ಕನ್ನಡದ ಮೊದಲ ಬಯೋಪಿಕ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪದ್ಮಶ್ರೀ ಪುರಸ್ಕೃತ ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನು ಆಧರಿಸಿ ತಯಾರಾಗಿರುವ ‘ವಿಜಯಾನಂದ’ ಚಿತ್ರವು ಡಿಸೆಂಬರ್ 9ರಂದು ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಜಗತ್ತಿನಾದ್ಯಂತ 1200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
![](https://cinilahari.in/wp-content/uploads/2022/12/IMG_20221208_115638-714x1024.jpg)
1976ರಲ್ಲಿ ಒಂದು ಟ್ರಕ್ನಿಂದ ಪ್ರಾರಂಭವಾಗಿ ಇಂದು ಭಾರತದ ಅತೀ ದೊಡ್ಡ ಲಾಜಿಸ್ಟಿಕ್ಸ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಆರ್ಲ್ ಸಂಸ್ಥೆಯ ಮಾಲೀಕರಾಗಿರುವ ವಿಜಯ ಸಂಕೇಶ್ವರ ಅವರ ಸಾಹಸಮಯ ಮತ್ತು ರೋಮಾಂಚನಕಾರಿ ಕಥೆಯನ್ನು ಸಾರುವ ಈ ಚಿತ್ರದಲ್ಲಿ ಡಾ. ವಿಜಯ ಸಂಕೇಶ್ವರ ಮತ್ತು ಅವರ ಮಗ ಡಾ. ಆನಂದ ಸಂಕೇಶ್ವರ ಅವರು ನಡೆದು ಬಂದ ಹಾದಿಯ ಕಥೆ ಇದೆ.
![](https://cinilahari.in/wp-content/uploads/2022/12/IMG_20221208_115555-1024x1003.jpg)
ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಇತ್ತೀಚೆಗೆ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಜಯ ಸಂಕೇಶ್ವರ ಅವರ ಜೀವನವನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಪಠ್ಯವನ್ನಾಗಿ ಅಳವಡಿಸಬೇಕು ಎಂದು ಹೇಳಿದ್ದರು. ಅವರೊಬ್ಬ ನಿಜವಾದ ಕಾಯಕಪುರುಷ ಎಂದು ಡಾ. ವಿಜಯ ಸಂಕೇಶ್ವರ ಅವರನ್ನು ಬಣ್ಣಿಸಿದ್ದರು. ಅಂತಹ ಕಾಯಕಪುರುಷನ ಜೀವನ ತೆರೆಯ ಮೇಲೆ ಬರುವುದಕ್ಕೆ ತಯಾರಾಗಿದ್ದು, ನಾಳೆಯಿಂದ ಪ್ರೇಕ್ಷಕರು ಜಗತ್ತಿನಾದ್ಯಂತ ಚಿತ್ರವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
![](https://cinilahari.in/wp-content/uploads/2022/12/IMG_20221208_115649-602x1024.jpg)
ಈಗಾಗಲೇ ಈ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆಯಾಗಿದ್ದು, ಎಲ್ಲ ಭಾಷೆಗಳಲ್ಲೂ ಜನರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಈ ಹಿಂದೆ ‘ಟ್ರಂಕ್’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ರಿಷಿಕಾ ಶರ್ಮ, ‘ವಿಜಯಾನಂದ’ ಚಿತ್ರಕ್ಕೆ ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.
![](https://cinilahari.in/wp-content/uploads/2022/12/IMG_20221208_115610.jpg)
ಆ ಚಿತ್ರದಲ್ಲಿ ನಾಯಕನಾಗಿದ್ದ ನಿಹಾಲ್ ರಜಪೂತ್, ಈ ಚಿತ್ರದಲ್ಲಿ ಡಾ. ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ಅಭಿನಯಿಸಿದ್ದು, ಮೂರು ವಯೋಮಾನ ಮತ್ತು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.
![](https://cinilahari.in/wp-content/uploads/2022/12/IMG_20221208_115708-426x1024.jpg)
ಅನಂತ್ ನಾಗ್, ರವಿಚಂದ್ರನ್, ವಿನಯಾ ಪ್ರಸಾದ್, ಸಿರಿ ಪ್ರಹ್ಲಾದ್, ಅರ್ಚನಾ ಕೊಟ್ಟಿಗೆ, ಪ್ರಕಾಶ್ ಬೆಳವಾಡಿ, ಭರತ್ ಬೋಪಣ್ಣ, ಶೈನ್ ಶೆಟ್ಟಿ, ದಯಾಳ್ ಪದ್ಮನಾಭನ್, ರಮೇಶ್ ಭಟ್ ಮುಂತಾದ ಪ್ರತಿಭಾವಂತ ಕಲಾವಿದರು ವಿಜಯಾನಂದ ಚಿತ್ರದ ಭಾಗವಾಗಿದ್ದಾರೆ.
![](https://cinilahari.in/wp-content/uploads/2022/12/IMG_20221208_115725.jpg)
ವಿಆರ್ಎಲ್ ಪ್ರೊಡಕ್ಷನ್ಸ್ನಡಿ ಡಾ. ಆನಂದ ಸಂಕೇಶ್ವರ ನಿರ್ಮಿಸಿರುವ ‘ವಿಜಯಾನಂದ’ ಚಿತ್ರಕ್ಕೆ ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್ ಸಂಗೀತ ಸಂಯೋಜಿಸಿದ್ದು, ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣವಿದೆ.