ದೃಷ್ಟಿ ಮಿಡಿಯಾ ಮತ್ತು ಪ್ರೊಡಕ್ಷನ್ಸ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗುತ್ತಿರುವ, ಸಂತೋಷ್ ಕೊಡಂಕೇರಿ ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ “ಪ್ರೊಡಕ್ಷನ್ ನಂ 02” ನೂತನ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಸುಳ್ಯದ ಶ್ರೀ ಚನ್ನಕೇಶವ ದೇವಸ್ಥಾನದಲ್ಲಿ ಜರುಗಿತು. ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದರು.
ತೂಗುಸೇತುವೆಗಳ ಸರದಾರ ಪದ್ಮಶ್ರೀ ಶ್ರೀ ಗಿರೀಶ್ ಭಾರಧ್ವಾಜ್ ರವರು, ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ಲಯನ್ಸ್ ಕ್ಲಬ್ ಜಿಲ್ಲಾ ಮಾಜಿ ಗವರ್ನರ್ ಹಾಗೂ ಜೆಡಿಎಸ್ ರಾಜ್ಯ ಸಂಚಾಲಕ ಎಂ.ಬಿ. ಸದಾಶಿವ, ಶ್ರೀಚನ್ನಕೇಶವ ದೇವಳದ ಆಡಳಿತ ಮೊಕೇಸ್ತರ ಡಾ. ಹರಪ್ರಸಾದ್ ತುದಿಯಡ್ಕ, ನ.ಪಂ. ಮಾಜಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಹಾಗೂ ಇನ್ನಿತರ ಸ್ಥಳೀಯ ಮುಖಂಡರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
ಗೀತಾ ಭಾರತಿ ಭಟ್, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತಾರ್, ಸಂಪತ್ ಮೈತ್ರೇಯ, ರಘು ಪಾಂಡೇಶ್ವರ್, ಖುಷಿ ಆಚಾರ್, ಮೀನ ಹಾಗೂ ದರ್ಶಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಪಾವನಾ ಸಂತೋಷ್ ಕಥೆ ಮತ್ತು ಸಂಭಾಷಣೆ ಬರೆದಿದ್ದು, ಸಂತೋಷ್ ಕೊಡಂಕೇರಿ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮುರಳಿಧರ್. ಎಂ ಛಾಯಾಗ್ರಹಣ, ವಿನಯ್ ಶರ್ಮಾ ಸಂಗೀತ ನಿರ್ದೇಶನ, ರಘು ಎಸ್. ಸಂಕಲನ, ಕಿರಣ್ ಕಾವೇರಪ್ಪ ಗೀತರಚನೆ ಹಾಗೂ ಪ್ರಸನ್ನ – ಕಲ್ಯಾಣ್ ರೆಡ್ಡಿ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.
ಈ ಚಲನಚಿತ್ರವು ದಕ್ಷಿಣ ಕನ್ನಡದ ಸೊಗಡು, ಭಾಷೆ, ಸಂಸ್ಕೃತಿ ಹೊಂದಿದ್ದು, ದಕ್ಷಿಣ ಕನ್ನಡದ ಸುಳ್ಯ, ಸಂಪಾಜೆ, ತೋಡಿಕಾನ ಆಸುಪಾಸಿನಲ್ಲಿ 30 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಶಿವಮೊಗ್ಗ ಮೂಲದ ಆದರ್ಶ ಅಯ್ಯಂಗಾರ್, ಪ್ರಸ್ತುತ ಯು ಎಸ್ ಎ ನಿವಾಸಿ. ಈ ಮಣ್ಣಿನ ಮೇಲೆ ವಿಶೇಷ ಅಭಿಮಾನ ಹೊಂದಿರುವ ಆದರ್ಶ್ ಉತ್ತಮ ಗಾಯಕರು ಹೌದು. ಈಗಾಗಲೇ ಕೆಲವು ಆಲ್ಬಂ ವಿಡಿಯೋ ಸಾಂಗ್ ಗಳನ್ನು ಹಾಡಿ ನಿರ್ಮಾಣ ಮಾಡಿದ್ದಾರೆ.
ಒಂದೇ ವೇದಿಕೆಯಲ್ಲಿ ನಾಲ್ಕು ಕಾರ್ಯಕ್ರಮಗಳನ್ನು ಆದರ್ಶ್ ಅಯ್ಯಂಗಾರ್ ಆಯೋಜಿಸಿದ್ದರು. ಶ್ರೀಕೃಷ್ಣ ಪ್ರೊಡಕ್ಷನ್ಸ್ ಸಂಸ್ಥೆಯ ಶುಭಾರಂಭ, ಸಾಮಾಜಿಕ ಕಳಕಳಿಯುಳ್ಳ “ಹೋಪ್” ವೀಡಿಯೋ ಸಾಂಗ್ ಬಿಡುಗಡೆ, ರಕ್ಷಿತ್ ತೀರ್ಥಹಳ್ಳಿ ಅವರ “ಕಾಡಿನ ನೆಂಟರು” ಪುಸ್ತಕ ಬಿಡುಗಡೆ ಹಾಗೂ “ತಿಮ್ಮನ ಮೊಟ್ಟೆಗಳು” ಚಿತ್ರದ ಪೋಸ್ಟರ್ ಬಿಡುಗಡೆ.
ಖ್ಯಾತ ಸಾಹಿತಿ ಹಾಗೂ ನಿರ್ದೇಶಕರಾದ ಕವಿರಾಜ್, ನಟ ಪ್ರವೀಣ್ ತೇಜ್, ಫ್ರೀಡಂ ಆಪ್ ನ ಸಿ.ಎಸ್.ಸುಧೀರ್, ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಮುಖ್ಯ ಅತಿಥಿಗಳಾಗಿ ಆಗಮಿಸಿ ಆದರ್ಶ್ ಅಯ್ಯಂಗಾರ್ ಅವರ ಈ ನೂತನ ಪ್ರಯತ್ನಗಳಿಗೆ ಶುಭ ಕೋರಿದರು.
ಈ ಹಿಂದೆ ನಾನು, ರಕ್ಷಿತ್ ಹಾಗೂ ಹೇಮಂತ್ ಜೋಯಿಸ್ ಜೊತೆಗೂಡಿ ಕೆಲವು ವಿಡಿಯೋ ಸಾಂಗ್ ಗಳನ್ನು ಬಿಡುಗಡೆ ಮಾಡಿದ್ದೆವು. ಈ ಹಾಡುಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ಕೂಡ ಮಾಡಲಾಗಿತ್ತು. ಈಗ ನಾನು ಆರಂಭಿಸಿರುವ ಶ್ರೀಕೃಷ್ಣ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆ ಮೂಲಕ ಸದಭಿರುಚಿ ಚಿತ್ರಗಳನ್ನು ನಿರ್ಮಿಸಬೇಕೆಂಬ ಉದ್ದೇಶದಿಂದ ಮೊದಲ ಚಿತ್ರವಾಗಿ “ತಿಮ್ಮನ ಮೊಟ್ಟೆಗಳು” ಚಿತ್ರವನ್ನು ನಿರ್ಮಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಆದರ್ಶ್ ಅಯ್ಯಂಗಾರ್.
ನಾನು 2016 ರಲ್ಲಿ ಅರಣ್ಯ ಒತ್ತುವರಿ ಮತ್ತು ಒಕ್ಕಲೆಬ್ಬಿಸುವ ಕಥೆ ಹೊಂದಿದ್ದ “ಹೊಂಬಣ್ಣ” ಎಂಬ ಚಿತ್ರ ನಿರ್ದೇಶನ ಮಾಡಿದ್ದೆ. ನಂತರ ಶರಾವತಿ ನೀರನ್ನು ಬೆಂಗಳೂರಿಗೆ ತರುವ ಯೋಜನೆಯ ಕುರಿತಾದ “ಎಂಥಾ ಕಥೆ ಮಾರಾಯ” ಎಂಬ ಚಿತ್ರ ಇದೀಗ ಬಿಡುಗಡೆಗೆ ಸಿದ್ಧವಿದೆ. ಈಗ ಮೂರನೇ ಚಿತ್ರವಾಗಿ ನನ್ನ “ಕಾಡಿನ ನೆಂಟರು” ಕಥಾಸಂಕಲನದ ಒಂದು ಕಥೆಯಾದ “ತಿಮ್ಮನ ಮೊಟ್ಟೆಗಳು” ಚಿತ್ರವನ್ನು ನಿರ್ದೇಶಿಸಲಿದ್ದೇನೆ.
ನನ್ನ ಎಲ್ಲಾ ಚಿತ್ರಗಳಲ್ಲೂ ಪಶ್ಚಿಮ ಘಟ್ಟದ ಜೀವನ ಶೈಲಿಯ ಮೇಲೆ ಬೆಳಕು ಚೆಲ್ಲಲಾಗುತ್ತೆ. ಇಲ್ಲಿಯೂ ಸಹ ಹೊಸ ವಿಷಯವನ್ನು ಹೇಳ ಹೊರಟಿದ್ದೇನೆ. ಸದ್ಯದಲ್ಲೇ ಚಿತ್ರೀಕರಣ ಆರಂಭಿಸುತ್ತೇವೆ ಎಂದು ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ತಿಳಿಸಿದರು.
ಸಂಗೀತದ ಕುರಿತಾಗಿ ಸಂಗೀತ ನಿರ್ದೇಶಕ ಹೇಮಂತ್ ಜೋಯಿಸ್ ಮಾತನಾಡಿದರು.
ಇತ್ತೀಚೆಗೆ ಹಲವಾರು ಹೊಸ ಜಾನರ್ ಚಿತ್ರಗಳು ತೆರೆಗೆ ಬರುತ್ತಿದ್ದು, ಅಂತಹ ಹಲವು ಸಿನಿಮಾಗಳ ಪೈಕಿ ಇದೀಗ ಪ್ರಶಾಂತ್ ಕೆ.ಶೆಟ್ಟಿ ಅವರ ನಿರ್ದೇಶನದ ನಾನ್ರೌಡಿ ಕೂಡ ಒಂದು. ಈ ಹಿಂದೆ ಮನಸಿನ ಪುಟದಲಿ ಹಾಗೂ ಬ್ರಾಂಡ್ ಚಿತ್ರಗಳನ್ನು ನಿರ್ದೇಶಿಸಿದ್ದ ಪ್ರಶಾಂತ್ ಅವರ ನಿರ್ದೇಶನ ಹಾಗೂ ನಿರ್ಮಾಣದ ಮೂರನೇ ಚಿತ್ರವಿದು. ಸೆ.9ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿ ಪ್ರಶಾಂತ್ ಕೆ.ಶೆಟ್ಟಿ ಅವರೇ ನಾಯಕನಾಗಿ ನಟಿಸಿದ್ದು, ಮುಂಬೈ ಮೂಲದ ತನುಶ್ರೀ ಚಟರ್ಜಿ ನಾಯಕಿಯಾಗಿ ಹಾಗೂ ಐಟಂ ಹಾಡಿನಲ್ಲಿ ಸಮೀರಾಖಾನ್ ಹೆಜ್ಜೆ ಹಾಕಿದ್ದಾರೆ.
ಚಿತ್ರದಲ್ಲಿ 6 ಹಾಡುಗಳಿದ್ದು, ಹಿರಿಯ ಜನಪದ ಗಾಯಕ ಗುರುರಾಜ ಹೊಸಕೋಟೆ ಅವರು 5 ಹಾಡುಗಳಿಗೆ ಸಂಗೀತ, ಸಾಹಿತ್ಯ ರಚನೆಯ ಜೊತೆ ಅವರೇ ಒಂದು ಹಾಡಿಗೆ ದನಿಯಾಗಿದ್ದಾರೆ. ವಿನುಮನಸು ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.
ಹಿರಿಯ ಛಾಯಾಗ್ರಾಹಕ ಅಣಜಿ ನಾಗರಾಜ್ ಮಾತನಾಡಿ, ಚಿತ್ರದ ಪ್ರತಿ ಸೀನ್ಗೂ ತುಂಬಾ ವರ್ಕ್ ಮಾಡಿದ್ದೇವೆ. ಇಂಥ ಸಿನಿಮಾಗಳಿಗೆ ಮಾಧ್ಯಮದ ಸಹಕಾರ ಬೇಕು. ಸಿನಿಮಾ ಪ್ರೇಕ್ಷಕರಿಗೆ ಖಂಡಿತ ಮನರಂಜನೆ ನೀಡುತ್ತದೆ ಎಂದು ಹೇಳಿದರು. ನಟ ಗಣೇಶರಾವ್ ಮಾತನಾಡಿ ಇದು ನನ್ನ 300ನೇ ಚಿತ್ರ. ಈ ಚಿತ್ರದಲ್ಲಿ ನನ್ನದು ಒಬ್ಬ ಡಾನ್ಸ್ ಟೀಚರ್ ಪಾತ್ರ. ನಾಯಕ ಒಮ್ಮೆ ನನ್ನ ಜೊತೆ ಸ್ಕೂಟರ್ನಲ್ಲಿ ಹೋಗುವಾಗ ರೌಡಿಗಳ ಪೋಸ್ಟರ್ ನೋಡಿ ನಾನೂ ಯಾಕೆ ರೌಡಿಯಾಗಬಾರದು ಎಂದು ಕೇಳುತ್ತಾನೆ. ಮುಂದೆ ದೊಡ್ಡ ರೌಡಿಯನ್ನು ಹೊಡೆದು ಜೈಲಿಗೂ ಹೋಗುತ್ತಾನೆ ಎಂದು ಹೇಳಿದರು.
1500 ಚಿತ್ರಗಳಿಗೆ ಸ್ಟಂಟ್ ಮಾಡಿರುವ ಫಯಾಜ್ಖಾನ್ 3 ಸಾಹಸ ದೃಷ್ಯಗಳನ್ನು ಕಂಪೋಜ್ ಮಾಡಿದ್ದಾರೆ. ಕೊನೆಯಲ್ಲಿ ಪ್ರಶಾಂತ್ ಶೆಟ್ಟಿ ಮಾತನಾಡಿ, ದಶಕದ ಹಿಂದೆ ಮನಸಿನಪುಟದಲಿ ಹಾಗೂ 5 ವರ್ಷಗಳ ಹಿಂದೆ ಬ್ರಾಂಡ್ ಎನ್ನುವ ಚಿತ್ರಗಳನ್ನು ಮಾಡಿದ್ದು, ಇದು 3ನೇ ಚಿತ್ರ. ನನ್ನ ಸ್ನೇಹಿತ ಹೇಳಿದ ಕಂಟೆಂಟ್ ಇಟ್ಟುಕೊಂಡು ಈಚಿತ್ರ ಮಾಡಿದ್ದೇನೆ. ಸಾಧನೆ ಮಾಡಬೇಕೆಂದು ಹೃದಯದಲ್ಲಿ ನೂರಾರು ಕನಸುಗಳನ್ನು ಹೊತ್ತು ಹಳ್ಳಿಯಿಂದ ಬೆಂಗಳೂರಿಗೆ ಬರುವ ನಾಯಕನ ಜೀವನ ಮುಂದೆ ಏನೆಲ್ಲ ತಿರುವುಗಳನ್ನು ಪಡೆದು ಸಾಗುತ್ತದೆ, ಆತ ಏಕೆ ರೌಡಿಯಾದ ಎನ್ನುವುದೇ ಈ ಚಿತ್ರದ ಮುಖ್ಯ ಅಂಶ.
ಬೆಂಗಳೂರು, ದಾವಣಗೆರೆ ಬಳಿಯ ಚನ್ನಗಿರಿ ಹಾಗೂ ಬಾಂಬೆಯಲ್ಲಿ ಚಿತ್ರೀಕರಿಸಿದ್ದೇವೆ. ನಾನು, ಗುರುರಾಜ ಹೊಸಕೋಟೆ ಹಾಗೂ ಅಣಜಿ ನಾಗರಾಜ್ ಸೇರಿ ತುಂಬಾ ಚರ್ಚೆಮಾಡಿ ಈ ಸಿನಿಮಾ ಆರಂಭಿಸಿದೆವು. ನಮ್ಮ ಚಿತ್ರದ ನಾಯಕಿಯಾಗಿ ತನುಶ್ರೀ ಅಭಿನಯಿಸಿದ್ದು, ಈಗಾಗಲೇ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇದು ಕಂಪ್ಲೀಟ್ ಮಾಸ್ ಸಿನಿಮಾ ಅಲ್ಲ, ಕಲ್ಟ್ ಸಿನಿಮಾ ಎಂದು ಹೇಳಿದರು. ಮೌಲ್ಯಚೇತನ್ ಅವರು ಈ ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಗೂ ಪ್ರಭುದೇವಾ ಮೊದಲಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿರುವ “ಲಕ್ಕಿ ಮ್ಯಾನ್” ಚಿತ್ರ ಈ ಶುಕ್ರವಾರ(ಸೆ.9) ರಾಜ್ಯಾದ್ಯಂತ ಅಲ್ಲದೆ ದೇಶ- ವಿದೇಶಗಳಲ್ಲೂ ಸಹ ಅದ್ದೂರಿಯಾಗಿ ತೆರೆಕಾಣಲಿದೆ. ತನ್ನ ಕೊನೇ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು ಭಗವಾನ್ ಮಹಾವಿಷ್ಣು ಅವತಾರದಲ್ಲಿ ಕಾಣಿಸಿಕೊಂಡಿರುವುದು ಈ ಸಿನಿಮಾದ ವಿಶೇಷ.
ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ ಹಾಗೂ ರೋಶನಿ ಪ್ರಕಾಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಅಧಿಕಾರಿಗಳು ಸಹ ಮೆಚ್ಚಿಕೊಂಡಿದ್ದು, ಯಾವುದೇ ಕಟ್ಸ್ ಇಲ್ಲದೆ ‘ಯು’ ಪ್ರಮಾಣಪತ್ರ ನೀಡಿದ್ದಾರೆ. ಕಾಕತಾಳೀಯ ಎನ್ನುವಂತೆ ಹಿಂದೆ ಡಾ.ರಾಜ್ ಕುಮಾರ್ ಹಾಗೂ ಪುನೀತ್ ಅಭಿನಯಿಸಿದ್ದ ಭಕ್ತಪ್ರಹ್ಲಾದ ಚಿತ್ರವೂ ಸಹ ಸೆ.೯ರಂದೇ ತೆರೆಕಂಡಿತ್ತು.
ಅಣ್ಣಾವ್ರ ಮೇಲೆ ರಚಿಸಲಾಗಿರುವ ಪುನೀತ್ -ಪ್ರಭುದೇವಾ ಅಭಿನಯದ ಹಾಡಿಗೆ ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಅಲ್ಲದೆ ಈ ಚಿತ್ರಕ್ಕೆ ಮೊದಲ ಬಾರಿಗೆ ಪ್ರಭುದೇವಾ ಸಹೋದರ ನಾಗೇಂದ್ರ ಪ್ರಸಾದ್ ಆಕ್ಷನ್ಕಟ್ ಹೇಳಿದ್ದಾರೆ. ತಮಿಳಿನ ಓಮೈ ಕಡವುಲೆ ಚಿತ್ರದ ರೀಮೇಕ್ ಆದ ಲಕ್ಕಿಮ್ಯಾನ್ ಚಿತ್ರದಲ್ಲಿ ರಂಗಾಯಣ ರಘು, ಸಾಧುಕೋಕಿಲ ನಾಗಭೂಷಣ್, ಸುಂದರ್ರಾಜ್, ಸುಧಾ ಬೆಳವಾಡಿ, ಮಾಳವಿಕಾ ನಟಿಸಿದ್ದಾರೆ.
ಪಿ.ಆರ್.ಮೀನಾಕ್ಷಿ ಸುಂದರಮ್ ಹಾಗೂ ಸುಂದರ ಕಾಮರಾಜ್ ಅವರ ನಿರ್ಮಾಣದ ಈ ಚಿತ್ರಕ್ಕೆ ಕಾರ್ತಿಕೇಯನ್ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕೆಲಸಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ವಿ೨ ವಿಜಯ್ ಮತ್ತು ವಿಕ್ಕಿ ಅವರ ಸಂಗೀತ ಸಂಯೋಜನೆ, ಧನಂಜಯ ರಂಜನ್ ಅವರ ಸಾಹಿತ್ಯವಿದೆ, ಜೀವಾಶಂಕರ್ ಅವರ ಛಾಯಾಗ್ರಹಣ, ಬಾಲಾಜಿ ಅವರ ಸಂಕಲನ, ಅಶ್ವಥ್ ಮಾರಿಮುತ್ತು ಅವರ ಕಥೆ, ಮಂಜು ಮಾಂಡವ್ಯ, ಸಂಪತ್ ಸಿರಿಮನೆ ಹಾಗೂ ರಘುನಂದನ್ ಕಾನಡ್ಕ ಅವರ ಸಂಭಾಷಣೆ ಈ ಚಿತ್ರಕ್ಕಿದೆ.
ಶ್ರೀಮತಿ ಭಾಗ್ಯ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ “ಶ್ಯಾನುಭೋಗರ ಮಗಳು” ಚಿತ್ರ ಸ್ವತಂತ್ರ ಪೂರ್ವದ ಕಥೆ. ಕನ್ನಡದಲ್ಲಿ ಅತೀ ಹೆಚ್ಚು ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕರಲ್ಲಿ ಒಬ್ಬರಾದ ಕೋಡ್ಲು ರಾಮಕೃಷ್ಣ ಈ ಚಿತ್ರದ ನಿರ್ದೇಶಕರು. ಬಿ.ಎ.ಮಧು ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿರುವ ಈ ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಹಾಗೂ ವಸಂತ್ ರಾವ್ ಕುಲಕರ್ಣಿ ಅವರ ಕಲಾ ನಿರ್ದೇಶನವಿದೆ.
ಭುವನ್ ಫಿಲಂಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.
“ಶ್ಯಾನುಭೋಗರ ಮಗಳು” ಚಿತ್ರದ ಪ್ರಮುಖಪಾತ್ರದಲ್ಲಿ ರಾಗಿಣಿ ಪ್ರಜ್ವಲ್ ಅಭಿನಯಿಸುತ್ತಿದ್ದಾರೆ. ಮೇಘಶ್ರೀ, ನಿರಂಜನ್ ಕುಮಾರ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ, ಶಂಕರ್ ಅಶ್ವತ್ಥ್ , ನೀನಾಸಂ ಅಶ್ವತ್ಥ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಚಿತ್ರದಲ್ಲಿ ಟಿಪ್ಪಸುಲ್ತಾನ್ ಪ್ರಮುಖ ಪಾತ್ರವಾಗಿದ್ದು, ಆ ಪಾತ್ರಕ್ಕಾಗಿ ಆಯ್ಕೆ ಕಾರ್ಯ ನಡೆಯುತ್ತಿದೆ.
ಸೆಪ್ಟೆಂಬರ್ ಕೊನೆಯ ವಾರದಿಂದ ಮೈಸೂರು, ಶ್ರೀರಂಗಪಟ್ಟಣ, ಮೇಲುಕೋಟೆ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.
ಕಲಾ ಸಾಮ್ರಾಟ್ ಎಸ್ ನಾರಾಯಣ್ ಪುತ್ರ ಪವನ್ ಎಸ್ ನಾರಾಯಣ್ ನೇತೃತ್ವದಲ್ಲಿ “ಕಲಾಸಾಮ್ರಾಟ್ ಫಿಲ್ಮ್ ಅಕಾಡೆಮಿ” ಆರಂಭವಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಭಾರ್ಗವ ಈ ನೂತನ ಫಿಲ್ಮ್ ಅಕಾಡೆಮಿಯನ್ನು ಉದ್ಘಾಟಿಸಿದರು. ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು, ಸುಂದರರಾಜ್, ವಿ.ಮನೋಹರ್, ಎಂ.ಎನ್ ಸುರೇಶ್, ನಾಯಕ ಆದಿತ್ಯ ಹಾಗೂ ನಾಯಕಿ ಅದಿತಿ ಪ್ರಭುದೇವ ಸೇರಿದಂತೆ ಅನೇಕ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ನಾರಾಯಣ್ ಅವರು ನನ್ನನ್ನು ಚೆನ್ನೈನಲ್ಲಿ ಭೇಟಿಯಾಗಿ, ಅವರ ವೃತ್ತಿಜೀವನ ಆರಂಭಿಸಿದರು. ಕೆಲಸದ ಮೇಲೆ ಅವರಿಗಿರುವ ಶ್ರದ್ಧೆಯಿಂದ ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಅವರ ಮಗ ಈಗ ಫಿಲ್ಮ್ ಅಕಾಡೆಮಿ ಆರಂಭಿಸಿದ್ದಾರೆ. ಪವನ್ ಅವರ ನೂತನ ಪ್ರಯತ್ನಕ್ಕೆ ಒಳ್ಳೆಯದಾಗಲಿ ಎಂದು ಹಿರಿಯ ನಿರ್ದೇಶಕ ಭಾರ್ಗವ ಹಾರೈಸಿದರು.
ಮುಖ್ಯಮಂತ್ರಿ ಚಂದ್ರು, ಸುಂದರರಾಜ್ ಸೇರಿದಂತೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು “ಕಲಾ ಸಾಮ್ರಾಟ್ ಫಿಲ್ಮ್ ಅಕಾಡೆಮಿ”ಗೆ ಶುಭ ಕೋರಿದರು.
ಇಂದು ಶಿಕ್ಷಕರ ದಿನಾಚರಣೆ. ಇಂತಹ ಶುಭದಿನ ನನ್ನ ಗುರುಗಳಾದ ಭಾರ್ಗವ ಅವರು ಈ ಫಿಲ್ಮ್ ಅಕಾಡೆಮಿ ಉದ್ಘಾಟಿಸಿದ್ದು ನನಗೆ ಖುಷಿ ತಂದಿದೆ. ಪ್ರೀತಿಯಿಂದ ಇಷ್ಟು ಜನ ಗಣ್ಯರು ಬಂದಿದ್ದೀರಿ ಧನ್ಯವಾದಗಳು. ನನ್ನ ಮಗ ಪವನ್ ನನ್ನ ಜೊತೆಯಿದ್ದು ಸಾಕಷ್ಟು ಅನುಭವ ಪಡೆದುಕೊಂಡಿದ್ದಾನೆ. ಈಗ “ಕಲಾಸಾಮ್ರಾಟ್ ಫಿಲ್ಮ್ ಅಕಾಡೆಮಿ” ಅರಂಭಿಸಿದ್ದಾನೆ. ಈ ವಿಷಯ ಕುರಿತು ನನ್ನ ಬಳಿ ಪವನ್ ಹೇಳಿದಾಗ, “ಕಲಾ ಸಾಮ್ರಾಟ್” ಎಂಬ ಹೆಸರಿಟ್ಟಿದ್ದಿ. ಆ ಹೆಸರಿಗೆ ಕೆಟ್ಟ ಹೆಸರು ಬರದಂತೆ ನೋಡಿಕ್ಕೊಳ್ಳುವ ಜವಾಬ್ದಾರಿ ನಿನ್ನದು.
ಏಕೆಂದರೆ ಎಸ್. ನಾರಾಯಣ್ ಎಂದು ನನ್ನ ತಂದೆಯಿಟ್ಟ ಹೆಸರು. “ಕಲಾ ಸಾಮ್ರಾಟ್” ಜನ ಕೊಟ್ಟಿದ್ದು. ಆ ಹೆಸರಿಗೆ ಏನು ಆಗಬಾರದು ಎಂದು ಹೇಳಿದ್ದೇನೆ. ಪವನ್ ಸಹ ಶ್ರದ್ಧೆಯಿಂದ ನಡೆಸಿಕೊಂಡು ಹೋಗುತ್ತಾನೆ. ನಾಲ್ಕು ತಿಂಗಳ ಈ ಕೋರ್ಸ್ ನಲ್ಲಿ ಒಂದುವರೆ ಗಂಟೆಯ ಹಾಗೆ ತರಗತಿಗಳಿರುತ್ತದೆ. ನಟನೆ, ನಿರ್ದೇಶನ ಹಾಗೂ ಚಲನಚಿತ್ರದ ಹಲವಾರು ವಿಭಾಗಗಳಲ್ಲಿ ತರಬೇತಿಯನ್ನು “ಕಲಾಸಾಮ್ರಾಟ್ ಫಿಲ್ಮ್ ಅಕಾಡೆಮಿ”ಯಲ್ಲಿ ನೀಡಲಾಗುವುದು.
ಅನುಭವಿ ಕಲಾವಿದರು ಹಾಗೂ ತಂತ್ರಜ್ಞರು ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳಿಗೆ ಹಂಚಲಿದ್ದಾರೆ. ಮುಖ್ಯಮಂತ್ರಿ ಚಂದ್ರು ಅವರು ಹೇಳಿದಂತೆ ಥಿಯೇಟರ್ ಮುಂದೆ ಕಟೌಟ್ ನಿಲ್ಲಿಸಿಕೊಳ್ಳುವಂತಹ ಅದ್ಭುತ ಕಲಾವಿದರು ಈ ಸಂಸ್ಥೆಯಿಂದ ಹೊರಹೊಮ್ಮಲಿ ಎಂದರು ಕಲಾಸಾಮ್ರಾಟ್ ಎಸ್.ನಾರಾಯಣ್.
ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆ ಶುಭದಿನದಂದು “ರಿಯಾ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಆಂದ್ರಪ್ರದೇಶದವರಾದ ವಿಜಯ ನರೇಶ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ವಿಜಯ ನರೇಶ್ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪತಿ ಕಣಿಗೊಂಡ ನರೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಪ್ರಥಮ್ ಹಾಗೂ “ಸ್ತಬ್ಧ” ಚಿತ್ರದ ನಾಯಕ ಪ್ರತಾಪ್ ಸಿಂಹ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಇದು ಒಂದು ಹಾರರ್ ಸಿನಿಮಾ. ಹದಿನಾಲ್ಕು ಪಾತ್ರಗಳ ಜೊತೆಗೆ ಒಂದೇ ಮನೆಯಲ್ಲಿ ಈ ಚಿತ್ರದ ಕಥೆ ನಡೆಯುತ್ತದೆ. ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಇದೇ 16ನೇ ತಾರೀಖು ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ ಎಂದರು ಪ್ರಮುಖ ಪಾತ್ರಧಾರಿ ಕಾರ್ತಿಕ್ ವರ್ಣೆಕರ್.
ನಾಯಿಕಿ ಸಾವಿತ್ರಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಕಲಾವಿದರಾದ ವಿಕಾಸ್, ಶ್ವೇತಾ, ರಾಜ್ ಉದಯ್ ಮುಂತಾದವರು ತಮ್ಮ ಪಾತ್ರ ಪರಿಚಯ ಮಾಡಿಕೊಂಡರು. “ರಿಯಾ” ಪಾತ್ರಧಾರಿ ಬೇಬಿ ಅನನ್ಯ ಸಹ ತಮ್ಮ ತಮ್ಮ ಅನುಭವ ಹಂಚಿಕೊಂಡರು. ವಿತರಕರಾದ ಪಿ.ವಿ.ಆರ್ ಸ್ವಾಮಿ, ಚೇತನ್ ಹಾಗೂ ಚಿತ್ರತಂಡದ ಅನೇಕ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ, “ರಿಯಾ” ಚಿತ್ರದ ನಿರ್ಮಾಪಕ ನರೇಶ್ ಚಿತ್ರತಂಡಕ್ಕೆ ಹಾಗೂ ಗಣ್ಯರಿಗೆ ಧನ್ಯವಾದ ತಿಳಿಸಿ, ಇದೇ ಹದಿನಾರರಂದು ಬಿಡುಗಡೆಯಾಗಲಿರುವ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಹಾರೈಕೆ ಇರಲಿ ಎಂದರು.
ಎಂಭತ್ತರ ದಶಕದಲ್ಲಿ ದ್ವಾರಕೀಶ್ ನಿರ್ಮಾಣದ ” ಗುರು ಶಿಷ್ಯರು ” ಚಿತ್ರ ಕನ್ನಡಿಗರ ಮನ ಗೆದ್ದಿತ್ತು. ಈಗ ಆದೇ ಹೆಸರಿನ ಚಿತ್ರ ಮತ್ತೊಮ್ಮೆ ಬರುತ್ತಿದೆ. ಶರಣ್ ಕೃಷ್ಣ ಹಾಗೂ ತರುಣ್ ಕಿಶೋರ್ ಸುಧೀರ್ ನಿರ್ಮಿಸಿರುವ ಈ ಚಿತ್ರವನ್ನು ಜಡೇಶ್ ಕೆ ಹಂಪಿ ನಿರ್ದೇಶಿಸಿದ್ದಾರೆ.
ಶರಣ್ ಹಾಗೂ ನಿಶ್ವಿಕಾ ನಾಯ್ಡು ನಾಯಕ – ನಾಯಕಿಯಾಗಿ ನಟಿಸಿರುವ ಈ ಚಿತ್ರ, ದೇಸಿ ಕ್ರೀಡೆಯಾದ ಖೋಖೋ ಆಟದ ಸುತ್ತ ನಡೆಯುತ್ತದೆ.. ಖೋಖೋ ಕೋಚರ್ ಆಗಿ ಶರಣ್ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಹದಿಮೂರು ಜನ ಖೋಖೋ ಆಟಗಾರರ ಪಾತ್ರದಲ್ಲಿ ಆರು ಜನ ಸಿನಿರಂಗದ ನಟರ ಪುತ್ರರು ನಟಿಸಿದ್ದಾರೆ. ಶರಣ್ ಪುತ್ರ ಹೃದಯ್, ಪ್ರೇಮ್(ನೆನಪಿರಲಿ) ಪುತ್ರ ಏಕಾಂತ್, ರವಿಶಂಕರ್ ಗೌಡ ಪುತ್ರ ಸೂರ್ಯ, ನವೀನ್ ಕೃಷ್ಣ ಪುತ್ರ ಹರ್ಷಿತ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಹಾಗೂ ಶಾಸಕ ರಾಜು ಗೌಡ ಅವರ ಪುತ್ರ ಮಣಿಕಂಠ ಈ ಚಿತ್ರದಲ್ಲಿ ನಟಿಸಿದ್ದಾರೆ. ಇವರಲ್ಲದೆ ಆಸಿಫ್ ಮುಲ್ಲಾ, ಸಾಂಬಶಿವ, ಸಂದೇಶ್, ಸಾಗರ್, ರುದ್ರಗೌಡ, ಅನುಪ್ ರಾಮಣ್ಣ ಮತ್ತು ಅಮಿತ್ ಬಿ ಕೂಡ ಖೊಖೊ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ. ಹಿರಿಯ ನಟ ದ್ವಾರಕೀಶ್, ನಾಯಕರಾದ ದುನಿಯಾ ವಿಜಯ್ ಹಾಗೂ ಪ್ರಜ್ವಲ್ ದೇವರಾಜ್ ಸೇರಿ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ದ್ವಾರಕೀಶ್, ಎಂ.ಎಸ್.ಉಮೇಶ್, ಎಂ.ಎನ್ ಲಕ್ಷ್ಮೀದೇವಿ ಹಾಗೂ ಡಿಂಗ್ರಿ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಹಿರಿಯರು ಚಿತ್ರತಂಡಕ್ಕೆ ಮನತುಂಬಿ ಹಾರೈಸಿದರು.
ಶರಣ್, ಪ್ರೇಮ್, ರವಿಶಂಕರ್ ಗೌಡ, ನವೀನ್ ಕೃಷ್ಣ ಹಾಗೂ ರಾಜು ಗೌಡ ದಂಪತಿಗಳು ತಮ್ಮ ಮಕ್ಕಳು ಈ ಸಿನಿಮಾಗೆ ಆಯ್ಕೆಯಾದ ಬಗ್ಗೆ ತಿಳಿಸಿದರು. ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಎಲ್ಲಾ ಹುಡಗರು ತಮ್ಮ ಅನುಭವ ಹಂಚಿಕೊಂಡರು.
ಚಿತ್ರ ಸಾಗಿ ಬಂದ ಕುರಿತು “ಜಂಟಲ್ ಮನ್” ಖ್ಯಾತಿಯ ನಿರ್ದೇಶಕ ಜಡೇಶ್ ಕೆ ಹಂಪಿ ಮಾಹಿತಿ ನೀಡಿದರು. ಉತ್ತಮ ಪಾತ್ರ ನೀಡಿರುವುದಕ್ಕೆ ನಿಶ್ವಿಕಾ ನಾಯ್ಡು ಧನ್ಯವಾದ ತಿಳಿಸಿದರು.
ಈಗಾಗಲೇ ಬಿಡುಗಡೆಯಾಗಿರುವ ಹಾಡು ಹಿಟ್ ಆಗಿರುವುದಕ್ಕೆ ಅಜನೀಶ್ ಲೋಕನಾಥ್ ಸಂತೋಷಪಟ್ಟರು.
ಇದೊಂದು ಉತ್ತಮ ಚಿತ್ರ. ತುಂಬಾ ಚೆನ್ನಾಗಿ ಮೂಡಿಬಂದಿದೆ. “ರಾಬರ್ಟ್ ನಲ್ಲಿ ದುಡಿದ ದುಡ್ಡನೆಲ್ಲಾ ಈ ಚಿತ್ರಕ್ಕೆ ಹಾಕಿದ್ದೇನೆ. ಶಾಸಕ ರಾಜು ಗೌಡ ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ. ದೇಸಿ ಕ್ರೀಡೆ ಕುರಿತಾದ ಸಿನಿಮಾಗಳು ನಮ್ಮಲ್ಲಿ ಬರುವುದು ತುಂಬಾ ಕಡಿಮೆ. ಹಾಗಾಗಿ ಖೊಖೊ ಅಂತಹ ಆಟವನ್ನು ನಾವು ಆಯ್ಕೆ ಮಾಡಿಕೊಂಡೆವು. ಇದೇ ಇಪ್ಪತ್ಮೂರರಂದು ಚಿತ್ರ ತೆರೆಗೆ ಬರುತ್ತಿದೆ. ಒಂದು ಖುಷಿ ವಿಚಾರವೆಂದರೆ ನಾವು ಬಿಡುಗಡೆಗೂ ಪೂರ್ವದಲ್ಲೇ ಸೇಫ್ ಆಗಿದ್ದೀವೆ ಎಂದು ತರುಣ್ ಕಿಶೋರ್ ಸುಧೀರ್ ತಿಳಿಸಿದರು.
ನಾನು ಧನ್ಯವಾದ ಹೇಳಲು ಶುರು ಮಾಡಿದರೆ ಎರಡು ಗಂಟೆ ಬೇಕು ಅಷ್ಟು ಜನರನ್ನು ನಾನು ನೆನಪಿಸಿಕೊಳ್ಳಬೇಕು ಎಲ್ಲರಿಗೂ ಧನ್ಯವಾದ. ನನ್ನ ಮಗ ಈ ಚಿತ್ರದಲ್ಲಿ ನಟಿಸಿದ್ದಾನೆ. ನನ್ನ ಮಗ ಒಳ್ಳೆಯ ನಟನಾದನೋ? ಇಲ್ಲವೋ? ಗೊತ್ತಿಲ್ಲ. ಈ ಸಿನಿಮಾ ಸಹವಾಸದಿಂದ ಒಳ್ಳೆಯ ಮನುಷ್ಯನಾಗಿದ್ದಾನೆ. ನನ್ನ ಮಗನಿಗೆ ಸ್ನೇಹಿತ ದುನಿಯಾ ವಿಜಯ್ ಸಾಕಷ್ಟು ಸಲಹೆ ನೀಡಿದ್ದಾರೆ. ಎಲ್ಲಾ ಮಕ್ಕಳು ಚೆನ್ನಾಗಿ ಅಭಿನಯಿಸಿದ್ದಾರೆ ಎಂದರು ಶರಣ್.
ನಾನು ಆಣೆ ಮಾಡಿ ಹೇಳುತ್ತೇನೆ ಈ ಸಿನಿಮಾ ಸೂಪರ್ ಹಿಟ್ ಆಗುವುದು ಖಂಡಿತಾ. ಮುಂದೊಂದು ದಿನ ಈ ಮಕ್ಕಳನ್ನಿಟ್ಟು ಕೊಂಡು ನಾನು ಒಂದು ಸಿನಿಮಾ ನಿರ್ದೇಶನ ಮಾಡುತ್ತೇನೆ ಎಂದರು ದುನಿಯಾ ವಿಜಯ್.
ನಾನು ಬೇರೆ ಚಿತ್ರದ ಸಮಾರಂಭಕ್ಕೆ ಬಂದಿದ್ದೀನಿ ಅನಿಸುತ್ತಿಲ್ಲ. ನಮ್ಮ ಸಿನಿಮಾನೇ ಅನಿಸುತ್ತಿದೆ. ಇದರಲ್ಲಿ ಅಭಿನಯಿಸಿರುವವರು ಹುಡುಗರಲ್ಲ . ಹುಲಿಗಳು ಅಷ್ಟು ಚೆನ್ನಾಗಿದೆ ಅವರೆಲ್ಲರ ಅಭಿನಯ ಎಂದು ಪ್ರಜ್ವಲ್ ದೇವರಾಜ್ ಪ್ರಶಂಸೆಯ ಮಾತುಗಳಾಡಿದರು.
ಮಾಲತಿ ಸುಧೀರ್, ನಂದ ಕಿಶೋರ್, ಡಿ.ಎಸ್ ಮ್ಯಾಕ್ಸ್ ದಯಾನಂದ್ ಸೇರಿದಂತೆ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಬಿಗ್ ಬಾಸ್ ಖ್ಯಾತಿಯ ಶಶಿ ನಾಯಕನಾಗಿ ನಟಿಸಿರುವ “ಮೆಹಬೂಬ” ಚಿತ್ರಕ್ಕಾಗಿ ರಘುಶಾಸ್ತ್ರಿ ಅವರು ಬರೆದಿರುವ “ದೇವರು ದೇವರು” ಎಂಬ ಭಾವೈಕ್ಯತೆ ಸಾರುವ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. “ಸರಿಗಮಪ” ಖ್ಯಾತಿಯ ಮನೋಜವಂ ಆತ್ರೇಯ ಸುಮಧುರವಾಗಿ ಹಾಡಿರುವ ಈ ಗೀತೆಗೆ ಮ್ಯಾಥ್ಯೂಸ್ ಮನು ಸಂಗೀತ ನೀಡಿದ್ದಾರೆ. ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಹಾಡು ಅಪಾರ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಸ್ಕಂದ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಪ್ರಸನ್ನ ಶ್ರೀನಿವಾಸ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಅನೂಪ್ ಆಂಟೊನಿ ನಿರ್ದೇಶಿಸುತ್ತಿದ್ದಾರೆ. ಕೇರಳದಲ್ಲಿ ನಡೆದ ನೈಜಘಟನೆಯೊಂದನ್ನು ಆಧರಿಸಿ ಈ ಚಿತ್ರ ಸಿದ್ಧವಾಗುತ್ತಿದೆ. ಚಿತ್ರೀಕರಣ ಮುಕ್ತಾಯ ಹಂತ ತಲುಪಿದ್ದು, ಪೋಸ್ಟ್ ಪ್ರೊಡಕ್ಷನ್ ಬಿರುಸಿನಿಂದ ಸಾಗಿದೆ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ.
ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ರಘುಶಾಸ್ತ್ರಿ ರಚಿಸಿದ್ದಾರೆ. ಸಂಭಾಷಣೆಯನ್ನು ರಘುಶಾಸ್ತ್ರಿ ಬರೆದಿದ್ದಾರೆ.ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಕಲೈ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಶಶಿ, ಪಾವನ ಗೌಡ, ಕಬೀರ್ ದುಹಾನ್ ಸಿಂಗ್, ಸಲ್ಮಾನ್(ಕಿರಿಕ್ ಪಾರ್ಟಿ), ಬುಲೆಟ್ ಪ್ರಕಾಶ್, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಕಲ್ಯಾಣಿರಾಜು, ಸಂದೀಪ್, ಧನರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ವಿಜಯ್ ಸೇತುಪತಿ ಮತ್ತು ಸೂರಿ ನಟಿಸುತ್ತಿರುವ ತಮಿಳು ಚಿತ್ರ ‘ವಿಡುದಲೈ’ ಇದೀಗ ಎರಡು ಭಾಗಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.ಈ ಚಿತ್ರವನ್ನು ರೆಡ್ ಜಯಂಟ್ ಮೂವಿಸ್ನಡಿ ಉದಯನಿಧಿ ಸ್ಟಾಲಿನ್ ಅರ್ಪಿಸಿದರೆ, ಆರ್.ಎಸ್. ಇನ್ಫೋಟೈನ್ಮೆಂಟ್ನಡಿ ಎಲ್ರೆಡ್ ಕುಮಾರ್ ನಿರ್ಮಿಸುತ್ತಿದ್ದಾರೆ. ಕಾಲಿವುಡ್ನ ಜನಪ್ರಿಯ ನಿರ್ದೇಶಕರಲ್ಲಿ ವೆಟ್ರಿಮಾರನ್ ಪ್ರಮುಖರು. ಕೆಲವು ತಿಂಗಳುಗಳ ಹಿಂದೆ ಅವರು ‘ವಿಡುದಲೈ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿರುವುದಾಗಿ ಘೋಷಿಸಿದಾಗಲೇ, ಈ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಇತ್ತು. ಕ್ರಮೇಣ ಜನಪ್ರಿಯ ಕಲಾವಿದರು ಮತ್ತು ತಂತ್ರಜ್ಞರು ಚಿತ್ರತಂಡಕ್ಕೆ ಸೇರ್ಪಡೆಯಾಗುತ್ತಿದ್ದಂತೆಯೇ, ಈ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ.
ಸದ್ಯ, ‘ವಿಡುದಲೈ’ ಚಿತ್ರದ ಭಾಗ ಒಂದರ ಚಿತ್ರೀಕರಣ ಸಂಪೂರ್ಣವಾಗಿದ್ದು, ಪೋಸ್ಟ್ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿವೆ. ಎರಡನೆಯ ಭಾಗದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು ಸಿರುಮಲೈ, ಕೊಡೈಕೆನಾಲ್ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಈ ಎರಡು ಚಿತ್ರಗಳು ದೊಡ್ಡ ಬಜೆಟ್ನಲ್ಲಿ ನಿರ್ಮಾಣವಾಗುತ್ತಿದ್ದು, ತಮಿಳಿನ ಕಾಸ್ಟ್ಲಿ ಚಿತ್ರಗಳ ಪೈಕಿ ‘ವಿಡುದಲೈ’ ಸಹ ಸೇರ್ಪಡೆಯಾಗಲಿದೆ. ಈ ಚಿತ್ರವನ್ನು ಕೋಟ್ಯಂತರ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಿಸಲಾಗಿದ್ದು, ಚಿತ್ರಕ್ಕಾಗಿ ವಿಶೇಷವಾಗಿ 10 ಕೋಟಿ ರೂ. ವೆಚ್ಚದ ರೈಲು ಮತ್ತು ರೈಲ್ವೇ ಸೇತುವೆಯ ಸೆಟ್ ನಿರ್ಮಾಣ ಮಾಡಲಾಗಿದೆ. ನಿಜವಾದ ರೈಲ್ವೆ ಬೋಗಿಗಳು ಮತ್ತು ಸೇತುವೆಯನ್ನು ನಿರ್ಮಿಸುವುದಕ್ಕೆ ಬಳಸಲಾಗುವ ಪರಿಕರಗಳನ್ನೇ ಈ ಸೆಟ್ ನಿರ್ಮಾಣಕ್ಕೂ ಬಳಸಲಾಗಿರುವುದು ವಿಶೇಷ.
ಇದಲ್ಲದೆ, ಸಿರುಮಲೈ ಬಳಿ ಜಾಕಿ ಅವರ ಕಲಾ ನಿರ್ದೇಶನದಲ್ಲಿ ಒಂದು ಹಳ್ಳಿಯನ್ನು ನಿರ್ಮಿಸಲಾಗಿದೆ. ಸದ್ಯ ಕೊಡೈಕೆನಾಲ್ನಲ್ಲಿ ಪೀಟರ್ ಹೇನ್ಸ್ ನಿರ್ದೇಶನದಲ್ಲಿ ಸಾಹಸಮಯ ದೃಶ್ಯಗಳನ್ನು ಚಿತ್ರೀಕರಿಸುವುದಕ್ಕೆ ತಯಾರಿ ನಡೆಸಲಾಗಿದ್ದು, ಇದಕ್ಕಾಗಿ ಬಲ್ಗೇರಿಯಾದಿಂದ ಸಾಹಸ ಕಲಾವಿದರನ್ನು ಕರೆಸಲಾಗಿದೆ. ಈ ಆಕ್ಷನ್ ದೃಶ್ಯಗಳಲ್ಲಿ ಬಲ್ಗೇರಿಯಾದ ಸಾಹಸ ಕಲಾವಿದರು ಸಹ ಭಾಗವಹಿಸುತ್ತಿರುವುದು ವಿಶೇಷ. ‘ವಿಡುದಲೈ’ ಚಿತ್ರದಲ್ಲಿ ವಿಜಯ್ ಸೇತುಪತಿ, ಸೂರಿ, ಭವಾನಿ ಶ್ರೀ, ಪ್ರಕಾಶ್ ರಾಜ್, ಗೌತಮ್ ವಾಸುದೇವ ಮೆನನ್, ರಾಜೀವ್ ಮೆನನ್ ಮುಂತಾದವರು ನಟಿಸುತ್ತಿದ್ದಾರೆ.
ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ‘ಇಸೈಜ್ನಾನಿ’ ಇಳಯರಾಜ ಈ ಚಿತ್ರದ ಸಂಗೀತದ ಜವಾಬ್ದಾರಿ ಹೊತ್ತಿದ್ದು, ವೇಲ್ರಾಜ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಈ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ರೆಡ್ ಜೈಂಟ್ ಮೂವೀಸ್ ವಹಿಸಿಕೊಂಡಿದ್ದು, ಸದ್ಯದಲ್ಲೇ ‘ವಿಡುದಲೈ’ ಮೊದಲ ಭಾಗದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.