ್ನು ಸಂಭ್ರಿಮಿಸುವುದು ಒಬ್ಬೊಬ್ಬರು ಬೇರೆ ಬೇರೆ ರೀತಿ. ನಾನು ಥಿಯೇಟರ್ ಗೆ ಹೋದಾಗ ಜನ‌‌ ಸಿಳ್ಳೆ ಹೊಡೆಯುತ್ತಾರಲ್ಲಾ? ಎದುರಿಗೆ ಸಿಕ್ಕಾಗ ಆ ಪಾತ್ರ ಮಾಡಿರುವುದು ನೀವೇ ಅಲ್ಲವಾ? ಅಂತಾರಲ್ಲ. ಅದೇ ನನಗೆ ನಿಜವಾದ ಯಶಸ್ಸು ಎಂದರು ದಿವ್ಯ ಉರುಡಗ.

ಪರಿಮಳ ಎಂಬ ಪಾತ್ರದ ಹೆಸರಿನ ಮೂಲಕ ನನ್ನ ಹೋದ ಕಡೆ ಗುರುತಿಸುತ್ತಿದ್ದಾರೆ. ಸಂತೋಷವಾಗಿದೆ ಎಂದರು ರಾಶಿ ಮಹದೇವ್.

ಸಂಗೀತ ನಿರ್ದೇಶಕ ವೀರಸಮರ್ಥ್, ವಿತರಕ ರಾಜು ಮುಂತಾದವರು “ಗಿರ್ಕಿ” ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಸ್ಟಾರ್ ಸುವರ್ಣದಲ್ಲಿ ಶನಿವಾರದಿಂದ ಇಸ್ಮಾರ್ಟ್​ ಜೋಡಿ ಆಟ ಶುರು…

ಸೆಲೆಬ್ರಿಟಿ ಜೋಡಿಗಳು ಭಾಗವಹಿಸುವ ಸುಂದರ ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಸಾರಥ್ಯ

ರಂಜನೆಗೆ ಮತ್ತೊಂದು ಹೆಸರು. ರಿಯಾಲಿಟಿ ಶೋಗಳ ತವರು ಸ್ಟಾರ್ ಸುವರ್ಣ ವಾಹಿನಿ.
ವೀಕೆಂಡ್ ಮನೋರಂಜನೆಗೆ ಸ್ಟಾರ್ ಸುವರ್ಣ ವಾಹಿನಿ ಈಗ “ಇಸ್ಮಾರ್ಟ್ ಜೋಡಿ”‌ ಎಂಬ ಸುಂದರ ಕಾರ್ಯಕ್ರಮ ಆರಂಭಿಸಲಿದೆ. ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುವ ಈ ರಿಯಾಲಿಟಿ ಶೋ ಇದೇ ಜುಲೈ 16ರ ಶನಿವಾರದಿಂದ ಆರಂಭವಾಗಲಿದೆ. ಹತ್ತು ಸೆಲೆಬ್ರಿಟಿ ಜೋಡಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದ ಬಗ್ಗೆ ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದ್ದು ಹೀಗೆ…

ಇದುವರೆಗೂ ಮನರಂಜನೆಯ ಮತ್ತು ಸ್ನೇಹದ ಕುರಿತಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೇನೆ. ಈಗ ಮೊದಲ ಬಾರಿಗೆ ಸೆಲೆಬ್ರಿಟಿ ಜೋಡಿಗಳ ಕುರಿತಾಗಿ ಒಂದು ಕಾರ್ಯಕ್ರಮ ನಡೆಸಿಕೊಡುತ್ತಿದ್ದೇನೆ. ಎರಡು ವರ್ಷ ಗ್ಯಾಪ್​ ಆಗಿತ್ತು. ಬೇರೇನೋ ಹೊಸದು ಮಾಡಬೇಕು, ಫ್ಯಾಮಿಲಿ ಆಡಿಯನ್ಸ್​ ತಲುಪಬೇಕು ಎಂದು ಯೋಚಿಸುತ್ತಿದ್ದಾಗ ಸ್ಟಾರ್​ ಸುವರ್ಣದವರು ಈ ಕಾರ್ಯಕ್ರಮದ ಕುರಿತು ಹೇಳಿದರು. ಇದೊಂದು ಸೆಲೆಬ್ರಿಟಿ ಜೋಡಿಯ ಕುರಿತಾದ ಕಾರ್ಯಕ್ರಮ. ಇಲ್ಲಿ ಹೊಸದಾಗಿ ಮದುವೆಯಾದವರಿಂದ 40 ವರ್ಷ ದಾಂಪತ್ಯ ಜೀವನ ನಡೆಸಿದ ಹಿರಿಯರವರೆಗೂ ಇದ್ದಾರೆ. ಇವತ್ತಿನ ದಿನಗಳಲ್ಲಿ ದಂಪತಿಗಳು ಸಣ್ಣಸಣ್ಣ ವಿಷಯಕ್ಕೂ ಬಹಳ ಬೇಗ ದೂರ ಆಗುತ್ತಿದ್ದಾರೆ. ಜೀವನ ಎಂದರೆ ಅದಲ್ಲ, ಇಲ್ಲಿ ಏಳುಬೀಳು, ಸುಖ-ಸಂತೋಷ ಎಲ್ಲವೂ ಇರುತ್ತದೆ ಎಂಬುದನ್ನು ಹೇಳುವ ಪ್ರಯತ್ನ ಇದು.

ಈ ಕಾರ್ಯಕ್ರಮವು ನಾಲ್ಕು ಜನರಿಗೆ ಮಾದರಿ ಆಗಬೇಕು, ನೀವೇ ಇದನ್ನು ನಡೆಸಿಕೊಡಬೇಕು ಎಂದರು. ಒಳ್ಳೆಯ ಕಾನ್ಸೆಪ್ಟ್​ ಆದ್ದರಿಂದ ಒಪ್ಪಿಕೊಂಡೆ. ಒಟ್ಟು 26 ಕಂತುಗಳು. ಪ್ರತಿ ಶನಿವಾರ ಮತ್ತು ಭಾನುವಾರ ರಾತಿ 9ಕ್ಕೆ ಪ್ರಸಾರವಾಗಲಿದೆ. ಈಗಾಗಲೇ ಆರಂಭಿಕ ಎರಡು ಕಂತುಗಳ ಚಿತ್ರೀಕರಣ ನಡೆದಿದೆ. ಈಗ ಇನ್ನೆರೆಡು ಕಂತುಗಳ ಚಿತ್ರೀಕರಣ ಆಗುತ್ತಿದೆ. ಇಲ್ಲಿ ಒಬ್ಬೊಬ್ಬರ ಜರ್ನಿ ಒಂದೊಂದು ರೀತಿ. ಹಿರಿಯರ ಜೊತೆಗೆ ಮಾತನಾಡುವಾಗ ಅವರ ಜೀವನದ ಬಗ್ಗೆ ಕೇಳಿ ಬಹಳ ಖುಷಿಯಾಯಿತು.

ನಾನು ಸಹ ಒಬ್ಬ ಪ್ರೇಕ್ಷಕನಾಗಿ ಬಹಳ ಕುತೂಹಲ ಎಂದನಿಸಿತು. ಒಟ್ಟಿನಲ್ಲಿ ಎಲ್ಲರೂ ಪ್ರೀತಿಯಿಂದ ಬದುಕಿ ಅಂತ ಸಂದೇಶ ಸಾರುವಂತಹ ಕಾರ್ಯಕ್ರಮ ಇದು. ಇಲ್ಲಿ ತೀರ್ಪುಗಾರರಿರುವುದಿಲ್ಲ. ನಾನು ನಿರೂಪಕನಾಗಿರುತ್ತೇನೆ. ಸ್ಪರ್ಧಿಗಳಿಗೆ ಹಲವು ಟಾಸ್ಕ್​ಗಳನ್ನು ನೀಡಲಾಗುತ್ತದೆ. ಗೆದ್ದವರಿಗೆ ಅಂಕಗಳನ್ನು ನೀಡಲಾಗುತ್ತದೆ. ಮೊದಲ ಐದು ಕಂತುಗಳಲ್ಲಿ ಯಾವುದೇ ಎಲಿಮಿನೇಷನ್​ ಇರುವುದಿಲ್ಲ. ಗೆದ್ದವರಿಗೆ 10 ಲಕ್ಷ ಬಹುಮಾನ ನೀಡಲಾಗುತ್ತದೆ. ಇಲ್ಲಿ ಚಿತ್ರರಂಗ, ಕಿರುತೆರೆ ಮತ್ತು ಸೋಷಿಯಲ್​ ಮೀಡಿಯಾದಲ್ಲಿ ಜನಪ್ರಿಯವಾಗಿರುವ ಜೋಡಿಗಳು ಭಾಗವಹಿಸುತ್ತಿವೆ. ಜತೆಗೆ ಸಿನಿಮಾ ಪ್ರಮೋಷನ್​ಗಳು ಸಹ ಇರುತ್ತವೆ. ಸೆಲೆಬ್ರಿಟಿಗಳು ಆಗಾಗ ಅತಿಥಿಯಾಗಿ ಬರುತ್ತಿರುತ್ತಾರೆ ಎಂದರು ಗಣೇಶ್.

ನಿರ್ದೇಶಕ ಪ್ರಶಾಂತ್​, ವರ್ಷ, ಉಷಾ ಗೌಡ ಇದ್ದರು.

ರಾಕ್​ಲೈನ್​ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಅದ್ದೂರಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅದ್ಭುತ ಸೆಟ್​ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಶೀರ್ಷಿಕೆ ಹಾಡಿಗೆ ALL OK ಸಂಗೀತ ಸಂಯೋಜನೆ ಮಾಡಿ ಅವರೆ ಹಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೊದಲ್ಲಿ ಈ ಹಾಡು ಜನರ ಮನ ಗೆದ್ದಿದೆ.

ಇಸ್ಮಾರ್ಟ್ ಜೋಡಿ” ಯಲ್ಲಿ ಭಾಗವಹಿಸುತ್ತಿರುವ ಸೆಲೆಬ್ರಿಟಿ ಜೋಡಿಗಳು

ವಿನಯ್​ ಗೌಡ ಮತ್ತು ಅಕ್ಷತಾ ಗೌಡ,
ಸುಮನ್​ ನಗರ್​ಕರ್​ ಮತ್ತು ಗುರುದೇವ್​ ನಾಗರಾಜ,
ದಿಶಾ ಮದನ್​ ಮತ್ತು ಶಶಾಂಕ್​ ವಾಸುಕಿ ಗೋಪಾಲ್​,
ಪ್ರತಿಕ್​ ಪ್ರೊ ಮತ್ತು ಮೌಲ್ಯಶ್ರೀ ಎಂ,
ಶ್ರೀರಾಮ ಸುಳ್ಯ ಮತ್ತು ಪುನೀತ ಆಚಾರ್ಯ,
ರಘು ವೈನ್​ ಸ್ಟೋರ್​ ಮತ್ತು ವಿದ್ಯಾಶ್ರೀ,
ಇಂಪನಾ ಜಯರಾಜ್​ ಮತ್ತು ಅಜಿತ್​ ಜಯರಾಜ್​,
ಸಪ್ನ ದೀಕ್ಷಿತ್​ ಮತ್ತು ಅಶ್ವಿನ್​ ದೀಕ್ಷಿತ್​,ಜೈಜಗದೀಶ್​ ಮತ್ತು ವಿಜಯಲಕ್ಷ್ಮಿ ಸಿಂಗ್​, ರಿಚರ್ಡ್​ ಲೂಯಿಸ್​ ಮತ್ತು ಹ್ಯಾರಿಯೆಟ್​ ಲೂಯಿಸ್​.

Categories
ಸಿನಿ ಸುದ್ದಿ

ಲಕ್ಕಿಮ್ಯಾನ್ ನ ಸಿನಿಮಾದಲ್ಲಿ ಅಪ್ಪು! ಆಗಸ್ಟ್ ವೇಳೆ ಬಿಡುಗಡೆ…

ಕನ್ನಡ ಚಿತ್ರರಂಗದ ಧೃವತಾರೆ ಎನಿಸಿಕೊಂಡಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಭಿನಯಿಸಿ ಬಿಡುಗಡೆಯಾಗುತ್ತಿರುವ ಕೊನೆಯ ಚಿತ್ರ ಲಕ್ಕಿಮ್ಯಾನ್. ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರದ್ದು ಅತಿಥಿ ಪಾತ್ರವಾಗಿದ್ದು ಒಬ್ಬ ದೇವರ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ತಮಿಳುನಟ ಪ್ರಭುದೇವ ಕೂಡ ನಟಿಸಿದ್ದು, ಹಾಡೊಂದರಲ್ಲಿ ಇವರಿಬ್ಬರೂ ಸಖತ್ ಸ್ಟೆಪ್ ಹಾಕಿದ್ದಾರೆ.

ನಾನಾ ನೀನಾ ಎನ್ನುವ ಹಾಗೆ ಇಬ್ಬರೂ ಸೇರಿ ಸಿಗ್ನೇಚರ್ ಸ್ಟೆಪ್ಸ್ ಹಾಕಿ ಭರ್ಜರಿ ಡ್ಯಾನ್ಸ್ ಮಾಡಿರುವ ಈ ಹಾಡು ಈಗಾಗಲೇ ಎಲ್ಲೆಡೆ ವೈರಲ್ ಆಗಿದೆ. ಜಾನಿ ಮಾಸ್ಟರ್ ಅವರ ನೃತ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಹಾಡನ್ನು ಬೆಂಗಳೂರಿನಲ್ಲೇ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. ಇದೇ ಮೊದಲಬಾರಿಗೆ ಪುನೀತ್ ರಾಜಕುಮಾರ್ ಹಾಗೂ ಪ್ರಭುದೇವಾ ಅವರು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರಲ್ಲದೆ, ಅದ್ಭುತವಾದ ಹಾಡೊಂದರಲ್ಲಿ ಸಖತ್ ಸ್ಟೆಪ್ಸ್ ಹಾಕಿದ್ದಾರೆ.


ಇನ್ನು ಈ ಚಿತ್ರವನ್ನು ಮೊದಲಬಾರಿಗೆ ಪ್ರಭುದೇವಾ ಸಹೋದರ ನಾಗೇಂದ್ರಪ್ರಸಾದ್ ಅವರು ನಿರ್ದೇಶಿಸಿದ್ದಾರೆ. ಈಗಾಗಲೇ ತನ್ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿರುವ ಲಕ್ಕಿಮ್ಯಾನ್ ಚಿತ್ರವನ್ನು ಬರುವ ಆಗಸ್ಟ್ ತಿಂಗಳಲ್ಲಿ ತೆರೆಗೆ ತರಲು ನಿರ್ಮಾಪಕರು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.


‌‌ತಮಿಳಿನ ಓ ಮೈ ಕಡವುಲೆ ಚಿತ್ರದ ಎಳೆಯನ್ನಿಟ್ಟುಕೊಂಡು ನಿರ್ದೇಶಕ ನಾಗೇಂದ್ರಪ್ರಸಾದ್ ಅವರು ಒಂದು ಅದ್ಭುತವಾದ ಫ್ಯಾಂಟಸಿ ಡ್ರಾಮಾ ಕಥಾಹಂದರವನ್ನು ಲಕ್ಕಿ ಮ್ಯಾನ್ ಚಿತ್ರದಲ್ಲಿ ನಿರೂಪಿಸಿದ್ದಾರೆ. ನಿರ್ಮಾಪಕ ಪಿ.ಆರ್. ಮೀನಾಕ್ಷಿ ಸುಂದರಂ, ಪಿ.ಕಾಮರಾಜ್ ಅವರು ತಮಿಳಲ್ಲಿ ಹಲವಾರು ಯಶಸ್ವೀ ಚಿತ್ರಗಳನ್ನು ನಿರ್ಮಿಸಿದ್ದಾರೆ.

ಕನ್ನಡದಲ್ಲಿ ಇದು ಅವರ ಮೊದಲ ಚಿತ್ರ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರ ಜೊತೆ ರೋಷನಿ ಪ್ರಕಾಶ್ ನಾಯಕಿಯಾಗಿ ನಟಿಸಿದ್ದಾರೆ.

error: Content is protected !!