Categories
ಸಿನಿ ಸುದ್ದಿ

ಅಪ್ಪು ಕನಸಿನ ಜೂನಿಯರ್ ಟೋಸ್: ಪತಿ ಆಸೆ ಈಡೇರಿಸಿದ ಅಶ್ವಿನಿ: ಶಿಕ್ಷಣ ಕ್ಷೇತ್ರಕ್ಕೆ ಪಿಆರ್ ಕೆ ಸಂಸ್ಥೆ

ಅಪ್ಪು ಇಂದು ನಮ್ಮೊಂದಿಗಿಲ್ಲ. ಆದರೆ, ಅವರು ಮಾಡಿದ ಅದೆಷ್ಟೋ ಅಪರೂಪದ ಕೆಲಸಗಳು ನಮ್ಮ ಕಣ್ಮುಂದೆ ಇವೆ. ಅಷ್ಟೇ ಅಲ್ಲ, ಸಾಮಾಜಿಕವಾಗಿ ಪರಿಣಾಮ ಬೀರುವಂತಹ ಸಾಲು ಸಅಲು ಸಿನಿಮಾಗಳೂ ಇವೆ. ಅಪ್ಪುಗೆ ಒಂದು ಆಸೆ ಇತ್ತು. ಅದು ಇಂಟರ್ ನ್ಯಾಷನಲ್ ಪ್ರಿಸ್ಕೂಲ್ ಒಂದನ್ನು ಶುರು ಮಾಡಬೇಕು ಅನ್ನೋದು. ಆದರೆ, ಅಪ್ಪು ವಿಧಿಯ ಕರೆಗೆ ಹೋದರು. ಹಾಗಂತ ಅಪ್ಪು ಪತ್ನಿ ಸುಮ್ಮನೆ ಕೂರಲಿಲ್ಲ. ಪತಿಯ ಎರಡು ದಶಕದ ಆ ಆಸೆಯನ್ನು ಈಡೇರಿಸಿದ್ದಾರೆ ಅಶ್ವಿನಿ ಪುನೀತ್ ರಾಜಕುಮಾರ್.

ಹೌದು, ಅಪ್ಪು ಅಗಲಿಕೆಯ ನಂತರ ಅವರ ಪಿಆರ್‌ಕೆ ಸಂಸ್ಥೆಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಯಶಸ್ವಿಯಾಗಿ ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ. ಈ ಬ್ಯಾನರ್ ಅಡಿಯಲ್ಲಿ ಹೊಸ ಬಗೆಯ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ಹೊಸಬರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅದೆಷ್ಟೋ ಪ್ರತಿಭೆಗಳಿಗೆ ಸಹಕಾರಿಯಾಗಿದ್ದಾರೆ. ಈಗ ಅದರ ಬೆನ್ನಲ್ಲೇ ಶಿಕ್ಷಣ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಅನ್ನೋದೇ ಈ ಹೊತ್ತಿನ ವಿಶೇಷ. ಅದೇನೆ ಇದ್ದರೂ, ಪುನೀತ್ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಇವರಿಬ್ಬರೂ ಕಂಡಿದ್ದ ಬರೋಬ್ಬರಿ 20 ವರ್ಷಗಳ ಕನಸು ಈಗ ನನಸಾಗಿದೆ.

ಸಿನಿಮಾರಂಗದ ನಿರ್ಮಾಣ ವಿಭಾಗದಲ್ಲಿ ಇದೀಗ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್, ಈಗ ಮತ್ತೊಂದು ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಅದರಲ್ಲೂ ಅವರೀಗ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡೋಕೆ ಮುಂದಾಗಿದ್ದಾರೆ. ಅಂದಹಾಗೆ, ಅವರು ಶಿಕ್ಷಣ ಕ್ಷೇತ್ರಕ್ಕೆ ಎಂಟ್ರಿಕೊಡುವ ಎರಡು ದಶಕಗಳ ಕನಸು ಅವರ ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ಮೂಲಕ ಈಡೇರಿದೆ. ಇತ್ತೀಚೆಗೆ ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್ ಶುರುಮಾಡಿದ್ದಾರೆ. ಈ ಮೂಲಕ ಪುನೀತ್ ರಾಜ್‌ಕುಮಾರ್ 20 ವರ್ಷಗಳ ಹಿಂದೆಯೇ ಕಂಡಿದ್ದ ಆ ಕನಸನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ನನಸು ಮಾಡಿದ್ದಾರೆ. ಇತ್ತೀಚೆಗೆ ಆ ಜೂನಿಯರ್ ಟೋಸ್ ಪ್ರೀಸ್ಕೂಲ್ ನ ಅನಾವರಣವಾಗಿದೆ.

ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್‌ ನಿರ್ಮಾಣಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಸುನಿತಾ ಗೌಡ, ಸ್ಪೂರ್ತಿ ವಿಶ್ವಾಸ್, ಶ್ರುತಿ ಕಿರಣ್ ಮತ್ತು ಡಾ. ಬಿಂದು ರಾಣಾ ಅವರು ಕೈ ಜೋಡಿಸಿದ್ದಾರೆ. ಮಕ್ಕಳ ಶಿಕ್ಷಣವನ್ನು ಉನ್ನತ ಮಟ್ಟಕ್ಕೆ ಏರಿಸುವ ಈ ಪ್ರಯತ್ನಕ್ಕೆ ಇವರೆಲ್ಲರೂ ಒಮ್ಮತದಿಂದ ಕೈ ಹಾಕಿದ್ದಾರೆ. ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್‌ ವಿಶಿಷ್ಟವಾದ ಪ್ರಾಥಮಿಕ ಶಿಕ್ಷಣ ಯೋಜನೆಯನ್ನು ಇಟ್ಟುಕೊಂಡಿದೆ ಅನ್ನೋದು ವಿಶೇಷ.

ಖ್ಯಾತ ಶಿಕ್ಷಣ ತಜ್ಞೆ ಸುನೀತಾ ಗೌಡ, ಡಾ. ಬಿಂದು ರಾಣಾ ಅವರ ಅತ್ಯಾಧುನಿಕ ಪಠ್ಯಕ್ರಮ ಈ ಜೂನಿಯರ್ ಟೋಸ್ ಪ್ರಿಸ್ಕೂಲ್‌ನಲ್ಲಿ ಇರಲಿದೆ. ಮಕ್ಕಳಲ್ಲಿ ಬಾಲ್ಯದಿಂದಲೇ ನಾಯಕತ್ವ, ಸೃಜನಶೀಲತೆ ಹಾಗೂ ಉದ್ಯಮಶೀಲತೆಯ ಚಿಂತನೆಯನ್ನು ಬೆಳೆಸುವುದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಅವರ ಜೊತೆಗಾರರ ಕನಸು. ಈ ಸ್ಕೂಲ್‌ ಅನ್ನು ಇಂಡಿಯನ್ ವುಮನ್ ಅಚೀವರ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ಶಿಕ್ಷಣ ತಜ್ಞೆ ಐಶ್ವರ್ಯ ಡಿ.ಕೆ.ಎಸ್ ಹೆಗ್ಡೆಯವರ ಸಮ್ಮುಖದಲ್ಲಿ ಉದ್ಘಾಟನೆ ಆಗಿದ್ದು ಮತ್ತೊಂದು ವಿಶೇಷ.

ಇದೇ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಹಾಗು ಅಪ್ಪು ಅವರ ಕನಸು ಹಾಗೂ ಸ್ಕೂಲ್‌ ಬಗ್ಗೆ ರಿವೀಲ್ ಮಾಡಿದ್ದಾರೆ. “ನಾನು ಮತ್ತು ಪುನೀತ್ 20 ವರ್ಷಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಬರಬೇಕು ಎಂಬ ಕನಸು ಇಟ್ಟುಕೊಂಡಿದ್ದೆವು. ಆ ಕನಸು ಈಗ ಈಡೇರುತ್ತಿದೆ. ಪ್ರತಿ ಮಗುವಿನ ಸಾಮರ್ಥ್ಯವನ್ನು ಹೆಚ್ಚಿಸುವಂತಹ ಶಾಲೆಗಳನ್ನು ಸ್ಥಾಪಿಸೋದೇ ಈ ಶಾಲೆಯ ಮುಖ್ಯ ಧ್ಯೇಯ” ಎಂದಿದ್ದಾರೆ. ಈ ಪ್ರೀಸ್ಕೂಲ್ ಬೆಂಗಳೂರಿನಲ್ಲಿ ಮೊದಲು ಆರಂಭಗೊಳ್ಳಲಿದ್ದು, ಶುರುವಿಗೆ ಐದು ಕೇಂದ್ರಗಳನ್ನು ಆರಂಭಿಸುವ ಆಲೋಚನೆಯಿದೆ. ಇದರಲ್ಲಿ ಆಧುನಿಕ ಸೌಲಭ್ಯಗಳು, ಅನುಭವಿ ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ತಜ್ಞರು ಸೇರಿ ಸಿದ್ಧಪಡಿಸಿದ ವಿನೂತನ ಪಠ್ಯಕ್ರಮ ಅಳವಡಿಸಲಾಗಿದೆ.

ಎರಡು ವರ್ಷದಿಂದ ಆರು ವರ್ಷದ ಮಕ್ಕಳಿಗೆ ಮಾತ್ರ ಇಲ್ಲಿ ಶಿಕ್ಷಣ ನೀಡಲಾಗುತ್ತೆ. ಸದ್ಯ ಬೆಂಗಳೂರಿನಲ್ಲಿ ಆರಂಭವಾದ ಈ ಶಿಕ್ಷಣ ಸಂಸ್ಥೆಯನ್ನು ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಿಸುವ ಆಲೋಚನೆ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗಿದೆ. ಈ ಮೂಲಕ ಇಂತಹ ವಿನೂತನ ಶಿಕ್ಷಣ ಭಾರತದಾದ್ಯಂತ ಇರುವ ಎಲ್ಲಾ ಮಕ್ಕಳಿಗೂ ಸಿಗುವಂತೆ ಆಗಬೇಕು ಎಂಬುದೇ ಅವರ ಆಶಯ. ಸಿನಿಮಾ ನಿರ್ಮಾಣದ ಜೊತೆ ಜೊತೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಈಗ ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟಿದ್ದು ಅಪ್ಪು ಅಭಿಮಾನಿಗಳಿಗೆ ಖುಷಿಯಂತೂ ಆಗಿದೆ.

ಅದೇನೆ ಇರಲಿ, ಸಿನಿಮಾ ನಿರ್ಮಾಣ ಮಾಡುವ ಮೂಲಕ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿರುವ ಪಿಆರ್ ಕೆ ಸಂಸ್ಥೆ ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆ ನೀಡುತ್ತ ಬಂದಿದೆ. ಈಗ ಅಶ್ವಿನಿ ಪುನೀತ್ ರಾಜಕುಮಾರ್, ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟು ಹೊಸ ಕ್ರಾಂತಿಗೆ ಅಣಿಯಾಗಿದ್ದಾರೆ.

Categories
ಸಿನಿ ಸುದ್ದಿ

ಯು ಐ ರೆಕಾರ್ಡ್: ವಿಶ್ವಾದ್ಯಂತ 2ಸಾವಿರ ಪರದೆಯಲ್ಲಿ ಪ್ರದರ್ಶನ

ಒಂಬತ್ತು ವರ್ಷಗಳ ನಂತರ ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ “UI” ಚಿತ್ರ ಡಿಸೆಂಬರ್ 20 ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ 2000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ಪೋಸ್ಟರ್, ಹಾಡು, ಟೀಸರ್ ಹಾಗೂ ವಾರ್ನರ್ ಮೂಲಕ ಈಗಾಗಲೇ ಕುತೂಹಲ ಮೂಡಿಸಿರುವ ಈ ಚಿತ್ರವನ್ನು ನೋಡಲು ಉಪೇಂದ್ರ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ ಪ್ರೈಸಸ್ ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನವೀನ್ ಮನೋಹರ್ ಅವರ ಸಹ ನಿರ್ಮಾಣ ಹಾಗೂ ತುಳಸಿರಾಮ ನಾಯ್ಡು(ಲಹರಿ ವೇಲು), ಜಿ.ರಮೇಶ್, ಜಿ.ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಅವರು ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಹೆಸರಾಂತ ಕೆ.ವಿ.ಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ‌.

Categories
ಸಿನಿ ಸುದ್ದಿ

ಅನ್ ಲಾಕ್ ರಾಘವ ಎಂಬ ಫನ್ ಸಿನಿಮಾ: ಫೆಬ್ರವರಿ 7ಕ್ಕೆ ಗ್ರ್ಯಾಂಡ್ ರಿಲೀಸ್

ಚಿತ್ರ ಆರಂಭವಾದಗಿನಿಂದಲೂ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ “ಅನ್ ಲಾಕ್ ರಾಘವ” ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಫೆಬ್ರವರಿ 7 ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಯುವ ಪ್ರತಿಭೆಗಳಾದ ಮಿಲಿಂದ್ ಹಾಗೂ ರೆಚೆಲ್ ಡೇವಿಡ್(ಲವ್ ಮಾಕ್ಟೇಲ್) ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರವನ್ನು ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ನಿರ್ಮಿಸಿದ್ದು, ದೀಪಕ್ ಮಧುವನಹಳ್ಳಿ ನಿರ್ದೇಶಿಸಿದ್ದಾರೆ.

ನನ್ನ ಹಿಂದಿನ ಚಿತ್ರಗಳನ್ನು ನೋಡಿದ್ದ ನನ್ನ ಗೆಳೆಯರು, ನಿನ್ನ ಚಿತ್ರಗಳಲ್ಲಿ ಗ್ಲಾಮರ್ ನಾಯಕಿಯರು ಇರುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ “ಅನ್ ಲಾಕ್ ರಾಘವ” ಚಿತ್ರದ ಫಸ್ಟ್ ಲುಕ್ ನಲ್ಲಿ ರೆಚೆಲ್ ಅವರನ್ನು ನೋಡಿದ ಗೆಳೆಯರು ಈಗ ನೀನೊಬ್ಬ ಕಮರ್ಷಿಯಲ್ ಚಿತ್ರದ ನಿರ್ದೇಶಕ ಎಂದು ಹೇಳಿದರು‌. ಇನ್ನು, ನಾಯಕ ಮಿಲಿಂದ್ ಸುರದ್ರೂಪಿ ನಟ ಅಷ್ಟೇ ಅಲ್ಲ. ಭರವಸೆಯ ನಟ ಕೂಡ ಹೌದು. ಇದೊಂದು ಪಕ್ಕಾ‌ ಮನೋರಂಜನೆಯ ರಸದೌತಣ ನೀಡುವ , ಪ್ರೇಕ್ಷಕ ಕೊಟ್ಟ ದುಡ್ಡಿಗೆ ಮೋಸ ಮಾಡದ ಸಿನಿಮಾ.

“ರಾಮ ರಾಮ ರೆ” ಖ್ಯಾತಿಯ ಸತ್ಯಪ್ರಕಾಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಹೆಚ್ಚಿನ ಭಾಗದ ಚಿತ್ರೀಕರಣ ಚಿತ್ರದುರ್ಗದಲ್ಲಾಗಿದೆ. ಲವಿತ್ ಅವರ ಛಾಯಾಗ್ರಹಣದಲ್ಲಿ ಚಿತ್ರದುರ್ಗದ ಸೊಬಗನ್ನು ನೋಡುವುದೆ ಚೆಂದ. ಅನೂಪ್ ಸೀಳಿನ್ ಅವರು ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಈಗಾಗಲೇ ಪ್ರೇಕ್ಷಕರ ಮನ ಗೆದ್ದಿದೆ. ಚಿತ್ರ ಕೂಡ ಎಲ್ಲರ ಮನಸ್ಸಿಗೆ ಹತ್ತಿರವಾಗಲಿದೆ ಎಂದರು ನಿರ್ದೇಶಕ ದೀಪಕ್ ಮಧುವನಹಳ್ಳಿ.

ಸತ್ಯಪ್ರಕಾಶ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು. ಹೊಸ ನಾಯಕನ ಎಂಟ್ರಿಗೆ ಬೇಕಾದ ಎಲ್ಲಾ ಅಂಶಗಳನ್ನು ಸೇರಿಸಿ ಒಂದು ಚೆಂದವಾದ ಕಥೆಯನ್ನು ಸತ್ಯಪ್ರಕಾಶ್ ಅವರು ಕಟ್ಟಿ ಕೊಟ್ಟಿದ್ದಾರೆ. ಅಷ್ಟೇ ಸುಂದರವಾಗಿ ದೀಪಕ್ ನಿರ್ದೇಶನ ಮಾಡಿದ್ದಾರೆ‌. ರೆಚೆಲ್ ಅವರ ಅಭಿನಯ ಅದ್ಭುತವಾಗಿದೆ‌.

ನೀವು ಈ ಹಿಂದೆ ಯಾವ ಚಿತ್ರಗಳಲ್ಲೂ ನೋಡಿರದ ಸಾಧುಕೋಕಿಲ ಹಾಗೂ ಶೋಭ್ ರಾಜ್ ಅವರನ್ನು ನಮ್ಮ ಚಿತ್ರದಲ್ಲಿ. ನೋಡಬಹುದು. ಅವಿನಾಶ್, ಭೂಮಿ ಶೆಟ್ಟಿ ಮುಂತಾದವರು ಈ ಚಿತ್ರದಲ್ಲಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಕೂಡ ಚೆನ್ನಾಗಿದೆ. ಇತ್ತೀಚಿಗೆ ಟೆಕ್ನಿಕಲ್ ಶೋ ನಲ್ಲಿ ಚಿತ್ರ ನೋಡಿದಾಗ ಎಲ್ಲರ ಮುಖದಲ್ಲಿ ಭರವಸೆಯ ನಗು ಮೂಡಿತ್ತು. ಆ ನಗು ಪ್ರೇಕ್ಷಕನ ಮುಖದಲ್ಲೂ ಮೂಡಲಿದೆ ಎಂಬ ಭರವಸೆ ಇದೆ ಎಂದರು ನಾಯಕ ಮಿಲಿಂದ್.

ದೀಪಕ್ ಅವರು ಈ ಚಿತ್ರದ ಕಥೆ ಹೇಳಿದಾಗಲೇ ಈ ಚಿತ್ರದಲ್ಲಿ ನಿರ್ಧರಿಸಿದ್ದೆ. ಅಷ್ಟು ಸುಂದರ ಕಥಾನಕವಿದು. ನಡೆಸಬೇಕೆಂದು ಚಿತ್ರದಲ್ಲಿ ನಾನು ಪ್ರಾಚ ಶಾಸ್ತ್ರಗ್ನೆ. ಜಾನಕಿ ನನ್ನ ಪಾತ್ರದ ಹೆಸರು ಎಂದರು ನಾಯಕಿ ರೆಚೆಲ್ ಡೇವಿಡ್.

ಇದು ನನ್ನ ನಿರ್ಮಾಣದ ನಾಲ್ಕನೇ ಚಿತ್ರ ಎಂದು ಮಾತನಾಡಿದ ನಿರ್ಮಾಪಕ ಮಂಜುನಾಥ್, ಸಾಕಷ್ಟು ಸವಾಲುಗಳನ್ನು ಎದುರಿಸಿ ನಮ್ಮ ಚಿತ್ರ ಈಗ ತೆರೆಗೆ ಬರಲು ಸಿದ್ದವಾಗಿದೆ. ಇತ್ತೀಚಿಗೆ ತಂತ್ರಜ್ಞರಿಗಾಗಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ ಚಿತ್ರವನ್ನು ನೋಡಿದಾಗ ಮನಸ್ಸಿಗೆ ಬಹಳ ಖುಷಿಯಾಯಿತು.

ಇದೊಂದು ನಮ್ಮ ಸೊಗಡಿನ ಚಿತ್ರ. “ಅನ್ ಲಾಕ್ ರಾಘವ” ಚೆನ್ನಾಗಿ ಮೂಡಿಬರಲು ಚಿತ್ರತಂಡದ ಸಹಕಾರವೇ ಕಾರಣ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಮಂಜುನಾಥ್ ದಾಸೇಗೌಡ.

Categories
ಸಿನಿ ಸುದ್ದಿ

ಶ್ರೀಮುರಳಿ ಜತೆ ಕೈ ಜೋಡಿಸಿದ ತೆಲುಗಿನ ಪೀಪಲ್ ಮೀಡಿಯಾ

ಬಘೀರ ಸಿನಿಮಾ ಮೂಲಕ, ಹಿಟ್ ಪಡೆದ ನಟ, ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಮುಂದಿನ ಸಿನಿಮಾ ಯಾವುದು? ಸದ್ಯಕ್ಕೆ ಈ ಪ್ರಶ್ನೆಗೆ ಇಲ್ಲಿಯವರೆಗೂ ಉತ್ತರ ಸಿಕ್ಕಿರಲಿಲ್ಲ. ಇದೀಗ ಇಂದು ಶ್ರೀಮುರಳಿ ಬರ್ತಡೇ ಪ್ರಯುಕ್ತ ಮುಂದಿನ ಸಿನಿಮಾ ಬಗ್ಗೆ ಅಪ್ಡೇಟ್ ಸಿಕ್ಕಿದೆ.

ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ‌ ಪೀಪಲ್ ಮೀಡಿಯಾ ಫ್ಯಾಕ್ಟರಿ ಜತೆಗೆ ಕೈ ಜೋಡಿಸಿದ್ದಾರೆ. ಅಂದರೆ ಈ ಸಂಸ್ಥೆ ನಿರ್ಮಾಣ ಮಾಡಲಿರುವ ಸಿನಿಮಾದಲ್ಲಿ ನಾಯಕನಾಗಿ ಶ್ರೀಮುರಳಿ ನಟಿಸಲಿದ್ದಾರೆ.

ಪೀಪಲ್ ಮೀಡಿಯಾ ಫ್ಯಾಕ್ಟರಿ ಈ ಸಿನಿಮಾ ನಿರ್ಮಾಣದ ಮೂಲಕ ಕನ್ನಡ ಚಿತ್ರೋದ್ಯಮ ಪ್ರವೇಶಿಸುತ್ತಿದೆ. ಈಗಾಗಲೇ ಕನ್ನಡದ ನಿರ್ಮಾಣ ಸಂಸ್ಥೆಗಳು ಪರಭಾಷೆ ಸಿನಿಮಾ ನಿರ್ಮಾಣದಲ್ಲಿ‌ ತೊಡಗಿವೆ. ಈಗ ಬೇರೆ ಭಾಷೆ ಸಂಸ್ಥೆ ಕನ್ನಡಕ್ಕೆ ಆಗಮಿಸಿದೆ. ಹೀಗೆ ಆಗಮಿಸಿದ್ದು ಖುಷಿಯ ವಿಚಾರವೂ ಹೌದು.

ಬಘೀರ ಸಿನಿಮಾದ ಯಶಸ್ಸಿನ ಬಳಿಕ ಈಗ ಇನ್ನೊಂದು‌ ಮಹೋನ್ನತ ಸಿನಿಮಾದ ಭಾಗವಾಗುತ್ತಿದ್ದಾರೆ ಶ್ರೀಮುರಳಿ. ಅಭಿಮಾನಿಗಳು ಮತ್ತು ಸಿನಿಮಾ ಪ್ರೇಮಿಗಳಲ್ಲೂ ಇದು ಕುತೂಹಲ ಮೂಡಿಸಿದೆ.

ಸದ್ಯ‌ ಶ್ರೀಮುರಳಿ ಬರ್ತಡೇಗೆ ಕೈ ಜೋಡಿಸುತ್ತಿರುವ ಬಗ್ಗೆ ಅಧಿಕೃತ ಪೋಸ್ಟರ್ ಬಿಡುಗಡೆ ಆಗಿದೆ. ಈ ಪೋಸ್ಟರ್ ಸಹ ಅಷ್ಟೇ ಎಪಿಕ್ ಆಗಿದೆ. ಶ್ರೀಮುರಳಿ ಕೆರಿಯರ್ ಗೂ ಈ ಸಿನಿಮಾ ಹೊಸ ಮೈಲಿಗಲ್ಲಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿದೆ.

ಪೀಪಲ್ ಮೀಡಿಯಾ ಫ್ಯಾಕ್ಟರಿ, ಮುಂದಿನ ದಿನಗಳಲ್ಲಿ ನಿರ್ದೇಶಕರು, ಚಿತ್ರದ ಶೀರ್ಷಿಕೆ, ತಾರಾಗಣ ಮತ್ತು ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ನೀಡಲಿದೆ.

Categories
ಸಿನಿ ಸುದ್ದಿ

ಮ್ಯಾಕ್ಸ್ ಸಾಂಗ್ ಬಂತು: ಲಯನ್ಸ್ ರೋರ್ ಗೆ ಭರ್ಜರಿ ಮೆಚ್ಚುಗೆ

ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದ, ವಿಜಯ್ ಕಾರ್ತಿಕೇಯ ನಿರ್ದೇಶನದ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಮ್ಯಾಕ್ಸ್” ಚಿತ್ರಕ್ಕಾಗಿ ಅನೂಪ್ ಭಂಡಾರಿ ಅವರು ಬರೆದಿರುವ, ವಿಜಯ್ ಪ್ರಕಾಶ್ ಹಾಡಿರುವ ಹಾಗೂ ಅಜನೀಶ್ ಲೋಕನಾಥ್ ಸಂಗೀತ ನೀಡಿರುವ “Lions roar” ಹಾಡಿನ ಲಿರಿಕಲ್ ವಿಡಿಯೋ ಇತ್ತೀಚಿಗೆ ಅದ್ದೂರಿಯಾಗಿ ಬಿಡುಗಡೆಯಾಯಿತು.

ಓರಾಯನ್ ಮಾಲ್ ನ ಆವರಣದಲ್ಲಿರುವ ಕೆರೆಯಂಗಳದಲ್ಲಿ‌ ನಡೆದ ವರ್ಣರಂಜಿತ ಸಮಾರಂಭಕ್ಕೆ ಸಹಸ್ರಾರು ಅಭಿಮಾನಿಗಳು ಸಾಕ್ಷಿಯಾದರು. “ಮ್ಯಾಕ್ಸ್” ಚಿತ್ರದ ಹಾಡಿಗೆ ಹಾಗೂ ಟ್ರೇಲರ್ ಗೆ ಅಭಿಮಾನಿಗಳು ಫಿದಾ ಆದರು. ಕಿಚ್ಚ ಸುದೀಪ್, ನಿರ್ಮಾಪಕ ಕಲೈಪುಲಿ ಎಸ್ ತನು, ನಿರ್ದೇಶಕ ವಿಜಯ್ ಕಾರ್ತಿಕೇಯ, ಸಂಯುಕ್ತ ಹೊರನಾಡು, ಸುಕೃತ ವಾಗ್ಲೆ ಇದ್ದರು.

ನಿಮ್ಮೆನೆಲ್ಲಾ ನೋಡಿ ಬಹಳ ಖುಷಿಯಾಗುತ್ತಿದೆ. ಎರಡುವರೆ ವರ್ಷಗಳ ನಂತರ ಡಿಸೆಂಬರ್ 25 ರಂದು ನನ್ನ ಅಭಿನಯದ “ಮ್ಯಾಕ್ಸ್” ಚಿತ್ರ ಬಿಡುಗಡೆಯಾಗುತ್ತಿದೆ. ತಡವಾಗಿರುವುದಕ್ಕೆ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ಆದರೆ ನಾವು ಲೇಟಾಗಿ ಬಂದರೂ ಲೇಟೆಸ್ಟಾಗಿ ಬರುತ್ತೇವೆ‌. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ ಎಂದರು ನಾಯಕ ಸುದೀಪ್.

ಇಷ್ಟು ಜನ ಸುದೀಪ್ ಅವರ ಅಭಿಮಾನಿಗಳನ್ನು ಕಂಡು ಆನಂದವಾಗುತ್ತಿದೆ ಎಂದು ಮಾತು ಆರಂಭಿಸಿದ ನಿರ್ಮಾಪಕ ಕಲೈಪುಲಿ‌ ಎಸ್ ತನು, ಡಿಸೆಂಬರ್ 25 ನಮ್ಮ ಚಿತ್ರ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ನಮ್ಮ ಚಿತ್ರಕ್ಕೆ ನಮ್ಮೆಲ್ಲರ ಬೆಂಬಲವಿರಲಿ ಎಂದರು. ನಿರ್ದೇಶಕ ವಿಜಯ್ ಕಾರ್ತಿಕೇಯ,
ಸಂಯುಕ್ತ ಹೊರನಾಡು, ಸುಕೃತ ವಾಗ್ಲೆ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಫಾದರ್ ಮೋಷನ್ ಪೋಸ್ಟರ್ ಬಂತು: ಆರ್.ಚಂದ್ರುಗೆ ಸುದೀಪ್ ಸಾಥ್

ಕೆಲವುದಿನಗಳ ಹಿಂದೂ ಆರ್ ಸಿ ಸ್ಟುಡಿಯೋಸ್ ಎಂಬ ಬೃಹತ್ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ ಆರ್ ಚಂದ್ರು, ಮೊದಲ ಬಾರಿಗೆ ಐದು ಸಿನಿಮಾಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಆ ಪೈಕಿ ಆರ್ ಸಿ ಸ್ಟುಡಿಯೋಸ್ ನ ಮೊದಲ ಚಿತ್ರವಾಗಿ ” ಫಾದರ್” ನಿರ್ಮಾಣವಾಗುತ್ತಿದೆ. ಇತ್ತೀಚಿಗೆ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ “ಫಾದರ್” ಚಿತ್ರದ ಮೋಷನ್ ಪೋಸ್ಟರ್ ಅನಾವರಣ ಮಾಡಿದರು. ರಾಜಕೀಯ ಮುಖಂಡರಾದ ಹೆಚ್ ಎಂ ರೇವಣ್ಣ, ನಟ ಅನೂಪ್ ರೇವಣ್ಣ, ಆನಂದ್ ಆಡಿಯೋ ಶ್ಯಾಮ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಅಪ್ಪ – ಮಗನ ಕುರಿತಾದ ಈ ಚಿತ್ರದ ಪ್ರಮುಖಪಾತ್ರದಲ್ಲಿ ಪ್ರಕಾಶ್ ರೈ ಹಾಗೂ ಡಾರ್ಲಿಂಗ್ ಕೃಷ್ಣ ಅಭಿನಯಿಸಿದ್ದಾರೆ. ರಾಜ್ ಮೋಹನ್ ನಿರ್ದೇಶನ ಮಾಡಿದ್ದಾರೆ.

“ಫಾದರ್” ಚಿತ್ರದ ಮೋಷನ್ ಪೋಸ್ಟರ್ ಚೆನ್ನಾಗಿದೆ. ಆರ್ ಚಂದ್ರು ನನ್ನ ಸ್ನೇಹಿತ. ಅವರೊಟ್ಟಿಗೆ ಸದಾ ನಾನಿರುತ್ತೇನೆ‌. ಚಿತ್ರದಲ್ಲಿ ನಟಿಸಿರುವ ಕೃಷ್ಣ, ಅಮೃತ ಎಲ್ಲಾ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಒಳ್ಳೆಯದಾಗಲಿ ಎಂದು ಸುದೀಪ್ ಹಾರೈಸಿದರು.

ಮೋಷನ್ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟ ಸುದೀಪ್ ಅವರಿಗೆ ಧನ್ಯವಾದ ತಿಳಿಸುತ್ತಾ ಮಾತು ಆರಂಭಿಸಿದ ನಿರ್ಮಾಪಕ ಆರ್ ಚಂದ್ರು, 22 ವರ್ಷಗಳ ಹಿಂದೆ 100 ರೂಪಾಯಿ ಇಟ್ಟುಕೊಂಡು ಬೆಂಗಳೂರಿಗೆ ಬಂದ ನಾನು, ಈಗ “ಕಬ್ಜ” ದಂತಹ 100 ಕೋಟಿ ಸಿನಿಮಾ ಮಾಡಿದ್ದೇನೆ. ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ನಾನು ಆಬಾರಿ. ಈ ಹಿಂದೆ ಸಿದ್ದೇಶ್ವರ ಎಂಟರ್ ಪ್ರೈಸಸ್ ಬ್ಯಾನರ್ ನಲ್ಲಿ 12 ಚಿತ್ರಗಳನ್ನು ನಿರ್ಮಿಸಿದ್ದ ನಾನು, ಈಗ ಆರ್ ಸಿ ಸ್ಟುಡಿಯೋಸ್ ಎಂಬ ಬೃಹತ್ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದೇನೆ. ಈ ಸಂಸ್ಥೆಯ ಮೊದಲ ಚಿತ್ರ “ಫಾದರ್”. ಅಪ್ಪ – ಮಗನ ಬಂಧವ್ಯದ ಕುರಿತಾದ ಸಿನುಮಾವಿದು.

ನಿರ್ದೇಶಕ ರಾಜ್ ಮೋಹನ್ ಅವರು ಈ ಚಿತ್ರದ ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಅಪ್ಪನ ಪಾತ್ರದಲ್ಲಿ ಖ್ಯಾತ ನಟ ಪ್ರಕಾಶ್ ರೈ ಹಾಗೂ ಮಗನಾಗಿ ಡಾರ್ಲಿಂಗ್ ಕೃಷ್ಣ ಅಭಿನಯಿಸಿದ್ದಾರೆ. ಎರಡು ಹಾಡುಗಳ ಚಿತ್ರೀಕರಣ ಮುಗಿದರೆ, ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗುತ್ತದೆ. ಕನ್ನಡ ಚಿತ್ರ ವಿಶ್ವಮಟ್ಟದಲ್ಲಿ ವಿಜೃಂಭಿಸಬೇಕು‌ ಎಂಬ ಆಸೆ ಇರುವವನು ನಾನು. ಹಾಗಾಗಿ ನಾನು ಆರ್ ಸಿ ಸ್ಟುಡಿಯೋಸ್ ಆರಂಭಿಸಿರುವುದು. ನಮ್ಮ ಸಂಸ್ಥೆಯ ಜೊತೆಗೆ ಬೇರೆಬೇರೆ ಭಾಷೆಗಳ ಹೆಸರಾಂತ ಸಂಸ್ಥೆಗಳ ಸಹಯೋಗವಿದೆ. ಎಲ್ಲಾ ಭಾಷೆಗೂ ಸಲ್ಲುವ ಕಥಾಹಂದರ ಹೊಂದಿರುವ “ಫಾದರ್” ಚಿತ್ರ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾಗಲಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು‌.

‘ಡಾರ್ಲಿಂಗ್’ ಕೃಷ್ಣ ಮಾತನಾಡಿ, ‘ಈ ಕಥೆ ಕೇಳಿದಾಗ ನನಗಿಂತ ಮೊದಲು ಇಷ್ಟವಾಗಿದ್ದು ಮಿಲನಾ ಅವರಿಗೆ. ಈ ಚಿತ್ರವನ್ನು ನೀವು ಮಾಡಲೇಬೇಕೆಂದು ಅವರು ಹುರಿದುಂಬಿಸಿದರು. ಪ್ರಕಾಶ್ ರೈ ಅವರ ಜೊತೆ ನಟಿಸಿದ್ದು ಖುಷಿಯಾಗಿದೆ. ‘ಫಾದರ್’ ತುಂಬಾ ದಿನಗಳವರೆಗೆ ಜನರ ಮನಸಿನಲ್ಲಿ ಉಳಿಯುವಂತ ಚಿತ್ರವಾಗುತ್ತದೆ’. ಸುದೀಪ್ ಅವರು ಬಂದು ಹಾರೈಸಿರುವ ನನ್ನ ಎಲ್ಲಾ ಸಿನಿಮಾಗಳು ಗೆದ್ದಿದೆ. ಈ ಚಿತ್ರ ಕೂಡ ಗೆಲ್ಲುತ್ತದೆ ಎಂಬ ನಂಬಿಕೆಯಿದೆ‌. ಸುದೀಪ್ ಅವರಿಗೆ ಧನ್ಯವಾದ ಎಂದರು.

ಅಪ್ಪ – ಮಗನ ಬಾಂಧವ್ಯದ ಚಿತ್ರಗಳು ಸಾಕಷ್ಟು ಬಂದಿದೆಯಾದರೂ, ಇದು ವಿಭಿನ್ನ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನಿಗೆ ನಿರಾಸೆ ಮಾಡದ ಚಿತ್ರವಿದು ಎಂದು ನಿರ್ದೇಶಕ ರಾಜ್ ಮೋಹನ್ ತಿಳಿಸಿದರು.

“ಫಾದರ್” ಚಿತ್ರದಲ್ಲಿ ನನ್ನದು ಒಂದೊಳ್ಳೆಯ ಪಾತ್ರ. ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ ಹೇಳಿದರು ನಾಯಕಿ ಅಮೃತ ಅಯ್ಯಂಗಾರ್.

ಆರ್ ಚಂದ್ರು ಅವರು ಸಿ‌ನಿಮಾವನ್ನು ಪ್ರೀತಿಸುವ ರೀತಿ ನನಗೆ ಇಷ್ಟ. ಈ ಚಿತ್ರದಲ್ಲಿ ನನ್ನ ಪಾತ್ರವೂ ಚೆನ್ನಾಗಿದೆ ಎಂದರು ನಟ ನಾಗಭೂಷಣ್.

ಸಂಭಾಷಣೆ ಬರೆದಿರುವ ಮಂಜು ಮಾಂಡವ್ಯ, ಛಾಯಾಗ್ರಾಹಕ ಸುಜ್ಞಾನ್, ಸಾಹಿತಿ ಮಂಜುನಾಥ್ ಮಾಗೋದಿ ಮುಂತಾದವರು “ಫಾದರ್” ಚಿತ್ರದ ಕುರಿತು ಮಾತನಾಡಿದರು. ಪ್ರೊಡಕ್ಷನ್ ಹೆಡ್ ಯಮುನಾ ಚಂದ್ರಶೇಖರ್, ಕಾರ್ಯಕಾರಿ ನಿರ್ಮಾಪಕ ಮೌರ್ಯ ಮಂಜು ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

Categories
ಸಿನಿ ಸುದ್ದಿ

ಡಾಲಿ ಮದ್ವೆಗೆ ರೆಡಿ: ಸಿಎಂ, ಮಾಜಿ ಸಿಎಂ, ಶಿವಣ್ಣಗೆ ಕಾರ್ಡ್ ಕೊಟ್ಟ ಡಾಲಿ

  • ರೆಡಿ ಆಯ್ತು ಡಾಲಿ ಧನ್ಯತಾ ಮದುವೆ ಆಮಂತ್ರಣ ಪತ್ರಿಕೆ
  • ಓಲ್ಡ್‌ಇಸ್‌ಗೋಲ್ಡ್‌ಥೀಮ್‌ನಲ್ಲಿ ನಟ ಧನಂಜಯ ಹಾಗೂ ಧನ್ಯತಾ ಆಮಂತ್ರಣ ಪತ್ರಿಕೆ
  • ಸಿಎಂಗೆ ಮೊದಲ ಇನ್ವಿಟೇಷನ್‌ ನೀಡಿದ ಡಾಲಿ ಧನಂಜಯ
  • ಅಂಚೆ ಪತ್ರದಲ್ಲಿ ಬಂತು ಡಾಲಿ ಮದುವೆ ಇನ್ವಿಟೇಷನ್‌ಕಾರ್ಡ್‌
  • ಡಾಲಿ ಮದುವೆಯ ಮೊದಲ ಇನ್ವಿಟೇಷನ್ ಕೊಟ್ಟಿದ್ದು ಯಾರಿಗೆ ಗೊತ್ತಾ ?

ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ರವರಿಗೆ ಮದುವೆ ಆಮಂತ್ರಣ ನೀಡಿದ ಡಾಲಿ -ಧನ್ಯತಾ

ನಟ ಡಾಲಿ ಧನಂಜಯ ಹಾಗೂ ಧನ್ಯತಾ ನಿಶ್ಚಿತಾರ್ಥ ಇತ್ತೀಚಿಗಷ್ಟೇ ಸಖತ್‌ಸಿಂಪಲ್‌ಆಗಿ ನೆರವೇರಿತ್ತು. ನಿಶ್ಚಿತಾರ್ಥದ ನಂತರ ಮದುವೆ ಸಿದ್ದತೆಗಳನ್ನು ಮಾಡಿಕೊಳ್ತಿರೋ ಡಾಲಿ ಮತ್ತು ಧನ್ಯತಾ ಇಂದು ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯ ಪೂಜೆ ಮಾಡಿಸುವ ಮೂಲಕ ಇಂದಿನಿಂದ ಮದುವೆ ಎಲ್ಲಾ ಕೆಲಸ ಕಾರ್ಯಗಳನ್ನ ಶುರು ಮಾಡಿದ್ದಾರೆ. ಡಾಲಿ ಧನಂಜಯ ಅವರು ಯಾವುದೇ ಸಿನಿಮಾ ಕೆಲಸಗಳನ್ನ ಶುರು ಮಾಡುವ ಮೊದಲು ಬಂಡೆ ಮಹಾಕಾಳಿ ದೇವಿಯ ಆಶೀರ್ವಾದ ಪಡೆದು ಶುರು ಮಾಡುತ್ತಾರೆ, ಅದರಂತೆಯೇ ತಮ್ಮ ಮದುವೆ ಕಾರ್ಯ ಶುರು ಮಾಡುವ ಮೊದಲು ತಮ್ಮ ಭಾವಿ ಪತ್ನಿ ಧನ್ಯತಾ ಅವರ ಜೊತೆ ದೇವಸ್ಥಾನಕ್ಕೆ ಬೇಟಿಕೊಟ್ಟು ಮದುವೆ ಆಮಂತ್ರಣ ಪತ್ರಿಕೆಗೆ ಪೂಜೆ ಮಾಡಿಸಿಕೊಂಡು ದೇವಿಯ ಆಶೀರ್ವಾದ ಪಡೆದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ತಮ್ಮ ಮದುವೆ ಆಮಂತ್ರಣ ಪತ್ರಿಕೆ ವಿಭಿನ್ನವಾಗಿ ಡಿಸೈನ್‌ ಮಾಡಿಸಬೇಕು ಅನ್ನೋ ಆಲೋಚನೆಯಲ್ಲಿ ಇರುತ್ತಾರೆ, ಇನ್ನು ಸಿನಿಮಾ ಸ್ಟಾರ್‌ ಗಳು ಸದಾ ಕ್ರಿಯೆಟಿವ್‌ ಆಗಿಯೇ ಯೋಚನೆ ಮಾಡುತ್ತಾರೆ, ಅದರಂತೆಯೇ ಡಾಲಿ ತಮ್ಮ ಮದುವೆ ಇನ್ವಿಟೇಷನ್‌ ಅನ್ನು ಸಖತ್ತಾಗಿ ಪ್ಲಾನ್‌ ಮಾಡಿದ್ದಾರೆ. ಓಲ್ಡ್‌ ಇಸ್‌ ಗೋಲ್ಡ್‌ ಅನ್ನೋ ರೀತಿಯಲ್ಲಿ ಅಂದರೆ ಅಂಚೆ ಪತ್ರದಲ್ಲಿ ತಮ್ಮ ಮದುವೆ ಆಮಂತ್ರಣವನ್ನು ತಾವೇ ಖುದ್ದಾಗಿ ಬರೆದು ಪ್ರಿಂಟ್‌ ಮಾಡಿಸಿದ್ದಾರೆ. ಡಾಲಿ ಧನಂಜಯ್‌ ಅವರು ಕವಿತೆ ಕಾವ್ಯ ಹಾಡುಗಳನ್ನು ಅದ್ಭುತವಾಗಿ ಬರೆಯುತ್ತಾರೆ. ಅದೇ ರೀತಿ ತಮ್ಮ ಮದುವೆ ಆಮಂತ್ರಣ ಪತ್ರವನ್ನ ಸಖತ್‌ ಸ್ಪೆಷಲ್‌ ಆಗಿ ಬರೆದಿದ್ದಾರೆ.

ಇನ್ನು ಪೂಜೆ ಮಾಡಿಸಿದ ನಂತರ ಮದುವೆಯ ಮೊದಲ ಇನ್ವಿಟೇಷನ್‌ ಅನ್ನು ರಾಜ್ಯದ ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿ ಡಾಲಿ ಮತ್ತು ಧನ್ಯತಾ ಆಶೀರ್ವಾದ ಪಡೆದಿದ್ದಾರೆ. ಡಾಲಿ ಧನಂಜಯ ಅವರು ಸಿನಿಮಾ ಕ್ಷೇತ್ರದಲ್ಲಿದ್ದರೂ ರಾಜಕೀಯ ಗಣ್ಯರ ಜೊತೆಯೂ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದಾರೆ. ಸಿಎಂ ಮಾತ್ರವಲ್ಲದೇ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರಿಗೂ ಕೂಡ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನ ನೀಡಿ ಆಶೀರ್ವಾದ ಪಡೆದಿದ್ದಾರೆ. ಹೆಚ್ ಡಿ ಡಿ. ಕುಟುಂಬಸ್ಥರು ದೆಹಲಿಯಿಂದ ಆಗಮಿಸಿದ ನಂತರ ಡಾಲಿ -ಧನ್ಯತ ದೇವೇಗೌಡರನ್ನ ಭೇಟಿ ಮಾಡಿ ಪತ್ರಿಕೆ ನೀಡಲಿದ್ದಾರೆ .

ಫೆಬ್ರವರಿ 16 ರಂದು ಡಾಲಿ ಧನಂಜಯ ಅವರ ಮದುವೆ ಮೈಸೂರಿನ ಅಂಬಾವಿಲಾಸ ಅರಮನೆಯ ಮುಂಭಾಗದ ವಸ್ತು ಪ್ರದರ್ಶನ ಗ್ರೌಂಡ್‌ ನಲ್ಲಿ ನಡೆಯಲಿದೆ. ಶನಿವಾರ ಆರತಕ್ಷತೆ ಭಾನುವಾರ ವಿವಾಹ ನೆರವೇರಲಿದೆ.
ಸದ್ಯ ಇಂದಿನಿಂದ ಪತ್ರಿಕೆ ಹಂಚಲು ಶುರು ಮಾಡಿದ್ದು ಡಾಲಿ ಮದುವೆಗೆ ಕೇಲವ ಸಿನಿಮಾ ಗಣ್ಯರು ಮಾತ್ರವಲ್ಲದೇ ರಾಜಕೀಯ ಗಣ್ಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

Categories
ಸಿನಿ ಸುದ್ದಿ

ಚಂದನವನದ ಚಿಲುಮೆಗಳು ದ್ವಿಭಾಷಾ ಪುಸ್ತಕ ಬಿಡುಗಡೆ

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಹೊರ ತಂದಿರುವ ಚಂದನವನದ ಚಿಲುಮೆಗಳು/Landmarks of Sandalwood ಪುಸ್ತಕ ಇಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಆಯಿತು. ಕನ್ನಡದಲ್ಲಿ ಡಾ.ಶರಣು ಹುಲ್ಲೂರು, ಇಂಗ್ಲಿಷ್ ನಲ್ಲಿ ಎಸ್. ಶ್ಯಾಮ್ ಪ್ರಸಾದ್ ಬರೆದಿರುವ ಈ ದ್ವಿಭಾಷಾ ಪುಸ್ತಕವನ್ನು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಟಿ.ಎಸ್.ನಾಗಾಭರಣ, ನಟ ಶ್ರೀಮುರುಳಿ ಮತ್ತು ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಬಿಡುಗಡೆ ಮಾಡಿದರು.

ಕನ್ನಡ ಚಲನಚಿತ್ರ ರಂಗ 90 ವರ್ಷ ತುಂಬಿರುವ ಈ ಸಂದರ್ಭದಲ್ಲಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯು ಈ ಅಪರೂಪದ ಕಾಫಿ ಟೇಬಲ್ ಪುಸ್ತಕವನ್ನು ಹೊರತಂದಿದ್ದು, ಕನ್ನಡ ಚಿತ್ರರಂಗಕ್ಕೆ ತಿರುವು ನೀಡಿದಂತಹ 90 ಚಿತ್ರಗಳ ವಿಶೇಷ ದಾಖಲೆ ಮತ್ತು ಅಪರೂಪದ ಫೋಟೋಗಳನ್ನು ಈ ಪುಸ್ತಕ ಒಳಗೊಂಡಿದೆ. ಕನ್ನಡ ಸಿನಿಮಾ ರಂಗದ ಕುರಿತು ದ್ವಿಭಾಷೆಯಲ್ಲಿ ಬಂದ ಕನ್ನಡದ ಮೊದಲ ಕಾಫಿ ಟೇಬಲ್ ಪುಸ್ತಕ ಇದಾಗಿದೆ.

ಪತ್ರಕರ್ತರು ಹಾಗೂ ಲೇಖಕರೂ ಆಗಿರುವ ಡಾ. ಶರಣು ಹುಲ್ಲೂರು ಮತ್ತು ಎಸ್. ಶ್ಯಾಮ್ ಪ್ರಸಾದ್ ಜೊತೆಯಾಗಿ ಆರೇಳು ತಿಂಗಳ ಕಾಲ ಈ ಪುಸ್ತಕ ಹೊರತರಲು ಶ್ರಮಿಸಿದ್ದನ್ನು ಹಂಸಲೇಖ ಮುಕ್ತ ಕಂಠದಿಂದ ಹೊಗಳಿದರು. ಇಂತಹ ದಾಖಲೆಗಳು ಹೆಚ್ಚಾಗಲಿ ಅಂತ ಹಾರೈಸಿದರು.

ಪುಸ್ತಕ ರೂಪದಲ್ಲಿ ಸಿನಿಮಾ ಕುರಿತಾದ ವಿಷಯಗಳು ಕನ್ನಡದಲ್ಲಿ ವಿರಳ, ದಾಖಲೀಕರವೂ ಇಲ್ಲ. ಅದು ಕನ್ನಡದಲ್ಲಿ ಆಗಲಿ ಅಂತ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿದರು.

ಸಿನಿಮಾ ಪಠ್ಯಗಳ ಜರೂರತ್ತು ಇಂದಿನ ದಿನವಿದೆ. ಅದು ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಮೂಲಕ ಆಗಿರುವುದು ಅಭಿನಂದನೆ ಸಲ್ಲಿಸಲೇಬೇಕಾದ ಕೆಲಸ. ಪುಸ್ತಕ ಎಲ್ಲರ ಮನೆಯಲ್ಲೂ ಇರಲಿ ಅಂದರು ಟಿ.ಎಸ್. ನಾಗಾಭರಣ.

ಚಲನಚಿತ್ರ ಪತ್ರಕರ್ತರ ಮತ್ತು ಸಿನಿಮಾ ರಂಗದ ನಂಟಿನ ಕುರಿತಾಗಿ ಶ್ರೀಮುರುಳಿ ಮಾತನಾಡಿ, ಗಾನಯೋಗಿ ಪಂಚಾಕ್ಷರಿ ಗವಾಯಿ ಸಿನಿಮಾದ ಗೀತೆ ಹಾಡಿ ರಂಜಿಸಿದರು.

ಡಾ.ರಾಜಕುಮಾರ ಕಿಡ್ನ್ಯಾಪ್ ಸೇರಿದಂತೆ ತಮ್ಮ ಬಾಲ್ಯದ ಸಿನಿಮಾ ಕುರಿತಾಗಿ ಆಯೇಷಾ ಖಾನಂ ಮಾತನಾಡಿದರು.

ಕನ್ನಡದ ಸಿನಿಮಾ ರಂಗದ ಅನೇಕ ನಟ ನಟಿಯರು, ತಂತ್ರಜ್ಞರು, ಪತ್ರಕರ್ತರು ಮತ್ತು ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Categories
ಸಿನಿ ಸುದ್ದಿ

ಛೂ ಮಂತರ್ ರಿಲೀಸ್ ಗೆ ರೆಡಿ: ಜನವರಿ 10ಕ್ಕೆ ತೆರೆಗೆ

ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸಿರುವ, “ಕರ್ವ”‌ ಖ್ಯಾತಿಯ ನವನೀತ್ ನಿರ್ದೇಶನದಲ್ಲಿ ಶರಣ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಛೂ ಮಂತರ್” ಚಿತ್ರ ಹೊಸವರ್ಷದ ಆರಂಭದಲ್ಲಿ ಹಾಗೂ ಸಂಕ್ರಾಂತಿ ಸಮೀಪದಲ್ಲಿ ಅಂದರೆ ಜನವರಿ 10 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಸಂಕ್ರಾಂತಿ ಸಮಯದಲ್ಲಿ ತೆಲುಗು, ತಮಿಳಿನ‌ ದೊಡ್ಡದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಆದರೆ ಕನ್ನಡದಲ್ಲಿ ಯಾವುದೇ ಚಿತ್ರಗಳು ಸಂಕ್ರಾಂತಿ ಸಮಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾಗಿಲ್ಲ. ಬಹಳ ವರ್ಷಗಳ ನಂತರ ಕನ್ನಡದ “ಛೂ ಮಂತರ್” ಚಿತ್ರವನ್ನು ಸಂಕ್ರಾಂತಿ ಸಮಯಕ್ಕೆ ನಿರ್ಮಾಪಕ ತರುಣ್ ಶಿವಪ್ಪ ಬಿಡುಗಡೆ ಮಾಡುತ್ತಿದ್ದಾರೆ.

ಟೀಸರ್ ಬಿಡುಗಡೆ ಹಾಗೂ ಚಿತ್ರದ ದಿನಾಂಕ ಘೋಷಣೆ ಮಾಡಲು ಆಯೋಜಿಸಲಾಗಿದ್ದ ಸಮಾರಂಭಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್‌ ಎಂ ಸುರೇಶ್, ನಿರ್ಮಾಪಕ ಕೆ.ಮಂಜು ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಶುಭ ಕೋರಿದರು. ಆನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಇಡೀ ಚಿತ್ರತಂಡದ ಪರಿಶ್ರಮದಿಂದ “ಛೂ ಮಂತರ್” ಉತ್ತಮವಾಗಿ ಬಂದಿದೆ. ಬಹು ನಿರೀಕ್ಷಿತ ಈ ಚಿತ್ರ ಜನವರಿ 10 ರಂದು ಬಿಡುಗಡೆಯಾಗಲಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ತರುಣ್ ಶಿವಪ್ಪ ತಿಳಿಸಿದರು.

ಇದೊಂದು ಡಾರ್ಕ್ ಹ್ಯೂಮರ್ ಜಾನರ್ ನ ಹಾರಾರ್ ಚಿತ್ರ. ಉತ್ತರ ಕಾಂಡ, ಶ್ರೀಲಂಕ, ಮೈಸೂರು, ಬೆಂಗಳೂರು ಮುಂತಾದ ಕಡೆ ಅರವತ್ತು ದಿನಗಳ ಚಿತ್ರೀಕರಣ ಮಾಡಿದ್ದೇವೆ. ಬೆಂಗಳೂರಿನಲ್ಲಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಹಾಕಲಾಗಿದ್ದ ಅದ್ದೂರಿ ಸೆಟ್ ನಲ್ಲೇ ಹೆಚ್ಚಿನ ಚಿತ್ರೀಕರಣ ನಡೆದಿದೆ. ರವಿವರ್ಮ ಸಾಹಸ ನಿರ್ದೇಶನ‌ ಮಾಡಿದ್ದಾರೆ. ಅನೂಪ್ ಅವರ ಛಾಯಾಗ್ರಹಣ ಹಾಗೂ ಶರಣ್ ಅವರು ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಅದ್ಭುತವಾಗಿದೆ ಎಂದರು ನಿರ್ದೇಶಕ ನವನೀತ್.

ತರುಣ್ ಸುಧೀರ್ ಈ ಚಿತ್ರಕ್ಕೆ ಓಂಕಾರ ಹಾಕಿದರು. ದರ್ಶನ್ ಅವರು ಶೀರ್ಷಿಕೆ ನೀಡಿದರು. ಅಲ್ಲಿಂದ ಚಿತ್ರದ ಜರ್ನಿ ಆರಂಭವಾಯಿತು. ನವನೀತ್ ಅವರ ನಿರ್ದೇಶನದ ಈ ಚಿತ್ರವನ್ನು ತರುಣ್ ಹಾಗೂ ಮಾನಸ ತರುಣ್ ಅವರು ಅದ್ದೂರಿಯಾಗಿ‌ ನಿರ್ಮಾಣ‌ ಮಾಡಿದ್ದಾರೆ.‌ ಸುಮಾರು ವರ್ಷಗಳಿಂದ ಸಾಮಾನ್ಯವಾಗಿ ಸಂಕ್ರಾಂತಿ ಸಮಯಕ್ಕೆ ಕನ್ನಡ ಚಿತ್ರಗಳನ್ನು ಬಿಡುಗಡೆ‌ ಮಾಡುತ್ತಿರಲಿಲ್ಲ. ಆದರೆ ತರುಣ್ ಅವರು ಸಂಕ್ರಾಂತಿ ಸಮಯಕ್ಕೆ ಚಿತ್ರ ಬಿಡುಗಡೆ‌ ಮಾಡುತ್ತಿದ್ದಾರೆ. ಉತ್ತಮ‌ ಕಥಾಹಂದರ ಹೊಂದಿರುವ ಈ ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ನಂಬಿಕೆ ನನ್ನದು ಹಾಗೂ ಚಿತ್ರತಂಡದು. ಮುಂದೆ ಇದೇ ದಿನಾಂಕದಲ್ಲಿ ತಮ್ಮ ಚಿತ್ರವನ್ನು ಬಿಡುಗಡೆ ಮಾಡೋಣ ಎನ್ನುವಷ್ಟು ಈ ಚಿತ್ರ ಯಶಸ್ವಿಯಾಗಲಿ ಎಂದರು ನಾಯಕ ಶರಣ್.

ನಾನು ನಾಯಕನಾಗಿ ನಟಿಸಿದ್ದ‌ ಹಾಗೂ ನನ್ನ ಮತ್ತು ಶರಣ್ ಅವರ ಕಾಂಬಿನೇಶನ್ ನಲ್ಲಿ ಮೂಡಿ ಬಂದಿದ್ದ “ಉಪಾಧ್ಯಕ್ಷ” ಕಳೆದ ಜನವರಿಯಲ್ಲಿ ಬಿಡುಗಡೆಯಾಗಿತ್ತು. ಈ ಜನವರಿಯಲ್ಲಿ ನಮ್ಮಿಬ್ಬರ ಕಾಂಬಿನೇಶ್ ನಲ್ಲಿ ಬಂದಿರುವ ಈ ಚಿತ್ರ ಬಿಡುಗಡೆಯಾಗುತ್ತಿದೆ. ಆದರೆ ಈ ಚಿತ್ರ ನಮ್ಮಿಬ್ಬರ ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಎಂದು ನಟ ಚಿಕ್ಕಣ್ಣ ತಿಳಿಸಿದರು.

ಶರಣ್ ಅವರ ಜೊತೆಗೆ ನಟಿಸಬೇಕೆಂಬ ಆಸೆ ಈ ಚಿತ್ರದ ಮೂಲಕ‌ ಈಡೇರಿದೆ ಎಂದು ನಟಿ ಮೇಘನಾ‌ ಗಾಂವ್ಕರ್ ತಿಳಿಸಿದರು. ಉತ್ತಮ ತಂಡದೊಂದಿಗೆ ಕೆಲಸ ಮಾಡಿದ್ದು ಖುಷಿಯಾಗಿದೆ ಎಂದು ನಟಿ ಅದಿತಿ ಪ್ರಭುದೇವ ಹೇಳಿದರು. ಚಿತ್ರದಲ್ಲಿ ಅಭಿನಯಿಸಿರುವ ಪ್ರಭು ಮುಂಡ್ಕರ್, ದಿಲೀಪ್‌ ರಾಜ್, ಧರ್ಮ, ನರಸಿಂಹ ಜಾಲಹಳ್ಳಿ, ರಜನಿ ಭಾರದ್ವಾಜ್ ಸಹ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ನಿರಂಜನ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಪುಣ್ಯಪಾದಕ್ಕೆ ಸಾಥ್ ಕೊಟ್ಟ ಶ್ರೀಮುರಳಿ: ಈ ಪಾದ ಪುಣ್ಯಪಾದ ಫಸ್ಟ್ ಲುಕ್ ರಿಲೀಸ್

ದಾರಿ ಯಾವುದಯ್ಯ ವೈಕುಂಠಕ್ಕೆ ಚಿತ್ರದ
ಖ್ಯಾತಿಯ ನಿರ್ದೇಶಕರಾದ ಸಿದ್ದು ಪೂರ್ಣಚಂದ್ರರವರು ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಮತ್ತೊಂದು ಚಿತ್ರ”ಈ ಪಾದ ಪುಣ್ಯಪಾದ”. ಇತ್ತೀಚಿಗೆ ಈ ಚಿತ್ರದ ಮೊದಲ ಪೋಸ್ಟರ್ ಅನ್ನು ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರು ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.

ಇದೊಂದು ಆನೆ ಕಾಲು ರೋಗಿಯ ಕಥೆಯಾಧಾರಿತ ಚಿತ್ರವಾಗಿರುವುದರಿಂದ ಪ್ರತಿಯೊಬ್ಬ ಪ್ರೇಕ್ಷಕನಿಗೂ ಕೂಡ ಹೊಸ ಆಯಾಮದಲ್ಲಿ ಈ ಚಿತ್ರ ಪರಿಣಾಮ ಬೀರಬಹುದು ಎಂಬುದು ನಿರ್ದೇಶಕರ ಆಶಯ. ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ರೀತಿಯ ಖಾಯಿಲೆಗಳು ಸಂಭವಿಸಿದಾಗ ಆ ರೋಗಕ್ಕಿಂತ ಮಾನಸಿಕವಾಗಿಯೇ ಯಾತನೆ ಪಡುವುದು ಜಾಸ್ತಿ ಆಗಿರುತ್ತದೆ. ಯಾವುದೇ ರೋಗ ಬಂದರೂ ಕೂಡ ನಾವು ಎದೆಗುಂದದೆ ತಾಳ್ಮೆಯಿಂದ ಅದನ್ನು ಎದುರಿಸಬೇಕು ಎಂಬುದೇ ಈ ಚಿತ್ರದ ಕಥೆಯಾಗಿದೆ.

ಈ ಕಥೆಯನ್ನು ಹಲವು ವರ್ಷಗಳಿಂದ ಅಧ್ಯಯನ ಮಾಡಿ ಒಂದು ಚಿತ್ರಕಥೆಯ ರೂಪು ರೇಷೆಗಳನ್ನು ಸಿದ್ಧಪಡಿಸಿ ಆನಂತರ ಇದನ್ನು ಚಿತ್ರವಾಗಿಸಿದ್ದಾರೆ. ಯಾವುದೇ ರೋಗ ಬಂದಿರುವ ವ್ಯಕ್ತಿಯನ್ನು ಯಾವ ರೀತಿ ಪ್ರೀತಿಯಿಂದ ನೋಡಿಕೊಳ್ಳಬೇಕು, ಸಾಂತ್ವನ ಹೇಳಬೇಕು ಎಂಬುದು ಈ ಚಿತ್ರದ ಮುಖಾಂತರ ಕಾಣಿಸುತ್ತದೆ. ಜೊತೆಗೆ ಸಾಮಾಜಿಕ ಪರಿಣಾಮ ಬೀರುವಂತಹ ಚಿತ್ರಗಳು ಇತ್ತೀಚೆಗೆ ಕಡಿಮೆಯಾಗಿರುವುದರಿಂದ ಇಂತಹ ಚಿತ್ರಕ್ಕೆ ಪ್ರೋತ್ಸಾಹ ಕೊಡಬೇಕೆಂಬುದು ಇಡೀ ಚಿತ್ರತಂಡದ ಆಶಯ ಆಗಿದೆ.

ಆ ಕಾರಣಕ್ಕಾಗಿಯೇ ಶ್ರೀಮುರಳಿ ಅವರು ಈ ನಿಟ್ಟಿನಲ್ಲಾದರೂ ಹೊಸಬರಿಗೆ ಪ್ರೋತ್ಸಾಹ ನೀಡಬೇಕು ಹೊಸಬರಿಗೆ ದಾರಿಯಾಗಬೇಕು
ಹಾಗಾಗಿ ನಾನು ಈ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆಗೊಳಿಸುತ್ತಾ ಇದ್ದೀನಿ. ನೀವು ಕೂಡ ಈ ಚಿತ್ರವನ್ನು ನೋಡಬೇಕು ಅನ್ನುವ ಅವರ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಈ ಚಿತ್ರಕ್ಕೆ ನಾಯಕ ನಟರಾಗಿ ಆಟೋ ನಾಗರಾಜ್ ರವರು ಈ ಪಾತ್ರವನ್ನು ನಿಭಾಯಿಸಿದ್ದಾರೆ. ಈ ಹಿಂದೆ ಅವರು ಆಟೋ ಪ್ರಮೋಷನ್ ಅನ್ನು ಕಳೆದ 18 ವರ್ಷಗಳಿಂದಲೂ ಮಾಡಿದಂತವರು, ಅವರು ಮೊದಲ ಬಾರಿಗೆ ನಾಯಕ ನಟರಾಗಿ ಈ ಪಾತ್ರವನ್ನು ನಿರ್ವಹಿಸಿದ್ದಾರೆ. ನಂತರ ರಶ್ಮಿ, ಚೈತ್ರ, ಪ್ರಮೀಳಾ ಸುಬ್ರಹ್ಮಣ್ಯ, ಮನೋಜ್, ಹರೀಶ್ ಕುಂದೂರು, ಬೇಬಿ ರಿದಿ, ಪವಿತ್ರ, ಬಾಲರಾಜ್ ವಾಡಿ, ರೋಹಿಣಿ, ಶಂಕರ್ ಭಟ್, ಪ್ರೀತಿ, ಮೀಸೆ ಮೂರ್ತಿ ಇನ್ನೂ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಈ ಚಿತ್ರಕ್ಕೆ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಅನಂತ ಆರ್ಯನ್ ರವರು ನೀಡಿದ್ದಾರೆ. ಕಲೆ ಬಸವರಾಜ್ ಆಚಾರ್, ವಸ್ತ್ರಲಂಕಾರ ನಾಗರತ್ನ ಕೆ ಎಚ್, ಶಬ್ದ ವಿನ್ಯಾಸ ಶ್ರೀರಾಮ್, ಕಲರಿಂಗ್ ಗಗನ್ ಆರ್, ಸಂಕಲನ ದೀಪು ಸಿ ಎಸ್ ನಿರ್ವಹಿಸಿದ್ದಾರೆ. ಈ ಚಿತ್ರ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು ಸರ್ಟಿಫಿಕೇಟ್ ಪಡೆದಿದೆ. ಈ ಚಿತ್ರವು ಹಲವಾರು ಚಲನಚಿತ್ರೋತ್ಸವಗಳಿಗೆ ಸ್ಪರ್ಧಿಸಲು ರೆಡಿಯಾಗಿದೆ.

error: Content is protected !!