ಬಿಗ್ ಬಾಸ್ ವಿನ್ನರ್, ರಾಕ್ ಸ್ಟಾರ್ ಖ್ಯಾತಿಯ ರೂಪೇಶ್ ಶೆಟ್ಟಿ ಹೊಸ ಸಿನಿಮಾಗೆ ಅಧಿಪತ್ರ ಎಂಬ ಟೈಟಲ್ ಇಡಲಾಗಿದೆ.ರೂಪೇಶ್ ಜನ್ಮದಿನದ ಅಂಗವಾಗಿ ಟೈಟಲ್ ರಿವೀಲ್ ಮಾಡಲಾಗಿತ್ತು. ಟೈಟಲ್ ಮೂಲಕವೇ ಸಿನಿಮಾ ಪ್ರಿಯರಿಗೆ ಕುತೂಹಲ ಮೂಡಿಸಿದ್ದ ಚಿತ್ರ ತಂಡ, ಇದೀಗ ಅಧಿಪತ್ರ ಅಂಗಳದಿಂದ ಹೊಸ ಸುದ್ದಿ ಬಂದಿದೆ.
ಈ ಸಿನಿಮಾ ಮೂಲಕ ಜಾಹ್ನವಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಸುದ್ದಿ ಮನೆಯಲ್ಲಿ ಬಹಳಷ್ಟು ಖ್ಯಾತಿ ಗಳಿಸಿದ್ದ ಜಾಹ್ನವಿ, ಗಿಚ್ಚಿ ಗಿಲಿಗಿಲಿ ಶೋ ನಲ್ಲಿ ತನ್ನ ಅಭಿನಯದ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದರು. ಈಗ ಅಧಿಪತ್ರದಲ್ಲಿ ನಾಯಕಿಯಾಗಿ ರೂಪೇಶ್ ಶೆಟ್ಟಿಗೆ ಜೋಡಿಯಾಗಿ ನಟಿಸಲಿದ್ದಾರೆ.
ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಚಯನ್ ಶೆಟ್ಟಿ ಎಂಬುವರು ಅಧಿಪತ್ರ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಕೆ ಆರ್ ಸಿನಿಕಂಬೈನ್ಸ್ ಬ್ಯಾನರ್ ನಡಿಯಲ್ಲಿ ತಯಾರಾಗ್ತಿರುವ ಅಧಿಪತ್ರ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ.
ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಅಧಿಪತ್ರ ಸಿನಿಮಾವನ್ನು ಮಂಗಳೂರು, ಉಡುಪಿ ಸುತ್ತಮುತ್ತ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಉಳಿದ ತಾರಾಗಣ ಹಾಗೂ ತಾಂತ್ರಿಕ ಬಳಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ. ಇದೇ 23 ರಂದು ಅಧಿಪತ್ರ ಸಿನಿಮಾದ ಮುಹೂರ್ತ ಸಮಾರಂಭ ನಡೆಯಲಿದೆ.
ರೂಪೇಶ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿದ್ದ ತುಳು ಸಿನಿಮಾ ಸರ್ಕಸ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು ಇದೀಗ ರೂಪೇಶ್ ಹಾಗೂ ಜಾಹ್ನವಿ ಜೋಡಿಯಾಗಿ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆ.
ಚೆನ್ನೈ ಮೂಲದ ವೇಲ್ಸ್ ಗ್ರೂಪ್ ನ ಅಂಗಸಂಸ್ಥೆಯಾದ ವೇಲ್ಸ್ ಸ್ಟುಡಿಯೋಸ್ ಅಂಡ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು, ಇಡೀ ಕುಟುಂಬಕ್ಕೆ ಭರಪೂರ ಮನರಂಜನೆ ನೀಡುವ ಉದ್ದೇಶದಿಂದ ಬಿಡದಿ ಬಳಿ ಜಾಲಿವುಡ್ – ಸ್ಟುಡಿಯೋಸ್ ಅಂಡ್ ಅಡ್ವೆಂಚರ್ಸ್ ಎಂಬ ಥೀಮ್ ಪಾರ್ಕ್ ಶುರು ಮಾಡಿದೆ. ಈ ಥೀಮ್ ಪಾರ್ಕ್ ಇದೇ ಆಗಸ್ಟ್ 20ರಂದು ಅದ್ಧೂರಿಯಾಗಿ ಲೋಕಾರ್ಪಣೆ ಆಗಲಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್, ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ರಾಮನಗರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಈ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅಂದು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಈ ಎಲ್ಲ ಕಾರ್ಯಕ್ರಮಗಳಿಗೂ ವೇಲ್ಸ್ ಸ್ಟುಡಿಯೋಸ್ ಅಂಡ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷರಾದ ಡಾ. ಇಶಾರಿ ಕೆ ಗಣೇಶ್, ಸಂಸ್ಥೆಯ ನಿರ್ದೇಶಕರಾದ ಡಾ. ಪ್ರೀತಾ ಗಣೇಶ್ ಮತ್ತು ಕುಶ್ಮಿತಾ ಗಣೇಶ್ ಸ್ವಾಗತ ಕೋರಿದ್ದಾರೆ.
ಏನಿದು ಜಾಲಿವುಡ್?
ಬೆಂಗಳೂರು ಮತ್ತು ಮೈಸೂರು ನಡುವೆ ಬಿಡದಿ ಬಳಿ ಸುಮಾರು 40 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಮತ್ತು ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೆ ಯಿಂದ 10 ನಿಮಿಷ ದೂರದಲ್ಲಿರುವ ಈ ಜಾಲಿವುಡ್ ಎಲ್ಲಾ ವಯಸ್ಸಿನವರಿಗೂ ಒಂದು ಅದ್ಭುತ ತಾಣ. ಸಿನಿಮಾ ಮತ್ತು ಸಾಹಸ ಮಿಳಿತವಾಗಿರುವ ಈ ಥೀಮ್ ಪಾರ್ಕ್ ನಲ್ಲಿ ಚಿತ್ರಗಳಲ್ಲಿ ಬಳಸಲಾಗುವ ಕೆಲವು ಸೆಟ್ ಗಳು, ಬಾಲಿವುಡ್ ನಡೆದು ಬಂದ ಹಾದಿ, ನಿಮ್ಮ ಮೆಚ್ಚಿನ ದೃಶ್ಯಗಳನ್ನು ನೋಡಬಹುದಾಗಿದೆ. ಹಾಡು-ನೃತ್ಯ ಕಾರ್ಯಕ್ರಮಗಳು, ಲೈವ್ ಪ್ರದರ್ಶನಗಳು ಸಹ ಇರಲಿವೆ. ಇದರ ಜೊತೆಗೆ ಇಡೀ ಕುಟುಂಬದವರು ಆಡಿ ಖುಷಿಪಡಬಹುದಾದ ಹಲವು ಸಾಹಸ ಕ್ರೀಡೆಗಳಿವೆ. ಜಾಲಿವುಡ್ ನ ಹೈಲೈಟ್ ಎಂದರೆ ಜಾಲಿ ಐಲ್ಯಾಂಡ್ ಎಂಬ ವಾಟರ್ ಪಾರ್ಕ್. ಈ ಥೀಮ್ ಪಾರ್ಕ್ನ ಹೃದಯಭಾಗದಲ್ಲಿರುವ ಜಾಲಿ ಐಲ್ಯಾಂಡ್ ನಲ್ಲಿ ಸಮುದ್ರದ ಅಲೆಗಳನ್ನು ನೆನಪಿಸುವ ವೇವ್ ಪೂಲ್ ಇದೆ. ಕುಟುಂಬದ ಎಲ್ಲಾ ಸದಸ್ಯರ ಮನರಂಜನೆಗಾಗಿ ಹಲವು ವಾಟರ್ ಸ್ಲೈಡ್ ಗಳು, ಸ್ಪ್ಲಾಶ್ ಜೋನ್ ಗಳು ಮತ್ತು ಆಟ ಆಡಿ ಸುಸ್ತಾದಾಗ ವಿಶ್ರಾಂತಿ ಪಡೆಯಲು ಪ್ರತ್ಯೇಕ ಸ್ಥಳಗಳು ಸಹ ಇವೆ.
ಸಿನಿಮಾ, ಮನರಂಜನೆ ಮತ್ತು ಸಾಹಸವಲ್ಲದೆ ನಿಮಗಿಷ್ಟವಾದ ಮತ್ತು ಸ್ವಾಧಿಷ್ಟವಾದ ಉತ್ತರ ಭಾರತ, ದಕ್ಷಿಣ ಭಾರತ, ಚೈನೀಸ್, ಕಾಂಟಿನೆಂಟಲ್ ಮುಂತಾದ ತಿಂಡಿ-ತಿನಿಸುಗಳನ್ನು ಉಣಬಡಿಸುವ ರೆಸ್ಟೋರೆಂಟ್ ಗಳು ನಿಮ್ಮ ಹೊಟ್ಟೆ ತುಂಬಿಸುವುದಕ್ಕೆ ಸದಾ ಸಿದ್ದವಾಗಿರುತ್ತವೆ. ಈ ಥೀಮ್ ಪಾರ್ಕ್ ನ ಪ್ರವೇಶ ದರ, ಮಾರ್ಗ ಮುಂತಾದ ಹಲವು ವಿಷಯಗಳಿಗೆ ಸಂಸ್ಥೆಯ ಅಧಿಕೃತ ವೆಬ್ ಸೈಟ್ ಆದ www.jollywood.co.in ಲಾಗಿನ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.
ಇಕ್ಕಟ್, ಬಡವ ರಾಸ್ಕಲ್ ಸಿನಿಮಾಗಳ ಖ್ಯಾತಿಯ ಪ್ರತಿಭಾನ್ವಿತ ಕಲಾವಿದ ನಾಗಭೂಷಣ್ ಅವರಿಗಿಂದು ಜನ್ಮದಿನದ ಸಂಭ್ರಮ. ಅವರ ಹುಟ್ಟುಹಬ್ಬದ ಸ್ಪೆಷಲ್ ಆಗಿ ಟಗರು ಪಲ್ಯ ಸಿನಿಮಾ ಬಳಗದಿಂದ ವಿಶೇಷ ಉಡುಗೊರೆ ಸಿಕ್ಕಿದೆ.
ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ನಿರ್ಮಿಸುತ್ತಿರುವ ಮೂರನೇ ಚಿತ್ರ ಟೈಟಲ್ ಟ್ರ್ಯಾಕ್ ನಾಯಕ ನಾಗಭೂಷಣ್ ಬರ್ತ್ ಡೇ ಅಂಗವಾಗಿ ಬಿಡುಗಡೆ ಮಾಡಲಾಗಿದೆ. ಧನಂಜಯ್ ಕ್ಯಾಚಿ ಮ್ಯಾಚಿ ಪದಗಳನ್ನು ಸೇರಿಸಿ ಸಾಹಿತ್ಯ ರಚಿಸಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದು, ವಿಜಯ್ ಪ್ರಕಾಶ್ ಹಾಡಿದ್ದಾರೆ.
ಯುವ ನಿರ್ದೇಶಕ ಉಮೇಶ್ ಕೆ ಕೃಪಾ ನಿರ್ದೇಶನದ ಚೊಚ್ಚಲ ಚಿತ್ರವಾಗಿರುವ ಟಗರು ಪಲ್ಯ ಮೂಲಕ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಾಗಭೂಷಣ್ ನಾಯಕನಾಗಿ ನಟಿಸಿದ್ದಾರೆ. ಮಂಡ್ಯ ಹಳ್ಳಿಗಳಲ್ಲಿ ನಡೆಯುವ ಆಚರಣೆ ಸುತ್ತಾ ಇಡೀ ಸಿನಿಮಾವನ್ನು ನಿರ್ದೇಶಕ ಉಮೇಶ್ ಕೆ. ಕೃಪಾ ಕಟ್ಟಿಕೊಟ್ಟಿದ್ದಾರೆ.
ಹಿರಿಯ ಕಲಾವಿದರಾದ ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಬಳಗವಿರುವ “ಟಗರು ಪಲ್ಯ” ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಎಸ್ ಕೆ ರಾವ್ ಕ್ಯಾಮೆರಾ ಹಿಡಿದಿದ್ದಾರೆ. ಟೈಟಲ್ ಟ್ರ್ಯಾಕ್ ಮೂಲಕ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾವನ್ನು ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.
12 ವರ್ಷಗಳ ಹಿಂದೆ ತೆರೆಕಂಡಿದ್ದ ಸಂಜು ವೆಡ್ಸ್ ಗೀತಾ ಚಿತ್ರ ತನ್ನ ಹಾಡುಗಳು ಹಾಗೂ ಕಂಟೆಂಟ್ ಮೂಲಕ ಜನರ ಮನ ಗೆದ್ದಿತ್ತು. ಈಗ ಆ ಚಿತ್ರದ ಸೀಕ್ವೇಲ್ ಆಗಿ ಸಂಜು ವೆಡ್ಸ್ ಗೀತಾ-2 ಮೂಡಿಬರುತ್ತಿದೆ. ನಾಗಶೇಖರ್ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಬಹುತೇಕ ಮೊದಲ ಭಾಗದಲ್ಲಿದ್ದ ಕಲಾವಿದರೇ ಈ ಚಿತ್ರದಲ್ಲೂ ಇರುತ್ತಾರೆ. ಫಾರ್ ಎ ಚೇಂಜ್ ರಮ್ಯಾ ಬದಲು ಇಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ಸಂಜು ವೆಡ್ಸ್ ಗೀತಾ-2 ಚಿತ್ರದ ಮುಹೂರ್ತ ಹಾಗೂ ಟೀಸರ್ ಬಿಡುಗಡೆ ಸಮಾರಂಭ ನೆರವೇರಿತು.
ಕಾರ್ಯಕ್ರಮದ ಆರಂಭದಲ್ಲಿ ಹಿಂದಿನ ಚಿತ್ರದ ಎವಿ ಪ್ರದರ್ಶನ ಹಾಗೂ ಆ ಚಿತ್ರದ ಟೈಟಲ್ ಟ್ರ್ಯಾಕ್ ಗೆ ನೃತ್ಯ ಮಾಡುವ ಮೂಲಕ ಮೆಲುಕು ಹಾಕಲಾಯಿತು. ನಾಗಶೇಖರ್ ಮೂವೀಸ್ ಹಾಗೂ ಪವಿತ್ರ ಇಂಟರ್ ನ್ಯಾಷನಲ್ ಮೂವೀ ಮೇಕರ್ಸ್ ಸಹಯೋಗದೊಂದಿಗೆ ಮಹಾನಂದಿ ಕ್ರಿಯೇಶನ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಾಗಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ವರ್ಣರಂಜಿತವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನಾಗಶೇಖರ್, ನಾನು ಸೀರಿಯಲ್ ಗಳಲ್ಲಿ ಆಕ್ಟ್ ಮಾಡ್ತಿರುವಾಗ, ಕಪ್ಪಗಿರುವ ಈ ಹುಡುಗನನ್ನು ಕರೆದು ತಮ್ಮ ನಿರ್ದೇಶನದ ನಿನಗಾಗಿ ಚಿತ್ರದಲ್ಲಿ ಅವಕಾಶ ನೀಡಿದವರು ಎಸ್ ಮಹೇಂದರ್, ಅವರು ಇಂದು ನಮ್ಮ ಚಿತ್ರದ ಟೀಸರ್ ರಿಲೀಸ್ ಮಾಡಿದ್ದು ತುಂಬಾ ಖುಷಿಯಾಗಿದೆ. ಈ ಸಿನಿಮಾವನ್ನು 5 ವರ್ಷಗಳ ಹಿಂದೆಯೇ ಪ್ರಾರಂಭಿಸಬೇಕಾಗಿತ್ತು. ಆದರೆ ನಾನು ತೆಲುಗು, ತಮಿಳು ಕಡೆ ಹೋಗಿದ್ದರಿಂದ ಆಗಲಿಲ್ಲ. ರಮ್ಯ ಅವರು ಈ ಚಿತ್ರದಲ್ಲೂ ಆಕ್ಟ್ ಮಾಡಬೇಕಿತ್ತು. ಅದರೆ ಅವರು ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಅವರ ಬದಲಾಗಿ ಈ ಪಾತ್ರಕ್ಕೆ ಮೊದಲು ನನ್ನ ಕಣ್ಣಮುಂದೆ ಬಂದದ್ದೇ ರಚಿತಾ ರಾಮ್, ತಮ್ಮ ಅದ್ಭುತವಾದ ಅಭಿನಯದ ಮೂಲಕವೇ ಅವರು ಹೆಸರು ಮಾಡಿದವರು.
ನನ್ನ ಚಿತ್ರದಲ್ಲಿ ಈ ಪಾತ್ರಕ್ಕೆ ಜೀವ ತುಂಬುವುದೇ ಅಭಿನಯ. ಇನ್ನು ಹಿಂದಿನ ಚಿತ್ರದಲ್ಲಿದ್ದ ಬಹುತೇಕರು ಇದರಲ್ಲೂ ಇರುತ್ತಾರೆ. ನಾನು ಚಿತ್ರದಲ್ಲಿ ಕಥೆಯ ಜೊತೆ ಹಾಡುಗಳಿಗೂ ಜಾಸ್ತಿ ಪ್ರಾಮುಖ್ಯತೆ ಕೊಡುತ್ತೇನೆ. ಶ್ರೀಧರ್ ಸಂಭ್ರಮ್ ಅವರಿಗೆ ರಾತ್ರಿ 12 ಗಂಟೆಗೆ
ಕಾಲ್ ಮಾಡಿ ಹಾಡುಗಳ ಸನ್ನಿವೇಶ ವಿವರಿಸಿದ್ದೇನೆ. ಅವರು ಸೂಪರ್ ಸಾಂಗ್ಸ್ ಕೊಟ್ಟಿದ್ದಾರೆ. ಅದ್ಭುತವಾದ 5 ಹಾಡುಗಳು ಮೂಡಿಬಂದಿವೆ. ಇಂದಿನಿಂದಲೇ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂದರು. ಶ್ರೀನಗರ ಕಿಟ್ಟಿ, ರಚಿತಾ ಅಭಿನಯದ ಹಾಡಿನೊಂದಿಗೆ ಚಿತ್ರೀಕರಣ ಪ್ರಾರಂಭಿಸಲಾಯಿತು. ಮುಹೂರ್ತ ದೃಶ್ಯಕ್ಕೆ ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕ್ಲಾಪ್ ಮಾಡಿದರೆ, ನಾಗಶೇಖರ್ ಅವರ ತಾಯಿ ವರಲಕ್ಷ್ಮಿ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು.
ಈ ಚಿತ್ರವನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಣೆ ಮಾಡುವ ಮೂಲಕ ನಾಗಶೇಖರ್, ರಾಜರತ್ನನಿಗೆ ಗೌರವ ಸಲ್ಲಿಸಿದ್ದಾರೆ. ನಿರ್ಮಾಕ ಚಲುವಾದಿ ಕುಮಾರ್ ಮಾತನಾಡಿ ಹಿಂದಿನ ಚಿತ್ರಗಳಲ್ಲಿ ನಾಗಶೇಖರ್ ಅವರ ವರ್ಕ್ ನೋಡಿದ್ದೇನೆ. ಈ ಚಿತ್ರದ ಬಗ್ಗೆ ೫ ವರ್ಷಗಳ ಹಿಂದೆಯೇ ಮಾತಾಡಿದ್ವಿ, ಕಥೆ ತುಂಬಾ ಚೆನ್ನಾಗಿ ಮಾಡಿಕೊಂಡಿದ್ದಾರೆ 12 ವರ್ಷವಾದರೂ ಹಾಡು, ಕಥೆ ಜೀವಂತವಾಗಿದೆ ಎಂದರೆ ಅದಕ್ಕಿರುವ ಜನಪ್ರಿಯತೆ ಕಾರಣ ಎಂದರು.
ಮತ್ತೊಬ್ಬ ನಿರ್ಮಾಪಕ ನಾರಾಯಣ ಎಂ.ಸಿ. ಮಾತನಾಡಿ,ನನಗೆ ಬಹಳ ಇಷ್ಟವಾದ ಟೀಂ ಇದು. ಮೊದಲ ಚಿತ್ರಕ್ಕಿಂತ ಈ ಚಿತ್ರ, ಹೆಚ್ಚು ಜನಪ್ರಿಯವಾಗುವ ನಂಬಿಕೆಯಿದೆ ಎಂದರು. ನಾಯಕಿ ರಚಿತಾ ಮಾತನಾಡಿ ಲಾಂಚ್ ಇವೆಂಟ್ ಇಷ್ಟೊಂದು ಗ್ರ್ಯಾಂಡ್ ಆಗಿ ಮಾಡಿದ್ದಾರೆ. ನಾಗಶೇಖರ್ ಅವರ ಜೊತೆ ಫಸ್ಟ್ ಟೈಮ್ ಕೆಲಸ ಮಾಡುತ್ತಿದ್ದೇನೆ. ಚಿತ್ರದ ಬಗ್ಗೆ ಅವರಿಗೆ ಡೆಡಿಕೇಶನ್ ಜಾಸ್ತಿ, ಅದನ್ನು ಫೋಟೋಶೂಟ್ ಸಮಯದಲ್ಲೇ ನೋಡಿದೆ. ನನ್ನ ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ ಎಂದರು. ನಾಯಕ ಕಿಟ್ಟಿ ಮಾತನಾಡಿ, ನಾಗಶೇಖರ್ ಚಿತ್ರದ ಕಥೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ನನ್ನ ಲ್ಯಾಂಡ್ ಮಾರ್ಕ್ ಸಿನಿಮಾಗಳಲ್ಲಿ ಸಂಜು ವೆಡ್ಸ ಗೀತಾ ಒಂದು. ಅದ್ಭುತವಾದ ಪ್ರೇಮಕಥೆಯೊಂದಿಗೆ ಮತ್ತೆ ಬರುತ್ತೇವೆ. ಮೊದಲ ಚಿತ್ರಕ್ಕಿಂತ ಈ ಚಿತ್ರದ ಪಾತ್ರ ಇನ್ನೂ ಚೆನ್ನಾಗಿದೆ. ರಚಿತಾ ರಾಮ್ ಅವರ ಜೊತೆ ಮೊದಲಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದೇನೆ ಎಂದರು.
ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್, ಛಾಯಾಗ್ರಾಹಕ ಸತ್ಯ ಹೆಗಡೆ, ಸಾಹಿತಿ ಕವಿರಾಜ್ ಚಿತ್ರದ ಕುರಿತಂತೆ ಮಾತನಾಡಿದರು. ಅತಿಥಿಯಾಗಿ ಆಗಮಿಸಿದ್ದ ಅಭಿಷೇಕ್ ಅಂಬರೀಶ್ ಮಾತನಾಡಿ ನಾಗಶೇಖರ್ ಅದ್ಭುತವಾದ ತಂತ್ರಜ್ಞ ಎಂದು ಹೇಳಿದರು. ಮಂಜುನಾಥ್ ಐಎಎಸ್. ನಿರ್ಮಾಪಕ ಕಾರ್ತಿಕ್ ಗೌಡ, ನಟ ಆದಿತ್ಯ, ಮಾಜಿ ಎಂ.ಎಲ್.ಎ.ಬಾಲರಾಜ್ ನಾಗತಿಹಳ್ಳಿ, ಚಂದ್ರಶೇಖರ್, ಚೇಂಬರ್ ಅಧ್ಯಕ್ಷ ಭಾ.ಮಾ. ಹರೀಶ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ನಿರ್ಮಾಪಕ ಜಾಕ್ ಮಂಜು ಅವರು ಈ ಚಿತ್ರವನ್ನು ವಿಶ್ವಾದ್ಯಂತ ರಿಲೀಸ್ ಮಾಡಲಿದ್ದಾರೆ.
ಮೇಘನರಾಜ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ, ಪನ್ನಗ ಭರಣ , ಸ್ಪೂರ್ತಿ ಅನಿಲ್ ಹಾಗೂ ಚೇತನ್ ನಂಜುಂಡಯ್ಯ ಜಂಟಿಯಾಗಿ ನಿರ್ಮಿಸಿರುವ ಹಾಗೂ ವಿಶಾಲ್ ಆತ್ರೇಯ ನಿರ್ದೇಶನದ “ತತ್ಸಮ ತದ್ಭವ” ಚಿತ್ರದ ಮೊದಲ ಹಾಡು “ದೂರಿ ಲಾಲಿ” ಇತ್ತೀಚೆಗೆ Betel music youtube channal ಮೂಲಕ ಬಿಡುಗಡೆಯಾಗಿ, ಜನರ ಮನ ಗೆಲ್ಲುತ್ತಿದೆ. ವಾಸುಕಿ ವೈಭವ್ ಈ ಹಾಡನ್ನು ಬರೆದು ಸಂಗೀತ ನೀಡಿದ್ದಾರೆ. ಸುನಿಧಿ ಗಣೇಶ್ ಹಾಡಿದ್ದಾರೆ. ಮೇಘನರಾಜ್ ಹಾಗೂ ಮಹತಿ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.
ಜನಪ್ರಿಯವಾಗುತ್ತಿರುವ “ದೂರಿ ಲಾಲಿ” ಹಾಡನ್ನು ಹಾಡುತ್ತಾ(ತಾಯಿಯರು) ತಮ್ಮ ಮಗುವನ್ನು ಹೇಗೆ ಮಲಗಿಸುತ್ತೀರಾ? ಎಂಬ ವಿಡಿಯೋವನ್ನು ನಿಮ್ಮ ಇನ್ಸ್ಟಾಗ್ರಾಮ್ ಮೂಲಕ ಈ ಕೆಳಕಂಡ @megsraj @prajwaldevaraj @pannagabharana @vishal.atreya @vasuki_vaibhav_ @pbstudios_productions @anvitcinemas @tatsamatadbhava @betelmusic.in
ಇನ್ಸ್ಟಾಗ್ರಾಮ್ ಐಡಿಗಳಿಗೆ ಟ್ಯಾಗ್ ಮಾಡಬೇಕು. ಈ ವಿಡಿಯೋಗಳಲ್ಲಿ ಮೂರು ವಿಡಿಯೋಗಳನ್ನು ಆಯ್ಕೆ ಮಾಡಲಾಗುವುದು. ಆ ಮೂವರು ತಮ್ಮ ಮಕ್ಕಳೊಂದಿಗೆ ಮೇಘನರಾಜ್ ಅವರನ್ನು ಭೇಟಿ ಮಾಡಿ ಅವರೊಂದಿಗೆ ಊಟ ಮಾಡುತ್ತಾ ಕೆಲವು ವಿಷಯಗಳನ್ನು ಹಂಚಿಕೊಳ್ಳಬಹುದು ಎಂದು ಚಿತ್ರತಂಡ ತಿಳಿಸಿದೆ.
ಕಿರುತೆರೆ ಹಾಗೂ ಹಿರಿತೆರೆಯ ಖ್ಯಾತ ನಟ ಕಿರಣ್ ರಾಜ್ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ “ರಾನಿ”(Ronny) ಚಿತ್ರದ ಆಡಿಯೋ ಹಕ್ಕನ್ನು ಪ್ರತಿಷ್ಠಿತ ಆಡಿಯೋ comany T-ಸೀರಿಸ್ ಭಾರಿ ಮೊತ್ತಕ್ಕೆ ಖರೀದಿಸಿದೆ. ಇತ್ತೀಚೆಗೆ ಬಿಡುಗಡೆಯಾದ “Ronny”ಚಿತ್ರದ ಟೀಸರ್ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲೂ ಬಾರಿ ಸದ್ದು ಮಾಡಿತ್ತು, ಗುರುತೇಜ್ ಶೆಟ್ಟಿ ನಿರ್ದೇಶನದ ರಾನಿ ಚಿತ್ರ ಸ್ಟಾರ್ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದ್ದು, ಚಂದ್ರಕಾಂತ್ ಮತ್ತು ಉಮೇಶ್ ಹೆಗ್ಡೆ ನಿರ್ಮಾಣ ಮಾಡುತ್ತಿದ್ದಾರೆ ನಾಯಕನಾಗಿ “ಕಿರಣ್ ರಾಜ್ ”ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡದ್ದಾರೆ.
ಟೀಸರ್ ಪೋಸ್ಟರ್ ನಿಂದಲೇ ಭಾರಿ ನಿರೀಕ್ಷೆ ಹುಟ್ಟಿಸಿರುವ Ronny ಚಿತ್ರಕ್ಕೆ ಈಗ T-ಸೀರಿಸ್ ಜೊತೆಯಾಗಿರೋದು ಚಿತ್ರ ತಂಡಕ್ಕೆ ಇನ್ನಷ್ಟು ಹುಮ್ಮಸು ತಂದಿದೆ ಎನ್ನುತ್ತಾರೆ ನಿರ್ಮಾಪಕರು. ಮಣಿಕಾಂತ್ ಕದ್ರಿ ಚಿತ್ರಕ್ಕೆ 5 ಹಾಡುಗಳನ್ನು ಸಂಯೋಜಿಸಿದ್ದು, ಪ್ರಮೋದ್ ಮರವಂತೆ 5 ಹಾಡುಗಳನ್ನು ಬರೆದಿದ್ದಾರೆ, ಕುನಾಲ್ ಗಾಂಜಾವಾಲ, ಹಂಸಿಕ ಐಯ್ಯರ್, ಶ್ವೇತಾ ಮೋಹನ್ ಅವರಂತಹ ಹೆಸರಾಂತ ಗಾಯಕರು ರಾನಿ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.
ಸುಮಾರು 85 ದಿನಗಳ ಚಿತ್ರೀಕರಣ ಮುಗಿದಿದ್ದು ಒಂದು ಹಾಡಿನ ಚಿತ್ರಿಕರಣ ಬಾಕಿ ಇದೆ. ಗ್ಯಾಂಗಸ್ಟರ್ ಕಥೆಯಾದರೂ ಮಾಸ್ ಎಲಿವೆಷನ್ ಇದ್ದರು ಕಿರಣ್ ರಾಜ್ ರವರ ಫ್ಯಾಮಿಲಿ ಅಭಿಮಾನಿಗಳನ್ನು ಗಮನದಲ್ಲಿ ಇಟ್ಟುಕೊಂಡು ಕಥೆ ಬರೆದಿದ್ದೇನೆ ಇದು ಫ್ಯಾಮಿಲಿ ಆಕ್ಷನ್ ಸಿನಿಮಾ ಎನ್ನುತಾರೆ ನಿರ್ದೇಶಕ ಗುರುತೇಜ್ ಶೆಟ್ಟಿ,
ಚಿತ್ರದಲ್ಲಿ ಸಮೀಕ್ಷ, ಅಪೂರ್ವ ಹಾಗೂ ರಾಧ್ಯಾ ಮೂವರು ನಾಯಕಿಯರಿದ್ದು, ಪೋಷಕ ಪಾತ್ರದಲ್ಲಿ ರವಿಶಂಕರ್, ಮಂಜು, ಉಗ್ರಂ ರವಿ, ಗಿರೀಶ್ ಹೆಗಡೆ, ಬೇಡ ಸುರೇಶ, ಮೈಕೋ ನಾಗರಾಜ್, ಸುಜಯ್ ಶಾಸ್ತ್ರಿ, ಲಕ್ಷ್ಮೀ ಸಿದ್ದಯ್ಯ, ಅನಿಲ್ ಯಾದವ್, ಶ್ರೀಧರ್,ಮಂಡ್ಯ ರಮೇಶ್ ಹೀಗೆ ದೊಡ್ಡ ತಾರಬಳಗವಿದೆ.
ರಾಘವೇಂದ್ರ ಬೇಡ ಕೋಲಾರ ಛಾಯಾಗ್ರಾಹಣ, ಉಮೇಶ್ ಸಂಕಲನ ಸತೀಶ್ ಕಲಾ ನಿರ್ದೇಶನ ಧನಂಜಯ್ ನೃತ್ಯ ನಿರ್ದೇಶನ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನವಿದ್ದು, ಡಿಸೆಂಬರ್ ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರ ತಂಡ.
ಕನ್ನಡದ ಸೂಪರ್ ಹಿಟ್ ಸಿನಿಮಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ತೆಲುಗಿಗೆ ಡಬ್ ಆಗಿದೆ. ಇದೇ 26ಕ್ಕೆ ಆಂಧ್ರ ಮತ್ತು ತೆಲಂಗಾಣದಲ್ಲಿ ಬಾಯ್ಸ್ ಹಾಸ್ಟೆಲ್ ಟೈಟಲ್ ನಡಿ ಚಿತ್ರ ಬಿಡುಗಡೆಯಾಗಲಿದೆ. ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ರಿಷಬ್ ಶೆಟ್ಟಿ, ದಿಗಂತ್, ಶೈನಿ ಶೆಟ್ಟಿ ಹಾಗೂ ಪವನ್ ಕುಮಾರ್ ಹಾಗೂ ರಮ್ಯಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಮ್ಯಾ ಮಾಡಿದ್ದ ಲೆಕ್ಚರರ್ ಪಾತ್ರವನ್ನು ತೆಲುಗಿನಲ್ಲಿ ನಟಿ ಕಂ ನಿರೂಪಕಿ ರಶ್ಮಿ ಗೌತಮ್ ಮಾಡಲಿದ್ದಾರೆ.
ಬಂತು ‘ಬಾಯ್ಸ್ ಹಾಸ್ಟೆಲ್’ ಟೈಟಲ್ ಸಾಂಗ್ ತೆಲುಗಿಗೆ ಡಬ್ ಆಗಿರುವ ಬಾಯ್ಸ್ ಹಾಸ್ಟೆಲ್ ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆಯಾಗಿದೆ. ಎಂಟಿಆರ್ ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಹಾಡು ರಿಲೀಸ್ ಆಗಿದ್ದು, ತೆಲುಗು ಮಂದಿಯಿಂದ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
ನಿತಿನ್ ಕೃಷ್ಣಮೂರ್ತಿ ಚೊಚ್ಚಲ ಪ್ರಯತ್ನದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ರಾಜ್ಯ ಮಾತ್ರವಲ್ಲದೇ ಅಕ್ಕ ಪಕ್ಕದ ರಾಜ್ಯ ಹಾಗೂ ವಿದೇಶದಲ್ಲಿಯೂ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು.
ತುಂಗಾ ಬಾಯ್ಸ್ ಹಾಸ್ಟೆಲ್ ಹುಡುಗರ ಕಾಮಿಡಿ ಕ್ವಾಟ್ಲೆ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಟ್ಟಿತ್ತು. ಇದೀಗ ಆಂಧ್ರ ಹಾಗೂ ತೆಲಂಗಾಣ ರಾಜ್ಯದಲ್ಲಿ ಬಾಯ್ಸ್ ಹಾಸ್ಟೆಲ್ ಟೈಲಟ್ ನಡಿ ತೆಲುಗು ಭಾಷೆಗೆ ಡಬ್ ಆಗ್ತಿರೋದು ಖುಷಿ ವಿಚಾರ.
ಚಾಯ್ ಬಿಸ್ಕೆಟ್ ಫಿಲ್ಮ್ಸ್ ಮತ್ತು ಅನ್ನಪೂರ್ಣ ಸ್ಟುಡಿಯೋಸ್ ಜಂಟಿಯಾಗಿ ತೆಲುಗಿನಲ್ಲಿ ’ಬಾಯ್ಸ್ ಹಾಸ್ಟೆಲ್’ ಶೀರ್ಷಿಕೆಯಲ್ಲಿ ಈ ಚಿತ್ರವನ್ನು ಆಗಸ್ಟ್ 26ರಂದು ಬಿಡುಗಡೆ ಮಾಡುತ್ತಿವೆ. ಕನ್ನಡದಲ್ಲಿ ಈ ಚಿತ್ರವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಪರವಃ ಪಿಕ್ಚರ್ಸ್ ಬ್ಯಾನರ್ ಅಡಿ ಪ್ರೆಸೆಂಟ್ ಮಾಡಿದ್ದಾರೆ.
ರಂಗಭೂಮಿ ಹಿನ್ನೆಲೆ ಹೊಂದಿರುವ ಪ್ರತಿಭಾನ್ವಿತ ತಂಡಕ್ಕೆ ರಿಷಬ್ ಶೆಟ್ಟಿ, ರಮ್ಯಾ, ಪವನ್ ಕುಮಾರ್, ಶೈನ್ ಶೆಟ್ಟಿ, ದಿಗಂತ್ ಹಾಗೂ ಇನ್ನಿತರರು ಸಾಥ್ ಕೊಟ್ಟಿದ್ದಾರೆ. ಗುಲ್ಮೊಹರ್ ಫಿಲ್ಮ್ಸ್ ಮತ್ತು ವರುಣ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.
ಕೃಷ್ಣ ಸಾರ್ಥಕ್,ಜಗದೀಶ್ ಗೌಡ ನಿರ್ಮಾಣ ಮಾಡಿರೋ ಭೀಮ ಎಲ್ಲಾ ಆ್ಯಂಗಲ್ ನಿಂದ್ಲೂ ಚಿತ್ರರಂಗದಲ್ಲಿ ದೊಡ್ಡ ನಿರಿಕ್ಷೆಯನ್ನ ಹುಟ್ಟಿಸಿದೆ.ಅಲ್ಲದೆ ಈ ವರ್ಷದ ಬಹು ನಿರೀಕ್ಷಿತ ಚಿತ್ರವಾಗಿದೆ.
ದುನಿಯಾ ವಿಜಯ್ ನಿರ್ದೇಶಿಸಿ ನಟಿಸ್ತಿರೋ ಭೀಮ ಸಿನಿಮಾ ಕೆಲಸಗಳು ಕೊನೆಯ ಹಂತ ತಲುಪುತ್ತಿದ್ದು, ಚಿತ್ರತಂಡ ಸಿನಿಮಾ ರಿಲೀಸ್ಗೆ ಡೇಟ್ ಫಿಕ್ಸ್ ಮಾಡಿಕೊಳ್ಳುತ್ತಿದೆ.
ಹಾಗಾಗಿ ನವೆಂಬರ್ನಲ್ಲಿ ತೆರೆಗೆ ಸಿನಿಮಾ ತರೋದಕ್ಕೆ ಸಜ್ಜಾಗಿದೆ. ನವೆಂಬರ್ ನಲ್ಲಿ ದೀಪಾವಳಿ ಇರೋದ್ರಿಂದ ಅದೇ ಡೇಟ್ ಗೆ ಸಿನ್ಮಾನ ರಿಲೀಸ್ ಮಾಡ್ಬೇಕು ಅನ್ನೋ ನಿರ್ಧಾರಕ್ಕೆ ಬಂದಿದೆ. ಅಧಿಕೃತವಾಗಿ ಮುಂದಿನವಾರ ಡೇಟ್ ಅನೌನ್ಸ್ ಮಾಡುವುದರ ಜೊತೆಗೆ ಪ್ರಚಾರ ಕಾರ್ಯ ಶುರು ಮಾಡಲಿದೆ.
ದುನಿಯಾ ವಿಜಯ್,ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್,ಕಲ್ಯಾಣಿ,ಅಶ್ವಿನಿ ಮತ್ತು ಪ್ರಿಯಾ ಶಠಮರ್ಷಣ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಶಿವಸೇನಾ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ,ಮಾಸ್ತಿ ಡೈಲಾಗ್ಸ್ ಚಿತ್ರಕ್ಕಿದೆ. ದೀಪು ಎಸ್ ಕುಮಾರ್ ಸಂಕಲನ, ಚೇತನ್ ಡಿಸೋಜಾ,ವಿನೋದ್,ಗೌತಮ್ ಸಾಹಸ,ಧನು ನೃತ್ಯ ಭೀಮನಿಗಿದೆ.
ಜನನಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಶ್ರೀಯುತ ರವಿಚಂದ್ರ ಎ ಜೆ ರವರ ನಿರ್ಮಿಸುತ್ತಿರುವ , ಶ್ರೀನಿಧಿ ಬೆಂಗಳೂರು ರವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಸಿನಿಮಾ ಚಿತ್ರ “ಬ್ಲಿಂಕ್” ಈಗಾಗಲೇ ಎಲ್ಲಾ ಕೆಲಸಗಳನ್ನು ಮುಗಿಸಿ ಬೆಳ್ಳಿಪರದೆಗೆ ಬರಲು ಸಜ್ಜಾಗಿದೆ.. ಈ ನಿಟ್ಟಿನಲ್ಲಿ ಚಿತ್ರದ ಮೊದಲನೇ ಹಾಡನ್ನು ಸ್ವಾತಂತ್ರ ದಿನದಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.. ಇದು ರಾಪ್ ಶೈಲಿಯ ಹಾಡಗಿದ್ದು ಭಾರತದ ಪಾರಂಪರಿಕ ಸಂಗೀತವನ್ನು ಒಳಗೊಂಡಿದೆ.
ನಮ್ಮ ಮಣ್ಣಿನ ಪ್ರಖ್ಯಾತ ರಾಪರ್ ಆದ ಅನೂಪ್ ( ಕಾಟಕೊಡು) ಇವರು ರಾಪ್ ಭಾಗವನ್ನು ಅತ್ಯುತ್ತಮವಾದ ಸಾಹಿತ್ಯದ ಜೊತೆಗೆ ಅವರ ದನಿಯ ಮೂಲಕ ಮೆರಗು ನೀಡಿದ್ದಾರೆ.. ಬ್ಲಿಂಕ್ ಚಿತ್ರದ ಸಂಗೀತ ನಿರ್ದೇಶಕರಾದ ಪ್ರಸನ್ನ ಕುಮಾರ್ ಎಂ ಎಸ್ ರವರು ಈ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ..ಕೌಮುದಿಯವರು ಈ ಹಾಡಿಗೆ ದನಿಯಾಗುವ ಮೂಲಕ ಕನ್ನಡ ನಾಡಿನ ಜನತೆಗೆ ಪರಿಚಯವಾಗಲಿದ್ದಾರೆ.
ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ದೀಕ್ಷಿತ್ ಶೆಟ್ಟಿ , ಚೈತ್ರ ಜೆ ಆಚಾರ್ , ಮಂದಾರ ಬಟ್ಟಲಹಳ್ಳಿ , ವಜ್ರಧೀರ್ ಜೈನ್ , ಗೋಪಾಲ ಕೃಷ್ಣದೇಶಪಾಂಡೆ , ಕಿರಣ್ ನಾಯ್ಕ್ ಮತ್ತು ಹಲವಾರು ಕಲಾವಿದರ ತಾರಗಣವಿದ್ದು, ಅವಿನಾಶ ಶಾಸ್ರ್ತಿ ರವರ ಛಾಯಾಗ್ರಹಣ, ಮತ್ತು ಸಂಜೀವ್ ಜಾಗಿರ್ದಾರ್ ರವರ ಸಂಕಲನವಿದೆ.
“ಆಗಂತುಕ” ಶೀರ್ಷಿಕೆಯೊಂದಿಗೆ ಹೊರ ಬರುತ್ತಿರುವ ಈ ಹಾಡು ಆಗಸ್ಟ್ 15 ರಂದು ಲಾಲ್ ಭಾಗ್ ನಲ್ಲಿ ಪುಷ್ಪ ಪ್ರದರ್ಶನದಲ್ಲಿ ಬಿಡುಗಡೆಯಾಗಿ ಜನರ ಮನಸ್ಸಿಗೆ ಮುಟ್ಟಲು ಸಜ್ಜಾಗಿದ್ದು ” ಬ್ಲಿಂಕ್ ” ಚಿತ್ರತಂಡ ಎಲ್ಲರ ಬೆಂಬಲವನ್ನು ಅಪೇಕ್ಷಿಸುತ್ತಿದೆ..
ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಹೆಚ್ಚುತ್ತಿದೆ. ಆ ಸಾಲಿಗೆ ಈಗ ಸಿಂಧು ಗೌಡ ಸೇರ್ಪಡೆಯಾಗಿದ್ದಾರೆ. ಸಿಂಧು ಗೌಡ “ಆಪಲ್ ಕಟ್” ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಿಂಧು ಗೌಡ ಖ್ಯಾತ ನಿರ್ದೇಶಕ ರಾಜ್ ಕಿಶೋರ್ ಅವರ ಪುತ್ರಿ.
ನಿರ್ದೇಶಕಿ ಸಿಂಧು ಗೌಡ ಮಾತನಾಡಿ, ನಾನೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ‘ನಾನು ಕಳೆದ 10ವರ್ಷದಲ್ಲಿ ಹಲವು ಜನಪ್ರಿಯ ಧಾರಾವಾಹಿಗಲ್ಲಿ ನಟನೆ ಮಾಡಿದ್ದೇನೆ. ಈ ಮೊದಲು ಒಂದು ಶಾರ್ಟ್ ಫಿಲ್ಮ್ ನಿರ್ದೇಶಿಸಿದ್ದು, ಹಿರಿತೆರೆಯಲ್ಲಿ ಈ ಸಿನಿಮಾ ನನ್ನ ಮೊದಲ ಪ್ರಯತ್ನ. ನಿರ್ಮಾಪಕಿ ಶಿಲ್ಪ ಪ್ರಸನ್ನ ಹಾಗೂ ನಾನು ಪಾರ್ಕ್ ನಲ್ಲಿ ಭೇಟಿಯಾದೆವು. ನಂತರ ಕಥೆ ಕೇಳಿ ಅವರು ನಿರ್ಮಾಣಕ್ಕೆ ಮುಂದಾದರು.
‘ಆಪಲ್ ಕಟ್’, ಐದು ಜನ ಗೆಳೆಯರ ಸುತ್ತ ನಡೆಯುವ ಕಥೆ. ಜೊತೆಗೆ ನಾನು ಮಾನವಶಾಸ್ತ್ರ ಓದಿದ್ದು, ಚಿತ್ರದಲ್ಲಿ ಮಾನವಶಾಸ್ತ್ರದ ಒಂದು ಅಂಶ ಸೇರಿಸಲಾಗಿದೆ. ಒಂದು ಆಸ್ಪತ್ರೆಯಲ್ಲಿ ಅನುಮತಿ ಪಡೆದು ಶವವೊಂದನ್ನು ಸಹ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಅದು ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದೆ ಎನ್ನಬಹುದು. ಮೊದಲಿನಿಂದಲೂ ನಾನು ತಂದೆ ಜೊತೆ ಶೂಟಿಂಗ್ಗೆ ಹೋಗುತ್ತಿದ್ದೆ. ಹಾಗಾಗಿ ಸಿನಿಮಾ ಆಸಕ್ತಿ ಬೆಳೆಯುತ್ತಾ ಬಂತು. ಸದ್ಯ ‘ಆಪಲ್ ಕಟ್’ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಇನ್ನೆರಡು ತಿಂಗಳಲ್ಲಿ ಸೆನ್ಸಾರ್ ಮುಗಿಸಿಕೊಂಡು ಸಿನಿಮಾ ರಿಲೀಸ್ ಮಾಡುವ ಯೋಜನೆ ಇದೆ. ಸಿನಿಮಾ ಚೆನ್ನಾಗಿ ಬರಲು ತಂಡದ ಸಹಕಾರ ತುಂಬಾ ಇದೆ’ ಎಂದು ಹೇಳಿದರು.
ಚಿತ್ರದ ನಾಯಕ ಸೂರ್ಯ ಗೌಡ, ‘ನಾನು ಈ ಚಿತ್ರದಲ್ಲಿ ಸತ್ಯ ಹೆಸರಿನ ಮಾನವಶಾಸ್ತ್ರ ಪ್ರೊಫೆಸರ್ ಪಾತ್ರ ಮಾಡಿದ್ದೇನೆ. ಹಲವಾರು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ ಬಂದಿದ್ದು ಇದೇ ಮೊದಲಬಾರಿ ಮುಖ್ಯ ಪಾತ್ರ ನಿರ್ವಹಿಸಿದ್ದೇನೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು ನಟಿಸಿದ್ದೇನೆ. ಇದರಲ್ಲಿ ಕಥೆಯಷ್ಟೇ ತಾಯಿ-ಮಗನ ಬಾಂಧವ್ಯವನ್ನು ಅದ್ಭುತವಾಗಿ ತೋರಿಸಲಾಗಿದೆ’ ಎಂದರು.
‘ನಾನು ಮೂಲತಃ ಬಾಗೆಪಲ್ಲಿ ಹುಡುಗಿ. ಒಳ್ಳೆ ಕಂಟೆಂಟ್ ಇರುವ ಮರ್ಡರ್ ಮಿಸ್ಟರಿ ಸಿನಿಮಾದಲ್ಲಿ ಸೈಕಾಲಜಿ ಸ್ಟೂಡೆಂಟ್ ಆಗಿ ನಟಿಸಿದ್ದೇನೆ” ಎಂದರು ನಾಯಕಿ ಅಶ್ವಿನಿ ಪೋಲೆಪಲ್ಲಿ.
ಹಾಸ್ಯ ನಟ ಅಪ್ಪಣ್ಣ, ಅಭಿಜಿತ್, ತಾಯಿ ಪಾತ್ರ ಮಾಡಿರುವ ಮೀನಾಕ್ಷಿ ತಮ್ಮ ಅನುಭವ ಹಂಚಿಕೊಂಡರು. ಬಾಲು ರಾಜವಾಡಿ ಸಹ ಈ ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ.
ಸಿನಿಮಾವನ್ನು ಸಾನ್ವಿ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಮೊದಲಬಾರಿ ನಿರ್ಮಾಣ ಮಾಡಿರುವ ಶಿಲ್ಪ ಪ್ರಸನ್ನ ಮಾತನಾಡುತ್ತಾ, ಕಥೆ ಕೇಳಿದಾಗ ತುಂಬಾ ಇಷ್ಟವಾಗಿ ನಿರ್ಮಾಣ ಮಾಡಿರುವುದಾಗಿ ಹೇಳಿದರು.
ವೀರ್ ಸಮರ್ಥ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಯೋಗರಾಜ್ ಭಟ್, ಸತ್ಯಪ್ರಕಾಶ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ವಾಸುಕಿ ವೈಭವ್, ವಿಜಯಶ್ರೀ ಹಾಡಿದ್ದಾರೆ. ರಾಜೇಶ್ ಗೌಡ ಛಾಯಾಗ್ರಹಣ ಹಾಗೂ ಸುಚೇಂದ್ರ ಎನ್ ಮೂರ್ತಿ ಸಂಕಲನ “ಆಪಲ್ ಕಟ್” ಚಿತ್ರಕ್ಕಿದೆ.