ಅಸ್ತಿತ್ವಕ್ಕೆ ಬಂತು ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ : ಪದ್ಮಶ್ರೀ ಡಾ. ಗಿರೀಶ್​ ಕಾಸರವಳ್ಳಿ, ಡಾ. ವಿಜಯಮ್ಮ ಉಪಸ್ಥಿತಿ…

ಕನ್ನಡ ಚಿತ್ರರಂಗಕ್ಕೆ ಸಿನಿಮಾ ಪತ್ರಕರ್ತರ ಕೊಡುಗೆ ಅಪಾರ. ಹಲವು ದಶಕಗಳಿಂದಲೂ ಸಿನಿಮಾ ಮತ್ತು ಸಿನಿಮಾ ಪತ್ರಕರ್ತರ ಮಧ್ಯೆ ಬಾಂಧವ್ಯವಿದೆ. ಸಿನಿಮಾ ಪತ್ರಕರ್ತರಿಗಾಗಿ ಒಂದು ಸಂಘ ಇರಲಿಲ್ಲ. ಹಲವಾರು ವರ್ಷಗಳಿಂದಲೂ ಸಂಘ ಕಟ್ಟುವ ಕೆಲಸ ನಡೆಯುತ್ತಲೇ ಇತ್ತಾದರೂ, ಅದು ಸಾಧ್ಯವಾಗಿರಲಿಲ್ಲ. ಈಗ ಕರ್ನಾಟಕ ಚಲನಚಿತ್ರ ಪತ್ರಕರ್ತರ ನೂತನ ಸಂಘ ಅಸ್ತಿತ್ವಕ್ಕೆ ಬಂದಿದೆ

ಕನ್ನಡದ ಒಟ್ಟು ಸಿನಿಮಾ ಬೆಳವಣಿಗೆ, ಇತಿಹಾಸವನ್ನು ರಾಷ್ಟ್ರೀಯ ನೆಲೆಯಲ್ಲಿ ವಿಶ್ಲೇಷಣೆ ಮಾಡುವುದು ತುರ್ತು ಅಗತ್ಯವಿದೆ ಎಂದು ಹಿರಿಯ ನಿರ್ದೇಶಕ ಪದ್ಮಶ್ರೀ ಗಿರೀಶ್ ಕಾಸರವಳ್ಳಿ ಹೇಳಿದ್ದಾರೆ. ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘಕ್ಕೆ ಚಾಲನೆ‌ ನೀಡುವುದರ ಜೊತೆಗೆ, ಲಾಂಛನ ಬಿಡುಗಡೆ ಮಾಡಿ ಅವರು ಮಾತಾಡಿದರು.


”ಸಂಸ್ಕಾರ’ , ‘ಸ್ಕೂಲ್ ಮಾಸ್ಟರ್ ‘ ರೀತಿಯ ಚಿತ್ರಗಳನ್ನು ಸರಿಯಾಗಿ ಬಿಂಬಿಸುವ ಕೆಲಸ ಆಗಿಲ್ಲ. ರೌಡಿಸಂ ಮಾದರಿಯ ಸಿನಿಮಾಗಳನ್ನು‌ ಹೆಚ್ಚು ಹೆಚ್ಚು ಪ್ರೊಜೆಕ್ಟ್ ಮಾಡಿ ರಾಜ್ಯದ ಹೊರಗೂ ಕನ್ನಡ ಚಿತ್ರಗಳ ಕುರಿತಂತೆ ನಾವೇ ತಪ್ಪು ಕಲ್ಪನೆ ಮೂಡಿಸಿದ್ದೇವೆ, ಅದನ್ನು ಹೋಗಲಾಡಿಸುವ ಅಗತ್ಯವಿದೆ’ ಎಂದರು.


‘ಕನ್ನಡದ ಅಸ್ಮಿತೆ, ಕಲಾತ್ಮಕ ಹೆಗ್ಗಳಿಕೆ ತೋರಿಸಬೇಕು, ಆ ಕೆಲಸ ಆಗಬೇಕು. ಬೆಂಗಳೂರು ಅಲ್ಲದೆ ರಾಜ್ಯದ ಆಚೆಗೂ ಕನ್ನಡದಲ್ಲಿ ಈ ರೀತಿ ಸಾಧನೆ ಆಗಿದೆ ಎನ್ನುವುದು ತಿಳಿಸಬೇಕು’ ಎಂದು ಅವರು ಸಲಹೆ ನೀಡಿದರು.


‘ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳನ್ನು ಪ್ರೊಜೆಕ್ಟ್ ಮಾಡುತ್ತಿಲ್ಲ. ‘‌ಕಾಂತಾರ ‘ ತನ್ನ ಅಸ್ಮಿತೆಯಿಂದ ದೇಶವಿದೇಶಗಳಲ್ಲಿ ಯಶಸ್ಸು ಗಳಿಸಿತು. ಆದರೆ ‘ಕೆಜಿಎಫ್’ ಹಾಗಲ್ಲ, ಅದರ ಗೆಲುವಿಗೆ ಬೇರೆಯದೇ ಆದ ಕಾರಣ ಇದೆ. ಕನ್ನಡದಲ್ಲಿ ಬೇರೆಯೇ ರೀತಿಯ ಚಿತ್ರಗಳು ಕಳೆದ ನಾಲ್ಕೈದು ವರ್ಷಗಳಲ್ಲಿ ಆಗಿದೆ. ‘ಬಳೆ ಕೆಂಪ’, ‘ಪಿಂಕಿ ಎಲ್ಲಿ’, ‘ನಾನು ಕುಸುಮ’, ‘ಪೆದ್ರೋ’, ‘ಶಿವಮ್ಮ’ ಮುಂತಾದ ಚಿತ್ರಗಳು ಜಗತ್ತಿನಾದ್ಯಂತ ಸದ್ದು ಮಾಡುತ್ತಿವೆ. ಅವುಗಳು ಜನರಿಗೆ ತಲುಪುತ್ತಿಲ್ಲ ಅಷ್ಟೇ’ ಎಂದು ಅವರು ಹೇಳಿದರು.


ದಾಖಲು ಅಗತ್ಯ
ದಲಿತ, ಬಂಡಾಯ ಸಾಹಿತ್ಯ ಕನ್ನಡ ಚಿತ್ರರಂಗದಲ್ಲಿ ಚಿತ್ರ ಗೀತೆಯಲ್ಲಿ ಬಂದಿದೆ. ಆದರೆ ಸಿನಿಮಾದಲ್ಲಿ ಬಂದಿಲ್ಲ. ‌ಅದನ್ನು ದಾಖಲು ಮಾಡುವ ಅಗತ್ಯವಿದೆ ಎಂದ ಅವರು, ‘ಕೃತಿಯನ್ನು ಸಮಾಜದ ಬೆಳವಣಿಗೆ, ಕಾಲ ಮತ್ತು ಕಾಲಾತೀತವಾಗಿ ನೋಡಬೇಕಾಗಿದೆ. ಪುಟ್ಟಣ್ಣ ಅವರು ಸಾಂಸ್ಕೃತಿಕ, ಧಾರ್ಮಿಕ ನಿಲುವು ಇಟ್ಟುಕೊಂಡು ವಿಶ್ಲೇಷಣೆ ಮಾಡಬೇಕು. ಸಿನಿಮಾ ಶೂನ್ಯದಲ್ಲಿ ಸೃಷ್ಠಿ ಆಗುವುದಿಲ್ಲ’ ಎಂದು ಹೇಳಿದರು.


‘ನಾನು ಚಿತ್ರರಂಗ ಪ್ರವೇಶಿಸಿದ್ದು 1975ರಲ್ಲಿ. ಆಗ ಚಲನಚಿತ್ರ ಪತ್ರಕರ್ತಕರು ಬೆನ್ನೆಲುಬಾಗಿದ್ದರಿಂದ ಈ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಯಿತು. ಕೃತಿಕಾರ ಇಲ್ಲದಿದ್ದರೆ ವಿಮರ್ಶಕನ ಅಗತ್ಯವಿಲ್ಲ. ವಿಮರ್ಶಕ ಆಮ್ಲಜನಕದ ರೀತಿ ಕೆಲಸ ಮಾಡುತ್ತಾರೆ. ಸಿನಿಮಾ ವಿಮರ್ಶೆ ಮಾಡದಿದ್ದರೆ ನನ್ನನ್ನು ನಾನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ಹಿಂದೆ ಪತ್ರಕರ್ತರ ಪರಿಷತ್ ಪ್ರತಿ ವಾರ ನಡೆಸುತ್ತಿದ್ದ ವಿಮರ್ಶೆಗಳ ವಿಮರ್ಶೆ ಸಂವಾದ ಕಾರ್ಯಕ್ರಮ ನಿರ್ದೇಶಕರನ್ನು ಉತ್ತೇಜಿಸುತ್ತಿದ್ದುದನ್ನು ಹೇಳಿದರು.
‘ವಿಮರ್ಶಕರಿಂದ ಮಾಧ್ಯಮ, ಉದ್ಯಮ ಬೆಳೆಯಲಿದೆ. ಇಲ್ಲದಿದ್ದರೆ ಸ್ಥಗಿತವಾಗಲಿದೆ. ಚಲನಚಿತ್ರ ಪತ್ರಕರ್ತರ ಸಂಘ ಮತ್ತೊಮ್ಮೆ ಉದ್ಘಾಟನೆಯಾಗಿರುವುದು ಖುಷಿಕೊಟ್ಟಿದೆ’ ಎಂದರು.


ಹಿರಿಯ ಪರ್ತಕರ್ತೆ ಡಾ. ವಿಜಯಾ ಮಾತನಾಡಿ, ‘ಹಿಂದಿನ ಸಂಘಟನೆಗಳು, ತಮ್ಮ ವೈಯಕ್ತಿಕ ಹಿತಾಸಕ್ತಿ ಮರೆತು, ಚಿತ್ರರಂಗದ ಬೆಳವಣಿಗೆಯನ್ನಷ್ಟೇ ಬಯಸಿದವು, ಇಲ್ಲಿ ಹಾಗಾಗದಂತೆ ಗಮನಹರಿಸಿದ್ದೀರಿ’ ಎಂದು ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಪತ್ರಕರ್ತರ ಕೊಡುಗೆ ಮತ್ತು ವಿವಿಧ ವಿಷಯಗ‌ಳ‌ ಮೇಲೆ ಬೆಳಕು ಚೆಲ್ಲಿದರು.
ಸಂಘದ ಅಧ್ಯಕ್ಷ ಬಾ.ನಾ. ಸುಬ್ರಹ್ಮಣ್ಯ ಸಂಘದ ಕಾರ್ಯ ಚಟುವಟಿಕೆ ಉದ್ದೇಶಗಳ ಕುರಿತು ವಿವರಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ಚಲನಚಿತ್ರ ಅಕಾಡಮಿ ಅಧ್ಯಕ್ಷ ಅಶೋಕ್ ಕಶ್ಯಪ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರ ಅರಸ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಅಖಿಲ ಭಾರತ ಕಾರ್ಯನಿರತ ಒಕ್ಕೂಟದ ಅಧ್ಯಕ್ಷ ಬಿ.ವಿ ಮಲ್ಲಿಕಾರ್ಜುನಯ್ಯ, ಮಾಧ್ಯಮ ತಜ್ಞ ಜಿ.ಎನ್. ಮೋಹನ್, ಹಿರಿಯ ಚಲನಚಿತ್ರ ಪತ್ರಕರ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಂಸ್ಥಾಪಕ ಆಡಳಿತ ಮಂಡಳಿ

ಬಿ.ಎನ್. ಸುಬ್ರಹ್ಮಣ್ಯ – ಅಧ್ಯಕ್ಷರು
ಸುನಯನಾ ಸುರೇಶ್ – ಉಪಾಧ್ಯಕ್ಷರು
ನಾಡಿಗೇರ್ ಚೇತನ್ – ಕಾರ್ಯಾಧ್ಯಕ್ಷರು
ಅರುಣ್ ಕುಮಾರ್. ಜಿ – ಪ್ರಧಾನ ಕಾರ್ಯದರ್ಶಿ
ಜಗದೀಶ್ ಕುಮಾರ್ ಎಸ್ – ಕಾರ್ಯದರ್ಶಿ
ಹರೀಶ್ ಸೀನಪ್ಪ – ಸಹ ಕಾರ್ಯದರ್ಶಿ
ಕೆ.ಎಸ್.ವಾಸು – ಖಜಾಂಚಿ

ಕಾರ್ಯಕಾರಿ ಸಮಿತಿಯ ಸದಸ್ಯರು

ಮನೋಹರ್‌ ಆರ್
ಮಂಜುನಾಥ್ ಎನ್
ದೇಶಾದ್ರಿ ಹೆಚ್
ಲಕ್ಷ್ಮೀನಾರಾಯಣ
ಸಿ.ಜಿ. ರಮೇಶ್
ವಿಜಯ್ ಆರ್
ಅವಿನಾಶ್ ಜಿ.ಆರ್
ಹರ್ಷವರ್ಧನ್ ಎಸ್‌.ಆರ್‌
ಮಾಲತೇಶ ಹೆಚ್. ಜಗ್ಗೇನ್
ಶಶಿಧರ ಚಿತ್ರದುರ್ಗ

Related Posts

error: Content is protected !!