Categories
ಸಿನಿ ಸುದ್ದಿ

ಕಾಶಿಯಲ್ಲಿ ಕ್ಲೈಮ್ಯಾಕ್ಸ್ ಮುಗಿಸಿದ ‘ಲಕ್ಷ್ಮಿಪುತ್ರ’!

ಹೊಸ ಮುಖಗಳನ್ನು ಚಿತ್ರರಂಗಕ್ಕೆ ಪರಿಚಯಿಸುವಲ್ಲಿ ಪಂಟರ್ ಎನಿಸಿಕೊಂಡಿರುವ ನಿರ್ದೇಶಕ ಎಪಿ ಅರ್ಜುನ್, ನ್ಯಾಚುರಲ್ ಸ್ಟಾರ್ ಚಿಕ್ಕಣ್ಣ ಜೊತೆ ಕೈ ಜೋಡಿಸಿರುವುದು ಗೊತ್ತೇ ಇದೆ. ಈ ಕಾಂಬೋದಲ್ಲಿ ಲಕ್ಷ್ಮಿಪುತ್ರ ಸಿನಿಮಾ ತಯಾರಾಗ್ತಿದೆ. ಎಪಿ ಅರ್ಜುನ್ ಕಥೆ ಬರೆದು ತಮ್ಮದೇ ಎಪಿ ಅರ್ಜುನ್ ಫಿಲ್ಮ್ ಬ್ಯಾನರ್ ನಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಮೂಲಕ ಕುತೂಹಲ ಹೆಚ್ಚಿಸಿರುವ ಲಕ್ಷ್ಮಿಪುತ್ರ ಸಿನಿಮಾದ ಶೂಟಿಂಗ್ ಬಗ್ಗೆ ಕ್ರೇಜಿ ಅಪ್ ಡೇಟ್ ಸಿಕ್ಕಿದೆ.

ಲಕ್ಷ್ಮಿಪುತ್ರ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಕಾಶಿಯಲ್ಲಿ ಅದ್ದೂರಿಯಾಗಿ ನಡೆದಿದೆ. ಮೂರು ದಿನಗಳ ಕಾಲ ನಡೆದ ಶೂಟಿಂಗ್ ನಲ್ಲಿ ನಾಯಕ ಚಿಕ್ಕಣ್ಣ, ತಾರಾ ಸೇರಿದಂತೆ ಅರವತ್ತಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಿದ್ದರು. ಕಾಶಿಯ ಮಣಿಕರ್ಣಿಕಾ ಘಾಟ್, ಗಂಗಾ‌ನದಿ ತೀರ, ಬನರಾಸ್, ಕಾಶಿ ಪ್ರಮುಖ ಬೀದಿಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಎರಡು ದಿನದ ಮಾತಿನ ಭಾಗದ ಚಿತ್ರೀಕರಣ ಬಾಕಿ ಇದ್ದು,
ಶೀಘ್ರದಲ್ಲೇ ಹಾಡುಗಳ ಶೂಟಿಂಗ್ ‌ನ್ನು ಚಿತ್ರತಂಡ ಕೈಗೆತ್ತಿಕೊಳ್ಳಲಿದೆ. ಮೇ ಅಥವಾ ಜೂನ್ ತಿಂಗಳಲ್ಲಿ ಲಕ್ಷ್ಮಿಪುತ್ರ ಸಿನಿಮಾವನ್ನು ಥಿಯೇಟರ್ ಅಂಗಳಕ್ಕೆ ಇಳಿಸಲು ಟೀಂ ಯೋಜನೆ ಹಾಕಿಕೊಂಡಿದೆ.

ವಿಜಯ್ ಸ್ವಾಮಿ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾದಲ್ಲಿ ಚಿಕ್ಕಣ್ಣನಿಗೆ ಜೋಡಿಯಾಗಿ ನವ ನಟಿ ವಂದಿತಾ
ಅಭಿನಯಿಸುತ್ತಿದ್ದಾರೆ. ತಾರಾ, ಕುರಿ ಪ್ರತಾಪ್, ಧರ್ಮಣ್ಣ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದ್ದು, ಎ.ಪಿ.ಅರ್ಜುನ್ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಆ್ಯಕ್ಷನ್ ಸೀಕ್ವೆನ್ಸ್‌ಗಳಿಗೆ ಮಾಸ್ ಮಾದ ನಿರ್ದೇಶನ ಮಾಡಿದ್ದಾರೆ. ಗಿರೀಶ್ ಆರ್.ಗೌಡ ಅವರ ಕ್ಯಾಮೆರಾ ಹಿಡಿದಿದ್ದಾರೆ.

ಎ.ಪಿ.ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ದೇಶಕ ಎ.ಪಿ.ಅರ್ಜುನ್ ಪತ್ನಿ ಅನ್ನಪೂರ್ಣ ಅರ್ಜುನ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರವಿಕಿರಣ್ ಗೌಡ ಸಹ-ನಿರ್ಮಾಣದಲ್ಲಿ ಸಾಥ್ ಕೊಡುತ್ತಿದ್ದಾರೆ.

Categories
ಸಿನಿ ಸುದ್ದಿ

ಹೊಸ ಸಿರೀಸ್ ಘೋಷಿಸಿದ zee5: ಫೆ.20ರಿಂದ ರಾಕ್ಷಸ ಸ್ಟ್ರೀಮಿಂಗ್

zee5ನಲ್ಲಿ ಕ್ರೈಮ್ ಸೈಕಲಾಜಿಕಲ್ ರಾಕ್ಷಸ..ಯಾವಾಗಿನಿಂದ ಸ್ಟ್ರೀಮಿಂಗ್?
ಅಯ್ಯನ ಮನೆ, ಮಾರಿಕಲ್ಲು ವೆಬ್ ಸರಣಿ ಸಕ್ಸಸ್ ಬಳಿಕ zee5 ಕನ್ನಡ ಇದೀಗ ಕನ್ನಡ ಒರಿಜಿನಲ್ ಸಿರೀಸ್ ಘೋಷಿಸಿದೆ. ಈ ಸರಣಿಗೆ ರಾಕ್ಷಸ ಎಂಬ ಟೈಟಲ್ ಇಡಲಾಗಿದೆ. ನಂಬಿಕೆ ಮತ್ತು ಕೊಲೆಯಲ್ಲಿ ಬೇರೂರಿರುವ ಕರಾಳ ಅಪರಾಧ ಕಥೆಯ ಸುತ್ತ ಈ ಸರಣಿ ಸಾಗಲಿದೆ. ಬಿಡುಗಡೆಯಾಗಿರುವ ರಾಕ್ಷಸ ಟ್ರೇಲರ್ ಕುತೂಹಲ ಹೆಚ್ಚಿಸಿದ್ದು, ಈ ಮೂಲಕ zee5 ಮತ್ತೊಂದು ವಿಶೇಷ ಕಥೆಯನ್ನು ಪ್ರೇಕ್ಷಕರಿಗೆ ಉಣಬಡಿಸಲಿದೆ.

ಸುಹಾನ್ ಪ್ರಸಾದ್ ಮತ್ತು ಅಪೂರ್ವ ಬರೆದು, ಸುಹಾನ್ ಪ್ರಸಾದ್ ನಿರ್ದೇಶಿಸಿರುವ ಈ ಸರಣಿಯನ್ನು ಖ್ಯಾತ ನಿರ್ದೇಶಕ ತರುಣ್‌ಸುಧೀರ್ ತಮ್ಮದೇ ತರುಣ್ ಸುಧೀರ್ ಪ್ರೊಡಕ್ಷನ್ಸ್ ನಿರ್ಮಿಸಿದ್ದಾರೆ. ಚಿನ್ನಾರಿ ಮುತ್ತ ಖ್ಯಾತಿಯ ವಿಜಯ್ ರಾಘವೇಂದ್ರ ರಾಕ್ಷಸ ಮೂಲಕ ಸಿರೀಸ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಯೂರಿ, ಅವಿನಾಶ್, ಮಾಳವಿಕ, ಅಪ್ಪಣ್ಣ ಮತ್ತು ಅಭಿಜಿತ್ ತಾರಾಬಳಗದಲ್ಲಿದ್ದಾರೆ.

ತಮ್ಮ ಚೊಚ್ಚಲ ಒಟಿಟಿ ಪ್ರವೇಶದ ಬಗ್ಗೆ ಮಾತನಾಡಿದ ನಾಯಕ ನಟ ವಿಜಯ್ ರಾಘವೇಂದ್ರ, “ರಾಕ್ಷಸ OTT ಜಾಗಕ್ಕೆ ನನ್ನ ಮೊದಲ ಹೆಜ್ಜೆಯಾಗಿದೆ. ಈ ಪ್ರಯಾಣವನ್ನು ಪ್ರಾರಂಭಿಸಲು ನಾನು ಇದಕ್ಕಿಂತ ಪ್ರಾಮಾಣಿಕ ಅಥವಾ ಸವಾಲಿನ ಕಥೆಯನ್ನು ಕೇಳಲು ಸಾಧ್ಯವಿಲ್ಲ. ನನ್ನನ್ನು ಆಕರ್ಷಿಸಿದ್ದು ಅಪರಾಧ ಅಥವಾ ಸಸ್ಪೆನ್ಸ್ ಮಾತ್ರವಲ್ಲ, ಕರ್ತವ್ಯ, ನಂಬಿಕೆ ಮತ್ತು ವೈಯಕ್ತಿಕ ಜವಾಬ್ದಾರಿಯ ನಡುವೆ ಹರಿದ ವ್ಯಕ್ತಿ ಪಾತ್ರದ ಭಾವನಾತ್ಮಕ ತೂಕ. ZEE5 ಬೇರೂರಿರುವ, ಶಕ್ತಿಯುತವಾದ ಕನ್ನಡ ಕಥೆಗಳಿಗೆ ಜಾಗವನ್ನು ಸೃಷ್ಟಿಸುತ್ತಿದೆ ಮತ್ತು OTT ರಾಕ್ಷಸದಂತಹ ನಿರೂಪಣೆಗಳು ಉಸಿರಾಡಲು ಮತ್ತು ಪ್ರೇಕ್ಷಕರೊಂದಿಗೆ ಹೆಚ್ಚು ಕಾಲ ಉಳಿಯಲು ಅನುವು ಮಾಡಿಕೊಡುತ್ತದೆ. ಅಂತಿಮ ಸಂಚಿಕೆಯ ನಂತರವೂ ಈ ಸರಣಿಯು ಶಾಶ್ವತವಾದ ಪ್ರಭಾವ ಬೀರುತ್ತದೆ ಎಂದು ನಾನು ನಂಬುತ್ತೇನೆ ” ಎಂದರು.

ಒಟಿಟಿಯಲ್ಲಿ ತಮ್ಮ ನಿರ್ಮಾಣದ ಚೊಚ್ಚಲ ಪ್ರವೇಶದ ಬಗ್ಗೆ ಮಾತನಾಡುತ್ತಾ, ತರುಣ್ ಕಿಶೋರ್ ಸುಧೀರ್, “ಒಬ್ಬ ನಿರ್ಮಾಪಕನಾಗಿ, ನಾನು ಬೇರೂರಿರುವ, ತೀವ್ರವಾದ ಮತ್ತು ಭಾವನಾತ್ಮಕವಾಗಿ ಪ್ರಾಮಾಣಿಕವಾದ ಕಥೆಯನ್ನು ಬೆಂಬಲಿಸಲು ಉತ್ಸುಕನಾಗಿದ್ದೆ. ರಾಕ್ಷಸ ತನ್ನ ಬಲವಾದ ಬರವಣಿಗೆ ಮತ್ತು ತನಿಖಾ ತಿರುಳಿನಿಂದಾಗಿ ಎದ್ದು ಕಾಣುತ್ತದೆ, ಮತ್ತು ಕಥೆಯು ಉತ್ತರ ಕರ್ನಾಟಕದಲ್ಲಿ ಸೆಟ್ ಆಗಿರುವುದರಿಂದ ನಾವು ವಿಶೇಷವಾಗಿ ಉತ್ಸುಕರಾಗಿದ್ದೇವೆ, ಇದು ವಿಶಿಷ್ಟ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಭೂದೃಶ್ಯವನ್ನು ಹೊಂದಿರುವ ಪ್ರದೇಶವಾಗಿದೆ. ಈ ಯೋಜನೆಯೊಂದಿಗೆ ಒಟಿಟಿ ಕ್ಷೇತ್ರಕ್ಕೆ ಕಾಲಿಡುವುದು ಒಂದು ರೋಮಾಂಚಕಾರಿ ಕಲಿಕೆಯ ಅನುಭವವಾಗಿದೆ, ಮತ್ತು ZEE5 ಈ ಕಥೆಗೆ ಸರಿಯಾದ ನೆಲೆಯಾಗಿದೆ ಎಂದು ಭಾವಿಸಿದೆ, ಏಕೆಂದರೆ ಅದು ಬಲವಾದ, ಸ್ಥಳೀಯವಾಗಿ ಬೇರೂರಿರುವ ನಿರೂಪಣೆಗಳನ್ನು ಆಳವಾಗಿ ಹೇಳುವತ್ತ ಗಮನಹರಿಸಿದೆ.” ಎಂದು ಅಭಿಪ್ರಾಯ ಹಂಚಿಕೊಂಡರು.

ಕ್ರೈಮ್ ಸೈಕಾಲಜಿಕಲ್ ಕಥಾಹಂದರ ಹೊಂದಿರುವ ರಾಕ್ಷಸ ಸರಣಿ ಏಳು ಭಾಗಗಳಲ್ಲಿ ಪ್ರಸಾರವಾಗಲಿದೆ. ಫೆಬ್ರವರಿ 20ರಿಂದ zee5ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

Categories
ಸಿನಿ ಸುದ್ದಿ

ಸಿಸಿಎಲ್ ಟ್ರೋಫಿ ಫ್ಯಾನ್ಸ್ ಗೆ ಅರ್ಪಿಸಿದ ಕಿಚ್ಚ: ಸಿಸಿಎಲ್ ಆಡಲು ಅಭಿಮಾನಿಗಳಿಗೂ ಆಹ್ವಾನ

ಸಿಸಿಎಲ್ ಟೂರ್ನಮೆಂಟ್ ಅಲ್ಲ ಅದೊಂದು ಭಾವನೆ ಎಂದ ಕಿಚ್ಚ…ಕರ್ನಾಟಕ ಬುಲ್ಡೋಜರ್ಸ್ ತಂಡ ಸೇರಲು ಫ್ಯಾನ್ಸ್ ಗೆ ಅವಕಾಶ
ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2026ರ ಮಹಾ ಸಮರದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವು ಬರೋಬ್ಬರಿ 12 ವರ್ಷಗಳ ನಂತರ, ಮೂರನೇ ಬಾರಿಗೆ ಐತಿಹಾಸಿಕ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಚಾಂಪಿಯನ್ಸ್ ಟ್ರೋಫಿಯನ್ನು ತಾಯ್ನಾಡಿಗೆ ಹೊತ್ತು ತಂದಿದೆ.

ಈ ಸಂಬಂಧ ಬೆಂಗಳೂರಿನಲ್ಲಿ ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂಡದ ನಾಯಕ ಕಿಚ್ಚ ಸುದೀಪ್, “ನಾನು ಯಾವಾಗಲೂ ಹೇಳುವಂತೆ, ನಮಗೆ ಇದು ಕೇವಲ ಒಂದು ಟೂರ್ನಮೆಂಟ್ ಅಲ್ಲ, ಇದೊಂದು ಭಾವನೆ. ಅದ್ಭುತ ಆಟಗಾರರ ಈ ತಂಡವನ್ನು ಮುನ್ನಡೆಸಿ, ದಶಕದ ನಂತರ ಕಪ್ ಅನ್ನು ಮನೆಗೆ ತರುತ್ತಿರುವುದು ಪದಗಳಲ್ಲಿ ವಿವರಿಸಲಾಗದ ಅನುಭವ. ಒತ್ತಡದ ನಡುವೆಯೂ ತಂಡವು ನಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದ ರೀತಿ ಅದ್ಭುತವಾಗಿತ್ತು. ಈ ಗೆಲುವು ಕಷ್ಟದ ದಿನಗಳಲ್ಲೂ ನಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಅರ್ಪಣೆ. ಈ ಸಲ ಕಪ್ ನಮ್ದೆ ಎಂಬ ಘೋಷಣೆ ಈಗ ಕೇವಲ ಮಾತಲ್ಲಅದು ವಾಸ್ತವ” ಎಂದು ಖುಷಿಪಟ್ಟರು

ಅಭಿಮಾನಿಗಳಿಗೂ ಸಿಸಿಎಲ್ ತಂಡ ಸೇರುವ ಅವಕಾಶ

“ಸಿಸಿಎಲ್ ಎಂದರೆ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರವಲ್ಲ. ಚೆನ್ನಾಗಿ ಕ್ರಿಕೆಟ್ ಆಡುವ ಅಭಿಮಾನಿಗಳಿಗೂ ನಮ್ಮ ತಂಡದಲ್ಲಿ ಅವಕಾಶವಿದೆ. ಯಾರಲ್ಲಿ ನಿಜವಾದ ಪ್ರತಿಭೆ ಇದೆಯೋ ಅವರು ಬಂದು ಸೇರಿಕೊಳ್ಳಬಹುದು” ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಕ್ರಿಕೆಟ್ ಆಡುವ ಅವಕಾಶದ ಬಗ್ಗೆ ಮಾಹಿತಿ ನೀಡಿದರು.

ಕಳೆದ ಭಾನುವಾರ(ಫೆಬ್ರವರಿ 1) ಕೊಯಂಬತ್ತೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಗೆದ್ದು ಕಿಚ್ಚನ ಪಡೆ ಟ್ರೋಫಿ ಎತ್ತಿ ಹಿಡಿದಿತ್ತು
6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಬುಲ್ಡೋಜರ್ಸ್ ಇತಿಹಾಸ ನಿರ್ಮಿಸಿತು.

ಸುದೀಪ್ ನೇತೃತ್ವದ ಪ್ರದೀಪ್, ಜೆಕೆ, ಕೃಷ್ಣ, ಚಂದನ್, ರಾಜೀವ್, ನಿರೂಪ್, ಪ್ರತಾಪ್, ಅರ್ಜುನ್, ಸಚಿನ್, ಕರಣ್, ಮಂಜುನಾಥ್ ಮತ್ತು ಬಚ್ಚನ್ ಅವರನ್ನೊಳಗೊಂಡ ತಂಡವು ಅಮೋಘ ಪ್ರದರ್ಶನ ನೀಡಿತು. 130 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬುಲ್ಡೋಜರ್ಸ್ ಪರ ಸ್ಟಾರ್ ಬ್ಯಾಟ್ಸ್‌ಮನ್ ರಾಜೀವ್ ಹನು ಕೇವಲ 35 ಎಸೆತಗಳಲ್ಲಿ 69 ರನ್ ಸಿಡಿಸಿ ‘ಪಂದ್ಯ ಪುರುಷ’ ಪ್ರಶಸ್ತಿ ಪಡೆದರು. ಬೌಲಿಂಗ್‌ನಲ್ಲಿ ಎದುರಾಳಿಗಳನ್ನು ಕಟ್ಟಿಹಾಕಿದ ಪ್ರತಾಪ್ ‘ಅತ್ಯುತ್ತಮ ಬೌಲರ್’ ಗೌರವಕ್ಕೆ ಪಾತ್ರರಾದರು.

Categories
ಸಿನಿ ಸುದ್ದಿ

ಮಧುರ ಮಾತಿಲ್ಲದ ನೆನಪು!

ಚಿತ್ರ ವಿಮರ್ಶೆ: ವಿಭ

ಚಿತ್ರ: ನೆನಪುಗಳ ಮಾತು ಮಧುರ
ನಿರ್ದೇಶಕ: ಅಫ್ಜಲ್‌ ಸೂಪರ್ ‌ಸ್ಟಾರ್‌
ನಿರ್ಮಾಪಕ: ಸೆವೆನ್ ರಾಜ್
ತಾರಾಗಣ: ಸೆವೆನ್‌ ರಾಜ್‌, ವಸಿಷ್ಠ ರಾಜಪ್ರಭು, ರಣವೀರ್, ವಿನಯ್ ಕುಮಾರ್, ನಾಗೇಂದ್ರ ಅರಸ್, ಶುಭಾ, ರನ್ವಿತಾ ರಾಣಿ, ರೇಖಾ, ಅಂಜಲಿ ಇತರರು.

ಆಗಾಗ ಕರ್ಮ ರಿಟರ್ನ್ಸ್‌ ಅನ್ನುವ ಮಾತು ಕೇಳುತ್ತಲೇ ಇರುತ್ತೇವೆ. ಮಾಡಿದ್ದುಣ್ಣೋ ಮಾರಾಯ ಎಂಬ ಮಾತಿಗೆ ಕಾರಣ, ಅವರು ಮಾಡಿದ ಕೆಲಸಗಳೇ ಅವರಿಗೆ ಮುಳುವಾಗುತ್ತವೆ. ಇದು ಅಕ್ಷರಶಃ ನಿಜ. ಈ ಸಿನಿಮಾದ ಥಾಟ್‌ ಕೂಡ ಅಂಥದ್ದೇ. ಹೌದು, ಸಿನಿಮಾದಲ್ಲಿ ಮಾಡಬಾರದ್ದು ಕೆಲಸ ಮಾಡಿದ ವ್ಯಕ್ತಿಯೊಬ್ಬ ಕೊನೆಗೆ ನೋವು ಅನುಭವಿಸುತ್ತಾನೆ. ಆತ ಮಾಡಿದ ಕೆಲಸಗಳೇನು? ಯಾರಿಗೆ ತೊಂದರೆ ಕೊಡ್ತಾನೆ ಅನ್ನುವ ಕುತೂಹಲವೇನಾದರೂ ಇದ್ದರೆ ಒಂದೊಮ್ಮೆ ಸಿನಿಮಾ ನೋಡಬಹುದು. ಹಾಗಂತ, ಸಿನಿಮಾ ನಿಮಗೆ ಇಷ್ಟವಾಗುತ್ತೆ ಅನ್ನುವ ಗ್ಯಾರಂಟಿ ಕೊಡುವುದು ಕಷ್ಟಸಾಧ್ಯ. ಇದು ಅದ್ಭುತ ಕಥೆ ಇರುವ ಸಿನಿಮಾವಲ್ಲ. ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡು ಸಿನಿಮಾಗೆ ಹೋಗುವುದು ಬೇಡ. ಮೇಕಿಂಗ್‌, ಹಾಡು, ಸಂಭಾಷಣೆ ಇತ್ಯಾದಿ ಬಗ್ಗೆಯೂ ನಿರೀಕ್ಷೆಗಳು ಸಲ್ಲದು.

ಹಾಗಂತ ಸಿನಿಮಾದ ಆಶಯ ಸರಿ ಇಲ್ಲವೆಂದಲ್ಲ. ಇನ್ನೂ ಅದ್ಭುತವಾಗಿ ಇರುವ ಕಥೆಯನ್ನು ಚೆನ್ನಾಗಿ ಕಟ್ಟಿಕೊಡುವ ಸಾಧ್ಯತೆ ಇತ್ತು. ತಾಂತ್ರಿಕವಾಗಿ ಸಿನಿಮಾ ಇನ್ನಷ್ಟು ಬಿಗಿಯಾಗಿರಬೇಕಿತ್ತು. ನಿರ್ದೇಶಕರ ಒನ್‌ ಲೈನ್‌ ಸ್ಟೋರಿ ಚೆನ್ನಾಗಿಯೇ ಇದೆ. ಆದರೆ, ನಿರೂಪಣೆ ಹಾಗು ಚಿತ್ರಕಥೆಯಲ್ಲಿ ಬಿಗಿ ಹಿಡಿತ ಸಾಧಿಸಬೇಕಿತ್ತು. ಅವರೇ ಇಲ್ಲಿ ನಟನೆಯನ್ನೂ ಮಾಡಿರುವುದರಿಂದ ಬಹುಶಃ ಎಲ್ಲವನ್ನೂ ಸರಿಯಾಗಿ ತೂಗಿಸುವಲ್ಲಿ ಹಿಂದೆ ಉಳಿದಿದ್ದಾರೆ ಅಂತ ಕಾಣುತ್ತೆ. ಆದರೆ ಮೊದಲ ಪ್ರಯತ್ನ ಅನ್ನುವ ಕಾರಣಕ್ಕೆ ಕೆಲವು ತಪ್ಪುಗಳನ್ನು ಪಕ್ಕಕ್ಕೆ ಇಟ್ಟು ಸಿನಿಮಾ ನೋಡಬಹುದು.

ಮೊದಲೇ ಹೇಳಿದಂತೆ ಕಥೆ ಸರಳವಾಗಿದೆ. ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೋರಿಸುವ ಪ್ರಯತ್ನ ಮಾಡಬಹುದಿತ್ತು. ಕೆಲವು ದೃಶ್ಯಗಳ ಕಥೆಗಳು ವಾಸ್ತವಕ್ಕೆ ಹತ್ತಿರ ಎನಿಸುತ್ತವೆ. ಉಳಿದಂತೆ ಸಿನಿಮಾದ ಮೊದಲರ್ಧಕ್ಕಿಂತ ದ್ವಿತಿಯಾರ್ಧ ತಕ್ಕಮಟ್ಟಿಗೆ ಕಥೆಯ ಆಶಯ ಸರಿ ಎನಿಸುತ್ತೆ. ಕಥೆ ಬಗ್ಗೆ ಹೇಳುವುದಾದರೆ, ಹಲವು ವರ್ಷಗಳಿಂದ ದೂರ ದೂರ ಇದ್ದಂತಹ ನಾಲ್ಕು ಜನ ಗೆಳೆಯರು ಒಂದೆಡೆ ಸೇರಿ ಪಾರ್ಟಿ ಮಾಡಬೇಕು ಅಂತ ನಿರ್ಧರಿಸುತ್ತಾರೆ. ಅದರಂತೆ ಒಟ್ಟಿಗೆ ಸೇರುತ್ತಾರೆ. ಪಾರ್ಟಿ ಮಧ್ಯೆ ಒಬ್ಬೊಬ್ಬರ ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತೆ. ಅವರೆಲ್ಲರೂ ಮಿಡ್ಲ್‌ ಕ್ಲಾಸ್‌ ಕುಟುಂಬದವರು. ಒಬ್ಬನ ಅಮ್ಮ ತನ್ನ ಮಗ ಮದ್ವೆಯಾಗಿ ಬದುಕಲ್ಲಿ ಸೆಟ್ಲ್‌ ಆಗಬೇಕು ಅನ್ನೋ ಆಸೆ. ಮದ್ವೆ ಆಗೋಕೆ ಅವನ ಬಳಿ ಹಣವಿಲ್ಲ. ಶ್ರೀಮಂತ ವ್ಯಕ್ತಿಯೊಬ್ಬನ ಬಳಿ ಅವನ ಗೆಳೆಯ ಮದ್ವೆಗೆ ಎರಡು ಲಕ್ಷ ಸಾಲ ಕೊಡಿಸುತ್ತಾನೆ. ಆದರೆ, ಮದ್ವೆ ಆಗುವ ಹುಡುಗಿ ಬೇರೊಬ್ಬನ ಜೊತೆ ಓಡಿ ಹೋಗ್ತಾಳೆ. ಸಾಲ ತಂದು ಮದ್ವೆಗೆ ಖರ್ಚು ಮಾಡಿದ್ದ ಹಣವನ್ನು ಹೇಗೆ ತೀರಿಸ್ತಾನೆ ಅನ್ನೋ ಎಪಿಸೋಡ್ ಇಂಟ್ರೆಸ್ಟ್‌ ಅನಿಸುತ್ತೆ.

ಮತ್ತೊಬ್ಬ ಬದುಕಿಗಾಗಿ ಜೊಮೆಟೊ ಬಾಯ್‌ ಆಗಿ ಕೆಲಸ. ಮಳೆ ಸುರಿಯೋ ವೇಳೆ ಮನೆಯೊಂದಕ್ಕೆ ಹೋಗಿ ಫುಡ್‌ ಡಿಲವರಿ ಮಾಡುವ ಅವನಿಗೆ ಅಲ್ಲೊಬ್ಬ ಆಂಟಿ ಜೊತೆ ಆಕರ್ಷಣೆ ಆಗುತ್ತೆ. ಅಲ್ಲೊಂದು ಊಹಿಸದಿರುವ ಘಟನೆ ನಡೆದುಹೋಗುತ್ತೆ. ಆ ಘಟನೆ ಎಂಥದ್ದು ಅನ್ನೋದೇ ಸಸ್ಪೆನ್ಸ್.‌ ಮತ್ತೊಬ್ಬನದು ಭಯಾನಕ ಕಥೆ. ಅದನ್ನು ಸಿನಿಮಾದಲ್ಲೇ ನೋಡಬೇಕು. ಇನ್ನೊಬ್ಬಾತನದು ಈಗಿನ ಟ್ರೆಂಡ್‌ ಸ್ಟೋರಿ. ಒಟ್ಟಾರೆ ಒಬ್ಬೊಬ್ಬನದು ಒಂದೊಂದು ಸ್ಟೋರಿ ಹೇಳುವ ಹೊತ್ತಿಗೆ ಸೆಕೆಂಡ್‌ ಹಾಫ್‌ ಮುಗಿದು ಹೋಗುತ್ತೆ. ಒಂದಷ್ಟು ಟ್ವಿಸ್ಟ್‌ ಬರುತ್ತೆ. ಅದು ನೋಡುಗರ ಟೆಸ್ಟ್‌ ಮಾಡುತ್ತೆ. ದ್ವಿತಿಯಾರ್ಧದಲ್ಲಿ ಫಸ್ಟ್‌ ಹಾಫ್‌ನಲ್ಲಿ ಏನೆಲ್ಲ ಆಯ್ತು ಅದಕ್ಕೆ ಕ್ಲಾರಿಟಿ ಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.

ಈಗಾಗಲೇ ಇಂತಹ ಕಥೆಯ ಎಳೆ ಇರುವ ಅನೇಕ ಸಿನಿಮಾಗಳು ಬಂದು ಹೋಗಿವೆ. ಆದರೆ, ಇಲ್ಲಿ ಈಗಿನ ಯೂಥ್ಸ್‌ ಯಾವೆಲ್ಲಾ ಸಮಸ್ಯೆಗೆ ಸಿಲುಕುತ್ತೆ. ಯಾವೆಲ್ಲ ಹಾದಿ ತುಳಿಯುತ್ತಾರೆ ಎಂಬ ಅಂಶವನ್ನು ನಿರ್ದೇಶಕರು ಹೈಲೆಟ್‌ ಮಾಡಿದ್ದಾರೆ. ಆರಂಭದಲ್ಲಿ ಸಿನಿಮಾ ಮಂದಗತಿಯಲ್ಲೇ ಸಾಗುತ್ತೆ. ಸಿನಿಮಾದ ನಿಧಾನಕ್ಕೆ ಹಿನ್ನೆಲೆ ಸಂಗೀತವೂ ಕಾರಣ. ಕೆಲವು ದೃಶ್ಯಗಳು ಅನಗತ್ಯವಾಗಿವೆ. ಇನ್ನಷ್ಟು ಚುರುಕುತದನ ನಿರೂಪಣೆ ಬೇಕಿತ್ತು. ಯೂಥ್ಸ್‌ ಮಿಸ್ಟೇಕ್ಸ್‌ ಹಾಗು ಹಣವಂತನ ತಪ್ಪುಗಳು ಹೇಗೆಲ್ಲ ಇರುತ್ತವೆ ಅನ್ನುವುದಕ್ಕೆ ಸಿನಿಮಾ ನೋಡಬಹುದು.

ಸಿನಿಮಾದಲ್ಲಿ ನಿರ್ದೇಶಕ ಅಫ್ಜಲ್‌ ಸೂಪರ್‌ ಸ್ಟಾರ್‌ ಅವರು ಕಾಣಿಸಿಕೊಂಡಿದ್ದರೂ ಪಾತ್ರದಲ್ಲಿ ಇನ್ನಷ್ಟು ತಲ್ಲೀನರಾಗಬೇಕಿತ್ತು. ನಿರ್ಮಾಪಕ ಸೆವೆನ್‌ ರಾಜ್‌ ಇಲ್ಲಿ ನೆಗೆಟಿವ್‌ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರಕ್ಕೆ ಇನ್ನಷ್ಟು ಗಟ್ಟಿತನ ಕೊಡಬಹುದಿತ್ತು. ಉಳಿದಂತೆ ಕಾಣಿಸಿಕೊಂಡಿರುವ ವಸಿಷ್ಠ ರಾಜಪ್ರಭು, ರಣವೀರ್, ವಿನಯ್ ಕುಮಾರ್, ನಾಗೇಂದ್ರ ಅರಸ್, ಶುಭಾ, ರನ್ವಿತಾ ರಾಣಿ, ರೇಖಾ, ಅಂಜಲಿ ಇತರರು ನಿರ್ದೇಶಕರು ಹೇಳಿದಂತೆ ಪಾತ್ರವನ್ನು ಕಟ್ಟಿಕೊಟ್ಟಿದ್ದಾರೆ. ಸ್ವಾಮಿ ಅವರ ಕ್ಯಾಮೆರಾ ಕೈಚಳಕ ಪರವಾಗಿಲ್ಲ. ರಾಜು ಎಮ್ಮಿಗನೂರು ಅವರ ಹಾಡು ಸನ್ನಿವೇಶಕ್ಕೆ ತಕ್ಕಂತೆ ಇದೆ. ದೇವರಾಜ್‌ ಕುಷ್ಟಗಿ ಅವರ ಹಿನ್ನೆಲೆ ಸಂಗೀತವೇ ಇಲ್ಲಿ ಮೈನಸ್. ಕಾರ್ತಿಕ್‌ ಈಶ್ವರಾಚಾರಿ‌ ಅವರ ಸಂಕಲನ ಕೆಲವು ಕಡೆ ಅಚ್ಚುಕಟ್ಟಾಗಿದೆ.

Categories
ಸಿನಿ ಸುದ್ದಿ

ಚಿತ್ರೋತ್ಸವದ ಕೊನೆಯ ದಿನ ನೋಡಬಹುದಾದ ಅತ್ಯುತ್ತಮ 10 ಸಿನಿಮಾಗಳು

ಫೆಬ್ರವರಿ 6, ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕೊನೆಯ ದಿನ. ಲುಲು ಮಾಲ್ ನಲ್ಲಿ ನೋಡಬಹುದಾದ ಅತ್ಯುತ್ತಮ 10 ಚಲನಚಿತ್ರಗಳ ಪಟ್ಟಿ ಇಲ್ಲಿದೆ.

  1. ನೌವೆಲ್ ವಾಗ್
    ಸಮಯ ಮತ್ತು ಸ್ಕ್ರೀನ್: ರಾತ್ರಿ 8:20 (ಸ್ಕ್ರೀನ್ 3), ರಾತ್ರಿ 7:30 (ಸ್ಕ್ರೀನ್ 6), ಅಥವಾ ಸಂಜೆ 7:20 (ಸ್ಕ್ರೀನ್ 8)
    ವಿವರಣೆ: ಪ್ರಖ್ಯಾತ ನಿರ್ದೇಶಕ ರಿಚರ್ಡ್ ಲಿಂಕ್ಲೇಟರ್ ನಿರ್ದೇಶನದ ಈ 2025ರ ಚಿತ್ರವು ಫ್ರೆಂಚ್ ಸಿನಿಮಾ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ.
  2. ಶಂಕರ್ ಗುರು
    ಸಮಯ ಮತ್ತು ಸ್ಕ್ರೀನ್: ಮಧ್ಯಾಹ್ನ 2:00 (ಸ್ಕ್ರೀನ್ 6)
    ವಿವರಣೆ: ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್ ಅವರ ಅಭಿನಯದ ಈ 1978ರ ಮೈಲಿಗಲ್ಲು ಚಿತ್ರವನ್ನು ‘ಜನಪ್ರಿಯ ಮನರಂಜನಾ ಚಿತ್ರಗಳ’ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತಿದೆ.
  3. ಅಂಕಲ್ ಬೂನ್ಮಿ ಹೂ ಕ್ಯಾನ್ ರಿಕಾಲ್ ಹಿಸ್ ಪಾಸ್ಟ್ ಲೈವ್ಸ್
    ಸಮಯ ಮತ್ತು ಸ್ಕ್ರೀನ್: ಸಂಜೆ 4:10 (ವಿಐಪಿ ಸ್ಕ್ರೀನ್ 1)
    ವಿವರಣೆ: ಅಪಿಚತ್‌ಪಾಂಗ್ ವೀರಸೇತಕುಲ್ ನಿರ್ದೇಶನದ ಈ ಥಾಯ್ ಚಿತ್ರವು ಆಧ್ಯಾತ್ಮಿಕ ಮತ್ತು ಪುನರ್ಜನ್ಮದ ಕುರಿತಾದ ಜಾಗತಿಕ ಮಟ್ಟದ ಶ್ರೇಷ್ಠ ಕಲಾಕೃತಿಯಾಗಿದೆ.
  4. ದಿ ಪ್ರೆಸಿಡೆಂಟ್ಸ್ ಕೇಕ್
    ಸಮಯ ಮತ್ತು ಸ್ಕ್ರೀನ್: ಸಂಜೆ 5:40 (ಸ್ಕ್ರೀನ್ 4)
    ವಿವರಣೆ: ಹಸನ್ ಹಾದಿ ನಿರ್ದೇಶನದ ಈ 2025ರ ಅರೇಬಿಕ್ ಚಿತ್ರವು ಇರಾಕ್‌ನ ಸಮಕಾಲೀನ ಸಾಮಾಜಿಕ ಚಿತ್ರಣವನ್ನು ಕಟ್ಟಿಕೊಡುತ್ತದೆ.
  5. ಮ್ಯಾನ್ ಆಫ್ ಮಾರ್ಬಲ್
    ಸಮಯ ಮತ್ತು ಸ್ಕ್ರೀನ್: ಸಂಜೆ 6:50 (ವಿಐಪಿ ಸ್ಕ್ರೀನ್ 1)
    ವಿವರಣೆ: ಪೋಲಿಷ್ ನಿರ್ದೇಶಕ ಅಂದ್ರೆಜ್ ವಾಜ್ದಾ ಅವರ ಈ 1977ರ ಚಿತ್ರವು ವಿಶ್ವ ಸಿನಿಮಾದ ಐತಿಹಾಸಿಕ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.
  6. ಡಿವೈನ್ ಕಾಮಿಡಿ
    ಸಮಯ ಮತ್ತು ಸ್ಕ್ರೀನ್: ಮಧ್ಯಾಹ್ನ 12:30 (ಸ್ಕ್ರೀನ್ 5)
    ವಿವರಣೆ: ಅಲಿ ಅಸ್ಗರಿ ನಿರ್ದೇಶನದ ಈ 2025ರ ಪರ್ಷಿಯನ್ ಚಿತ್ರವು ಏಷ್ಯನ್ ಸಿನಿಮಾ ಸ್ಪರ್ಧಾ ವಿಭಾಗದ ಅಡಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ.
  7. ದಿ ಮಾಸ್ಟರ್ ಮೈಂಡ್
    ಸಮಯ ಮತ್ತು ಸ್ಕ್ರೀನ್: ಮಧ್ಯಾಹ್ನ 2:30 (ಸ್ಕ್ರೀನ್ 5)
    ವಿವರಣೆ: ಕೆಲ್ಲಿ ರೀಚಾರ್ಡ್ ನಿರ್ದೇಶನದ ಈ ಇಂಗ್ಲಿಷ್ ಚಿತ್ರವು ತನ್ನ ವಿಶಿಷ್ಟ ಕಥಾಹಂದರದಿಂದಾಗಿ ‘ಸಮಕಾಲೀನ ವಿಶ್ವ ಸಿನಿಮಾ’ ವಿಭಾಗದಲ್ಲಿ ಗಮನಸೆಳೆಯುತ್ತಿದೆ.
  8. ಡ್ರಾಗನ್‌ಫ್ಲೈ
    ಸಮಯ ಮತ್ತು ಸ್ಕ್ರೀನ್: ಬೆಳಗ್ಗೆ 11:30 (ಸ್ಕ್ರೀನ್ 3)
    ವಿವರಣೆ: ಪಾಲ್ ಆಂಡ್ರ್ಯೂ ವಿಲಿಯಮ್ಸ್ ನಿರ್ದೇಶನದ ಈ 2025ರ ಇಂಗ್ಲಿಷ್ ಚಿತ್ರವು ಗಂಭೀರ ಕಥಾಹಂದರ ಹೊಂದಿರುವ ಪ್ರಮುಖ ಚಿತ್ರವಾಗಿದೆ.
  9. ಗಣರಾಜ್
    ಸಮಯ ಮತ್ತು ಸ್ಕ್ರೀನ್: ಮಧ್ಯಾಹ್ನ 3:00 (ವಿಐಪಿ ಸ್ಕ್ರೀನ್ 2)
    ವಿವರಣೆ: ಭಾರತದ ಈಶಾನ್ಯ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವ ಈ 2025ರ ಅಸ್ಸಾಮಿ ಚಿತ್ರವನ್ನು ದಿಪ್ ಭುಯಾನ್ ನಿರ್ದೇಶಿಸಿದ್ದಾರೆ.
  10. ಕ್ಯಾಟನೇ
    ಸಮಯ ಮತ್ತು ಸ್ಕ್ರೀನ್: ಸಂಜೆ 4:50 (ಸ್ಕ್ರೀನ್ 1)
    ವಿವರಣೆ: ಅಯೋನಾ ಮಿಸ್ಚೀ ನಿರ್ದೇಶನದ ಈ 2025ರ ರೋಮೇನಿಯನ್ ಚಿತ್ರವು ಯುರೋಪಿಯನ್ ಸಿನಿಮಾದ ಆಧುನಿಕ ಶೈಲಿಯನ್ನು ಪ್ರತಿನಿಧಿಸುತ್ತದೆ.

Categories
ಸಿನಿ ಸುದ್ದಿ

ಚಿತ್ರೋತ್ಸವದಲ್ಲಿ ʼಮಹಾಕವಿʼ ದರ್ಶನ

ಇದು ಬರಗೂರು ರಾಮಚಂದ್ರಪ್ಪ ಅವರ 25ನೇ ಚಿತ್ರ

ಬೆಳಗಾವಿಯ ಪ್ರಭು ಯತ್ನಟ್ಟಿಯವರು ಪಿ.ಆರ್.ಅಸೋಸಿಯೇಟ್ಸ್ ಸಂಸ್ಥೆಯ ಮೂಲಕ ನಿರ್ಮಿಸಿರುವ, ಡಾ. ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ‘ಮಹಾಕವಿʼ ಚಿತ್ರವು 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದೆ. ಪ್ರದರ್ಶನದ ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ಮೊದಲು ಮಾತನಾಡಿದ ನಿರ್ಮಾಪಕರಾದ ಪ್ರಭು, ʼವೃತ್ತಿಯಲ್ಲಿ ವಕೀಲನಾಗಿರುವ ನಾನು ಬೆಳಗಾವಿಯವನು. ನನಗೆ ನನ್ನ ಸ್ನೇಹಿತನ ಮೂಲಕ ಬರಗೂರು ರಾಮಚಂದ್ರಪ್ಪ ಅವರ ಪರಿಚಯವಾಯಿತು. ಅವರು ನನಗೆ ʼಮಹಾಕವಿʼ ಚಿತ್ರದ ಕಥೆ ಹೇಳಿದರು. ಕಥೆ ಇಷ್ಟವಾಯಿತು. ಕೆಲವೇ ದಿನಗಳಲ್ಲಿ ಚಿತ್ರೀಕರಣ ಪ್ರಾರಂಭವಾಯಿತು. ಈಗ ಚಿತ್ರ ಸಿದ್ದವಾಗಿದ್ದು, ಈ ಬಾರಿಯ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದೆ. ನಮ್ಮ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಬಹಳ ಖುಷಿಯಾಗಿದೆ. ಈ ಚಿತ್ರವನ್ನು ಏಪ್ರಿಲ್‌ ತಿಂಗಳಲ್ಲಿ ಕನ್ನಡವಲ್ಲದೆ, ಬೇರೆ ಭಾಷೆಗಳಲ್ಲೂ ಬಿಡುಗಡೆ ಮಾಡುವ ಯೋಚನೆ ಇದೆʼ ಎಂದರು.

ಗುರುಗಳಾದ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ 25ನೇ ಚಿತ್ರದ ನಾಯಕಿಯಾಗಿ ನಟಿಸಿದ್ದು ಹಾಗೂ ನಮ್ಮ ಚಿತ್ರ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದ್ದು ಎರಡು ಬಹಳ ಸಂತೋಷ ತಂದಿದೆ ಎಂದು ನಾಯಕಿ ಅನುಷಾ ರೈ ಹೇಳಿದರು.

ʼಮಹಾಕವಿʼ ಚಿತ್ರವು ಕನ್ನಡದ ಆದಿಕವಿಯೆಂದೇ ಪ್ರಸಿದ್ಧನಾದ ಪಂಪನ ಕಾವ್ಯಗಳನ್ನು ಆಧರಿಸಿದೆ. ಇದು ಪಂಪನ ಜೀವನ ಚರಿತ್ರೆಯಲ್ಲ. ಪಂಪನ ಪರಿಕಲ್ಪನೆಗಳ ದೃಶ್ಯರೂಪಕ. ಅಂದರೆ ಪಂಪ ಮಹಾಕವಿಯು ತನ್ನ ಕಾವ್ಯಗಳಲ್ಲಿ ಪ್ರತಿಪಾದಿಸಿದ ಪರಿಕಲ್ಪನೆಗಳಿಗೆ ಕಥನ ರೂಪ ಕೊಡಲಾಗಿದೆ. ಬರಗೂರು ರಾಮಚಂದ್ರಪ್ಪನವರು ಚಿತ್ರಕಥೆ , ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕಿಶೋರ್ ಅವರು ಪಂಪನ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎಂದು ಚಿತ್ರದಲ್ಲಿ ನಟಿಸಿರುವ ರಾಜಪ್ಪ ದಳವಾಯಿ ತಿಳಿಸಿದರು.

ಛಾಯಾಗ್ರಾಹಕ ನಾಗರಾಜ ಆದವಾನಿ ಮಾತನಾಡಿ, ʼಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ 25 ಚಿತ್ರಗಳಲ್ಲಿ ಈ ಚಿತ್ರವೂ ಸೇರಿದಂತೆ 18 ಚಿತ್ರಗಳಿಗೆ ನಾನೇ ಛಾಯಾಗ್ರಾಹಕನಾಗಿ ಕಾರ್ಯ ನಿರ್ವಹಿಸಿದ್ದೇನೆʼ ಎಂದರು.

Categories
ಸಿನಿ ಸುದ್ದಿ

ಬಡವರ್ಗಕ್ಕೆ ಸ್ವಾಭಿಮಾನ, ಆತ್ಮವಿಶ್ವಾಸ ಕೊಟ್ಟ ಮೇರು ವ್ಯಕ್ತಿತ್ವ ಡಾ. ರಾಜ್ : ಮಂಜುನಾಥ್ ಅದ್ದೆ

ತಳಸಮುದಾಯದವರ ನಾಯಕ’ ಗೋಷ್ಠಿಯಲ್ಲಿ ರಾಕುಮಾರ್ ಅವರ ವ್ಯಕ್ತಿತ್ವ, ಸಾಧನೆ ಕುರಿತು ಸಂವಾದ

ಬೆಂಗಳೂರು ಚಿತ್ರೋತ್ಸವ ವೇದಿಕೆ: ‘ಕುವೆಂಪು ಅವರು ಸಾಹಿತ್ಯದ ಮೂಲಕ ಮೌಲ್ಯಗಳನ್ನು ದಾಟಿಸಿದರೆ, ರಾಜಕುಮಾರ್ ಅವರು ಜನಸಾಮಾನ್ಯರಿಗೂ ತಲುಪುವಂತೆ ಮೌಲ್ಯಗಳನ್ನು ಕಲಿಸಿದರು. ಕಾಳಜಿ ಮತ್ತು ತುಡಿತ ಇಟ್ಟುಕೊಂಡು, ಸಮಾಜ ಕಟ್ಟುವ ಕಡೆಗೆ ಕೆಲಸ ಮಾಡಿದರು. ಬಡವರಲ್ಲಿ ಸ್ವಾಭಿಮಾನ, ಘನತೆ ಹೆಚ್ಚಿಸಿದರು. ಅವರು ಬಡವರ್ಗದವರಿಗೆ ಆತ್ಮವಿಶ್ವಾಸದಿಂದ ಬದುಕುವ ಮಾರ್ಗವನ್ನು ಹೇಳಿಕೊಟ್ಟರು’ ಎಂದು ಸಾಹಿತಿ, ಪತ್ರಕರ್ತ ಡಾ.ಮಂಜುನಾಥ ಅದ್ದೆಯವರು ಹೇಳಿದರು.

ಡಾ.ಮಂಜುನಾಥ ಅದ್ದೆಯವರು ರಚಿಸಿರುವ ‘ಬಡವರ ರಾಜಕುಮಾರ್’ ಕೃತಿಯ ಆಧಾರದಲ್ಲಿ ನಡೆದ ‘ತಳಸಮುದಾಯಗಳ ನಾಯಕ’ ಗೋಷ್ಠಿಯಲ್ಲಿ ಮಾತನಾಡಿದ ಅದ್ದೆಯವರು, ‘ಈಗಿನ ಸಿನಿಮಾಗಳಲ್ಲಿ ವಾಸ್ತವ ಬದುಕು ಇರುವುದಿಲ್ಲ, ಸಾವಯವ ಚಿಂತನೆ ಇರುವುದಿಲ್ಲ. ಆದರೆ, ರಾಜಕುಮಾರ್ ಅವರು ವಾಸ್ತವ ಮತ್ತು ವ್ಯಾಪಾರ ಎರಡನ್ನೂ ಸರಿತೂಗಿಸಿಕೊಂಡು ಹೋದ ಮಾದರಿ ವ್ಯಕ್ತಿತ್ವ’ ಎಂದರು.

ಬಾಲ್ಯದಲ್ಲಿ ತಮ್ಮ ಮೇಲೆ ರಾಜಕುಮಾರ್ ಬೀರಿದ ಪರಿಣಾಮದ ಕುರಿತು ಮಾತನಾಡಿದ ಅವರು, ‘ ಪಿಯುಸಿ ಸೇರುವ ಕಾಲಕ್ಕೆ ನನ್ನ ಬಳಿ ಪ್ಯಾಂಟ್ ಹೊಲಿಸಿಕೊಳ್ಳಲು ಹಣವಿರಲಿಲ್ಲ. ಅಂದು ಚಡ್ಡಿ ಹಾಕಿಕೊಂಡೇ ಮೇಯರ್ ಆಗುವ ‘ಮೇಯರ್ ಮುತ್ತಣ್ಣ’ನ ಪಾತ್ರ ನನ್ನಲ್ಲಿ ಆತ್ಮವಿಶ್ವಾಸ ತುಂಬಿತ್ತು’ ಎಂದರು,

ಹಿರಿಯ ಪತ್ರಕರ್ತ ರಘುನಾಥ ಚ.ಹ. ಮಾತನಾಡಿ, ‘ಕರ್ನಾಟಕ ಏಕೀಕರಣಗೊಂಡಾಗ ರಾಜಕೀಯವಾಗಿ, ಭೌಗೋಳಿಕವಾಗಿ ಏಕೀಕರಣವಾಗಿತ್ತು. ಆದರೆ, ಸಾಂಸ್ಕೃತಿಕ ಏಕೀಕರಣವಾಗಿದ್ದು ರಾಜಕುಮಾರ್ ಅವರಿಂದ. ಕುವೆಂಪು ಪ್ರಜ್ಞಾಪೂರ್ವಕವಾಗಿ ತಾತ್ವಿಕತೆ ಕಟ್ಟಿದರೆ, ರಾಜಕುಮಾರ್ ಅಪ್ರಜ್ಞಾಪೂರ್ವಕವಾಗಿ ತಾತ್ವಿಕತೆ ಹೇಳಿಕೊಟ್ಟರು. ಕುವೆಂಪು ಬೌದ್ಧಿಕ ಪ್ರತಿನಿಧಿಯಾದರೆ, ರಾಜಕುಮಾರ್ ಜನಪದರ ಪ್ರತಿನಿಧಿ. ಅವರ ಸಿನಿಮಾಗಳು ನಮಗೆ ಸಾಂವಿಧಾನಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಹೇಗೆಂದು ಕಲಿಸಿದವು’ ಎಂದು ಹೇಳಿದರು.

‘ಯಾರ ಭೇಟಿ ಆದಾಗ ಒಂದು ಗಾಢ ಅನುಭವ ನಮಗೆ ಆಗುತ್ತದೆಯೋ ಅಂಥವರನ್ನು ನಾವು ಲೆಜೆಂಡ್ ಎಂದು ಕರೆಯುತ್ತೇವೆ. ಹಾಗೊಂದು ಅನುಭವ ದಕ್ಕದಿದ್ದರೆ ಅವರು ಲೆಜೆಂಡ್ ಆಗಿರುವುದಿಲ್ಲ. ರಾಜಕುಮಾರ್ ಕಾರಿನಿಂದ ಕೈಬೀಸಿದರೂ ಸಾಕಿತ್ತು, ಜನರಿಗೆ ಹೇಳಲು ಕತೆಗಳು ದೊರಕುತ್ತಿದ್ದವು. ಅವರನ್ನು ಹೊರತುಪಡಿಸಿ ಕನ್ನಡ ಚಿತ್ರರಂಗದ ಚರಿತ್ರೆಯೇ ಇಲ್ಲ’ ಎಂದು ಅವರು ಹೇಳಿದರು.

ಪತ್ರಕರ್ತೆ ಮಂಜುಳಾ ಹುಲಿಕುಂಟೆ ಮಾತನಾಡಿ, ʼರಾಜಕುಮಾರ್ ಅವರು ತಳ ಸಮುದಾಯದ ಮಂದಿ ಕೀಳರಿಮೆ ಮೀರಬೇಕಾದರೆ ಅವರಿಗೆ ಇರುವ ಶಕ್ತಿ ಪ್ರಾಮಾಣಿಕತೆ ಎಂಬ ಪ್ರಜ್ಞೆಯನ್ನು ಮೂಡಿಸಿದರು. ಅವರ ಬದುಕೇ ಒಂದು ಪಾಠವಾಗಿತ್ತುʼ ಎಂದು ಹೇಳಿದರು.

ಉಪನ್ಯಾಸಕ, ಸಾಹಿತಿ ಮುರಳಿಮೋಹನ್ ಕಾಟಿಯವರು ಸಂವಾದ ನಿರ್ವಹಣೆ ಮಾಡಿದರು.

ರಾಜಕುಮಾರ್ ಅವರು ಬೌನ್ಸರ್‌ಗಳ ಜೊತೆ ಬರುತ್ತಿರಲಿಲ್ಲ: ಸಾಧು ಕೋಕಿಲ

ಅಪರೂಪಕ್ಕೆ ರಾಜಕುಮಾರ್ ಹೆಸರಿನ ಕಾರಣದಿಂದ ಚಿತ್ರೋತ್ಸವದ ಗೋಷ್ಠಿಯಲ್ಲಿ ಮಾತನಾಡಿದ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಅವರು, ‘ಯಾವುದೇ ಸಾಂಸ್ಕೃತಿಕ ಘಟಕಕ್ಕೆ ಹೋದರೂ ಕುವೆಂಪು ಅವರ ಜೊತೆ ರಾಜಕುಮಾರ್ ಅವರನ್ನೂ ನೋಡಬಹುದು. ಅವರು ಎಲ್ಲರಿಗೂ ಸಲ್ಲುವವರು. ನಾನು ಸಂಗೀತ ಸಂಯೋಜಿಸಿದ ಕೆಲವು ಹಾಡುಗಳನ್ನು ರಾಜಕುಮಾರ್ ಅವರು ಹಾಡಿದ್ದಾರೆ. ಆಗ ಅವರು ಹಾಡುವ ಮೊದಲು ತಯಾರಾಗಿ ಬರುತ್ತಿದ್ದರು. ಹಾಡುವ ದಿನ ನಮ್ಮನ್ನೆಲ್ಲಾ ಸಾಲಾಗಿ ನಿಲ್ಲಿಸುತ್ತಿದ್ದಾರೆ.

ತಲೆಯಿಂದ ಕಾಲಿನವರೆಗೆ ಮುಟ್ಟಿ ನಮಸ್ಕಾರ ಮಾಡಿ ಆಮೇಲೆಯೇ ಹಾಡಲು ಹೋಗುತ್ತಿದ್ದರು. ಅಂಥಾ ಸಂಸ್ಕಾರ ಅವರದು. ಈಗಿನವರ ತರಹ ಅವರು ಬೌನ್ಸರ್‌ಗಳನ್ನು ಸುತ್ತಮುತ್ತ ಇಟ್ಟುಕೊಂಡು ಬರುತ್ತಿರಲಿಲ್ಲ. ಅವರ ಸುತ್ತಮುತ್ತ ಇದ್ದಿದ್ದು ಅಭಿಮಾನಿಗಳು. ಅವರು ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು, ಅವರನ್ನು ನೋಡಲು ಇಡೀ ಕರ್ನಾಟಕವೇ ಕಾಯುತ್ತಿತ್ತು. ಅವರು ಒಂದು ಹಾಡನ್ನು ಹಾಡಲು 25000 ಸಾವಿರ ತೆಗೆದುಕೊಳ್ಳುತ್ತಿದ್ದರು. ಆದರೆ, ಅದರಲ್ಲಿ ಎಲ್ಲವೂ ಬಡವರಿಗೆ ಸಂಬಂಧಿಸಿದ ಟ್ರಸ್ಟ್ ಗೆ ಹೋಗುತ್ತಿತ್ತು. ಅದನ್ನು ಅವರು ಯಾವತ್ತೂ ಹೇಳಿಕೊಳ್ಳಲಿಲ್ಲ’ ಎಂದು ಹೇಳಿದರು.

Categories
ಸಿನಿ ಸುದ್ದಿ

ವಿಂಟೇಜ್ ಲುಕ್‌ನಲ್ಲಿ ಕಯಾದು ಲೋಹರ್… ಪಳ್ಳಚಟ್ಟಂಬಿಯಲ್ಲಿ ಟೋವಿನ್ ಥಾಮನ್ ಗೆ ನಾಯಕಿ

ಪಳ್ಳಚಟ್ಟಂಬಿ ಸಿನಿಮಾದ ನಾಯಕಿ ಲುಕ್ ಅನಾವರಣ…ವಿಂಟೇಜ್ ಲುಕ್‌ನಲ್ಲಿ ಕಯಾದು ಲೋಹರ್

ಮಲಯಾಳಂ‌ ನಟ ಟೋವಿನೋ ಥಾಮಸ್ ನಟಿಸುತ್ತಿರುವ ಬಹು ನಿರೀಕ್ಷಿತ ಪಳ್ಳಿಚಟ್ಟಂಬಿ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ನಾಯಕಿ ಕಯಾದು ಲೋಹರ್ ಫಸ್ಟ್ ಲುಕ್ ಅನಾವರಣ ಮಾಡಲಾಗಿದ್ದು, ವಿಂಟೇಜ್ ಲುಕ್ ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಡಿಜೋ ಜೋಸ್ ಆಂಟೋನಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ವಿಜಯರಾಘವನ್, ಸುಧೀರ್ ಕರಮನ, ಬಾಬುರಾಜ್, ವಿನೋದ್ ಕೆದಮಂಗಲಂ, ಪ್ರಶಾಂತ್ ಅಲೆಕ್ಸಾಂಡರ್ ತಾರಾಗಣದಲ್ಲಿದ್ದಾರೆ. 1950-60ರ ದಶಕದ ಸುತ್ತ ಕಥೆಯನ್ನು ಎಣೆಯಲಾಗಿದೆ.

ಚಿತ್ರದ ಛಾಯಾಗ್ರಹಣವನ್ನು ಟಿಜೊ ಟಾಮಿ ನಿರ್ವಹಿಸಿದರೆ, ಜೇಕ್ಸ್ ಬಿಜಾಯ್ ಸಂಗೀತ ಸಂಯೋಜಿಸಿದ್ದಾರೆ. ಸಂಕಲನವನ್ನು ಶ್ರೀಜಿತ್ ಸಾರಂಗ್ ಮತ್ತು ನಿರ್ಮಾಣ ವಿನ್ಯಾಸವನ್ನು ದಿಲೀಪ್ ನಾಥ್ ನಿರ್ವಹಿಸಿದ್ದಾರೆ. ಚಿತ್ರಕಥೆಯನ್ನು ಎಸ್ ಸುರೇಶ್ ಬಾಬು ಬರೆದಿದ್ದಾರೆ.

ಪಳ್ಳಚಟ್ಟಂಬಿ ಸಿನಿಮಾ ವರ್ಲ್ಡ್ ವೈಡ್ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ನೌಫಲ್ ಮತ್ತು ಬ್ರಿಜೀಶ್ ನಿರ್ಮಿಸಿದ್ದಾರೆ, ಜೊತೆಗೆ ಸಿ ಕ್ಯೂಬ್ ಬ್ರದರ್ಸ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿಯಲ್ಲಿ ಚಾಣುಕ್ಯ ಚೈತನ್ಯ ಚರಣ್ ನಿರ್ಮಿಸಿದ್ದಾರೆ. ಪಳ್ಳಚಟ್ಟಂಬಿ ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಏಪ್ರಿಲ್ 9 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಅಮೆರಿಕದ ಪ್ಲೋರಿಡಾದಲ್ಲಿ 8ನೇ ನಾವಿಕ ವಿಶ್ವ ಕನ್ನಡ ಸಮಾವೇಶ

ಅಮೆರಿಕದ ಫ್ಲೋರಿಡಾ ರಾಜ್ಯದ ಲೇಕ್‌ಲ್ಯಾಂಡ್‌ ನಗರದಲ್ಲಿ ನಡೆಯಲಿರುವ 8ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2025ಕ್ಕೆ ಪೂರ್ಣ ಪ್ರಮಾಣದ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ RP ಪಂಡಿಂಗ್ ಕನ್ವೆನ್ಸನ್ ಸೆಂಟರ್‌ನಲ್ಲಿ ಆಗಸ್ಟ್ 29ರಿಂದ 31ರವರೆಗೆ ಈ ಐತಿಹಾಸಿಕ ಸಮಾವೇಶ ನಡೆಯಲಿದೆ.‌ ಈ ಕುರಿತು ನಾವಿಕ ಅಧ್ಯಕ್ಷರಾದ ಶಿವಕುಮಾರ್, ಸಮಾವೇಶ ಸಂಚಾಲಕರಾದ ಹರ್ಷಿತ್ ಗೌಡ, ಹಿರಿಯ ನಟ ಪ್ರಣಯರಾಜ ಶ್ರೀನಾಥ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಗಾಯಕ ಅಲೋಕ್ ಬಾಬು (ಆಲ್ ಓಕೆ) ಭಾಗವಹಿಸಿ, 8ನೇ ನಾವಿಕ ಕನ್ನಡ ಸಮಾವೇಶ -2025ರ ಬಗ್ಗೆ ಮಾಹಿತಿ ಹಂಚಿಕೊಂಡರು.

ಹಿರಿಯ ನಟ ಶ್ರೀನಾಥ್‌ ಮಾತನಾಡಿ, ವಿಶ್ವದಲ್ಲಿ ಎಲ್ಲೆಲ್ಲೋ ಚದುರಿ ಹೋಗಿರುವ ಕನ್ನಡಿಗರು ಅನೇಕ ಜನ ನಾವಿಕ ವಿಶ್ವ ಕನ್ನಡ ಸಮಾವೇಶ ಬರ್ತಾರೆ. ಅಮೆರಿಕಾ ಮಾತ್ರವಲ್ಲ, ಬೇರೆ ಬೇರೆ ಕಡೆಯಿಂದ ಬರುತ್ತಾರೆ. ಅಮೆರಿಕಾದಲ್ಲಿ ಜನ ಸುಖ ಸಂತೋಷದಿಂದ ಇದ್ದಾರೆ. ಆದ್ರೆ ಅವರಲ್ಲಿ ಸೆಂಟಿಮೆಂಟ್‌ ಕೊರತೆ ಇದೆ. ಇಲ್ಲಿ ಎಲ್ಲಾ ಕೊರತೆ ಇದೆ. ಸೆಂಟಿಮೆಂಟ್‌ ತುಂಬಾ ಇದೆ. ಆ ಸೆಂಟಿಮೆಂಟ್‌ ಹೃದಯದಲ್ಲಿ ತುಂಬಿಕೊಂಡೆ ಇಲ್ಲಿಂದ ಅಮೆರಿಕಾ ಹೋಗಿದ್ದಾರೆ. ಸೆಂಟಿಮೆಂಟ್‌ ಅವರು ಹತೋರೆಯುತ್ತಾರೆ. ಈ ಸಮಾರಂಭದಲ್ಲಿ ಆ ಸೆಂಟಿಮೆಂಟ್‌ ಅನುಭವಿಸುತ್ತಾರೆ. ದೋಣಿ ನಡೆಸುವವರು ನಾವಿಕರು. ಪ್ರತಿ ವರ್ಷವೂ ನಾನು ಅಲ್ಲಿಗೆ ಬಂದಿದ್ದೇನೆ. ಚದುರಿ ಹೋಗಿರುವ ಪ್ರತಿಯೊಬ್ಬ ಕಲಾವಿದನ ಜೊತೆ ಮಾತನಾಡಬೇಕು ಎಂಬ ಆಸೆ. ಅದನ್ನು ಈ ರೀತಿ ಕಾರ್ಯಕ್ರಮಗಳ ಮೂಲಕ ಈಡೇರಿಸಿಕೊಳ್ಳುತ್ತೇವೆ. ಮೂರು ದಿನ ಅಲ್ಲಿ ಕನ್ನಡ, ಕನ್ನಡ ಕಲರವ ಇರಲಿದೆ ಎಂದು ಹೇಳಿದರು.

ಈ ಸಮಾವೇಶದಲ್ಲಿ ಬಿಸಿನೆಸ್ ಫೋರಮ್, ವುಮೆನ್ಸ್ ಫೋರಮ್ ಕವಿ ಗೋಷ್ಠಿ, ಯೂಥ್ ಫೋರಮ್, ಸಾಹಿತ್ಯ ಗೋಷ್ಠಿ ಹೀಗೆ ಅನೇಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ಸತತವಾಗಿ ನಡೆಯಲಿವೆ. ಈ ಸಮಾವೇಶದಲ್ಲಿ ಅನಿವಾಸಿಯರು ಮಾತ್ರವಲ್ಲದೇ ಕರ್ನಾಟಕದ ಖ್ಯಾತನಾಮ ಕಲಾವಿದರಿಂದ ವೈವಿದ್ಯಮಯ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ಈ ಸಮಾವೇಶವ ವಿಶ್ವ ಕನ್ನಡಿಗರು ಸಂಸ್ಥೆಯು ಫ್ಲೋರಿಡಾ ರಾಜ್ಯದಲ್ಲಿರುವ ನಾಲ್ಕು ಪ್ರಮುಖ ಕನ್ನಡ ಸಂಘಗಳಾದ ಶ್ರೀಗಂಧ ಕನ್ನಡ ಕೂಟ. ಟಾಂಪ, ಒರ್ಲಾಂಡೋ ಕನ್ನಡ ಕೂಟ, ನಂದಿ ಕನ್ನಡ ಕೂಟ, ಮಯಾಮಿ, ಮತ್ತು ಸವಿಕನ್ನಡ ಕೂಟ ಜ್ಯಾಕ್ಸನ್ವೆಲ್ ಸಹಯೋಗದೊಂದಿಗೆ ಈ ಬೃಹತ್ ವಿಶ್ವ ಕನ್ನಡ ಸಮಾವೇಶವನ್ನು ಆಯೋಜಿಸುತ್ತಿದೆ. ಈ ಜಾಗತಿಕ ಸಮಾವೇಶವು ನಮ್ಮ ಭಾಷೆ, ಸಂಸ್ಕೃತಿ ಮತ್ತು ಏಕತೆಯನ್ನು ಆಚರಿಸಲು ಖಂಡಗಳಾದ್ಯಂತದ ಸಾವಿರಾರು ಕನ್ನಡಿಗರನ್ನು ಮತ್ತೊಮ್ಮೆ ಒಟ್ಟುಗೂಡಿಸುತ್ತದೆ.

ನಾವಿಕ ಸಂಸ್ಥೆಯ ಅಧ್ಯಕ್ಷರಾದ ಶಿವಕುಮಾರ್ ಮತ್ತು ಸಮ್ಮೇಳನ ಸಂಚಾಲಕರಾದ ಹರ್ಷಿತ್ ಗೌಡ, ಈ ಸಾಂಸ್ಕೃತಿಕ ವೈಭವವನ್ನು ‘ಸಾರುವ ಸಮಾವೇಶವನ್ನು ಉತ್ಸಾಹ ಮತ್ತು ದೂರದೃಷ್ಟಿಯಿಂದ ಮುನ್ನಡೆಸುತ್ತಿದ್ದು, ಜನಶಕ್ತಿಯ ಉತ್ಸವವನ್ನಾಗಿ ಮಾಡಲು ಎಲ್ಲ ಕನ್ನಡಿಗರಿಗೆ ಕರೆ ನೀಡಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಅನೇಕ ಸಚಿವರನ್ನು ಈ ಸಮಾವೇಶಕ್ಕೆ ಆಹ್ವಾನಿಸಲಾಗಿದ್ದು, ಭಾಗವಹಿಸುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ, ಕರ್ನಾಟಕ ಮತ್ತು ಅಮೆರಿಕದಾದ್ಯಂತ ಇರುವ ಪ್ರಮುಖ ಮಠಗಳ ಗೌರವಾನ್ವಿತ ಸ್ವಾಮೀಜಿಗಳನ್ನು ಸಹ ಆಶೀರ್ವದಿಸಲು ಆಹ್ವಾನಿಸಲಾಗಿದೆ. ನಟ, ನಿರ್ದೇಶಕ ಹಾಗೂ ನಿರೂಪಕ ರಮೇಶ್ ಅರವಿಂದ್, ಹಿರಿಯ ನಟ, ನಿರ್ಮಾಪಕ ಹಾಗೂ ನಿರ್ದೇಶಕ ಶ್ರೀನಾಥ್ ಮತ್ತು ನಟ, ನಿರ್ದೇಶಕ ಹಾಗೂ ಸಾಂಸ್ಕೃತಿಕ ರಾಯಭಾರಿ ರಕ್ಷಿತ್ ಶೆಟ್ಟಿ ಈ ಸಮಾವೇಶದಲ್ಲಿ ಭಾಗವಹಿಸುವುದು ಖಚಿತವಾಗಿದೆ. ಅಲ್ಲದೆ, ಇನ್ನಷ್ಟು ಗಣ್ಯ ವ್ಯಕ್ತಿಗಳು ಈ ಮಹಾ ಕನ್ನಡ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ.

ಕರ್ನಾಟಕದ ದಸರಾ ಶೈಲಿಯ ಜಂಬೂ ಸವಾರಿಯಿಂದ ಪ್ರೇರಿತವಾದ ವರ್ಣರಂಜಿತ ಮೆರವಣಿಗೆ ನಡೆಯಲಿದೆ. ಪ್ರಪಂಚದಾದ್ಯಂತದ ಕನ್ನಡ ಕೂಟಗಳು ಕರ್ನಾಟಕ ಜಿಲ್ಲೆಗಳನ್ನು ಪ್ರತಿನಿಧಿಸಲಿವೆ. ಈ ಮೆರವಣಿಗೆಯ ಉದ್ದಕ್ಕೂ ಸಾಂಪ್ರದಾಯಿಕ ಉಡುಗೆ ತೊಡುಗೆಗಳು, ಜಾನಪದ ಪ್ರದರ್ಶನಗಳು, ಸ್ತಬ್ಧ ಚಿತ್ರಗಳ ಮೂಲಕ ಸಾಂಪ್ರದಾಯಿಕ ಸ್ಮಾರಕಗಳ ಪುನರ್ನಿಮಾಣ ಹಾಗೂ ಕನ್ನಡ ಅಸ್ಮಿತೆಯನ್ನು ಪ್ರತಿಧ್ವನಿಸುವ ಧ್ವಜಗಳು ಮತ್ತು ಸಂಗೀತ ಪ್ರಕಾರಗಳು ಸಾಂಸ್ಕೃತಿಕ ವೈಭವವನ್ನು ಸಾರಲಿವೆ.

ಸಂಗೀತ ರಸ ಸಂಜೆ ಕಾರ್ಯಕ್ರಮ

ನಾವಿಕ ಕ್ರಿಕೆಟ್ ಟೂರ್ನಮೆಂಟ್ , ಆಧುನಿಕ ವಿಜ್ಞಾನ ಮತ್ತು ಕಾಲಾತೀತ ಆಧ್ಯಾತ್ಮಿಕ ಕಾರ್ಯಕ್ರಮ, ನಾಟಕ, ಕಥೆ ಹೇಳುವುದು, ಕನ್ನಡ ಸಾಹಿತ್ಯದ ಕಿರು ನಾಟಕ ಕಾರ್ಯಕ್ರಮ ಸೇರಿದಂತೆ ಸಂಗೀತ ರಸ ಸಂಜೆ ಕಾರ್ಯಕ್ರಮ ಕೂಡ ನಡೆಯಲಿದೆ. ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಹಾಗೂ ಆಲ್ ಒಕೆ ಮ್ಯೂಸಿಕಲ್ ನೈಟ್ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ.

Categories
ಸಿನಿ ಸುದ್ದಿ

A for ಆನಂದ್ : ಶಿವಣ್ಣನ ಹೊಸ ಸಿನಿಮಾಗೆ ಚಾಲನೆ

ಸ್ಯಾಂಡಲ್ವುಡ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿರುವ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಪಾಠ ಹೇಳಿ ಕೊಡುವ ಗುರುವಾಗಿ ಕಾಣಿಸಿಕೊಳ್ಳುತ್ತಿರುವ ‘A for ಆನಂದ್’ ಚಿತ್ರದ ಮುಹೂರ್ತ ಇಂದು ಅದ್ಧೂರಿಯಾಗಿ ನೆರವೇರಿದೆ. ಶುಭ ಶುಕ್ರವಾರವಾದ ಇಂದು ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ನಡೆದಿದೆ. ನಿರ್ಮಾಪಕಿ ಗೀತಾ ಶಿವರಾಜ್‌ ಕುಮಾರ್‌ ಕ್ಲ್ಯಾಪ್‌ ಮಾಡಿದರು. ಮಗುವಿನಿಂದ ಕ್ಯಾಮೆರಾಗೆ ಚಾಲನೆ ನೀಡಿಸಿದರು. ಈ ಸಂದರ್ಭದಲ್ಲಿ ಇಡೀ ಚಿತ್ರತಂಡ ಹಾಜರಿತ್ತು.

ಮುಹೂರ್ತದ ಬಳಿಕ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು. ಈ ಸುದ್ದಿಗೋಷ್ಠಿಯ ಪ್ರಮುಖ ಆಕರ್ಷಣೆ ಮಕ್ಕಳು. ‘A for ಆನಂದ್’ ಮಕ್ಕಳ ಸಿನಿಮಾವಾಗಿರುವುದರಿಂದ ವಿಶೇಷವಾಗಿ ಸುದ್ದಿಗೋಷ್ಠಿ ನಡೆಸಲಾಯಿತು. ವೇದಿಕೆ ಅತಿಥಿಗಳನ್ನು ಮಕ್ಕಳು ಸ್ವಾಗತಿಸಿದರು. ಇದೇ ವೇಳೆ ಹಾಡು ಹೇಳಿ ನೆರೆದಿದ್ದವರನ್ನು ಮಕ್ಕಳು ರಂಜಿಸಿದರು.

ಬಳಿಕ ಮಾತನಾಡಿದ ಶಿವಣ್ಣ, ಶ್ರೀನಿ ಜೊತೆ ಎರಡನೇ ಸಿನಿಮಾ. ಅವರು ನನಗೆ ಹದಿನೈದು ವರ್ಷದಿಂದ ಸ್ನೇಹಿತರು. ಶಿವ ಸಿನಿಮಾಗಾಗಿ ಫೋಟೋಶೂಟ್‌ ಮಾಡಿದ್ದರು. ಅಂದಿನಿಂದ ಪರಿಚಯ. ಅಂದಿನಿಂದ ಒಂದು ಕಥೆ ಇದೆ ಎಂದು ಹೇಳುತ್ತಿದ್ದರು. ತುಂಬಾ ಬಾರಿ ಮೀಟ್‌ ಮಾಡಿದಾಗ ಏನೋ ಮಿಸ್‌ ಆಗುತಿತ್ತು. ಈ ಸಿನಿಮಾಗೆ ಅಟಾಚ್‌ ಮೆಂಟ್‌ ಮುಖ್ಯ. ಮಕ್ಕಳನ್ನು ಯಾವ ರೀತಿ ಓದಿಸಬೇಕು.

ಅವರನ್ನು ದಾರಿಗೆ ತರಬೇಕು ಅನ್ನೋದೇ ‘A for ಆನಂದ್’ ಕಥೆ ತಿರುಳು. ಸ್ಕ್ರೀನ್‌ ಪ್ಲೇಯನ್ನು ಶ್ರೀನಿ ತುಂಬಾ ಚೆನ್ನಾಗಿ ಮಾಡಿದ್ದಾರೆ. ಅಕ್ಟೋಬರ್‌ ತಿಂಗಳಾತ್ಯಂಕ್ಕೆ ಶೂಟಿಂಗ್‌ ಹೊರಡುತ್ತೇವೆ. ಈ ಚಿತ್ರದಲ್ಲಿ ಆರು ಹಾಡುಗಳು ಬರುತ್ತವೆ. ನನ್ನ ಚಿತ್ರದಲ್ಲಿ ತುಂಬಾ ದಿನಗಳ ಬಳಿಕ ಇಷ್ಟು ಹಾಡು ಇರುತ್ತಿವೆ. ಆನಂದ್‌ ನಮ್ಮ ತಾಯಿ ಹೆಸರಿಟ್ಟಿದ್ದು, ಈ ಆನಂದ್‌ ಮಕ್ಕಳ ಮುಖದಲ್ಲಿ ಆನಂದ ತರುತ್ತಾನೆ ಎಂದರು.

ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್‌, ತುಂಬಾ ದಿನದಿಂದ ಮಕ್ಕಳ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಮಕ್ಕಳಿಗೆ ಶಿಕ್ಷಣ ಮುಖ್ಯ. ಆದರೆ ಇಂದು ಅವರಿಗೆ ಸಾಕಷ್ಟು ಒತ್ತಡ ಹೇರಲಾಗುತ್ತಿದೆ. ಒತ್ತಡ ಇಲ್ಲದೇ ಮಕ್ಕಳಿಗೆ ಯಾವ ರೀತಿ ಪಾಠ ಹೇಳಿಕೊಡಬಹುದು ಅನ್ನೋದನ್ನು ಈ ಸಿನಿಮಾ ಮೂಲಕ ಹೇಳುತ್ತೇವೆ. ಈ ಚಿತ್ರಕ್ಕೆ ವಾಸುಕಿ ವೈಭವ್‌ ಸಂಗೀತ ನಿರ್ದೇಶನ ಮಾಡುತ್ತಾರೆ. ಎ ಫಾರ್ ಆನಂದ್‌ ಚಿತ್ರದ ಟೈಟಲ್‌ ತುಂಬಾ ಇಷ್ಟವಾಯ್ತು. ಈ ಚಿತ್ರದಿಂದ ತಂದೆ ತಾಯಿ ಮಕ್ಕಳ ಹೇಗೆ ಓದಿಸಬೇಕು ಅಂತಾ ತಿಳಿದುಕೊಳ್ಳುತ್ತಾರೆ. ಜೊತೆಗೆ ಈ ಸಿನಿಮಾದಿಂದ ಜನ ಥಿಯೇಟರ್‌ಗೆ ಬರುವ ರೀತಿ ಆಗುತ್ತದೆ ಎಂಬ ನಂಬಿಕೆ ಇದೆ ಎಂದರು.

ನಿರ್ದೇಶಕ ಶ್ರೀನಿ ಮಾತನಾಡಿ, ಘೋಸ್ಟ್‌ ಆಕ್ಷನ್‌ ಥ್ರಿಲ್ಲರ್‌ ಸಿನಿಮಾ, ಇದು ಕಂಪ್ಲೀಟ್‌ ಡಿಫರೆಂಟ್‌ ಜಾನರ್‌ ಚಿತ್ರ. ‘A for ಆನಂದ್’ ಫ್ಯಾಮಿಲಿ ಎಂಟರ್‌ ಟೈನರ್‌ ಜೊತೆಗೆ ಮಕ್ಕಳಿಗೂ ಕನೆಕ್ಟ್‌ ಆಗುವ ಸಿನಿಮಾ. ಇದು ಚಾಲೆಂಜ್‌ ಕೆಲಸವೇ. ಅಕ್ಟೋಬರ್‌ ಸಮಯದಲ್ಲಿ ಶಿವಮೊಗ್ಗದ ಸಾಗರ ಆ ಕಡೆ ಚಿತ್ರೀಕರಿಸಲು ಯೋಜನೆ ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.

ಈ ಹಿಂದೆ ಶಿವರಾಜ್ ಕುಮಾರ್ ಅವರಿಗಾಗಿ ‘ಘೋಸ್ಟ್’ ಹೆಸರಿನ ಭರ್ಜರಿ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀನಿ, ಈಗ ಶಿವಣ್ಣನ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ‘ಎ ಫಾರ್ ಆನಂದ್’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಒಬ್ಬ ಶಿಕ್ಷಕನ ಪಾತ್ರ ನಿರ್ವಹಿಸಲಿದ್ದಾರೆ.

́ಎ ಫಾರ್ ಆನಂದ್’ ಸಿನಿಮಾವನ್ನು ಶಿವಣ್ಣನವರ ಹೋಮ್ ಬ್ಯಾನರ್ ಆಗಿರುವ ಗೀತಾ ಪಿಕ್ಚರ್ಸ್ ವತಿಯಿಂದಲೇ ನಿರ್ಮಾಣ ಮಾಡಲಾಗುತ್ತಿದೆ. ವೇದ, ಭೈರತಿ ರಣಗಲ್ ಅನ್ನು ಇದೇ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣ ಮಾಡಲಾಗಿತ್ತು, ಗೀತಾ ಪಿಕ್ಚರ್ಸ್ಗೆ ಇದು ಮೂರನೇ ಸಿನಿಮಾ. ಶಿವರಾಜ್ ಕುಮಾರ್ ಹಾಗೂ ಶ್ರೀನಿ ಕಾಂಬಿನೇಷನ್ನ ‘ಘೋಸ್ಟ್’ ಸಿನಿಮಾಕ್ಕೆ ಕೆಲಸ ಮಾಡಿದ್ದ ಚಿತ್ರ ಹಾಗೂ ತಾಂತ್ರಿಕ ತಂಡವೇ ‘ಎ ಫಾರ್ ಆನಂದ್’ ಸಿನಿಮಾಕ್ಕೂ ಕೆಲಸ ಮಾಡಲಿದೆ.

ಮಹೇನ್ ಸಿಂಹ ಕ್ಯಾಮೆರಾ, ದೀಪು ಎಸ್ ಕುಮಾರ್ ಸಂಕಲನ, ಪ್ರಸನ್ನ ವಿಎಂ ಸಂಭಾಷಣೆ ಬರೆದಿದ್ದಾರೆ. ವಾಸುಕಿ ವೈಭವ್‌ ಸಂಗೀತ ಒದಗಿಸಲಿದ್ದಾರೆ. ಎ ಫಾರ್ ಆನಂದ್‌ ಪಕ್ಕ ಫ್ಯಾಮಿಲಿ ಎಂಟರ್ ಟೈನರ್‌ ಜೊತೆಗೆ ಎಮೋಷನಲ್‌ ಸಿನಿಮಾ. ಪ್ರೇಕ್ಷಕರನ್ನಿ ಥಿಯೇಟರ್‌ಗೆ ಕರೆತರುವ ಒಂದೊಳ್ಳೆ ಚಿತ್ರವಾಗಲಿದೆ ಅನ್ನೋದು ತಂಡದ ಅಭಿಪ್ರಾಯ.

error: Content is protected !!