ಕೊಲೆಗಡುಕ ರಾಕ್ಷಸನ ಬೆನ್ನತ್ತುವ ಕುತೂಹಲ…

ವೆಬ್‌ಸಿರೀಸ್‌ ವಿಮರ್ಶೆ

ವೆಬ್‌ಸಿರೀಸ್:‌ ರಾಕ್ಷಸ
ನಿರ್ದೇಶನ ಸುಹಾನ್‌ ಪ್ರಸಾದ್‌
ನಿರ್ಮಾಣ: ತರುಣ್‌ ಸುಧೀರ್‌
ತಾರಾಗಣ: ವಿಜಯ ರಾಘವೇಂದ್ರ, ಮಯೂರಿ, ಅಭಿಜಿತ್‌,‌ ಜಹಾಗೀರ್, ಅಪ್ಪಣ್ಣ, ಅವಿನಾಶ್‌ ಇತರರು.

ಅದು ಉತ್ತರ ಕರ್ನಾಟಕದ ಸವದತ್ತಿ. ಆ ಊರಲ್ಲಿ ಒಂದಲ್ಲ, ಎರಡಲ್ಲ, ಮೂರಲ್ಲ ಒಂದಷ್ಟು ಸಾಲು ಸಾಲು ಜನರ ಕಣ್ಮರೆ. ಆದರೆ, ಅಲ್ಲಿ ಹರಿಯುವ ನದಿಯೊಂದರಲ್ಲಿ ಒಂದು ಮೊಸಳೆಯೇ ಜನರನ್ನು ತಿಂದು ಹಾಕುತ್ತಿದೆ ಅನ್ನೋ ಅನುಮಾನ. ಆ ಅನುಮಾನಕ್ಕೆ ಆ ನದಿಯ ದಡದಲ್ಲಿ ಸಿಗುವ ಕೈ ತುಂಡು ಕಾರಣ. ಆದರೂ, ಒಂದು ಮೊಸಳೆ ಜನರನ್ನು ತಿಂದು ಹಾಕುತ್ತಿದೆಯೋ ಅಥವಾ ಬೇರೆ ಯಾರದ್ದಾದರೂ ಕೈವಾಡವಿದೆಯೋ? ಈ ಪ್ರಶ್ನೆ ಇಟ್ಟುಕೊಂಡು ಇನ್ಸ್‌ಪೆಕ್ಟರ್‌ ಹನುಮಂತು ತನ್ನ ಪೊಲೀಸ್‌ ತಂಡದ ಜೊತೆ ತನಿಖೆ ಶುರುಮಾಡುತ್ತಾನೆ. ಆ ತನಿಖೆಯಲ್ಲಿ ನಿಜವಾಗಿಯೂ ನಡೆದಿದ್ದೇನು? ಈ ಕುತೂಹಲವಿದ್ದರೆ ಒಂದೊಮ್ಮೆ ಈ ವೆಬ್‌ಸರಣಿ ನೋಡಲು ಯಾವುದೇ ಅಡ್ಡಿ ಇಲ್ಲ.

ಕನ್ನಡದಲ್ಲಿ ಇಂತಹ ಪ್ರಯೋಗ ಮಾಡಿರುವ ತಂಡವನ್ನು ಪ್ರೋತ್ಸಾಹಿಸಿ, ಚೆಂದದ ವೇದಿಕೆ ಕಲ್ಪಿಸಿ ಕೊಟ್ಟಿರುವ ಜೀ5 ಕನ್ನಡಿಗರಿಗೊಂದು ಸೈಕಲಾಜಿಕಲ್‌ ಕ್ರೈಂ ಥ್ರಿಲ್ಲರ್‌ ಜಾನರ್‌ನ ಸರಣಿ ನೀಡಿದೆ. ಇದೊಂದು ಕುತೂಹಲ ಕೆರಳಿಸುವ ಕಥೆ. ಜೊತೆಗೆ ಮುಂದೇನಾಗುತ್ತೆ ಅನ್ನೋ ಪ್ರಶ್ನೆ. ಇವುಗಳ ಜೊತೆ ಅಲ್ಲಲ್ಲಿ ಬರುವ ಟ್ವಿಸ್ಟ್.‌ ಎಲ್ಲಕ್ಕಿಂತಲೂ ಹೆಚ್ಚಾಗಿ ಇದೇ ಮೊದಲ ಸಲ ವೆಬ್‌ ಸರಣಿಯಲ್ಲಲಿ ಉತ್ತರ ಕರ್ನಾಟಕದ ಭಾಷೆ ಬಳಸಿರುವುದು. ಇಡೀ ಕಥೆ ಸವದತ್ತಿಯಲ್ಲೇ ನಡೆಯುವುದರಿಂದ ಅಲ್ಲಿನ ಸೊಗಡು, ಸೊಬಗು, ಆಚಾರ-ವಿಚಾರಗಳೆಲ್ಲವೂ ಈ ಸರಣಿಗೊಂದು ಬಲ ಕೊಟ್ಟಿವೆ. ಒಂದು‌ ಸೈಕಲಾಜಿಲ್‌ ಕ್ರೈಂ ಥ್ರಿಲ್ಲರ್ ಹೇಗೆಲ್ಲಾ ಇರಬೇಕೋ, ಎಷ್ಟೆಲ್ಲಾ ಕುತೂಹಲ ಕೆರಳಿಸಬೇಕೋ ಆ ಎಲ್ಲಾ ಅಂಶಗಳು ಇಲ್ಲಿವೆ.

ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ್ದು ನಿರ್ದೇಶಕರ ಜಾಣತನ. ಜನರ ಕಣ್ಮರೆ ಮತ್ತು ಮೊಸಳೆ ಇಟ್ಟುಕೊಂಡು ಕುತೂಹಲ ಮೂಡಿಸುವ‌ ನಿರೂಪಣೆಯೊಂದಿಗೆ ಹೆಣೆದಿರುವ ಕಥೆ ನೋಡಿಸಿಕೊಂಡು ಹೋಗುತ್ತೆ. ವೆಬ್‌ಸೀರಿಸ್‌ ಕೂಡ ಯಾವುದೇ ಸಿನಿಮಾಗಿಂತಲೂ ಮೇಕಿಂಗ್‌ನಲ್ಲಿ ಕಡಿಮೆ ಇಲ್ಲ. ಅಷ್ಟೊಂದು ಅದ್ಭುತವಾಗಿ ಸರಣಿ ಮೂಡಿಬಂದಿದೆ. ಕಥೆ ಬಗ್ಗೆ ಹೇಳುವುದಾದರೆ, ಮಲಪ್ರಭಾ ನದಿ ತೀರದ ನಿಗೂಢತೆಯ ಅಚ್ಚರಿಯ ವಿಷಯಗಳು ಇಲ್ಲಿ ಹೈಲೆಟ್.‌ ಮೊಸಳೆಯೊಂದರ ದಾಳಿ ಸುತ್ತ ಈ ಕಥೆ ಹೇಳಲಾಗಿದೆ. ಕಣ್ಮರೆ ಆಗುವ ಜನರನ್ನು ಯಾರಾದರೂ ಕೊಲೆ ಮಾಡುತ್ತಿದ್ದಾರೋ ಅಥವಾ ನದಿಯ ಹಿನ್ನೀರಿನಲ್ಲಿರುವ ಮೊಸಳೆಯ ದಾಳಿಯೋ ಅನ್ನೋದರ ಕುತೂಹಲಕರ ಸಂಗತಿ ನೋಡುಗರನ್ನು ಸೀಟಿನಂಚಿಗೆ ತಂದುಕೂರಿಸುತ್ತೆ. ಈ ವಿಷಯದಲ್ಲಿ ನಿರ್ದೇಶಕರ ಪ್ರಯತ್ನ ಇಲ್ಲಿ ಸಾರ್ಥಕತೆ ಎನಿಸುತ್ತೆ.

ಒಂದು ಕಡೆ ಮೊಸಳೆ ದಾಳಿ ಮಾಡುತ್ತಿದೆಯೋ, ಯಾರದ್ದಾದರೂ ಕೈವಾಡವಿದೆಯೋ ಅನ್ನೋದರ ಸುತ್ತ ತನಿಖೆ ನಡೆಸುವ ಪೊಲೀಸ್‌ ಅಧಿಕಾರಿ. ಇನ್ನೊಂದು ಕಡೆ ಆ ಅಧಿಕಾರಿಯ ಹೆಂಡತಿ ಹೆರಿಗೆ ವೇಳೆಯೂ ಆಸ್ಪತ್ರೆಯಲ್ಲಿರದೆ ಪ್ರಾಮಾಣಿಕವಾಗಿ ಕೆಲಸಕ್ಕೆ ಹೋಗುವ ಸಂದರ್ಭ. ಇವೆಲ್ಲದರ ನಡುವೆ ಬರುವ ಒಂದಷ್ಟು ತಿರುವುಗಳು ವೆಬ್‌ಸಿರೀಸ್‌ನ ವೇಗಕ್ಕೆ ಹೆಗಲು ಕೊಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ, ಇಲ್ಲಿ ಆ ಭಾಷೆ ಮತ್ತು ಅಲ್ಲಿನ ಪರಿಸರ ರುಚಿಸುತ್ತಾ ಹೋಗುತ್ತೆ. ಒಂದು ಕಡೆ ಥ್ರಿಲ್ಲಿಂಗ್‌ ಎಪಿಸೋಡ್.‌ ಇನ್ನೊಂದು ಕಡೆ ಎಮೋಷನಲ್‌ ಕಂಟೆಂಟ್‌ ಈ ಎರಡರ ನಡುವೆ ಅಲ್ಲಲ್ಲಿ ಬರುವ ಹಾಸ್ಯ ಸನ್ನಿವೇಶಗಳು ಸರಣಿಯ ತೂಕವನ್ನು ಹೆಚ್ಚಿಸಿವೆ. ಪ್ರತಿ ಎಪಿಸೋಡ್‌ ಕೂಡ ಮುಂದಿನ ಎಪಿಸೋಡ್‌ ನೋಡಲೇಬೇಕೆನ್ನುವ ಕುತೂಹಲ ಕೆರಳಿಸುವುದು ನಿಜ. ಸೈಕಲಾಜಿಕಲ್‌ ಥ್ರಿಲ್ಲರ್‌ ಕಥೆಗಳನ್ನು ಇಷ್ಟಪಡುವ ವರ್ಗಕ್ಕೆ ರಾಕ್ಷಸ ಇಷ್ಟವಾಗುತ್ತೆ ಅಂತ ಮುಲಾಜಿಲ್ಲದೆ ಹೇಳಬಹುದು.

ಇನ್ನು, ಇದೇ ಮೊದಲ ಸಲ ವಿಜಯ್‌ ರಾಘವೇಂದ್ರ ಅವರು ವೆಬ್‌ಸಿರೀಸ್‌ನಲ್ಲಿ ನಟಿಸಿದ್ದಾರೆ. ಪೊಲೀಸ್‌ ಅಧಿಕಾರಿಯಾಗಿ ಒಂದು ಕಡೆ ಹೆಂಡತಿಯನ್ನು ನೋಡಿಕೊಳ್ಳುವ ಜವಾಬ್ದಾರಿ. ಮತ್ತೊಂದು ಕಡೆ ಇಲಾಖೆಯಲ್ಲಿನ ಒತ್ತಡದ ಕೆಲಸ ನಡುವೆ ಹೇಗೆಲ್ಲಾ ಒದ್ದಾಡುತ್ತಾನೆ ಅನ್ನುವ ಸನ್ನಿವೇಶವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಅವರ ಉತ್ತರ ಕರ್ನಾಟಕದ ಭಾಷೆ. ಅವರ ನೈಜ ಅಭಿನಯ ಮೂಲಕ ನೋಡುಗರಲ್ಲಿ ಇನ್ನಷ್ಟು ಹತ್ತಿರವಾಗುತ್ತಾರೆ. ಮಯೂರಿ ಎಮೋಷನಲ್‌ ಆಗಿ ಕನೆಕ್ಟ್‌ ಆಗುವಂತಹ ಪಾತ್ರದಲ್ಲಿ ಮಿಂಚಿದ್ದಾರೆ. ಅಭಿಜಿತ್‌ ಪೊಲೀಸ್‌ ಅಧಿಕಾರಿಯಾಗಿ ಸೈ ಎನಿಸಿಕೊಂಡಿದ್ದಾರೆ. ಉಳಿದಂತೆ ಜಹಾಗೀರ್‌, ಅಪ್ಪಣ್ಣ ಇತರರು ಪಾತ್ರಗಳಿಗೆ ಬಲ ಕೊಟ್ಟಿದ್ದಾರೆ. ಈ ವೆಬ್‌ಸರಣಿಯ ವೇಗಕ್ಕೆ ಹಿನ್ನೆಲೆ ಸಂಗೀತ ಪ್ರಮುಖ ಪಾತ್ರವಹಿಸಿದೆ. ಛಾಯಾಗ್ರಹಣ ರಾಕ್ಷಸನನ್ನು ಅಂದಗಾಣಿಸಿದೆ.

Related Posts

error: Content is protected !!