ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬನ್ನಿ! ಮೇ 20 ಕ್ಕೆ ಸಕುಟುಂಬ ಸಮೇತ ರಿಲೀಸ್…

ಮದುವೆ, ಮುಂಜಿ ಸೇರಿದಂತೆ ಶುಭ ಸಮಾರಂಭಗಳಿಗೆ ಸಕುಟುಂಬ ಸಮೇತರಾಗಿ ಬನ್ನಿ ಎಂದು ಕರೆಯುವುದು ವಾಡಿಕೆ. ಆದರೆ ಮನೆಯಲ್ಲಿ ಶುಭ ಸಮಾರಂಭ ನಡೆದರೆ ಮನಸ್ಸಿಗೆ ಎಷ್ಟು ಸಂತೋಷವಾಗುವುದೊ, ಅಷ್ಟೇ ಖುಷಿ ಕೊಡುವ “ಸಕುಟುಂಬ ಸಮೇತ” ಎಂಬ ಸಿನಿಮಾ ತೆರೆಗೆ ಬರುತ್ತಿದೆ . ಹೌದು ಮೇ 20 ರಂದು ಚಿತ್ರ ರಿಲೀಸ್ ಆಗುತ್ತಿದೆ.

ನಾಯಕನಾಗಿ ರಕ್ಷಿತ್ ಶೆಟ್ಟಿ ಎಷ್ಟು ಹೆಸರು ಮಾಡಿದ್ದಾರೋ, ಅಷ್ಟೇ ಹೆಸರು ನಿರ್ಮಾಪಕರಾಗೂ ಮಾಡುತ್ತಿದ್ದಾರೆ. ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.

ಪ್ರಸ್ತುತ ರಕ್ಷಿತ್ ಶೆಟ್ಟಿ ತಮ್ಮ ಪರಂ ವಾ ಸ್ಟುಡಿಯೋ ಮೂಲಕ ನಿರ್ಮಿಸಿರುವ “ಸಕುಟುಂಬ ಸಮೇತ” ಚಿತ್ರ ಮೇ ಇಪ್ಪತ್ತರಂದು ತೆರೆಗೆ ಬರುತ್ತಿದೆ.

“ಸಕುಟುಂಬ ಸಮೇತ” ಕುಟುಂಬ ಸಮೇತ ನೋಡುವ ಸಿನಿಮಾ. ಮದುವೆ ನಿಶ್ಚಯವಾದ ಹುಡುಗಿಯೊಬ್ಬಳು ಮದುವೆಗೆ ಒಂದು ವಾರ ಇರುವಾಗ, ಮದುವೆ ಬೇಡ ಎಂದು ಹುಡುಗನ ಮನೆಗೆ ಬಂದು ಹೇಳುತ್ತಾಳೆ. ಮುಂದೇನಾಗುತ್ತದೆ? ಎಂದು ತಿಳಿಯಲು ಸಿನಿಮಾ ನೋಡಬೇಕು ಎಂದರು ನಿರ್ದೇಶಕ ರಾಹುಲ್.

ನಾನು ರಾಹುಲ್ ಅವರನ್ನು “ಉಳಿದವರು ಕಂಡಂತೆ” ಸಿನಿಮಾದಿಂದಲೂ ಬಲ್ಲೆ. ಅಸಿಸ್ಟೆಂಟ್ ಡೈರೆಕ್ಟರ್ ಅಗಿದ್ದ ರಾಹುಲ್ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ನಾನು ಚಿತ್ರ ನೋಡಿದ್ದೇನೆ. ಚೆನ್ನಾಗಿದೆ. ಕಲರ್ಸ್ ವಾಹಿನಿಯವರು ಈ ಚಿತ್ರದ ಸ್ಯಾಟಲೈಟ್ ಹಾಗೂ ಓಟಿಟಿ ಹಕ್ಕು ಪಡೆದುಕೊಂಡಿದ್ದಾರೆ. ಚಿತ್ರಮಂದಿರಗಳಲ್ಲೂ ಈ ಚಿತ್ರ ಬಿಡುಗಡೆಯಾಗುತ್ತಿದೆ. ಜಿ.ಎಸ್.ಗುಪ್ತ ಅವರು ನನ್ನ ಜೊತೆ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಬಿಡುಗಡೆಗೂ ಮುನ್ನವೇ ನಾವು ಹಾಕಿರುವ ದುಡ್ಡು ನಮಗೆ ವಾಪಸ್ ಬಂದಿರುವುದಕ್ಕೆ ಖುಷಿಯಿದೆ ಎಂದರು ರಕ್ಷಿತ್ ಶೆಟ್ಟಿ.

ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಮುಂತಾದ ಗೆಳೆಯರ ಬಳಗದಿಂದ ಬಂದವರು ಈಗ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರದ ನಿರ್ದೇಶಕ ರಾಹುಲ್ ಸಹ ನನಗೆ ಪರಿಚಯ. ಅವರು ಈ ಚಿತ್ರದ ಕಥೆ ಹೇಳಿದಾಗ ಸ್ವಲ್ಪ ಭಯವಾಯಿತು. ಹೆಚ್ಚು ಮನೆಯಲ್ಲೇ ನಡೆಯುವ ಕಥೆಯಿದು. ಆದರೆ ನಿರ್ದೇಶಕರು ಚಿತ್ರವನ್ನು ಅಂದುಕೊಂಡದ್ದಕ್ಕಿಂತ
ಚೆನ್ನಾಗಿ ನಿರ್ದೇಶಿಸಿದ್ದಾರೆ ಅಂದರು ಅಚ್ಯುತಕುಮಾರ್.

ರೇಡಿಯೋ, ನಾಟಕಗಳಲ್ಲಿ ಅನುಭವವಿದ್ದ ನನಗೆ ಇದು ಮೊದಲ ಚಿತ್ರ. ನನ್ನ ಪಾತ್ರ ಚೆನ್ನಾಗಿದೆ. ಅವಕಾಶ ನೀಡದ್ದ ನಿರ್ಮಾಪಕ, ನಿರ್ದೇಶಕರಿಗೆ ಧನ್ಯವಾದ ಎಂದರು ನಾಯಕಿ‌ ಸಿರಿ ರವಿಕುಮಾರ್.

ಆಡಿಷನ್ ಮೂಲಕ ಸೆಲೆಕ್ಟ್ ಆದ ನನಗೆ ಸ್ಕ್ರಿಪ್ಟ್ ‌ಓದುವಾಗ ಎಷ್ಟು ನಕ್ಕಿದೇನೋ? ಗೊತ್ತಿಲ್ಲ. ಕುಟುಂಬ ಸಮೇತ ನೋಡಬೇಕಾದ ಚಿತ್ರವಿದು ನೋಡಿ ಹಾರೈಸಿ ಎಂದರು ನಾಯಕ ಭರತ್ ಜಿ.ಬಿ.

ಚಿತ್ರದಲ್ಲಿ ಅಭಿನಯಿಸಿರುವ ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ, ಜಯಲಕ್ಷ್ಮಿ ಪಾಟೀಲ್, ಛಾಯಾಗ್ರಾಹಕ ಕರಮ್ ಚಾವ್ಲಾ, ಸಂದೀಪ್ ಹಾಗೂ ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್ ತಮ್ಮ ಅನುಭವ ಹಂಚಿಕೊಂಡರು.

Related Posts

error: Content is protected !!