‘ಕನ್ನಿಕೇರಿ ಹುಡ್ಗಿ’ ಕಿಕ್ಕಿಗೆ ಹೊಡಿರೀ ಸೀಟಿ ! ಆಲೂರ್ ನಾಗಪ್ಪನವ್ರ ಮಗಳು ದಿವ್ಯಾಗೆ ‘ಜಾನಪದ ಪ್ರೀತಿ’ !

ಮಾಯ ಬಜಾರ್‌ಗೆ ಸಪೌಷ್ಟಿಕ ಚೆಲುವೆಯವರು ಪದಾರ್ಪಣೆ ಮಾಡಿದಾಗ, ಬಂಟಲು ಕಂಗಳ ಬೆಡಗಿಯರು ಬಂದಾಗ, ನೀಳಕಾಯದ ಸುಂದರಿಯರು ಎಂಟ್ರಿಕೊಟ್ಟಾಗ, ನಿಂಬೆ ಹಣ್ಣಿನಂಥ ಹುಡ್ಗಿಯರು ಆಗಮಿಸಿದಾಗ, ಸ್ಟ್ರ್ಯಾಬೆರಿಯಷ್ಟೇ ಸ್ವೀಟಿ, ಆಪಲ್‌ನಷ್ಟೇ ಬೊಂಬಾಟ್ ಆಗಿರುವ ನಟಿಮಣಿಯರು ಸ್ಯಾಂಡಲ್‌ವುಡ್ ಪ್ರಪಂಚಕ್ಕೆ ಬಂದಾಗ ಅವರೆಲ್ಲರನ್ನೂ ರತ್ನಗಂಬಳಿ ಹಾಕಿ ಸ್ವಾಗತಿಸಿದ್ದೀರಿ. ಗ್ರ್ಯಾಂಡ್ ಆಗಿ ವೆಲ್‌ಕಮ್ ಮಾಡ್ಕೊಂಡು ತಲೆ ಮೇಲೆ ಹೊತ್ತು ಮೆರೆಸಿದ್ದೀರಾ. ಇದೀಗ ನಮ್ಮ ಕನ್ನಡದ ಕನ್ನಿಕೇರಿ ಹುಡ್ಗಿಯ ಸರದಿ. ನಿರೂಪಕಿಯಾಗಿ ಕನ್ನಡಿಗರ ಮನೆ-ಮನ ತಲುಪಿರುವ ನಿರೂಪಕಿ ಈಗ ‘ಕನ್ನಿಕೇರಿ ಹುಡ್ಗಿ’ ರೂಪದಲ್ಲಿ ನಾಯಕಿಯಾಗಿ ಪ್ಲಸ್ ಗಾಯಕಿಯಾಗಿ ನಿಮ್ಮ ಮುಂದೆ ಬಂದಿದ್ದಾರೆ. ಅಷ್ಟಕ್ಕೂ, ಆ ನಿರೂಪಕಿ ಮತ್ಯಾರು ಅಲ್ಲ ದಿವ್ಯಾ ಆಲೂರ್

ದಿವ್ಯಾ ಆಲೂರ್ ಕನ್ನಡದ ಖ್ಯಾತ ನಿರೂಪಕಿಯರಲ್ಲೊಬ್ಬರು. ಕನ್ನಡ ಭಾಷೆ-ಕಲೆ-ಸಾಹಿತ್ಯ-ಸಂಸ್ಕೃತಿಯನ್ನು ಸಾರುವಂತಹ ಕಾರ್ಯಕ್ರಮಗಳಲ್ಲಿ ದಿವ್ಯಾ ಆಲೂರ್ ನಿರೂಪಣೆ ಇದ್ದೇ ಇರುತ್ತೆ. ಕಳೆದ ಹದಿನೆಂಟು ವರ್ಷಗಳಿಂದ ನಿರೂಪಕಿಯಾಗಿ ಕರುನಾಡಿನಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಹೋಸ್ಟ್ ಮಾಡಿರುವಂತಹ ದಿವ್ಯಾ ಅವರು. ದೇಸಿ ಬೀಟ್ಸ್ ಎನ್ನುವ ಜನಪದ ಮ್ಯೂಸಿಕ್ ಬ್ಯಾಂಡ್‌ನೊಂದಿಗೆ ನಾಡಿನ ಮೂಲೆ ಮೂಲೆಯಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಹೊಸ ಪ್ರಯತ್ನ-ದಿಟ್ಟ ಹೆಜ್ಜೆ-ಅಪ್ಪನ ಕನಸು-ಜಾನಪದ ಲೋಕಕ್ಕೆ ಕೊಡುಗೆ ನೀಡಬೇಕು ಎನ್ನುವ ಹಂಬಲದೊಂದಿಗೆ `ಕನ್ನಿಕೇರಿ ಹುಡ್ಗಿ’ ಹೆಸರಿನ ಜಾನಪದ ಹಾಡಿಗೆ ಹೊಸತನ ನೀಡಿ ಅದನ್ನು ಕನ್ನಡಿಗರಿಗೆ ಅರ್ಪಣೆ ಮಾಡಿದ್ದಾರೆ.

ಕನ್ನಿಕೇರಿ ಹುಡ್ಗಿಯೊಬ್ಳು ಕನಕರಾಯನ ಜಾತ್ರೆಯೊಳಗೆ...ಮಿಣಮಿಣಕ ನೋಡುತ್ತಾಳೆ ಏನು ಸಿಂಗಾರ...ಇದು ೯೦ರ ದಶಕದಲ್ಲಿ ಬ್ಲಾಕ್‌ಬಸ್ಟರ್ ಹಿಟ್ಟಾದ ಹಾಡು.ಜನಪದರ ಬಾಯಲ್ಲಿ ನಲಿದಾಡುತ್ತಿದ್ದ ಈ ಹಾಡನ್ನು ತಲೆತಲೆಮಾರಿಗೂ ಉಳಿಸಬೇಕು ಎನ್ನುವ ನಿಟ್ಟಿನಲ್ಲಿ ಜಾನಪದ ಸಾಹಿತಿಗಳು ಹಾಗೂ ಗಾಯಕರು ಆದಂತಹ ಆಲೂರು ನಾಗಪ್ಪ ಅವರು ಕ್ಯಾಸೆಟ್ ರೂಪದಲ್ಲಿ ಹೊರತಂದರು. ಈ ಹಾಡಿಗೆ ಮನೋರಂಜನ್ ಪ್ರಭಾಕರ್ ಅವರು ಸಂಗೀತ ಸಂಯೋಜನೆ ಮಾಡಿದ್ದರು, ಆಲೂರು ನಾಗಪ್ಪನವ್ರೇ ಹಾಡಿದ್ದರು. ಇದೀಗ ಇವರ ಮಗಳಾದ ದಿವ್ಯಾ ಆಲೂರ್ ಅವರು ‘ಕನ್ನಿಕೇರಿ ಹುಡ್ಗಿ’ ಹಾಡಿಗೆ ಕಂಠಕುಣಿಸಿ, ಅಭಿನಯಿಸಿ, ರಿಮಿಕ್ಸ್ ಸ್ಪರ್ಶ ಕೊಡಿಸಿ ಆಲ್ಬಂ ರೂಪದಲ್ಲಿ ಹೊರತಂದಿದ್ದಾರೆ. ಪತಿ ಆದರ್ಶ್ ನೆರವಿನಿಂದ ತಂದೆ ತಂದೆ ಜನಪ್ರಿಯಗೊಳಿಸಿದ್ದ `ಕನ್ನಿಕೇರಿ ಹುಡುಗಿ’ ಹಾಡನ್ನು ಕೇಳುಗರ ಮುಂದಿಟ್ಟಿದ್ದಾರೆ. ಪ್ರಶಾಂತ್ ಕುಮಾರ್ ಈ ಹಾಡನ್ನು ನಿರ್ದೇಶಿಸಿದ್ದಾರೆ. ಅರುಣ್ ಆಂಡ್ರ್ಯೂ ಸಂಗೀತ ನೀಡಿದ್ದಾರೆ. ರಾಜಶೇಖರ್ ಛಾಯಾಗ್ರಹಣ ಮಾಡಿದ್ದಾರೆ.

ರ‍್ಯಾಪ್-ಪಾಪ್ ಮಧ್ಯೆ ಫೋಕ್ ಕಳೆದೋಗಬಾರ್ದು, ಕಣ್ಮರೆಯಾಗಬಾರ್ದು ಅಂತ ಕನ್ನಡ ಮಣ್ಣಲ್ಲಿ ಹುಟ್ಟಿ-ಬೆಳೆದು-ಉಸಿರಾಡುತ್ತಿರುವ ಬಹುತೇಕ ಕಲಾವಿದರು ಒಂದಲ್ಲ,ಒಂದು ರೀತಿಯಲ್ಲಿ ಜಾನಪದವನ್ನು ಉಳಿಸಿ ಬೆಳೆಸುವ ಕಾಯಕವನ್ನು ಕಣ್ಣಿಗೊತ್ತಿಕೊಂಡು ಮಾಡುತ್ತಿದ್ದಾರೆ. ಅದೇ ರೀತಿ ಹೆಸರಾಂತ ಜನಪದ ಗಾಯಕ ಆಲೂರ್ ನಾಗಪ್ಪ ಅವರ ಮಗಳು ದಿವ್ಯಾ ಆಲೂರ್ ಕೂಡ ಹುಮ್ಮಸ್ಸಿನಿಂದ-ಉತ್ಸಾಹದಿಂದ-ಹುರುಪಿನಿಂದ ಜಾನಪದವನ್ನು ಶ್ರೀಮಂತಗೊಳಿಸೋದಕ್ಕೆ ಮುಂದಾಗಿದ್ದಾರೆ. ‘ಜನಪದ ಈಸ್ ಎವರಿ ಜೆನ್ ಪದ'ಹೀಗಾಗಿ,ಜನಪದ ಪ್ರತಿ ಜೆನರೇಷನ್‌ಗೂ ತಲುಪಬೇಕು ಎನ್ನುತ್ತಾ ಯುವಪೀಳಿಗೆಯನ್ನು ಫೋಕ್ ಸಂಸ್ಕೃತಿಯತ್ತ ಅಟ್ರ್ಯಾಕ್ಟ್ ಮಾಡೋದಕ್ಕೆ ಹೊರಟಿದ್ದಾರೆ.ಇದರ ಮೊದಲ ಭಾಗವಾಗಿ ಕನ್ನಿಕೇರಿ ಹುಡ್ಗಿ’ ಸಾಂಗ್ ರಿಮಿಕ್ಸ್ ಮಾಡಿ ಈಗಾಗಲೇ ರಿಲೀಸ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಈ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೀತು. ಮಗಳ ಚೊಚ್ಚಲ ಪ್ರಯತ್ನವನ್ನು ಕಣ್ತುಂಬಿಕೊಳ್ಳೋದಕ್ಕೆ ನಿರೂಪಕಿ ದಿವ್ಯಾ ಆಲೂರ್ ಅವರ ತಂದೆ ಆಲೂರು ನಾಗಪ್ಪ ನವ್ರು ಬಂದಿದ್ದರು. ಮಹಿಳಾ ಸಮಾಜದ ಶಾಂತ ರಾಮಸ್ವಾಮಿ, ನಿರ್ಮಾಪಕ ಚಂದನ್‌ಗೌಡ, ಕನ್ನಡವೇ ಸತ್ಯ ರಂಗಣ್ಣ ಸೇರಿದಂತೆ ಕೆಲವು ಗಣ್ಯರು ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದರು. ಇವರುಗಳ ಸಮ್ಮುಖದಲ್ಲಿ ‘ಕನ್ನಿಕೇರಿ ಹುಡ್ಗಿ'ಆಲ್ಬಂ ಸಾಂಗ್‌ನ ಬಿಡುಗಡೆ ಮಾಡಲಾಯ್ತು.ಈ ವೇಳೆ ಮಾತನಾಡಿದ ಆಲೂರ್ ನಾಗಪ್ಪನವರ್ ಆಂಕರಿಂಗ್ ಯಾರ್ ಬೇಕಾದರೂ ಮಾಡ್ಬೋದು ಮಗಳೇ, ನನ್ನಂಥೆ ನೀನು ಕೂಡ ಜಾನಪದ ಲೋಕಕ್ಕೆ ನಿನ್ನದೇ ಆದ ಅಳಿಲು ಸೇವೆ ಮಾಡ್ಬೇಕು ಅಂತ ಹೇಳಿದ್ದೆ’ ಕೊನೆಗೂ ನನ್ನ ಮಗಳು ನನ್ನ ಕನಸನ್ನು ಈಡೇರಿಸಿದ್ದಾಳೆ. ಮೊದಲ ಹೆಜ್ಜೆ ಇಟ್ಟಿದ್ದಾಳೆ ಅವಳಿಗೆ ಒಳ್ಳೆಯದಾಗಲಿ ಎಂದರು.

ತಂದೆಯ ಕನಸನ್ನು ಈಡೇರಿಸ್ಬೇಕು ಎನ್ನುವ ನನ್ನ ಕನಸು ಕೂಡ ‘ಕನ್ನಿಕೇರಿ ಹುಡ್ಗಿ' ಹಾಡಿನ ಮೂಲಕ ನೆರವೇರಿದೆ.ತಂದೆ ಜೀವ ತುಂಬಿದ್ದ ಹಾಡಿಗೆ ಧಕ್ಕೆ ತರದಂತೆ ಸ್ವಲ್ಪೇ ಸ್ವಲ್ಪ ಮಾಸ್ ಮಸಾಲೆ ಮಿಕ್ಸ್ ಮಾಡಿ ಹಾಡನ್ನು ದೃಶ್ಯ ರೂಪಕದಲ್ಲಿ ಹೊರತಂದಿರುವುದಾಗಿ ನಿರೂಪಕಿ-ನಾಯಕಿ ಕಮ್ ಗಾಯಕಿ ದಿವ್ಯಾ ಆಲೂರ್ ಹೇಳಿಕೊಂಡಿದ್ದಾರೆ.ಇವತ್ತಿನ ಯುವಪೀಳಿಗೆಯನ್ನು ಗಮನ ಸೆಳೆಯೋಕೆ ರ‍್ಯಾಪ್ ಟಚ್ ಕೊಟ್ಟಿದ್ದಾರೆ.ಕೈಯಲ್ಲಿ ಗೀಟಾರ್ ಹಿಡಿದು ಕಲರ್ ಕಲರ್ ಕಾಸ್ಟ್ಯೂಮ್ ತೊಟ್ಟು ಮಿಂಚಿದ್ದಾರೆ.ದಿವ್ಯಾ ಪತಿ ಆದರ್ಶ್ ಕೂಡ ಆಲ್ಬಂನಲ್ಲಿ ಧಗಧಗಿಸಿದ್ದಾರೆ.ಮೊದಲ ಆಲ್ಬಂ ಸಾಂಗ್ ಆದರೂ ಕೂಡ ಅದ್ದೂರಿತನಕ್ಕೆ ಕೊರತೆಯಾಗಿಲ್ಲ.ಇವರಿಂದ ಅನೇಕರಿಗೆ ಅವಕಾಶ ಸಿಕ್ಕಿದೆ.ಹೊಸ ಪ್ರತಿಭೆಗಳು ಕೂಡ ಈ ಆಲ್ಬಂನಲ್ಲಿ ಮಿಂಚಿದ್ದಾರೆ.ವಿಶೇಷ ಅಂದರೆ ಬಿಲೀವ್ ಕಂಪೆನಿ ಜೊತೆ ಟಯಪ್ ಆಗಿದ್ದು ತಿಂಗಳಿಗೊಂದು ಜಾನಪದ ಆಲ್ಬಂ ಸಾಂಗ್’ನ ಕರುನಾಡ ಜನರಿಗೆ ಕೊಡಬೇಕು ಎನ್ನುವುದು ಇವರ ಉದ್ದೇಶವಾಗಿದೆ. ಇವರ ಮಹಾದಾಸೆ ಈಡೇರಲಿ. ಜಾನಪದ ಕಲೆ-ಸಂಸ್ಕೃತಿ ಇನ್ನೂ ಶ್ರೀಮಂತಗೊಳ್ಳಲಿ. ದಿವ್ಯಾ-ಆದರ್ಶ್ ಜಾನಪದ ಪ್ರೀತಿಗೆ ಯಶಸ್ಸು ಸಿಗಲಿ

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!