ಹ್ಯಾಟ್ರಿಕ್ ಹೀರೋ ಹುಟ್ಟು ಹಬ್ಬ-ಅಭಿಮಾನಿಗಳಿಗೆ ಹಬ್ಬದೂಟ – 123 ಟು 126 ರಹಸ್ಯ ಏನ್‌ ಗೊತ್ತಾ..!

ಬರಹ: ವಿಶಾಲಾಕ್ಷಿ

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ಗೆ ಇಂದು (ಜುಲೈ 12) ಹುಟ್ಟುಹಬ್ಬದ ಸಂಭ್ರಮ. 59ವರ್ಷಗಳನ್ನ ಪೂರೈಸಿ 60 ನೇ ವಸಂತಕ್ಕೆ ಕಾಲಿಟ್ಟಿರೋ ಶಿವಣ್ಣನಿಗೆ ಶುಭಾಷಯಗಳ ಮಹಾಪೂರವೇ ಹರಿದು ಬಂದಿದೆ. ಸ್ಯಾಂಡಲ್‌ವುಡ್ ಸೆಲಬ್ರಿಟಿಗಳು ಸೇರಿದಂತೆ ಕರುನಾಡಿನ ಕೋಟ್ಯಾಂತರ ಅಭಿಮಾನಿ ಬಳಗದವರು ಶುಭಕೋರಿದ್ದಾರೆ. ಪ್ರತಿವರ್ಷ ದೊಡ್ಮನೆ ಮುಂದೆ ಅಭಿಮಾನಿಗಳ ದಂಡೇ ಸೇರಿರುತ್ತಿತ್ತು. ಸಹಸ್ರಾರು ಅಭಿಮಾನಿ ದೇವರುಗಳೊಟ್ಟಿಗೆ ಹ್ಯಾಟ್ರಿಕ್ ಹೀರೋ ತಮ್ಮ ಬರ್ತ್ಡೇನಾ ಸೆಲಬ್ರೇಟ್ ಮಾಡಿಕೊಳ್ಳುತ್ತಿದ್ದರು. ಆದರೆ, ಕಳೆದ ಎರಡು ವರ್ಷಗಳಿಂದ ಕೊರೊನಾ ಕಾಡುತ್ತಿರುವುದರಿಂದ ಅದ್ದೂರಿ ಬರ್ತ್ಡೇಗೆ ಬ್ರೇಕ್ ಹಾಕಿದ್ದಾರೆ. ಹುಟ್ಟುಹಬ್ಬ ಆಚರಣೆಗಿಂತ ಎಲ್ಲರ ಆರೋಗ್ಯ ಮುಖ್ಯವೆಂದು ನಿರ್ಧರಿಸಿದ ಶಿವಣ್ಣ ,ಮನೆಯಲ್ಲೇ ಕುಟುಂಬಸ್ಥರ ಜೊತೆ ಕೇಕ್ ಮಾಡಿ ಸಂಭ್ರಮಿಸಿದ್ದಾರೆ. ದೊಡ್ಮನೆ ಭಕ್ತರು ಕೂಡ ಹಬ್ಬಮಾಡಿ ಸಂಭ್ರಮಿಸುವಂತೆ ಮಾಡಿದ್ದಾರೆ.

ದೊಡ್ಮನೆ ಭಕ್ತರಿಗೆ ಸಿಕ್ತಲ್ಲ ಭರ್ಜರಿ ಉಡುಗೊರೆ !
ಭಜರಂಗಿಗೆ ಉಘೇ ಉಘೇ ಎಂದರಲ್ಲ ಫ್ಯಾನ್ಸ್ !

ಶಿವಣ್ಣ ತಮ್ಮ ಬರ್ತ್ಡೇ ಬೇಡವೆಂದು ಹೇಳಿದಾಗ ಅಭಿಮಾನಿ ದೇವರುಗಳು ಅಪ್‌ಸೆಟ್ ಆದರು. ಕರುನಾಡ ಚಕ್ರವರ್ತಿಯ ದರ್ಶನ ಈ ವರ್ಷವೂ ಮಿಸ್ಸಾಯ್ತಲ್ಲ ಅಂತ ಬೇಸರಗೊಂಡರು. ಹೀಗೆ, ಅಪ್‌ಸೆಟ್ ಆದ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಡುವುದರ ಮೂಲಕ ಥ್ರಿಲ್ಲಾಗುವಂತೆ ಮಾಡಿದ್ದಾರೆ. ಭಜರಂಗಿ ಕೊಟ್ಟ ಕಾಣಿಕೆಗೆ ದೊಡ್ಮನೆ ಫ್ಯಾನ್ಸ್ ಉಘೇ ಉಘೇ ಎನ್ನುತ್ತಿದ್ದಾರೆ. ನಿರ್ದೇಶಕ ಹರ್ಷ ಅಂಡ್ ಟೀಮ್‌ಗೆ ಫ್ಯಾನ್ಸ್ ಹ್ಯಾಟ್ಸಾಫ್ ಹೇಳ್ತಿದ್ದಾರೆ.

ಸನ್ ಬಂಗಾರದ ಮನುಷ್ಯನ ಹುಟ್ಟುಹಬ್ಬಕ್ಕೆ ಭಜರಂಗಿ-2 ಟೀಮ್ ಟೀಸರ್‌ನ ಗಿಫ್ಟ್ ಮಾಡಿದೆ. `ಭಗವಂತನ ಸ್ವತ್ತನ್ನ ನಾಶಮಾಡ್ತೀನಿ ಅಂತ ಹೊರಟ್ರೆ ಅದನ್ನ ಕಾಪಾಡೋದಕ್ಕೆ ಭಗವಂತನೇ ಅವತಾರ ಎತ್ತಿ ಬರಬೇಕಾಗಿಲ್ಲ, ಅವನ ರೂಪದಲ್ಲಿ ಇನ್ನೊಬ್ಬ ರಕ್ಷಕ ಹುಟ್ಟಿರ‍್ತಾನೆ’. ಇದು ಭಜರಂಗಿ-2 ಚಿತ್ರದ ಡೈಲಾಗ್. ಈ ಡೈಲಾಗ್ ಕೇಳಿಸಿಕೊಂಡ್ಮೇಲೆ, ಹ್ಯಾಟ್ರಿಕ್ ಹೀರೋ ಶಿವಣ್ಣನ ಖದರ್ ತುಂಬಿರುವ ಅವತಾರ ಕಂಡ್ಮೇಲೆ ದೊಡ್ಮನೆ ಫ್ಯಾನ್ಸ್ ಕಾಲರ್‌ಪಟ್ಟಿ ಟೈಟ್ ಮಾಡಿಕೊಳ್ತಿದ್ದಾರೆ. ಭಜರಂಗಿಯ ದರ್ಶನ ಆದಷ್ಟು ಬೇಗ ಮಾಡ್ಸಿ ಸರ್ ಅಂತ ನಿರ್ದೇಶಕ ಹರ್ಷ ಅವರಲ್ಲಿ ಮನವಿ ಮಾಡಿಕೊಳ್ತಿದ್ದಾರೆ.

ಭಜರಂಗಿ ಡೈರೆಕ್ಟರ್‌ಗೆ ಶಿವಣ್ಣ ಮತ್ತೆ ಕಾಲ್‌ಶೀಟ್ !
ಸೆಂಚುರಿಸ್ಟಾರ್ ಸಿನಿಜರ್ನಿಯ 125ನೇ ಚಿತ್ರ ಹರ್ಷ ಪಾಲಾಯ್ತು !

ಭಜರಂಗಿಯ ಎರಡನೇ ಆಟ ಬೆಳ್ಳಿಪರದೆ ಮೇಲೆ ಶುರುವಾಗುವ ಮೊದಲೇ ನಿರ್ದೇಶಕ ಹರ್ಷಗೆ ಸೆಂಚುರಿಸ್ಟಾರ್ ಶಿವಣ್ಣರ ಕಾಲ್‌ಶೀಟ್ ಸಿಕ್ಕಿದೆ. ವಜ್ರಕಾಯ, ಭಜರಂಗಿ, ಭಜರಂಗಿ-2 ಹೀಗೆ ಬ್ಯಾಕ್ ಟು ಬ್ಯಾಕ್ ಮಾರುತಿ ಟೈಟಲ್ ಇಟ್ಟು ಹ್ಯಾಟ್ರಿಕ್ ಹೀರೋಗೆ ಆಕ್ಷನ್ ಕಟ್ ಹೇಳಿದ್ದರು. ಇದೀಗ, `ವೇದ’ ಶೀರ್ಷಿಕೆಯಲ್ಲಿ ಮತ್ತೊಮ್ಮೆ ಶಿವಣ್ಣರಿಗೆ ಆಕ್ಷನ್ ಕಟ್ ಹೇಳುವ ಅವಕಾಶ ಸಿಕ್ಕಿದೆ. ಸೆಂಚುರಿಸ್ಟಾರ್ ಸಿನಿಜರ್ನಿಯ ೧೨೫ನೇ ಸಿನಿಮಾನ ಡೈರೆಕ್ಟ್ ಮಾಡುವ ಅದೃಷ್ಟ ಭಜರಂಗಿ ಡೈರೆಕ್ಟರ್ ಪಾಲಾಗಿದೆ. ೧೨೫ನೇ ಸಿನಿಮಾವನ್ನು ಸನ್ ಬಂಗಾರದ ಮನುಷ್ಯನ ಸಿನಿಯಾನದ ಮೈಲ್‌ಸ್ಟೋನ್ ಆಗಿಸುವ ಜವಬ್ದಾರಿ ಹರ್ಷ ಮೇಲಿದೆ.

`123 ಟು 126′ ಸೆಂಚುರಿಸ್ಟಾರ್ ಸೂಪರ್ ಸೀಕ್ರೇಟ್ !
ವಿಜಯ್-ರಿಷಬ್-ಬಂಡಿಯಪ್ಪ-ಅನಿಲ್-ಆಕ್ಷನ್ ಕಟ್ !

ದೊಡ್ಮನೆ ಫ್ಯಾನ್ಸ್ಗೆ `123 ಟು 126′ ಸೀಕ್ರೇಟ್ ಏನು ಅನ್ನೋದು ಈಗಾಗಲೇ ಗೊತ್ತಾಗಿರುತ್ತೆ. ಎನಿವೇ, ನಾವು ಒಮ್ಮೆ ಅದನ್ನು ರೀಕಾಲ್ ಮಾಡ್ತೇವೆ. ಸೆಂಚುರಿಸ್ಟಾರ್ ಸಿನಿಖಾತೆಗೆ ಬಂದು ಡೆಪಾಸಿಟ್ ಆಗಿರುವ ಚಿತ್ರಗಳ ಕಥೆಯನ್ನ ನಿಮ್ಮ ಮುಂದೆ ಇಡ್ತೇವೆ. 60ನೇ ವಸಂತಕ್ಕೆ ಕಾಲಿಡುವಷ್ಟರಲ್ಲಿ ಶಿವಣ್ಣ 120 ಸಿನಿಮಾಗಳನ್ನ ಕನ್ನಡ ಚಿತ್ರರಂಗಕ್ಕೆ ಕಾಣಿಕೆಯಾಗಿ ಕೊಟ್ಟಿದ್ದಾರೆ. ಈಗ 123ನೇ ಚಿತ್ರದಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಔಟ್ ಅಂಡ್ ಔಟ್ ಆಕ್ಷನ್ ಸಿನಿಮಾವಾಗಿದ್ದು ವಿಜಯ್ ಮಿಲ್ಟನ್ ಅನ್ನೋರು ನಿರ್ದೇಶನ ಮಾಡ್ತಿದ್ದಾರೆ. ಶಿವಪ್ಪ ಅನ್ನೋ ಟೈಟಲ್‌ನಲ್ಲಿ ಸಿನಿಮಾ ಸೆಟ್ಟೇರಿತ್ತು ಇದೀಗ ಟೈಟಲ್ ಬದಲಾವಣೆಗೆ ಚಿತ್ರತಂಡ ನಿರ್ಧರಿಸಿದೆ. ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿರುವ ಮಾಸ್ ಪೋಸ್ಟರ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಟಗರು-ಡಾಲಿ ಕಾಂಬಿನೇಷನ್ ಕೂತೂಹಲ ಕೆರಳಿಸಿದೆ.

ಸೆಂಚುರಿಸ್ಟಾರ್ ಸಿನಿಮಾ ಖಾತೆ ಒಂದು ಥರ ಲೋಡೆಡ್ ಗನ್ನು ಇದ್ದಹಾಗೇ. ಪಿಸ್ತೂಲ್‌ನಲ್ಲಿರುವ ಬುಲೆಟ್ ಖಾಲಿಯಾದರೆ ಆಗಬಹುದು ಆದರೆ ಶಿವಣ್ಣನ ಸಿನಿಮಾ ಅಕೌಂಟ್‌ನಲ್ಲಿ ಚಿತ್ರಗಳಿಲ್ಲದೇ ಇರೋದಕ್ಕೆ ಸಾಧ್ಯನೇ ಇಲ್ಲ. ಸಂಡೇ ಹೊರತುಪಡಿಸಿದರೆ, ಹಬ್ಬ ಹರಿದಿನಗಳನ್ನು ಬದಿಗಿಟ್ಟರೆ ವರ್ಷದ ಉಳಿದೆಲ್ಲ ದಿನಗಳಲ್ಲೂ ಶಿವಣ್ಣ ಶೂಟಿಂಗ್ ಸ್ಪಾಟ್, ಡಬ್ಬಿಂಗ್ ಸ್ಟುಡಿಯೋ, ಸಿನಿಮಾ ಪ್ರಮೋಷನ್ ಹೀಗೆ ಮೂವೀ ಕಾರ್ಯಗಳಲ್ಲೇ ಬ್ಯುಸಿಯಾಗರ‍್ತಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಕೊಡ್ತಾನೆ ರ‍್ತಾರೆ. ಸದ್ಯ 123ನೇ ಚಿತ್ರದಲ್ಲಿ ಬ್ಯುಸಿಯಾಗಿರೋ ಶಿವಣ್ಣ 126ನೇ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಯುವರಾಜನ ಕಾಲ್‌ಶೀಟ್ ಪಡೆದುಕೊಂಡಿರುವ ಶೆಟ್ರು ಫುಲ್ ಖುಷಿಯಾಗಿದ್ದಾರೆ.

ಹೌದು, ಶಿವರಾಜ್‌ಕುಮಾರ್ ಅವರ 126ನೇ ಚಿತ್ರವನ್ನು ನಿರ್ದೇಶಿಸುವ ಅವಕಾಶ ರಿಷಬ್‌ಶೆಟ್ಟಿಗೆ ಸಿಕ್ಕಿದೆ. ಮೊದಲ ಭಾರಿಗೆ ದೊಡ್ಮನೆ ಆಕ್ಟರ್‌ಗೆ ಆಕ್ಷನ್ ಕಟ್ ಹೇಳೋದಕ್ಕೆ ಶೆಟ್ರು ಫುಲ್ ಎಕ್ಸೈಟ್ ಆಗಿದ್ದಾರೆ. ಜಯ್ಯಣ್ಣ-ಭೋಗೇಂದ್ರ ಅವರು ಅದ್ದೂರಿಯಾಗಿ ಸಿನಿಮಾ ಮಾಡುವ ಪ್ಲ್ಯಾನ್‌ನಲ್ಲಿದ್ದಾರೆ. ಶಿವಣ್ಣನ ಸಿನಿಕರಿಯರ್‌ನ 125ನೇ ಚಿತ್ರವನ್ನು ನಿರ್ದೇಶಕ ಹರ್ಷ ಮಾಡಿಮುಗಿಸಿದ್ಮೇಲೆ `ರಿಷಬ್ ಮತ್ತು ಸೆಂಚುರಿಸ್ಟಾರ್’ ಕಾಂಬಿನೇಷನ್ ಸಿನಿಮಾ ಸೆಟ್ಟೇರಲಿದೆ.

ಇನ್ನೂ 124 ನೇ ಚಿತ್ರ ಯಾವುದಾಗುತ್ತೆ ಅನ್ನೋದು ಶಿವಸೈನ್ಯದ ಕೂತೂಹಲಕ್ಕೆ ಕಾರಣವಾಗಿದೆ. ದೊಡ್ಮನೆಯ ಸಂಬಂಧಿಕರಾದ ಲಕ್ಕಿ ಗೋಪಾಲ್ ಶಿವಣ್ಣನಿಗೆ ಎಸ್ ಆರ್ ಕೆ' ಟೈಟಲ್‌ನಲ್ಲಿ ಸಿನಿಮಾ ಅನೌನ್ಸ್ ಮಾಡಿದ್ದರು. ಟೈಟಲ್‌ನಿಂದಲೇಎಸ್‌ಆರ್‌ಕೆ’ ಭಾರೀ ಹೈಪ್ ಕ್ರಿಯೇಟ್ ಮಾಡಿಕೊಂಡಿತ್ತು. ಈ ಚಿತ್ರವೇ ಶಿವರಾಜ್‌ಕುಮಾರ್ ಅವರ ೧೨೪ನೇ ಚಿತ್ರ ಆಗಬಹುದಾ ಅನ್ನೋದು ಫ್ಯಾನ್ಸ್ ಲೆಕ್ಕಚ್ಚಾರ. ಈ ನಡುವೆ, ಅನಿಲ್ ರವಿಪುಡಿ ಹಾಗೂ ಚಂದ್ರಶೇಖರ್ ಬಂಡಿಯಪ್ಪ ಅವರಿಗೆ `ಸನ್ ಆಫ್ ಬಂಗಾರದ ಮನುಷ್ಯ’ನ ಕಾಲ್‌ಶೀಟ್ ಸಿಕ್ಕಿರುವ ವಿಷ್ಯ ಹೊರಬಿದ್ದಿದೆ. ರಥಾವರ ಹಾಗೂ ತಾರಾಕಾಸುರದಂತಹ ಹಿಟ್ ಚಿತ್ರಗಳನ್ನು ಕೊಟ್ಟಿರುವಂತಹ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪನವರಿಗೆ ತಮ್ಮ ಹುಟ್ಟುಹಬ್ಬದ ದಿನದಂದು ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗೆ ಒಂದರ ಹಿಂದೆ ಒಂದು ಸಿನಿಮಾಗಳನ್ನು ಶಿವಣ್ಣ ಒಪ್ಪಿಕೊಳ್ಳುತ್ತಿದ್ದಾರೆ. ಸಿನಿಮಾ ಲೇಟಾದ್ರೂ ಪರವಾಗಿಲ್ಲ ಸೆಂಚುರಿಸ್ಟಾರ್ ಕಾಲ್‌ಶೀಟ್ ಸಿಕ್ಕರೆ ಸಾಕು ಅಂತ ನಿರ್ದೇಶಕರು ನಾ ಮುಂದು ತಾ ಮುಂದು ಅಂತ ಕಾಲ್‌ಶೀಟ್ ಪಡೆಯೋದ್ರಲ್ಲಿ ಬ್ಯುಸಿಯಾಗಿದ್ದಾರೆ.

ಸ್ಯಾಂಡಲ್‌ವುಡ್‌ನ ಚಿರಯುವಕ ಅಂತ ಕರೆಸಿಕೊಳ್ಳುವ ಶಿವಣ್ಣ 60ರ ಹರೆಯದಲ್ಲೂ ಇವತ್ತಿನ ಯಂಗ್‌ಸ್ಟರ್‌ಗಳಿಗೆ ಸೆಡ್ಡುಹೊಡೆಯುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಅವರ ಸಿನಿಮಾ ಪ್ರೀತಿ ಹಾಗೂ ಭಕ್ತಿ. ಮೊದಲ ಸಿನಿಮಾದಲ್ಲಿದ್ದ ಉತ್ಸಾಹ-ಹುರುಪು-ಹುಮ್ಮಸ್ಸಿನ ಜೊತೆಗೆ ಅದೇ ಫೋರ್ಸ್ ಹಾಗೂ ಚಾರ್ಮ್ 123 ನೇ ಸಿನಿಮಾದಲ್ಲೂ ಇದೆ. 60ರಲ್ಲೂ 30ರ ಹರೆಯದ ಹುಡುಗನಂತೆ ಫಿಸಿಕ್ ಮೆಂಟೇನ್ ಮಾಡಿದ್ದಾರೆ. ಬೆಳ್ಳಿಪರದೆ ಬೆಚ್ಚಿಬೆರಗಾಗುವಂತಹ ನೋಟ ಹಾಗೂ ನಟನೆಯಿಂದ ಬಾಕ್ಸ್ಆಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದ್ದಾರೆ. ಎನಿವೇ ಟಗರು ಆರ್ಭಟ ಹೀಗೆ ಮುಂದುವರೆಯಲಿ, ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಕೊಡುಗೆ ನೀಡುತ್ತಾ ಪ್ರೇಕ್ಷಕ ಮಹಾಷಯರನ್ನ ರಂಜಿಸುತ್ತಿರಲಿ.

Related Posts

error: Content is protected !!