ಮತ್ತೆ ಅದೃಷ್ಟ ಪರೀಕ್ಷೆಗಿಳಿದ ಜಗ್ಗೇಶ್ ಜೇಷ್ಠಪುತ್ರ ; ಕಾಗೆಮೊಟ್ಟೆಗೆ ಕೌಂಟ್‌ಡೌನ್ ಶುರು; ಗೆದ್ದು ಗಹಗಹಿಸ್ತಾರಾ ಗುರು?

ಹಿರಿಯ ಜಗ್ಗೇಶ್‌ ಪುತ್ರ ಗುರುರಾಜ್‌ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಗೆ ಮೊಟ್ಟೆ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಇಲ್ಲಿ ಗೆದ್ದು ಗಹಗಹಿಸ್ತಾರಾ ?

ತಂದೆಯಂತೆ ಸಿನಿಮಾನ ಪ್ರೀತಿಸುತ್ತಾರೆ ಮತ್ತು ಕಲಾ ಸರಸ್ವತಿಯನ್ನು ಆರಾಧಿಸುತ್ತಾರೆ. ಅಭಿನಯಕ್ಕಾಗಿ ಹಂಬಲಿಸುತ್ತಾರೆ, ಅರಸಿಕೊಂಡು ಬರುವ ಪಾತ್ರಗಳನ್ನು ಕಣ್ಣಿಗೆ ಒತ್ತಿಕೊಳ್ತಾರೆ. ಅಪ್ಪನಂತೆಯೇ ಕಲಾಸೇವೆ ಮಾಡುವುದಕ್ಕೆ ಗುರುರಾಜ್ ಒಂಟಿಕಾಲಿನಲ್ಲಿಯೇ ಸಿದ್ದರಾಗಿದ್ದಾರೆ. ಆದರೆ, ಅದ್ಯಾಕೋ ಏನೋ ಗೊತ್ತಿಲ್ಲ ಗುರುರಾಜ್‌ನ ಅದೃಷ್ಟ ಕೈಹಿಡಿಯುತ್ತಿಲ್ಲ, ಶ್ರಮವಹಿಸಿ-ಶ್ರದ್ದಾ-ಭಕ್ತಿಯಿಂದ ಗುರು ಸಿನಿಮಾ ಮಾಡಿದರಾದರೂ ಕೂಡ ಅಂದುಕೊಂಡಂತಹ ಸಕ್ಸಸ್ ಸಿಗುತ್ತಿಲ್ಲ. ಅದಾಗ್ಯೂ, ಕಲೆಯನ್ನು ಕೈಬಿಡದ ಗುರುರಾಜ್ ಕಲಾಸರಸ್ವತಿ ತನ್ನ ಕೈಹಿಡಿದೇ ಹಿಡಿಯುತ್ತಾಳೆಂದು ಎದುರುನೋಡ್ತಿದ್ದಾರೆ.

ಕಾಗೆಮೊಟ್ಟೆ'ಸಿನಿಮಾದ ಮೂಲಕ ಬಣ್ಣದ ಲೋಕದಲ್ಲಿ ಮತ್ತೆ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ.ಕಾಗೆಮೊಟ್ಟೆ' ನವರಸನಾಯಕ ಜಗ್ಗೇಶ್ ಜೇಷ್ಠಪುತ್ರ ಗುರುರಾಜ್ ನಟನೆಯ ಸಿನಿಮಾ. ರೌಡಿಸಂ ಹಿನ್ನಲೆ-ಭೂಗತ ಜಗತ್ತಿನ ನಂಟಿರುವ ಕಾಗೆಮೊಟ್ಟೆ'ಯಲ್ಲಿ ಗುರುರಾಜ್ ಖಡಕ್ಕಾಗಿಯೇ ಕಾಣಿಸಿಕೊಂಡಿದ್ದಾರೆ.ಮಾಸ್ ಕ್ಯಾರೆಕ್ಟರ್‌ಗಳಿಗೆ ಜೀವತುಂಬಲು ಹಪಹಪಿಸುವ ಗುರುರಾಜ್, ಕಬ್ಬಿಣದ ಸಲಾಕೆ ಹಿಡ್ಕೊಂಡು ಎದುರಾಳಿಗಳನ್ನು ಬಡಿದುಬರ‍್ಸಿದ್ದಾರೆ.ಔಟ್ ಅಂಡ್ ಔಟ್ ಮಾಸ್ ಅಪೀಲ್ ಇರುವ ಚಿತ್ರದಲ್ಲಿ ಕ್ಯೂಟ್ ಲವ್‌ಸ್ಟೋರಿ ಬೆಸೆದುಕೊಂಡಿದೆ.ಬಿ.ಕೆ ಚಂದ್ರಹಾಸ್ `ಕಾಗೆಮೊಟ್ಟೆ’ಗೆ ಆಕ್ಷನ್ ಕಟ್ ಹೇಳಿದ್ದಾರೆ. ಗುರುರಾಜ್‌ಗೆ ತನುಜಾ ಜೊತೆಯಾಗಿದ್ದಾರೆ. ಸ್ಕೂಲ್ ಯೂನಿಫಾರ್ಮ್ ಡ್ರಸ್‌ನಲ್ಲಿ ಸಖತ್ ಕ್ಯೂಟ್ ಆಗಿಯೇ ಕಾಣಿಸಿಕೊಂಡಿದ್ದಾರೆ.

ಆಗಲೇ ಹೇಳಿದಂತೆ ಗುರು ಪ್ರತಿಭೆಗೆ ತಕ್ಕ ಪ್ರತಿಫಲ ಸಿಕ್ಕಿಲ್ಲ. ಅಂದುಕೊಂಡಂತಹ ಯಶಸ್ಸು ಗುರು ಪಾಲಾಗಿಲ್ಲ. ಹಾಗಂತ, ದೃತಿಗೆಡದ ಗುರುರಾಜ್ ಜಗ್ಗೇಶ್ ತನ್ನನ್ನು ಅರಸಿಕೊಂಡು ಬರುವ ಪಾತ್ರಗಳಿಗೆ ಜೀವತುಂಬುತ್ತಿದ್ದಾರೆ. ಸದ್ಯ ಕಾಗೆಮೊಟ್ಟೆ ಚಿತ್ರದ ಮೇಲೆ ಒಂದಿಷ್ಟು ನಿರೀಕ್ಷೆಗಳನ್ನಿಟ್ಟುಕೊಂಡು ಕಾಯ್ತಿದ್ದಾರೆ. ಮಗನ ಸಿನಿಮಾ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಗ್ಗೇಶ್, `ನನ್ನ ಮಗನಿಗೆ ಬುಧಾದಿತ್ಯ ಯೋಗವಿದೆ. ಎರಡು ಗ್ರಹಗಳು ಒಟ್ಟಿಗೆ ಸೇರುವ ಯೋಗ ಬರುವುದು ಅಪರೂಪ ಅದು ಗುರುಗೆ ಇದೆ. ಅಂದ್ಹಾಗೇ, ಗುರು ಜಾತಕದಲ್ಲಿ ಸೋಲು ಎನ್ನುವುದೇ ಇಲ್ಲ ಆದರೆ ಒಳ್ಳೆಯ ಟೈಮ್ ಬರಬೇಕು, ಆ ಟೈಮ್‌ಗೋಸ್ಕರ ಗುರು ಕಾಯಬೇಕು ಎಂದರು.

ನನ್ನ ಮಗ ಗುರುಗೆ ತೆಲುಗು-ತಮಿಳು ಇಂಡಸ್ಟ್ರಿಯಿಂದ ಆಫರ್‌ಗಳು ಬಂದಿದ್ವು, ದೊಡ್ಡ ದೊಡ್ಡ ನಿರ್ದೇಶಕರು ಸಂಪರ್ಕ ಮಾಡಿದ್ದರು. ಆದರೆ, ಪರಭಾಷೆಗೆ ಹೋಗೋದಕ್ಕೆ ನಾನೇ ಅಡ್ಡಗಾಲು ಹಾಕಿದ್ದೆ. ಏನೇ ಮಾಡಿದರೂ ಕನ್ನಡದಲ್ಲೇ ಮಾಡೋಣ, ನಮ್ಮ ನೆಲದಲ್ಲೇ ದುಡಿದು ತಿನ್ನೋಣ ಎಂದಿದ್ದೆ. ಆದ್ರೀಗ ನಾನು ಅವತ್ತು ಮಾಡಿದ್ದು ತಪ್ಪು ಎನಿಸುತ್ತಿದ್ದೆ. ನನ್ನ ಮಗನ ಭವಿಷ್ಯಕ್ಕೆ ನಾನೇ ಕಲ್ಲಾಕಿದೆ ಎನ್ನುವ ಗಿಲ್ಟ್ ಕಾಡುತ್ತಿದೆ. ಒಂದ್ವೇಳೆ ನಾನು ಅವನನ್ನು ತಡೆಯದೇ ಹೋಗಿದ್ದರೆ, ಇಷ್ಟೊತ್ತಿಗೆ ಸ್ಟಾರ್ ಆಗಿ ಬೆಳೆದು ನಿಂತಿರುತ್ತಿದ್ದ ಎಂದು ಮಾಧ್ಯಮದ ಮುಂದೆ ಹೇಳಿಕೊಂಡರು. ಬೆವರು ಹರಿಸಿ ಮಾಡಿರುವ ‘ಕಾಗೆಮೊಟ್ಟೆ'ಗೆ ಒಳ್ಳೆಯದಾಗಬೇಕು,ಸಂತೋಷ್ ಆನಂದ್ ರಾಮ್ ಥರ ಬೆಳೆದು ನಿಲ್ಲುವ ಶಕ್ತಿ ಕಾಗೆಮೊಟ್ಟೆ’ ಡೈರೆಕ್ಟರ್‌ಗಿದೆ ಎಂದು ಚಂದಹಾಸ್‌ನ ಕೊಂಡಾಡಿದರು.

ಅಂದ್ಹಾಗೇ, ಕಾಗೆಮೊಟ್ಟೆ ಟ್ರೈಲರ್ ಮೂಲಕ ಭರವಸೆ ಮೂಡಿಸಿದೆ. `ಕೆಲವರಿಗೆ ದೂರದಲ್ಲಿ ಇರೋ ಬೆಂಗಳೂರನ್ನು ಒಂದ್ಸಲ ನೋಡಬೇಕು ಅನ್ನೋ ಆಸೆ. ಆದರೆ, ಇವರಿಗೆ ಬೆಂಗಳರ‍್ನ ಆಳಬೇಕು ಅನ್ನೋ ಆಸೆ’ ಈ ಡೈಲಾಗ್ ಜೊತೆಗೆ ಕಾಗೆಮೊಟ್ಟೆಗೆ ಪಿಳ್ಯಗೋವಿ ಕೃಷ್ಣ ಕಥೆ ಟ್ಯಾಗ್‌ಲೈನ್ ಇರೋದ್ರಿಂದ ಕೂತೂಹಲ ಇಮ್ಮಡಿಯಾಗಿದೆ. ಮೂವರು ಹಳ್ಳಿಯುವಕರು ಬೆಂಗಳೂರಿಗೆ ಬಂದು ಭೂಗತ ಜಗತ್ತಿನ ದೊರೆಯನ್ನು ಹೊಡೆದುರುಳಿಸಿ ಸಿಂಹಾಸನಕ್ಕೇರಬೇಕು ಎನ್ನುವ ಗುರಿ ಹೊಂದಿರುತ್ತಾರೆ. ಅವರು ಗುರಿ ಮುಟ್ಟುತ್ತಾರೆ, ಅಂಡರ್‌ವರ್ಲ್ಡ್ ಡಾನ್‌ನ ಮಟ್ಟಹಾಕುತ್ತಾರಾ ಈ ಪ್ರಶ್ನೆಗೆ ಉತ್ತರ ಸಿನಿಮಾ ನೋಡಿನೇ ತಿಳಿಬೇಕು. ಗುರುರಾಜ್ ಜೊತೆಗೆ ಮಾದೇಶ್ ಹಾಗೂ ಹೇಮಂತ್ ರೆಡ್ಡಿ ಲೀಡ್ ರೋಲ್‌ನಲ್ಲಿ ಧಗಧಗಿಸಿದ್ದಾರೆ. ಶರತ್ ಲೋಹಿತಾಶ್ವ, ರಾಜ್ ಬಹದ್ದೂರ್, ಸತ್ಯಜಿತ್, ಪೆಟ್ರೋಲ್ ಪ್ರಸನ್ನ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.

ಇದೇ ಅಕ್ಟೋಬರ್ 1 ರಂದು ಕಾಗೆಮೊಟ್ಟೆ' ಅದ್ದೂರಿಯಾಗಿ ರಿಲೀಸ್ ಆಗ್ತಿದೆ. ಸರ್ಕಾರ 100 ರಷ್ಟು ಆಸನ ಭರ್ತಿಗೆ ಅವಕಾಶ ನೀಡಿದ್ದು, ಕರ್ನಾಟಕ ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆ ಮಾಡುವುದಕ್ಕೆಕಾಗೆಮೊಟ್ಟೆ’ ಚಿತ್ರತಂಡ ನಿರ್ಧರಿಸಿದೆ. ಸುಬ್ಬರಾಯಡು ಮತ್ತು ಎಚ್.ಎನ್. ಶ್ರೀನಿವಾಸಯ್ಯ ಈ ಇಬ್ಬರ ಜೊತೆ ಸೇರಿ ಕಾಗೆಮೊಟ್ಟೆ ನಿರ್ದೇಶಕ ಚಂದಹಾಸ್ ಅವರೇ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಶ್ರೀವತ್ಸ ಅವರ ಸಂಗೀತ ಚಿತ್ರಕ್ಕಿದೆ. ವಿ ನಾಗೇಂದ್ರ ಪ್ರಸಾದ್ ಸಂಭಾಷಣೆ ಬರೆದುಕೊಟ್ಟಿದ್ದಾರೆ. ಕೆ.ಎಂ ಪ್ರಕಾಶ್ ಸಂಕಲನ, ಪಿ.ಎಲ್ ರವಿಯವರ ಛಾಯಾಗ್ರಹಣ ಚಿತ್ರಕ್ಕಿದೆ. ರಿಯಾಲಿಟಿಗೆ ಹತ್ತಿರವಾಗಿ ಸಿನಿಮಾ ಮಾಡಿದ್ದಾರೆ. ನ್ಯಾಚುರಲ್ಲಾಗಿಯೇ ಇಡೀ ಸಿನಿಮಾ ಮೂಡಿಬಂದಿದೆ.

  • ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!