ಸಹೋದರ ಚಿರು ಚಿತ್ರಕ್ಕೆ ಧ್ರುವ ಉಸಿರು;`ರಾಜಮಾರ್ತಾಂಡ’ ಸಿನಿಮಾ ಡಬ್ಬಿಂಗ್ ಮಾಡಿಕೊಟ್ಟರು ಆಕ್ಷನ್‌ಪ್ರಿನ್ಸ್- ಯುವಸಾಮ್ರಾಟನಿಗೆ ದಚ್ಚು ಬಲ !

ಒಡಹುಟ್ಟಿದ ಅಣ್ಣ ಚಿರಂಜೀವಿ ‘ರಾಜಮಾರ್ತಾಂಡ'ಚಿತ್ರಕ್ಕೆ ಧ್ರುವ ಬೆನ್ನೆಲುಬಾಗಿ ನಿಂತಿರುವ ವಿಚಾರ ನಿಮಗೆಲ್ಲ ಗೊತ್ತೆಯಿದೆ.ಅರ್ಧಕ್ಕೆ ಬಿಟ್ಟೋದ ಅಣ್ಣನ ಸಿನಿಮಾವನ್ನು ಕಂಪ್ಲೀಟ್ ಮಾಡಿಕೊಡುವುದಾಗಿ ಆಕ್ಷನ್‌ಪ್ರಿನ್ಸ್ ಒಪ್ಪಿಕೊಂಡಿದ್ದರು. ಅದರಂತೇ,‘ರಾಜಮಾರ್ತಾಂಡ’ ಸಿನಿಮಾಗೆ ಧ್ರುವ ಉಸಿರಾಗುತ್ತಿದ್ದಾರೆ. ಅಣ್ಣನ ಚಿತ್ರಕ್ಕೆ ತಮ್ಮನ ಉಸಿರಿನ ಕಹಾನಿ ಇಲ್ಲಿದೆ

ಚಿರು-ಧ್ರುವ ಈ ಇಬ್ಬರು ಸಹೋದರರ ನಡುವಿದ್ದ ಅನ್ಯೋನ್ಯತೆ-ಪ್ರೀತಿ-ವಾತ್ಸಲ್ಯ-ಮಮಕಾರ-ಬೆಲೆಯೇ ಕಟ್ಟಲಾಗದ ಬಾಂದವ್ಯವನ್ನು ಆ ಭಗವಂತನಿಗೂ ನೋಡಲಿಕ್ಕೆ ಆಗಲಿಲ್ಲ ಅನ್ಸುತ್ತೆ. ಹೀಗಾಗಿನೇ, ಚಿರಂಜೀವಿಯನ್ನು ಹೇಳದೇ ಕೇಳದೇ ಹೊತೊಯ್ದುಬಿಟ್ಟ. ಧ್ರುವಸರ್ಜಾನ ಹಾಗೂ ರಾಯನ್‌ರಾಜ್ ಸರ್ಜಾನ ಅನಾಥರನ್ನಾಗುವಂತೆ ಮಾಡ್ಬಿಟ್ಟ. ಇವತ್ತಿಗೂ ಈ ಕ್ಷಣಕ್ಕೂ ಆಕ್ಷನ್‌ಪ್ರಿನ್ಸ್ ಧ್ರುವ ಸರ್ಜಾ ಅಣ್ಣನ ನೆನಪಲ್ಲೇ ಕಣ್ಣೀರಾಗುತ್ತಿದ್ದಾರೆ. `ಅಣ್ಣ ನಿನ್ನ ಬಿಟ್ಟು ಬದುಕೋದಕ್ಕೆ ಆಗ್ತಿಲ್ಲ ಕಣೋ’ ಎನ್ನುತ್ತಾ ಒಬ್ಬಂಟಿಯಾಗಿ ಒಳಗೊಳಗೆ ರೋಧಿಸುತ್ತಿದ್ದಾರೆ. ರಕ್ತಹಂಚಿಕೊಂಡು ಹುಟ್ಟಿ ಇದ್ದಷ್ಟು ದಿನ ಅಣ್ಣನೊಟ್ಟಿಗೆ ಆಡಿ ಬೆಳೆದ ದಿನಗಳನ್ನು ಕಣ್ಮುಂದೆ ತಂದುಕೊಂಡು ನೆನಪುಗಳೊಟ್ಟಿಗೆ ಧ್ರುವ ಜೀವಿಸುತ್ತಿದ್ದಾರೆ.

ಇವತ್ತು ಧ್ರುವ ಸರ್ಜಾ ಬರ್ತ್ಡೇ. ರಕ್ತಹಂಚಿಕೊಂಡು ಹುಟ್ಟಿದ ಅಣ್ಣನೇ ನನ್ನೊಟ್ಟಿಗೆ ಇಲ್ಲದಿರುವಾಗ ನನ್ನ ಹುಟ್ಟುಹಬ್ಬವನ್ನು ಸಂಭ್ರಮಿಸಿದರೇನು ಬಂತು ಎನ್ನುತ್ತಾ ತನ್ನ ಜನುಮದಿನದ ಆಚರಣೆಯನ್ನು ನಿಲ್ಲಿಸಿದ್ದಾರೆ. ಅಭಿಮಾನಿ ದೇವರುಗಳಿಗೆ ವಿನಂತಿ ಮಾಡಿಕೊಂಡು ನೀವು ಎಲ್ಲಿರುತ್ತೀರೋ ಅಲ್ಲಿಂದಲೇ ಶುಭಾಶಯ ತಿಳಿಸಿ, ಇಡೀ ಕರ್ನಾಟಕ ಜನತೆಯ ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಕೋರಿದ್ದಾರೆ. ಸರ್ಜಾ ಕುಟುಂಬದ ಬೆಂಕಿ ಚೆಂಡಿಗೆ ಸೋಷಿಯಲ್ ಮೀಡಿಯಾದಿಂದ ಶುಭಾಷಯದ ಮಹಾಪೂರವೇ ಹರಿದುಬರುತ್ತಿದೆ. ಜನತೆಯ ಆಶೀರ್ವಾದವೇ ನನಗೆ ಶ್ರೀರಕ್ಷೆ ಎನ್ನುವ ಬಹದ್ದೂರ್ ಹುಡುಗ `ಮಾರ್ಟಿನ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಮಾರ್ಟಿನ್' ಚಿತ್ರಕ್ಕಾಗಿ ತಯ್ಯಾರಿ ನಡೆಸುವ ಹೊತ್ತಲ್ಲಿ ಅಣ್ಣನರಾಜಮಾರ್ತಾಂಡ’ ಸಿನಿಮಾಗೂ ಜೀವಕೊಟ್ಟಿದ್ದಾರೆ. ಅರ್ಧಕ್ಕೆ ಬದುಕಿನ ಆಟ ಮುಗಿಸಿ ಅಣ್ಣ ಎದ್ದೋದ ಹೊತ್ತಲ್ಲಿ, ಸಹೋದರ ಸಿನಿಮಾಗಳು ಅರ್ಧಕ್ಕೆ ನಿಲ್ಲಬಾರ್ದು. ನಮ್ಮಣ್ಣನ್ನ ನಂಬಿಕೊಂಡು ದುಡ್ಡುಹಾಕಿರುವ ನಿರ್ಮಾಪಕರಿಗೆ ಲಾಸ್ ಆಗ್ಬಾರ್ದು ಎನ್ನುವ ಕಾರಣಕ್ಕೆ ಚಿರು ಸಿನಿಮಾಗೆ ಜೀವ ತುಂಬುವುದಕ್ಕೆ ಒಪ್ಪಿಕೊಂಡಿದ್ದರು. ಅದರಂತೇ, ಬಹುನಿರೀಕ್ಷೆಯ `ರಾಜಮಾರ್ತಾಂಡ’ ಸಿನಿಮಾದಲ್ಲಿನ ಚಿರು ಪಾತ್ರಕ್ಕೆ ಧ್ರುವ ವಾಯ್ಸ್ ಡಬ್ ಮಾಡಿಕೊಟ್ಟಿದ್ದಾರೆ. ಸದ್ಯಕ್ಕೆ, ೫೦ ಪರ್ಸೆಂಟ್ ಡಬ್ಬಿಂಗ್ ಅಷ್ಟೇ ಮುಗಿದಿದೆ ಉಳಿದ ಪೋರ್ಷನ್ ಮಾತುಕತೆಯನ್ನು ಬಿಡುವು ಮಾಡಿಕೊಂಡು ಮುಗಿಸಿಕೊಡುವುದಾಗಿ ಧ್ರುವ ಮಾತುಕೊಟ್ಟಿದ್ದಾರೆ.

ಚಿರು ‘ರಾಜಮಾರ್ತಾಂಡ'ಕ್ಕೆ ಆಕ್ಷನ್‌ಪ್ರಿನ್ಸ್ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಜೀವ ತುಂಬುತ್ತಾರೆನ್ನುವ ಸುದ್ದಿ ಹಿಂದಿನಿಂದಲೂ ಇದೆ.ರಾಜಮಾರ್ತಾಂಡ’ ಚಿತ್ರದಲ್ಲಿ ಯುವಸಾಮ್ರಾಟನ ಇಂಟ್ರುಡಕ್ಷನ್ ಸೀನ್‌ಗೆ ದಚ್ಚು ಬಲ ತುಂಬಲಿದ್ದಾರಂತೆ. ಅಷ್ಟಕ್ಕೂ, ಅದ್ಯಾವಾಗ ರಾಜಮಾರ್ತಾಂಡ' ಅಖಾಡಕ್ಕೆ ಗಜ ಎಂಟ್ರಿಕೊಡಬಹುದು ಎನ್ನುವ ಪ್ರಶ್ನೆಗೆ ಉತ್ತರವಿಲ್ಲ.ಆದರೆ, ಕೊಟ್ಟ ಮಾತನ್ನು ಯಾವತ್ತೂ ತಪ್ಪದ ದಾಸ ಸ್ಯಾಂಡಲ್‌ವುಡ್ ಯುವಸಾಮ್ರಾಟನ ಕನಸಿನ ಸಿನಿಮಾಗೆ ಶಕ್ತಿಯಾಗಿ ನಿಲ್ತಾರೆ ಅನ್ನೋದು ಮಾತ್ರ ಸತ್ಯ.ಚಿರಂಜೀವಿಯ ಮಹಾಕನಸಿಗೆ ದರ್ಶನ್-ಧ್ರುವ ಬಲ ತುಂಬಲಿ. ಬಿಗ್‌ಸ್ಕ್ರೀನ್ ಮೇಲೆ ಟೈಸನ್ ಖ್ಯಾತಿಯ ರಾಮ್‌ನಾರಾಯಣ್ ನಿರ್ದೇಶನದ- ಶಿವಕುಮಾರ್ ನಿರ್ಮಾಣದ ರಾಜಮಾರ್ತಾಂಡ’ ಧಗಧಗಿಸಲಿ ಅಲ್ಲವೇ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!