ಶನಿವಾರ ( ಡಿ.5) ಹುಟ್ಟು ಹಬ್ಬ ಆಚರಿಸಿಕೊಂಡ ಕನ್ನಡದ ಏಕ್ತಾಕಪೂರ್ ಶ್ರುತಿ ನಾಯ್ಡು
ಸ್ಟಾರ್ ಸುವರ್ಣ ಬದಲಾವಣೆಯ ಬೆಳಕಿನೊಂದಿಗೆ ಹೊಸ ಕಿರುತೆರೆ ವೀಕ್ಷಕರನ್ನು ಹೊಸ ರೂಪದಲ್ಲಿ ರಂಜಿಸುತ್ತಿದೆ. ಹೊಸ ಆಲೋಚನೆಯ ‘ಸರಸು’ ಧಾರಾವಾಹಿ, ಹೊಸ ಪರಿಕಲ್ಪನೆಯ ‘ಸುವರ್ಣ ಸೂಪರ್ ಸ್ಟಾರ್’ ಕಾರ್ಯಕ್ರಮಗಳು ಈಗಾಗಲೇ ಕಿರುತೆರೆ ವೀಕ್ಷಕರ ಮನಸಿಗೆ ಹತ್ತಿರವಾಗಿವೆ. ಆ ಸಾಲಿಗೆ ಈಗ ‘ಮನಸೆಲ್ಲಾ ನೀನೇ’ ಹೊಚ್ಚ ಹೊಸ ಧಾರಾವಾಹಿ.
ಇದು ಶ್ರುತಿ ನಾಯ್ಡು ನಿರ್ಮಾಣದ ಹೊಸ ಧಾರಾವಾಹಿ. ಶ್ರುತಿ ನಾಯ್ಡು ಅವರು ತಮ್ಮದೇ ‘ಶ್ರುತಿ ನಾಯ್ಡ ಚಿತ್ರ’ ಸಂಸ್ಥೆಯ ಮೂಲಕ ಈಗಾಗಲೇ ಅವರು ಕಿರುತೆಯಲ್ಲಿ ಹಲವು ಜನಪ್ರಿಯ ಧಾರಾವಾಹಿ ಕೊಟ್ಟವರು. ಅದೇ ಅನುಭವದ ಪಯಣದಲ್ಲೀಗ ಹೊಸತನ್ನು ಬಯಸುವ ಕಿರುತೆರೆ ವೀಕ್ಷಕರಿಗೆ ಹೊಸ ಹೊಸತೆನಿಸುವ ಕತೆಯೊಂದನ್ನು ‘ ಮನಸೆಲ್ಲಾನೀನೇ’ ಮೂಲಕ ನೀಡಲು ಬರುತ್ತಿದ್ದಾರೆ. ವಿಶೇಷವಾಗಿ ಸಂಘರ್ಷ ಧಾರಾವಾಹಿ ಯ ನಂತರ ಸ್ಟಾರ್ ಸುವರ್ಣದಲ್ಲಿ ಅವರು ನೀಡುತ್ತಿರುವ ಎರಡನೇ ಧಾರಾವಾಹಿ ಇದು. ಇದುವರೆಗೂ ಬಂದು ಹೋದ ಧಾರಾವಾಹಿಗಳ ಕಥಾ ಹಂದರಕ್ಕಿಂತ ಇದು ಭಿನ್ನವಾದ ಕತೆಯಂತೆ.
![](https://cinilahari.in/wp-content/uploads/2020/12/IMG_20201205_192923-223x300.jpg)
ಕಥಾ ನಾಯಕಿ ರಾಗ. ಅಪ್ಪ ಅಮ್ಮನ ಪ್ರೀತಿಯ ಮಗಳು.
ವೃತ್ತಿಯಲ್ಲಿ ಡಯಟಿಷಿಯನ್ . ಪುಟಾಣಿ ಪ್ರೀತೂ ಅಂದ್ರೆ ಇವಳಿಗೆ ಪ್ರಾಣ. ಅವನಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದಾಳೆ. ಇನ್ನು ಕಥಾ ನಾಯಕ ಅರುಣ್ ಯಶಸ್ಸಿನ ಅಮಲಿನಲ್ಲಿ ತೇಲುವ ರಾಕ್ ಸ್ಟಾರ್ . ಅವನಂದ್ರೆ ಸೆನ್ಸೇಷನ್ .ಒಂಥರ ಯೂತ್ ಐಕನ್. ಅವರ ಮಧ್ಯೆ ಬರುವವನು ಪ್ರೀತಮ್.ಆತ ರಾಕ್ ಸ್ಟಾರ್ ಅರುಣ್ ದೊಡ್ಡ ಫ್ಯಾನ್. ಈತ ರಾಗಾಳ ಮುದ್ದಿನಮಗ. ಅವರ ಸುತ್ತಲ ಕತೆಯೇ ‘ ಮನಸೆಲ್ಲಾ ನೀನೇ’ . ಕತೆ ಸಿಂಪಲ್ ಎನಿಸಿದರೂ ಇಲ್ಲಿ ಅನೇಕ ಟ್ವಿಸ್ಟ್ ಆ್ಯಂಡ್ ಟರ್ನ್ ಗಳಿವೆ. ಅವೆಲ್ಲ ಏನು, ಹೇಗೆ ಎನ್ನುವುದು ಧಾರಾವಾಹಿಯ ಕುತೂಹಲದ ಅಂಶ.
![](https://cinilahari.in/wp-content/uploads/2020/12/IMG_20201205_192827-163x300.jpg)
ಧಾರಾವಾಹಿಯ ಕತೆ ಇದಾದರೆ ಇನ್ನು ಉಳಿದಿದ್ದು ಪಾತ್ರವರ್ಗ ಯಾರು ಅನ್ನೋದು. ಕಥಾ ನಾಯಕಿ ರಾಗ ಪಾತ್ರಕ್ಕೆ ಬಣ್ಣ ಹಚ್ಚಿದವರು ರಶ್ಮಿ ಪ್ರಭಾಕರ್. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಿನ್ನು ಖ್ಯಾತಿಯ ನಟಿ.ಹಾಗೆಯೇ ಕಲಾವಿದ ಸುಜಿತ್, ರಾಕ್ ಸ್ಟಾರ್ ಅರುಣ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪುಟಾಣಿ ಅಲಾಪ್ ಪ್ರೀತಮ್ ಆಗಿ ಬರುತ್ತಿದ್ದಾರೆ.ಈ ಮೂವರ ಅನುಬಂಧದ ಕತೆ ಇಲ್ಲಿ ಹೊಸತಾಗಿರುವುದು ಮಾತ್ರವಲ್ಲ, ರೋಚಕ , ರಂಜನೆಯ ರಸದೌತಣ ನೀಡಲಿದೆಯಂತೆ. ಹಾಗೆಯೇ ಅನುಭವಿ ಕಲಾವಿದರಾದ ವಿಜಯ್ ಕಾಶಿ, ಅರುಣಾ ಬಾಲರಾಜ್ , ಬಾಬು ಹಿರಣಯ್ಯ , ಪ್ರಕಾಶ್ ಶೆಟ್ಟಿ, ರೇಖಾ ಸಾಗರ್ ಧಾರಾವಾಹಿಯ ತಾರಾಗಣದಲ್ಲಿದ್ದಾರೆ.
![](https://cinilahari.in/wp-content/uploads/2020/12/IMG_20201205_192910-254x300.jpg)
ಕರ್ನಾಟಕದ ಸ್ಟೈಲಿಷ್ ಸಿಂಗರ್ ಸಂಜಿತ್ ಹೆಗ್ಡೆ ‘ಮನಸೆಲ್ಲಾ ನೀನೇ’ ಧಾರಾವಾಹಿಯ ಟೈಟಲ್ ಟ್ರ್ಯಾಕ್ ಹಾಡಿದ್ದು, ಈ ಹಾಡು ಈಗಾಗಲೇ ಜನಪ್ರಿಯವಾಗಿದೆ. ಅದ್ಧೂರಿ ನಿರ್ಮಾಣ, ಸುಂದರ ಕತೆ, ಮುದ್ದಾದ ಪಾತ್ರವರ್ಗವು ‘ಮನಸೆಲ್ಲಾ ನೀನೇ’ ಧಾರಾವಾಹಿಯ ಹೈಲೈಟ್ಸ್. ಅಂದ ಹಾಗೆ, ಶನಿವಾರ( ಡಿಸೆಂಬರ್ 5) ದಂದು ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ಅವರು, ತಮ್ಮ ಬರ್ತಡೇ ವಿಶೇಷ ಎಂಬಂತೆ ಈ ಧಾರಾವಾಹಿಯ ಸುದ್ದಿ ರಿವೀಲ್ ಮಾಡಿದ್ದಾರೆ. ಡಿ.7ರಿಂದ ಪ್ರತಿ ರಾತ್ರಿ 9.30ಕ್ಕೆ ಇದು ಸ್ಟಾರ್ ಸುವರ್ಣ ದಲ್ಲಿ ಮೂಡಿ ಬರಲಿದೆ.