Categories
ಸಿನಿ ಸುದ್ದಿ

ದಿ ರೈಸ್ ಆಫ್ ಅಶೋಕ ಟ್ರೇಲರ್ ಬಂತು: ಸತೀಶ್ ನೀನಾಸಂ ಸಿನಿಮಾಗೆ ಚಂದನವನದ ತಾರೆಯರು ಸಾಥ್

ಟ್ರೇಲರ್ ನಲ್ಲಿ ಕಿಚ್ಚು ಹಚ್ಚಿದ ಅಶೋಕ: ಫೆ. 27ಕ್ಕೆ ರಿಲೀಸ್

ಸತೀಶ್ ನೀನಾಸಂ ಅಭಿನಯ ಬಹು ನಿರೀಕ್ಷಿತ ಸಿನಿಮಾ ದಿ ರೈಸ್ ಆಫ್ ಅಶೋಕ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಇದೇ ತಿಂಗಳ 27ರಂದು ಬಹು ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಈಗಾಗಲೇ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದ್ದು, ಅದರ ಭಾಗವಾಗಿ ನಿನ್ನೆ ಬೆಂಗಳೂರಿನ ಜಿಟಿ ಮಾಲ್ ನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ದಿ ರೈಸ್ ಆಫ್ ಅಶೋಕ ಟ್ರೇಲರ್ ಲಾಂಚ್ ಈವೆಂಟ್​​ಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಸಾಥ್ ಕೊಟ್ಟರು. ರವಿಚಂದ್ರನ್​, ದುನಿಯಾ ವಿಜಯ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ದಿಗಂತ್, ನಾಗಭೂಷಣ್ ಮತ್ತು ಶಿವರಾಜ್ ಕೆ ಆರ್ ಪೇಟೆ ಮೊದಲಾದವರು ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ವೇಳೆ ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡಿ, ಸತೀಶ್ ಚಿತ್ರದ ಟ್ರೇಲರ್, ಹಾಡು ಯಾವುದು ಕಾಣಿಸಲಿಲ್ಲ. ನಿನ್ನ ಕಣ್ಣಲ್ಲಿ ನೀರು ಕಾಣಿಸಿತು. ಅದು ಹೊರಗಡೆ ಬರಲಿಲ್ಲ. ನೀನು ಅಲ್ಲೇ ಅರ್ಧ ಗೆದ್ದಾಯ್ತು. ಗಂಡ್ಸು ಕಣ್ಣೀರು ಹಾಕಬಾರದು.‌ ಒಳಗೆ ಇಟ್ಟುಕೊಳ್ಳಬೇಕು. ಸಿನಿಮಾ ಮೇಲೆ ಪ್ರೀತಿ, ಆಸೆ, ಕನಸು ಇದೆ ಅನ್ನೋದು ನಿನ್ನ ಮಾತು, ನಿನ್ನ ಸ್ನೇಹಿತರು ಹೇಳ್ತಾರೆ. ನಿನ್ನ ಕನಸು, ಆಸೆ ನಿಜ ಆಗಲಿ. ಹೆಣ್ಮಕ್ಕಳಿಗೆ ಡೆಲಿವರಿ ನೋವು ಗೊತ್ತು. ಆದರೆ ಪ್ರತಿ ಸಿನಿಮಾ ಮಾಡುವಾಗ ಆಗುವುದು ಡೆಲಿವರಿ ನೋವೇ. ಆ ಆಪರೇಷನ್ ಮಾಡುವುದು ಪ್ರೇಕ್ಷಕರು. ಸಿಸರಿನ್ ಮಾಡುವುದು ನೀವೇ.‌ ಮೊದಲು ಆಪರೇಷನ್ ಮಾಡಿ.‌ ಮೊದಲು ಬದುಕಿಸಲು ಪ್ರಯತ್ನಿಸಿ. ಮೊದಲು ಸಿನಿಮಾ ನೋಡಿ. ಪ್ರೇಕ್ಷಕರ ಆಗಿ ಸಿನಿಮಾಗೆ ಹೋಗಿ. ವಿಮರ್ಶೆ ಮಾಡಲು ಹೋಗಬೇಡಿ. ಸಿನಿಮಾದವರು ಲೈಕ್ ಗೆ ಸಾಯುವುದನ್ನು ಬಿಡಿ.

ಪ್ರೇಕ್ಷಕರನ್ನು ಸಿನಿಮಾ ಥಿಯೇಟರ್ ನಲ್ಲಿ ಸಿನಿಮಾ ನೋಡಲು ಬಿಡಿ. ಎರಡೂವರೆ ಗಂಟೆ ಅವರನ್ನು ಮೈಮರೆಸಲು ಬಿಡಿ. ಚೆನ್ನಾಗಿ ಆಗಲಿ ಎಂದು ಬಯಸುತ್ತೇವೆ. ಚೆನ್ನಾಗಿ ಮಾಡುವುದು ಸಿನಿಮಾದವರ ಕೆಲಸ. ಒಬ್ಬನಿಗೆ ನೂರು ರೂಪಾಯಿ ಕೊಟ್ಟು ಸಿನಿಮಾ ನೋಡಿ. ಒಂದಷ್ಟು ಸಿನಿಮಾ ಗೆಲ್ಸಿ ಎಂದು ಪ್ರೇಕ್ಷಕರಿಗೆ ಕಿವಿ ಮಾತು ಹೇಳಿದರು.

ನಟ ನೀನಾಸಂ ಸತೀಶ್ ಮಾತನಾಡಿ, ರವಿಚಂದ್ರನ್ ನಮಗೆ ತಂದೆ ಸಮನ. ವಿಜಿ ಸರ್ ಒಂದು ಕಾಲ್ ಗೆ ಬಂದ್ರು.‌ಯೋಗಿ ನನ್ನ ಗೆಳೆಯ. ವಸಿಷ್ಠ ಹಾರ್ಟ್ಲಿ ಮಾತನಾಡುವ ಗೆಳೆಯ. ನಾಗಭೂಷಣ್, ದಿಗ್ಗಿ, ಕೆಆರ್ ಪೇಟೆ ಎಲ್ಲರೂ ನನಗೆ ಸಪೋರ್ಟ್ ಮಾಡಲು ಬಂದಿರುವುದಕ್ಕೆ ಧನ್ಯವಾದ. ನಮ್ಮ ದಿ ರೈಸ್ ಆಫ್ ಅಶೋಕ ಸಿನಿಮಾವನ್ನು ಇದೇ ತಿಂಗಳ 27 ರಂದು ಪ್ರೇಕ್ಷಕರ ಮುಂದೆ ಇಡುತ್ತಿದ್ದೇವೆ. ನೀವು ಸಾಂಗ್ ನೋಡಿದ್ದೀರಾ? ನನ್ನ ಸ್ನೇಹಿತರು ಎಲ್ಲರೂ ಟ್ರೇಲರ್ ಲಾಂಚ್ ಗೆ ಬಂದಿದ್ದಾರೆ. ಸಪ್ತಮಿ ನನ್ನ ರೀತಿ ಚಿತ್ರದ ಹೀರೋ. ತೆಲುಗು, ತಮಿಳು ಮಾಡ್ತೀನಿ ಎಂದು ಹೇಳಿಕೊಂಡು ಬರ್ತಿದ್ದೆ. ಎಲ್ಲರೂ ಇವನಿಗೆ ಕೆಜಿಎಫ್, ಕಾಂತಾರ ಹುಚ್ಚು ಹಿಡಿದಿದೆ ಎಂದು ಮಾತನಾಡಿಕೊಂಡರು.

ನನಗೆ ಕೆಜಿಎಫ್, ಕಾಂತಾರ ಹುಚ್ಚು ಹಿಡಿದಿಲ್ಲ. ನನ್ನ ಸಿನಿಮಾದ ಹುಚ್ಚು ಅದು.‌ ನಮ್ಮ ಸಿನಿಮಾವನ್ನು ಅವರು ನೋಡಲಿ. ಮೊದಲ ಚಿತ್ರ ತೋರಿಸಿದೆ. ಸಿನಿಮಾ ಸಖತ್ ಆಗಿ ಇದೆ ಎಂದು ತೆಲುಗು, ತಮಿಳಿನಲ್ಲಿ 200 ಥಿಯೇಟರ್ ನಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಸಿನಿಮಾ ಬಗ್ಗೆ ಜಾಸ್ತಿ ಮಾತಾನಾಡಲ್ಲ. ಇದೇ ತಿಂಗಳ 27ಕ್ಕೆ ದಿ ರೈಸ್ ಆಫ್ ಅಶೋಕ ತೆರೆಗೆ ಬರ್ತಿದೆ. ಎರಡೂವರೆ ಕಾಲ ನನ್ನ ಕಷ್ಟ ಕಾಲದಲ್ಲಿ ನಿಂತ ಎಲ್ಲರಿಗೂ ಧನ್ಯವಾದ ಎಂದರು.

ದಿ ರೈಸ್ ಆಫ್ ಅಶೋಕದಲ್ಲಿ ಸತೀಶ್​ಗೆ ಜೋಡಿಯಾಗಿ ಕಾಂತಾರ ಸಿನಿಮಾ ಖ್ಯಾತಿಯ ಸಪ್ತಮಿ ಗೌಡ ನಟಿಸಿದ್ದಾರೆ. ಬಿ.ಸುರೇಶ್, ರವಿಶಂಕರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ, ಡ್ರಾಗನ್ ಮಂಜು, ವಿಕ್ರಮ್ ವೇದ ಖ್ಯಾತಿಯ ಹರೀಶ್ ಪೆರಾಡಿ, ಜಗಪ್ಪ ತಾರಾಬಳಗದಲ್ಲಿದ್ದಾರೆ.

ದಿ ರೈಸ್ ಆಫ್ ಅಶೋಕ ಚಿತ್ರ ಇದೇ ತಿಂಗಳು ರಿಲೀಸ್ ಆಗುತ್ತಿದೆ. ದೊಡ್ಡಮಟ್ಟದಲ್ಲಿಯೇ ಈ ಸಿನಿಮಾ ತೆರೆಗೆ ಬರ್ತಿದೆ. ಕನ್ನಡ ಅಷ್ಟೆ ಅಲ್ಲ, ಇತರ ಭಾಷೆಯಲ್ಲೂ ಈ ಸಿನಿಮಾ ಬಿಡುಗಡೆಯಾಗುತ್ತಿದೆ.

ಈ ಚಿತ್ರ ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಪ್ರೊಡಕ್ಷನ್ ನಡಿ ಮೂಡಿ‌ಬರ್ತಿದೆ. ವರ್ಧನ್ ನರಹರಿ, ಜೈಷ್ಣವಿ ಜೊತೆ ಸೇರಿ ಸತೀಶ್ ನೀನಾಸಂ ಕೂಡಾ ಸಿನಿಮಾಗೆ ಹಣ ಹಾಕಿದ್ದಾರೆ.

Categories
ಸಿನಿ ಸುದ್ದಿ

ಉತ್ತರ ಕರ್ನಾಟಕ ಭಾಗದ ಮೊದಲ ವೆಬ್ ಸಿರೀಸ್ ರಾಕ್ಷಸ ಪ್ರೀಮಿಯರ್ ಶೋ

ನಾಳೆಯಿಂದ zee5ನಲ್ಲಿ ರಾಕ್ಷಸ ವೆಬ್ ಸಿರೀಸ್ ಸ್ಟ್ರೀಮಿಂಗ್..

ಪ್ರತಿಷ್ಟಿತ ಒಟಿಟಿಗಳಲ್ಲಿ ಒಂದಾದ zee5 ಕನ್ನಡದಲ್ಲಿ ವೆಬ್ ಸಿರೀಸ್ ನಿರ್ಮಾಣಕ್ಕಿಳಿದಿರುವುದು ಗೊತ್ತೇ ಇದೆ.‌ ಈಗಾಗಲೇ ಅಯ್ಯನ ಮನೆ, ಮಾರಿಗಲ್ಲು ಸೇರಿದಂತೆ ಹಲವು ವೆಬ್ ಸರಣಿಗಳನ್ನು ಪ್ರೇಕ್ಷಕರ ಮಡಿಲಿಗೆ ಹಾಕಿದೆ. ಇದೀಗ ಇದೇ ತಿಂಗಳ 20ರಿಂದ zee5ನಲ್ಲಿ ರಾಕ್ಷಸ ವೆಬ್ ಸಿರೀಸ್ ಪ್ರಸಾರವಾಗಲಿದೆ.

ನಟ ವಿಜಯ್ ರಾಘವೇಂದ್ರ ಅವರ ಚೊಚ್ಚಲ ವೆಬ್ ಸರಣಿ ಇದಾಗಿದೆ. ಮಲಪ್ರಭಾ ನದಿ ತೀರದ ನಿಗೂಢ ಮೊಸಳೆ ದಾಳಿಗಳ ಸುತ್ತ ಈ ಕಥೆಯನ್ನು ಹೆಣೆಯಲಾಗಿದೆ. ನಿನ್ನೆ ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಲ್ಲಿ ರಾಕ್ಷಸ ಪ್ರೀಮಿಯರ್ ಶೋ ಹಾಗೂ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ
Zee5 ಬ್ಯುಸಿನೆಸ್ ಹೆಡ್ ದೀಪಕ್ ತಿಮ್ಮಯ್ಯ ಮಾತನಾಡಿ, zee5 ವೆಬ್ ಸಿರೀಸ್ ಜರ್ನಿ ಶುರು ಮಾಡಿದಾಗ, ಶೃತಿ ನಾಯ್ಡು ‌ಪ್ರೊಡಕ್ಷನ್, ಪಿಆರ್ ಕೆ, ಕೆಆರ್ ಜಿ ಈಗ ತರುಣ್ ಸುಧೀರ್ ಅವರು ಸಾಥ್ ಕೊಟ್ಟಿದ್ದಾರೆ. ನಾವು ಕೇಳಿದಾಗ ಸಿರೀಸ್ ಮಾಡಲು ಮುಂದೆ ಬಂದರು.

ಈ ಒಂದು ವರ್ಷ ನಾವು ಸಾಕಷ್ಟು ಕಲಿತಿದ್ದೇವೆ. ಈ ಕಲಿಯುವಿಕೆ ಇಷ್ಟು ಕೊಂಡು ಮುಂದಿನ ವರ್ಷ ಸಾಕಷ್ಟು ಜಾನರ್ ನೊಂದಿಗೆ ಬರುತ್ತಿದ್ದೇವೆ. ಸಿರೀಸ್ ಜೊತೆಗೆ ನಾನ್ ಫಿಕ್ಷನ್, ಟಿವಿ‌ ಫ್ಲಸ್ ಫ್ಲಸ್ ಸೇರಿದಂತೆ ಹಲವು ಫಾರ್ಮೆಟ್ ಜಾರಿಗೆ ತರುತ್ತೇವೆ. ರಾಕ್ಷಸ ಉತ್ತರ ಕರ್ನಾಟಕ ಭಾಗದ ಕಥೆ. ಕಲಾವಿದರು ಹಾಗೂ ನಿರ್ಮಾಪಕರು ಕೂಡ ಉತ್ತರ ಕರ್ನಾಟಕದವರೇ ಆಗಿದ್ದಾರೆ. 22ರಿಂದ 25 ನಿಮಿಷದ ಏಳು ಎಪಿಸೋಡ್ ಆಗಿ ಪ್ರಸಾರ ಆಗಲಿದೆ.‌ ನಿಮ್ಮ ಸಪೋರ್ಟ್ ಹೀಗೆ ಇರಲಿ. ಏಪ್ರಿಲ್ ನಿಂದ ಬೇರೆ ಬೇರೆ ಪ್ರಾಜೆಕ್ಟ್ ಜೊತೆ ಬರುತ್ತೇವೆ ಎಂದರು.

ನಿರ್ಮಾಪಕ ತರುಣ್ ಸುಧೀರ್ ಮಾತನಾಡಿ, ಈ ಪ್ರಾಜೆಕ್ಟ್ ಮಾಡಿರುವುದು ಬಹಳ ಖುಷಿ ಇದೆ. Zee5 ಇಡೀ ಟೀಂಗೆ ಧನ್ಯವಾದಗಳು. ಸಿನಿಮಾ ಅಂತಾ ಬಂದಾಗ ಥಿಯೇಟರ್ ಗೆ ಹೋಗುತ್ತೇ. ಕಲೆಕ್ಷನ್ ಆಗುತ್ತದೆ. ಅಲ್ಲಿ ಯಾವುದೇ ಚೌಕಟ್ಟು ಇರುವುದಿಲ್ಲ.‌ಆದರೆ ವೆಬ್ ಸಿರೀಸ್ ಮಾಡಿದಾಗ ಫ್ಲಾಟ್ ಫಾರ್ಮ್ ಸಪೋರ್ಟ್ ಬೇಕು. ಅದನ್ನು ರೆಡಿ ಮಾಡಿ ಎಲ್ಲಿ ಪ್ರೆಸೆಂಟ್ ಮಾಡುತ್ತೀರಾ? ಒಂದು ಫ್ಲಾಟ್ ಫಾರ್ಮ್ ಸಪೋರ್ಟ್ ಮಾಡಿದಾಗ ಇಂಡಸ್ಟ್ರಿ ಬೆಳೆಯಲು ಆಗುವುದು. ಬೇರೆ ಇಂಡಸ್ಟ್ರಿಯಲ್ಲಿ ಫ್ಲಾಟ್ ಫಾರ್ಮ್ ಸಪೋರ್ಟ್ ಮಾಡಿದ್ದಕ್ಕೆ ಅಲ್ಲಿ ವೆಬ್ ಸಿರೀಸ್ ಸಂಪ್ರದಾಯ ಶುರುವಾಗಿದೆ. ಇಲ್ಲಿ ಈಗ ಅದನ್ನು zee5 ಮಾಡುತ್ತಿದೆ. ಸುಹಾಸ್ ಹೇಳಿದ ಲೈನ್ ಇಷ್ಟವಾಯ್ತು. ನನಗೆ ಉತ್ತರ ಕರ್ನಾಟಕದ ಎಲಿಮೆಂಟ್ ನನ್ನ ಸಿನಿಮಾದಲ್ಲಿ ಇರಬೇಕು. ಅದನ್ನು ನನ್ನ ಸಿನಿಮಾದಲ್ಲಿ ಅಳವಡಿಸಿದ್ದೇನೆ.‌ಉತ್ತರ ಕರ್ನಾಟಕ ನಮ್ಮ ಕುಟುಂಬಕ್ಕೆ ಇರುವ ಕೊಡುಗೆ. ಪ್ರೀತಿ. ಅದನ್ನು ಈ ರೀತಿ ವಾಪಸ್ ನೀಡುತ್ತಿದ್ದೇನೆ. ಒಂದೊಳ್ಳೆ ತಂಡ ಈ ಸಿರೀಸ್ ನಲ್ಲಿ ಕೆಲಸ ಮಾಡಿದೆ. 89 ಪಾತ್ರಗಳು ಈ ಸಿರೀಸ್ ನಲ್ಲಿ ಇದ್ದಾರೆ. ‌ಅವರೆಲ್ಲರೂ ಉತ್ತರ ಕರ್ನಾಟಕ ಭಾಗದವರು. ವೆಬ್ ಸಿರೀಸ್ ಗೆ ಒಂದು ಪ್ರೆಸ್ ಮೀಟ್ ಮಾಡುತ್ತಿದ್ದೇವೆ ಅಂದರೆ ಇದು ಗ್ರೇಟ್ ಮೂವ್. ಇದೆಲ್ಲಾ zee5ನಿಂದ ಆಗಿದೆ ಎಂದರು.

ರಾಕ್ಷಸ, ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಮೊದಲ ವೆಬ್ ಸಿರೀಸ್. ಸೈಕಲಾಜಿಕಲ್ ಕ್ರೈಂ ಥ್ರಿಲ್ಲರ್ ಜಾನರ್ ಒಳಗೊಂಡಿರುವ ಸರಣಿಯಲ್ಲಿ ವಿಜಯ ರಾಘವೇಂದ್ರ,ಮಯೂರಿ, ಅವಿನಾಶ್, ಮಾಳವಿಕ, ಅಪ್ಪಣ್ಣ ಮತ್ತು ಅಭಿಜಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ರಾಕ್ಷಸ ವೆಬ್ ಸೀರಿಸ್‌ಗೆ ಸುಹಾನ್ ಪ್ರಸಾದ್ ಮತ್ತು ಅಪೂರ್ವ ಕಥೆ ಒದಗಿಸಿದ್ದಾರೆ. ಹಾಗೇ ಸುಹಾನ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಈ ವೆಬ್ ಸೀರಿಸ್ ಅನ್ನು ತರುಣ್ ಸುಧೀರ್ ಪ್ರೊಡಕ್ಷನ್ಸ್‌ನಲ್ಲಿ ಜನಪ್ರಿಯ ನಿರ್ದೇಶಕ ತರುಣ್‌ ಸುಧೀರ್ ನಿರ್ಮಿಸಿದ್ದಾರೆ.

Categories
ಸಿನಿ ಸುದ್ದಿ

20 ನಿಮಿಷದಲ್ಲೇ ಎಲ್ಲರ ಗಮನ ಸೆಳೆದ ಎರಡು ಕಿರುಚಿತ್ರ

ಮೈಸೂರಿನ ಪ್ರತಿಭೆಗಳ ಪ್ರತಿಭೆಗೆ ಫಿದಾ ಆದ ಪ್ರೇಕ್ಷಕರು

ಹಿರಿತೆರೆಯ ಚಿತ್ರಗಳಷ್ಟೇ ಈಗ ಕಿರುಚಿತ್ರಗಳು ಸಹ ಎಲ್ಲರ ಗಮನ ಸೆಳೆಯುತ್ತಿದೆ. ಅಂದುಕೊಂಡಿದ್ದನ್ನು ಕೆಲವೇ ನಿಮಿಷಗಳಲ್ಲಿ ದೃಶ್ಯರೂಪಕ್ಕೆ ತರುವುದು ಕಷ್ಟ. ಆದರೆ ಈಗಿನ ಯುವಪೀಳಿಗೆ ಅದನ್ನು ಸಾಧ್ಯ ಮಾಡುತ್ತಿದ್ದಾರೆ. ಇತ್ತೀಚೆಗೆ ರವೀಂದ್ರ ಜೋಶಿ ನಿರ್ಮಾಣದ, ಮಿಂಚು ಜೋಶಿ ನಿರ್ದೇಶನದ ಹಾಗೂ ಮಿಂಚು ಜೋಶಿ, ವಿಷ್ಣು ರಾಮನ್, ರಿಷಿ ರಾಮನ್ ಹಾಗೂ ಸಂದೀಪ್ ಶಿವಶಂಕರ್ ನಟನೆಯ “ಐ‌ ಸಿ ಯು” ಹಾಗೂ ರಾಮನ್ ಪ್ರೊಡಕ್ಷನ್ಸ್ ನಿರ್ಮಾಣದ,‌ ರಿಷಿ ರಾಮನ್ ರಚನೆ ಹಾಗೂ ನಿರ್ದೇಶನದ ಹಾಗೂ ರಿಷಿ ರಾಮನ್, ಅನಾಮಿಕ ದತ್ತ, ಪ್ರಜ್ವಲ್ ಕುಮಾರ್ ಹಾಗೂ ಮಾನಸ ರಾಜ್ ಗೌಡ ನಟನೆ ‘ಮಂಡಲ’ ಕಿರುಚಿತ್ರಗಳ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಎರಡು ಕಿರುಚಿತ್ರಗಳು ಇಪ್ಪತ್ತು ನಿಮಿಷಗಳ ಅವಿಧಿಯದಾಗಿದೆ. ಪ್ರದರ್ಶನದ ನಂತರ ಎರಡು ತಂಡದ ಸದಸ್ಯರು ಮಾತನಾಡಿದರು.

ನಾನು ಪರಂವಃ ಸ್ಟುಡಿಯೋಸ್ ನಿರ್ಮಾಣದ “ಸಕುಟುಂಬ ಸಮೇತ ಹಾಗೂ “ಇಬ್ಬನಿ ತಬ್ಬಿದ ಇಳೆಯಲಿ” ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಸ್ವತಂತ್ರ ನಿರ್ದೇಶನದ ಮೊದಲ ಹೆಜ್ಜೆಯಾಗಿ ಈ ಕಿರುಚಿತ್ರವನ್ನು ನಿರ್ದೇಶಿಸಿದ್ದೇನೆ. ಮುಂಬೈ ನಗರ ಜೀವನದ ಅಸ್ತವ್ಯಸ್ತ ಹಿನ್ನೆಲೆಯ ವಿರುದ್ಧ ಹೆಣೆಯಲಾದ “ಐ ಸಿ ಯು”, ಸಂಪರ್ಕ ಮತ್ತು ನಿಜವಾಗಿಯೂ ಕಾಣಲ್ಪಡುವುದರ ಬಗ್ಗೆ ಶಾಂತವಾದ, ವಯಸ್ಸಿಗೆ ಬರುವ ಸಂಬಂಧದ ನಾಟಕವಾಗಿದೆ.

ಈ ಚಿತ್ರವು ಯುವತಿಯೊಬ್ಬಳು ತನ್ನ ಸಂಬಂಧದಲ್ಲಿ ಕಠಿಣ ಹಂತವನ್ನು ಎದುರಿಸುವುದನ್ನು ಅನುಸರಿಸುತ್ತದೆ, ಅಲ್ಲಿ ಇಬ್ಬರೂ ಪಾಲುದಾರರು ಒಟ್ಟಿಗೆ ಇದ್ದರೂ ದೂರವಾಗುತ್ತಾರೆ. ಒಂದೇ ದಿನದ ಅವಧಿಯಲ್ಲಿ, ನಟನಾ ತರಗತಿಯ ವ್ಯಾಯಾಮವು ಅವಳನ್ನು ವಿರಾಮಗೊಳಿಸಲು, ಪ್ರತಿಬಿಂಬಿಸಲು ಮತ್ತು ತನ್ನದೇ ಆದ ಭಾವನಾತ್ಮಕ ಮಾದರಿಗಳನ್ನು ಎದುರಿಸಲು ಒತ್ತಾಯಿಸುತ್ತದೆ – ಇದು ಸ್ಪಷ್ಟತೆ ಮತ್ತು ಮರುಸಂಪರ್ಕದ ಕಡೆಗೆ ಪ್ರಮುಖ ಹೆಜ್ಜೆ ಇಡಲು ಅವಳನ್ನು ಕರೆದೊಯ್ಯುವುದೆ ಈ ಕಿರುಚಿತ್ರದ ಕಥಾಸಾರಾಂಶ. ಕನ್ನಡ, ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಈ ಕಿರುಚಿತ್ರ ಮೂಡಿಬಂದಿದೆ. ಸಹಕಾರ ನೀಡಿದ ತಂಡದ ಸದಸ್ಯರಿಗೆ ಧನ್ಯವಾದ ಎಂದರು ಮಿಂಚು ಜೋಶಿ.

“ಐ ಸಿ ಯು” ಕಿರುಚಿತ್ರದಲ್ಲಿ ನಟಿಸಿರುವ ವಿಷ್ಣು ರಾಮನ್, ರಿಷಿ ರಾಮನ್, ಸಂಗೀತ ನಿರ್ದೇಶಕ ಜುಬಿನ್ ಪಾಲ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

“ಮಂಡಲ” ಕಿರುಚಿತ್ರದ ಕುರಿತು ಮಾತನಾಡಿದ ನಿರ್ದೇಶಕ, ನಟ ರಿಷಿ ರಾಮನ್, “ಮಂಡಲ” ಎಂಬುದು ವಿದೇಶದಲ್ಲಿ ವಾಸಿಸುವ ಭಾರತೀಯ ದಂಪತಿಗಳ ಬಗ್ಗೆ ಒಂದು ಮನೋವೈಜ್ಞಾನಿಕ ಥ್ರಿಲ್ಲರ್ ಆಗಿದ್ದು, ಅವರ ಸಾಂದರ್ಭಿಕ LSD ಪ್ರಯೋಗವು ಮತಿವಿಕಲ್ಪ, ಆನುವಂಶಿಕ ಆಘಾತ ಮತ್ತು ಭಾವನಾತ್ಮಕ ಹಿಂಸೆಯ ರಾತ್ರಿಯಾಗಿ ಸುರುಳಿಯಾಗುತ್ತದೆ.

ಸಂಬಂಧದ ವಾದವು ದೇವ್‌ ನ ಬಾಲ್ಯದ ಪ್ರೇತಗಳೊಂದಿಗೆ – ಅವನ ಹೆತ್ತವರಲ್ಲಿ ಸಾಕಾರಗೊಂಡಿರುವ – ಅವಾಸ್ತವಿಕ ಮುಖಾಮುಖಿಯಾಗಿ ರೂಪಾಂತರಗೊಳ್ಳುತ್ತದೆ – ಚಿತ್ರವನ್ನು ನಿಕಟ ಮಾನಸಿಕ ಮುತ್ತಿಗೆಯಾಗಿ ಪರಿವರ್ತಿಸುತ್ತದೆ. ಇದು ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯಾಗಿದೆ. ಒಂದೇ ಮನೆಯಲ್ಲಿ ಚಿತ್ರೀಕರಣ ನಡೆದಿದೆ‌. ಕ್ರೌಡ್ ಫಂಡಿಂಗ್ ನಲಿ ಈ ಚಿತ್ರ ಮಾಡಲಾಗಿದೆ. ಮುಂದೆ ಹಿರಿತೆರೆಯಲ್ಲೂ ಚಿತ್ರ ನಿರ್ದೇಶಿಸುವ ಯೋಚನೆ ಇದೆ ಎಂದರು.

ಛಾಯಾಗ್ರಾಹಕ ಸಂಜಿತ್ ಸಿಂಗ್, ಸಂಕಲನಕಾರ ಮಹೀಂದ್ರ ಹಾಗೂ ಸಂಗೀತ ನಿರ್ದೇಶಕ ನಂದನ್ ಶ್ರೀನಿವಾಸ್ ಮುಂತಾದವರು “ಮಂಡಲ”ದ ಬಗ್ಗೆ ಮಾತನಾಡಿದರು. ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಈ ಕಿರುಚಿತ್ರ ಮೂಡಿಬಂದಿದೆ.

Categories
ಸಿನಿ ಸುದ್ದಿ

ಕಮಲ್ ಹಾಸನ್-ಶಿವಕಾರ್ತಿಕೇಯನ್ ಜೋಡಿಯ ಹೊಸ ಸಿನಿಮಾಗೆ ಸಿಯೋನ್ ಟೈಟಲ್ ಫಿಕ್ಸ್..

ಕಮಲ್ ಹಾಸನ್ ನಿರ್ಮಾಣದಲ್ಲಿ ಶಿವಕಾರ್ತಿಕೇಯನ್ ಹೊಸ ಸಿನಿಮಾದ ಟೈಟಲ್ ರಿವೀಲ್…ಸಿಯೋನ್ ಆಗಿ ಬಂದ ಅಮರನ್ ಹೀರೋ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಕಮಲ್ ಹಾಸನ್ ಹಾಗೂ ಶಿವಕಾರ್ತಿಯೇನ್ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಈ ಹಿಂದೆ ಕಮಲ್ ನಿರ್ಮಿಸಿದ್ದ ಅಮರನ್ ಸೂಪರ್ ಹಿಟ್ ಕಂಡಿತ್ತು. ಈ ಚಿತ್ರದಲ್ಲಿ ಶಿವಕಾರ್ತಿಕೇಯನ್ ನಾಯಕನಾಗಿ ನಟಿಸಿದ್ದರು. ಇದೀಗ ಈ ಜೋಡಿ ಸಿಯೋನ್ ಎಂಬ ಸಿನಿಮಾಗಾಗಿ ಮತ್ತೆ ಒಂದಾಗಿದ್ದಾರೆ.

ರಾಜ್ ಕಮಲ್ ಇಂಟರ್ನ್ಯಾಷನಲ್
ಹಾಗೂ ಟರ್ಮಿರಿಕ್ ಮೀಡಿಯಾ ಬ್ಯಾನರ್ ನಡಿ ಕಮಲ್ ಹಾಸನ್ ಹಾಗೂ ಆರ್ ಮಹೇಂದ್ರನ್ ನಿರ್ಮಾಣದಲ್ಲಿ ಸಿಯೋನ್ ಸಿನಿಮಾ ಮೂಡಿ ಬರ್ತಿದೆ. ಶಿವಕಾರ್ತಿಕೇಯನ್ ಹುಟ್ಟುಹಬ್ಬದ ವಿಶೇಷವಾಗಿ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. ಹಣೆಯಲ್ಲಿ ವಿಭೂತಿ ಧರಿಸಿ, ಕೈಯಲ್ಲಿ ಕತ್ತಿ ಹಿಡಿದು ಶಿವಕಾರ್ತಿಕೇಯನ್ ಮಾಸ್ ಅವತಾರ ತಾಳಿದ್ದಾರೆ.

ಥಾಯ್ ಕಿಝವಿ ಸಿನಿಮಾ ನಿರ್ದೇಶಿಸಿರುವ ಶಿವಕುಮಾರ್ ಮುರುಗೇಶನ್ ಸಿಯೋನ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ‌. ಸಂತೋಷ್ ನಾರಾಯಣ್ ಸಂಗೀತ, ವಿವೇಕ್ ವಿಜಯಕುಮಾರ್ ಛಾಯಾಗ್ರಹಣ, ಸ್ಯಾನ್ ಲೋಕೇಶ್ ಸಂಕಲನ ಚಿತ್ರಕ್ಕಿದೆ. ಇದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ವಿಶ್ವಾದ್ಯಂತ ಚಿತ್ರ ಬಿಡುಗಡೆ ಮಾಡಲು ಸಿನಿಮಾ ಟೀಂ ಯೋಜನೆ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ಸಾನ್ವಿ ಸುದೀಪ್ ಧ್ವನಿಯಾದ ಮಸ್ತ್ ಮಲೈಕಾ ಸಾಂಗ್ ಮೆಚ್ಚಿದ ಬಾಲಿವುಡ್ ಭಾಯಿಜಾನ್

ಕಿಚ್ಚ ಸುದೀಪ್ ಮಗಳ ಕಂಠಕ್ಕೆ ಸಲ್ಮಾನ್ ಖಾನ್ ಫಿದಾ..ಮಸ್ತ್ ಮಲೈಕಾ ಬಗ್ಗೆ ಹೇಳಿದ್ದೇನು ಭಾಯಿಜಾನ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಅದರಲ್ಲೂ ಚಿತ್ರದ ಮಸ್ತ್ ಮಲೈಕಾ ಹಾಡು ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ. ಮಿಲಿಯನ್ ಗಟ್ಟಲೇ ವೀವ್ಸ್ ಕಂಡಿರುವ ಈ ಗೀತೆಗೆ ಧ್ವನಿಯಾದವರು ಕಿಚ್ಚನ ಮುದ್ದಿನ ಪುತ್ರಿ ಸಾನ್ವಿ ಸುದೀಪ್.

ಸಾನ್ವಿ ಸುದೀಪ್ ಕಂಠ ಕಾಣಿಸಿರುವ ಮಸ್ತ್ ಮಲೈಕಾ ಹಾಡನ್ನು ಬಾಲಿವುಡ್ ಭಾಯಿಜಾನ್ ಮೆಚ್ಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ಹಾಡಿನ ಲಿಂಕ್​ ಅನ್ನು ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ‘ಸುಂದರವಾದ ಹಾಡು, ಒಳ್ಳೆಯದಾಗಲಿ’ ಎಂದು ಸಲ್ಲು ಬರೆದುಕೊಂಡಿದ್ದಾರೆ. ಈ ಸ್ಟೋರಿಯಲ್ಲಿ ಕಿಚ್ಚ ಸುದೀಪ್ ಹಾಗೂ ಸಾನ್ವಿಯನ್ನು ಟ್ಯಾಗ್ ಮಾಡಿದ್ದಾರೆ.

ಸಲ್ಮಾನ್ ಖಾನ್ ಕೊಟ್ಟ ಈ ಮೆಚ್ಚುಗೆಗೆ ಸಾನ್ವಿ ಫುಲ್ ಖುಷ್ ಆಗಿದ್ದಾರೆ. ‘ಎಂತಹ ಅದ್ಭುತ ಗೌರವ. ಧನ್ಯವಾದಗಳು ಸಲ್ಮಾನ್ ಸರ್’ ಎಂದು ಸಾನ್ವಿ ತಮ್ಮ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಸಲ್ಲು ಹಾಗೂ ಕಿಚ್ಚ ಸುದೀಪ್ ಆಪ್ತ ಗೆಳೆಯರು. ಇವರಿಬ್ಬರೂ ದಬಾಂಗ್ 3 ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಸಲ್ಮಾನ್ ಹಾಗೂ ಸುದೀಪ್ ಎರಡು ಕುಟುಂಬದ ನಡುವೆ ಒಳ್ಳೆ ಒಡನಾಟವಿದೆ. ಈಗ ಕಿಚ್ಚನ ಮಗಳ ಧ್ವನಿಗೆ ಸಲ್ಲುಮೀಯಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸುದೀಪ್ ಪುತ್ರಿ ಸಾನ್ವಿ ಖುಷಿಯಾಗಿದ್ದಾರೆ.

Categories
ಸಿನಿ ಸುದ್ದಿ

ತಮ್ಮ ಸುಖಾಗಮನ ಬಯಸುವ ಗಣೇಶ್!

ಮಹಾ ಶಿವರಾತ್ರಿಯ ಶುಭ ದಿ‌ನ ಶುರುವಾಯಿತು ಗಣೇಶ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರ

ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಸೆಳೆದಿರುವ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ಹಾಗೂ “ಹೊಂದಿಸಿ ಬರೆಯಿರಿ”, “ತೀರ್ಥರೂಪ ತಂದೆಯವರಿಗೆ” ಅಂತಹ ಉತ್ತಮ ಚಿತ್ರಗಳ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ”ತಮ್ಮ ಸುಖಾಗಮನ ಬಯಸುವ” ಚಿತ್ರಕ್ಕೆ ಚಾಲನೆ ಸಿಕ್ಕಿದೆ.

ವೈಷ್ಣವಿ ಫಿಲಂಸ್ ಮೂಲಕ ವಿಜಯ್ ಲೋಹಿತ್ ಅವರು ನಿರ್ಮಿಸುತ್ತಿರುವ, ಸತೀಶ್ ಎಚ್ ಗೌಡ ಅವರ ಸಹ ನಿರ್ಮಾಣವಿರುವ ಹಾಗೂ ಶೀರ್ಷಿಕೆಯಿಂದಲೇ ಎಲ್ಲರ ಗಮನ ಸೆಳೆದಿರುವ “ತಮ್ಮ ಸುಖಾಗಮನ ಬಯಸುವ” ಚಿತ್ರದ ಮುಹೂರ್ತ ಸಮಾರಂಭ ಮಾಹಾ ಶಿವರಾತ್ರಿಯ ಶುಭದಿನದಂದು ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಶಿಲ್ಪ ಗಣೇಶ್ ಅವರು ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗಣೇಶ್ ಅವರ ಸಾಕಷ್ಟು ಅಭಿಮಾನಿಗಳು ಹಾಗೂ ಸ್ನೇಹಿತರು ಮುಹೂರ್ತ ಸಮಾರಂಭಕ್ಕೆ ಸಾಕ್ಷಿಯಾದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ಇಂದು ನನ್ನ “ಗೋಲ್ಡನ್” ದಿನ ಎಂದು ಮಾತನಾಡಿದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ, 2006 ರಲ್ಲಿ “ಮುಂಗಾರು ಮಳೆ” ತೆರೆ ಕಂಡಾಗ ನಾನು ಎಂಜಿನಿಯರಿಂಗ್ ವಿದ್ಯಾರ್ಥಿ. ಆ ಸಿನಿಮಾವನ್ನು ಎಷ್ಟು ಬಾರಿ ನೋಡಿದ್ದೇನೊ ಲೆಕ್ಕ ಇಲ್ಲ. ಇಂದು ಅವರ ಜೊತೆಗೆ ಸಿನಿಮಾ ಮಾಡುತ್ತಿರುವುದು ಬಹಳ ಖುಷಿಯಾಗಿದೆ. ಇದು ಗಣೇಶ್ ಅವರ ಇಪ್ಪತ್ತು ವರ್ಷಗಳ ಜರ್ನಿಯನ್ನು ಸಂಭ್ರಮಿಸುವ ಸಮಯ. “ತೀರ್ಥರೂಪ ತಂದೆಯವರಿಗೆ” ಚಿತ್ರದ ಚಿತ್ರೀಕರಣ ಸಮಯದಲ್ಲಿ ನನ್ನ ಸ್ನೇಹಿತನ ಮೂಲಕ ಗಣೇಶ್ ಅವರನ್ನು ಸಂಪರ್ಕ ಮಾಡಿ ಈ ಚಿತ್ರದ ಕಥೆ ಹೇಳಿದೆ. ಇದು ಗಣೇಶ್ ಅವರಿಗಾಗಿಯೇ ಬರೆದಿರುವ ಕಥೆ. ಈ ಕಥೆಗೆ ಅವರೆ ಸೂಕ್ತ ನಾಯಕ. ಇದೊಂದು ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ ಹಾಗೂ ಎಮೋಷನಲ್ ಡ್ರಾಮ. ವೈಷ್ಣವಿ ಫಿಲಂಸ್ ಲಾಂಛನದಲ್ಲಿ ವಿಜಯ್ ಲೋಹಿತ್ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಸತೀಶ್ ಎಚ್ ಗೌಡ ಅವರ ಸಹ ನಿರ್ಮಾಣವಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಉಳಿದ ತಾರಾಬಳಗ ಹಾಗೂ ತಂತ್ರಜ್ಞರ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡುತ್ತೇವೆ. ಇನ್ನೂ, ಶೀರ್ಷಿಕೆಯ ಬಗ್ಗೆ ಹೇಳುವುದಾದರೆ, ಶೀರ್ಷಿಕೆ ಬಳಕೆಗೆ ಹತ್ತಿರವಾಗಿರಬೇಕು. ಜನರಿಗೆ ಆಪ್ತವಾಗಬೇಕು. ನನ್ನ ಹಿಂದಿನ ಎರಡು ಚಿತ್ರಗಳ ಶೀರ್ಷಿಕೆಗಳು ಹಾಗೆ ಇತ್ತು. ಈ ಶೀರ್ಷಿಕೆ ಕೂಡ ಜನರಿಗೆ ಆಪ್ತವಾಗುತ್ತದೆ ಜೊತೆಗೆ ಕಥೆಗು ಹಾಗೂ ಪಾತ್ರಗಳಿಗೂ ಪೂರಕವಾಗಿದೆ ಎಂದರು.

“ಮುಂಗಾರು ಮಳೆ” 2006 ರಲ್ಲಿ ಬಿಡುಗಡೆಯಾಗಿದ್ದು, ಈಗ 2026. ಇಪ್ಪತ್ತು ವರ್ಷಗಳಾಗಿದೆ. ಇಪ್ಪತ್ತು ವರ್ಷಗಳು ಹೇಗೆ ಕಳೆಯಿತು ಗೊತ್ತಾಗಲಿಲ್ಲ. ದೇವರು ನನಗೆ ಒಳ್ಳೆಯ ನಿರ್ಮಾಪಕರು, ನಿರ್ದೇಶಕರು, ಬರಹಗಾರರು ಹಾಗೂ ನಿಮ್ಮೆಲ್ಲರ ಪ್ರೀತಿ ಕೊಟ್ಟಿದ್ದಾನೆ. ಇದು ಹೀಗೆ ಮುಂದುವರೆಯಲಿ. ಇನ್ನೂ, ಒಂದು ದಿನ ಸ್ನೇಹಿತರೊಬ್ಬರು ಫೋನ್ ಮಾಡಿ ನನ್ನ ಸ್ನೇಹಿತ ಒಂದು ಸ್ಕ್ರಿಪ್ಟ್ ಮಾಡಿಕೊಂಡಿದ್ದಾನೆ. ಅದು ನಿಮಗಾಗಿಯೇ ಮಾಡಿರುವ ಕಥೆಯಂತೆ ಎಂದರು. ನಾನು ಯಾರು ಅಂತ ಕೇಳಿದೆ. ರಾಮೇನಹಳ್ಳಿ ಜಗನ್ನಾಥ. “ಹೊಂದಿಸಿ ಬರೆಯಿರಿ” ನಿರ್ದೇಶಕರು ಎಂದರು. ಹೌದಾ. ನಾನು ಆ ಸಿನಿಮಾ ನೋಡಿದ್ದೇನೆ. ಬಹಳ ಚೆನ್ನಾಗಿದೆ. ಅವರೊಬ್ಬ ಸೆನ್ಸಿಬಲ್ ರೈಟರ್. ಮನುಷ್ಯನ ಭಾವನೆಗಳನ್ನು ಆ ಚಿತ್ರದಲ್ಲಿ ತುಂಬಾ ಚೆನ್ನಾಗಿ ಹೇಳಿದ್ದಾರೆ ಅಂದೆ. ಆನಂತರ ಜಗನ್ನಾಥ ಅವರು ಬಂದು ಕಥೆ ಹೇಳಿದರು.

ಕಥೆ ಕೇಳುವಾಗಲೇ ಸಂತೋಷದಲ್ಲಿ ಅಳು ಬಂತು. ಅಂತಹ ಅಪರೂಪದ ಕಥೆ ಇದು. ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವಾದರೂ, ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ನಿರ್ದೇಶಕರ ಹಿಂದಿನ ಎರಡು ಚಿತ್ರಗಳ ಶೀರ್ಷಿಕೆಗಳು ಬಹಳ ಚೆನ್ನಾಗಿತ್ತು. ನಮ್ಮ ಚಿತ್ರಕ್ಕೂ ಇಂತಹ ಶೇರ್ಷಿಕೆಯನ್ನೇ ಆಯ್ಕೆ ಮಾಡಿ ಎಂದು ಹೇಳಿದ್ದೆ. “ತಮ್ಮ ಸುಖಾಗಮನ ಬಯಸುವ” ಎಂದು ಎಲ್ಲರಿಗೂ ಪ್ರಿಯವಾಗುವ ಶೀರ್ಷಿಕೆ ಇಟ್ಟಿದ್ದಾರೆ. ಚಿತ್ರವನ್ನು ಸಹ ಚೆನ್ನಾಗಿ ಮಾಡುತ್ತಾರೆ ಎಂಬ ಭರವಸೆ ಇದೆ. ಅದಕ್ಕೆ ನಿರ್ಮಾಪಕರು ಸಹಕಾರ ನೀಡುತ್ತಾರೆ. ಇನ್ನೂ, ಅರ್ಜುನ್ ಜನ್ಯ ಹಾಗೂ ನನ್ನ ಕಾಂಬಿನೇಶನ್ ನಲ್ಲಿ ಸಾಕಷ್ಟು ಜನಪ್ರಿಯ ಹಾಡುಗಳು ಬಂದಿದೆ. ಈ ಚಿತ್ರದಲ್ಲೂ ಸುಮಧುರ ಹಾಡುಗಳಿರಲ್ಲಿದೆ ಎಂದು ನಾಯಕ ಗಣೇಶ್ ತಿಳಿಸಿದರು.

ಇದು ನಮ್ಮ ಸಂಸ್ಥೆಯ ಎರಡನೇ ಚಿತ್ರ. ಮೊದಲ ಚಿತ್ರಕ್ಕೆ ತಾವು ನೀಡಿದ ಪ್ರೋತ್ಸಾಹ ಈ ಚಿತ್ರಕ್ಕೂ ಮುಂದುವರೆಯಲಿ ಎಂದರು ನಿರ್ಮಾಪಕ ವಿಜಯ್ ಲೋಹಿತ್. ಸಹ ನಿರ್ಮಾಪಕ ಸತೀಶ್ ಎಚ್ ಗೌಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಸೀತಾಳ ವಂಡರ್ ಫುಲ್ ಜರ್ನಿ!

ಚಿತ್ರ ವಿಮರ್ಶೆ: ವಿಭ

ಚಿತ್ರ: ಸೀತಾ ಪಯಣ
ನಿರ್ದೇಶನ: ಅರ್ಜುನ್ ಸರ್ಜಾ
ನಿರ್ಮಾಣ: ಅರ್ಜುನ್ ಸರ್ಜಾ
ತಾರಾಗಣ: ಐಶ್ವರ್ಯ ಅರ್ಜುನ್ ಸರ್ಜಾ, ನಿರಂಜನ್ ಸುಧೀಂದ್ರ, ಪ್ರಕಾಶ್ ರೈ, ಸತ್ಯರಾಜ್, ಸುಮಿತ್ರ, ಅರ್ಜುನ್ ಸರ್ಜಾ, ಧ್ರುವ ಸರ್ಜಾ ಇತರರು.

ಏನಾದ್ರು ಹೇಳಬೇಕಾ..?
ಸಿನಿಮಾ ಶುರುವಿಗೆ ಈ
ಡೈಲಾಗ್ ಬರುತ್ತೆ. ಈ ಡೈಲಾಗ್ ಬರುವ ಹಿಂದೆ ಸಾಕಷ್ಟು ಘಟನೆಗಳು ನಡೆದು ಹೋಗಿರುತ್ತೆ. ಆ ಕಥೆಯ ಜರ್ನಿ ನಡುವಿನ ಸ್ವಾರಸ್ಯಕರ ಸಂಗತಿಗಳು ಏನು ಅಂತ ತಿಳಿಯುವ ಕುತೂಹಲವಿದ್ದರೆ, ಜಾಲಿಯಾಗಿ ಸೀತಾಪಯಣ ನೋಡಬಹುದು.

ಇದೊಂದು ಕುಟುಂಬ ಸಮೇತ ಕುಳಿತು ನೋಡಬಹುದಾದ ಚಿತ್ರ. ಒಂದೊಳ್ಳೆಯ ಕಥೆ ಮೂಲಕ ನೋಡುಗರ ಮನಸ್ಸು ಖುಷಿಪಡಿಸುವಲ್ಲಿ ನಿರ್ದೇಶಕ ಅರ್ಜುನ್ ಸರ್ಜಾ ಅವರು ಯಶಸ್ವಿಯಾಗಿದ್ದಾರೆ.

ಇಲ್ಲಿ ಮಧುರ ಭಾವನೆಗಳಿವೆ. ಮರೆಯಲಾರದ ಸಂಬಂಧಗಳ ಮೌಲ್ಯಗಳಿವೆ. ಅಲ್ಲಲ್ಲಿ ಕಚಗುಳಿಯ ದೃಶ್ಯಾವಳಿಗಳಿವೆ. ಆಗಾಗ ಎದೆಭಾರವೆನಿಸುವ ಸನ್ನಿವೇಶಗಳೂ ಇವೆ. ಮುಖ್ಯವಾಗಿ ಇಲ್ಲಿ ಅನಗತ್ಯ ದೃಶ್ಯವಾಗಲಿ, ಕಥೆಯಾಗಲಿ ಇಲ್ಲ. ಸ್ವಾರ್ಥ ಇರದ ಪಯಣದ ಕಥೆ ಇಲ್ಲಿದೆ. ಹಾಗಾಗಿ ಇದೊಂದು ಫೀಲ್ ಗುಡ್ ಮೂವಿ.

ನಿರ್ದೇಶಕರ ಕಥೆಯಲ್ಲಿ ಸ್ಪಷ್ಟತೆ ಇದೆ. ಮೇಕಿಂಗ್ ಕೂಡ ಕಥೆಗೆ ಪೂರಕವಾಗಿದೆ. ಏನು ಹೇಳಬೇಕು, ಎಷ್ಟು ಹೇಳಬೇಕು ಎಂಬುದರ ಅರಿವು ಇದೆ. ಆ ಕಾರಣಕ್ಕೆ ಈ ಸೀತೆಯ ಜರ್ನಿ ಇಷ್ಟವಾಗುತ್ತೆ.

ಇಲ್ಲಿ ಅಪ್ಪ ಮಗಳ ಬಾಂಧವ್ಯ ಇದೆ. ನಿಷ್ಕಲ್ಮಷ ಪ್ರೀತಿ ಇದೆ. ಕೂಡು ಕುಟುಂಬದ ಒಗ್ಗಟ್ಟಿನ ಒಲವಿದೆ. ಮುಗ್ಧತೆಯ ಭಾವ ಇದೆ. ಈ ಎಲ್ಲಾ ಕಾರಣಕ್ಕೂ ಸಿನಿಮಾ ರುಚಿಸುತ್ತೆ. ನೀಟ್ ಅಂಡ್ ಕ್ಲೀನ್ ನರೇಷನ್ ಇಲ್ಲಿರುವುದರಿಂದ ಎಲ್ಲೂ ಬೋರ್ ಅನಿಸದೆ ಸರಾಗವಾಗಿ ಸೀತಾ ಪಯಣ ನೋಡಿಸಿಕೊಂಡು ಹೋಗುತ್ತೆ.

ಮೊದಲರ್ಧ ಜರ್ನಿಯ ಸನ್ನಿವೇಶ ಎಲ್ಲೂ ಗೊಂದಲವಿಲ್ಲದೆ ಸಾಗುತ್ತೆ. ದ್ವಿತಿಯಾರ್ಧ ಸಾಕಷ್ಟು ತಿರುವುಗಳಿವೆ. ಒಂದೇ ಒಂದು ಜರ್ನಿಗೆ ಮನಸ್ಸುಗಳನ್ನು ಬೆಸೆಯುವ, ಸಂಬಂಧಗಳನ್ನು ಸೇರಿಸುವ ತಾಕತ್ತು ಇದೆ ಎಂಬುದನ್ನು ಚೆನ್ನಾಗಿ ತೋರಿಸಿದ್ದಾರೆ.

ಎಲ್ಲೋ ಒಂದು ಕಡೆ ಸಿನಿಮಾದ ಅವಧಿ ಕೊಂಚ ಹೆಚ್ಚಾಯ್ತು ಅನಿಸುತ್ತೆ. ಮಧ್ಯೆ ಬರುವ ಹಾಡು, ಫೈಟು ಅದನ್ನು ಮರೆಸುತ್ತೆ. ಉಳಿದಂತೆ ಚಿತ್ರಕಥೆಯಲ್ಲೂ ಹಿಡಿತವಿದೆ. ಪಾತ್ರ ಆಯ್ಕೆ ಕೂಡ ವೇಗ ಹೆಚ್ಚಿಸಿದೆ. ಅರ್ಜುನ್ ಸರ್ಜಾ ಅವರು ಎಲ್ಲಾ ವರ್ಗದವರೂ ನೋಡುವಂತಹ ಅಂದದ ಸಿನಿಮಾ ಕಟ್ಟಿಕೊಡುವಲ್ಲಿ ಯಶಸ್ವಿ ಎನ್ನಬಹುದು.

ಕಥೆ ಏನು?

ನಾಯಕಿ ಸೀತಾ (ಐಶ್ವರ್ಯ) ಪ್ರಾಜೆಕ್ಟ್ ವೊಂದನ್ನು ಅಟೆಂಡ್ ಮಾಡಲು ಬೆಳಗಾವಿಗೆ ತನ್ನ ಕಾರಲ್ಲಿ ಹೊರಡುತ್ತಾಳೆ. ದಾರಿ ನಡುವೆ ಅಭಿಷೇಕ್ ಕೂಡ ( ನಿರಂಜನ್) ಡ್ರಾಪ್ ಕೇಳ್ತಾನೆ. ಕಾರು ಹತ್ತಿಸಿಕೊಳ್ಳುವ ಮುನ್ನ ಅವನ ಆಧಾರ್ ಕಾರ್ಡ್, ಪಾನ್ ಕಾರ್ಡ್, ಫೋಟೋ ಎಲ್ಲವನ್ನೂ ಪಡೆದು ಕೆಲ ಕಂಡೀಷನ್ಸ್ ಹಾಕಿ ಕಾರಲ್ಲಿ ಕೂರಿಸಿಕೊಳ್ಳುತ್ತಾಳೆ. ಅಲ್ಲಿಗೆ ಇಬ್ಬರ ಪಯಣ ಬೆಳಗಾವಿಯತ್ತ ಸಾಗುತ್ತೆ. ದಾರಿಯುದ್ದಕ್ಕೂ ಒಂದಷ್ಟು ಘಟನೆ ನಡೆದು ಹೋಗುತ್ತವೆ. ಒಂದಷ್ಟು ಮಾತುಕತೆ ನಂತರ ಸೀತಾಪುರ ಬಳಿ ಅವನು ಇಳಿಯುತ್ತಾನೆ. ಆಕೆ ಬೆಳಗಾವಿಗೆ ಹೋದಾಗ ಒಂದು ಘಟನೆ ನಡೆಯುತ್ತೆ. ಅದೇ ಸಿನಿಮಾದ ಟ್ವಿಸ್ಟು. ಇಬ್ಬರು ಮತ್ತೆ ಒಂದಾಗ್ತಾರ? ಅವರಿಬ್ಬರ ನಡುವೆ ಪ್ರೀತಿ ಹುಟ್ಟುತ್ತಾ? ಅಪ್ಪನಲ್ಲಿ ಅಮ್ಮನನ್ನೂ ಕಾಣುವ ಆಕೆ ಲೈಫಲ್ಲಿ ಏನೆಲ್ಲ ಆಗುತ್ತೆ ಅನ್ನೊದನ್ನು ರೋಚಕವಾಗಿ ತೋರಿಸಲಾಗಿದೆ. ಮುಂದೆ ಏನಾಗುತ್ತೆ ಎಂಬ ಕುತೂಹಲ ಇದ್ದರೆ ಸಿನಿಮಾ ನೋಡಿ.

ಯಾರು ಹೇಗೆ?

ಇಲ್ಲಿ ಐಶ್ವರ್ಯ ಮುದ್ದಾಗಿ ಕಾಣಿಸಿಕೊಂಡಿರುವುದರ ಜೊತೆಗೆ ಅಷ್ಟೇ ಚೆನ್ನಾಗಿ ನಟಿಸಿದ್ದಾರೆ. ಅದರಲ್ಲೂ ಭಾವುಕ ಸನ್ನಿವೇಶದಲ್ಲಿ ನೋಡುಗರನ್ನೂ ಭಾವುಕತೆಗೆ ದೂಡುತ್ತಾರೆ. ಡ್ಯಾನ್ಸ್, ಬಾಡಿ ಲಾಂಗ್ವೇಜಲ್ಲಿ ಇಷ್ಟ ಆಗ್ತಾರೆ.

ನಿರಂಜನ್ ಗುರುತಿಸಿಕೊಳ್ಳೋಕೆ ಅರ್ಜುನ್ ಸರ್ಜಾ ನಿರ್ದೇಶನವೇ ಬೇಕಾಯ್ತು. ಇಲ್ಲಿ ಹಿಂದಿನ ಸಿನಿಮಾಗಿಂತಲೂ ಮಾಗಿದ್ದಾರೆ. ನಟನೆ, ಫೈಟು, ಡ್ಯಾನ್ಸ್ ನಲ್ಲಿ ಸೈ ಅನಿಸುತ್ತಾರೆ. ಸತ್ಯರಾಜ್ ಅಪ್ಪನಾಗಿ ಗಮನ ಸೆಳೆದರೆ, ಪ್ರಕಾಶ್ ರೈ ತಾತನಾಗಿ ಚಪ್ಪಾಳೆ ಗಿಟ್ಟಿಸುತ್ತಾರೆ. ಅರ್ಜುನ್ ಸರ್ಜಾ ಪಾತ್ರವೊಂದರ ಮೂಲಕ ಎಂಟ್ರಿಕೊಟ್ಟು ಶಿಳ್ಳೆ ತಗೋತ್ತಾರೆ. ಧ್ರುವ ಸರ್ಜಾ ಕೂಡ ಫೈಟ್ ಒಂದರಲ್ಲಿ ಜೈ ಭಜರಂಗಬಲಿ ಅಂತಾರೆ. ಉಳಿದಂತೆ ಬರುವ ಪಾತ್ರದಾರಿಗಳೂ ಪಾತ್ರಗಳಿಗೆ ನ್ಯಾಯ ಸಲ್ಲಿಸಿವೆ. ಬಾಲಮುರುಗನ್ ಕ್ಯಾಮರಾ ಕೈಚಳಕದಲ್ಲಿ ಸೀತಾಳ ವಂಡರ್ ಫುಲ್ ಜರ್ನಿ ಇದೆ. ಅನೂಪ್ ರೂಬಿನ್ಸ್ ಸಂಗೀತದಲ್ಲಿ ಹಾಡು, ಹಿನ್ನೆಲೆ ಸಂಗೀತ ಪರವಾಗಿಲ್ಲ.

ಕೊನೆದಾಗಿ ಈ ಸಿನಿಮಾ ಬಗ್ಗೆ ಹೇಳುವುದಾದರೆ, ಇಲ್ಲಿ
ಮನುಷ್ಯತ್ವದ ಪಾಠವಿದೆ. ಪ್ರಾಣಿಗಳ ಮೇಕಿನ ಪ್ರೀತಿ, ಕಾಳಜಿ ಇದೆ. ಮನೆ ಅಂದ್ರೆ ಗೋಡೆಗಳಲ್ಲ ಸಂಬಂಧಗಳು ಎಂಬ ವ್ಯಾಖ್ಯಾನವಿದೆ.

Categories
ಸಿನಿ ಸುದ್ದಿ

ದೈವ ನಂಬಿದ ದೇವನ ಗೆಲುವು!

ಚಿತ್ರ ವಿಮರ್ಶೆ: ವಿಭ

ಚಿತ್ರ: ದೈವ
ನಿರ್ದೇಶನ: ಮಂಜುನಾಥ್‌ ಜಯರಾಜ್‌
ನಿರ್ಮಾಣ: ಜಯಮ್ಮ ಪದ್ಮರಾಜ್‌
ತಾರಾಗಣ: ಮಂಜುನಾಥ್‌ ಜಯರಾಜ್‌, ಸುರಭಿ, ನೀತು ರಾಯ್‌, ಬಲ ರಾಜವಾಡಿ, ಅರುಣ್‌ ಬಚ್ಚನ್‌, ನಿಶ್ಚಿತ ಶೆಟ್ಟಿ, ಮಂಜುರಾಜ್‌ ಸೂರ್ಯ (ವಿಸಿಎನ್‌ ಮಂಜು) ಇತರರು.

“ಈ ಊರನ್ನು ಉದ್ಧಾರ ಮಾಡೋಕೆ ದ್ಯಾವರಂಗೆ ಬಂದ್ರಲ್ಲೋ, ಅಂಥವರನ್ನೂ ಈ ಜನ ಬಿಡಲಿಲ್ಲ…” ಜನರನ್ನು ಕಾಪಾಡೋಕೆ ಆ ದ್ಯಾವ್ರೇ ಬರಬೇಕು…” ಅಲ್ಲೊಂದು ಕೊಲೆಯಾದ ವ್ಯಕ್ತಿಯ ಶವ ಮುಂದೆ ಆ ಊರ ಜನರಲ್ಲೊಬ್ಬ ಹೇಳುವ ಡೈಲಾಗ್‌ ಇದು. ಈ ಡೈಲಾಗ್‌ ನಿಂದ ಸಿನಿಮಾದ ಕಥೆ ಶುರುವಾಗುತ್ತೆ. ಅಲ್ಲಿಗೆ ಇದೊಂದು ರಿವೇಂಜ್‌ ಸ್ಟೋರಿ ಅಂತ ಗೊತ್ತಾಗುತ್ತೆ. ಆದರೆ, ಸಿನಿಮಾದಲ್ಲಿ ರಿವೇಂಜ್‌ ಕಥೆ ಇದೆಯಾ? ಈ ಪ್ರಶ್ನೆಗೆ ಸಿನಿಮಾ ನೋಡಬೇಕು. ಕನ್ನಡಕ್ಕೆ ಈ ಕಥೆ ಹೊಸದೇನಲ್ಲ. ಇಂತಹ ಅದೆಷ್ಟೋ ಕಥೆಗಳು ಬಂದಿವೆ. ಆದರೆ, ಸಂಪೂರ್ಣ ಹಳ್ಳಿ ಸೊಗಡಿನ ಕಥೆಯಾದ್ದರಿಂದ ಇದು ಒಂದಷ್ಟು ಮಂದಿಗೆ ಇಷ್ಟವಾಗಬಹುದು. ಕೆಲವರಿಗೆ ಕಥೆ ಹಳೆಯದು ಅನ್ನಿಸಬಹುದು. ಅದೇನೆ ಇದ್ದರೂ, ಹೊಸಬರ ಪ್ರಯತ್ನ ಮೆಚ್ಚಲು ಅಡ್ಡಿಯಿಲ್ಲ.

ನಿರ್ದೇಶಕ ಮಂಜುನಾಥ್‌ ಜಯರಾಜ್‌ ಇಲ್ಲಿ ಮೂರು ಕೆಲಸ ನಿರ್ವಹಿಸಿದ್ದಾರೆ. ಒಂದು ಕಡೆ ನಿರ್ಮಾಣ, ಇನ್ನೊಂದು ಕಡೆ ನಿರ್ದೇಶನ ಮತ್ತೊಂದು ಕಡೆ ನಟನೆ. ಹಾಗಾಗಿ ಯಾವುದನ್ನೂ ಫುಲ್‌ಫಿಲ್‌ ಮಾಡೋಕೆ ಹೋಗಿಲ್ಲ. ಕಥೆಯ ಎಳೆ ಹಳೆಯದ್ದಾಗಿದ್ದರೂ, ನಿರೂಪಣೆಯಲ್ಲಿ ಅದನ್ನು ಇನ್ನಷ್ಟು ಬಿಗಿಯಾಗಿಡಬಹುದಿತ್ತು. ಆದರೆ, ಅಂತಹ ಪ್ರಯತ್ನ ಇಲ್ಲಿ ಆಗಿಲ್ಲ. ಕಥೆ ಸರಳವಾಗಿದೆ. ಆದರೆ, ಚಿತ್ರಕಥೆಯಲ್ಲಿನ್ನೂ ಹಿಡಿತ ಬೇಕಿತ್ತು. ಕೆಲವು ದೃಶ್ಯಗಳಲ್ಲಿ ಹೊಸತನವಿದೆ. ಇಂತಹ ಕಥೆಗಳಿಗೆ ವೇಗ ಬೇಕು. ಮೊದಲರ್ಧ ಅಷ್ಟಾಗಿ ರುಚಿಸುವುದಿಲ್ಲ. ದ್ವಿತಿಯಾರ್ಧದ ಮುಂದೇನಾಗುತ್ತೆ ಅನ್ನುವ ಕುತೂಹಲವಿದೆ. ಕ್ಲೈಮ್ಯಾಕ್ಸ್‌ ಚೆನ್ನಾಗಿದೆಯಾದರೂ, ಮತ್ತಷ್ಟು ಗಟ್ಟಿಯಾಗಿರಬೇಕಿತ್ತು. ಇಡೀ ಕಥೆ ನಾಯಕನ ಸುತ್ತವೇ ಸುತ್ತುತ್ತೆ. ಅಲ್ಲಲ್ಲಿ ಸ್ವಲ್ಪ ನಿಧಾನ ಅನಿಸುತ್ತೆ. ಹಾಡೊಂದು ಕಾಣಿಸಿಕೊಂಡು ನಿಧಾನಗತಿಯ್ನು ಮರೆಮಾಚುತ್ತೆ. ಇಡೀ ಸಿನಿಮಾದಲ್ಲಿ ಅನ್ಯಾಯ, ಕೊಲೆ, ದಬ್ಬಾಳಿಕೆ, ಬೆದರಿಕೆಯಲ್ಲೇ ಸಾಗುತ್ತೆ. ಇಲ್ಲಿ ಹೀರೋ ಅ ಎಲ್ಲದರ ವಿರುದ್ಧ ಹೋರಾಡುತ್ತಾನೆ. ಅಂತ್ಯದಲ್ಲಿ ಏನಾಗುತ್ತೆ ಅನ್ನೋದೇ ಸಿನಿಮಾದ ಸಸ್ಪೆನ್ಸ್.‌

ಕಥೆ ಏನು?
ಒಂದೂರಲ್ಲಿ ಒಬ್ಬ ಗೌಡ. ಅವನಿಗೆ ಆ ಊರ ಜನರ ಜಮೀನಿನ ಮೇಲೆಯೇ ಆಸೆ. ಆ ಜನರಿಗೆ ಬಡ್ಡಿಗೆ ಹಣ ಕೊಟ್ಟು, ವಸೂಲಿ ಮಾಡೋದು ಅವನ ಕಾಯಕ. ಹಣ ಕೊಡದವರ ಜಮೀನು ಪತ್ರಕ್ಕೆ ಬಲವಂತದ ಸಹಿ ಮಾಡಿಸಿಕೊಂಡು ಕಬಳಿಸುವ ಗೌಡನಿಗೆ ಊರ ಜನ ಹಿಡಿಶಾಪ ಹಾಕುತ್ತಿರುತ್ತಾರೆ. ಜನರ ಪರ ಇರಬೇಕಾದ ಹೀರೋ ದೇವ ಆ ಗೌಡನ ಜೊತೆ ಕೂಲಿ ಮಾಡಿಕೊಂಡಿರುತ್ತಾನೆ. ಮೊದಲರ್ಧ ಹೀರೋ ಕೂಡ ಗೌಡ ಹೇಳಿದಂತೆಯೇ ಕೇಳುತ್ತಾನೆ. ದ್ವಿತಿಯಾರ್ಧ ಆ ಗೌಡನ ವಿರುದ್ಧವೇ ತಿರುಗಿ ಬೀಳುತ್ತಾನೆ. ಅದಕ್ಕೆ ಒಂದು ತಿರುವು ಇದೆ. ಆ ಟ್ವಿಸ್ಟ್‌ ಏನು ಅನ್ನುವ ಕುತೂಹಲವಿದ್ದರೆ ಒಮ್ಮೆ ನೋಡುವ ಪ್ರಯತ್ನ ಮಾಡಬಹುದು. ಇಲ್ಲಿ ದೈವದ ಮೊರೆ ಹೋಗುವ ಜನರಿಗೆ ಆ ಹೀರೋ ಕೂಡ ದೇವನಂತೆಯೇ ಕಾಣುತ್ತಾನೆ. ಅದು ಕ್ಲೈಮ್ಯಾಕ್ಸ್‌ನಲ್ಲಿ ರಿವೀಲ್‌ ಆಗುತ್ತೆ. ಒಟ್ಟಾರೆ, ಒಂದು ಸರಳ ಕಥೆ ಜೊತೆಗೆ ಕಮರ್ಶಿಯಲ್‌ ಅಂಶ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಇಲ್ಲಿ ಫೈಟ್ಸ್‌ಗೇನೂ ಕೊರತೆ ಇಲ್ಲ. ಅಲ್ಲಲ್ಲಿ ಹೊಡೆದಾಟದ ದೃಶ್ಯಗಳು ಕಾಣಸಿಗುತ್ತವೆ. ಮಾಸ್‌ ಪ್ರಿಯರಿಗೆ ಫೈಟ್‌ ರುಚಿಸಬಹುದು. ಕೇಳುಗರಿಗೆ ಹಾಡೂ ಇದೆ. ಗುನುಗುವಂತಹ ಹಾಡೇನೂ ಇಲ್ಲ. ಹಿನ್ನೆಲೆ ಸಂಗೀತ ದೃಶ್ಯಗಳಿಗೆ ಪೂರಕವಾಗಿದ.

ಯಾರು ಹೇಗೆ?
ನಾಯಕ ಮಂಜುನಾಥ್‌ ಜಯರಾಜ್‌ ಪಾತ್ರಕ್ಕೆ ಮೋಸ ಮಾಡಿಲ್ಲ. ನಟನೆಯಲ್ಲಿನ್ನೂ ಒಂದಷ್ಟು ಪಟ್ಟುಗಳನ್ನು ಹಿಡಿಯಬೇಕು. ಆದರೂ ಕೆಲವೊಂದು ದೃಶ್ಯಗಳಲ್ಲಿ ಒಳ್ಳೆಯ ಸ್ಕೋರ್‌ ಮಾಡಿದ್ದಾರೆ. ಫೈಟ್‌ ದೃಶ್ಯಗಳಲ್ಲಿ ಇಷ್ಟವಾಗುತ್ತಾರೆ. ಅಲ್ಲಲ್ಲಿ ಮಿಸ್ಟೇಕ್‌ ಇದ್ದರೂ, ಅವರ ಬಾಡಿಲಾಂಗ್ವೇಜ್‌ ಅದನ್ನು ಪಕ್ಕಕ್ಕಿಡುವಂತೆ ಮಾಡುತ್ತೆ. ಇನ್ನು, ಸುರಭಿ, ನೀತು ರಾಯ್‌ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಬಲರಾಜವಾಡಿ ಅವರಿಲ್ಲಿ ದುಷ್ಟ ಗೌಡನಾಗಿ ಸ್ಕೋರ್‌ ಮಾಡಿದ್ದಾರೆ. ಪತ್ರಕರ್ತ ಮಂಜುರಾಜ್‌ ಸೂರ್ಯ ಸಿಕ್ಕ ಪಾತ್ರವನ್ನು ನಿಭಾಯಿಸಿದ್ದಾರೆ. ಉಳಿದಂತೆ ತೆರೆಮೇಲೆ ಬರುವ ಪಾತ್ರಗಳು ಸಿಕ್ಕ ಪಾತ್ರಕ್ಕೆ ಜೀವ ತುಂಬಿವೆ. ಕೆ.ಎಂ.ಪ್ರಕಾಶ್‌ ಅವರ ಸಂಕಲನ ಪರವಾಗಿಲ್ಲ. ಸಿದ್ಧಾರ್ಥ್‌ ಅವರ ಕ್ಯಾಮೆರಾ ಕೈಚಳಕದಲ್ಲಿ ದೈವದ ಸೊಬಗಿದೆ. ವಿಜೇತ ಮಂಜಯ್ಯ ಅವರ ಸಂಗೀತ ಪೂರಕವಾಗಿದೆ.

Categories
ಸಿನಿ ಸುದ್ದಿ

ಚೇಂಬರ್ ಅಧ್ಯಕ್ಷೆ ಜಯಮಾಲಗೆ ಸನ್ಮಾನ: ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲು ಮನವಿ

ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾದ ಡಾ.ಜಯಮಾಲ ಅವರನ್ನು ಡಾ.ವಿಷ್ಣು ಸೇನಾ ಸಮಿತಿ ವತಿಯಿಂದ ಅಭಿನಂದಿಸಲಾಯಿತು. ನಿಮ್ಮ ನಾಯಕತ್ವದ ಸಂದರ್ಭದಲ್ಲೆಲ್ಲಾ ಚಿತ್ರರಂಗದಲ್ಲಿ ಉತ್ತಮ ಬೆಳವಣಿಗೆಗಳು ಮತ್ತು ಸಕಾರಾತ್ಮಕ ಕಾರ್ಯಕ್ರಮಗಳು ನಡೆದಿವೆ.

ಈ ಬಾರಿ ಸಹ ಅದೇ ರೀತಿಯ ಉತ್ತಮ ಕಾರ್ಯಗಳು ನೆರವೇರಲಿ ಮತ್ತು ಕನ್ನಡ ಚಿತ್ರರಂಗದ ಪ್ರಸ್ತುತ ಸಮಸ್ಯೆಗಳಿಗೆ ನಿರ್ದಿಷ್ಟ ಪರಿಹಾರಗಳನ್ನು ಕಂಡುಕೊಳ್ಳುವಂತಾಗಲೆಂದು ಆಶಯ ವ್ಯಕ್ತಪಡಿಸಿದ ವೀರಕಪುತ್ರ ಶ್ರೀನಿವಾಸ ಅವರು, ಡಾ.ವಿಷ್ಣುವರ್ಧನ್ ಅವರಿಗೆ ಸಂಬಂಧಿಸಿದಂತೆ ಈ ಎರಡು ಮನವಿಗಳನ್ನು ಅವರಿಗೆ ಸಲ್ಲಿಸಿದರು.

  1. ಡಾ. ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕಳೆದ ಸೆಪ್ಟೆಂಬರ್‌ನಲ್ಲಿ ಘೋಷಣೆಯಗಿದೆ. ಆದರೆ ಆರು ತಿಂಗಳು ಕಳೆದರೂ ಪ್ರಶಸ್ತಿ ಪ್ರದಾನ ಸಮಾರಂಭದ ಕುರಿತು ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಆದ್ದರಿಂದ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಶೀಘ್ರದಲ್ಲೇ ಅದ್ಧೂರಿ ಸಮಾರಂಭವನ್ನು ಆಯೋಜಿಸುವಂತೆ ಸರ್ಕಾರವನ್ನು ವಿನಂತಿಸಬೇಕೆಂದು ಕೋರಿದರು. ಈ ಕಾರ್ಯಕ್ರಮವು ಕನ್ನಡ ಚಿತ್ರರಂಗಕ್ಕೆ ಹೊಸ ಉತ್ತೇಜನ ನೀಡುವ ರೀತಿಯಲ್ಲಿ ಆಯೋಜಿಸಬೇಕೆಂದು ವಿನಂತಿಸಿದ ಅವರು, ಆ ಕಾರ್ಯಕ್ರಮಕ್ಕೆ ಐವತ್ತು ಸಾವಿರದಷ್ಟು ಡಾ.ವಿಷ್ಣು ಸೇನಾನಿಗಳನ್ನು ಸಂಘಟಿಸುವ ಜವಬ್ದಾರಿಯನ್ನು ಹೊತ್ತುಕೊಂಡರು.
  2. ಅಭಿಮಾನ ಸ್ಟುಡಿಯೋದಲ್ಲಿದ್ದ ಡಾ. ವಿಷ್ಣುವರ್ಧನ್ ಸ್ಮಾರಕವನ್ನು ತೆರವುಗೊಳಿಸಲಾಗಿದೆ. ಅದು ಈ ನಾಡಿನ ಇತಿಹಾಸದಲ್ಲೊಂದು ಕಪ್ಪುಚುಕ್ಕೆಯಾಗಿ ದಾಖಲಾಗಿದೆ. ಸಾವಿನಲ್ಲೂ ಶಾಂತಿ ನೀಡದ ನಮ್ಮ ವ್ಯವಸ್ಥೆ ಬಗ್ಗೆ ನಮಗೆ ಅನುಕಂಪವಿದೆ. ಮೇರುನಟನ ಸ್ಮಾರಕವನ್ನೇ ತೆರುವುಗೊಳಿಸಿದ ಜಾಗದಲ್ಲಿ ಖಾಸಗಿ ಕಟ್ಟಡವೋ, ಮಾಲ್, ಕಾಂಪ್ಲೆಕ್ಸ್ ಬಂದರೆ ಅದು ಇನ್ನೂ ಅವಮಾನಕರ ಸಂಗತಿ. ಆದ್ದರಿಂದ ಆ ಜಾಗವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸದೆ, ಮೂಲ ಉದ್ದೇಶಕ್ಕಾಗಿ ಮಾತ್ರವೇ ಬಳಸುವಂತೆ ಮಾಡಲು ವಾಣಿಜ್ಯ ಮಂಡಳಿಯು ಮುಂಜಾಗೃತೆಯನ್ನು ವಹಿಸಬೇಕೆಂದು ಕೋರಿದರು.

ಈ ಸಂದರ್ಭದಲ್ ಡಾ.ವಿಷ್ಣು ಸೇನಾ ಸಮಿತಿಯ ಆನಂದ ರಾಜ್, ಮಲ್ಲಿಕಾರ್ಜುನ್, ಎಸ್.ರಘು, ಮೂರ್ತಿ ಮೊದಲಾದವರು ಹಾಜರಿದ್ದರು.

Categories
ಸಿನಿ ಸುದ್ದಿ

ಪ್ರೇಮಿಗಳ ದಿನಕ್ಕೆ ಸೀತಾ ಪಯಣ: ಅರ್ಜುನ್ ಸರ್ಜಾ ನಿರ್ದೇಶನದ ಚಿತ್ರ ರಿಲೀಸ್

ಬಹುಮುಖ ಪ್ರತಿಭೆ, ನಟ, ನಿರ್ದೇಶಕ ಹಾಗೂ ನಿರ್ಮಾಪಕ ‘ಆಕ್ಷನ್ ಕಿಂಗ್’ ಅರ್ಜುನ್ ಸರ್ಜಾ ಅವರ ನಿರ್ದೇಶನದ, ಶ್ರೀ ರಾಮ್ ಫಿಲಂಸ್ ಇಂಟರ್‌ ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಹಾಗೂ ಐಶ್ವರ್ಯ ಅರ್ಜುನ್ – ನಿರಂಜನ್ ನಾಯಕ – ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷಿತ “ಸೀತಾ ಪಯಣ” ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ಈಗಾಗಲೇ ಟೀಸರ್, ಹಾಡುಗಳು ಹಾಗೂ ಟ್ರೇಲರ್ ಮೂಲಕ ಜನಮನ ಸೆಳೆದಿರುವ ಈ ಚಿತ್ರದ ಕಥೆ-ಚಿತ್ರಕಥೆ- ನಿರ್ಮಾಣ ಮತ್ತು ನಿರ್ದೇಶನ ಅರ್ಜುನ್ ಸರ್ಜಾ ಅವರದು. ಅನೂಪ್ ರೂಬೆನ್ಸ್ ಸಂಗೀತ ನಿರ್ದೇಶನ, ಜಿ.ಬಾಲಮುರುಗನ್ ಛಾಯಾಗ್ರಹಣ, ಅಯೂಬ್ ಖಾನ್ ಸಂಕಲನ, ಅರ್ಜುನ್ ಸರ್ಜಾ ಸಾಹಸ ನಿರ್ದೇಶನ ಹಾಗೂ ಶ್ರಸ್ತಿ ನೃತ್ಯ ನಿರ್ದೇಶನವಿದೆ.

ಮಾಡಿರುವ ಈ ಚಿತ್ರದ ತಾರಾಬಳಗದಲ್ಲಿ ಐಶ್ವರ್ಯ ಅರ್ಜುನ್, ನಿರಂಜನ್, ಅರ್ಜುನ್ ಸರ್ಜಾ, ಸತ್ಯರಾಜ್, ಪ್ರಕಾಶ್ ರೈ ಮತ್ತು ಕೋವೈ ಸರಳಾ ಮುಂತಾದವರಿದ್ದಾರೆ. ಅರ್ಜುನ್ ಅವರ ಸೋದರಳಿಯ ಧ್ರುವ ಸರ್ಜಾ ಕೂಡ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

error: Content is protected !!