ಏನೇ…ಅನ್ಕೊಳ್ಳಿ ಸಿನಿಮಾ ಅಂದ್ರೆ ಬರೀ ಮನರಂಜನೆ ಮಾತ್ರ ಅಲ್ಲ. ಹಾಗೆಯೇ ಬರೀ ಬಿಸಿನೆಸ್ ಕೂಡ ಅಲ್ಲ. ಹೊಸಬರಿಗೆ ಅದೊಂದು ಪ್ರಯೋಗ. ಅಂದ್ರೆ ಎಕ್ಸ್ಪೆರಿಮೆಂಟಲ್ ಫೀಲ್ಡ್. ಹಾಗೊಂದು ಕಾರಣಕ್ಕಾಗಿಯೇ ಈಗ ಚಂದನವನದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಚಿತ್ರ “ಆನ”. ಅರೆ, ಆನ ಅಂದ್ರೇನು ? ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ ಇಂತಹದೊಂದು ಪ್ರಶ್ನೆ ನಿಮ್ಮಲ್ಲೂ ಹುಟ್ಟುತ್ತೆ. ಯಾಕಂದ್ರೆ, ಕನ್ನಡದಲ್ಲಿ ಅಂತಹದೊಂದು ಪದ ಅಷ್ಟಾಗಿ ನೀವು ಕೇಳಿರಲಿಕ್ಕಿಲ್ಲ. ಆದ್ರೆ, ಚಿತ್ರದ ನಿರ್ದೇಶಕರ ಪ್ರಕಾರ ʼಆನʼ ಅಂದ್ರೆ ಅನರ್ಘ್ಯ ಅಂತ. ಕಥೆಗೆ ಪೂರಕವಾಗಿ ಅದನ್ನೇ ಚಿತ್ರದ ಶೀರ್ಷಿಕೆಯಾಗಿಸಿಕೊಂಡಿದ್ದಾರಂತೆ. ಅದರಾಚೆ ʼಆನʼ ಅನ್ನೋದು ಇಲ್ಲಿ ಚಿತ್ರದ ನಾಯಕಿ ಹೆಸರು ಕೂಡ.
ನಿಜಕ್ಕೂ ಇದೊಂದು ಎಕ್ಸ್ ಪೆರಿಮೆಂಟಲ್ ಚಿತ್ರ. ನಾಲ್ಕು ಸಾಂಗು, ನಾಲ್ಕು ಫೈಟು, ಜತೆಗೊಂದು ಐಟಂ ಸಾಂಗ್ ಇಡುವಂತಹ ಸಿದ್ಧ ಸೂತ್ರ ಇಟ್ಕೊಂಡು ಮಾಡಿದ ಚಿತ್ರ ಇದಲ್ಲ. ಅಂದ್ರೆ, ಇದು ಸೂಪರ್ ಹೀರೋ ಕಾನ್ಸೆಫ್ಟ್ ಕಥಾ ಹಂದರದ ಚಿತ್ರ. ಇಂಡಿಯಾದಲ್ಲೇ ಫಸ್ಟ್ ಟೈಮ್ ಒಬ್ಬ ನಾಯಕಿಯನ್ನೇ ಇಲ್ಲಿ ಸೂಪರ್ ಹೀರೋ ಶೈಲಿಯಲ್ಲಿ ತೋರಿಸಲು ಹೊರಟಿರುವ ಸಿನಿಮಾ ಇದು. ಇದರ ನಿರ್ದೇಶಕ ಮನೋಜ್ ಪಿ. ನಡುಲಮನೆ. ಸದ್ಯಕ್ಕೀಗ ಈ ಚಿತ್ರದ ಟೀಸರ್ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಟೀಸರ್ ಆಧಿಕೃತವಾಗಿ ಲಾಂಚ್ ಆಗಿದೆ. ಹೆಚ್ಚು ಕಡಿಮೆ ನಾಲ್ಕು ದಿನಗಳಿಗೆ ಅದನ್ನು ಎರಡು ಲಕ್ಷ ಜನ ವೀಕ್ಷಿಸಿದ್ದಾರೆ. ಹೊಸಬರಿಗೆ ಈ ಮಟ್ಟದ ಪ್ರತಿಕ್ರಿಯೆ ಸಿಕ್ಕಿದ್ದು ಸಾಕಷ್ಟು ಖುಷಿ ಕೊಟ್ಟಿದೆ. ಮಿಲ್ಕಿ ಬ್ಯೂಟಿ ಅದಿತಿ ಪ್ರಭುದೇವ ಇದರ ನಾಯಕಿ. ಅವರೇ ಈ ಚಿತ್ರದ ಹೀರೋ-ಕಮ್ ಹೀರೋಯಿನ್. ಇದೇ ಮೊದಲು ಇಂತಹದೊಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಫಸ್ಟ್ ಟೈಮ್ ಸ್ಕ್ರೀನ್ ಮೇಲೆ ಹಾರರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕವರು ಥ್ರಿಲ್ ಆಗಿದ್ದಾರೆ. ಟೀಸರ್ ನೋಡಿದವರಿಗೆ ಅವರ ಹಾರರ್ ಲುಕ್ ಮೈ ನಡುಗಿಸುತ್ತೆ.
ಹಾರರ್ ಅಂದ್ಮೇಲೆ ಒಂದ್ಕಡೆ ಕತ್ತಲು ಅಂತಲೂ ಹೌದು. ಹಾಗಾಗಿಯೇ ಚಿತ್ರೀಕರಣದ ಬಹುತೇಕ ಭಾಗ ರಾತ್ರಿ ಹೊತ್ತಲೇ ನಡೆದಿದೆಯಂತೆ. ಅದೊಂದು ವಿಶೇಷ ಅನುಭವ ಅಂತ ಅದಿತಿ ಪ್ರಭುದೇವ್ ಹೇಳುತ್ತಾರೆ. ಶೂಟಿಂಗ್ ಕಂಪ್ಲೀಟ್ ಆಗಿ, ಚಿತ್ರ ಈಗ ರಿಲೀಸ್ಗೆ ರೆಡಿಯಿದೆ. ಏಪ್ರಿಲ್ ಕೊನೆಯ ವಾರ ಅಥವಾ ಮೇ ತಿಂಗಳಲ್ಲಿ ತೆರೆಗೆ ತರಲು ಚಿತ್ರ ತಂಡ ಪ್ಲಾನ್ ಹಾಕಿಕೊಂಡಿದೆ. ನಿರ್ದೇಶಕ ಮನೋಜ್ ಪಿ. ನಡುಲಮನೆ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಯುಕೆ ಪ್ರೊಡಕ್ಷನ್ ಮೂಲಕ ಪೂಜಾ ವಸಂತ್ ಕುಮಾರ್ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ, ರಿತ್ವಿಕ್ ಮುರುಳೀಧರ್ ಸಂಗೀತವಿದೆ.
ಚಿತ್ರದ ತಾರಾಗಣವೇನು ಕಮ್ಮಿ ಇಲ್ಲ. ಸುನೀಲ್ ಪುರಾಣಿಕ್, ಚೇತನ್ ಗಂಧರ್ವ, ರನ್ವಿತ್ ಶಿವಕುಮಾರ್, ವಿಕಾಶ್ ಉತ್ತಯ್ಯ, ವರುಣ್ ಅಮರಾವತಿ ಮತ್ತಿತರರು ಇದ್ದಾರೆ. ಇದೀಗ ಚಿತ್ರದ ಟೀಸರ್ ಗೆ ಸಿಕ್ಕ ರೆಸ್ಪಾನ್ಸ್ ಗೆ ಚಿತ್ರ ತಂಡ ಸಿಕ್ಕಾ ಪಟ್ಟೆ ಖುಷಿ ಆಗಿದೆ. ಚಿತ್ರದ ಸೆಕೆಂಡ್ ಪಾರ್ಟ್ ನಿರ್ಮಾಣಕ್ಕೂ ಚಿತ್ರ ತಂಡ ಪ್ಲಾನ್ ಹಾಕಿಕೊಂಡಿದೆ. ತೆರೆಮರೆಯಲ್ಲೇ ಅದರ ಕೆಲಸ ನಡೆದಿವೆ ಅಂತ ಹೇಳ್ತಾರೆ ನಿರ್ದೇಶಕರು. ಚಿತ್ರ ಗೆದ್ದರೆ ಭಾಗ 2 ಖಂಡಿತಾ ಬರುತ್ತೆ, ಅದರ ಸಿದ್ಧತೆ ಕೂಡ ನಡೆದಿದೆ ಅಂತಾರೆ ನಿರ್ದೇಶಕ ಮನೋಜ್.